ದ್ವಂದ್ವಾರ್ಥದ ಸಂಭಾಷಣೆಗಳು ಒಮ್ಮೆಲೇ ಚುರುಕು ನಗು
ಚಿಮ್ಮಿಸಬಹುದು. ಆದರೆ ಅದೇ ಹಾಸ್ಯವಾಗಲು ಸಾಧ್ಯವಿಲ್ಲ. ಆದರೆ ಇತ್ತೀಚಿನ ನಮ್ಮ ಚಿತ್ರ ಕರ್ಮಿಗಳು
ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಹಾಸ್ಯವೆಂದರೆ ದ್ವಂದ್ವಾರ್ಥ, ನಗಿಸಬೇಕಾದರೆ ಹಾಸಿಗೆ ಮಂಚದ
ಸಂಭಾಷಣೆಗಳು, ನೇರವಾಗಿ ಸೊಂಟದ ಆಸುಪಾಸೆ ಹರಿದಾಡುವ ಸಂಭಾಷಣೆಗಳು ಎಂಬ ತಪ್ಪುಕಲ್ಪನೆಯನ್ನೇ ಸರಿ
ಎಂದು ನಂಬಿಬಿಟ್ಟಿರುವಂತಿದೆ. ಚಡ್ಡಿದೋಸ್ತ್ ನೋಡುತ್ತಾ ಹೋದಂತೆ ಈ ಮೇಲಿನ ಮಾತುಗಳು
ಮನಸ್ಸಿನಲ್ಲಿ ಮೂಡಿ ಹೆಮ್ಮರವಾಗುವುತ್ತದೆ. ಯಾಕೆಂದರೆ ಇಲ್ಲಿ ನಿರ್ದೇಶಕರು ಪ್ರತಿ ದೃಶ್ಯದಲ್ಲೂ
ನಗಿಸುವ ಪ್ರಯತ್ನ ಮಾಡಿದ್ದಾರೆ. ಅದಕ್ಕವರು ಮೊರೆ ಹೊಕ್ಕಿರುವುದು ಮಾತುಗಳಿಗೆ. ಮತ್ತು ಹೆಚ್ಚಾಗಿ
ದ್ವಂದ್ವಾರ್ಥಕ್ಕೆ. ಹಾಗಾಗಿ ಮೊದ ಮೊದಲಿಗೆ ಒಂದಷ್ಟು ನಗು ಹುಟ್ಟಿಸಿದರೂ ಬರು ಬರುತ್ತಾ ಥೂ ಎಂಬ
ಮಾತು ಸಭ್ಯ ಪ್ರೇಕ್ಷಕರಿಂದ ಬರಬಹುದಾದರೂ ಮುಂದಿನ ಪಡ್ಡೆಗಳು ಶಿಳ್ಳೆ ಹಾಕಬಹುದೇನೋ.
ಚಿತ್ರಕ್ಕೆ ಒಂದು ಕತೆಯಿದೆ. ಆದರೆ ಅದರಲ್ಲಿ ಗಟ್ಟಿತನ
ನಿರೀಕ್ಷಿಸಬಾರದು.ಮೊದಲೇ ಹೇಳಿದಂತೆ ನಿರ್ದೇಶಕ ಶೇಖರ್ ದೃಶ್ಯದ ಗಟ್ಟಿತನಕ್ಕಿಂತ ಅದು
ಸಿನೆಮಾಕ್ಕೆ ಪೂರಕವಾಗುತ್ತದೆಯೇ ಇಲ್ಲವೇ ಎಂಬ ಪ್ರಶ್ನೆಗಿಂತ ನಗಿಸಿದರೆ ಸಾಕು ಎಂಬ ಉಮ್ಮೆದಿಗೆ
ಬಿದ್ದಿದ್ದಾರೆ. ಹಾಗಾಗಿ ಅವರು ಜಿದ್ದಿಗೆ ಬಿದ್ದಂತೆ ಇಬ್ಬರು ನಟರುಗಳ ಬಾಯಲ್ಲೂ ಪುಂಖಾನುಪುಂಖ
ಮಾತುಗಳನ್ನು ಹರಿಯಬಿಟ್ಟಿದ್ದಾರೆ.
ಇಬ್ಬರು ಗೆಳೆಯರು. ಒಂದೇ ಊರಿನವರು. ಪಟ್ಟಣದಲ್ಲಿ
ಒಂದಾಗುತ್ತಾರೆ. ಇಬ್ಬರ ಮನಸ್ಥಿತಿ ಬೇರೆ ಬೇರೆಯಾದರೂ ಪರಿಸ್ಥಿತಿ ಒಂದೇ ಆಗಿರುತ್ತದೆ. ಮತ್ತು
ಇಬ್ಬರ ಆಶಯವೂ ಒಂದೆ.ಚೆನ್ನಾಗಿ ಬದುಕುವುದು. ಒಬ್ಬ ಕಳ್ಳತನ ಮಾಡುತ್ತಾನೆ. ಮತ್ತೊಬ್ಬ
ನೀಯತ್ತಿನಲ್ಲಿ ಸಂಪಾದಿಸಬೇಕೆಂದುಕೊಳ್ಳುತ್ತಾನೆ. ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಮುಂದೆ
ಸಾಗುತ್ತಾರೆ. ಮುಂದೇನಾಗುತ್ತದೆ..ಅದನ್ನು ಚಿತ್ರಮಂದಿರದಲ್ಲಿ ತಿಳಿದುಕೊಳ್ಳಬಹುದು.
ಪ್ರಥಮಾರ್ಧ ಸಿನಿಮಾವನ್ನು ಸಹಿಸಿಕೊಳ್ಳಬಹುದು. ಹಾಗೆಯೇ
ಕೆಲವೆಡೆ ನಗಲೂ ಬಹುದು. ಆದರೆ ಎರಡನೆಯ ಭಾಗಕ್ಕೆ ಈ ಮಾತು ಅನ್ವಯಿಸುವುದಿಲ್ಲ. ಇಲ್ಲಿ ಬರುವ
ಪ್ರತಿಯೊಬ್ಬ ಕಲಾವಿದರೂ ನಾವು ನಗಿಸಲೇ ಬಂದಿದ್ದೇವೆ ಎಂಬುದನ್ನು ಮೈಮನಗಳಲ್ಲಿ ತುಂಬಿಕೊಂಡಂತೆ
ನಟಿಸಿದ್ದಾರೆ. ಮಾತಾಡುವಾಗ ಅರಚಿದ್ದಾರೆ. ಸುಖಾಸುಮ್ಮನೆ ಆಂಗಿಕ ಅಭಿನಯ ಮಾಡಿದ್ದಾರೆ. ಫಲಿತಾಂಶ
ಹಾಸ್ಯ ಕಿರಿಕಿರಿಯಾಗಿದೆ. ಸಿನೆಮಾ ಯಾವ ಭಾವವನ್ನೂ ಸರಿಯಾಗಿ ಅಭಿವ್ಯಕ್ತಗೊಳಿಸದೇ ಹಾಗೆ
ಕಿರಿಕಿರಿಯಲ್ಲಿಯೇ ಮುಗಿದುಹೋಗುತ್ತದೆ.
ರಂಗಾಯಣ ರಘು ಮತ್ತು ಸಾಧುಕೋಕಿಲ ತಮಗೆ ಸಿಕ್ಕಿದ
ಪಾತ್ರವನ್ನು ಅವರ ಮಾತಿನಲ್ಲಿಯೇ ಹೇಳಬೇಕೆಂದರೆ ಅರೆದುಕುಡಿದಿದ್ದಾರೆ. ಉಳಿದ ಪಾತ್ರಗಳು ಬಂದು
ಮಾತಾಡಿ ಹೋಗುತ್ತವೆ. ಸಂಗೀತ ಸಾಹಿತ್ಯ ಚಿತ್ರದಲ್ಲಿದೆ.
ನಿರ್ದೇಶಕ ಪಿಸಿ ಶೇಖರ್ ತಮ್ಮ ಮೊದಲ ಚಿತ್ರ ನಾಯಕದಲ್ಲಿ
ತೀರಾ ಸಣ್ಣಕಥೆಗೆ ರೋಚಕ ಚಿತ್ರಕತೆ ಬರೆದು ಭರವಸೆ ಹುಟ್ಟಿಸಿದ್ದರು. ಆನಂತರ ರೋಮಿಯೋ ಮಾಡಿದ್ದರು.
ಅದೂ ನಪಾಸಾದಾಗ ಹಾಸ್ಯದತ್ತ ಮುಖ ಮಾಡಿದ್ದಾರೆ. ಆದರೆ ಹಾಸ್ಯಕ್ಕೆ ಬೇಕಾದ ತಯಾರಿ ಮತ್ತು
ಹಾಸ್ಯದೆಡೆಗೆ ಸರಿಯಾದ ಪರಿಕಲ್ಪನೆ ಇಲ್ಲದಿರುವುದು ಸುಮ್ಮನೆ ವಾಹಿನಿಗಳಲ್ಲಿನ ಹರಟೆ, ಮಾತುಗಳ
ಸಮಾರಂಭಾದಂತಾಗಿದೆ ಎನ್ನುವುದು ಹಾಸ್ಯದ ಸಂಗತಿಯಲ್ಲ.