Pages

Saturday, April 19, 2014

ಕ್ವಾಟಲೇ ಸತೀಶ:

ಮಹೇಶ್ ರಾವ್ ಮತ್ತೊಂದು ರೀಮೇಕ್ ಚಿತ್ರದ ಜೊತೆ ಬಂದಿದ್ದಾರೆ. ಕಳೆದವಾರ ಬಿಡುಗಡೆಯಾದ ಅವರದೇ ಇನ್ನೊಂದು ರೀಮೇಕ್ ಚಿತ್ರ ಏನಾಯಿತು ಎಂದು ಯಾರೂ ಕೇಳುವ ಹಾಗಿಲ್ಲ. ಹಾಗೆಯೇ ಈ ಚಿತ್ರ ಯಾಕೆ ಎನ್ನುವ ಹಾಗೂ ಇಲ್ಲ. ಯಾಕೆಂದರೆ ಇದು ಹೇಳಿಕೇಳಿ ರೀಮೇಕ್. ಅಲ್ಲೇನಿತ್ತೋ ಅದನ್ನೇ ಇಲ್ಲಿ ತಂದಿದ್ದೀನಿ ಸ್ವಾಮೀ ಎನ್ನಬಹುದು.
ತಮಿಳಿನಲ್ಲಿ ಕೇವಲ ಎಂಬತ್ತು ಲಕ್ಷ ಬಜೆಟ್ಟಿನಲ್ಲಿ ತಯಾರಾದ ನಡುವಳ ಕೊಂಚ ಪಕ್ಕತ್ ಕೂಣಂ ಚಿತ್ರ ಬಿಡುಗಡೆಯಾಗಿ ದಾಖಲೆ ಮಟ್ಟದ ಹಣ ಗಳಿಸಿತ್ತು. ಒಂದು ಸಣ್ಣ ಎಳೆಯನ್ನು ಹೊಂದಿದ್ದ ಚಿತ್ರ ತನ್ನ ಚಿತ್ರಕತೆಯಿಂದ ಮತ್ತು ಕತೆಯಲ್ಲಿನ ಹೊಸತನದಿಂದ ಗೆದ್ದಿತ್ತು ಎನ್ನಬಹುದು. ಅದನ್ನು ಯಥಾವತ್ತಾಗಿ ಕನ್ನಡಕ್ಕೆ ತಂದಿದ್ದಾರೆ ನಿರ್ದೇಶಕ ಮಹೇಶ್ ರಾವ್.
ಒಬ್ಬ ನಿರ್ದೇಶಕನಿಗೆ ಒಂದಷ್ಟು ಹಣ ಉತ್ತಮ ಕಲಾವಿದರು ಒಂದಷ್ಟು ಸಮಯ ಕೊಟ್ಟರೆ ಒಂದೊಳ್ಳೆ ಕತೆಯ ಚಿತ್ರ ಮಾಡಬಲ್ಲ. ಹಾಗೆ ಒಂದು ಕತೆಯನ್ನೂ ಕೊಟ್ಟುಬಿಟ್ಟರೆ ಆತನ ಕೆಲಸ ಇನ್ನಷ್ಟು ಸುಗಮವಾಗಿ ಬಿಡುತ್ತದೆ. ಈ ಚಿತ್ರದಲ್ಲೂ ಹಾಗೆಯೇ ಆಗಿದೆ. ಪೂರ್ಣಪ್ರಮಾಣದ ನಾಯಕನಾಗಿ ಅಂಜದ ಗಂಡು ಚಿತ್ರದಲ್ಲಿ ಸೋತ ನೀನಾಸಂ ಸತೀಶ್ ಈ ಚಿತ್ರದಲ್ಲಿ ನಾಯಕನಾದರೂ ಹೀರೋಗಿರಿಯಿಲ್ಲದ ಪಾತ್ರದಲ್ಲಿ ಮಿಂಚಿದ್ದಾರೆ.
ಶಾರ್ಟ್ ಟೈಮ್ ಮೆಮೊರಿ ಲಾಸ್ ನಿಂದ ಬಳಲುವ ನಾಯಕನ ಕತೆಯಿದು. ಗಜಿನಿ ಚಿತ್ರದಲ್ಲೂ ಇದೆ ಐಡಿಯಾ ಇದ್ದರೂ ಅಲ್ಲಿ ದ್ವೇಷವಿತ್ತು.ಅದೇ ಕಾನ್ಸೆಪ್ಟ್ ಅನ್ನು ಇಲ್ಲಿ ಹಾಸ್ಯಕ್ಕೆ ಬದಲಾಯಿಸಲಾಗಿದೆ. ಮದುವೆ ಇನ್ನು ಮೂರು ದಿನ ಇದೆ ಎನ್ನುವಷ್ಟರಲ್ಲಿ ನಾಯಕನಿಗೆ ಈ ಖಾಯಿಲೆ ಬಂದು ಬಿಡುತ್ತದೆ. ಆತ ಆತನ ಗೆಳೆಯರು ಹೇಗೋ ಮದುವೆ ಮಾಡಿಬಿಟ್ಟರೆ ಎಲ್ಲಾ ಸರಿ ಹೋಗುತ್ತದೆ ಎಂದುಕೊಳ್ಳುತ್ತಾರೆ. ತಾನು ಪ್ರೀತಿಸಿದ ಹುಡುಗಿ, ಪ್ರೀತಿಸಿದ್ದೂ ಎಲ್ಲವನ್ನೂ ಮರೆಯುವ ನಾಯಕನನ್ನು ಅವನ ಆ ರೋಗವು ಬೇರೆಯವರಿಗೆ ಗೊತ್ತಾಗದಂತೆ ನಾಟಕ ಮಾಡುವುದು ಆಗ ನಡೆಯುವ ಪ್ರಹಸನಗಳೆ ಚಿತ್ರದ ಜೀವಾಳ.ಇಂತಹ ಚಿತ್ರಗಳಲ್ಲಿ ಚಿತ್ರಕತೆ ಮತ್ತು ದೃಶ್ಯ ರಚನೆಯೇ ಜೀವಾಳ. ಅದನ್ನು ತಮಿಳು ಮೂಲದ ನಿರ್ದೇಶಕರೇ ಮಾಡಿರುವುದರಿಂದ ಮಹೇಶ್ ರಾವ್ ಅದನ್ನೇ ನೀಟಾಗಿ ಅತೀ ಮಾಡದೆ ಚಿತ್ರೀಕರಿಸಿದ್ದಾರೆ. ಇಲ್ಲಿ ಕಲಾವಿದರಿಂದ ಉತ್ತಮ ಅಭಿನಯ ಹೊರತೆಗೆದಿರುವ ಮಹೇಶ್ ರಾವ್ ಅವರನ್ನು ಆ ವಿಷಯಕ್ಕೆ ಮೆಚ್ಚಬಹುದು.
ಇನ್ನುಳಿದಂತೆ ಸಂಗೀತ ಮತ್ತು ಛಾಯಾಗ್ರಹಣ ಇನ್ನಿತರ ತಾಂತ್ರಿಕ ಅಂಶಗಳಲ್ಲಿ ಅಂತಹ ವಿಶೇಷವೇನಿಲ್ಲ. ಚಿತ್ರಕ್ಕೆ ತಕ್ಕಂತೆ ನಿರ್ದೇಶಕರ ಅಭಿರುಚಿಯಂತೆ ಇವೆ ಅಷ್ಟೇ ಎನ್ನುಬಹುದಾದರೂ ಅದರ ಒಳಾರ್ಥ ಪ್ರೇಕ್ಷಕರಿಗೆ ಬಿಟ್ಟದ್ದು.
ಯಶ್ , ರಮ್ಯ ಅಭಿನಯದ ಲಕ್ಕಿ ಚಿತ್ರವನ್ನು ನಿರ್ದೇಶಿಸಿದ್ದ ಸೂರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ ಹಾಗೂ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಒಂದೇ ಮಾತನ್ನು ಒಂದೇ ರೀತಿ ಪದೇ ಪದೇ ಹೇಳಿ ನಗಿಸುವ ಬೇಸರ ತರಿಸುವ ಗೊಂದಲಕ್ಕೀಡಾಗುವ ಗೊಂದಲ ಉಂಟು ಮಾಡುವ ನಾಯಕನ ಪಾತ್ರದಲ್ಲಿ ಸತೀಶ್ ಚೆನ್ನಾಗಿ ಅಭಿನಯಿಸಿದ್ದಾರೆ. ಉಳಿದಂತೆ ಉಳಿದ ಕಲಾವಿದರ ಅಭಿನಯ ಪಾತ್ರಕ್ಕೆ ತಕ್ಕಂತಿದೆ.

ಅಗ್ರಜ:

ಜಗ್ಗೇಶ್ ಎಂದಾಕ್ಷಣ ಅದೊಂದು ಹಾಸ್ಯ ಚಿತ್ರ ಎನ್ನುವುದು ಈವತ್ತಿಗೆ ಜನಜನಿತ ಸಂಗತಿ. ಅವರು ಸಾಕಷ್ಟು ಕೌಟುಂಬಿಕ ಚಿತ್ರಗಳಲ್ಲಿ ಅಭಿನಯಿಸಿದ್ದರೂ ಅವರ ಚಿತ್ರವೆಂದರೆ ಒಂದಷ್ಟಾದರೂ ಹಾಸ್ಯ ಇರಲೆಬೇಕು. ಆದರೆ ಅಗ್ರಜ ಅದಕ್ಕೊಂದು ಅಪವಾದ ಎನ್ನಬಹುದು. ಹಾಗೆಯೇ ತನ್ನ ಇಮೇಜ್ ಬದಲಿಸಿ ಖಳ ಛಾಯೆಯ ಪಾತ್ರವನ್ನು ಒಪ್ಪಿಕೊಂಡು ಅದನ್ನು ಸಮರ್ಥವಾಗಿ ನಿರ್ವಹಿಸಿರುವ ಜಗ್ಗೇಶ್ ಅವರನ್ನು ಅಭಿನಂದಿಸಲೇ ಬೇಕಾಗುತ್ತದೆ.
ಅಗ್ರಜ ಒಂದು ಭ್ರಷ್ಟಾಚಾರ ವಿರೋಧಿ ಚಿತ್ರ. ಕತೆಯ ವಿಷಯಕ್ಕೆ ಬಂದರೆ ಒಬ್ಬ ಭ್ರಷ್ಟಾಚಾರಿ ಮನಬದಲಿಸಿ ಅದರ ವಿರುದ್ಧವೇ ಸಿಡಿದು ನಿಲ್ಲುವ ಕತೆ ಚಿತ್ರದ್ದು. ಇಲ್ಲಿ ಜಗ್ಗೇಶ್ ಅವರದು ಮಧ್ಯವರ್ತಿ ಪಾತ್ರ. ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳ ನಡುವೆ ಸೇತುವಾಗಿ ಹಣ ಹೆಣ್ಣು ಆಮಿಷವೊಡ್ಡಿ ಕೆಲಸಗಳನ್ನು ಮಾಡಿಸಿಕೊಡುವ ಮಧ್ಯವರ್ತಿ ಸಿದ್ಧನ ಕತೆ ಇದು. ಕುಡಿಯುವ, ಲಂಚಕೊಡುವ ತಲೆ ಹಿಡಿಯುವ, ಅನೈತಿಕ ಸಂಬಂಧವುಳ್ಳ ನಾಯಕನ ಪಾತ್ರದಲ್ಲಿ ಜಗ್ಗೇಶ್ ಮಿಂಚಿದ್ದಾರೆ. ಎಲ್ಲೂ ತಮ್ಮ ಪಾತ್ರಕ್ಕೆ ಕಾಮಿಡಿ ಸ್ಪರ್ಶ ಕೊಡದೆ ಪಾತ್ರವನ್ನು ಹೇಗೆ ಬೇಕೋ ಹಾಗೆಯೇ ನಿರ್ವಹಿಸಿದ್ದಾರೆ. ಹಾಗಾಗಿಯೇ ಚಿತ್ರ ಕತೆಗೆ ಒಂದು ಬಲ ಬಂದಿದೆ ಎನ್ನಬಹುದು.
ಅಂದ ಹಾಗೆ ಅಗ್ರಜ ಒಂದು ರೀಮೇಕ್ ಚಿತ್ರ. ತೆಲುಗು ಭಾಷೆಯಲ್ಲಿ 2010 ರಲ್ಲಿ ತೆರೆಗೆ ಬಂದ ಬ್ರೋಕರ್ ಚಿತ್ರದ ಕನ್ನಡದ ಅವತರಣಿಕೆ. ಇದನ್ನು ಸಂಗೀತ ನಿರ್ದೇಶಕ ಆರ್.ಪಿ. ಪಟ್ನಾಯಕ್ ನಿರ್ದೇಶನ ಮಾಡಿದ್ದರು. ಅದನ್ನೇ ಕನ್ನಡಕ್ಕೆ ಅದ್ದೂರಿಯಾಗಿ ತಂದಿದ್ದಾರೆ ನಿರ್ಮಾಪಕ ಗೋವರ್ಧನ್ ಮತ್ತು ನಿರ್ದೇಶಕ ಶ್ರೀನಂದನ್.
ಚಿತ್ರ ಪ್ರಾರಂಭದಿಂದ ಅಂತ್ಯದವರೆಗೆ ನೋಡಿಸಿಕೊಂದು ಹೋಗುವ ಗುಣವಿದೆಯಾದರೂ ಚಿತ್ರದ ಸ್ವಾರಸ್ಯ ಮುಕ್ಕಾಲು ಭಾಗದಲ್ಲೇ ಗೊತ್ತಾಗಿಬಿಡುತ್ತದೆ.ಚಿತ್ರದಲ್ಲಿ ಭ್ರಷ್ಟಾಚಾರದ ಎಲ್ಲಾ ಮಜಲುಗಳನ್ನೂ ತೋರಿಸಿಬಿಡಬೇಕು ಎನ್ನುವ ಧಾವಂತ ಎದ್ದು ಕಾಣುತ್ತದೆ. ಹಾಗಾಗಿಯೇ ಗಂಭೀರವಾಗಿ ಪರಿಣಾಮ ಬೀರಬೇಕಾದ ದೃಶ್ಯಗಳು ಕೆಲವು ಕಡೆ ಕ್ಲೀಷೆ ಎನಿಸುತ್ತದೆ. ಅಂತವುಗಳಲ್ಲಿ ಮೇಷ್ಟರ ಪಿಂಚಿಣಿ ಪ್ರಹಸನವೂ ಒಂದು. ಇದೆಲ್ಲವನ್ನೂ ಹೊರತು ಪಡಿಸಿದರೆ ಅಗ್ರಜ ಕೊತ್ತ ಕಾಸಿಗೆ ಮೋಸ ಮಾಡುವ ಚಿತ್ರವಲ್ಲ. ಅಂದರೆ ಪೂರ್ಣ ಪ್ರಮಾಣದ ಮನರಂಜನೀಯ ಚಿತ್ರ ಎನ್ನುವುದಕ್ಕಿಂತ ಪೂರ್ಣ ಪ್ರಮಾಣದ ಲತೆಯುಲ್ಲ ಚಿತ್ರ ಎನ್ನಬಹುದು. ಸಂಭಾಷಣೆ ಇನ್ನಷ್ಟು ಮೊನಚಾಗಿರಬೇಕಿತ್ತೇನೋ ಎನಿಸಿದರೂ ಕೆಲವು ಕಡೆ ಗಮನ ಸೆಳೆಯುತ್ತದೆ. ಅಲ್ಲಲ್ಲಿ ದ್ವಂದ್ವಾರ್ಥ ಮೇರೆ ಮೀರಿ ಸ್ವಲ್ಪ ಇರುಸು ಮುರುಸಾಗುತ್ತದೆ. ಅದರಲ್ಲೂ ನಿರ್ದೇಶಕ ಓಂ ಪ್ರಕಾಶ್ ದೃಶ್ಯಗಳಲ್ಲಿ ಬರುವ ಮಾತುಗಳು ಅಸಹನೀಯ.
ದರ್ಶನ್ ಪುಟ್ಟದಾದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೂವರೆ ಹಾಡು ಒಂದು ಹೊಡೆದಾಟ, ಒಂದೆರೆಡು ದೃಶ್ಯಗಳಲ್ಲಿ ಬಂದರೂ ಗಮನ ಸೆಳೆಯುವಂತಹ ಪಾತ್ರವದು. ಇನ್ನುಳಿದಂತೆ ಜಗ್ಗೇಶ್ ಮೇಲೆ ಹೇಳಿದಂತೆ ಪೂರ್ಣ ಪ್ರಮಾಣದಲ್ಲಿ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಸಂಖ್ಯಾತ ಪಾತ್ರಗಳು ಬರುವುದರಿಂದ ಅವು ಅಲ್ಲಲ್ಲಿ ಬಂದು ತಮ್ಮ ಝಾಲಕ್ ತೋರಿಸಿ ಹೋಗಿಬಿಡುತ್ತವೆ.

ತಾಂತ್ರಿಕವಾಗಿ ಚಿತ್ರ ಅದ್ದೂರಿಯಾಗಿದೆ. ಕೆಲವು ಕಡೆ ಗ್ರಾಫಿಕ್ಸ್ ಕೈ ಕೊಟ್ಟಿದೆ. ಸಂಗೀತ ಮತ್ತು ಛಾಯಾಗ್ರಹಣ ಸಾದಾರಣ ಮಟ್ಟದಲ್ಲಿವೆ ಎನ್ನಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಭ್ರಷ್ಟಾಚಾರದ ವಿರುದ್ಧ ತೊಡೆ ತಟ್ಟಿ ನಿಲ್ಲುವ ನಾಯಕನ ಸಿನಿಮಾ ನೋಡಿದ್ದವರು ತನ್ನ ಪಶ್ಚಾತ್ತಾಪದಿಂದ ತಿರುಗಿ ಬೀಳುವ ನಾಯಕನ ಕತೆ ನೋಡಬೇಕಾದರೆ ಅಗ್ರಜನನ್ನು ಆರಾಮವಾಗಿ ನೋಡಬಹುದು.

Monday, April 14, 2014

ಮರ್ಯಾದೆ:

ಮಂಗಳಮುಖಿಯನ್ನೇ ಮುಖ್ಯ ಪಾತ್ರದಲ್ಲಿರಿಸಿಕೊಂಡ ಸುಮಾರಷ್ಟು ಚಿತ್ರಗಳು ಇತ್ತೀಚಿಗೆ ಬಂದಿವೆ ಎನ್ನಬಹುದು. ಅದು ಭಿನ್ನ ಪ್ರಯತ್ನವಾಗುತ್ತದೆ ಎಂಬುದು ನಿರ್ದೇಶಕರ ಕಲ್ಪನೆ ಇರಬಹುದು. ಕಲ್ಪನಾ, ಚತುರ್ಭುಜ ಮುಂತಾದ ಚಿತ್ರಗಳು ಮಂಗಳಮುಖಿಯನ್ನೇ ಪ್ರಮುಖ ಪಾತ್ರವನ್ನಾಗಿಸಿದ್ದವು.
ಹಾಗೆಯೇ ಮರ್ಯಾದೆ ಕೂಡ ಮಂಗಳಮುಖಿಯ ಕತೆ . ಆದರೆ ಇದ್ಯಾವ ವಿಭಾಗಕ್ಕೆ ಸೇರುತ್ತದೆ ಎಂಬುದನ್ನು ನಿರ್ದೇಶಕರೇ ಹೇಳಬೇಕೆನೋ? ಯಾಕೆಂದರೆ ಒಬ್ಬ/ಳು ಮಂಗಳಮುಖಿ ಎಂದಾಗ ಅದರ ಹೂರಣ ಬೇರೆಯಾಗಿರುತ್ತದೆ. ಇಲ್ಲಿ ಹೂರಣ ಇಷ್ಟೇ. ಮಂಗಳಮುಖಿಯರಿಗೆ ಸಮಾಜದಲ್ಲಿ ಸ್ಥಾನಮಾನವಿಲ್ಲ ಎಂಬುದು. ಆದರೆ ಅದನ್ನು ಸೂಕ್ತ ಚಿತ್ರಕತೆಯ ಜೊತೆಗೆ ನಿರೂಪಿಸಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ. ಹಾಗಾಗಿಯೇ ಚಿತ್ರ ಅರೆಬೆಂದ ಅಡುಗೆ ಎನ್ನಬಹುದು.
ಚಿತ್ರದಲ್ಲಿ ಒಂದು ಪ್ರೇಮಕತೆಯಿದೆ. ಅದನ್ನು ನಿರ್ದೇಶಕರು ಇಷ್ಟ ಬಂದ ಹಾಗೆ ನಿರೂಪಿಸಿದ್ದಾರೆ. ಹೊಡೆದಾಟ ಇದೆ. ಅದಕ್ಕೆ ಕಾರಣ ಈಗಾಗಲೇ ಸಾವಿರಾರು ಸಿನಿಮಾದಲ್ಲಿ ಬಂದಿರುವಂತಹದ್ದೇ. ಹೊಡೆದಾಡುವ ನಾಯಕ ನಾಯಕಿಯನ್ನು ಪ್ರೀತಿಸದೇ ಇರುತ್ತಾನೆಯೇ. ಪ್ರೀತಿಸಿದ ಮೇಲೆ ಹಾದಿ ಕುಣಿಯದಿದ್ದರೆ ಏನು ಚೆನ್ನ. ಹಾಗಾಗಿ ಹಾಡುಗಳೂ ಇವೆ. ಅದೆಲ್ಲ ಸರಿ. ಇಷ್ಟೆಲ್ಲಾ ಇದ್ದ ಮೇಲೆ ನಗಬಾರದೇ ಎಂದು ಪ್ರೇಕ್ಷಕ ಕೇಳಿ ಬಿಡುತ್ತಾನೇನೋ ಎಂಬ ಭಯದಿಂದ ಅದನ್ನೂ ಅಲ್ಲಲ್ಲಿ ತೂರಿಸಿದ್ದಾರೆ. ನಗು ಬಂದರೆ ನಗಬಹುದು.
ಇದೆಲ್ಲದರ ಜೊತೆಗೆ ಅದೇಕೆ ಇದೇಕೆ ಎಂಬ ಪ್ರಶ್ನೆ ಹುಟ್ಟುವುದಕ್ಕೂ ಒಂದಷ್ಟು ಅನಗತ್ಯ ದೃಶ್ಯಗಳನ್ನು ತುಂಬುವ ಮೂಲಕ ಅವಕಾಶ ಮಾಡಿಕೊಟ್ಟಿದ್ದಾರೆ ನಿರ್ದೇಶಕರು. ಹಾಗೆಯೇ ಬಾಲಿಶ ಎನಿಸುವ ದೃಶ್ಯವೂ ಅವಾಸ್ತವ ಎನಿಸುವ ದೃಶ್ಯವೂ ಇದೆ.
ನಾಯಕನಾಗಿ ಅಭಿನಯಿಸಿರುವ ನಾಗರಾಜ್ ಅಭಿನಯಿಸುವ ಪ್ರಯತ್ನ ಮಾಡಿದ್ದಾರೆ. ಅದೆಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದನ್ನು ನೋಡುಗನಿಗೆ ಬಿಟ್ಟದ್ದು. ನಾಯಕಿಯಾಗಿ ಹರ್ಷಿಕಾ ಪೂಣಚ್ಚ, ಮಂಗಳಮುಖಿಯಾಗಿ ರವಿ ಚೇತನ್ ನಟಿಸಿದ್ದಾರೆ.ಲಯೆಂದ್ರರ ಹಾಸ್ಯಕ್ಕೆ ಅವರೇ ನಗಬೇಕೇನೋ? ತಾಂತ್ರಿಕವಾಗಿ ಚಿತ್ರ ಸಾದಾರಣ. ಕತೆ ಚಿತ್ರಕತೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹಾರಾಜ್ ಇನ್ನೂ ಪಳಗಬೇಕಿದೆ.

ಒಂದು ಹೊಸ ಚಿತ್ರ ಹೊಸಬ ನಿರ್ದೇಶಕರ ಚಿತ್ರಕ್ಕೆ ಇಷ್ಟೆಲ್ಲಾ ಪೋಸ್ಟ್ ಮಾರ್ಟಂ ಮಾಡಬೇಕೆ? ಎನ್ನುವುದು ಪ್ರಶ್ನೆ. ಆದರೆ ಒಬ್ಬ ಪ್ರೇಕ್ಷಕ ಸಿನಿಮಾ ನೋಡಲು ಹಣ ಸಮಯ ವ್ಯಾಯ ಮಾಡುವಾಗ ಮಾಡಲೇಬೇಕಾಗುತ್ತದೆ ಎಂಬ ಉತ್ತರ ಬರಬಹುದು. ಒಂದು ಕತೆಯನ್ನು ಸಿನಿಮಾವಾಗಿಸುವ ಮುನ್ನ ಯಾವ ವಿಭಾಗಕ್ಕೆ ನಾವು ಸಿನಿಮಾ ಮಾಡುತ್ತಿದ್ದೇವೆ ಎಂಬ ಪ್ರಶ್ನೆಯನ್ನು ತಮ್ಮನ್ನೇ ಕೇಳಿಕೊಂಡು ಅದಕ್ಕೆ ಸ್ಪಷ್ಟ ಉತ್ತರ ಕಂಡುಕೊಂಡ ನಂತರ ನಿರ್ದೇಶಕ ಮುಂದುವರೆಯಬೇಕಾಗುತ್ತದೆ. ತಾನಂದುಕೊಂಡಿದ್ದೆ ಸರಿ ಎಂಬ ನೇರ ನಿರ್ಧಾರ ಇಂತಹ ಸಿನಿಮಾಗಳಿಗೆ ಕಾರಣವಾಗುತ್ತವೆ. ಇಂತಹ ಸಿನಿಮಾಗಳಿಂದ ಯಾರಿಗೂ ಲಾಭವಿಲ್ಲ. ಚಿತ್ರರಂಗಕ್ಕೂ ನಷ್ಟವೇ?

Sunday, April 13, 2014

ಎಂದೆಂದೂ ನಿನಗಾಗಿ

ಒಬ್ಬ ವಿದ್ಯಾರ್ಥಿಗೆ ಒಂದು ಪುಟದ ಬರಹ ಕೊಟ್ಟು ಅದನ್ನು ನಕಲು ಮಾಡುವಂತೆ ಹೇಳಿದರೆ, ಆತ ಅದನ್ನು ನಕಲು ಮಾಡಿದರೆ ಅದರ ಮೌಲ್ಯ ಮಾಪನ ಹೇಗೆ?ಆತನಿಗೆ ಅಂಕವನ್ನು ಕೊಡುವುದಾಗಲೀ ಅಥವಾ ಬೈಯ್ಯುವುದಾಗಲಿ ಹೇಗೆ? ಎಂದೆಂದೂ ನಿನಗಾಗಿ ನೋಡಿದಾಕ್ಷಣ ಎನಿಸುವ ಅನಿಸಿಕೆ ಇದು. ಯಾಕೆಂದರೆ ಎಂದೆಂದೂ ನಿನಗಾಗಿ ಎಲ್ಲರಿಗೂ ಗೊತ್ತಿರುವಂತೆ ತಮಿಳಿನ ಎಂಗೆಯುಂ ಎಪ್ಪೋದಂ ಚಿತ್ರದ ಕನ್ನಡ ಅವತರಣಿಕೆ. ಒಂದು ಲವಲವಿಕೆಯಾದ ಪ್ರೇಮಕತೆಗೆ ಒಂದು ತೀವ್ರತರವಾದ ಅಂತ್ಯ ಕೊಡುವ ಶೈಲಿ ತಮಿಳರಿಗೆ ಹೊಸದಲ್ಲ. ಹೊಸಬರನ್ನು ಇಟ್ಟುಕೊಂಡು ಇದೇ ಹಾದಿಯಲ್ಲಿ ಅವರು ಮಾಡಿದ ಬಹುತೇಕ ಚಿತ್ರಗಳು ಯಶಸ್ವಿಯಾಗಿವೆ. ಬೇರೆ ಭಾಷೆಗಳಿಗೆ, ಹೆಚ್ಚಾಗಿ ಕನ್ನಡಕ್ಕೆ ರೂಪಾಂತರವಾಗಿವೆ. ಯಾಕೆಂದರೆ ನಮ್ಮವರು ಆ ರೀತಿಯ ಕತೆಯನ್ನು ಮಾಡುವ ರಿಸ್ಕು ತೆಗೆದುಕೊಳ್ಳುವುದಿಲ್ಲ.
ಹಾಗಾಗಿ ಚಿತ್ರ ಇಷ್ಟವಾದರೆ ಅದರ ಕ್ರೆಡಿಟ್ಟೂ ಪೂರ್ಣವಾಗಿ ತಮಿಳು ಚಿತ್ರ ತಂತ್ರಜ್ಞರಿಗೆ ಸಲ್ಲಬೇಕಾಗುತ್ತದೆ. ಯಾಕೆಂದರೆ ಅಲ್ಲಿನ ಚಿತ್ರವನ್ನು ಯಥಾವತ್ತಾಗಿ ಕನ್ನಡೀಕರಿಸಿರುವ ನಿರ್ದೇಶಕ ಮಹೇಶ್ ರಾವ್ ಅದರಾಚೆಗೆ ಏನನ್ನೂ ಮಾಡಲು ಹೋಗಿಲ್ಲ. ಸುಮ್ಮನೆ ನೋಡಿಸಿಕೊಂಡು ಹೋಗುವ ಚಿತ್ರವಾಗಿ ಎಂದೆಂದೂ ನಿನಗಾಗಿ ಗಮನ ಸೆಳೆಯುತ್ತದೆಯೇ ಹೊರತು ಕಾಡುವ ಚಿತ್ರವಾಗುವುದಿಲ್ಲ.
ಚಿತ್ರದಲ್ಲಿ ಎರಡೂ ಜೋಡಿಗಳ ಕತೆಯಿದೆ. ಎರಡೂ ಭಿನ್ನ ಭಿನ್ನ ಪಾತ್ರಗಳ ಪ್ರೇಮವಿದೆ. ಮತ್ತು ಜೀವನದ ಆಕಸ್ಮಿಕವನ್ನು ಮತ್ತು ಅನಿಶ್ಚಿತೆಯನ್ನು ಸೂಚಿಸುವ ಅಪಘಾತವಿದೆ. ಚಿತ್ರ ತೆರೆದುಕೊಳ್ಳುವುದೇ ಅಪಘಾತದಿಂದ. ಹಾಗಾಗಿ ಕೊನೆಗೆ ಏನು ಎನ್ನುವ ಪ್ರಶ್ನೆಗೆ ಇಲ್ಲಿ ಹೆಚ್ಚು ಮಹತ್ವವಿಲ್ಲ. ಇರುವೆರೆಡು ಜೋಡಿಗಳಲ್ಲಿ ಯಾರು ಬದುಕುತ್ತಾರೆ ಎಂಬುದಷ್ಟೇ ಕುತೂಹಲಕಾರಿ ಪ್ರಶ್ನೆ ಎನ್ನಬಹುದು.
ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ ವಿವೇಕ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ತಕ್ಕ ಮಟ್ಟಿಗೆ ಪ್ರಯತ್ನಿಸಿದ್ದಾರೆ. ದೀಪಾ ಸನ್ನಿಧಿ,ಅನೀಸ್ ತೆಜೇಶ್ವರ್, ಸಿಂಧು ಲೋಕನಾಥ್ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಜೈ ಆನಂದ್ ಅವರ ಛಾಯಾಗ್ರಹಣ ಮತ್ತು ವಿ.ಹರಿಕೃಷ್ಣ ಅವರ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಎನ್ನಬಹುದು.
ಮೂಲ ಚಿತ್ರ ನೋಡಿಲ್ಲದೆ ಇರುವ ಪ್ರೇಕ್ಷಕರು ಒಮ್ಮೆ ನೋಡಬಹುದು. ಹಾಗೆ ಮೂಲ ಚಿತ್ರವನ್ನು ನೋಡಿರುವವರು ಕನ್ನಡದ ಚಿತ್ರ ಹೇಗಿರಬಹುದು ಎಂಬ ಕುತೂಹಲಕ್ಕಾಗಿಯಾದರೂ ಒಮ್ಮೆ ನೋಡಬಹುದು.

ಕೊನೆಯದಾಗಿ ಹೇಳುವುದಾದರೆ ಒಂದು ಚಿತ್ರವನ್ನು ನಿರ್ಮಿಸಬೇಕು ಎಂದುಕೊಳ್ಳುವ ನಿರ್ಮಾಪಕರು ಅದಕ್ಕಾಗಿ ಉತ್ತಮ ಕತೆಯನ್ನು ಹುಡುಕುವುದು ಸರಿ. ಆ ನಿಟ್ಟಿನಲ್ಲಿ ಒಂದೊಳ್ಳೆ ಕತೆಯ ಪರಭಾಷೆಯ ಚಿತ್ರವನ್ನು ರೀಮೇಕ್ ಮಾಡುವುದೂ ತಪ್ಪಲ್ಲ. ಆದರೆ ತೀರಾ ಸರಳವಾದ ಕತೆಯ ಚಿತ್ರವನ್ನು ಕನ್ನಡೀಕರಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದೇ ಪ್ರಶ್ನೆ. ? ನಿರ್ದೇಶಕ ಮಹೇಶ್ ರಾವ್ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ರೀಮೇಕ್ ಮಾಡುತ್ತಾ ಸಾಗುತ್ತಿರುವ ನಿರ್ದೇಶಕ. ಮೊನ್ನೆ ಕೇಸ್ ನಂಬರ್ 18/9 ಮಾಡಿದ್ದರು. ಈಗ ಎಂದೆಂದೂ ನಿನಗಾಗಿ, ಮುಂದಿನವಾರಕ್ಕೆ ಕ್ವಾಟಲೇ ಸತೀಶ ಮಾಡಿದ್ದಾರೆ. ಹೀಗೆ ಮುಂದುವರೆದರೆ ಅವರ ಹೆಚ್ಚುಗಾರಿಕೆ, ಸ್ವಂತಿಕೆ ಗಿಂತ ಸಿನಿಮಾ ಸಂಖ್ಯೆ ಹೆಚ್ಚಾಗಬಹುದಷ್ಟೇ..?

ಅತಿ ಅಪರೂಪ:

ಒಮ್ಮೊಮ್ಮೆ ವರವಾದವರೇ ಶಾಪವಾಗಿ ಬಿಡುತ್ತಾರೆ ಎಂಬುವುದಕ್ಕೆ ದಿನೇಶ್ ಬಾಬು ಸೂಕ್ತ ಉದಾಹರಣೆ ಎನ್ನ ಬಹುದು.ಅತ್ಯುತ್ತಮ ತಂತ್ರಜ್ಞರಾದ ಬಾಬು ಕನ್ನಡದಲ್ಲಿ ಸುಪ್ರಭಾತ ನಿರ್ದೇಶನ ಮಾಡಿದ್ದವರು. ಇದು ಸಾಧ್ಯ ಎನ್ನುವ ಚಿತ್ರವನ್ನು ಕೇವಲ ನಲವತ್ತೆಂಟು ಗಂಟೆಗಳಲ್ಲಿ ನಿರ್ದೇಶನ ಮಾಡಿ ಸಾಧಿಸಿದ್ದವರು. ಆದರೆ ಅವರ ಸೆಕಂಡ್ ಇನ್ನಿಂಗ್ಸ್ ಕೇವಲ ದುಡ್ಡಿಗಾಗಿ ಮಾಡಿದ್ದೇನೋ ಎನಿಸುವಷ್ಟರ ಮಟ್ಟಿಗೆ ರೀಲು ಸುತ್ತಲು ಶುರು ಮಾಡಿಬಿಟ್ಟರು. ಎರಡು ಕ್ಯಾಮೆರಾ, ಒಂದೇ ಮನೆ ಒಂದಷ್ಟು ಕಲಾವಿದರು ಒಂದು ಸರಳವಾದ ಕತೆಯಲ್ಲದ ಕತೆಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಾ ಸಾಗಿ ಗುಣಮಟ್ಟವನ್ನು ಕೇಳಬೇಡಿ ಎಂದರು. ಅತಿ ಅಪರೂಪ ಕೂಡ ತಾಂತ್ರಿಕವಾಗಿ ತೀರಾ ಸಾಮಾನ್ಯವಾದ ಚಿತ್ರ. ಹಾಗಾಗಿ ಈ ಚಿತ್ರವೂ ಆ ಕಾಲದಲ್ಲೇ ಬಂದದ್ದು ಎನ್ನಬಹುದು. ಚಿತ್ರಕ್ಕೆ ಮನೋಮುರ್ತಿ ಸಂಗೀತ ಪ್ರೇಂ, ಅನಂತನಾಗ್, ಐ೦ದ್ರಿತಾ ರೈ ಶರಣ್ ಎಲ್ಲಾ ಇದ್ದರೂ ಎಲ್ಲೂ ಹೊಸತನ ಕಾಣುವುದಿಲ್ಲ. ಕತೆ ಕಾಡುವುದಿಲ್ಲ. ಹಾಗಂತ ಇದರಲ್ಲಿ ಅವರ ಅವರ ಅಭಿನಯದ ತಪ್ಪು ಹುಡುಕುವ ಹಾಗಿಲ್ಲ. ಕತೆ ಹಾಗೆಯೇ ಇದೆ. ಇರುವ ಕಲಾವಿದರನ್ನು ಇಟ್ಟುಕೊಂಡು ಒಂದು ಸಿನಿಮಾವನ್ನು ಮಾಡಿಯೇ ಬಿಡಬೇಕು ಎನ್ನುವ ಧಾವಂತ ನಿರ್ದೇಶನದಲ್ಲಿ ಕಾಣುವುದರಿಂದ ಒಂದು ಕತೆ ಅಂದುಕೊಂಡು ಸುಮ್ಮನೆ ದೃಶ್ಯಗಳನ್ನು ಹೆಣೆದಿರುವುದು ಕಾಣುತ್ತದೆ. ಹಾಗಾಗಿ ಇಲ್ಲಿ ಏನೇ ಆಕ್ಷೇಪಣೆ ಇದ್ದರೇ ಅದಕ್ಕೆ ಕಾರಣ ನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಮತ್ತದು ಅವರಿಗೆ ಸಲ್ಲುತ್ತದೆ.
ನಾಯಕ ಅಪ್ಪನ ಪ್ರೀತಿಯಿಂದ ತಿರಸ್ಕೃತ ನೊಂದ ಜೀವಿ. ಅಪಘಾತದ ನೆಪದಲ್ಲಿ ನಾಯಕಿ ಸಿಗುತ್ತಾಳೆ. ಆಕೆ ಕೂಡ ಕುಟುಂಬದಿಂದ ನೊಂದಿರುವವಳು. ಸರಿ. ಮುಂದೇನು ಎಂದರೆ ಭೇಟಿ. ಅಲ್ಲಲ್ಲಿ ಸಿಗುವ ನಾಯಕ ನಾಯಕಿ, ಸಿಕ್ಕಾಗ ಏನಾದರೂ ನಡೆಯಬೇಕಲ್ಲ ಹಾಗಾಗಿ ಹಾಡು ಹೊಡೆದಾಟ ಜಗಳ ನಡೆಯುತ್ತವೆ. ಇವೆಲ್ಲವೂ ಸಿನಿಮಾದ ಉದ್ದವನ್ನು ಕಾಪಾಡಲು ಎಂಬುದು ಪ್ರೇಕ್ಷಕನಿಗೆ ಗೊತ್ತಾಗುವುದು ಚಿತ್ರದ ನಿಜವಾದ ತಿರುವು ಎಷ್ಟೋ ಹೊತ್ತಿನ ನಂತರ ಬಂದ ಮೇಲೆ.ಅದೇನು ಎಂಬುವ ಕುತೂಹಲ ತಣಿಸಬೇಕಾದರೆ ಒಮ್ಮೆ ಚಿತ್ರವನ್ನೊಮ್ಮೆ ನೋಡಬಹುದು.ಇಲ್ಲಿ ನಾಯಕ ನಾಯಕಿ ಭೇಟಿ ಜಗಳ ಮಜಾ ಕೊಡುವುದರಲ್ಲಿ ಸೋಲುತ್ತವೆ. ಹಾಗೆಯೇ ಹೆಸರು ಕೇಳದೆ ಹೇಳದೆ ಹುಟ್ಟುವ ಪ್ರೀತಿಯನ್ನು ನವಿರಾಗಿ ರೂಪಿಸಬಹುದಿತ್ತು. ಆದರೆ ಚಿತ್ರಕತೆಗಾರರು ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಸೀದಾ ಸಾದಾ ಮಾಡಿಬಿಟ್ಟಿದ್ದಾರೆ. ಹಾಗಾಗಿ ಚಿತ್ರವೂ ಅದರ ನಿರೂಪಣೆಯೂ ಸೊರಗಿದೆ.

ಹಾಗೆ ನೋಡಿದರೆ ಇದು ಸ್ಟಾಕ್ ಕ್ಲಿಯರನ್ಸ್ ಚಿತ್ರ ಎನ್ನಬಹುದು. ಚಿತ್ರ ಶುರುವಾಗಿ ಮುಗಿದು ವರ್ಷಗಳೇ ಕಳೆದಿವೆ ಈಗ ಬಿಡುಗಡೆಯಾಗಿದೆ ಎನ್ನುವುದಾದರೂ ವರ್ಷಗಟ್ಟಲೆ ಡಬ್ಬದಲ್ಲಿದ್ದು ಬಿಡುಗಡೆಯಾಗಿ ಜಯಭೇರಿ ಭಾರಿಸಿದ ಚಿತ್ರಗಳ ಉದಾಹರಣೆ ಇದೆ. ಕತೆ ಚಿತ್ರಕತೆ ಮುಖ್ಯ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಆದರೆ ಅತಿ ಅಪರೂಪ ಅಪರೂಪ ಎನಿಸದೇ ಸೀದಾ ಸಾದಾರಣ ಚಿತ್ರವಾಗಲು ಕತೆ ಚಿತ್ರಕತೆಯೇ ಕಾರಣ ಎನ್ನಬಹುದು.