Pages

Sunday, February 2, 2014

ಡಾರ್ಲಿಂಗ್:



ಒಂದಷ್ಟು ಜನ ತಂತ್ರಜ್ಞರೆಲ್ಲಾ ಒಂದೆಡೆ ಸೇರಿ ಅವರೇ ನಿರ್ಮಾಪಕರಾಗಿ ಚಿತ್ರ ಮಾಡುವುದು ಒಂದು ಆರೋಗ್ಯಕರವಾದ ಸಂಗತಿ ಎನ್ನಬಹುದು. ಈ ಹಿಂದೆ ಇದೇ ರೀತಿ ರಮೇಶ್ ಅಭಿನಯದ ಉಲ್ಪಾಪಲ್ಟಾ ಚಿತ್ರ ನಿರ್ಮಾಣವಾಗಿತ್ತು ಮತ್ತದು ಯಶಸ್ವಿಯೂ ಆಗಿತ್ತು ಕೂಡ. ಈಗ ಅದೇ ನಿಟ್ಟಿನಲ್ಲಿ ಡಾರ್ಲಿಂಗ್ ಬಂದಿದೆ.
ಸಂತು ಅಲೆಮಾರಿ ಚಿತ್ರದಿಂದ ನಿರ್ದೇಶಕನ ಟೊಪ್ಪಿಗೆ ಧರಿಸಿದವರು. ಅಲೆಮಾರಿ ಒಂದಷ್ಟು ವಿಮರ್ಶಕರಿಂದ ಉತ್ತಮ ಅಭಿಪ್ರಾಯ ಪಡೆಯಿತಾದರೂ ಗಲ್ಲಾಪೆಟ್ಟಿಗೆಯಲ್ಲಿ ಸೋತಿತ್ತು. ಡಾರ್ಲಿಂಗ್ ಚಿತ್ರದ ಮೂಲಕ ಒಂದು ಪ್ರೇಮಕತೆಯನ್ನು ಹಾಸ್ಯಲೇಪನದ ಜೊತೆಗೆ ಹೇಳಲು ಹೊರಟಿರುವ ಸಂತು ಗೆ ಅದರಲ್ಲಿ ಸ್ಪಷ್ಟತೆ ಇಲ್ಲ. ಹಾಗಾಗಿ ಎಲ್ಲೋ ಪ್ರಾರಂಭವಾಗುವ ಕಥೆ ಅಲ್ಲೇ ಮುಗಿದರೂ ಅಲ್ಲಿಯವರೆಗೆ ಎಲ್ಲೆಲ್ಲೋ ಸುತ್ತಾಡಿಬಿಟ್ಟಿರುತ್ತದೆ. ಹಾಗೆಯೇ ಥ್ರಿಲ್ಲರ್ ನಂತೆ ಪ್ರಾರಂಭವಾಗುವ ಚಿತ್ರ ಆನಂತರ ಪ್ರೇಮಕತೆಯಾಗಿ ಅಲ್ಲಿಂದ ಭೂಗತ ಲೋಕಕ್ಕೆ ಎಂಟ್ರಿ ಕೊಟ್ಟ ನಂತರ ಹಾಸ್ಯ ಚಿತ್ರವಾಗಿ ಮಾರ್ಪಾಡಾಗಿ ಮತ್ತೆ ... ಹೀಗೆ. ಹಾಗಾಗಿ ಇದು ಯಾವ ವಿಭಾಗದ ಚಿತ್ರ ಎಂದು ಹೇಳಲು ಬರುವುದಿಲ್ಲ.
ಸಂತು ಒಂದಷ್ಟು ಕಲರ್ ಫುಲ್ ದೃಶ್ಯಗಳು, ಒಂದಷ್ಟು ಹಾಸ್ಯ ಸನ್ನಿವೇಶಗಳು, ದ್ವಂದ್ವಾರ್ಥದ ಸಂಭಾಷಣೆಗಳು ಇಟ್ಟು ಜಾಲಿಯಾಗಿ ಸಾಗಿ ಹೋಗುವ ಸಿನಿಮಾ ಮಾಡಲು ಹೊರಟಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಹಾಗಾಗಿ ಚಿತ್ರ ಗಂಭೀರವಾದ ಕಡೆಯೂ ಹಾಸ್ಯವನ್ನು ನಿರೀಕ್ಷೆಮಾಡುತ್ತಾನೆ ಪ್ರೇಕ್ಷಕ ಎಂದರೆ ಅದು ಅವನ ತಪ್ಪಲ್ಲ.
ನಾಯಕ ಹಚ್ಚೆ ಹಾಕುತ್ತಾನೆ.ನಾಯಕಿ ಹಚ್ಚೆ ಹಾಕಿಸಿಕೊಳ್ಳಲು ಬರುತ್ತಾಳೆ. ನೋಡಿದ ಮೇಲೆ ಪ್ರೀತಿ. ಆದರೆ ಆಕೆಯ ಅಣ್ಣ ಒಬ್ಬ ಭೂಗತ ದೊರೆ. ನಾಯಕ ಮತ್ತೊಬ್ಬ ಡಾನ್ ಸಹಾಯ ಪಡೆದು ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ನೋಡಿದರೆ ಈ ಡಾನ್ ಅವಳ ಮೇಲೆಯೇ ಕಣ್ಣು ಹಾಕಿಬಿಡಬೇಕೆ..? ಹೇಗೋ ಅಲ್ಲಿಂದ ತಪ್ಪಿಸಿಕೊಂಡರೆ ವಿಕೃತರೂ ತಗುಲಿಹಾಕಿಕೊಳ್ಳುತ್ತಾರೆ... ಹಾಗಂತ ಗಾಬರಿಯಾಗಬೇಕಿಲ್ಲ. ಸಂತು ಅದಕ್ಕೆಲ್ಲಾ ಅವಕಾಶ ಮಾಡಿಕೊಡುವುದೂ ಇಲ್ಲ. ಎಲ್ಲವನ್ನು ಹಗುರಾಗಿಸುತ್ತಾರೆ. ಹಾಗಾಗಿಯೇ ಪ್ರೇಕ್ಷಕನೂ ಚಿತ್ರವನ್ನು ಹಗುರವಾಗಿ ತೆಗೆದುಕೊಳ್ಳುತ್ತಾನೆ.
ಚಿತ್ರದಲ್ಲಿ ಎಲ್ಲವೂ ಇದೆ. ಆದರೆ ಇದು ಯುವಜನರಿಗೆ ಮಾಡಿದ ಚಿತ್ರ, ಇಲ್ಲಿ ನಗಿಸಲೇಬೇಕು, ಮಜಾ ಕೊಡಬೇಕು ಎನ್ನುವ ನಿರ್ದೇಶಕರ ಆಶಯ ಸಿನಿಮಾವನ್ನು ಸಿನಿಮಾವನ್ನಾಗಿಯಷ್ಟೇ ಮಾಡಿದೆ. ಅಂದರೆ ಪ್ರತಿ ಸಿನಿಮಾದಲ್ಲೂ ಪ್ರೇಕ್ಷಕ ತನ್ನದೇ ಆದ ಕಥೆ ಹುಡುಕುತ್ತಾನೆ. ವಾಸ್ತವದ ಲೇಪನಕ್ಕೆ ಕಾಯುತ್ತಾನೆ. ಇಲ್ಲಿ ಒಂದೆರೆಡು ಸತ್ಯ ಘಟನೆಗಳನ್ನೂ ನಿರ್ದೇಶಕರ ಕಥೆಗೆ ಅಳವಡಿಸಿಕೊಂಡಿದ್ದಾರಾದರೂ ಚಿತ್ರದ ಮುಖ್ಯ ಆಶಯವೇ ಗಟ್ಟಿಯಿಲ್ಲದ್ದರಿಂದ ಚಿತ್ರ ಸಾದಾರಣ ಚಿತ್ರ ಹಣೆಪಟ್ಟಿ ತನ್ನದಾಗಿಸಿಕೊಳ್ಳುತ್ತದೆ.
ಲೂಸ್ ಮಾದ ಯೋಗೀಶ್ ಇಲ್ಲಿ ಒಂದಷ್ಟು ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹಾವಭಾವ ಮಾತಿನಲ್ಲಿ ಬದಲಾವಣೆ ಇಲ್ಲ. ಉಳಿದಂತೆ ಎರಡು ಡಾನ್ ಗಳಾಗಿ ಅಶ್ವತ್ ಮತ್ತು ಆದಿ ಹೆದರಿಸದೆ ನಗಿಸುತ್ತಾರೆ. ಉಳಿದ ಪಾತ್ರಧಾರಿಗಳಲ್ಲಿ ಗಮನ ಸೆಳೆಯುವುದು ಚಿಕ್ಕಣ್ಣ ಮಾತ್ರ. ನಾಯಕಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಒಂದು ಕತೆಗೆ ಏನೇನೋ ಬೇಕು ಅದನ್ನು ನೀಡುತ್ತಾ ಸಿಂಗಾರ ಮಾಡುತ್ತಾ ಹೋದರೆ ಅದು ಒಂದೊಳ್ಳೆಯ ಚಿತ್ರವಾಗುತ್ತದೆ. ಆದರೆ ಸಿಂಗಾರದ ಅಂಶಗಳನ್ನು ಗುಡ್ಡೆ ಹಾಕಿಕೊಂಡು ಆನಂತರ ಅದಕ್ಕೆ ಕಥೆ ಹೆಣೆದು ಸಿನಿಮಾ ಮಾಡಿದರೆ ಡಾರ್ಲಿಂಗ್ ಆಗುತ್ತದೆ ಎಂಬುದು ಡಾರ್ಲಿಂಗ್ ಚಿತ್ರದ ಸಂಕ್ಷಿಪ್ತ ವಿಮರ್ಶೆ.

ವಸುಂಧರಾ:



ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಮತ್ತು ಮಸಾಲೆ ಭರಿತ ಚಿತ್ರ ಎರಡನ್ನೂ ನಿರ್ದೇಶಿಸಿ ಯಶಸ್ಸು ಗಳಿಸಿದವರು ನಾಗಾಭರಣ.ಒಂದು ಚಿತ್ರವೆಂದರೆ ಬರೀ ಚಿತ್ರವಲ್ಲ, ಅದರಲ್ಲೊಂದು ಸಂದೇಶ ಸಾಮಾಜಿಕ ಕಳಕಳಿ ಇರಲೇಬೇಕು ಎಂಬುದು ಅವರ ಆಶಯ. ಹಾಗಾಗಿಯೇ ಅವರ ಎಲ್ಲಾ ಚಿತ್ರಗಳಲ್ಲೂ ಒಂದಲ್ಲಾ ಒಂದು ತೂಕದ ಅಂಶ ಇದ್ದೇ ಇರುತ್ತದೆ.
ನಾಗಾಭರಣ ರ ಚಿತ್ರಗಳಿಗೆ ಅದೇ ಶಕ್ತಿಯಾದರೆ ಕೆಲವೊಮ್ಮೆ ಅದೇ ಮಿತಿಯಾಗಿಬಿಡುತ್ತದೆ. ವಸುಂಧರೆ ಚಿತ್ರದಲ್ಲಿ ಹತ್ತು ಹಲವಾರು ಅಂಶಗಳಿವೆ. ಭಯೋತ್ಪಾದನೆ, ಸುದ್ದಿ ವಾಹಿನಿಗಳ ಅವಕಾಶವಾದಿತನ, ಉದ್ಯಮಿಗಳ ಸ್ವಾರ್ಥ ಮೂರು ಒಂದೇ ಕಥೆಯಲ್ಲಿ ತಳಕು ಹಾಕಿಕೊಂಡಿವೆ.
ಒಬ್ಬ ಉದ್ಯಮಿಯ ಕಾರ್ಖಾನೆಯಿಂದ ಅಮಾಯಕರ ಸಾವು ನಡೆದಾಗ ಅದನ್ನು ಮುಚ್ಚಿಹಾಕಲು ನಿರಪರಾಧಿಯನ್ನು ಅಪರಾಧಿಯನ್ನಾಗಿ ಮಾಡುತ್ತಾರೆ. ಇದಕ್ಕೆ ಮಾಧ್ಯಮ ಕುಮ್ಮಕ್ಕು ನೀಡುತ್ತದೆ.ಇವೆರಡಕ್ಕೂ ಒಂದು ಬಾಂಬ್ ಸ್ಫೋಟ ಕಾರಣವಾಗುತ್ತದೆ. ಮುಂದೆ ನಾಯಕಿ ಅಪರಾಧಿಯಾಗುತ್ತಾಳೆ. ಇಡೀ ಸಮಾಜ ಅವಳನ್ನು ಅಪರಾಧಿ ಎಂದೇ ನಂಬುತ್ತದೆ. ಅದಕ್ಕೆ ಕಾರಣ ಮಾಧ್ಯಮ. ನ್ಯಾಯಾಲಯದ ಮುಂದೆ ಆರೋಪ ಹೊತ್ತ ನಾಯಕಿಗೆ ಹೆಗಲು ಕೊಡುವವರು ಯಾರು? ಬಾಂಬ್ ಸ್ಫೋಟದ ಹಿನ್ನೆಲೆ ಏನು..? ಈವತ್ತಿನ ಸಮಾಜದಲ್ಲಿ ಸತ್ಯಕ್ಕೆ ನ್ಯಾಯ ಇದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದ್ದರೆ ಒಮ್ಮೆ ವಸುಂಧರೆ ನೋಡಬಹುದು.
ಚಿತ್ರದಲ್ಲಿ ಒಂದಷ್ಟು ಮೆಚ್ಚತಕ್ಕ ಅಂಶಗಳಿವೆ. ಹಾಗೆಯೇ ಅದರ ಹಿನ್ನೆಲೆಯನ್ನು ಅದಕ್ಕೆ ಬೇಕಾದ ಅಂಶಗಳನ್ನು ನಾಗಾಭರಣ ಕಲೆ ಹಾಕಿದ್ದಾರೆ. ಚಿತ್ರದಲ್ಲಿ ಯಾವುದೇ ರೀತಿಯಲ್ಲಿ ಮನರಂಜನೆ ಹಾಸ್ಯ ಮುಂತಾದವುಗಳನ್ನು ನಿರೀಕ್ಷಿಸುವ ಹಾಗಿಲ್ಲ. ಕಥೆ ಸಾಗುತ್ತಾ ಹೋಗುತ್ತದೆ. ಅಲ್ಲಲ್ಲಿ ಬಿಗಿ ಎನಿಸುವ ನಿರೂಪಣೆ ಕೆಲವು ಅನಗತ್ಯ ದೃಶ್ಯಗಳಿಂದ ಪೇಲವ ಎನಿಸುತ್ತದೆ. ಕೆಲವೊಮ್ಮೆ ಗಂಭೀರವಾಗುವ ಚಿತ್ರ ಇನ್ನೂ ಕೆಲವೆಡೆ ಹಗುರವಾಗುತ್ತದೆ. ಹಾಗಾಗಿಯೇ ಇಡೀ ಚಿತ್ರ ಒಟ್ಟಾರೆಯಾಗಿ ಅದ್ಭುತ ಎನಿಸುವುದಿಲ್ಲ. ಅಥವಾ ಇನ್ನೊಂದು ಮೈಸೂರು ಮಲ್ಲಿಗೆ ಜನುಮದಜೋಡಿ ಆಗುವುದೂ ಇಲ್ಲ. ಹಾಗಂತ ಒಂದೇ ಏಟಿಗೆ ಎತ್ತಿ ಬೀಸಾಕುವ ಚಿತ್ರ ಇದಲ್ಲ. ಒಂದು ವಿಷಯವನ್ನು ಹೇಳಲು ಹಲವಾರು ಉಪವಿಷಯಗಳನ್ನು ಸೇರಿಸಿ ಸಿದ್ಧ ಪಡಿಸಿದ ಭೋಜನವಿದು. ತಿಂದ ಮೇಲೆ ತಿಂದವರ ಅಭಿರುಚಿಗೆ ತಕ್ಕಂತೆ ಅಭಿಪ್ರಾಯವೂ ಬದಲಾಗಬಹುದು.
ಐಶ್ವರ್ಯ ನಾಗ್ ಇಲ್ಲಿ ಕಳಂಕಿತ ವೈದ್ಯೆಯ ಪಾತ್ರ ಮಾಡಿದ್ದಾರೆ. ರಾಜೇಶ್ ಗಿಲ್ಲಿ ಪ್ರಮುಖ ಪಾತ್ರವಿದೆ. ಉಳಿದಂತೆ ಸುಧಾರಾಣಿ, ಭರತ್, ಪನ್ನಗ ಭರಣ, ಜಯಂತಿ ಕಥೆಗೆ ಪೂರಕವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಛಾಯಾಗ್ರಹಣದ ಬಗ್ಗೆ ಹೆಚ್ಚು ಹೇಳಲು ಏನೂ ಇಲ್ಲ. ಆದರೆ ಹಿನ್ನೆಲೆ ಸಂಗೀತದಲ್ಲಿ ಇನ್ನಷ್ಟು ಫೋರ್ಸ್ ಬೇಕಿತ್ತು ಎನಿಸದೇ ಇರದು.