Pages

Friday, December 26, 2014

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ:

ನಾಗರಹಾವು ಚಿತ್ರದ ಶೀರ್ಶಿಕೆಯಾದರೂ ಅದನ್ನು ಮೀರಿ ಬೆಳೆದದ್ದು ಅದರಲ್ಲಿನ ರಾಮಾಚಾರಿ ಪಾತ್ರ. ರಾಮಾಚಾರಿ ಸಿಡುಕನಾದರೂ ಅವನೊಳಗೆ ಒಬ್ಬ ಸಹೃದಯನಿದ್ದ. ಮುಂಗೊಪಿಯಾದರೂ ಅವನ ಕರುಣಾಮಯಿ. ಹಠಮಾರಿಯಾದರೂ ನಿಷ್ಠ. ಒರಟನಾದರೂ ಮೃದು ಹೃದಯಿ. ಹಾಗಾಗಿ ರಾಮಾಚಾರಿ ಪಾತ್ರ ಸಿನೆಮಾವನ್ನು ಮೀರಿ ಬೆಳೆದಿತ್ತು. ಡಾ. ವಿಷ್ಣುವರ್ಧನ್ ಮೊದಲ ಚಿತ್ರದಲ್ಲಿ ರಾರಾಜಿಸಿದ್ದರು.
ಆ ಪಾತ್ರವನ್ನು ಮುಖ್ಯಭೂಮಿಕೆಯಾಗಿಸಿಕೊಂಡು ಅದರ ಸುತ್ತ ಒಂದು ಪ್ರೇಮಕತೆಯನ್ನು ಹೆಣೆದಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಂ.ಅಷ್ಟನ್ನು ಕೇಂದ್ರವಾಗಿರಿಸಿ ತಮ್ಮ ಕತೆಗೆ ಅದನ್ನು ಜೋಡಿಸಿದ್ದಾರೆ. ಜೊತೆಗೆ ಯಶ್ ನಾಯಕರಾದ ಕಾರಣ ಅವರ ಇಮೇಜ್ ಗೆ ಹೊಂದಿಸಿದ್ದಾರೆ.
ಚಿತ್ರ ಪ್ರಾರಂಭವಾಗುತ್ತದೆ. ಶರವೇಗದಲ್ಲಿ ಸಾಗುತ್ತದೆ. ಮೊದಲಾರ್ಧದಲ್ಲಿಯೇ ಹಾಡುಗಳ ಸುರಿಮಳೆಯಾಗುತ್ತದೆ. ಏನಾಗುತ್ತಿದೆ ಎನ್ನುವಷ್ಟರಲ್ಲಿ ಮೊದಲಾರ್ಧ ಫಿನಿಶ್. ದ್ವಿತೀಯಾರ್ಧ ಗಂಭೀರವಾಗುತ್ತದೆ. ಪಟ್ಟು ಬಿಡದ ನಾಯಕ ನಾಯಕಿ ನಡುವೆ ಪ್ರೇಕ್ಷಕ ನಲುಗುವಂತೆ ಮಾಡುತ್ತದೆ. ಕೊನೆಯಲ್ಲಿ ಯಾರು ಯಾರನ್ನು ಮದುವೆಯಾಗುತ್ತಾರೆ ಎಂಬುವಷ್ಟರಲ್ಲಿ ಸುಖಾಂತ್ಯವಾಗುತ್ತದೆ. ಚಿತ್ರದ ಕತೆ ಹೇಳಿದರೆ ಅಥವಾ ಹೇಳದಿದ್ದರೆ ಚಿತ್ರ ನೋಡಲು ಯಾವುದೇ ಸಮಸ್ಯೆಯಿಲ್ಲ. ಯಾಕೆಂದರೆ ಇದೊಂದು ಟೈಲರ್ ಮೇಡ್ ಸಿನಿಮಾ. ಹೋಟೆಲ್ಲಿನ ಮಿನಿ ಮೀಲ್ಸ್. ಎಲ್ಲವೂ ಎಷ್ಟೆಷ್ಟು ಬೇಕೋ ಅಷ್ಟಷ್ಟೇ ಇದೆ. ಕಾಮಿಡಿ ಆಕ್ಷನ್ ಸೆಂಟಿಮೆಂಟ್ ಹಾಡುಗಳು ಹೀಗೆ. ನಾಯಕನ ಬಿಲ್ಡ್ ಅಪ್ ಸ್ವಲ್ಪ ಜಾಸ್ತಿ ಎನಿಸಿದರೆ ಅದು ಯಶ್ ಅಭಿಮಾನಿಗಳಿಗೆ ಮೀಸಲು ಎನ್ನಬಹುದು.
70 ರ ದಶಕದ ರಾಮಾಚಾರಿ ಈವತ್ತಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ಪ್ರಯತ್ನವಿದು. ಇಲ್ಲಿನ ರಾಮಾಚಾರಿ ಸ್ಟೈಲಿಶ್. ಅಲ್ಲಿನ ರಾಮಾಚಾರಿಯದು ನೇರ ಮಾತಾದರೆ ಇಲ್ಲಿನ ರಾಮಾಚಾರಿಯದು ನೇರ ಪಂಚಿಂಗ್ ಮಾತು.
ನಾಗರಹಾವು ಚಿತ್ರದ ರಾಮಾಚಾರಿ ಪಾತ್ರದ ಹುಚ್ಚು ಅಭಿಮಾನಿಯಾದ ನಾಯಕ ತಾನು ಅವನಂತೆ ಆಗಲು ಪ್ರಯತ್ನಿಸುತ್ತಾನೆ. ಅವನನ್ನು ಎಲ್ಲಾ ರೀತಿಯಿಂದಲೂ ಅನುಕರಿಸುತ್ತಾನೆ. ತನ್ನ ಪ್ರೇಯಸಿಗೆ ಮಾರ್ಗರೇಟ್ ಎನ್ನುವ ಮರುನಾಮಕರಣ ಮಾಡುವ ಮಟ್ಟಕ್ಕೂ ಹೋಗುತ್ತಾನೆ. ಆದರೆ ಅದೆಲ್ಲವನ್ನು ಇಷ್ಟ ಪಡುವ ನಾಯಕಿ ನೀನು ನೀನಾಗು ಎನ್ನುತ್ತಾಳೆ. ನಾನು ನಾನಲ್ಲ... ನನ್ನೊಳಗೆ ರಾಮಾಚಾರಿಯೇ ಎಲ್ಲ ಎನ್ನುತ್ತಾನೆ. ಹಾಗಾದರೆ ನಡಿ ನಿನ್ನ ಮನೆ ಕಡೆಗೆ ನಾನು ನನ್ನ ದಾರಿಗೆ ಎನ್ನುತ್ತಾಳೆ ಅವಳು... ಈಗೇನು ಮಾಡುವುದು ಆರಾಧ್ಯ ದೈವವನ್ನು ಬಿಡುವುದಾ ಆರಾಧಿಸುವ ಗೆಳತಿಗೆ ತಲೆ ಬಾಗುವುದಾ..?
ಸಂಧಿಗ್ಧಕ್ಕೆ ಸಿಲುಕುವ ನಾಯಕನ ಮುಂದಿನ ನಡೆ ನುಡಿ ಚಿತ್ರದ ಕಥಾವಸ್ತು.
ಚಿತ್ರದ ನಿರ್ಮಾಣ ಶ್ರೀಮಂತವಾಗಿರುವುದರಿಂದ ನಿರ್ದೇಶಕ ಸಂತೋಷ್ ಆನಂದರಾಂ ಅಂದುಕೊಂಡದ್ದನ್ನು ತೆರೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಮೊದಲ ಚಿತ್ರದಲ್ಲಿಯೇ ತಮ್ಮ ಕಸುಬುದಾರಿಕೆ ಮೆರೆದಿರುವ ಸಂತೋಷ್ ಆನಂದರಾಮ್ ಅವರಿಂದ ಇನ್ನಷ್ಟು ಮನರಂಜನಾ ಚಿತ್ರಗಳನ್ನು ನಿರೀಕ್ಷಿಸಬಹುದು. ಇನ್ನು ಛಾಯಾಗ್ರಹಣ, ಸಂಗೀತ, ಸಾಹಿತ್ಯ, ಮುಂತಾದ ತಾಂತ್ರಿಕ ಅಂಶಗಳ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಅದರರ್ಥ ಚಿತ್ರಕ್ಕೆ ಏನು ಬೇಕು ಎಷ್ಟು ಬೇಕು ಎಂಬುದು ಎಲ್ಲರಿಗೂ ಅರಿವಿರುವುದರಿಂದ ರಾಮಾಚಾರಿಯ ಮನರಂಜನೆಯಲ್ಲಿ ಅವರ ಪಾತ್ರವು ದೊಡ್ಡದಿದೆ.
ಯಶ್ ಮೆರೆದಿದ್ದಾರೆ. ಗಜಕೇಸರಿಯಲ್ಲಿ ಅಣ್ಣಾವ್ರ ಅಭಿಮಾನಿಯಾಗಿದ್ದ ಯಶ್ ಇಲ್ಲಿ ವಿಷ್ಣುದಾದಾನ ಅಭಿಮಾನಿಯಾಗಿದ್ದಾರೆ. ಉಳಿದಂತೆ ಹೊಡೆದಾಟ, ಹಾಡು ಕುಣಿತ ಎಲ್ಲದರಲ್ಲೂ ಎಲ್ಲರಿಗೂ ಮೆಚ್ಚುಗೆಯಾಗುತ್ತಾರೆ. ಚಿತ್ರದಿಂದ ಚಿತ್ರಕ್ಕೆ ಅವರ ಗ್ರಾಫ್ ಏರುತ್ತಲೇ ಇರುವುದಕ್ಕೆ ಈ ಚಿತ್ರವೂ ತನ್ನ ಸಿಂಹಪಾಲು ನೀಡುತ್ತದೆ ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ.

ಫುಲ್ ಪ್ಯಾಕೇಜ್ ಸಿನಿಮಾ ಇದು.

ಜ್ಯೋತಿ ಅಲಿಯಾಸ್ ಕೋತಿರಾಜ್

ಜ್ಯೋತಿ ಅಲಿಯಾಸ್ ಕೋತಿರಾಜ್ ಚಿತ್ರದುರ್ಗ ಕೋಟೆಯಲ್ಲಿ ಹೆಸರುವಾಸಿ. ಯಾವುದೇ ರಕ್ಷಣವ್ಯವಸ್ಥೆಯಿಲ್ಲದೆ ಆತ ಕೋಟೆಯನ್ನು ಏರುವ ಅದರ ಮೇಲೆ ಕಸರತ್ತು ಮಾಡುವ ಶೈಲಿ ರೋಮಾಂಚಕ. ಅವನನ್ನೇ ನಾಯಕನನ್ನಾಗಿಸಿ ಸಿನಿಮಾ ಮಾಡಿದರೆ..? ಇದು ನಿಜಕ್ಕೂ ಒಳ್ಳೆಯ ಐಡಿಯಾ. ಆದರೆ ಅದಕ್ಕೆ ಸಮರ್ಪಕವಾದ ಕತೆ ಚಿತ್ರಕತೆ ಬರೆಯದಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಚಿತ್ರ ಉತ್ತಮ ಉದಾಹರಣೆ.
ಒಂದು ಪಾತ್ರವನ್ನು ಸೃಷ್ಟಿಸಿ ಅದಕ್ಕೆ ಸೂಕ್ತ ಕಲಾವಿದನನ್ನು ಹುಡುಕುವುದು ಅಥವಾ ಒಬ್ಬ ಕಲಾವಿದನಿಗೆ ಸೂಕ್ತ ಪಾತ್ರವನ್ನು ಸೃಷ್ಟಿಸುವುದು ಎರಡೂ ಕಾರ್ಯಗಳು ಶ್ರಮದಾಯಕ. ಯಾಕೆಂದರೆ ಪಾತ್ರಕ್ಕೆ ತಕ್ಕುದಾದ ಅದನ್ನು ಸಮರ್ಪಕವಾಗಿ ನಿಭಾಯಿಸುವ ಕಲಾವಿದರನ್ನು ಆ ಪಾತ್ರಕ್ಕೆ ಒಗ್ಗಿಸುವುದು ಎಷ್ಟೋ ಕಷ್ಟವೋ ಹಾಗೆಯೇ ಇರುವ ಒಬ್ಬ ನಾಯಕನಿಗೆ ಕತೆಯನ್ನು ಒಗ್ಗಿಸುವುದು ಅಷ್ಟೇ ಕಷ್ಟದ ಕೆಲಸ. ಇಲ್ಲಿ ಕೋತಿರಾಜ್ ಇದ್ದಾನೆ. ಆತನ ಶಕ್ತಿ ಸಾಮರ್ಥ್ಯ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಬಹುಶ ಒಂದು ಮಟ್ಟಗಿನ ಪ್ರೇಕ್ಷಕ ಕೂಡ ಆ ನಿರೀಕ್ಷೆ, ನಿಟ್ಟಿನಲ್ಲಿಯೇ ಚಿತ್ರವನ್ನು ವೀಕ್ಷಿಸಲು ಹೋಗುತ್ತಾನೆ. ಆದರೆ ಅದೇ ಚಿತ್ರದಲ್ಲಿಲ್ಲದಿದ್ದರೆ..?
ಜ್ಯೋತಿ ಅಲಿಯಾಸ್ ಕೋತಿರಾಮ ಚಿತ್ರವನ್ನು ವೀಕ್ಷಿಸಿದಾಗ ನಮಗೆ ಎದುರಾಗುವ ಒಂದು ಪ್ರಶ್ನೆ ಎಂದರೆ ಈ ಚಿತ್ರಕ್ಕೆ ಜ್ಯೋತಿ ರಾಮ ಅವರೇ ಯಾಕೆ ನಾಯಕರಾಗಬೇಕಿತ್ತು ಎನ್ನುವುದು. ಚಿತ್ರದಲ್ಲಿನ ಹೊಡೆದಾಟದ ದೃಶ್ಯದಲ್ಲಿ ಸಾಹಸ ಮರೆದಿರುವ ಜ್ಯೋತಿಯವರ ಸಾಹಸ ಚಿತ್ರರಸಿಕರಿಗೆ ವಿಶೇಷವೇನಲ್ಲ. ವಿಶೇಷ ಎಂದರೆ ಅವರ ಕೋಟೆ ಕಲ್ಲು ಮರ ಏರುವ ಅಪರೂಪದ ಕೌಶಲ್ಯ. ನಿರ್ದೇಶಕರು ಅದನ್ನೇ ಕಡಿಮೆ ಮಾಡಿ ಕತೆ ಹೆಚ್ಚು ಮಾಡಿದ್ದಾರೆ. ಹಾಗಾಗಿ ಇದು ಸಾಹಸಿಯೊಬ್ಬನ ಕತೆಯಾಗದೆ ಸಾದಾರಣ ಕತೆಯಾಗಿಬಿಟ್ಟಿದೆ.
ಒಬ್ಬ ಸಾಹುಕಾರ. ಅವನಿಗೆ ಇಬ್ಬರು ಹೆಣ್ಣು ಮಕ್ಕಳು. ತನ್ನ ಮಾನವನ್ನು ಕಾಪಾಡಿದ ಎಂಬ ಕಾರಣಕ್ಕೆ ಮಗಳಿಗೆ ನಾಯಕನ ಮೇಲೆ ಲವ್ವಾದರೆ ಮಗಳ ಮಾನವನ್ನು ಕಾಪಾಡಿದ ಎಂನ ಕಾರಣಕ್ಕೆ ಸಾಹುಕಾರನಿಗೆ ನಾಯಕನ ಮೇಲೆ ಒಳ್ಳೆಯ ಭಾವನೆ ಹುಟ್ಟುತ್ತದೆ. ಮುಂದೆ..
ಕೋತಿರಾಜ್ ತಮ್ಮ ಸಾಹಸವನ್ನು ಇಲ್ಲೂ ತೋರಿಸಿದ್ದಾರೆ. ಉಳಿದಂತೆ ಅಭಿನಯದಲ್ಲಿ ಏನನ್ನೂ ನಿರೀಕ್ಷಿಸುವ ಹಾಗಿಲ್ಲ ಚಿತ್ರದಲ್ಲಿ ಪ್ರೇಮಕತೆ, ತ್ರಿಕೋನವಾಗಿ ಮತ್ತೆ ವಾಪಸ್ಸು ಅಲ್ಲಿಗೆ ಬರುತ್ತದೆ. ನಿರ್ದೇಶಕರು ನಾಯಕನನ್ನು ಸಾಹಸಿ ಎಂಬುದನ್ನು ಮರೆತಂತೆ ಚಿತ್ರ ಮಾಡಿದ್ದಾರೆ. ನೋಡುತ್ತಾ ನೋಡುತ್ತಾ ಹಳೆಯ ಚಿತ್ರದಂತೆ ಭಾಸವಾಗುವ ಜ್ಯೋತಿರಾಜ್ ನಲ್ಲಿನ ಕೆಲವೇ ಕೆಲವೇ ಅಪರೂಪದ ಸಾಹಸ ದೃಶ್ಯಗಳು ಖುಷಿಕೊಡುತ್ತವೆ. ಆದರೆ ಅವಷ್ಟೇ ಚಿತ್ರವನ್ನು ಮೇಲೆತ್ತಲು ಸಾಧ್ಯವಿಲ್ಲವಲ್ಲ. ಅಲ್ಲವೇ?
ಐಶಾನಿ ಸಾಕಷ್ಟು ಅಳುತ್ತಾರೆ, ಅಭಿನಯಿಸುತ್ತಾರೆ. ದೀಪಿಕಾ ದಾಸ್ ಆಗಾಗ ಬರುತ್ತಾರೆ ಹೋಗುತ್ತಾರೆ, ಉಳಿದಂತೆ ಸಹನಟರು, ಪೋಷಕ ಪಾತ್ರವರ್ಗದಲ್ಲಿ ರಮೇಶ್ ಭಟ್, ಕಾಶಿ, ಲಕ್ಷ್ಮಿ ಚಂದ್ರಶೇಖರ್, ಮುಂತಾದವರು ತಮ್ಮ ಅನುಭವ ಮೆರೆಯುತ್ತಾರೆ.
ಕೊನೆ ಮಾತು: ಒಬ್ಬ ಕಲಾವಿದನ/ವ್ಯಕ್ತಿಯ ಸಾಮರ್ಥ್ಯವನ್ನು ಚಿತ್ರದಲ್ಲಿ ಬಳಸಿಕೊಂಡು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುವಾಗ ಪ್ರೇಕ್ಷಕ ಅಂತಹವನ್ನನ್ನು ಆಯ್ಕೆ ಮಾಡಿಕೊಂಡಾಗ ಎನ್ನನ್ನು ನಿರೀಕ್ಷೆ ಮಾಡುತ್ತಾನೆ ಎಂಬುದು ಮುಖ್ಯವಾಗುತ್ತದೆ. ನಿರ್ದೇಶಕರು ಅದರ ಬಗ್ಗೆ ಗಮನ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಸುಮ್ಮನೆ ಆಕರ್ಷಣೆಗಾಗಿ ಇಂತಹ ವ್ಯಕ್ತಿಯನ್ನು ಆಯ್ಕೆಮಾಡಿಕೊಂಡು ಸಾದಾರಣ ಕತೆಯ ಚಿತ್ರವನ್ನು ಮಾಡಿದಾಗ ವ್ಯಕ್ತಿಯ ಪ್ರತಿಭೆಯೂ ಆ ಕತೆಯೂ ವ್ಯರ್ಥ ಎನಿಸುತ್ತದೆ ಎಂಬುದನ್ನು ನಿರ್ದೇಶಕರು ಮನಗಾಣಬೇಕಾಗುತ್ತದೆ.


Monday, December 22, 2014

ಸಾರೀ ಕಣೆ:

ಚಿತ್ರ ಪ್ರಾರಂಭವಾದ ಐದು ನಿಮಿಷಕ್ಕೆ ಚಿತ್ರದ ನಿರ್ದೇಶಕ ಮಹತ್ವಾಕಾಂಕ್ಷಿ ಎನಿಸುತ್ತದೆ. ಅಲ್ಲದೆ ಹೊಸ ಪ್ರಯೋಗ ಮಾಡಲು ಹಾತೊರೆದಿದ್ದಾರೆ ಎನಿಸುತ್ತದೆ. ಆದರೆ ಚಿತ್ರ ಮುಂದೆ ಸಾಗಿದಂತೆ ಅದೆಲ್ಲ ಭ್ರಮೆ ನಿರ್ದೇಶಕರು ಆ ಭ್ರಮೆಯಲ್ಲಿಯೇ ಮುಳುಗಿ ಈ ತರಹದ ಸಿನಿಮಾ ಮಾಡಿದ್ದಾರೆ ಎಂಬುದಕ್ಕೆ ಇಡೀ ಚಿತ್ರವೇ ಒಂದು ಪುರಾವೆಯಾಗುತ್ತದೆ.
ಈಗಾಗಲೇ ಸಿನಿಮಾ ರಂಗದಲ್ಲಿ ಅದರದೇ ಆದ ವಿಭಾಗಗಳಿವೆ. ಆದರೆ ಈ ಚಿತ್ರ ಆ ಎಲ್ಲಾ ವಿಭಾಗಗಳನ್ನೂ ಪಕ್ಕಕ್ಕಿಟ್ಟು ತನ್ನದೇ ಆದ ಹೊಸ ವಿಭಾಗವನ್ನು ಸೃಷ್ಟಿಸುತ್ತದೆ ಎಂಬರ್ಥದ ಮಾತುಗಳನ್ನು ಆಡುತ್ತಾರೆ. ಹಾಗೆ ನೋಡಿದರೆ ಅವರು ಹೇಳುವ ಮಾತಲ್ಲಿ ಸತ್ಯವಿದೆ. ಚಿತ್ರ ಯಾವ ಕೆಟಗರಿ ಗೂ ಸೇರದ ಎಡಬಿಡಂಗಿ ಚಿತ್ರವಾಗಿದೆ. ಪ್ರಾರಂಭದಲ್ಲಿ ಅಮ್ಮ ಮಗನ ಸೆಂಟಿಮೆಂಟ್ ನಿಂದ ಚಿತ್ರ ತೆರೆದುಕೊಂಡು ಅಲ್ಲಿಂದ ಸೀದಾ ಕಾಲೇಜ್ ಕ್ಯಾಂಪಸ್ ಗೆ ಶಿಫ್ಟ್ ಆದಾಗ ಇದೊಂದು ಹದಿಹರೆಯದ ಲವ್ ಸ್ಟೋರಿ ಎನಿಸುತ್ತದೆ. ಆಮೇಲೆ ನಾಯಕ ನಾಯಕಿ ಓಡಿ ಹೋಗಲು ಯೋಜಿಸಿದಾಗ ಇದ್ಯಾವುದೋ ಪರಾರಿ ಕತೆ ಎನಿಸುತ್ತದೆ. ಆದರೆ ದೆವ್ವದ ಮನೆಗೆ ಹೋದಾಗ ಹಾರರ್ ಎನಿಸುತ್ತದೆ. ಅಲ್ಲಿಂದ ನಾಯಕಿಯ ಕೊಲೆ ಆದಾಗ ಸಸ್ಪೆನ್ಸ್ ಎನಿಸುತ್ತದೆ. ಅಲ್ಲಿಂದಾ ಮನೋವೈಜ್ಞಾನಿಕ ಎನಿಸಿ ಏನೇನೋ ಆಗಿ ಚಿತ್ರ ಮುಗಿಯುತ್ತದೆ.
ಈ ಚಿತ್ರದ ಕತೆಯೇನು ಎಂದರೆ ಹೇಳುವುದು ಕಷ್ಟ. ಚಿತ್ರದಲ್ಲಿ ಎಲ್ಲವೂ ಇದೆ. ಆದರೆ ನಿರ್ದೇಶಕರ ಪ್ರೌಡಿಮೆ ಯಾವ ವಿಭಾಗದಲ್ಲೂ ಕಾಣಸಿಗುವುದಿಲ್ಲ. ಸಂಭಾಷಣೆ, ಚಿತ್ರಕತೆ ಎಲ್ಲವೂ ಜಾಳು ಜಾಲಾಗಿದ್ದು ಸಿನಿಮಾ ಆಕಳಿಕೆ ತರಿಸುತ್ತದೆ. ಕೆಲವೊಮ್ಮೆ ಬೇಸರ ಉಂಟು ಮಾಡುತ್ತದೆ.
ಇಲ್ಲಿ ನಿರ್ದೇಶಕರೇ ಕತೆ ಚಿತ್ರಕತೆ ಸಂಭಾಷಣೆ ಸಾಹಿತ್ಯ ಬರೆದು ನಟಿಸಿದ್ದಾರೆ. ಅಷ್ಟೂ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತುಕೊಂಡಿರುವ ರೂಪೇಶ್ ಯಾವ ವಿಭಾಗದಲ್ಲೂ ತಮ್ಮ ಚಾಣಾಕ್ಷತೆ ತೋರದಿರುವುದು ವಿಷಾದದ ಸಂಗತಿ. ಇಷ್ಟಕೂ ಇತ್ತೀಚಿಗಿನ ಯುವ ನಿರ್ದೇಶಕರ್ಯಾಕೆ ಯಾವೊಂದು ವಿಭಾಗದಲ್ಲೂ ಪರಿಣತರಾಗದಿದ್ದರೂ ಎಲ್ಲಾ ವಿಭಾಗವನ್ನೂ ಹೆಗಲ ಮೇಲೆತ್ತಿಕೊಳ್ಳುತ್ತಾರೆ ಎಂಬುದು ಯಕ್ಷ ಪ್ರಶ್ನೆ. ಅದಕ್ಕೆ ಚಿತ್ರದ ಫಲಿತಾಂಶದ ಮೂಲಕ ನಿರ್ದೇಶಕರು-ನಟರು ಪಾಠ ಕಲಿತುಕೊಳ್ಳಬೇಕು.
ನಟನೆಯಲ್ಲಿ ರೂಪೇಶ್ ತುಂಬಾ ಹಿಂದೆ ಉಳಿದಿದ್ದಾರೆ. ಅರ್ಚನಾ ನಾಯಕಿಯಾಗಿ ಅಭಿನಯಿಸುವ ಪ್ರಯತ್ನ ಮಾಡಿದ್ದಾರೆ. ರೇಣುಕುಮಾರ್ ಛಾಯಾಗ್ರಹಣ ಮತ್ತು ಪೀಟರ್ ಜೋಸೆಫ್ ಅವರ ಸಂಗೀತ ಚಿತ್ರದಲ್ಲಿನ ಸಹನೀಯ ಅಂಶಗಳಾಗಿವೆ. ಉಳಿದಂತೆ ಸುಮ್ಮನೆ ಬಂದು ಹೋಗುತ್ತಿರುವ ನೀರಸ ಚಿತ್ರಗಳ ಪಟ್ಟಿಯಲ್ಲಿ ಸಾರಿ ಕಣೆ ಸೇರಿಕೊಳ್ಳುತ್ತದೆ.

ಕೊನೆ ಮಾತು: ನಾಯಕಿಗೆ ಸಾರಿಕಣೆ ಎಂದು ಕೂಗಾಡಿ ಹೇಳುವ ಚಿತ್ರದ ನಾಯಕ ಅದೇ ಮಾತನ್ನೂ ಪ್ರೇಕ್ಷಕರಿಗೆ ಹೇಳಿಬಿಟ್ಟರೆ ಅವರ ಮುಂದಿನ ಚಿತ್ರಕ್ಕೆ ರಿಯಾಯಿತಿ ಸಿಗಬಹುದೇನೋ?