Pages

Saturday, April 5, 2014

ಸಡಗರ:

ಪ್ರೀತಿಗೆ ಕಣ್ಣಿಲ್ಲ ಕಿವಿಯಿಲ್ಲ ಎನ್ನುತ್ತಿದ್ದವರು ಇನ್ನುಮುಂದೆ ಹೆಸರೂ ಬೇಕಾಗಿಲ್ಲ ಎನ್ನಬಹುದೇನೋ?ಅದೇ ಸಡಗರ ಚಿತ್ರದ ವಿಶೇಷತೆ ಎಂದರೆ ಮತ್ತೇನೂ ವಿಶೇಷವಿಲ್ಲವಾ ಎಂಬ ಪ್ರಶ್ನೆ ನೀವು ಕೇಳಬಹುದು. ಇರೋದೇ ಇಷ್ಟೇ ಬೇಕಾದ್ರೆ ನೋಡಿ ಇಲ್ಲವಾದರೆ ಬಿಡಿ ಎಂದು ಚೌಕಾಸಿಗೆ ಬೀಳದ ನಿರ್ದೇಶಕ ರಾಜ್ ಗೋಪಿ ಸೂರ್ಯ ಹೇಳಬಹುದೇನೋ? ಉಳಿದದ್ದು ನಮ್ಮ ಮರ್ಜಿಗೆ ಬಿಟ್ಟದ್ದು.
ಹೊಸಬರ ಚಿತ್ರ ಎಂದಾಗ ಹೊಸತನ, ಹೊಸ ನಿರೂಪಣೆ ಇಲ್ಲದಿದ್ದರೂ ಪರವಾಗಿಲ್ಲ, ಕೊನೆಗೆ ಗಟ್ಟಿಯಾದ ಕತೆಯಾದರೂ ಇರಬೇಕಾಗುತ್ತದೆ. ಒಬ್ಬ ಹೊಸ ನಿರ್ದೇಶಕ ಸಿನಿಮಾ ಮಾಡುವಾಗ ಹಲವಾರು ವಿಷಯದಲ್ಲಿ ರಾಜಿಯಾಗಬೇಕಾಗುತ್ತದೆ ನಿಜ. ಹಾಗಂತ ಕತೆಯ ವಿಷಯದಲ್ಲೂ ರಾಜಿಯಾಗುವುದು ಏಕೆ.? ಸಡಗರ ಚಿತ್ರದಲ್ಲಿ ಸಡಗರವಿಲ್ಲ. ಗಟ್ಟಿಯಾದ ಕತೆ ಚಿತ್ರಕತೆಯಿಲ್ಲ ಕೌತುಕ ಕುತೂಹಲವಿಲ್ಲ, ನವಿರೇಳಿಸುವ ಪ್ರೇಮಕತೆಯೂ ಇಲ್ಲ. ಸುಮ್ಮನೆ ಸಾದಾಸೀದಾವಾಗಿ ಚಿತ್ರ.
ತಂದೆಯ ಒಂದು ಆಸೆ ಅಂದರೆ ಮಗ ಜವಾಬ್ದಾರಿ ಪುರುಶನಾಗಲಿ ಎಂಬುದು. ಆದರೆ ಆತ ಉಂಡಾಡಿ ಗುಂಡನಂತೆ ಅಲೆಯುತ್ತಾನೆ. ಪ್ರೀತಿಸಲು ತೋರಿಸುವ ಉತ್ಸಾಹ, ಖಾಳಜಿಯನ್ನು ಮನೆಯ ಮೇಲೆ ತೋರಿಸುವುದಿಲ್ಲ. ಇಷ್ಟು ಹೇಳಿದ ಮೇಲೆ ಚಿತ್ರದ ಆದಿ ಅಂತ್ಯಗಳನ್ನು ಊಹಿಸಿಬಿಡಬಹುದು. ಅದೇನೇ ಆಗಲಿ ಒಮ್ಮೆ ತಿಳಿದುಕೊಂಡೆ ಬಿಡೋಣ ಎನ್ನುವವರು ಚಿತ್ರವನ್ನೊಮ್ಮೆ ನೋಡಬಹುದು.
ಚಿತ್ರದ ಕತೆ ಒಂದು ಹಾದಿಯಲ್ಲಿ ಸರಾಗವಾಗಿ ಸಾಗುತ್ತಿರುವಾಗಲೇ ಅನಗತ್ಯ ದೃಶ್ಯಗಳು ಬಂದು ಚಿತ್ರವನ್ನು ದಿಕ್ಕು ತಪ್ಪಿಸುತ್ತವೆ. ಅದೇಕೆ ಹೀಗೆ, ನೀವ್ಯಾಕೆ ಬಂದಿರಿ ಎಂದರೆ ಅವೆಲ್ಲ ನಿರ್ದೇಶಕರತ್ತ ಬೆರಳು ತೋರಿಸುತ್ತವೆ. ಚಿತ್ರದಲ್ಲಿ ಎಲ್ಲಾ ರಸಗಳೂ ಇರಲಿ ಎಂಬ ಉದ್ದೇಶದಿಂದ ಒಂದೆ ಚಿತ್ರದಲ್ಲಿ ಎಲ್ಲವನ್ನು ತುಂಬಿಸಿ ಪರಿಪೂರ್ಣ ಚಿತ್ರ ಮಾಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಅಡಿಗೆ ಮನೆಯಲ್ಲಿ ಪದಾರ್ಥ ಇದೆ ಎಂದಾಕ್ಷಣ ಎಲ್ಲವನ್ನೂ ಎಲ್ಲಾ ಅಡಿಗೆಗೂ ಹಾಕಲು ಸಾಧ್ಯವಿಲ್ಲವಲ್ಲ. ಯಾವುದಕ್ಕೂ ಯಾವುದನ್ನು ಎಷ್ಟೆಷ್ಟು ಹಾಕಬೇಕೆಂಬುದು ಅವನಿಗೆ ಗೊತ್ತಿರಬೇಕು.
ಶಂಕರ್ ಆರ್ಯನ್, ಯಜ್ಞಾ ಶೆಟ್ಟಿ, ತಬಲಾ ನಾಣಿ, ಶರತ್ ಲೋಹಿತಾಶ್ವ ಮುಂತಾದವರು ತಮ್ಮ ತಮ್ಮ ಪಾತ್ರಗಳಿಗೆ ತಕ್ಕ ಅಭಿನಯ ನೀಡಲು ಪ್ರಯತ್ನಿಸಿದ್ದಾರೆ.ಇನ್ನು ಸಂಗೀತ ಮತ್ತು ಛಾಯಾಗ್ರಹಣವೂ ಕೂಡ ತೆಗೆದು ಹಾಕುವ ಹಾಗಿಲ್ಲ ಎನ್ನಬಹುದು.

ನಿರ್ದೇಶಕ ಗೋಪಿ ಸೂರ್ಯ ಒಂದಷ್ಟು ಕತೆ ಕಡೆ ಗಮನ ಹರಿಸಿದ್ದರೆ ಸಡಗರದಿಂದ ಚಿತ್ರವನ್ನೊಮ್ಮೆ ನೋಡಬಹುದಿತ್ತೇನೋ?

ಹುಚ್ಚುಡುಗ್ರು:

ಚಿತ್ರದಲ್ಲಿನ ನಾಲ್ಕು ಜನ ಯುವಕರು ಅಮಾಯಕರಾ? ಗುಂಡ್ರು ಗೋವಿಗಳಾ? ಒರಟರಾ? ಪೆದ್ದರಾ? ಒಳ್ಳೆಯವರಾ? ಕೆಟ್ಟವರಾ? ಎಂಬ ಪ್ರಶ್ನೆಯನ್ನು ನಿರ್ದೇಶಕ ಆರ್ ಜೆ ಪ್ರದೀಪ್ ಅವರನ್ನು ಕೂರಿಸಿಕೊಂಡು ಕೇಳಿದರೆ ಬರುವ ಉತ್ತರವೆಷ್ಟು ಗೊಂದಲಕಾರಿಯಾಗಿರಬಹುದು ಎಂಬುದಕ್ಕೆ ಚಿತ್ರವೇ ಸಾಕ್ಷಿ. ಹೌದು! ಒಂದು ಚಿತ್ರಕ್ಕೆ ಹೇಗೆ ಕಥೆ ಮುಖ್ಯವೂ ಹಾಗೆಯೇ ಪಾತ್ರ ಪೋಷಣೆ ಎನ್ನಬಹುದು. ಒಂದು ವ್ಯಕ್ತಿತ್ವವನ್ನು ಸರಿಯಾಗಿ ರೂಪಿಸದೆ ಹೋದರೆ ಮತ್ತು ಒಂದು ಪಾತ್ರ ದೃಶ್ಯದಿಂದ ದೃಶ್ಯಕ್ಕೆ ಸಂಬಂಧವಿಲ್ಲದಂತೆ ತನ್ನ ಗುಣವನ್ನು ಬದಲಿಸಿಕೊಂಡರೆ ಎಂತಹ ಅಭಾಸವಾಗುತ್ತದೆ ಗೊತ್ತೇ..? ಅಲ್ಲಿ ಆ ಪಾತ್ರ ಅಳುತ್ತಿದ್ದರೆ ನಮಗೆ ಅಳು ಬರುವುದಿರಲಿ ಆತನ ದುಃಖಕ್ಕೆ ಸ್ವಲ್ಪವೂ ಸ್ಪಂದಿಸಲು ಆಗುವುದಿಲ್ಲ. ಆತನ ಪ್ರೀತಿಗೆ ವಿರಹಕ್ಕೆ, ಕೋಪಕ್ಕೆ, ನಮಗೆ ಏನೂ ಆಗುವುದಿಲ್ಲ.
ಇಲ್ಲಿ ಆಗಿರುವುದೂ ಅದೇ. ಚಿತ್ರದಲ್ಲಿನ ಮೊದಲ ಅತಿ ದೊಡ್ಡ ಋಣಾತ್ಮಕ ಅಂಶ ಎಂದರೆ ಪಾತ್ರ ಪೋಷಣೆ. ಎರಡನೆಯದು ಪೇಲವವಾದ ಚಿತ್ರಕತೆ ಮತ್ತು ಮೂರನೆಯದು ಎಳಸಾದ, ಬಾಲಿಶ ನಿರೂಪಣೆ.ಒಂದು ಚಿತ್ರವನ್ನು ಹೇಗೆ ಸಿನಿಮೀಯ ಎಂದುಕೊಂಡರೂ ಒಂದಷ್ಟು ಒಪ್ಪುವ ಗುಣಗಳನ್ನು ಅದರಲ್ಲಿ ತುಂಬ ಬೇಕಾಗುತ್ತದೆ. ಆದರೆ ಆ ಯಾವ ಕೆಲಸಕ್ಕೂ ಇಲ್ಲಿನ ಕತೆ ಚಿತ್ರಕತೆಗಾರ ರಘು ಹಾಸನ್ ತಲೆ ಕೆಡಿಸಿಕೊಂಡಿಲ್ಲ. ಹಾಗೆ ನಿರ್ದೇಶಕ ಕೂಡ ಅದರ ಬಗ್ಗೆ ಖಾಳಜಿ ವಹಿಸಿಲ್ಲ. ಆದ್ದರಿಂದಲೇ ಚಿತ್ರದಲ್ಲಿ ಕೊಲೆಗಳು ನಡೆದರೂ ಪೋಲಿಸ್ ಸುಳಿಯುವುದಿಲ್ಲ, ಹಾಗೆ ಖಳ ಅಡ್ಡಾದಿಡ್ಡಿ ಕೊಲೆ ಮಾಡುತ್ತಿದ್ದರೂ ಅದಕ್ಕೆ ಸೂಕ್ತ ದೃಶ್ಯ ರಚನೆಯಿಲ್ಲ. ಹಾಗೆಯೇ ಊರು ಬಿಟ್ಟು ಬರೀ ಕೊಲೆ ಮಾಡಲು ಬರುವ ನಾಯಕರು, ಅವರ ದುಃಖ ದುಮ್ಮಾನಗಳು ನಮ್ಮವೆನಿಸುವುದಿಲ್ಲ. ಇದೆಲ್ಲದ್ದರಿಂದ ಹುಚ್ಚುಡುಗ್ರು ಚಿತ್ರ ಇತ್ತೀಚಿಗೆ ಬಂದ ಕಳಪೆ ಚಿತ್ರಗಳ ಸಾಲಿಗೆ ಸೇರುತ್ತದೆ ಎನ್ನಬಹುದು.ನಿರ್ದೇಶಕರು/ಚಿತ್ರಕತೆಗಾರ ಬಿಡಿಬಿಡಿಯಾಗಿ ದೃಶ್ಯ ರಚಿಸಿ ಅದರ ಪರಿಣಾಮಕ್ಕೆ ಖುಷಿ ಪಟ್ಟಿದ್ದಾರೇನೋ ..ಆದರೆ ಒಟ್ಟಾರೆಯಾಗಿ ಅದರ ಪರಿಣಾಮವನ್ನು ಅಂದಾಜು ಮಾಡಿಲ್ಲ. ಹಾಗಾಗಿ ಇಡೀ ಚಿತ್ರ ವ್ಯರ್ಥವಾಗಿ ಹೋಗಿದೆ ಎನ್ನಬಹುದು.
ನಾಲ್ಕು ಜನ ಯುವಕರ ಪಾತ್ರಗಳಲ್ಲಿ ಅಭಿನಯಿಸಿರುವ ಕಲಾವಿದರುಗಳು ನಿರ್ದೇಶಕರು ಹೇಳಿದಂತೆ ನಟಿಸಿದ್ದಾರೆ. ಅದರಲ್ಲಿ ಅಮಿತ್ ಅವರದು ಅತಿ ಅಭಿನಯ. ಉಳಿದಂತೆ ಅವಿನಾಶ್ ಹಾಗೆ ಬಂದು ಹೀಗೆ ಹೋಗುತ್ತಾರೆ. ಖಳನಾಯಕನಾಗಿ ಅಭಿನಯಿಸಿರುವ ರವೀಶಂಕರ್ ಚಿತ್ರದುದ್ದಕ್ಕೂ ಆವರಿಸಿದ್ದಾರೆ. ಇನ್ನುಳಿದಂತೆ ಒಂದಷ್ಟು ಪಾತ್ರಗಳು ಅಲ್ಲಿ ಬಂದು ಇಲ್ಲಿ ಹೋಗುತ್ತವೆ. ನಾಯಕಿ ಟೈಮ್ ಪಾಸ್ ಮಾಡಲು ಬಂದವಳಂತೆ ಬರುತ್ತಾಳೆ, ಹೋಗುತ್ತಾಳೆ.
ಚಿತ್ರದ ತಿರುಳೇ ಚೆನ್ನಾಗಿಲ್ಲವಾದ್ದರಿಂದ ತಾಂತ್ರಿಕ ಅಂಶಗಳಲ್ಲಿ ಕೊರತೆಯಿಲ್ಲದಿದ್ದರೂ ಅಥವಾ ಅವುಗಳು ಅದ್ಭುತವಾಗಿದ್ದರೂ ಅವುಗಳು ವ್ಯರ್ಥ ಎನಿಸಿಕೊಳ್ಳುತ್ತವೆ. ಯಾಕೆಂದರೆ ಒಂದು ಅಂಶ ಇಡೀ ಚಿತ್ರವಾಗುವುದಿಲ್ಲ ಅದಕ್ಕೆ.
ಬರೀ ತಂಡವನ್ನು ನಿರ್ವಹಿಸಿ ಒಂದಷ್ಟು ಶಾಟ್ ಸಂಯೋಜಿಸಿದರೆ ಅದು ನಿರ್ದೇಶನ ಆಗಿಬಿಡುವುದಿಲ್ಲ. ಅದಕ್ಕೊಂದು ದೂರದೃಷ್ಟಿ ಬೇಕು. ಹಾಗೆಯೇ ಕತೆಯ ಬಗೆಗೆ ಒಂದು ಪರಿಕಲ್ಪನೆ ಇರಬೇಕು. ಇವೆರಡನ್ನೂ ಆರ್.ಜೆ ಪ್ರದೀಪ್ ಮನಗಂಡರೆ ಅವರ ಮುಂದಿನ ಚಿತ್ರ ಸಹನೀಯವಾಗುತ್ತದೇನೋ?