Pages

Saturday, April 26, 2014

ಮಳ್ಳಿ:

ಒಬ್ಬ ನಿರ್ದೇಶಕ ಚಿತ್ರ ಮಾಡಲು ಹೊರಟಾಗ ತಾನು ಯಾವ ವಿಭಾಗದ ಚಿತ್ರ ಮಾಡುತ್ತಿದ್ದೇನೆ. ಮತ್ತು ಅದಕ್ಕೆ ನ್ಯಾಯ ಒದಗಿಸುತ್ತಿದ್ದೇನೆಯೇ ಎನ್ನುವ ಎರಡು ಪ್ರಶ್ನೆಗಳನ್ನು ತನಗೆ ಹಾಕಿಕೊಂಡು ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕಾಗುತ್ತದೆ. ಯಾಕೆಂದರೆ ಅದು ಯಾವುದೇ ವಿಭಾಗವಾಗಲಿ, ಅದಕ್ಕೆ ಅದರದೇ ಆದ ಬೇಕು ಬೇಡಗಳು ಇದ್ದೇ ಇರುತ್ತವೆ. ಮಳ್ಳಿ ಚಿತ್ರದಲ್ಲಿ ಆಗಿರುವುದು ಅದೇ. ಚಿತ್ರದ ಪ್ರಚಾರ ಚಿತ್ರಗಳು ಅದೊಂದು ಶೃಂಗಾರ ದೃಶ್ಯ ಸಹಿತದ ಚಿತ್ರ ವಿರಬೇಕು ಎನ್ನುವ ಭ್ರಮೆ ಮೂಡಿಸುತ್ತವೆ. ಆದರೆ ಆ ಭ್ರಮೆ ಭ್ರಮೆಯಾಗಿಸಿಬಿಟ್ಟಿರುವ ನಿರ್ದೇಶಕರು ಚಿತ್ರವನ್ನು ಯಾವ ವಿಭಾಗಕ್ಕೂ ಸೇರಿಸಲಾಗದಂತೆ ಮಾಡಿದ್ದಾರೆ.
ಒಬ್ಬ ಫೋಟೋಗ್ರಾಫರ್ ಮದುವೆಯ ಫೋಟೋ ತೆಗೆಯಲು ಬೆಂಗಳೂರಿಗೆ ಬರುತ್ತಾನೆ. ಅದೊಂದು ಮುದುಕ –ಹುಡುಗಿಯ ಮದುವೆ. ಈ ನಡುವೆ ಇವನಿಗೊಂದು ಹುಡುಗಿ ಸಿಕ್ಕಿ ಪ್ರೀತಿಯಾಗುತ್ತದೆ.ಆನಂತರ ಮುದುಕನ ಮದುವೆಯಾದ ಇನ್ನೊಬ್ಬಳು ಇವನ ಹಿಂದೆ ಬೀಳುತ್ತಾಳೆ. ಮುಂದೆ..? ಏನು ಬೇಕಾದರೂ ಆಗಬಹುದು. ಏನಾದರೂ ರಸವತ್ತಾಗಿ ಆಗಬೇಕಲ್ಲವೇ? ಅದ್ಯಾವುದೂ ಆಸಕ್ತಿಕರ ವೆನಿಸದೆ ನೀರಸ ಎನಿಸುತ್ತದೆ. ಆ ಮೂಲಕ ನಿರ್ದೇಶಕರು ಏನೋ ಸುತ್ತಿದರೆ ಸಾಕು ಎನ್ನುವ ಮನೋಭಾವದಿಂದ ಸಿನಿಮ ಮಾಡಿರುವುದು ಎದ್ದು ಕಾಣುತ್ತದೆ. ಚಿತ್ರಕತೆ ಸಂಭಾಷಣೆ ಯಾವುದರ ಮೇಲೆಯೂ ಹಿಡಿತವಿಲ್ಲದ ಈ ಚಿತ್ರದ ನಿರೂಪಣೆಯಲ್ಲಿ ಹೊಸತನ, ಭಿನ್ನತೆ ಹೋಗಲಿ ಲವಲವಿಕೆ ನಿರೀಕ್ಷಿಸಿದರೂ ಅದು ಮಹಾಪರಾಧವಾಗುತ್ತದೆ. ಹಾಗಾಗಿ ಏನೋ ಬಂದಿದ್ದೇವೆ ಸೀಟಲ್ಲಿ ಸುಮ್ಮನೆ ಕುಳಿತು ಮೊಬೈಲಿನಲ್ಲಿ ಗೇಮ್ ಆಡಿಕೊಂಡಾದರೂ ಕಾಲ ಕಳೆಯಬಹುದು ಅಥವಾ ಕುರ್ಚಿಯಲ್ಲಿ ನಿದ್ರೆಯನ್ನಾದರೂ ಮಾಡಬಹುದು. ಅದರಿಂದ ಏನೂ ವ್ಯತ್ಯಾಸ ಆಗುವುದಿಲ್ಲ. ಮತ್ತು ಈ ಎರಡೂ ಚಿತ್ರ ನೋಡುವುದಕ್ಕಿಂತ ಸಹನೀಯ ಅಂಶಗಳು ಎನ್ನಬಹುದು.
ಛಾಯಾಗ್ರಹಣ, ಸಂಕಲನ, ನಿರ್ದೇಶನ, ಸಂಗೀತ ಯಾವ ವಿಭಾಗದ ಬಗ್ಗೆಯೂ ಕನಿಷ್ಠ ಮಾತನಾಡುವುದು ಈ ಚಿತ್ರದ ವಿಷಯದಲ್ಲಿ ಸಲ್ಲ. ಎಲ್ಲವೂ ಅಷ್ಟಕಷ್ಟೇ ಮತ್ತು ಕಳಪೆ. ಇನ್ನು ಅಭಿನಯದಲ್ಲಿ ಏನೇನೂ ಇಲ್ಲ. ಕೊತ್ತ ಒಂದಷ್ಟು ಮಾತನ್ನಾಡಿರುವ ನಟರುಗಳು ಆದರಾಚೆಗೆ ಸುಮ್ಮನಿದ್ದಾರೆ.
ಚಿತ್ರದ ಕೊನೆಯಲ್ಲಿ ಮೋಸಹೋಗುವ ಬಗೆಯ ಬಗ್ಗೆ ಸಂದೇಶ ಬರುತ್ತದೆ. ಅದರಲ್ಲಿ ಇಂತಹ ಚಿತ್ರ ನೋಡುವ ಬಗೆಯೂ ಇದೆ ಎನ್ನುವ ನೇರ ಸಂದೇಶವಿರಬಹುದು ಎನಿಸುವುದು ಮಳ್ಳಿ ಯ ವಿಶೇಷ ಎನ್ನಬಹುದು.

ಸಾಮಾಜಿಕ ಹೊಣೆಗಾರಿಕೆ, ಒಂದು ಸಣ್ಣ ಕನಸೂ ಮತ್ತು ಚಿತ್ರರಂಗದ ಆಳ ಅರಿವಿನ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ವ್ಯಕ್ತಿಯೊಬ್ಬ ಇಂತಹ ನೀರಸ ಚಿತ್ರ ಮಾಡಬಹುದು.ಏನೂ ಇಲ್ಲದ ಏನೂ ಅಲ್ಲದ ಮಳ್ಳಿ ಅತೀ ಸಾದಾರಣ ಎನಿಸಿಕೊಳ್ಳಲೂ ಹರಸಾಹಸ ಮಾಡಬೇಕಾದ ಚಿತ್ರ. 

ಪುಲಕೇಶಿ

ಅವನು ದಕ್ಷ ಪೋಲಿಸ್ ಅಧಿಕಾರಿ. ಎಲ್ಲಾ ಕರ್ತವ್ಯ ಮುಗಿಸಿ ಮನೆಗೆ ಹೋದರೆ, ಇವನು ಮನೆಯನ್ನೇ ಮನೆಯ ಜನರನ್ನೇ ಪೋಲಿಸ್ ಕೆಲಸಕ್ಕೆ ಬಳಸಿಕೊಳ್ಳುತ್ತಾನೆ. ಅಂತವನು ವೀರಪ್ಪನ್ ಬೇಟೆಯಾಡಲು ಹೋಗಿ ಸಾಯುತ್ತಾನೆ. ಮುಂದೆ ಆತನ ಮಗ ಪೋಲಿಸ್ ಅಧಿಕಾರಿಯಾಗುತ್ತಾನೆ. ತನ್ನೂರಿನಲ್ಲಿ ತನ್ನ ಖದರ್ ತೋರಿಸಿ ಬೆಂಗಳೂರಿಗೆ ಬರುತ್ತಾನೆ. ಅಲ್ಲೊಬ್ಬ ಖಳನಿದ್ದಾನೆ. ಮಹಾನ್ ದುಷ್ಟ. ಬೆಂಗಳೂರಿನ ಸಂತೋಷ್ ಚಿತ್ರಮಂದಿರದ ಎದುರಿಗೆ ಲೈವ್ ಬ್ಯಾಂಡ್ ಕಟ್ಟಬೇಕೆನ್ನುವ ಆಸೆ ಅವನದು. ಹಾಗೆ ನೋಡಿದರೆ ಅದು ಅವನ ಮಹದಾಸೆ ಅಲ್ಲ. ಅವರಪ್ಪನದು. ಅದನ್ನು ಈಡೇರಿಸಲು ಏನನ್ನೂ ಬೇಕಾದರೂ ಮಾಡುತ್ತಾನೆ ಈ ತಂದೆಗೆ ತಕ್ಕ ಮಗ. ಮುಖ್ಯ ಮಂತ್ರಿ ಗೃಹ ಮಂತ್ರಿ, ಅಬಕಾರಿ ಮಂತ್ರಿ ಎಲ್ಲಾ ಭ್ರಷ್ಟ ರಿಂದ ಅನುಮತಿ ಪಡೆದ ಅವನಿಗೆ ಎಸಿಪಿ ಯಿಂದ ಒಂದು ಸಹಿ ಆಗಬೇಕು. ಅದಾದರೆ ಅವನ ಆಸೆ, ಅಪ್ಪನ ಕನಸು ಈಡೇರುತ್ತದೆ. ಆದರೆ ಅದಕ್ಕೆ ಆಸ್ಪದ ಕೊಡುವನೇ ನಮ್ಮ ನಾಯಕ?
ಒಂದು ಕಳ್ಳ ಪೋಲಿಸ್ ದುಷ್ಟ ಸಂಹಾರದ ಚಿತ್ರಕ್ಕೆ ಕತೆ ಏನು ಬೇಕೋ ಹೇಗಿರಬೇಕೋ ಹಾಗಿದೆ ಪುಲಿಕೇಶೀ ಚಿತ್ರದಲ್ಲಿ. ಆದರೆ ಬರೀ ಕತೆಯೊಂದೆ ಸಿನಿಮಾ ಅಲ್ಲವಲ್ಲ. ಸಿನಿಮಾ ಎಂದ ಮೇಲೆ ಇತರ ವಿಭಾಗಗಳೂ ಅಷ್ಟೇ ಮುಖ್ಯವಾದ ಅಂಗಗಳೇ.
ಹೀಗಿರುವ ಕತೆಯನ್ನು ಹಿಡಿದಿಡುವ ಯಾವ ಪ್ರಯತ್ನವೂ ಚಿತ್ರಕತೆ ಮಾಡಿಲ್ಲ. ದೃಶ್ಯ ರಚನೆಯಲ್ಲಿ ಬಾಲಿಶತನ ಎದ್ದು ಕಾಣುತ್ತದೆ. ಒಂದು ಸಣ್ಣ ಸಾಮಾನ್ಯ ಜ್ಞಾನವನ್ನೂ ಇಟ್ಟುಕೊಳ್ಳದೆ ಇಷ್ಟ ಬಂದ ಹಾಗೆ ಸಿನಿಮಾ ಮಾಡಿದ್ದಾರಾ? ಚಿತ್ರಕತೆ ಮಾಡಿದ್ದಾರಾ..? ಎನ್ನುವ ಅನುಮಾನ ಹುಟ್ಟಿಸುವ ಚಿತ್ರಕತೆ ಸಂಭಾಷಣೆ ಸ್ವಲ್ಪ ಹೊತ್ತಿನಲ್ಲಿಯೇ ಆ ಅನುಮಾನವನ್ನು ಸತ್ಯ ಎಂಬುದಾಗಿ ಸಾಕ್ಷಿ ಸಮೇತ ನಿರೂಪಿಸುತ್ತದೆ.
ಇನ್ನು ಕಲಾವಿದರ ಅಭಿನಯದ ವಿಷಯಕ್ಕೆ ಬರೋಣ. ಮೊದಲಿಗೆ ನಾಯಕ ಭರತ್ ಸರ್ಜಾ. ದೇಹವನ್ನು ಹುರಿ ಗೊಳಿಸಿ ಗಟ್ಟಿಗನಾಗಿ ಕಾಣುವ ಭೀಮದೇಹಿ ನಾಯಕ ಅಭಿನಯಕ್ಕೆ ಬಂದರೆ ಮರದ ಕೊರಡು. ಯಾವುದೇ ಸನ್ನಿವೇಶದಲ್ಲೂ ಒಂದೇ ಭಾವ. ಮಾತುಗಳನ್ನು ಹೇಳುವಾಗ ಕೇಳುವಾಗ ಬೈಯ್ಯುವಾಗ, ಅಳುವಾಗ, ನಗುವಾಗ..ಉಹೂ ಅವರು ಬದಲಾಯಿಸುವುದಿಲ್ಲ. ಸುಮ್ಮನೆ ಗಾಜಿನ ನಿರ್ಲೀಪ್ತ ಕಣ್ಣು ಬಿಟ್ಟು ಸುಮ್ಮನಿರುತ್ತಾರೆ. ಉಳಿದ ತಾರಾಗಣದಲ್ಲಿ ಬೆರೆಳೆಣಿಕೆಯ ನಟರುಗಳು ಅಭಿನಯಿಸಿದ್ದಾರೆ. ಉಳಿದವರು ಅಭಿನಯ...ಉಹೂ ಸುಮ್ಮನಿದ್ದಾರೆ. ಮಾತುಗಳನ್ನು ಆಡಿದ್ದಾರೆ. ಛಾಯಾಗ್ರಾಹಕ ಸುಮ್ಮನೆ ಅದನ್ನು ಸೆರೆ ಹಿಡಿದಿದ್ದಾನೆ. ಅಷ್ಟೇ.
ತಾಂತ್ರಿಕವಾಗಿ ಚಿತ್ರ ಹೇಳಿಕೊಳ್ಳುವ ಹಾಗೂ ನೋಡುವ ಹಾಗೂ ಇಲ್ಲ. ಅಲ್ಲಲ್ಲಿ ಕಡಿಮೆ ಗುಣಮಟ್ಟದ ಸ್ಟಾಕ್ ಚಿತ್ರಣಗಳು ಮಸುಕು ಮಸುಕಾಗಿ ಕಿರಿ ಕಿರಿ ಹುಟ್ಟಿಸುತ್ತವೆ. ಯಾರೋ ಮಾತನಾಡಿದರೆ ಕ್ಯಾಮೆರಾ ಕೇಳಿಸಿಕೊಳ್ಳುವವನ ಮೇಲಿರುತ್ತದೆ.ಮತ್ತೆಲ್ಲೋ ಹರಿದಾಡುತ್ತದೆ. ಇನ್ನು ಹಿನ್ನೆಲೆ ಸಂಗೀತ ಅಲ್ಲಲ್ಲಿ ಭಾವ ಬಂಧಗಳನ್ನು ಲೆಕ್ಕಿಸದೆ ಕೂಗಾಡುತ್ತದೆ. ಸಂಕಲನವೂ ಅಷ್ಟೇ. ಒಮ್ಮೆ ಶರವೇಗದಿ ಸಾಗಿ amele ನಿಧಾನವಾಗುತ್ತದೆ. ಇದೆಲ್ಲವನ್ನೂ ನಿರ್ವಹಿಸಿರುವ ನಿರ್ದೇಶಕರೂ ನನಗಿಷ್ಟೇ ಆಗೋದು ಎನ್ನುವ ತರದಲ್ಲಿ ಸುಮ್ಮನಿದ್ದಾರೆ.
ಇಷ್ಟರ ಮೇಲೆ ಸಿನಿಮಾ ನೋಡುವ ಧೈರ್ಯ ನಿಮ್ಮದು.

ಕೊನೆ ಮಾತು: ಮೊದಲ ಸಿನೆಮಾವನ್ನು ನಿರ್ದೇಶನ ಮಾಡುವ ಮೊದಲು ಒಂದು ಸಣ್ಣ  ಮಟ್ಟಗಿನ ಪೂರ್ವ ತಯಾರಿ, ವಿಷಯ ಸಂಗ್ರಹಣೆ ಒಂದಷ್ಟು ಚರ್ಚೆ ಮತ್ತು ಒಂದು ಊರ ದೃಷ್ಟಿ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಏನಾಗುತ್ತದೆ ಎಂಬುದಕ್ಕೆ ಪುಲಕೇಶಿ ಉದಾಹರಣೆ ಎನ್ನಬಹುದು.