Pages

Saturday, November 29, 2014

ಲವ್ ಇನ್ ಮಂಡ್ಯ:

ಲವ್ ಇನ್ ಮಂಡ್ಯ ಮರ್ಡರ್ ಸ್ ಇನ್ ಹೊಸೂರು ಎನ್ನುವುದು ಲವ್ ಇನ್ ಮಂಡ್ಯ ಚಿತ್ರದ ಒಂದು ಸಾಲಿನ ವಿಮರ್ಶೆ ಎನ್ನಲಾಗುವುದಿಲ್ಲ. ಚಿತ್ರಕ್ಕೆ ಕತೆ ಇರಬೇಕು ಹಾಗಂತ ಏನೇನೋ ಇದ್ದರೇ ಹೇಗೆ? ಲವ್ ಇನ್ ಮಂಡ್ಯ ಸೋಲುವುದು ಅಲ್ಲೇ. ನವಿರಾದ ಪ್ರೆಮಕತೆಯೊಂದಿಗೆ ಪ್ರಾರಂಭವಾಗುವ ಚಿತ್ರ  ಮಧ್ಯಂತರದವರೆಗೆ ಹಾಗೆ ಸಾಗುತ್ತದೆ. ಮಧ್ಯಂತರದ ನಂತರ ಏನೋ ನಿರೀಕ್ಷೆ ಮಾಡಿದ ಪ್ರೇಕ್ಷಕ ಪ್ರಭುವಿಗೆ ಮತ್ತೇನೋ ಎದುರಾಗುತ್ತದೆ. ಹಾಗಾಗಿ ರೈಲು ಹಳಿ ತಪ್ಪಿದರೂ ಅಪಘಾತವಾಗದೆ ಮತ್ತೊಂದು ಹಳಿ ಹಿಡಿದರೂ ಸೇರಬೇಕಾದ  ಜಾಗ ಸೇರದೆ ಇರುವುದು ಸಾರ್ಥಕ ಎನಿಸುವುದಿಲ್ಲ ಅಲ್ಲವೇ? ಲವ್ ಇನ್ ಮಂಡ್ಯ ಕೂಡ ಹಾಗೆಯೇ ಆಗುತ್ತದೆ.
ಚಿತ್ರದ ನಾಯಕನ ಹೆಸರು ಕರ್ಣ. ಅಂಬಿ ತನ್ನ ಚೋಟು ಫ್ರೆಂಡ್ ಜೊತೆ ಮನೆ ಮನೆಗೆ ಕೇಬಲ್ ಹಾಕುತ್ತಾನೆ. ಹಾಗೆಯೇ ಹೊಸದಾಗಿ ಏರಿಯಗೆ ಬರುವ ನಾಯಕಿ ಸುಷ್ಮಾ ಹಿಂದೆ ಬೀಳುತ್ತಾನೆ. ಆಕೆಗೂ ಇವನ ಮೇಲೆ ಪ್ರೀತಿಯುಟ್ಟಲು ಕಾರಣ ಸಿಕ್ಕುವುದಿಲ್ಲವಾದರೂ ಸಮಯ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಎರಡನೆಯ ಹಾಡಿಗೆ ಲವ್ ಆಗುತ್ತದೆ. ಮೂರನೆಯ ಹಾಡಿನೊತ್ತಿಗೆ ಪ್ರೇಮ ಬತ್ತಿಹೋಗುವ ಸ್ಥಿತಿಗೆ ಬರುತ್ತದೆ. ಇನ್ನೇನು ಮಾಡುವುದು ಕರೆದುಕೊಂಡು ಹೋಗಿ ಬಿಡೋಣ ಎಂದು ನಿರ್ಧರಿಸಿ ಮದುವೆಯಾಗಿ ಬಿಟ್ಟು ಹೊಸೂರಿಗೆ ಹೋಗುವ ಹೊತ್ತಿಗೆ ಮಧ್ಯಂತರ. ಆನಂತರ ಬೇರೆಯದೇ ಆದ ಕತೆ, ಬೇರೆಯದೇ ಪಾತ್ರಗಳು ತೆರೆದುಕೊಳ್ಳುತ್ತದೆ. ಪ್ರಥಮಾರ್ಧದ ನವಿರುತನ ಮಾಯವಾಗಿ ರೌದ್ರ ಮನೆ ಮಾಡುತ್ತದೆ. ಆಮೇಲೆ ನಡೆಯುವುದೆಲ್ಲಾ ಇದೇನಾ ನಾವು ಮೊದಲು ನೋಡಿದ್ದು ಎನ್ನುವಷ್ಟರ ಮಟ್ಟಿಗೆ ಭಿನ್ನ ಎನಿಸುತ್ತದೆ. ಆದರೆ ಅದೇ ಋಣಾತ್ಮಕ ಅಂಶ.
ಈವತ್ತಿನ ಚಿತ್ರರಂಗದ ಪರಿಸ್ಥಿತಿಯಲ್ಲಿ ಸಿನಿಮಾ ಸುಮಾರು ಎಂದರೆ ಅದೇ ಸೂಪರ್ ಎನ್ನುವ ಮಾತಿದೆ. ಆ ನಿಟ್ಟಿನಲ್ಲಿ ಲವ್ ಇನ್ ಮಂಡ್ಯ ಚಿತ್ರವನ್ನು ಸುಮಾರು ಎಂದು ಅದರ ಮುಂದಿನ ಅರ್ಥವನ್ನು ಸೂಪರ್ ಎಂದುಕೊಳ್ಳುವುದು ಅವರವರ ಭಾವಕ್ಕೆ ಬಿಟ್ಟದ್ದು ಎನ್ನಬಹುದು. ಆದರೆ ನಿರ್ದೇಶಕರೊಳಗಿನ ಕತೆಗಾರನ ದೌರ್ಬಲ್ಯ ಎದ್ದು ಕಾಣುವುದು ಇಲ್ಲೇ. ಸಿನೆಮಾಕ್ಕೆ ಕತೆ ಹೆಣೆಯುವ ಭರದಲ್ಲಿ ಕೌತುಕವನ್ನು ತುಂಬುವ ಭರದಲ್ಲಿ ಚಿತ್ರಕತೆ ಹೆಣೆದಾಗ ಕತೆಯ ಒಟ್ಟಾರೆ ಆಶಯವೆ ಸೂತ್ರ ಹರಿದ ಗಾಳಿಪಟದಂತೆ ಚೆಲ್ಲಾಪಿಲ್ಲಿಯಾಗುತ್ತದೆ. ಕತೆಗಾರ ಮತ್ತು ನಿರ್ದೇಶಕ ಇಬ್ಬರ ನಡುವಣ ವ್ಯತ್ಯಾಸ ಅಥವಾ ಸಾಮ್ಯ ಇದೇ ಎನ್ನಬಹುದು. ಅರಸು ಅಂತಾರೆ ಅವರ ಮೊದಲ ನಿರ್ದೇಶನ ಗಮನ ಸಳೆಯುತ್ತದೆ. ಹಾಡುಗಳು ಅವುಗಳ ಚಿತ್ರಣ ಟಾಪ್ ಕ್ಲಾಸ್.  ಸತೀಶ್ ಅಭಿನಯ ಅಲ್ಲಲ್ಲಿ ಗಮನ ಸೆಳೆದರೂ ಅವರ ಪಾತ್ರ ರಚನೆಯಲ್ಲಿಯೇ ಏರುಪೇರಿದೆ. ಸಿಂಧು ಲೋಕನಾಥ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಾಸ್ಟರ್ ಮಂಜು ಅವರ ಅಭಿನಯ ಸೂಪರ್.  ಇನ್ನುಳಿದಂತೆ ರಾಜೇಂದ್ರ ಕಾರಂತ್ ಚಿಕ್ಕದಾದ ಚೊಕ್ಕದಾದ ಪಾತ್ರದಲ್ಲೇ ಗಮನ ಸೆಳೆಯುತ್ತಾರೆ.

ಒಂದು ಕತೆ ಎಂದರೆ ಅದರದೇ ಆದ ಕವಲುಗಳು ಇತಿಮಿತಿಗಳು ಇರುತ್ತವೆ. ಒಬ್ಬ ಕತೆಗಾರ ಗೆಲ್ಲುವುದು ಕತೆಯನ್ನು ಹೆಣೆಯುವ ಆ ಪರಿಧಿಯೊಳಗೆ ಅದನ್ನು ಅಳವಡಿಸುವ ನೈಪುಣ್ಯತೆಯಿಂದ. ಅರಸು ಅಂತಾರೆ ಮೂಲತಃ ಚಿತ್ರ ಸಾಹಿತಿ. ಆದರೆ ಕತೆಯ ಬಗ್ಗೆ ಇನ್ನಷ್ಟು ಗಮನ ಹರಿಸಿದರೆ ಅದರ ಒಳಪದರಗಳನ್ನೂ ತಿಳಿದರೆ ಯಶಸ್ಸು ಖಂಡಿತ.

ನಮೋ ಭೂತಾತ್ಮ:

ಕೋಮಲ್ ಅಪ್ಡೇಟ್ ಆಗಿದ್ದಾರೆ. ಈ ವರ್ಷ ತಮಿಳಿನಲ್ಲಿ ತೆರೆಗೆ ಬಂದ ಚಿತ್ರವನ್ನು ಈ ವರ್ಷವೇ ಕನ್ನಡಕ್ಕೆ ತಂದಿದ್ದಾರೆ. ತಮಿಳಿನ ಯಮರುಕು ಭಯಮೆ ಚಿತ್ರ 1998 ರಲ್ಲಿ ತೆರೆಕಂಡ ಕೋರಿಯನ್ ಚಿತ್ರ ದಿ ಕ್ವಯ್ಟ್ ಫ್ಯಾಮಿಲಿ ಚಿತ್ರದ ರಿಮೇಕ್.
ಚಿತ್ರ ಒಂದು ಹಾರರ್ ಕಾಮಿಡಿ. ಎಂದರೆ ಭಯಭೀತರನ್ನಾಗಿಸುತ್ತಲೇ ನಗಿಸುವ ಚಿತ್ರವಿದು. ಈ ಹಿಂದೆ ತೆಲುಗಿನ ಕನ್ನಡ ರಿಮೇಕ್ ಚಂದ್ರಲೇಖ ಕೂಡ ಇಂತಹದ್ದೇ ಜಾನ್ರ್ ನಲ್ಲಿ ಬಂದಂತಹ ಚಿತ್ರವಾಗಿತ್ತು. ನಮೋ ಭೂತಾತ್ಮದ ಚಿತ್ರದ ಕತೆ ಸರಳವಾದದ್ದೆ. ಮಾಮೂಲಿ ಭೂತದ ಕತೆಗಳಲ್ಲಿ ಬರುವ ದೆವ್ವದ ಮನೆ/ಬಂಗಲೆ ಅಲ್ಲಿ ಸಿಲುಕಿಕೊಳ್ಳುವ ಜನರು ಹೆದರಿಸುವ, ಕಾಡುವ ದೆವ್ವ ಇದೆಲ್ಲಾ ಚಿತ್ರಪ್ರೇಮಿಗೆ ಹೊಸತಲ್ಲ. ಆದರೆ ನಮೋ ಭೂತಾತ್ಮದಲ್ಲಿ ವಿಶೇಷ ಎಂದರೆ ಭೂತದ ಜೊತೆಗೆ ಹಾಸ್ಯವೂ ಇರುವುದು.ಒಂದು ಬಂಗಲೆ. ಅದಕ್ಕೆ ನಾಯಕ ಮಾಲೀಕನಾಗುತ್ತಾನೆ. ಅದನ್ನು ರೆಸಾರ್ಟ್ ಮಾಡಿ ಕಮಾಯಿಸಬೇಕು ಎನ್ನುವುದು ಅವನ ಉದ್ದೇಶ. ಅದಕ್ಕೆ ನಾಯಕಿಯೂ  ಸಾಥ್ ಕೊಡುತ್ತಾಳೆ. ಆದರೆ ಬಂದ ಗಿರಾಕಿಗಳೆಲ್ಲಾ ಪರಲೋಕಕ್ಕೆ ಪರಾರಿಯಾದಾಗ ಅನುಮಾನ ಕಾಡುತ್ತದೆ. ಅಲ್ಲಲ್ಲ ಭೂತಾತ್ಮ ಕಾಡುತ್ತದೆ. ಅದರ ರಹಸ್ಯದ ಹಿಂದೆ ನಾಯಕ ಬೀಳುತ್ತಾನೆ..ನಾಯಕನ ಹಿಂದೆ ದೆವ್ವ ಬೀಳುತ್ತದೆ. ಈ ಇಬ್ಬರ ಹಿಂದೆ ಪ್ರೇಕ್ಷಕ ಬೀಳುತ್ತಾನೆ.
ಚಿತ್ರ ಪ್ರಾರಂಭದಲ್ಲಿ ಬೋರ್ ಎನಿಸುತ್ತದೆ ಬರುಬರುತ್ತಾ ಜೋರ್ ಎನಿಸುತ್ತದೆ., ಚಿತ್ರಕತೆ ಲಾಜಿಕ್ ಮೀರಿ ಇಷ್ಟವಾಗುತ್ತದೆ. ಭಯ ಹುಟ್ಟಿಸಲು ಕ್ಯಾಮೆರಾ ಕಣ್ಣು ಹಿನ್ನೆಲೆ ಸಂಗೀತ ಸಹಾಯ ಮಾಡುತ್ತದೆ. ನಗಿಸಲು ಕೋಮಲ್, ಕೋಮಲ್ ಜೊತೆಗೆ ಒಂದಷ್ಟು ಸನ್ನಿವೇಶಗಳು ಜೊತೆಗೆ ಹರೀಶ್ ರಾಜ್ ಪ್ರಯತ್ನ ಪಡುತ್ತಾರೆ ಮತ್ತು ಯಶಸ್ವಿಯೂ ಆಗುತ್ತಾರೆ. ಚಿತ್ರದಲ್ಲಿ ಬರುವ ಕತೆ ಉಪಕತೆಗಳು ಅಲ್ಲಲ್ಲಿ ಬ್ರೇಕ್ ನೀಡುತ್ತವೆ. ಇನ್ನು ಸಂಗೀತ ಹಾಡುಗಳ ಬಗ್ಗೆ ನಿರ್ದೇಶಕರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅದು ಪ್ರೇಕ್ಷಕನಿಗೂ ಬೇಕಾಗುವುದಿಲ್ಲ.
ಸಿನಿಮಾದ ಕತೆ ಹಳೆಯದಾದರೂ ಚಿತ್ರಕತೆ ಈಗಾಗಲೇ ಬಂದಿದೆ ಎನಿಸಿದರೂ ಜಾನರ್ ಹೊಸದು ಎನಿಸುವುದರಿಂದಾಗಿ ಚಿತ್ರ ಸ್ವಲ್ಪ ಮಟ್ಟಿಗೆ ಫ್ರೆಶ್ ಎನಿಸುತ್ತದೆ. ಹಾಗಾಗಿಯೇ ನೋಡುತ್ತಾ ನೋಡುತ್ತಾ ಮಜಾ ಕೊಡುತ್ತದೆ.
ರಜಾದಲ್ಲಿ ಮಜಾ ಮಾಡಲು ಯೋಚಿಸುವವರು ಒಂದಷ್ಟು ಸಮಯವನ್ನು ಕಳೆಯಬೇಕು ಎನ್ನುವವರು ನಮೋ ಭೂತಾತ್ಮಕ್ಕೆ ಭಯವಿಲ್ಲದೆ ನುಗ್ಗಿ ಹೆದರಬಹುದು.


ಹುಚ್ಚ ವೆಂಕಟ್:

ಸಿನಿಮಾ ಹೆಸರು, ನಿರ್ದೇಶಕರ ಹೆಸರು ಎರಡೂ ಒಂದೇ ಆಗಿರುವುದು ಮತ್ತು ಹೆಸರಿನ ಮುಂದೆ ಹುಚ್ಚ ಎಂದಿರುವುದು ಇದೆಲ್ಲದರ ಕಾರಣದಿಂದಾಗಿ ಹುಚ್ಚ ವೆಂಕಟ ಚಿತ್ರ ಹುಚ್ಚುಚ್ಚಾಗಿದ್ದರೆ ಅದಕ್ಕೆ ಸಮರ್ಥನೆ ಇದೆ.
ನಾಯಕ ವೆಂಕಟ ನಾಯಕಿ ರಮ್ಯಳ ಹಿಂದೆ ಬೀಳುತ್ತಾನೆ. ನಿರ್ದೇಶಕರು ಚಿತ್ರನಟಿ ರಮ್ಯ ಹಿಂದೆ ಬಿದ್ದವರೇ. ನನ್ನದು ರಮ್ಯದು ಮದುವೆಯಾಗಿತ್ತು ಎಂದು ಇಡೀ ದಿನ ಸುದ್ದಿವಾಹಿನಿಯಲ್ಲಿ ಬಂದು ಕುಳಿತಿದ್ದವರು. ಹಾಗಾಗಿ ಇದೊಂದು ನೈಜಕಥನ ಎನ್ನಬಹುದು. ಚಿತ್ರದಲ್ಲಿ ನಾಯಕ ಭೂಗತಲೋಕಕ್ಕೆ ಎಂಟ್ರಿ ಕೊಡುವುದರಿಂದ ಮತ್ತು ನಿಜಜೀವನದ ಘಟನೆ ತೆರೆದಾಗ ವೆಂಕಟ್ ಅವರ ಬಗ್ಗೆ ಆ ಆರೋಪ ಇಲ್ಲದೆ ಇರುವುದರಿಂದ ಇದೊಂದು ಕಾಲ್ಪನಿಕ ಕತೆ ಎನ್ನಲೂ ಬಹುದು. ಸಂಕಲನ ಅಲ್ಲಿ ಕತ್ತರಿಸಿ ಇಲ್ಲಿ ಕತ್ತರಿಸಿ ಸನ್ನಿವೇಶಗಳು ಏರು ಪೆರಾಗಿರುವುದರಿಂದ ಇದೊಂದು ರಿವರ್ಸ್ ಸ್ಕ್ರೀನ್ ಪ್ಲೇ ಸಿನಿಮಾ ಎನ್ನಲೂ ಬಹುದು. ಹೀಗೆ ಚಿತ್ರವನ್ನು ಹೇಗೆ ಬೇಕಾದರೂ ಕರೆಯಬಹುದಾದ ಗುಣವನ್ನು ಹೊಂದಿರುವ ಚಿತ್ರ ವೆಂಕಟ ನೋಡಿಸಿಕೊಳ್ಳುವ ಗುಣವಿದೆಯೇ ಎಂಬ ಪ್ರಶ್ನೆಗೆ ನೋಡಿಸಿ ‘ಕೊಲ್ಲುವ’ ಗುಣವಿದೆ ಎನ್ನಬಹುದು.
ಚಿತ್ರದ ನಾಯಕ ಕಾಲೇಜಿನಲ್ಲಿ ಓದುತ್ತಾನೆ, ನೀವದನ್ನು ನಂಬಬೇಕು, ಅದೇನು ಓದುತ್ತಾನೋ ರಮ್ಯ ಎನ್ನುವ ನಾಯಕಿಯ ಹಿಂದೆ ಬೀಳುತ್ತಾನೆ. ಆಕೆ ಕೇರ್ ಮಾಡುವುದಿಲ್ಲ. ಇವನು ಕ್ಯಾರೆ ಎನ್ನುವುದಿಲ್ಲ. ಪ್ರೇಕ್ಷಕ ಮಾತ್ರ ಬಾಪ್ಪರೆ ಎನ್ನುತ್ತಾನೆ. ಅಲ್ಲಿಂದ ಕೈಯಲ್ಲಿ ಸುಲಭವಾಗಿ ಲಾಂಗ್ ಹಿಡಿಯುತ್ತಾನೆ ವೆಂಕಟ. ಲಾಂಗಿಗಿಂತ ಹೆಚ್ಚು ಮಾತಿನ ಚಾಟಿ ಬೀಸುತ್ತಾರೆ, ಆವಾಗಾವಾಗ ದುಃಖಕ್ಕೀಡಾಗುತ್ತಾರೆ, ಹೀಗೆ ತೆರೆಯ ಮೇಲೆ ಏನೇ ನಡೆದರೂ ಪ್ರೇಕ್ಷಕ ಅಲ್ಲಾಡುವುದಿಲ್ಲ. ಅಷ್ಟರ ಮಟ್ಟಿಗೆ ಸಿನಿಮಾ ಪರಿಣಾಮಕಾರಿ.
ಇದು ನಿರ್ದೇಶಕರ ಮೊದಲ ನಿರ್ದೇಶನದ ಅಭಿನಯದ ಚಿತ್ರ. ಈ ಹಿಂದೆ ಸ್ವತಂತ್ರಪಾಳ್ಯ ಎನ್ನುವ ಚಿತ್ರವನ್ನು ನಿರ್ದೇಶಕರು ನಟಿಸಿ ನಿರ್ದೇಶನ ಮಾಡಿದ್ದರು. ಅದರ ಅನುಭವ ಇಲ್ಲಿ ಕೆಲಸಕ್ಕೆ ಬಂದಿಲ್ಲ. ಸಿನಿಮಾದ ಮುಖ್ಯವಾದ ಭಾಗಗಳನ್ನು ತಾನೇ ವಹಿಸಿಕೊಂಡಿದ್ದಾರೆ ವೆಂಕಟ್. ಅದಕ್ಕೂ ಮುನ್ನ ತಮ್ಮ ವೀಕ್ನೆಸ್ ಸ್ಟ್ರೆಂತ್ ತಿಳಿದುಕೊಂಡಿದ್ದರೆ ಅದರ ಪ್ರಕಾರ ವಿಭಾಗಗಳನ್ನು ಒಂದಷ್ಟು ಪರಿಣತರಿಗೆ ವಹಿಸಿದ್ದರೆ ಚಿತ್ರ ಏನೋ ಒಂದಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಚಿತ್ರಕರ್ಮಿಗಳು ಜಾಸ್ತಿ’ಯಾಗುತ್ತಿದ್ದಾರೆ. ಹೇಗೋ ಏನೋ ಸಿನಿಮಾ ನಿರ್ದೇಶನ ಮಾಡಬೇಕು, ಅಭಿನಯಿಸಬೇಕು, ನಾವಂದುಕೊಂಡದ್ದೇ ಸರಿ ಎನ್ನುವ ಮನೋಭಾವನೆ ಇಂತಹ ಚಿತ್ರಗಳಿಗೆ ಕಾರಣವಾಗುತ್ತದೆ. ಒಂದು ಸಿನಿಮಾಕ್ಕೆ ಮೂಲಭೂತವಾಗಿ ಬೇಕಾದ ಅಗತ್ಯತೆಗಳೆಲ್ಲವೂ ಇದ್ದಾಗಲೂ ಸಿನಿಮಾ ಪರಿಣಾಮಕಾರಿಯಾಗದೆ ಇರುವುದಕ್ಕೆ ಕಾರಣ ಬೌದ್ಧಿಕತೆ ಕೊರತೆ. ಹುಚ್ಚ ವೆಂಕಟ ಕೂಡ ಇದಕ್ಕೆ ಹೊರತಾಗಿಲ್ಲ. ಹಾಗಾಗಿಯೇ ಸಿನಿಮಾ ಯಾವ ವಿಭಾಗದಲ್ಲೂ ಆಪ್ತವಾಗದೆ, ಕೊನೆಗೆ ಒಂದು ಪ್ರಯತ್ನವೂ ಆಗದೆ ಅರೆಬೆಂದ ಅಡುಗೆಯಂತಾಗುವುದು ದುರಂತ.

ಚಿತ್ರಕರ್ಮಿಗಳು ಸಿನಿಮಾ ಮಾಡುವ ಮುನ್ನ ಒಂದಷ್ಟು ಇತಿಹಾಸ, ಸಿನೆಮಕಲೆಯ ಬಗ್ಗೆ ಅದ್ಯಯನ ಮಾಡಿ ಒಂದಷ್ಟು ಸಿನಿಮಾ ನೋಡಿ, ಒಂದಷ್ಟು ಓದಿದರೇ ನೋಡಿಸಿಕೊಳ್ಳುವ ಸಿನಿಮಾ ಮಾಡಬಹುದು, ಇಲ್ಲವಾದಲ್ಲಿ ಇಂತಹ ನೋಡಿಸಿ‘ಕೊಲ್ಲುವ’ ಸಿನಿಮಾವಾಗುತ್ತದೆ.