Pages

Saturday, December 28, 2013

ಛತ್ರಪತಿ

ಚಿತ್ರದ ಹೆಸರಿನಲ್ಲೇ ಕಥೆಯಿದೆ. ಜೊತೆಗೆ ಅದರ ಅಂಡರ್ವರ್ಲ್ಡ್ ಗೆ ಅಧಿಪತಿ ಎನ್ನುವ ಅಡಿಬರಹದಲ್ಲಿ ಚಿತ್ರಕತೆಯಿದೆ. ಹಾಗೆಯೇ ಇದು ತೆಲುಗಿನ ರಾಜಮೌಳಿ ನಿರ್ದೇಶನದ ಇದೆ ಹೆಸರಿನ ಚಿತ್ರದ ಕನ್ನಡ ಅವತರಣಿಕೆ ಎನ್ನುವಲ್ಲಿ ಇಡೀ ಚಿತ್ರವೇ ಇದೆ. ಹಾಗಾಗಿ ಇಲ್ಲಿ ಹೊಸದಾಗಿ ಹೇಳಲು ಕೇಳಲು ಏನೂ ಇಲ್ಲ. ಅಥವಾ ಏನನ್ನೂ ನಿರ್ದೇಶಕರು ಉಳಿಸಿಲ್ಲ.
ರೀಮೇಕ್ ಚಿತ್ರಗಳು ಎಂದಾಕ್ಷಣ ಅದರಲ್ಲೇನಿದೆ ಎಂದು ಸುಲಭವಾಗಿ ತಳ್ಳಿ ಹಾಕಲು ಸಾಧ್ಯವಿಲ್ಲ. ಆಪ್ತಮಿತ್ರ, ರಾಮಾಚಾರಿ, ಅಣ್ಣಯ್ಯ ಮುಂತಾದವುಗಳೂ ಮೂಲ ಚಿತ್ರವನ್ನೇ ಮೀರಿಸಿದ್ದು ನಮಗೆ ಗೊತ್ತೇ ಇದೆ. ಆದರೆ ಛತ್ರಪತಿ ತರಹದ ಚಿತ್ರಗಳಲ್ಲಿ ಕಥೆಗಿಂತಲೂ ಒಬ್ಬ ಸ್ಟಾರ್ ಮತ್ತು ತಾಂತ್ರಿಕ ಅಂಶಗಳು ಮುಖ್ಯವಾಗುತ್ತವೆ. ಒಂದು ಸರಳವಾದ ದ್ವೇಷದ ಕಥೆಯನ್ನು ಅಷ್ಟೆ ಸರಳವಾಗಿ ಕನ್ನಡಕ್ಕೆ ತಂದರೆ ಚಿತ್ರ ಅಲ್ಲೊಬ್ಬ ಸ್ಟಾರ್ ನನ್ನು ಮತ್ತು ಅಲ್ಲಿಯಷ್ಟೇ ಸಮರ್ಥವಾದ ತಾಂತ್ರಿಕ ಅಂಶವನ್ನು ಮತ್ತು ಅಲ್ಪ ಸ್ವಲ್ಪ ನಮ್ಮ ಸೊಗಡಿಗೆ ತಕ್ಕಂತಹ ಬದಲಾವಣೆಯನ್ನು ಬೇಡುತ್ತದೆ. ಆದರೆ ಛತ್ರಪತಿ ಈ ಯಾವ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದು ಚಿತ್ರದ ಋಣಾತ್ಮಕ ಅಂಶ ಎನ್ನಬಹುದು. ಗಡಿನಾಡಿನ ಕರಾವಳಿ ತೀರದ ಬದುಕು ಬವಣೆ ಅಲ್ಲಿನ ದುಷ್ಟರ ದೌರ್ಜನ್ಯ ಮುಂತಾದವುಗಳ ಜೊತೆಗೆ ತಾಯಿ ಮಗನ ಬಾಂಧವ್ಯ ಚಿತ್ರದ ಪ್ರಮುಖ ಆಸ್ತಿ. ಇಲ್ಲಿ ಎಲ್ಲವೂ ಇದೆ. ಆದರೆ ಅಲ್ಲಿನದ್ದನ್ನೇ ಒಂಚೂರು ಬದಲಿಸದೆ ಹೇಗಿತ್ತೋ ಹಾಗೆ ಕನ್ನಡೀಕರಿಸಿರುವ ನಿರ್ದೇಶಕರು ನಕಲು ಮಾಡುವಲ್ಲಿ ಗೆದ್ದಿರಬಹುದೇನೋ..ಆದರೆ ಒಂದು ಸಿನೆಮಾವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದಾರೆ. ಹಾಗಾಗಿಯೇ ಕನ್ನಡದ ಛತ್ರಪತಿ ಪೇಲವವಾಗಿದೆ.
ನಾಯಕ ಸಿದ್ಧಾಂತ್ ಈ ಹಿಂದೆ ಮಿಂಚು ಮಾಡಿದ್ದರು, ಆನಂತರ ದುಬಾರಿ ವೆಚ್ಚದ ಎ.ಕೆ.56 ಮಾಡಿದ್ದರು. ಆ ಎರಡೂ ಚಿತ್ರಗಳಿಗೆ ಸಾಕಷ್ಟು ವೆಚ್ಚವಾಗಿತ್ತು ನಿಜ. ಆದರೆ ಎರಡೂ ಗಮನಾರ್ಹ ಪ್ರಯತ್ನಗಳಾಗಿರಲಿಲ್ಲ.
ಈಗ ಛತ್ರಪತಿ ಚಿತ್ರದ ಮುಖಾಂತರವಾದರೂ ಯಶಸ್ಸು ಕಾಣಬೇಕೆಂಬ ಹಂಬಲ ಅವರದು. ಆದರೆ ಚಿತ್ರದಲ್ಲಿ ಅವರದು ಬರೀ ಅಬ್ಬರವೇ ಅತಿಯಾಗಿದ್ದು ಕಥೆಯ ಭಾವವನ್ನು ಅದು ನುಂಗಿ ಹಾಕಿ ಬಿಟ್ಟಿದೆ. ಸಾಹಸಮಯ ದೃಶ್ಯಗಳಿಗೆ ಮೊದಲೇ ಸಿದ್ಧವಾಗಿರುವಂತೆ ನಟಿಸಿರುವ ಸಿದ್ಧಾಂತ ಭಾವನಾತ್ಮಕ ಸನ್ನಿವೇಶಗಳು ತಮ್ಮದಲ್ಲ ಎನ್ನುವ ರೀತಿಯಲ್ಲಿ ಭಾವನೆಯನ್ನು ವ್ಯಕ್ತ ಪಡಿಸುತ್ತಾರೆ. ಚಿತ್ರದ ಆರಂಭದಿಂದಲೇ ನಿರ್ದೇಶಕರು ನಾಯಕನಿಗೆ ಬಿಲ್ಡ್ ಅಪ್ ಕೊಡುತ್ತಾ ಸಾಗುವುದು ಚಿತ್ರದ ಋಣಾತ್ಮಕ ಅಂಶ ಎನ್ನಬಹುದು. ಯಾಕೆಂದರೆ ತೆಲುಗಿನಲ್ಲಿ ಆವತ್ತಿನ ಸೂಪರ್ ಸ್ಟಾರ್ ಪ್ರಭಾಸ್ ಇದ್ದುದರಿಂದ ಅದು ಸಹನೀಯ ಮತ್ತು ನಿರೀಕ್ಷೆಯಾಗಿತ್ತು. ಆದರೆ ಕನ್ನಡದ ಮಟ್ಟಿಗೆ ಸಿದ್ಧಾಂತ ಇನ್ನೂ ಆ ಮಟ್ಟಕ್ಕೆ ಬೆಳೆದಿಲ್ಲವಾದ್ದರಿಂದ ಬರೀ ಕಥೆಗೆ ಎಷ್ಟು ಬೇಕೋ ಅಷ್ಟು ಮಾತ್ರದ ಬಿಲ್ಡ್ ಅಪ್ ಕೊಟ್ಟಿದ್ದರೆ ಸಾಕಾಗಿತ್ತೇನೋ?
ಇನ್ನುಳಿದಂತೆ ಕೀರವಾಣಿ ಸಂಗೀತದಲ್ಲಿ ಅಬ್ಬರವಿದೆ. ಮೈಮಾಟ ತೋರಿಸಿರುವ ನಾಯಕಿ ಅಭಿನಯಿಸಲು ಹಿಂಜರಿದಿದ್ದಾರೆ. ನಿರ್ದೇಶಕ ದಿನೇಶ್ ಗಾಂಧೀ ತೆಲುಗು ಛತ್ರಪತಿಯನ್ನು ಯಾವ ಭಾವವನ್ನು ಗಣನೆಗೆ ತೆಗೆದುಕೊಳ್ಳದೆ ಬರೀ ದೃಶ್ಯಾವಳಿಯನ್ನು ಕನ್ನಡೀಕರಿಸುವುದಕ್ಕೆ ಗಮನ ಹರಿಸಿರುವುದು ಇದಕ್ಕೆ ಕಾರಣ ಎನ್ನಬಹುದು.

ಇನ್ನು ಮುಂದಾದರೂ ನಾಯಕ ನಿರ್ಮಾಪಕ ಸಿದ್ಧಾಂತ್ ಉತ್ತಮ ಕಥೆಯ ಚಿತ್ರಗಳತ್ತ ಗಮನ ಹರಿಸುವುದು ಒಳ್ಳೆಯದು ಎಂಬುದು ಸಿನಿಮಂದಿಯ ಅಂಬೋಣ.

ಶ್ರಾವಣಿ ಸುಬ್ರಹ್ಮಣ್ಯ


ಮಂಜು ಸ್ವರಾಜ್ ಈ ಹಿಂದೆ ಶಿಶಿರ ಎನ್ನುವ ರಹಸ್ಯಮಯ ರೋಮಾಂಚಕ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಮಾಧ್ಯಮಗಳಿಂದ ಮೆಚ್ಚುಗೆ ಪಡೆದಿದ್ದ ಶಿಶಿರ ಗಲ್ಲಾ ಪೆಟ್ಟಿಗೆಯಲ್ಲಿ ಸೋಲನ್ನಪ್ಪಿತ್ತು.ಈಗ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ಅಭಿನಯದ ಶ್ರಾವಣಿ ಸುಬ್ರಹ್ಮಣ್ಯ ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ. ಈ ಸಾರಿ ಪ್ರೇಮಕಥೆಯನ್ನು ಕೈಗೆತ್ತಿಕೊಂಡಿರುವ ಸ್ವರಾಜ್ ಅದರಲ್ಲಿ ಯಶಸ್ಸು ಕಂಡಿದ್ದಾರೆ ಎನ್ನಬಹುದು. ಇಷ್ಟಕ್ಕೂ ಅಮೂಲ್ಯ ಮತ್ತು ಗಣೇಶ್ ಆರು ವರ್ಷಗಳ ಹಿಂದೆ ಚಲುವಿನ ಚಿತ್ತಾರ ರೀಮೇಕ್ ಚಿತ್ರದಲ್ಲಿ ನಟಿಸಿ ಗೆದ್ದಿದ್ದರು. ಹಾಗಾಗಿ ಅವರ ಜೋಡಿ ಮತ್ತೆ ಗೆಲ್ಲುವುದಾ ಎನ್ನುವ ಪ್ರಶ್ನೆ ಮತ್ತು ನಿರೀಕ್ಷೆ ಎರಡೂ ಶ್ರಾವಣಿ ಚಿತ್ರದ ಮೇಲಿತ್ತು. ಅದನ್ನು ಸುಳ್ಳು ಮಾಡದ ಸ್ವರಾಜ್ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ.

ಚಿತ್ರದ ಕಥೆ ತೀರಾ ಸರಳವಾದದ್ದು. ವಿರುದ್ಧ ಸ್ವಭಾವಗಳ ಇಬ್ಬರು ವ್ಯಕ್ತಿಗಳ ನಡುವಣ ಪ್ರೆಮಕಥೆಯಿದು. ತೀರಾ ಬಾಲಿಶ ವ್ಯಕ್ತಿತ್ವದ ನಾಯಕಿ ಮತ್ತು ಗಂಭೀರ ವ್ಯಕ್ತಿತ್ವದ ನಾಯಕ ಇವರ ನಡುವೆ ನಡೆಯುವ ಒಂದಷ್ಟು ಅನಿರೀಕ್ಷಿತ ಘಟನೆಗಳು ಮತ್ತು ಅವುಗಳ ಮುಖಾಂತರ ಹುಟ್ಟುವ ಪ್ರೀತಿಯೇ ಚಿತ್ರದ ಕಥಾವಸ್ತು.
ಅದೆನಿದು ಕಥೆ ಒಮ್ಮೆ ಹೇಳಿ ಎಂದರೆ ಸರಾಗವಾಗಿ ಸ್ವಾರಸ್ಯಕರವಾಗಿ ಕಥೆಯನ್ನು ಹೇಳಲು ಸಾಧ್ಯವಿಲ್ಲವೇನೋ.. ಆದರೆ ಚಿತ್ರಕತೆಯಲ್ಲಿ ಒಂದಷ್ಟು ರಸವನ್ನು ತುಂಬಿರುವ ಮಂಜು ಶ್ರಾವಣಿ ಎಲ್ಲೂ ಬೋರಾಗದಂತೆ ಕೊನೆಯವರೆಗೂ ನಿರೂಪಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ನಾಯಕ ನಾಯಕಿ ಕೈಯಲ್ಲಿ ಹೇಳಿಸಲಾಗದ್ದನ್ನು ಮತ್ತೊಂದು ಜೋಡಿ ಅನಂತ ನಾಗ್ ಮತ್ತು ತಾರಾ ಮೂಲಕ ಕಟ್ಟಿ ಕೊಡುವ ಪ್ರಯತ್ನ ಪಟ್ಟಿದ್ದಾರೆ. ಮತ್ತದು ಯಶಸ್ವಿಯಾಗಿದೆ ಕೂಡ.
ಒಂದು ಭಿನ್ನವಾದ ಘಟನೆಯಿಂದಾಗಿ ನಾಯಕ ನಾಯಕಿ ಒಂದೇ ಮನೆಯಲ್ಲಿ ಜೊತೆಯಾಗಿ ಇರಬೇಕಾಗುತ್ತದೆ. ಇಬ್ಬರ ಮನಸ್ಥಿತಿ ಅಭಿರುಚಿ ಬೇರೆ ಬೇರೆ. ಅದೂ ಸಾಲದೆಂಬಂತೆ ಅವರಿಬ್ಬರೂ ಗಂಡ ಹೆಂಡತಿ ಎಂದು ನಾಟಕವಾಡಬೇಕಾದ ನಾಟಕೀಯ ಪರಿಸ್ಥಿತಿಯೂ ಬಂದೊದಗುತ್ತದೆ. ಈ ಅನಿವಾರ್ಯ ಪರಿಸ್ಥಿತಿಯ ಫಜೀತಿಗಳು ಮತ್ತು ಆ ಅವಾಂತರಗಳಲ್ಲಿ ಹುಟ್ಟಿ ಬೆಳೆದು ಹೆಮ್ಮರವಾಗುವ ಪ್ರೀತಿ ಇದೆ ಚಿತ್ರವನ್ನು ಆವರಿಸಿಕೊಂಡಿದೆ. ಪ್ರಾರಂಭದಿಂದಲೇ ಚಿತ್ರ ನಗಿಸುತ್ತಲೇ ಸಾಗುತ್ತದೆ.
ಮಂಜು ಸ್ವರಾಜ್ ಒಂದು ಭರಪೂರ ಮನರಂಜನೆಯ ಚಿತ್ರವನ್ನು ಎಲ್ಲಾ ದಿಕ್ಕಿನಿಂದಲೂ ಮಾಡಲೇ ಬೇಕೆಂಬ ಹಠಕ್ಕೆ ಬಿದ್ದಿರುವುದು ಎದ್ದು ಕಾಣುತ್ತದೆ. ಹಾಗಾಗಿಯೇ ಚಿತ್ರದಲ್ಲಿ ಎಲ್ಲವೂ ಇದೆ. ಹಾಸ್ಯ ದುಖ, ಕೌಟುಂಬಿಕ ಸನ್ನಿವೇಶಗಳು, ವಿರಹ ಹೊಡೆದಾಟ, ಐಟಂ ಹಾಡು, ದ್ವಂದ್ವಾರ್ಥದ ಸಂಭಾಷಣೆ..ಹೀಗೆ. ಎಲ್ಲವೂ ಹಿತಮಿತವಾಗಿರುವುದು ಸಮಾಧಾನಕರ ಸಂಗತಿ ಎನ್ನಬಹುದು.
ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ ಬರೆದಿರುವ ಮಂಜು ಸ್ವರಾಜ್ ಆಯಾ ವಿಭಾಗಗಳಲ್ಲಿ ತಮ್ಮ ಸಾಮರ್ಥ್ಯ ತೋರಿದ್ದಾರೆ. ಹರಿ ಕೃಷ್ಣ ರ ಸಂಗೀತದಲ್ಲಿ ಇನ್ನಷ್ಟು ಮುದ ಬೇಕಿತ್ತು ಎನಿಸದಿರದು.
ಒಂದು ಚಿತ್ರವೆಂದರೆ ನಗಿಸುತ್ತಾ, ಬೋರಾಗದಂತೆ ನೋಡಿಸಿಕೊಂಡರೆ ಸಾಕು ಎನ್ನುವವರಿಗೆ ಶ್ರಾವಣಿ ಸುಬ್ರಹ್ಮಣ್ಯ ತಕ್ಕ ಸಿನಿಮಾ ಎನ್ನಬಹುದು. ಅದರಾಚೆಗೂ ಏನಾದರೂ ನಿರೀಕ್ಷೆಯಿದ್ದರೆ ... ಯಾಕೆಂದರೆ ಚಿತ್ರದಲ್ಲಿ ನೋಡಿಸಿಕೊಳ್ಳುವ ಅಂಶ ಸಾಕಷ್ಟಿವೆಯಾದರೂ ಕಾಡುವ ಅಂಶ ತೀರಾ ಕಡಿಮೆಯಿದೆ ಎನ್ನಬಹುದು. ಒಂದು ಪ್ರೀತಿಯ ನವಿರುತನವನ್ನು ಮಂಜು ಸ್ವರಾಜ್ ಗಣನೆಗೆ ತೆಗೆದುಕೊಂಡಿಲ್ಲ..ಅದರ ಬದಲಿಗೆ ಹಾಸ್ಯಕ್ಕೆ ಲವಲವಿಕೆ ಹೆಚ್ಚು ಗಮನ ಹರಿಸಿರುವುದೇ ಇದಕ್ಕೆ ಕಾರಣವೇನೋ?

Friday, December 20, 2013

ಗಾಲಿ



ಚಿತ್ರದ ಅಡಿಬರಹವಾದ ಏನೂ ಇಲ್ಲ ನಮ್ಮ ಕೈಲಿ..ಚಿತ್ರ ನೋಡುತ್ತಾ ಹೋದಂತೆ ಪ್ರೇಕ್ಷಕನಿಗೆ ಅನಿಸುವ ಮಾತಾಗಿಬಿಡುತ್ತದೆ. ಹಾಗಾಗಿ ಗಾಲಿಯನ್ನು ಸತ್ಯವಾದ ಅಡಿಬರಹವನ್ನು ಹೊಂದಿದ ಚಿತ್ರ ಎನ್ನಬಹುದೇನೋ?
ಚಿತ್ರವನ್ನು ನೋಡುತ್ತಾ ನೋಡುತ್ತಾ ಪ್ರೇಕ್ಷಕ ನಿರ್ದೇಶಕರು ಏನನ್ನು ಹೇಳಲು ಹೊರಟಿದ್ದಾರೆ ಎನ್ನುವ ಪ್ರಶ್ನೆ ಹುಟ್ಟುತ್ತದೆ. ಇಷ್ಟಕ್ಕೂ ನಿರ್ದೇಶಕರು ಏನನ್ನಾದರೂ ಯಾಕೆ ಹೇಳಲೇಬೇಕು ಎನ್ನಬಹುದು. ಆದರೆ ಒಂದು ಚಿತ್ರ ಎಂದ ಮೇಲೆ ಅದರಲ್ಲೊಂದು ಕಥೆ, ಆ ಕಥೆಗೊಂದು ಆಶಯ, ಅದನ್ನು ಪುಷ್ಟೀಕರಿಸುವ ಚಿತ್ರಕತೆ ಇರಲೇಬೇಕು.  ಇಲ್ಲಿ ಚಿತ್ರಕ್ಕೆ ಒಂದು ಕಥೆ ಇದೆ. ಕಥೆಗೊಂದು ಆಶಯವೂ ಇದೆ. ಆದರೆ ಅದರಲ್ಲಿ ಇಲ್ಲದಿರುವುದು ಅದಕ್ಕೆ ಪೂರಕವೆನಿಸುವ, ಅದನ್ನು ಗಟ್ಟಿಗೊಳಿಸುವ ಚಿತ್ರಕತೆ. ಹಾಗಾಗಿ ಹೇಗೋ ಮಧ್ಯಂತರದವರೆಗೆ ನೋಡಿಸಿಕೊಂಡು ಹೋಗುವ ಗಾಲಿ ಆಮೇಲೆ ಎರ್ರಾಬಿರ್ರಿ ದಿಕ್ಕಾಪಾಲಾಗಿ ಓಡತೊಡಗುತ್ತದೆ.
ಒಬ್ಬ ಹಳ್ಳಿಯ ಪ್ರತಿಭಾವಂತ ಯುವಕ ಚಿತ್ರ ನಿರ್ದೇಶಕನಾಗಬೇಕು ಎಂದು ಗಾಂಧಿನಗರಕ್ಕೆ ಬರುತ್ತಾನೆ. ಮೊದಲಿಗೆ ಅವಮಾನ ಅನುಭವಿಸಿ ಅವಕಾಶ ಪಡೆದು ತಾನೇ ನಾಯಕನಾಗಿಯೂ ನಟಿಸಿ, ಯಶಸ್ವಿಯಾಗಿ ಇದಾವುದೂ ಬೇಡ ಎಂದು ಹಳ್ಳಿಗೆ ಹೋಗಿ ವ್ಯವಸಾಯ ಮಾಡಲು ತೊಡಗುವ ಕಥೆ ಚಿತ್ರದ್ದು. ಇಂತಹ ಸಿನಿಮಾದೊಳಗಿನ ಸಿನಿಮಾದ ಕಥೆ ತೆಗೆದುಕೊಂಡಾಗ ಅಲ್ಲಿ ನೈಜತೆ ಇರಬೇಕು ಇಲ್ಲಾ ಉಪೇಂದ್ರ ರ ಎ ಚಿತ್ರದ ತರಹ ಅತಿರಂಜಿತ ಅತಿರೇಕದ ಯೋಚಿಸಲು ಅನುವು ಮಾಡಿಕೊಡದ ವೇಗದ ಚಿತ್ರಕತೆ ಇರಬೇಕು. ಗಾಲಿಯಲ್ಲಿ ತಪ್ಪಿರುವುದು ಅದೇ. ಇಲ್ಲಿ ವಾಸ್ತವಕ್ಕೆ ಹತ್ತಿರವಾದ ದೃಶ್ಯಗಳೂ ಕಡಿಮೆ. ಹಾಗಂತ ಅತಿರಂಜಿತ ಮಜಾ ಕೊಡುವ ದೃಶ್ಯಗಳೂ ಇಲ್ಲ. ಹಾಗಾಗಿ ಚಿತ್ರ ಸೂತ್ರ ಹರಿದ ಗಾಳಿಪಟ.
ನಿರ್ದೇಶಕ ಲಕ್ಕಿ ಗಾಲಿಯಲ್ಲಿ ನಿರ್ಮಾಪಕರನ್ನು ರೌಡಿಗಳಂತೆ, ಬಫೂನ್ ಗಳಂತೆ ಚಿತ್ರಿಸಿದ್ದಾರೆ. ಹಾಗೆ ನಾಯಕನನ್ನು ದುರಹಂಕಾರದ ಮೊಟ್ಟೆಯಂತೆ, ನಾಯಕಿಯನ್ನು ಕರೆವೆಣ್ಣಿನಂತೆ ಬಣ್ಣಿಸುತ್ತಾರೆ.ಅದರ ಮಧ್ಯ ಮಧ್ಯ ದ್ವಂದ್ವಾರ್ಥದ ಸಂಭಾಷಣೆ ಹರಿ ಬಿಟ್ಟು ಅದಕ್ಕೂ ಒಂದು ಕೆಟ್ಟದಾದ ಸಮರ್ಥನೆ ಕೊಟ್ಟಿದ್ದಾರೆ. ನಿರ್ಮಾಪಕರು ಕೇಳಿದರು, ಅದಕ್ಕೆ ಈ ದ್ವಂದ್ವಾರ್ಥ ಎನ್ನುತ್ತಾರೆ..ಒಬ್ಬ ಕಟ್ಟು ನಿಟ್ಟಾದ ಕನಸುಗಳನ್ನು ಕಟ್ಟಿಕೊಂಡು ಬರುವ ನಿರ್ದೇಶಕ ಅದೇಗೆ ನಿರ್ಮಾಪಕ, ನಾಯಕನ ಮಾತಿಗೆ ಬಗ್ಗುತ್ತಾನೆ. ಹಾಗೆ ಬಗ್ಗುವುದಾದರೆ ಅವನಿಗೆ ಚಿತ್ರನಗರಿಯ ಮೇಲೆ ಸಿಡಿದೇಳುವ, ಬಂಡಾಯದ ಮಾತಾಡುವ ಹಕ್ಕು ಎಲ್ಲಿ ಬರುತ್ತದೆ...ಇಂತಹ ಸೂಕ್ಷ್ಮ ಪ್ರಶ್ನೆಗಳಿಗೆ ನಿರ್ದೇಶಕರೇ ಉತ್ತರಿಸಬೇಕು.
ಅಲ್ಲಲ್ಲಿ ಸಾಕ್ಷ್ಯಚಿತ್ರದಂತೆ ಕಥೆ ನಿರೂಪಿಸುತ್ತಾ ಮಧ್ಯ ಮಧ್ಯ ಒಂದಷ್ಟು ಪೋಲಿ ಸಂಭಾಷಣೆಗಳನ್ನು ಹೊಂದಿರುವ ಗಾಲಿ ಚಿತ್ರ ಒಂದಷ್ಟು ಮುಂದಿನ ಬೆಂಚಿನ ಪಡ್ದೆಗಳನ್ನು ಅಲ್ಲಲ್ಲಿ ರಂಜಿಸಬಹುದೇನೋ?
ಛಾಯಾಗ್ರಹಣ, ಸಂಗೀತ ಸಾದಾರಣ. ಅಭಿನಯದಲ್ಲಿ ಜೀವನ ಇನ್ನೂ ಕಲಿಯಬೇಕಿದೆ,ನಾಯಕಿ ರೂಪಾ ನಟರಾಜ್ ಪಾತ್ರಕ್ಕೆ ಗಟ್ಟಿ ನೆಲೆಯಿಲ್ಲ. ಕುರಿ ಸುನೀಲ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಒಂದಷ್ಟು ಕಲಾವಿದರು ಅಲ್ಲಲ್ಲಿ ಬಂದು ಹೋಗುತ್ತಾರೆ.
ಒಂದು ಕ್ಷೇತ್ರಕ್ಕೆ ಸಂಬಂಧಿಸಿದ ಚಿತ್ರವನ್ನು ತೆರೆಗರ್ಪಿಸಬೇಕಾದಾಗ ಸಾಕಷ್ಟು ಹೋಂ ವರ್ಕ್ ಜೊತೆಗೆ ಒಂದು ದೂರ ದೃಷ್ಟಿಯೂ ಅಗತ್ಯವಾಗಿರುತ್ತದೆ. ಕಥೆಯ ಬೆಳವಣಿಗೆಯಲ್ಲಿ ಪ್ರೌಢಿಮೆ ಇರಬೇಕಾಗುತ್ತದೆ. ಇಲ್ಲದಿದ್ದರೆ ಅದು ಗಾಲಿ ಚಿತ್ರವಾಗುತ್ತದೆ.

Saturday, December 14, 2013

ಸೂರಿ ಗ್ಯಾಂಗ್:



ನೀನು ನನ್ನನ್ಯಾಕೆ ಪ್ರೀತಿ ಮಾಡಿದೆ..ಹೋಟೆಲ್ಲೊಂದರಲ್ಲಿ ಕುಳಿತ ನಾಯಕಿಯನ್ನು ನಾಯಕ ಆರ್ದ್ರನಾಗಿ ಕೇಳುತ್ತಾನೆ. ಅಷ್ಟೊತ್ತೂ ಹೇಗೋ ಸಿನಿಮಾ ನೋಡಿದ್ದ ಪ್ರೇಕ್ಷಕ ಬೆಚ್ಚಿ ಬೀಳುತ್ತಾನೆ. ಅದಕ್ಕೆ ಕಾರಣವಿದೆ. ಯಾಕೆಂದರೆ ಸಿನಿಮಾ ಮುಕ್ಕಾಲು ಭಾಗದವರೆಗೆ ಹಿಂದೆ ಬೀಳುವ ನಾಯಕ ಆಕೆಯನ್ನು ಪ್ರೀತಿಸುವಂತೆ ಪರಿಪರಿಯಾಗಿ ಕಾಡುತ್ತಾನೆ. ಅದೇನೇನೋ ಮಾಡುತ್ತಾನೆ. ಅಪಹರಿಸಿ ಒಂದು ಮನೆಯಲ್ಲಿರಿಸಿ ಅವಳ ಕೈಲಿ ಅಡುಗೆ ಮಾಡಿಸುತ್ತಾನೆ, ತನಗಿಷ್ಟವಾದ ಸೀರೆ ಹುಟ್ಟುಕೊಂಡು ಬರುವಂತೆ ಹೇಳುತ್ತಾನೆ. ತಾನೇ ಕಾಡಿ ಬೇಡಿ ಪ್ರೀತಿಸಿ ಆನಂತರ ಅವಳಿಗೆ ಏಕಾಏಕಿ ಈ ಮಾತು ಹೇಳಿದರೆ ಹೇಗಾಗಬೇಡ..?
ಸೂರಿಗ್ಯಾಂಗ್ ಒಂದು ಹೊಸಬರ ಚಿತ್ರ. ಇಲ್ಲಿ ಡಜನ್ ಗಟ್ಟಲೆ ಹೊಸ ಕಲಾವಿದರಿದ್ದಾರೆ, ತಂತ್ರಜ್ಞರಿದ್ದಾರೆ . ಹೊಸಬರ ಚಿತ್ರ ಎಂದಾಕ್ಷಣ ಹೇಗೆ ಹೆಚ್ಚು ನಿರೀಕ್ಷೆ ಸಲ್ಲುವುದಿಲ್ಲವೋ ಹಾಗೆಯೇ ತೀರಾ ಆಲಕ್ಷ್ಯವೂ ಸಲ್ಲ. ಎಲ್ಲರೂ ಅದ್ಭುತವಾದ ಕಥೆಯನ್ನೇ ಸಿನಿಮಾ ಮಾಡುವುದು ಸಾಧ್ಯವಿಲ್ಲ. ಆದರೆ ಅವರಂದುಕೊಂಡ ಚಿತ್ರಪ್ರಪಂಚವನ್ನು ನೋಡುಗನ ಗ್ರಹಿಕೆಗೂ ಸತ್ಯ ಎನಿಸುವಂತೆ ಮಾಡಿದರೆ ಸಾಕು. ನೋಡುಗನೂ ಅಷ್ಟೇ. ಸಿನಿಮಾ ಸ್ವಲ್ಪವಾದರೂ ಪರವಾಗಿಲ್ಲ ಎನಿಸಿದರೆ ಚಿತ್ರದಲ್ಲಿನ ತಪ್ಪುಗಳನ್ನು ಲಕ್ಷ್ಯಕ್ಕೆ ತಗೆದುಕೊಳ್ಳುವುದಿಲ್ಲ.
ಸೂರಿಗ್ಯಾಂಗ್ ಚಿತ್ರ ಯಾವ ವರ್ಗಕ್ಕೆ ಸೇರುತ್ತದೆ. ಭೂಗತ ಲೋಕದಲ್ಲಿನ ಪ್ರೇಮಕಥೆ ಎನ್ನಬಹುದಾದರೂ ಇಲ್ಲಿ ಭೂಗತಲೋಕದ ವಿಷಯಗಳು ಅಷ್ಟಾಗಿ ಬರುವುದಿಲ್ಲ. ಹಾಗೆಯೇ ನಾಯಕಿಯನ್ನು ಕಂಡ ತಕ್ಷಣ ಅವಳಿಗೆ ಮನಸೋಲುವ ನಾಯಕ ಅವಳ ಹಿಂದೆ ಅಲೆಯುವ ಪ್ರೀತಿಗೆ ಒತ್ತಾಯಿಸುವ ಕೆಲವು ದೃಶ್ಯಗಳು ಚೆನ್ನಾಗಿವೆಯಾದರೂ ನಾಯಕಿ ಅವನ ಪ್ರೀತಿಯನ್ನು ಒಪ್ಪಿಕೊಳ್ಳುವುದಕ್ಕೆ ಸ್ಪಷ್ಟ ಸಮರ್ಥನೆ ಚಿತ್ರದಲ್ಲಿಲ್ಲ. ಇರಲಿ ಇವೆಲ್ಲವನ್ನೂ ಪಕ್ಕಕ್ಕಿರಿಸಿ ಚಿತ್ರ ನೋಡುವುದಾದರೆ ಚಿತ್ರದ ಮೊದಲಾರ್ಧವನ್ನು ನಿರ್ದೇಶಕರು ಚೆನ್ನಾಗಿಯೇ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅವಧಿಯಲ್ಲೂ ಚಿಕ್ಕದಾಗಿರುವ ದ್ವಿತೀಯಾರ್ಧ ದ್ರವ್ಯದ ವಿಷಯದಲ್ಲೂ ಸೊರಗಿದೆ. ಬರೀ ಕ್ಲೈಮಾಕ್ಸ್ ಗೆ ಸಿದ್ಧತೆ ಮಾಡಿಕೊಂಡು ಅಲ್ಲಿಯವರೆಗೆ ಚಿತ್ರವನ್ನು ಹೇಗೇಗೋ ಸಾಗಿಸಿದ್ದಾರೆ.
ನಾಯಕ ರಾಮ್ ಅಭಿನಯದಲ್ಲಿ ಸತ್ವವಿಲ್ಲ. ನಗುವ ಅಳುವ ಕಿರುಚುವ ಪ್ರೀತಿಸುವ ಹೀಗೆ ಯಾವ ಸಂದರ್ಭದಲ್ಲೂ ಅವರದು ಒಂದೇ ಭಾವ. ನಾಯಕನಿಗಿಂತ ಖಳನಾಯಕ ರವೀಂದ್ರ ಅಭಿನಯವೇ ಶಹಬ್ಬಾಸ್ ಎನ್ನಬಹುದು. ನಾಯಕಿ ಚಿತ್ರದುದ್ದಕ್ಕೂ ಗೊಂದಲದಲ್ಲಿಯೇ ಇದ್ದಾರೆ. ಉಳಿದ ತಾರಾಗಣದಲ್ಲಿ ಒಂದಷ್ಟು ಪೋಷಕ ಕಲಾವಿದರು, ಹಿರಿಯ ಕಲಾವಿದರೂ ಹೊಸ ಕಲಾವಿದರುಗಳು ಇದ್ದರೂ ಅವರ ಪಾತ್ರಪೋಷಣೆ ಸತ್ವವಿಲ್ಲದ ಕಾರಣ ಅವರ ಅಭಿನಯ ಸಾಮರ್ಥ್ಯ ಕಾಣಿಸುವುದಿಲ್ಲ. ಛಾಯಾಗ್ರಹಣ ಪರವಾಗಿಲ್ಲ ಎನಿಸಿದರೆ, ಸಂಗೀತ ಎರಡು ಹಾಡುಗಳಲ್ಲಿ ಚಂದ ಎನಿಸುತ್ತದೆ. ಆದರೆ ಹಿನ್ನೆಲೆ ಸಂಗೀತ ಮಾತ್ರ ಚಿತ್ರದುದ್ದಕ್ಕೂ ಕೆಟ್ಟದಾಗಿದೆ.ಇವೆಲ್ಲದರ ನಡುವೆಯೂ ಹೊಡೆದಾಟಗಳು ಚಿತ್ರದ ಹೈಲೈಟ್.
ನಿರ್ದೇಶಕ ಕೆ.ಅಂಬು ಸ್ವಲ್ಪ ಕಥೆ ಚಿತ್ರಕತೆಯಲ್ಲಿ ಆಸಕ್ತಿವಹಿಸಿದ್ದರೆ ಚಿತ್ರ ಚೆನ್ನಾಗಿರುವ ಎಲ್ಲಾ ಸಾಧ್ಯತೆಯೂ ಚಿತ್ರದಲ್ಲಿತ್ತು. ಇನ್ನು ಮುಂದಾದರೂ ಅವರು ಅದನ್ನು ಮನಗಾಣಲಿ.

Thursday, December 12, 2013

ಭಜರಂಗಿ”



ಅದ್ದೂರಿತನ ಅಬ್ಬರ ಅಧಿಕ ವೆಚ್ಚ ಗ್ರಾಫಿಕ್ಸ್ ಹೀಗೆ ಭಜರಂಗಿ ಚಿತ್ರ ಗಮನ ಸೆಳೆಯಲು ಸಾಕಷ್ಟು ಅಂಶಗಳಿವೆ.ಆದರೆ ಚಿತ್ರಮಂದಿರಕ್ಕೆ ಹೊಕ್ಕಾಗ ಅಲ್ಲಿ ಗಮನ ಸೆಳೆಯುವುದು ಅದ್ದೂರಿತನ ಎನ್ನಬಹುದು.ಕಥೆ ಚಿತ್ರಕಥೆ ವಿಷಯದಲ್ಲಿ ಸಿನೆಮಾ ಅಷ್ಟಾಗಿ ಗಮನ ಸೆಳೆಯುವುದಿಲ್ಲ. ಹಾಗೆಯೇ ಚಿತ್ರದಲ್ಲಿ ಬರುವ ಒಂದಷ್ಟು ದೃಶ್ಯಗಳು ಹಾಸ್ಯ ದೃಶ್ಯಗಳು ಅನಗತ್ಯ ಎನಿಸುತ್ತವೆ. ಹಾಸ್ಯ ನಗಿಸಿದರೂ ಚಿತ್ರಕ್ಕೆ ಅಷ್ಟಾಗಿ ಪೂರಕ ಎನಿಸುವುದಿಲ್ಲ. ಆದರೆ ಇಲ್ಲಿ ವಿಷಯ ಸ್ಪಷ್ಟ ಚಿತ್ರದ ಮೊದಲಾರ್ಧ ಸರಾಗವಾಗಿ ಲವಲವಿಕೆಯಿಂದ ಸಾಗಬೇಕು ಅಷ್ಟೇ.ಹಾಗಾಗಿ ಹರ್ಷ ಅದಕ್ಕೆ ಎಷ್ಟು ಬೇಕೋ ಅಷ್ಟು ಮಾಡಿದ್ದಾರೆ. ಐರನ್ ಲೆಗ್ ಜೀವನಿಂದ ಪ್ರಾರಂಭವಾಗುವ ಕಥೆ ಎಲ್ಲೆಲ್ಲೋ ಹೋಗಿಬಿಡುತ್ತದೆ. ಅದರದೇ ಆದ ಭ್ರಾಮಕ ಲೋಕದಲ್ಲಿ ಸುತ್ತಿ ಬರುತ್ತದೆ.
ಐರನ್ ಲೆಗ್ ಜೀವ ಹೋದಡೆಯಲ್ಲ ನಾಶ..ಕೈ ಹಾಕಿದ ಕೆಲಸವೆಲ್ಲ ಮಣ್ಣು.ಆದರೆ ಜೀವನ ಅಸ್ತಿತ್ವಕ್ಕೆ ಬೇರೆಯದೇ ಉದ್ದೇಶವಿದೆ. ಪೂರ್ವಜರ ಶಕ್ತಿ ಅವನಿಗರಿವಿಲ್ಲದೆ ಅವನಲ್ಲಿದೆ. ಮುಂದೆ..? ಪ್ರತಿಕಾರವಿದೆ, ದುಷ್ಟ ಸಂಹಾರವಿದೆ.. ಯಂತ್ರ ಮಂತ್ರ ತಂತ್ರವಿದೆ,ಮಾಟವಿದೆ. ಕಥೆಯ ಪ್ರಾರಂಭದ ಒಂದಷ್ಟು ದೃಶ್ಯಗಳು, ಸಮಯವನ್ನು ನಿರ್ದೇಶಕ ಹರ್ಷ ಕಥೆಯ ಮುಖ್ಯ ಘಟ್ಟಕ್ಕೆ ತರುವುದಿಲ್ಲ. ಆನಂತರ ಮತ್ತೊಂದು ಭ್ರಾಮಕ ಲೋಕಕ್ಕೆ ಚಿತ್ರವನ್ನು ತಗೆದುಕೊಂಡು ಹೋಗುತ್ತಾರೆ. ಅಲ್ಲಿ ಶುರುವಾಗುತ್ತದೆ ಚಿತ್ರ ವಿಚಿತ್ರ ಜಗತ್ತಿನ ಕಥೆ..ಮತ್ತೆ ಅಲ್ಲೂ ಹೊಡೆದಾಟ...
ಐರನ್ ಲೆಗ್ ಪಾತ್ರದಲ್ಲಿ ಶಿವರಾಜಕುಮಾರ್ ಚೆನ್ನಾಗಿ ಅಭಿನಯಿಸಿದ್ದಾರೆ. ಅವರನ್ನೇ ಗೇಲಿ ಮಾಡಿಕೊಂಡಿದ್ದಾರೆ. ಆನಂತರದ ದೃಶ್ಯದಲ್ಲಿ ಶಿವಣ್ಣನನ್ನು ಹೊಗಳುವ ಅವರ ಅಭಿಮಾನಿಗಳನ್ನು ಸಂತೃಪ್ತಿಗೊಳಿಸುವ ದೃಶ್ಯಗಳೂ ಸಾಕಷ್ಟಿವೆ. ತಲೆಗಳು ಉರುಳುತ್ತವೆ.ರಕ್ತ ಚೆಲ್ಲುತ್ತದೆ.
ಚಿತ್ರದ ಪ್ರಾರಂಭದಿಂದ ಅಂತ್ಯದವರೆಗೂ ಶ್ರೀಮಂತಿಕೆ ಎದ್ದು ಕಾಣುತ್ತದೆ.ಪ್ರತಿ ದೃಶಿಕೆ ಸಂಯೋಜನೆಯಲ್ಲೂ ಅದ್ದೂರಿತನವಿದೆ. ಹೊಡೆದಾಟ ಮತ್ತು ಹಾಡುಗಳ ಚಿತ್ರಣ ಖುಷಿ ಕೊಡುತ್ತದೆ. ಅದರೂ ಚಿತ್ರದ ಕಥೆ ಕನ್ನಡದ ಜಯಮ್ಮನ ಮಗ, ತೆಲುಗಿನ ಅರುಂಧತಿ ಇವುಗಳಿಂದ ಆಚೆಗೆ ಬರುವುದಿಲ್ಲ. ಹಾಗೆಯೇ ಭಿನ್ನ ಎನಿಸುವುದೂ ಇಲ್ಲ.
ನಿರ್ಮಾಪಕರು ಹಣ ವೆಚ್ಚ ಮಾಡಲು ಹಿಂದೆ ಮುಂದೆ ನೋಡದೆ ಇರುವುದು ಉಳಿದೆಲ್ಲಾ ತಾಂತ್ರಿಕ ಕೆಲಸಗಳನ್ನು ಚೆನ್ನಾಗಿರಿಸಿದೆ. ಚಿತ್ರದ ನಾಯಕನಾಗಿ ಶಿವಣ್ಣ ಚೆನ್ನಾಗಿ ಅಭಿನಯಿಸಿದ್ದಾರೆ. ಅವರ ಸಿಕ್ಸ್ ಪ್ಯಾಕ್ ಲುಕ್ ಅಭಿಮಾನಿಗಳನ್ನು ರಂಜಿಸುತ್ತದೆ. ಐ೦ದ್ರಿತಾ ರೈ ತಬಲಾ ನಾಣಿ, ಚೇತನ್ ಮಧು ಲೋಕಿ ಮುಂತಾದವರ ಪಾತ್ರಗಳು ಜೀವನ ಪಾತ್ರದ ಸುತ್ತಾ ಮುತ್ತಾ ತಿರುಗುತ್ತವೆಯಾದರೂ ಇಲ್ಲಿ ಶಿವಣ್ಣನೆ ಹೆಚ್ಚು ಕಾಣಸಿಗುತ್ತಾರೆ. ಒಂದು ಖುಷಿಯ ಸಂಗತಿ ಎಂದರೆ ಇಲ್ಲಿ ಆಮದು ಖಳನಾಯಕರಿಲ್ಲ
ಆದರೆ ಚಿತ್ರ ಹೆಚ್ಚು ಕಡಿಮೆ ಮೂರು ಘಂಟೆಗಳ ಅವಧಿಯದ್ದಾಗಿದ್ದು ಅಲ್ಲಲ್ಲಿ ಎಳೆತವಾಯಿತು ಎನಿಸುತ್ತದೆ. ಚಿತ್ರಕತೆಯನ್ನು ಇನ್ನೂ ಚುರುಕುಗಳಿಸಿದ್ದರೆ, ಸಂಕಲನವನ್ನು ಇನ್ನೂ ಹರಿತಗೊಳಿಸಿದ್ದರೆ ಚಿತ್ರದ ಉದ್ದವೂ ಕಡಿಮೆಯಾಗುತ್ತಿತ್ತು.ಹಾಗೆ ಚಿತ್ರವೂ ವೇಗವಾಗಿ ಸಾಗುತ್ತಿತ್ತು.ಆದರೆ ನಮ್ಮಲ್ಲಿನ ಯಾವುದೇ ಅದ್ದೂರಿ ಚಿತ್ರಗಳೂ[ದಶಾವತಾರಂ, ಯಂದಿರನ್..] ಇದೆ ಸಮಸ್ಯೆ ಅನುಭವಿಸುತ್ತವೆ. ಬಹುಶ ಚಿತ್ರೀಕರಿಸಿದ್ದನ್ನು ತುಂಡರಿಸಲು ನಿರ್ದೇಶಕರಿಗೆ ಮನಸ್ಸು ಬರುವುದಿಲ್ಲವೇನೋ?
ಭಜರಂಗಿ ಒಂದು ಹಿಟ್ ಸಿನಿಮಾ ಆಗಬಹುದು, ಹಣ ಗಳಿಸಬಹುದು. ಆದರೂ ಗ್ರೇಟ್ ಸಿನಿಮಾ ಎನಿಸಿಕೊಳ್ಳದಿರುವುದಕ್ಕೆ ಕಾರಣವಿದೆ. ಬರೀ ಅಭಿಮಾನಿಗಳು ತಾರಾಮೌಲ್ಯ ಮೊದಲಿಗೆ ಒಂದಷ್ಟು ಹಾಸ್ಯ ಆನಂತರ ಸಾಹಸ ಹೀಗೆ ಒಂದು ಸಿದ್ಧಸೂತ್ರದ ಮುಖಾಂತರ ಚಿತ್ರದ ಕಥೆ ಹೆಣೆದಾಗ ಅದೇ ಚೌಕಟ್ಟಾಗುತ್ತದೆ. ಇಲ್ಲೂ ಅದೇ ಆಗಿದೆ. ಕಥೆ ಸ್ಫುರಿಸಿಲ್ಲ ಬದಲಿಗೆ ಸೃಷ್ಟಿಸಲಾಗಿದೆ. ಅದೇ ಚಿತ್ರದ ಶಕ್ತಿ ಮತ್ತು ದೌರ್ಬಲ್ಯ ಎನ್ನಬಹುದು.

Saturday, December 7, 2013

ಅದ್ವೈತ:



ಪ್ರತಿಯೊಬ್ಬ ಬರಹಗಾರನೂ ಒಬ್ಬ ಹೋರಾಟಗಾರ ಎಂಬ ಅಡಿಬರಹ ಹೊತ್ತಿರುವ ಅದ್ವೈತ ಚಿತ್ರವನ್ನು ಪೂರ್ತಿಯಾಗಿ ನೋಡಲು ಪ್ರೇಕ್ಷಕ ಕೂಡ ತನ್ನ ಬೇಸರದ ಜೊತೆ ಆಕಳಿಕೆ ಜೊತೆ ಹೋರಾಟ ಮಾಡಲೇ ಬೇಕಾಗುತ್ತದೆ.
ಮೊದಲಿಗೆ ಚಿತ್ರ ಯಾವ ವಿಭಾಗಕ್ಕೆ ಸೇರುತ್ತದೆ ಎಂಬುದನ್ನು ಕಂಡು ಕೊಳ್ಳಲು ಒದ್ದಾಡಬೇಕಾಗುತ್ತದೆ. ಥ್ರಿಲ್ಲರ್, ಭೂಗತ ಲೋಕ, ಫಿಲಂ ನೋಇರ್ ..ಹೀಗೆ. ಆದರೆ ಇಡೀ ಚಿತ್ರ ನೋಡಿದ ಮೇಲೂ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಬದಲಿಗೆ ಗೊಂದಲದಿಂದ ಎಲ್ಲಾ ಕಲಸುಮೇಲೋಗರವಾಗಿರುತ್ತದೆ.
ಚಲನಚಿತ್ರರಂಗದಲ್ಲಿ ನಿರ್ದೇಶಕನೊಬ್ಬ ಒಂದು ಅದ್ಭುತವಾದ ವಿಭಿನ್ನವಾದ ಮತ್ತು ನಿಜವಾದ ಕಥೆಗಾಗಿ ಹುಡುಕಾಟ ನಡೆಸಲು ಹೋಗಿ ಕಥೆಯೇ ವಾಸ್ತವವಾಗಿ ವಾಸ್ತವವೇ ಕಥೆಯಾಗಿ ಅದರ ಚಕ್ರವ್ಯೂಹದಲ್ಲಿ ತಾನೇ ಸಿಲುಕಿ ಒದ್ದಾಡುವುದೇ ಚಿತ್ರದ ಕಥಾವಸ್ತು ಎಂಬುದು ಒಂದು ಸಾಲಿನ ಕಥೆಯಾದರೆ ಚಿತ್ರದ ನಾಯಕ ನಿರ್ದೇಶಕ. ಕಥಗಾಗಿ ಒಬ್ಬ ಡಾನ್ ಹತ್ತಿರ ಹೋಗುತ್ತಾನೆ. ಆತನೂ ಹಿಂಸಾ ವಿನೋದಿ.ಇನ್ನೊಬ್ಬ ಡಾನ್ ನ ಜೊತೆ ಸಂಬಂಧ ಬೆಳೆಸಲು ಯೋಜಿಸುತ್ತಿರುತ್ತಾನೆ. ಇಂತಹ ಸಂದರ್ಭದಲ್ಲಿ ನಾಯಕನ ಪ್ರವೇಶವಾಗುತ್ತಾನೆ. ಮುಂದೆ ಇಷ್ಟವಿಲ್ಲದ ಮದುವೆ ತಪ್ಪಿಸಲು ಒಂದಷ್ಟು ತಂತ್ರ ಮಾಡುತ್ತಾನೆ. ಇದರ ನಡುವೆ ಪ್ರೇಮಕಥೆಗಳೂ ನಡೆಯುತ್ತವೆ. ಆನಂತರ ಅಲ್ಲಿಯವರೆಗೆ ಬರೀ ಕಥೆಗಾರನಾಗಿದ್ದವನು ರಿಯಲ್ ಹೀರೋ ಆಗುತ್ತಾನೆ.ತೋಳು ಮಡಚಿ ಹೀರೋಯಿಸಂ ತೋರಿಸಲು ಪ್ರಾರಂಭಿಸುತ್ತಾನೆ.
ಚಿತ್ರದ ಗತಿ ತಪ್ಪಿರುವುದೇ ಇಲ್ಲಿ. ಮೊದಲೇ ಅನೂಹ್ಯ ಕತೆಯನ್ನು ಹೇಳ ಹೊರಟಿರುವ ನಿರ್ದೇಶಕರು ಅದನ್ನು ಅದೇ ರೀತಿಯಲ್ಲಿಯೇ ವಾಸ್ತವದ ಅಂಚಿನಲ್ಲೇ ನಿರೂಪಿಸುತ್ತಾ ಹೋಗಿದ್ದಾರೆ ಒಂದಷ್ಟು ಒಪ್ಪುವಿಕೆ ಚಿತ್ರದಲ್ಲಿರುತಿತ್ತೇನೋ. ಆದರೆ ಅದೇಕೋ ಸ್ವಲ್ಪ ಹೊತ್ತಿನ ಚಿತ್ರದ ನಾಯಕನನ್ನು ನಾಯಕನಾಗೇ ಬಿಂಬಿಸಿಬಿಟ್ಟಿದ್ದಾರೆ. ಕಥೆಗಾಗಿ ಒದ್ದಾಡುವ ನಿರ್ದೇಶಕ ಏಕಾಏಕಿ ಹೀರೋ ಆಗಿಬಿಡುತ್ತಾನೆ.ಚಿತ್ರ ಸೂತ್ರ ತಪ್ಪಿದ ಗಾಳಿಪಟವಾಗಿ ಬಿಡುತ್ತದೆ.
ಚಿತ್ರದ ಮಿತಿಯಲ್ಲಿ ತಂತ್ರಜ್ಞರ ಕೆಲಸ ಚೆನ್ನಾಗಿದೆ. ಕಲಾವಿದರ ಅಭಿನಯವೂ ಚೆನ್ನಾಗಿದೆ. ಆದರೆ ಅದೆಲ್ಲವನ್ನು ಹಿಡಿದಿಟ್ಟುಕೊಳ್ಳುವ ನಿರ್ದೇಶಕರ ಕೆಲಸ-ಕಥೆ ದಾರಿ ತಪ್ಪಿರುವುದರಿಂದ ಅವರ ಪ್ರತಿಭೆ ವ್ಯರ್ಥ.
ನಿರ್ದೇಶಕ ಗಿರಿರಾಜ್ ರ ಎರಡನೆಯ ಚಿತ್ರವಿದು. ಅತೀ ಕಡಿಮೆ ವೆಚ್ಚದ ನವಿಲಾದವರು ನಿರ್ದೇಶನ ಮಾಡಿದ ನಂತರ ನಿರ್ದೇಶನ ಮಾಡಿದ ಚಿತ್ರವಿದು. ಜಟ್ಟ ಚಿತ್ರದಲ್ಲಿ ಸೂಕ್ಷ್ಮ ಅಂಶಗಳಿದ್ದವು. ಕಥೆಗೆ ನಾಯಕನಾಗಿದ್ದ ಜಟ್ಟ ಸಿನಿಮಾಕ್ಕೆ ನಾಯಕನಾಗಿರಲಿಲ್ಲ. ಬಹುಶಃ ನಿರ್ದೇಶಕ ಗಿರಿರಾಜ್ ಒಂದು ಕಥೆಯನ್ನು ಕಥೆಯ ಭಾವಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದು ಆ ಎರಡು ಚಿತ್ರಗಳನ್ನು ಮಾತ್ರ ಎನಿಸುತ್ತದೆ. ಇದೇನಿದ್ದರೂ ಒಬ್ಬ ತಾರಮೌಲ್ಯದ ನಾಯಕನನ್ನು ಮುಖ್ಯಪಾತ್ರದಲ್ಲಿಟ್ಟುಕೊಂಡು ಒಂದು ಕಮರ್ಷಿಯಲ್ ಚಿತ್ರ ಮಾಡಬೇಕೆಂಬ ಪ್ರಯತ್ನವಿರಬಹುದು. ಹಾಗಾಗಿ ತಮಗೆ ಒಗ್ಗದ ಚಿತ್ರಶೈಲಿಯನ್ನು ಬಲವಂತವಾಗಿ ತಮ್ಮ ಮೇಲೆ ಹೇರಿಕೊಂಡು ಚಿತ್ರ ಮಾಡಿದ್ದಾರೇನೋ ಎನಿಸುತ್ತದೆ.