Pages

Friday, February 14, 2014

ಕ್ವಾಟಲೇ



ಚಿತ್ರದ ಕೊನೆಯ ನಲವತ್ತು ನಿಮಿಷಗಳ ಪಯಣ ನಮಗೆ ತಮಿಳಿನ ಪರುತ್ತಿವೀರನ್ ನೆನೆಪು ತರುತ್ತದೆ. ಅದರ ಸ್ಫೂರ್ತಿ ಕಣ್ಣಿಗೆ ರಾಚುತ್ತದೆ. ಮತ್ತು ಮನಸ್ಸನ್ನು ಕದಡುತ್ತದೆ. ಅದಕ್ಕೆ ತಕ್ಕಂತಹ ಚಿತ್ರಕತೆಯನ್ನು ಪ್ರಾರಂಭದಿಂದಲೂ ಹೆಣೆದಿದ್ದರೆ ನಿಜಕ್ಕೂ ಇದೊಂದು ಉತ್ತಮ ಚಿತ್ರವಾಗುತ್ತಿತ್ತು ಎನ್ನಬಹುದು.
ಒಬ್ಬ ಉಂಡಾಡಿ ಗುಂಡ. ಪೊರ್ಕಿ. ಪುಡಿ  ರೌಡಿಯ ಬದುಕಿನ ಕತೆಯಿದು. ಆತನನ್ನು ಮನಸೋ ಇಚ್ಛೆ ಪ್ರೀತಿಸುವ ಹಳೆ ಪೇಪರ್ ಬಾಟಲಿ ಮಾರುವ ಕುಡುಕ ಕಾಮುಕ ತಂದೆಯ ಒಬ್ಬಳೇ ಮಗಳು. ಒಂದಷ್ಟು ಗೆಳೆಯರು. ಹಣಕ್ಕಾಗಿ ಚಿಕ್ಕಪುಟ್ಟ ಕಳ್ಳತನ ಮಾಡುವ ನಾಯಕನಿಗೆ ಅವನ ಮಟ್ಟಿಗೆ ಒಂದು ದೊಡ್ಡದಾದ ಡೀಲ್ ಸಿಗುತ್ತದೆ. ಅದರಿಂದ ಅವನ ಬದುಕೇ ಕರಾಳವಾಗುತ್ತದೆ..ಮುಂದೇನು..? ಆಸಕ್ತಿಯಿದ್ದರೆ ಚಿತ್ರಮಂದಿರಕ್ಕೆ ಕಾಲಿಡಬಹುದು.
ಜೆಸಿಕೆ ಅವರ ಮೊದಲ ಚಿತ್ರವಿದು. ಕತೆ ಚಿತ್ರಕತೆ ಸಂಭಾಷಣೆ ಸಾಹಿತ್ಯ ನಿರ್ದೇಶನ ಮಾಡಿ ನಿರ್ಮಾಣ ಜವಾಬ್ದಾರಿಯನ್ನೂ ಹೆಗಲ ಮೇಲೆ ಹೊತ್ತುಕೊಂಡಿರುವ ಜೆ. ಚಂದ್ರಕಲಾ ಅವರ ಸಾಹಸಕ್ಕೆ ಶಹಬ್ಬಾಸ್ ಹೇಳಲೇ ಬೇಕಾಗುತ್ತದೆ. ಸಾಮಾನ್ಯವಾಗಿ ಮಹಿಳಾ ನಿರ್ದೇಶಕರು ಎಂದಾಗ ಅಲ್ಲೊಂದು ಕಲಾತ್ಮಕ ಸೂಕ್ಷ್ಮವಾದ ಅಂಶಗಳಿರುವ ಚಿತ್ರಗಳನ್ನು ಪ್ರೇಕ್ಷಕ ನಿರೀಕ್ಷೆ ಮಾಡುತ್ತಾನೆ. ಅದಕ್ಕೆ ಕಾರಣ ನಮ್ಮ ಇತಿಹಾಸ. ಆದರೆ ಜೆಸಿಕೆ ಅದೆಲ್ಲವನ್ನೂ ಒಂದೇ ಏಟಿಗೆ ಬಡಿದು ಆಚೆಗೆ ತಳ್ಳಿದ್ದಾರೆ. ಪಕ್ಕಾ ಮಾಸ್ ಎನ್ನುವಂತಹ ಕೊಳೆಗೇರಿಯಲ್ಲಿ ನಡೆಯುವ ಬರ್ಬರ ಕತೆಯನ್ನು ತಮ್ಮ ಚಿತ್ರಕ್ಕಾಗಿ ಆಯ್ದುಕೊಂಡಿದ್ದಾರೆ. ಆ ಮೂಲಕ ಮಹಿಳಾ ನಿರ್ದೇಶಕರು ಕೂಡ ಇಂತಹ ಚಿತ್ರಗಳನ್ನೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಚಿತ್ರದ ಪ್ರಾರಂಭದಿಂದಲೂ ಎಲ್ಲಾ ಪಾತ್ರಗಳನ್ನೂ ಯಾರಾದರೊಬ್ಬರನ್ನು ಹಿಗ್ಗಾ ಮುಗ್ಗಾ ಬೈಯುತ್ತವೆ. ಅಲ್ಲಲ್ಲಿ ಸ್ವಲ್ಪ ಮೂಗು ಮುಚ್ಚಿಕೊಳ್ಳುವಂತಹ ಹಾಸ್ಯ ಕೂಡ ಬಂದುಹೋಗುತ್ತದೆ. ಹಾಗೆಯೇ ಚಿತ್ರಕತೆ ದ್ವಿತೀಯಾರ್ಧ ಪ್ರಾರಂಭವಾಗಿ ಅರ್ಧಗಂಟೆಯ ವರೆಗೂ ಹಿಡಿತಕ್ಕೆ ಬರುವುದಿಲ್ಲ. ಹೇಗೇಗೋ ಸಾಗುತ್ತದೆ.ಒಂದಷ್ಟು ವಿಕೃತ ಕಾಮಿಗಳು ಅವರ ವಿಕ್ರುತಕ್ಕೆ ತನಗರಿವಿಲ್ಲದೇ ಸಹಾಯ ಮಾಡುವ ನಾಯಕ ಮಿತ್ರದ್ರೋಹ ಅನೈತಿಕ ಸಂಬಂಧಗಳು ಕೊಲೆ ಅತ್ಯಾಚಾರ ಮುಂತಾದವುಗಳು ಚಿತ್ರದಲ್ಲಿ ಹೇರಳವಾಗಿ ಬಂದುಹೋಗುತ್ತವೆ.ಚಿತ್ರದ ನಾಯಕನ ಪಾತ್ರಪೋಷಣೆ ಇನ್ನಷ್ಟು ಪಕ್ಕಾಗಬೇಕಿತ್ತು. ಇಡೀ ಚಿತ್ರದಲ್ಲಿ ಒಂದು ದೃಶ್ಯ ಮತ್ತು ಒಂದು ಹಾಡಿನಲ್ಲಿ ಮಾತ್ರ ಪ್ಯಾಂಟು ಧರಿಸುವ ನಾಯಕ ಉಳಿದ ಕಡೆಯಲ್ಲ ಲುಂಗಿಯಲ್ಲೇ ಚಿತ್ರ ಮುಗಿಸಿಬಿಡುತ್ತಾನೆ.
ನಾಯಕನಾಗಿ ಪಾರ್ಥ ತಕ್ಕ ಮಟ್ಟಿಗೆ ನಟಿಸಿದ್ದಾರೆ. ಅವರ ಸಂಭಾಷಣೆ ಹೇಳುವ ಪರಿ ಇಷ್ಟವಾಗುವುದಿಲ್ಲ. ಕೊಪವೆಂದರೆ ಕಿರುಚಬೇಕು ಎಂದೇ ನಂಬಿರುವ ಅವರು ಅಬ್ಬರಿಸುತ್ತಾರೆ. ನಾಯಕಿಯಾಗಿ ಯಜ್ಞಾಶೆಟ್ಟಿ ಉತ್ತಮ ಅಭಿನಯ ನೀಡಿದ್ದಾರೆ. ಉಳಿದಂತೆ ಮತ್ಯಾವ ಪಾತ್ರಗಳೂ ಗಮನ ಸೆಳೆಯುವುದಿಲ್ಲ. ಎರಡು ಹಾಡುಗಳು ಚೆನ್ನಾಗಿವೆ. ಛಾಯಾಗ್ರಹಣ ಚಿತ್ರದ ಧನಾತ್ಮಕ ಅಂಶ.
ನಿರ್ದೇಶಕರು ಕತೆ ಚಿತ್ರಕತೆಯ ಬಗ್ಗೆ ಗಮನ ಹರಿಸಿ ಒಂದೇ ಮಾರ್ಗದಲ್ಲಿ ಅದನ್ನು ನಿರೂಪಿಸಿದ್ದರೆ ಚಿತ್ರ ಸಹನೀಯವಾಗುತ್ತಿತ್ತು. ಹೇಗೇಗೋ ಸಾಗಿ ಎಲ್ಲೆಲ್ಲೋ ಅಲೆದು ಕೊನೆಗೆ ಟ್ರ್ಯಾಕ್ ಗೆ ಬರುವಷ್ಟರಲ್ಲಿ ಚಿತ್ರ ಆಸಕ್ತಿ ಕಳೆದುಕೊಂಡಿರುತ್ತದೆ. ಆಸಕ್ತಿ ಬರುವ ಸಮಯಕ್ಕೆ ಚಿತ್ರವೇ ಮುಗಿಯುತ್ತದೆ.

Sunday, February 9, 2014

ಬ್ರಹ್ಮ

ನಾಯಕ ಬ್ರಹ್ಮನನ್ನು ಕೊಲ್ಲಲು ಹುಡುಗಿಯೊಬ್ಬಳು ಬರುತ್ತಾಳೆ ಎಂದರೆ ಅದು ಸೂಪರ್ ಚಿತ್ರದ ಓಪನಿಂಗ್ ದೃಶ್ಯವನ್ನು ಹೋಲುತ್ತದಲ್ಲಾ ಎನ್ನಬಹುದು.ತಲತಲಾಂತರದಿಂದ ದಾನ ಧರ್ಮ ಮಾಡಿ ಎಲ್ಲವನ್ನೂ ಕಳೆದುಕೊಳ್ಳುವ ವಂಶದ ಕುಡಿಯಾದ ಬ್ರಹ್ಮ ಉಳ್ಳವರಿಂದ ಹಣ ಕಸಿದು ಆನಾಥರಿಗೆ ಕೊಡುತ್ತಾನೆ. ಕೊನೆಯಲ್ಲಿ ಅವನ ಹೆತ್ತ ತಂದೆಯ ಹಣವನ್ನೇ ಕೊಳ್ಳೆ ಹೊಡೆಯಬೇಕಾಗಿ ಬರುತ್ತದೆ. ಕೊಳ್ಳೆ ಹೊಡೆದು ಅಪ್ಪನನ್ನು ಸಾಯಿಸುತ್ತಾನಾ..? 

ಇಷ್ಟು ಸರಳ ಕಥೆಯನ್ನು ಚಂದ್ರು ತುಂಬಾ ಕ್ಲಿಷ್ಟಕರವಾಗಿ ನಿರೂಪಿಸಿದ್ದಾರೆ. ಹಾಗಾಗಿ ಚಿತ್ರದ ಕತೆ ಕೊಂಕಣ ಸುತ್ತಿ ಮೈಲಾರಕ್ಕೆ ಬರುತ್ತದೆ. ಕೊಲೆ ಸುಳಿಗೆ ದರೋಡೆ ಪ್ರೀತಿ ಎಲ್ಲವನ್ನೂ ಮಾಡುವ ನಮ್ಮ ನಾಯಕ ಬ್ರಹ್ಮ ಆಪ್ತನಾಗುವುದಿಲ್ಲ. ಹಾಗೆಯೇ ಭ್ರಷ್ಟ ರಿಂದ ಕಸಿದು ರಾಬಿನ್ ಹುಡ್ ಶೈಲಿಯಲ್ಲಿ ಆನಾಥಾಶ್ರಮಕ್ಕೆ ಕೊಡುತ್ತಾನೆ ಎನ್ನುವ ಕ್ಲೀಷಾತ್ಮಕ ಕಾರಣದ ನಾಯಕ ಉದಾತ್ತ ಎನಿಸುವುದಿಲ್ಲ. ಅದಕ್ಕೆ ಕಾರಣ ಚಿತ್ರದ ಚಿತ್ರಕತೆ.

ಇಲ್ಲಿ ನಿರ್ದೇಶಕ ಚಂದ್ರು ಒಂದು ಕತೆಯನ್ನು ಉಪೇಂದ್ರ ಶೈಲಿಯಲ್ಲಿ ಹೇಳಲು ಹೋಗಿದ್ದಾರೆ.ಚಿತ್ರಕತೆಯಲ್ಲಿ ಅನಗತ್ಯ ಟ್ವಿಸ್ಟ್ ಕೊಟ್ಟಿದ್ದಾರೆ. ಹಾಗೆಯೇ ನಾಯಕನನ್ನು ವಿಜೃಂಭಿಸುವ ಭರದಲ್ಲಿ ವಾಸ್ತವತೆಯನ್ನು ಪಕ್ಕಕ್ಕೆ ತಳ್ಳಿದ್ದಾರೆ. ನೊ ಲಾಜಿಕ್ ಓನ್ಲಿ ಮ್ಯಾಜಿಕ್ ಎಂದು ಕೊಂಡು ಪ್ರತಿಯೊಂದನ್ನೂ ಸಿನಿಮೀಯ ಮಾಡಿದ್ದಾರೆ. ಉದಾಹರಣೆಗೆ ಇಡೀ ಮಾಧ್ಯಮವೇ ಉಪೇಂದ್ರರ ಮನೆಯಲ್ಲಿ ನೆರೆದಿರುವಾಗ ಅವನನ್ನು ಸಾಯಿಸಲು ಬರುವ ಹೆಂಗಸಿಗೆ ನಾಯಕ ತಾನೇ ಅವಳ ಗಂಡನನ್ನು ಕೊಂದುದಾಗಿ ಹೇಳುತ್ತಾನೆ. ಇಲ್ಲಿ ಮಾಧ್ಯಮದವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಹಾಗೆಯೆ ಆಗಾಗ ತೋರಿಸುವ ಖಾವಿಧಿರಿಸಿನ ವ್ಯಕ್ತಿ ಅಪ್ಪನಿಂದಲೇ ಮಗನ ಸಾವು ಎನ್ನುವ ಶಾಪಕ್ಕೆ ಅರ್ಥ ಕೊಟ್ಟಿಲ್ಲ. ಆ ಶಾಪ ನಿಜವಾಗುವುದೂ ಇಲ್ಲ. ಹಾಗೆಯೇ ರಂಗಾಯಣ ರಘು, ಸಾಧು ಕೋಕಿಲ ಪಾತ್ರಗಳಿಗೆ ತಾರ್ಕಿಕ ಅಂತ್ಯವಿಲ್ಲ. ಇಂತಹ ದೃಶ್ಯಗಳಲ್ಲಿ ಸ್ವಲ್ಪ ಲಾಜಿಕ್ ಮತ್ತು ವಾಸ್ತವತೆಯನ್ನು ಬೆರೆಸಿದ್ದರೆ ಚಿತ್ರದ ಕಸುವು ಹೆಚ್ಚುತ್ತಿತ್ತೇನೋ?  ಹಾಗಾಗಿ ಚಿತ್ರ ನೋಡಿದ ನಂತರ ಕಾಡುವುದಿಲ್ಲ. ಹಾಗೆಯೇ ಅಬ್ಬ ಎನ್ನುವಂತಹ ಅನುಭವ ಕೊಡುವುದಿಲ್ಲ.

ಚಿತ್ರದಲ್ಲಿ ಒಬ್ಬ ರಾಜಬ್ರಹ್ಮನ ಕತೆ ಬರುತ್ತದೆ. ಕೇವಲ ನಾಲ್ಕು ನಿಮಿಷಗಳಷ್ಟು ಬರುವ ಐತಿಹಾಸಿಕ ಕತೆಯಲ್ಲಿ 1600 ಇಸವಿಯ ಒಂದು ಯುದ್ಧ ಒಂದು ದಾನದ ಸನ್ನಿವೇಶ ಹಾಗೆ ಬಂದು ಹೀಗೆ ಹೋಗುತ್ತದೆ. ಅದು ಕತೆಗೆ ಅಂತಹ ಸಹಾಯ ಮಾಡಿಲ್ಲ. ಯಾಕೆಂದರೆ ಅದರ ಹಿನ್ನೆಲೆಯಲ್ಲಿ ಯಾವುದೋ ಕೌತುಕವಾದ ಕತೆಯನ್ನು ನಿರೀಕ್ಷೆ ಮಾಡುವ ಪ್ರೇಕ್ಷಕ ಸುಮ್ಮನೆ ಒಂದು ಯುದ್ಧದ ದೃಶ್ಯಕ್ಕೆ ತೃಪ್ತನಾಗಬೇಕಾಗುತ್ತದೆ.

ಮೊದಲಾರ್ಧದ ಕತೆಯಲ್ಲಿ ಬುದ್ದಿವಂತನ ಶೈಲಿಯಲ್ಲಿ ಒಬ್ಬೊಬ್ಬರೇ ಬಂದು ಬ್ರಹ್ಮನನ್ನು ಬಿಚ್ಚಿಡುತ್ತಾ ಸಾಗುತ್ತಾರೆ. ಆನಂತರ ಸೂಪರ್ ರೀತಿಯಲ್ಲಿ ಹೆಂಗಸು ಅವನನ್ನು ಕೊಲ್ಲಲು ಹುಡುಕುತ್ತಾಳೆ. ಕೊಲೆ ಸುಳಿಗೆ ಡಕಾಯತಿ ಮಾಡುವ ನಾಯಕ ಕೊನೆಗೆ ರಾಜಕಾರಣಿಯಾಗುತ್ತಾನೆ. ಮೊದಲಾರ್ಧ ಅಲ್ಲಲ್ಲಿ ತಮಾಷೆಯಾಗಿ ಸಾಗುತ್ತದೆ. ದ್ವಿತೀಯಾರ್ಧ ಮಂದಗತಿಯಲ್ಲಿ ಸಾಗಿ ಕೊನೆಯಾಗುತ್ತದೆ.

ಉಪೇಂದ್ರ ತಮ್ಮ ಎಂದಿನ ಅಭಿನಯವನ್ನು ಮುಂದುವರೆಸಿದ್ದಾರೆ. ನಾಯಕಿ ಪ್ರಣೀತ ಹಾಡುಗಳ ಸಂಖ್ಯೆಯಷ್ಟೇ ದೃಶ್ಯಗಳಲ್ಲಿ ಬಂದು ಹೋಗುತ್ತಾರೆ.ನಾಸರ್ ಪಾತ್ರ ಪೋಷನೆಯಲ್ಲೇ ಗೊಂದಲವಿದೆಯಾದ್ದರಿಂದ ಅದೇ ರೀತಿಯಾಗಿ ಅಭಿನಯಿಸಿದ್ದಾರೆ. ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿರುವ ಶಾಹುರಾಜ್ ಶಿಂಧೆ ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿ ಅದರ ಸತ್ವವನ್ನು ಸಾಧ್ಯವಾದಷ್ಟು ಪೇಲವಗೊಳಿಸಿದ್ದಾರೆ. ಇನ್ನುಳಿದಂತೆ ಸಾಧುಕೋಕಿಲ, ರಂಗಾಯಣ ರಘು ಮುಂತಾದವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಾಹುಲ್ ದೇವ್ ಬರೀ ಒಂದು ದೃಶ್ಯದಲ್ಲಿ ಬಂದು ಸಾಯುತ್ತಾರೆ.

ಹಾಡುಗಳು ಹಿನ್ನೆಲೆ ಸಂಗೀತ ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ ಎನ್ನಬಹುದು.ಆದರೆ ಕತೆ ಚಿತ್ರಕತೆ ಕುತೂಹಲಕಾರಿಯಾಗಿದ್ದರೆ ಸಿನಿಮಾ ಉತ್ತಮವಾಗುತ್ತಿತ್ತು.ಆದರೆ ಸತ್ವವಿಲ್ಲದ ಚಿತ್ರಕತೆ ಚಿತ್ರವನ್ನು ಒಂದು ಹೆಜ್ಜೆ ಹಿಮ್ಮೆಟ್ಟಿಸಿದೆ.