ಈ ಚಿತ್ರವನ್ನು ಒಮ್ಮೆ ನೋಡಲಡ್ಡಿಯಿಲ್ಲ. ಹಾಗೆ
ನೋಡದಿದ್ದರೂ ಅಡ್ಡಿಯಿಲ್ಲ ಎನ್ನುವುದು ಜಂಬೂಸವಾರಿ ಚಿತ್ರದ ಒಂದು ಸಾಲಿನ ವಿಮರ್ಶೆ ಎನ್ನಬಹುದು.
ಚಿತ್ರದಲ್ಲಿ ಏನನ್ನು ನಿರೀಕ್ಷಿಸಬಹುದು. ಇಂಪಾದ ಹಾಡುಗಳು, ರೋಮಾಂಚನಗೊಳಿಸುವ ಹೊಡೆದಾಟ, ನಕ್ಕು
ನಲಿಸುವ ಹಾಸ್ಯ, ಮೈ ಮನ ತಾಕುವ ಕಥೆ..ಹೀಗೆ. ಈ ಎಲ್ಲವೂ ಒಂದೇ ಚಿತ್ರದಲ್ಲಿರಬೇಕು ಎಂಬ ನಿಯಮವೇನೂ
ಇಲ್ಲ. ಹಾಗಂತ ಯಾವುದೂ ಇರದಿದ್ದರೆ ಹೇಗೆ. ಇಷ್ಟಕ್ಕೂ ಜಂಬೂಸವಾರಿ ತೆಲುಗಿನ ಸ್ವಾಮಿರಾರಾ ಚಿತ್ರದ
ರೀಮೇಕು. ಈ ಭೂಮಿ ಆ ಭಾನು ನಿರ್ದೇಶನ ಮಾಡಿದ್ದ ವೇಣುಗೋಪಾಲ್ ನಿರ್ದೇಶಕರು. ಮೂಲತಃ ಹಾಸ್ಯ
ಚಿತ್ರದಂತೆ ತೆರೆದುಕೊಳ್ಳುವ ಕತೆಯನ್ನು ಪ್ರತಿ ದೃಶ್ಯದಲ್ಲೂ ನಗಿಸುವಂತೆ ಮಾಡಲೆಬೇಕೆಂಬುದು
ನಿರ್ದೇಶಕರ ಹಠವೇನೋ? ಹಾಗಾಗಿ ಮಾತಿನ ಕಚಗುಳಿ ಇಲ್ಲಿ ಸಭ್ಯತೆಯ ಗಡಿ ದಾಟಿದಾಗಲೂ
ಸುಮ್ಮನಿದ್ದಾರೆ. ಕಲಾವಿದರುಗಳು ಕೆಲವು ಕಡೆ ನಗಿಸಲು ಅತಿ ಅಭಿನಯ ಮಾಡಿದರೂ ಸಹಿಸಿಕೊಂಡಿದ್ದಾರೆ.
ಆದರೆ ಅದೆಲ್ಲವನ್ನೂ ಪ್ರೇಕ್ಷಕನೂ ಸಹಿಸಿಕೊಳ್ಳುವನೆ ಎಂಬುದು ಪ್ರಶ್ನೆ.
ಚಿತ್ರದ ಕತೆ ತೀರಾ ಸರಳವಾದದ್ದು. ಒಂದು ತರ ಟಾಮ್ ಅಂಡ್
ಜೆರ್ರಿ ಕತೆ. ನಾಯಕ, ನಾಯಕಿ, ಖಳನಾಯಕ, ಪೋಷಕ ಪಾತ್ರಗಳು ಎಲ್ಲರೂ ಒಬ್ಬರ ಹಿಂದೆ ಒಬ್ಬರು ಓಡುವ,
ಓಡಾಡುವ ಕತೆ. ಒಂದು ಬೆಲೆ ಬಾಳುವ ಅಪೂರ್ವವಾದ ವಿಗ್ರಹ. ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನದ
ಆ ವಿಗ್ರಹದ ಬೆಲೆ ಬರೋಬ್ಬರಿ ಹತ್ತು ಕೋಟಿಗಳು.ಅದನ್ನು ಕದ್ದ ಮೇಲೆ ಅರಗಿಸಿಕೊಳ್ಳುವುದು ಹೇಗೆ..ಆ
ನಿಟ್ಟಿನಲ್ಲಿ ಅದು ನಾಯಕಿಯ ಕೈಚೀಲವನ್ನು ಸೇರುತ್ತದೆ.ಅದನ್ನು ಪಡೆಯಲು ಖಳನಾಯಕನೂ ಮುಖ್ಯಮಂತ್ರಿಯೂ
ಇದ್ದಾನೆ. ಇದೇನು ಸಾವಿರ ಕೋಟಿ ಹಗರಣಗಳ ಮುಖ್ಯಮಂತ್ರಿಗಳು ಚಿಲ್ಲರೆ ಹತ್ತು ಕೋಟಿಗೆಲ್ಲಾ
ಕಿತ್ತಾಡುವುದಾ ಎನ್ನಬಹುದು.ನಾಯಕನೂ ಕಳ್ಳನೇ. ನಾಯಕಿಯ ಬೈಕು ಕದ್ದು ಆನಂತರ ಆಕೆಯ ಹೃದಯ ಕದ್ದು ಹಾದಿ
ಕುಣಿವ ನಾಯಕನ ಓಡಾಟ ತಪ್ಪಿಸಿಕೊಳ್ಳಲು ಆ ವಿಗ್ರಹವನ್ನು ಒಪ್ಪಿಸಲು. ಹೇಗೆ ಏಕೆ ಎಲ್ಲಿ ಎಂಬ
ಪ್ರಶ್ನೆಗಳು ಕುತೂಹಲ ಎನಿಸಿದರೆ ಒಮ್ಮೆ ಚಿತ್ರ ನೋಡಬೇಕಾಗುತ್ತದೆ.
ಪ್ರಜ್ವಲ್ ದೇವರಾಜ್ ಸಲೀಸಾಗಿ ಅಭಿನಯಿಸಿದ್ದಾರೆ. ಯಾವುದೇ
ಸವಾಲ್ ಎನಿಸದ ಪಾತ್ರವಿದು. ಬಹುಶ ಪ್ರಜ್ವಲ್ ಇಂತಹದ್ದೇ ಚಿತ್ರಗಳನ್ನು ಒಪ್ಪಿಕೊಳ್ಳುತ್ತಾ
ಹೋದರೆ, ಜನರು ಅವರನ್ನು ಅಪ್ಪಿಕೊಳ್ಳುವುದು ಕಷ್ಟ. ಇನ್ನುಳಿದಂತೆ ಮಿತ್ರ ನಾನು ಹಾಸ್ಯನಟ
ಎಂಬುದನ್ನು ತಲೆಯಲ್ಲಿರಿಸಿಕೊಂಡು ಎಲ್ಲಾ ಕಡೆ ನಗಿಸಲೆಬೇಕೆಂಬ ನಟಿಸಿದ್ದಾರೆ.ನಿಕ್ಕಿ, ಚೈತ್ರಾ
ರೈ, ಶೋಭರಾಜ್, ಅಚ್ಯುತ ಮುಂತಾದವರು ಸಲೀಸಾಗಿ ತಮ್ಮ ತಮ್ಮ ಪಾತ್ರಗಳನ್ನೂ ನಿಭಾಯಿಸಿದ್ದಾರೆ.
ಸಂಗೀತ, ಛಾಯಾಗ್ರಹಣ ಮುಂತಾದ ತಾಂತ್ರಿಕ ಅಂಶಗಳು ಸಾದಾರಣ
ಎನ್ನುವ ಹಣೆಪಟ್ಟಿಗೆ ಸಾಕಾಗಿ ಹೋಗಿವೆ.