Pages

Friday, January 16, 2015

ಜಾಕ್ಸನ್:

ದುನಿಯಾ ವಿಜಯ್ ಕುಣಿಯುತ್ತಾರೆ, ನಗಿಸುತ್ತಾರೆ, ಖಲರನ್ನು ಬಗ್ಗು ಬಡಿಯುತ್ತಾರೆ. ಅದವರ ಕೆಲಸ ಅದನ್ನು ಮಾಡಿದ್ದಾರೆ. ಒಂದು ಸಿನಿಮಾದಲ್ಲಿ ಇದಿಷ್ಟು ಸಾಕೆ? ನಗಬೇಕು ಎಂದರೆ ನಗಬಹುದು, ಹೊಡೆದಾಟ ನೋಡಬೇಕು ಎಂದರೆ ನೋಡಬಹುದು. ಆದರೆ ಚಿತ್ರ ಪೂರ್ತಿ ನೋಡಿ ಮಜಾ ತೆಗೆದುಕೊಳ್ಳಬೇಕು ಎಂದರೆ..? ಅದಕ್ಕೆ ಒಪ್ಪುವಂತಹ ಕತೆ ಇರಬೇಕು.
ಇದು ರಿಮೇಕ್. ಇದರ್ ಕದನೆ ಆಸೆಪಟ್ಟಯ್ ಬಾಲಕುಮಾರ ಎಂಬುದು ತಮಿಳು ಚಿತ್ರ. ಅದನ್ನು ಕನ್ನಡೀಕರಿಸುವ ಉಮ್ಮೇದು ನಿರ್ದೇಶಕ ಸನತ್ ಕುಮಾರ್ ಅವರಿಗೆ ಬಂದ ಕಾರಣವನ್ನು ಅವರೇ ಹೇಳಬೇಕು. ಏಕೆಂದರೆ ಚಿತ್ರದ ಕತೆಯಾಗಲಿ ಒಟ್ಟಾರೆ ಚಿತ್ರಣವಾಗಲಿ ಯಾವುದೂ ಕನ್ನಡಕ್ಕೆ ಹೊಸದು ಎನಿಸುವುದೂ ಇಲ್ಲ, ಹಾಗೆಯೇ ದುನಿಯಾ ವಿಜಯ್ ಗೆ ಅವರ ಇಮೇಜ್ ಗೆ ಆಪ್ತ ಎನಿಸುವುದು ಇಲ್ಲ. ಆದರೂ ಕನ್ನಡಕ್ಕೆ ತಂದಿದ್ದಾರೆ. ಮೂಲ ಚಿತ್ರವನ್ನು ಹಾಗೆ ಭಟ್ಟಿ ಇಳಿಸುವ ಕಾಯಕಕ್ಕೆ ಕೈ ಹಾಕದೆ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಚೆನ್ನಾಗಿ ನಗಿಸಿ ಆಮೇಲೆ ಹೊಡೆದಾಟ ಇಟ್ಟು ಬಿಟ್ಟರೆ ಸಾಕೆಂದುಕೊಂಡರೇನೋ ನಿರ್ದೇಶಕರು..
ಚಿತ್ರದ ಕತೆ ಒಂದೇ ದಿನದಲ್ಲಿ ನಡೆಯುವ ಕತೆ. ಅದಕ್ಕೆ ಹಲವು ದಿನಗಳ ಹಿನ್ನೆಲೆ ಇದೆ. ಕುಮುದ ನಾಮಾಂಕಿತ ನಾಯಕಿಯ ಹಿಂದೆ ಬಿದ್ದಿದ್ದಾನೆ ನಾಯಕ ಜಾಕ್ಸನ್. ಅದನ್ನು ವಿರೋಧಿಸುವ ನಾಯಕಿ ತಂದೆ ರೌಡಿಯ ಮೊರೆ ಹೋಗುತ್ತಾನೆ. ಈಗ ಎಲ್ಲರೂ ಒಂದು ಕಡೆ ಸೇರಿ ಇತ್ಯರ್ಥ ಮಾಡಲು ಬಾರ್ ಆಯ್ದು ಕೊಳ್ಳುತ್ತಾರೆ. ಶುರುವಾಗುವ ಸಂಧಾನದ ಮಾತುಕತೆಯ ನಡುವೆ ಇನ್ನಷ್ಟು ಪಾತ್ರಗಳು ಸೇರಿಕೊಳ್ಳುತ್ತವೆ. ಮಾತು ಮಾತು ತಮಾಷೆ ತಮಾಷೆ ಹರಟೆಯಲ್ಲಿ ಅರ್ಧ ಸಿನಿಮಾ ಮುಗಿಯುತ್ತದಾದರೂ ಸತ್ವ ಏನೂ ಇರುವುದಿಲ್ಲ. ದ್ವಿತೀಯಾರ್ಧ ಸ್ವಲ್ಪ ಮಟ್ಟಿಗೆ ಕುತೂಹಲಕಾರಿಯಾದರೂ ಅಂತಹ ಪರಿಣಾಮಕಾರಿ ಎನಿಸುವುದಿಲ್ಲ.
ಆರಂಭದಿಂದ ಅಂತ್ಯದವರೆಗೂ ವಿಜಯ್ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ನಗಿಸಲು ಮೊದಲು ನಿಂತುಕೊಳ್ಳುತ್ತಾರೆ. ಒಂದಷ್ಟು ವಿಚಿತ್ರ ಮ್ಯಾನರಿಸಂ ನಲ್ಲಿ ಗಮನ ಸೆಳೆಯುತ್ತಾರೆ. ಇನ್ನು ರಂಗಾಯಣ ರಘು ಅವರದು ಎಂದಿನ ಶೈಲಿಯ ನಟನೆ. ಕುಮುದಾ ಆಗಿ ಪಾವನ ಅಭಿನಯಿಸಿದ್ದಾರೆ. ಉಳಿದ ಪಾತ್ರಗಳು ಅಷ್ಟಾಗಿ ಗಮನ ಸೆಳೆಯುವುದಿಲ್ಲ.
ಚಿತ್ರವೂ ಬಾರಲ್ಲೇ ನಡೆಯುತ್ತದೆ. ಕುಡಿತದ ಸುತ್ತಾ ಗಿರಕಿ ಹೊಡೆಯುತ್ತದೆ. ಹಾಗಾಗಿ ಆ ಜಾಕ್ಸನ್ ಕುಣಿತಕ್ಕೆ ಮೀಸಲು ಎಂದಾದರೆ ಈ ಜಾಕ್ಸನ್ ಚಿತ್ರ ಕುಡಿತಕ್ಕೆ ಮೀಸಲು ಎನ್ನಬಹುದು. ಉಳಿದಂತೆ ಅರ್ಜುನ್ ಜನ್ಯ ಸಂಗೀತದಲ್ಲಿ ಅಂತಹ ಧಂ ಇಲ್ಲ.
ನಿರ್ದೇಶಕ ಸನತ್ ಕುಮಾರ್ ಮೊದಲ ಚಿತ್ರಕ್ಕೆ ರಿಮೇಕ್ ಆಯ್ದುಕೊಂಡಿದ್ದಾರೆ. ಆದರೆ ದುನಿಯಾ ವಿಜಯ್ ನಂತಹ ಪ್ರತಿಭಾವಂತ ಕಲಾವಿದ ಇದ್ದಾಗ ಇನ್ನೂ ರಸವತ್ತಾದ ಮಜಭೂತಾದ ಚಿತ್ರವನ್ನು ಆಯ್ದುಕೊಳ್ಳಬಹುದಿತ್ತು. ಯಾಕೆಂದರೆ ನಗಿಸುವ ಹೊಡೆದಾಡುವ ಎಲ್ಲದರಲ್ಲೂ ವಿಜಯ್ ಸೈ ಎನಿಸಿಕೊಂಡ ನಟ. ಮತ್ತವರ ಅಭಿಮಾನಿಗಳೂ ಅಷ್ಟೇ ವಿಜಯ್ ಎಂದಾಗ ಅವರಲ್ಲೊಂದು ಫೋರ್ಸ್ ಇಷ್ಟ ಪಡುತ್ತಾರೆ. ಆದರೆ ಅಂತಹ ಕಲಾವಿದರನ್ನು ನಿರ್ದೇಶಿಸುವ ಅವಕಾಶ ಸಿಕ್ಕಿಯೂ ಸಾದಾರಣ ಚಿತ್ರವನ್ನು ರೀಮೇಕ್ ಮಾಡಿದ್ದಾರೆ ನಿರ್ದೇಶಕರು.
ಒಟ್ಟಿನಲ್ಲಿ ಸೆನ್ಸಾರ್ ಮಂಡಳಿ ಆದೇಶದಂತೆ ಧೂಮಪಾನ ಮಧ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದಾಗಿ ಚಿತ್ರದಲ್ಲಿ ಹಾಕಬೇಕಾಗುತ್ತದೆ. ಇಲ್ಲಿ ಇಡೀ ಚಿತ್ರವೇ ಆ ಸಂದೇಶ ಸಾರಲು ಸಿನಿಮಾ ಮಾಡಿದ್ದಾರೆ ಎನಿಸುವುದು ಜಾಕ್ಸನ್ ಚಿತ್ರದ ಒಂದು ಸಾಲಿನ ವಿಮರ್ಶೆ ಎನ್ನಬಹುದು.

ಪೈಪೋಟಿ: ಚಿತ್ರ ವಿಮರ್ಶೆ

ರಾಮ ನಾರಾಯಣ್ ಚಿತ್ರ ಸಾಹಿತಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ಮಸ್ತ್ ಮಜಾ ಮಾಡಿ ಚಿತ್ರದ ನಂತರ ನಿರ್ದೇಶಕರಾಗಿ ಸ್ನೇಹಿತರು ನಿರ್ದೇಶನ ಮಾಡಿದ್ದವರು. ಮಸ್ತ್ ಮಜಾ ಮಾಡಿ ಚಿತ್ರದ ರೀತಿಯಲ್ಲಿಯೇ ಸ್ನೇಹಿತರು ಮಾಡಿದ್ದರೆ ಸ್ನೇಹಿತರು ಚಿತ್ರದಂತೆಯೇ ಪೈಪೋಟಿ ಮಾಡಿದ್ದಾರೆ.
ಇಬ್ಬರು ಗೆಳೆಯರು. ಜಾಹಿರಾತಿನ ಹೆಸರನ್ನು ಚಿತ್ರಕ್ಕೆ ಇಟ್ಟಿದ್ದಾರೆ. ಅವರಿಬ್ಬರೂ ಪ್ರಾಣ ಸ್ನೇಹಿತರು. ಒಬ್ಬಳು ಹುಡುಗಿ ನಂದಿನಿ. ಇಬ್ಬರಿಗೂ ಅವಳ ಮೇಲೆ ಪ್ರೀತಿ. ಆದರೆ ಗೆಳೆತನದಿಂದಾಗಿ ನಿನಗೆ ನಿನಗೆ ಎನ್ನುತ್ತಾರೆ. ಆಮೇಲೆ ಪೈಪೋಟಿಗೆ ಬಿದ್ದು ಬಿದ್ದು ನನಗೆ ನನಗೆ ಅನ್ನುತ್ತಾರೆ. ಕೊನೆಗೆ ನ್ಯಾಯಾಲಯದ ಮೆಟ್ಟಿಲು ಹತ್ತಿದಾಗ ನ್ಯಾಯಾಧೀಶರು ಯಾರಿಗೆ ಯಾರಿಗೆ ನೀನೆ ಹೇಳಮ್ಮ ಎನ್ನುತ್ತಾರೆ. ಪ್ರೇಕ್ಷಕ ಮಾತ್ರ ಅಮ್ಮಮ್ಮಾ ಎನ್ನುತ್ತಿರುತ್ತಾನೆ.
ಪೈಪೋಟಿ ಹೊಸದೇನನ್ನೂ ನೀಡಲು ಹೋಗುವುದಿಲ್ಲ. ಸಿನಿಮಾಕ್ಕೆ ಹೊಸದು ಹಳೆಯದು ಯಾಕೆ ಸ್ವಾಮೀ ಎಲ್ಲಾ ಅದೇ ಅಲ್ಲವೇ ಎಂದರೆ ನಿರ್ದೇಶಕರು ಅದನ್ನೂ ನೀಡಲು ಹೋಗಿಲ್ಲ. ಹಳೆಯದನ್ನು ಹೊಸದರ ಹಾಗೆ ಹೊಸದನ್ನು ಹಳೆಯದರ ಹಾಗೆ ನಿರೂಪಿಸಲು ಹೋಗಿದ್ದಾರೆ. ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದು ಮಾಡಿದ್ದಾರೆ. ನಗೆ ಬರುವ ನಗೆ ಬರದ ಹಾಸ್ಯ ಪ್ರಸಂಗಗಳನ್ನು ತುಂಬಿದ್ದಾರೆ. ಮತ್ತು ಸರನವಾಗಿ ದೃಶ್ಯಗಳನ್ನು ಉಣ ಬಡಿಸಿದ್ದಾರೆ ಹಾಗಾಗಿಯೇ ಅದಲ್ಲ ಇದು ಇದಲ್ಲಾ ಅದು ಎನಿಸಿ ಎರಡೂ ಅಲ್ಲ ಅದು ಎನಿಸುವ ಹೊತ್ತಿಗೆ ಸಿನಿಮಾ ಶುಭಂ.
ಚಿತ್ರದ ಮನರಂಜನೆಗೆ ಮೊದಲ ಆದ್ಯತೆ ನೀಡಿದ್ದಾರೆ. ಹಾಸ್ಯವಿಲ್ಲದಿದ್ದರೆ ಸಿನೆಮಾಕ್ಕೆ ಋಣಾತ್ಮಕ ಎನಿಸಿದ್ದರಿಂದ ಪ್ರೇಮ ನಿವೇದನೆ, ಗೆಳೆತನ ಮುಂತಾದ ದೃಶ್ಯಗಳಲ್ಲೂ ಹಾಸ್ಯ ಚಿಮ್ಮಿಸಲು ಪ್ರಯತ್ನಿಸಿದ್ದಾರೆ ನಿರ್ದೇಶಕರು. ಆದರೆ ಹಾಸ್ಯ ಮತ್ತು ಲವಲವಿಕೆಯ ನಡುವಣ ವ್ಯತ್ಯಾಸವನ್ನು ಮನಗಂಡಿಲ್ಲ. ಹಾಗಾಗಿಯೇ ಚಿತ್ರದ ದೃಶ್ಯಗಳು ಅಲ್ಲಲ್ಲಿ ನಗೆ ಉಕ್ಕಿಸಿದರೆ ಆಪ್ತ ಎನಿಸುವುದಿಲ್ಲ. ತೆರೆಯ ಮೇಲಿನ ಪಾತ್ರಧಾರಿಗಳ ಕಷ್ಟಸುಖಗಳು ಪ್ರೇಕ್ಷಕನಿಗೆ ತಾಕುವುದಿಲ್ಲ. ಇಲ್ಲಿ ಎಲ್ಲವೂ ನಿರೀಕ್ಷಿತ ಅಂತ್ಯ ಅನಿರೀಕ್ಷಿತ ಎಂದರೆ ಡಿಫರೆಂಟ್ ಕ್ಲೈಮಾಕ್ಸ್ ಎಂದುಕೊಳ್ಳಬೇಡಿ.. ಏನು ಎನ್ನುವುದಕ್ಕಾಗಿ ಒಮ್ಮೆ ಸಿನಿಮ ನೋಡಿ.

ನಿರಂಜನ್ ಮತ್ತು ಯತಿರಾಜ್ ಹೀರೋಗಳಂತೆ ಕಾಣದೆ ನಮ್ಮದೇ ಅಕ್ಕ ಪಕ್ಕದ ಮನೆಯ ಹುಡುಗರಂತೆ ಕಾಣುವುದು ಪ್ಲಸ್ ಪಾಯಿಂಟ್. ಗಿರಿರಾಜ್ ನಟನೆಯಲ್ಲಿ ಪರವಾಗಿಲ್ಲ. ಆದರೆ ನಿರಂಜನ್ ಸ್ವಲ್ಪ ಹೆಣಗಾಡಿದ್ದಾರೆ. ನಾಯಕಿಯಾಗಿ ಅದೃಷ್ಟದ ಹೆಸರಿನ ನಂದಿನಿಯಾಗಿ ಪೂಜಾಶ್ರೀ oಓಕೆ. ನಟ ಅಚ್ಯುತ ಕುಮಾರ್ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ಮೂವರ ಪೈಪೋಟಿಯಲ್ಲಿ ಅವರಿಗೆ ಹೆಚ್ಚು ಮಾರ್ಕ್ಸ್ ನೀಡಬಹುದು. ನಿರ್ಮಾಪಕರೂ ನಿರ್ದೇಶಕರೂ ಚಿತ್ರದಲ್ಲಿ ಕಾಣಿಸಿಕೊಂಡಿದ್ದರೂ ಅವರಿಗೆ ನಿರ್ಮಾಪಕ ನಿರ್ದೇಶಕರಾಗಿಯೇ ಹೆಚ್ಚು ಅಂಕ ನೀಡಬಹುದು. ತಾಂತ್ರಿಕಅಂಶಗಳು ಮತ್ತು ಪೋಷಕ ಕಲಾವಿದರುಗಳಲ್ಲಿ ಅನುಭವ ಎದ್ದು ಕಾಣುತ್ತದೆ. ಹಾಡುಗಳು ಇನ್ನಷ್ಟು ಚೆನ್ನಾಗಿರಬೇಕಿತ್ತು ಎನಿಸುತ್ತದೆ.

ಶಬರಿಮಲೆ ಯಾತ್ರೆ

ದೇವರ ಚಿತ್ರಗಳು ಮತ್ತು ದೇವರ ಮಹಿಮೆಯನ್ನು ತೋರಿಸುವ ಚಿತ್ರಗಳು ಆಗಾಗ ಬರುತ್ತಲೇ ಇರುತ್ತವೆ. ಶಬರಿಮಲೆ ಯಾತ್ರೆ ಅಯ್ಯಪ್ಪ ಸ್ವಾಮಿಯ ಮಹಿಮೆಯನ್ನು ತೋರಿಸುವ ಚಿತ್ರ ಎಂಬುದು ಒಂದು ಸಾಲಿನ ವಿಮರ್ಶೆ ಎನ್ನಬಹುದು.
ಬರೀ ಚಿತ್ರವಾಗಿಯಷ್ಟೇ ಸಿನಿಮಾವನ್ನು ನೋಡಿದರೆ ಸಿನಿಮಾ ರುಚಿಸದೆ ಇರಬಹುದು. ಅದಕ್ಕೆ ಕಾರಣವಿದೆ. ಸಿನಿಮಾದಲ್ಲಿ ಅಥವಾ ಸಿನಿಮಾದ ಕತೆಯಲ್ಲಿ ಉಪಕತೆಯಲ್ಲಿ ಎಲ್ಲವೂ ನಿರೀಕ್ಷಿತ. ಅಂದುಕೊಂಡದ್ದು ಆಗುವುದು ಎರಡೂ ಒಂದೇ ಆಗುತ್ತದೆ. ಒಳ್ಳೆಯವರಿಗೆ ಒಳ್ಳೆಯದು ಭಕ್ತರಿಗೆ ಕರುಣೆ ತೋರುವುದು ದೇವರ ಗುಣ ಅಲ್ಲವೇ. ಹಾಗಾಗಿ ಕಷ್ಟದಲ್ಲಿರುವವರಿಗೆ ಏನಾಗುತ್ತದೆ ಎಂಬುದನ್ನು ಯಾರೂ ಕೇಳುವ ಹಾಗಿಲ್ಲ. ಹೇಳುವ ಹಾಗಿಲ್ಲ. ಇಲ್ಲಿ ಅಯ್ಯಪ್ಪನಿದ್ದಾನೆ. ಅವನ ಭಕ್ತರಿದ್ದಾರೆ. ಕತೆ ಸಾಗುತ್ತಾ ಏನಾಗುತ್ತದೆ ಎಂಬ ಕುತೂಹಲ ಹುಟ್ಟಿಸುವುದಿಲ್ಲ. ಬದಲಿಗೆ ಏನಾಗುತ್ತದೆ ಎಂಬುದನ್ನು ಹೇಳುತ್ತಾ ಸಾಗುತ್ತದೆ.
ಇಲ್ಲಿ ಒಂದಷ್ಟು ಜನರ ಗುಂಪಿದೆ. ಎಲ್ಲರಿಗೂ ಅವರದೇ ಆದ ಸಮಸ್ಯೆಗಳಿವೆ. ಅವರೆಲ್ಲಾ ಅಯ್ಯಪ್ಪನ ಮಾಲೆ ಧರಿಸುತ್ತಾರೆ. ಶಬರಿಮಲೆಗೆ ಹೊರಡುತ್ತಾರೆ. ದಾರಿಯಲ್ಲಿ ಸಿಗುವ ದೇವಾಲಯಗಳನ್ನು ದರ್ಶನ ಮಾಡುತ್ತಾರೆ. ಶಬರಿಮಲೆ ತಲುಪಿ ಅಯ್ಯಪ್ಪನ ದರ್ಶನ ಕಂಡು ಮಕರ ಜ್ಯೋತಿ ವೀಕ್ಷಿಸುತ್ತಾರೆ. ಅಲ್ಲಿಗೆ ಶುಭಂ. ಹೌದು ಕತೆ ಎಂದರೆ ಇಷ್ಟೇ ಎನ್ನಬಹುದು. ಚಿತ್ರಕತೆ ಮತ್ತು ಪಾತ್ರಗಳು ಮತ್ತ ಅವುಗಳಿಗೆ ಉಪಕತೆಗಳು ಚಿತ್ರದಲ್ಲಿವೆ. ಒಂದೊಂದು ಸಮಸ್ಯೆಯಿಟ್ಟುಕೊಂಡು ಸಾಗುವ ಭಕ್ತರುಗಳು ಅಯ್ಯಪ್ಪನ ಮಹಿಮೆಯಿಂದಾಗಿ ಬದುಕಿನಲ್ಲಿ ಸುಧಾರಣೆಯಾಗುತ್ತಾರೆ ಎಂಬುದು ಕತೆ.
ಅಯ್ಯಪ್ಪನ ಅಥವಾ ಯಾವುದೇ ದೇವರ ಮಹಿಮೆಯ ಚಿತ್ರ ಎಂದಾಗ ಎಲ್ಲವೂ ಸಿದ್ಧ ಸೂತ್ರದ ಅಡಿಯಲ್ಲಿ ಇರಬೇಕಿಲ್ಲ. ಯಾಕೆಂದರೆ ಇದೊಂದು ಪಯಣದ ಕತೆ. ಹೇಗೆ ಈಗಾಗಲೇ ಪ್ರೀತಿ ಕುರಿತು ಹಲವಾರು ರೋಡ್ ಚಿತ್ರಗಳು ಬಂದಿವೆ. ಉದ್ದಕೂ ಸಾಗುವ ಜರ್ನಿಯಲ್ಲಿ ಹಲವಾರು ವಿಷಯಗಳು ತಮಾಷೆಗಳು ಹಾಗೆಯೇ ಬದುಕಿನ ಸತ್ಯಾಂಶಗಳು ಅರ್ಥವಾಗುತ್ತಾ ಹೋಗುತ್ತವೆಯೋ ಹಾಗೆಯೇ ಈ ಚಿತ್ರವನ್ನು ನಿರೂಪಿಸಿದ್ದರೆ ಚಿತ್ರ ಸಿದ್ಧ ಸೂತ್ರದಿಂದ ಹೊರ ಬರುತ್ತಿತ್ತೇನೋ? ಆದರೆ ಇಲ್ಲಿ ಕತೆಗಾರ ನಿರ್ದೇಶಕರೇ ಚೌಕಟ್ಟು ಹಾಕಿಕೊಂಡಿರುವುದರಿಂದ ಸೀಮಿತವಾಗಿ ಬಿಟ್ಟಿದೆ ಸಿನಿಮ.

ಇದನ್ನು ಬಿಟ್ಟರೆ ಭಕ್ತಿ ಪ್ರಧಾನವಾಗಿದೆ ಚಿತ್ರ. ಹಾಗೆಯೇ ಹಾಡುಗಳು ಕೂಡ ಹೇಳುವಂತಿವೆ. ಅನಿರುದ್ಧ, ಅಮರನಾಥ್ ಆರಾಧ್ಯ, ಗುರುಪ್ರಸಾದ್, ಅಕ್ಷಯ್ ಕುಮಾರ್, ಕುಶಾಲ್ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.