Pages

Monday, August 18, 2014

ಶರಣ್ ಅಧ್ಯಕ್ಷ

ಒಂದು ಪ್ರೇಮಕತೆಗೆ ಹಿಂದೆ ಮುಂದೆ ಒಂದಷ್ಟು ಹಾಸ್ಯ ಪ್ರಸಂಗಗಳನ್ನು ಸೇರಿಸಿದರೆ ಶರಣ್ ಅಧ್ಯಕ್ಷ ಚಿತ್ರವಾಗುತ್ತದೆ. ಇದು ಹೇಳಿ ಕೇಳಿ ತಮಿಳು ಚಿತ್ರ ವರುದ ಪಡಾದ ವಾಲಿಬರ್ ಸಂಗಂ ಚಿತ್ರದ ಕನ್ನಡ ಅವತರಣಿಕೆ. ಹಾಗಾಗಿ ಅಲ್ಲಿಯ ಎಲ್ಲವನ್ನು ಇಲ್ಲೇ ತೋರಿಸಿದ್ದಾರೆ ನಿರ್ದೇಶಕರು.
ಒಂದು ರಿಮೇಕ್ ಚಿತ್ರ ಎಂದಾಗ ಅದರಲ್ಲಿ ವಿಮರ್ಶೆ ಮಾಡುವಂತಹದ್ದು ಏನೂ ಇರುವುದಿಲ್ಲ ಎಂಬುದು ಸತ್ಯವೇ. ಏಕೆಂದರೆ ಇಲ್ಲಿ ಚಿತ್ರೀಕರಣದ ತಂತ್ರಜ್ಞರ ಕೆಲಸ ಮುಖ್ಯ ವಾಗುತ್ತದೆಯೇ ಹೊರತು, ನಿರ್ದೇಶಕ ಬರಹಗಾರನದಲ್ಲ. ಅದರಲ್ಲೂ ನಮ್ಮಲ್ಲಿ ರಿಮೇಕ್ ಮಾಡಿದವರು ತೀರಾ ಅಲ್ಲಿಯ ಕತೆ ತೆಗೆದುಕೊಂಡು ಇಲ್ಲಿಗೆ ಬದಲಾಯಿಸಿ ಮಾಡಿದ್ದೆಲ್ಲಾ ಕಡಿಮೆ ಎನ್ನಬಹುದು. ಒಂದಷ್ಟು ಉದ್ದ ತುಂಡುಗಳನ್ನು ಆಚೆ ಈಚೆ ಮಾಡಿದ್ದನ್ನೇ ನಮ್ಮ ಸೊಗಡಿಗೆ ಬದಲಾಯಿಸಿದ್ದೇವೆ ಎನ್ನುತ್ತಾರಷ್ಟೇ. ಹಾಗಾಗಿಯೇ ಶರಣ್ ಅಧ್ಯಕ್ಷ ಚಿತ್ರವನ್ನು ಅದರ ತಂತ್ರಜ್ಞರನ್ನು ನಿರ್ದೇಶಕರನ್ನು ಪ್ರಶಂಸೆ ಮಾಡುವುದು ಅವರ ಮೂಲ ಕೆಲಸದ ಮೇಲಲ್ಲ. ಅದನ್ನು ನಿರ್ವಹಿಸಿದ ರೀತಿಗೆ ಶಹಬ್ಬಾಸ್ ಎನ್ನಬಹುದೇನೋ?
ಒಂದೂರು ಅಲ್ಲೊಬ್ಬ ಪ್ರಮುಖ ವ್ಯಕ್ತಿ. ಆ ವ್ಯಕ್ತಿ ಭಯಾನಕ ಇಮೇಜ್ ಉಳ್ಳವನು. ಆತನ ಮಗಳನ್ನು ನಮ್ಮ ಚಿತ್ರದ ನಾಯಕ ಪ್ರೀತಿಸುತ್ತೇನೆ. ಇಲ್ಲಿ ನಾಯಕ ಊರಲ್ಲಿ ಸಂಘವೊಂದನ್ನು ಕಟ್ಟಿಕೊಂಡಿದ್ದಾನೆ.
ಆ ಊರ ಗೌಡನ ಮಗಳನ್ನು ಪ್ರೀತಿಸಿದರೂ ಅವಳ ತಂದೆಯನ್ನು ಎದುರಿಸಿ ಮದುವೆಯಾಗಲು ಸಾಧ್ಯವೇ? ಸಿನಿಮಾ ಆದರಿಂದ ಅದು ಸಾಧ್ಯ ಎನ್ನಬಹುದು..? ಹೇಗೆ ಎಂಬ ಕುತೂಹಲಕ್ಕೆ ಒಮ್ಮೆ ನೋಡಬಹುದು.ಈಗಾಗಲೇ ತಮಿಳು ಮೂಲ ಚಿತ್ರವನ್ನು ನೋಡಿದ್ದರೆ ಸುಮ್ಮನಾಗಬಹುದು.
ಚಿತ್ರ ಪ್ರಾರಂಭದಲ್ಲಿ ಶರವೇಗದಲ್ಲಿ ಓಡಿದರೂ ಕತೆ ತೆರೆದುಕೊಳ್ಳುವುದಿಲ್ಲ. ಅಲ್ಲಿ ಬರುವ ಹಾಸ್ಯ ಪ್ರಸಂಗಗಳು ಆ ಹೊತ್ತನ್ನು ನಿಭಾಯಿಸುತ್ತವೆ. ಆನಂತರವಷ್ಟೇ ಕತೆ ತೆರೆದುಕೊಳ್ಳುತ್ತದೆ. ಮಧ್ಯ ಮಧ್ಯ ಸ್ವಲ್ಪ ಎಳೆತ ಎನಿಸುತ್ತದಾದರೂ ಒಟ್ಟಾರೆಯಾಗಿ ನೋಡಿದಾಗ ಅದಕ್ಕೆ ಮಾಫಿ ಎನ್ನಬಹುದು.ಆದರೂ ಚಿತ್ರದ ಉದ್ದವನ್ನು ಗಮನಿಸಿ ಅಲ್ಲಿ ಅಂದರೆ ಮೂಲದಲ್ಲಿ ಅನಾವಶ್ಯಕ ಎನಿಸಿದ್ದ ಅಂಶಗಳನ್ನು ದೃಶ್ಯಗಳನ್ನು ಕಡಿತಗೊಳಿಸಬಹುದಿತ್ತೇನೋ? ಆದರೆ ಆ ಕಷ್ಟವನ್ನು ನಿರ್ದೇಶಕ ನಂದ ಕಿಶೋರ್ ತೆಗೆದುಕೊಂಡಿಲ್ಲ.
ಇತ್ತೀಚಿನ ಹಾಸ್ಯ ಚಿತ್ರಗಳಂತೆಯೇ ಇಲ್ಲೂ ಪ್ರತಿ ದೃಶ್ಯದಲ್ಲೂ ಹಾಸ್ಯವಿಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಅದಕ್ಕೆ ಲಾಜಿಕ್ ಮುಂತಾದವುಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಉದಾಹರಣೆಗೆ ಶರಣ್ ಸಂಘಕ್ಕೆ ಚಿ.ತು. ಸಂಘ ಎಂದು ಹೆಸರಿಸಿದ್ದಾರೆ.
ಶರಣ್ ಸುಲಲಿತವಾಗಿ ನಟಿಸಿದ್ದಾರೆ. ಇನ್ನುಳಿದ ಸಹ ಕಲಾವಿದರುಗಳು ಕೂಡ ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.ಅರ್ಜುನ್ ಜನ್ಯ ಸಂಗೀತ ಮತ್ತು ಸುಧಾಕರ್ ಛಾಯಾಗ್ರಹಣ ಕೂಡ ಚಿತ್ರಕ್ಕೆ ಶಕ್ತಿ ಕೊಟ್ಟಿವೆ.
ಯಾವುದೇ ರೀತಿಯ ದ್ವಂದ್ವಾರ್ಥದ ಸಂಭಾಷಣೆ ಇಲ್ಲದ ಶರಣ್ ಅಧ್ಯಕ್ಷ ಚಿತ್ರವನ್ನು ಮನೆಮಂದಿಯಲ್ಲ ನೋಡಿ ನಗಬಹುದು.