Pages

Saturday, February 21, 2015

. ಮೈತ್ರಿ

ನವಿಲಾದವರು ಎನ್ನುವ ಪ್ರಯೋಗಾತ್ಮಕ ಚಿತ್ರದ ಮೂಲಕ ಬೆಳಕಿಗೆ ಬಂದಂತಹ ಗಿರಿರಾಜ್ ಮೈತ್ರಿ ಚಿತ್ರವನ್ನು ನಮ್ಮ ಮುಂದಿಟ್ಟಿದ್ದಾರೆ. ಈ ಹಿಂದೆ ಜಟ್ಟ ಚಿತ್ರವನ್ನು ನೀಡಿದ್ದರಾದರೂ ಅದರ ಶೇಡ್ ಮತ್ತು ಈ ಚಿತ್ರದ ಭಾವ ಬೇರೆಬೇರೆಯಾಗಿರುವುದು ಗಿರಿರಾಜ್ ಒಂದೇ ನಿಟ್ಟಿನಲ್ಲಿ ಯೋಚಿಸುವುದಿಲ್ಲ ಎಂಬುದನ್ನು ವಿಶದಪಡಿಸುತ್ತದೆ.
ಮೈತ್ರಿ ಪೋಸ್ಟರ್ ತುಂಬಾ ಸ್ಟಾರ್ಗಳ ಚಿತ್ರಗಳಿವೆ. ಪುನೀತ್ ರಾಜಕುಮಾರ್, ಮೋಹನ್ ಲಾಲ್, ಅತುಲ್ ಕುಲಕರ್ಣಿ ಹೀಗೆ. ಇವರನ್ನೆಲ್ಲಾ ತಲೆಯಲ್ಲಿಟ್ಟುಕೊಂಡು ಸಿನಿಮಾ ಮಮ್ನ್ದಿರ ಹೊಕ್ಕರೆ ಪ್ರಾರಂಭದಲ್ಲಿ ನಿರಾಶೆ . ಏಕೆಂದರೆ ಇಲ್ಲಿ ಪುನೀತ್ ಆಗಲಿ ಮೋಹನ್ ಲಾಲ್ ಆಗಲಿ ಪೂರ್ಣ ಪ್ರಮಾಣದಲ್ಲಿ ಚಿತ್ರದಲ್ಲಿ ಆವರಿಸಿಕೊಳ್ಳುವುದಿಲ್ಲ. ಹಾಗೆಯೇ ತಮ್ಮ ಸ್ಟಾರ್ ಪವರ್  ಅನ್ನು ತೋರಿಸುವುದಿಲ್ಲ. ಸೀದಾ ಸಾದಾ ಆಗಿ ಹಾಗೆ ಬಂದು ಹೀಗೆ ಮಾತಾಡಿ ಸಾಗುತ್ತಾರೆ. ಆದರೆ ಅವರು ಬಂದದ್ದು ತೆರೆಯ ಮೇಲಿದಷ್ಟು ಹೊತ್ತೂ ಇಷ್ಟವಾಗಲು ಕಾರಣ ಅವರ ಪಾತ್ರ ಮತ್ತು ಮುಖ್ಯ ಪಾತ್ರವಾದ ಮಾಸ್ಟರ್ ಆದಿತ್ಯ ನ  ಬದುಕಿನಲ್ಲಿ ಅವರ ಪ್ರಾಮುಖ್ಯತೆ ಎನ್ನಬಹುದು.
ಕತೆಯ ಎಳೆ ಸರಳವಾದದ್ದು. ಸ್ಲಂ ಡಾಗ್ ನ ಜಮಾಲ್ ಮಲಿಕ್ ನಂತೆ ಬಾಲಾಪರಾಧಿ ತನ್ನ ನೆಚ್ಚಿನ ನಟ ನಡೆಸಿಕೊಡುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಆಯ್ಕೆಯಾಗುತ್ತಾನೆ. ಪ್ರಶ್ನೆಗಳು ಬಿಚ್ಚಿಕೊಳ್ಳುತ್ತಾ ಸಾಗಿದಂತೆ ಬದುಕಿನ ಮಜಲುಗಳು ತೆರೆದುಕೊಳ್ಳುತ್ತಾ ಸಾಗುತ್ತದೆ. ಕಾರ್ಯಕ್ರಮದ ಪ್ರಶ್ನೆ ನೇರ ಬದುಕಿನ ಪ್ರಶ್ನೆಯೇ ಆಗುತ್ತದೆ. ಹುಡುಗ ಕೋಟಿಗೆಲ್ಲುತ್ತಾನಾ?
ಚಿತ್ರದಲ್ಲಿ ಹಲವಾರು ಪಾತ್ರಗಳು ಸಾಂದರ್ಭಿಕವಾಗಿ ಬಂದುಹೋಗುತ್ತವೆ. ನಮ್ಮ ನಡುವಣ ಪಾತ್ರಗಳು ಅಲ್ಲಲ್ಲಿ ಕಾಣಸಿಗುತ್ತವೆ. ಹೊಸತಲ್ಲದ ಹೊಸಬರಲ್ಲದ ಬದುಕು ಜನರ ನಿತ್ಯಜೀವನದ ಬವಣೆ ಕಾಣಿಸುತ್ತದೆ. ಇಲ್ಲಿ ಗಿರಿರಾಜ್ ಎಲ್ಲವನ್ನೂ ಜಾಣ್ಮೆಯಿಂದ ನೇಯ್ದಿದ್ದಾರೆ. ಪ್ರೌಢಿಮೆ ಮೆರೆದಿದ್ದಾರೆ. ಅದೇ ಚಿತ್ರದ ಅಸ್ಥಿ ಮತ್ತು ಆಸ್ತಿಯಾಗಿದೆ.
ಹಾಗಂತ ಇಡೀ ಚಿತ್ರವನ್ನು ಸಂಪೂರ್ಣ ಮನರಂಜನಾ ಚಿತ್ರ ಎನ್ನುವ ಹಾಗಿಲ್ಲ. ಇಳಯರಾಜ ರ ಸಂಗೀತ ಯಾಕೋ ಇಷ್ಟೇನಾ ಎನ್ನಿಸುತ್ತದೆ. ಹಾಡುಗಳನ್ನು ಕತೆಗೆ ಹೊಸೆಯುವ ಪ್ರಯತ್ನ ಮಾಡಿದ್ದಾರಾದರೂ ಹಾಡುಗಳಲ್ಲಿ ಇನ್ನಷ್ಟು ಮಾಧುರ್ಯದ ಅಗತ್ಯವಿತ್ತು ಎನಿಸುತ್ತದೆ. ಅಲ್ಲದೆ ಒಂದಷ್ಟು ಕಮರ್ಷಿಯಲ್ ಅಂಶಗಳನ್ನೂ ಚಿತ್ರದ ಕತೆಯಲ್ಲಿ ಜಾಣ್ಮೆಯಿಂದ ಸೇರಿಸಲು ಯತ್ನಿಸಿರುವ ನಿರ್ದೇಶಕರ ಪ್ರಯತ್ನ ಖುಷಿ ಕೊಡುತ್ತದೆಯಾದರೂ ಅದು ಚಿತ್ರದಿಂದ ಒಂದು ಅಡಿ ಅಂತರದಲ್ಲಿಯೇ ಉಳಿಯುತ್ತದೆ. ಆದರೆ ಇದೆಲ್ಲದರ ಜೊತೆಯಲ್ಲಿಯೇ ತಣ್ಣಗೆ ನೋಡುತ್ತಾ ಅನುಭವಿಸುವ ಚಿತ್ರವನ್ನಾಗಿ ಮಾಡಿದ್ದಾರೆ ಗಿರಿರಾಜ್. ಕತೆ ಚಿತ್ರಕತೆಯಲ್ಲಿ ತಮ್ಮತನ ನಮ್ಮತನ ಮೆರೆದಿದ್ದಾರೆ. ಕೆಲವು ಕ್ಲೀಷಾತ್ಮಕ ಅಂಶಗಳನ್ನೂ ಅಗತ್ಯವೆನಿಸಿ ಅದರ ಕ್ಲೀಷಾತ್ಮಕ ಅಂಶವನ್ನು ಸಹನೀಯವಾಗಿಸಿದ್ದಾರೆ. ಹಾಗಾಗಿ ಮೈತ್ರಿ ಒಂದು ವಿಭಿನ್ನವಲ್ಲದ ಆದರೆ ಒಂದು ಪರಿಪೂರ್ಣ ಭಾವನಾತ್ಮಕ ಚಿತ್ರವಾಗಿ ನಮ್ಮ ಮುಂದಿದೆ. ಒಮ್ಮೆ ನೋಡಿಬಿಡಿ ಎಂದು ಧೈರ್ಯವಾಗಿ ಶಿಫಾರಸ್ಸು ಮಾಡಬಹುದಾದ ಚಿತ್ರವಿದು.

ಕೃಷ್ಣಕುಮಾರ್ ಕ್ಯಾಮೆರಾ ಕಣ್ಣಿಗೆ ಅಂತಹ ಕೆಲಸವಿಲ್ಲ. ಹಾಗೆಯೇ ಇಳಯರಾಜ ಸಂಗೀತ ತೆಗೆದುಹಾಕುವ ಹಾಗಿಲ್ಲ. ಇನ್ನುಳಿದಂತೆ ಪವರ್ ಸ್ಟಾರ್ ಪುನೀತ್, ಮೋಹನ್ ಲಾಲ್ ಅತುಲ್ ಕುಲಕರ್ಣಿ ಜೊತೆಗೆ ಪೋಷಕ ಪಾತ್ರಧಾರಿಗಳು ನಿರ್ದೇಶಕರು ಸೃಷ್ಟಿಸಿದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದೆಲ್ಲದ್ದಕ್ಕಿಂತ ಮುಖ್ಯವಾಗಿ ಮುಖ್ಯವಾಹಿನಿಯಿಂದ ಸ್ವಲ್ಪ ಆಚೆಗಿರುವ ಕಲಾತ್ಮಕ ಚಿತ್ರಗಿಂತ ಸ್ವಲ್ಪ ಈಚೆಗಿರುವ ಮೈತ್ರಿ ಚಿತ್ರಕ್ಕೆ ಹಣವನ್ನು ಖರ್ಚು ಮಾಡಿದ ನಿರ್ಮಾಪಕರಿಗೆ ಅವರ ಅಭಿರುಚಿಗೆ ಒಂದು ಸಲಾಮು ಹೊಡೆಯಲೇ ಬೇಕಾಗುತ್ತದೆ.

ಬೆಂಕಿ ಪಟ್ನ:

ಕನ್ನಡದಲ್ಲಿ ಬಹುದಿನಗಳ ನಂತರ ಒಂದು ಸಶಕ್ತ ಕತೆಯ ಚಿತ್ರವಾಗಿ ಹೊರಹೊಮ್ಮಿದೆ ಬೆಂಕಿಪಟ್ನ ಎಂಬುದು ಬೆಂಕಿಪಟ್ನ ಚಿತ್ರದ ಹೆಗ್ಗಳಿಕೆ ಎನ್ನಬಹುದು. ಪತ್ರಕರ್ತ ದಯಾನಂದ್ ತಮ್ಮ ಮೊದಲ ಚಿತ್ರಕ್ಕೆ ತಮ್ಮದೇ ಪ್ರಶಸ್ತಿ ವಿಜೇತ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದ ಕತೆ ನಡೆಯುವುದು ಬೆಂಕಿಪಟ್ನದಲ್ಲಿ. ಅಲ್ಲಿ ಚುರುಕಾಗಿ ಪಟಪಟನೆ ಮಾತನಾಡುವ ಅನಾಥ ಹುಡುಗಿ ಪಾಣಿ ಇದ್ದಾಳೆ. ತಾಯಿಯ ಸೆರಗಲ್ಲೇ ಬೆಳೆದ ಅಮಾಯಕ ಸೆಂಟ್ ಹನುಮಂತ ಇದ್ದಾನೆ. ಸಿನಿಮಾ ನಿರ್ದೇಶಕನಾಗಬೇಕು ಎಂದೆಲ್ಲಾ ಒದ್ದಾಡಿ ಇಲಿ ಪಾಷಾಣ ಮಾರುವ ಅರುಣ್ ಸಾಗರ್, ಡ್ರಮ್ ಸೆಟ್ ನಲ್ಲಿ ಜಿಲ್ ಜಿಲ್ ಭಾರಿಸುವ ತಮಾಷೆ ಇದ್ದಾರೆ. ಬಡತನದಲ್ಲಿಯೇ ತಮ್ಮ ಪಾಡಿಗೆ ತಾವಿದ್ದವರ ಬದುಕಲ್ಲಿ ಏನೇನೆಲ್ಲಾ ನಡೆಯುತ್ತದೆ ಎಂಬುದು ಚಿತ್ರದ ಕಥಾವಸ್ತು.
ಅನುಶ್ರೀ ಅವರ ಅಭಿನಯ ಚಿತ್ರದ ಮುಖ್ಯಾಂಶ. ಬಜಾರಿಯಾಗಿ ಅರಳು ಹುರಿದಂತೆ ಮಾತನಾಡಿ ಮನಗೆದ್ದರೆ, ಸೆಂಟಿಮೆಂಟ್ ದೃಶ್ಯಗಳಲ್ಲಿ ಕಣ್ಣಲ್ಲಿ ನೀರುತರಿಸುತ್ತಾರೆ. ಪ್ರತಾಪ್ ನಾರಾಯಣ್ ಪ್ರಥಮ ಚಿತ್ರದಲ್ಲೇ ಗಮನ ಸೆಳೆದಿದ್ದಾರೆ. ಅರುಣ್ ಸಾಗರ್, ಮಂಜುನಾಥ್ ಗೌಡ, ಜಹಾಂಗೀರ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರಕಾಶ್ ಬೆಳವಾಡಿ, ಬಿ.ಸುರೇಶ ಅವರುಗಳು ವಿಶಿಷ್ಟವಾದ ಅಚ್ಚರಿ ತರಿಸುವ ಪಾತ್ರಗಳಿಂದ ಇಷ್ಟವಾಗುತ್ತಾರೆ. ತಾಂತ್ರಿಕ ಅಂಶಕ್ಕೆ ಬಂದರೆ ಮೊಟ್ಟ ಮೊದಲಿಗೆ ಗಮನ ಸೆಳೆಯುವುದು ಛಾಯಾಗ್ರಹಣ. ಒಳಾಂಗಣ ಹೊರಾಂಗಣ ಎರಡರಲ್ಲೂ ನಿರಂಜನ್ ಬಾಬು ಅವರ ಕ್ಯಾಮೆರಾ ಕಣ್ಣು ಅದ್ಭುತವಾಗಿ ಕಾರ್ಯನಿರ್ವಹಿಸಿದೆ.a ಅಲ್ಲಲ್ಲಿ ಸ್ವಲ್ಪ ಹೆಚ್ಚು ಎನಿಸಿದರೂ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಹಾಡುಗಳಲ್ಲಿ ಮಾಧುರ್ಯ ಇರಬೇಕಿತ್ತು ಎನಿಸುತ್ತದೆ. ಸಂಕಲನದಲ್ಲಿ ಸ್ವಲ್ಪ ಚುರುಕುತನ ಇರಬೇಕಿತ್ತು ಎನಿಸುತ್ತದೆ.
2012 ರಲ್ಲಿ ಪ್ರಜಾವಾಣಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ್ದ ನಾಯಿಬೇಟೆ ಕತೆಯನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿರುವ ದಯಾನಂದ್ ಅದನ್ನು ಚಿತ್ರರೂಪಕ್ಕೆ ತರುವಲ್ಲಿನ ಕುಸುರಿ ಕೆಲಸದಲ್ಲಿ ಅಂತಹ ಯಶಸ್ಸು ಗಳಿಸಿಲ್ಲ. ಹಾಗಾಗಿಯೇ ಚಿತ್ರಕತೆ ಕೈಗೆ ಸಿಕ್ಕದೆ ಹಾರಾಡಿ ಬಿಡುತ್ತದೆ. ಪ್ರಾರಂಭವೇ ಒಂದಾದರೆ ಅಂತ್ಯವೇ ಒಂದಾಗಿ ಬಿಡುತ್ತದೆ. ಉದಾಹರಣೆಗೆ ಅದೊಂದು ದೃಶ್ಯದಲ್ಲಿ ಪಾನಿ ನಾವು ಬಡವರು ಬೀದಿ ದನ ಇದ್ದಾ ಹಾಗೆ ಯಾರು ಬೇಕಾದರೂ ಮೆಯಿಸೋಕೆ ನೋಡ್ತಾರೆ ಎಂಬರ್ಥದ ಮಾತುಗಳನ್ನು ಆಡುತ್ತಾ ತನಗಾದ ಶೋಷಣೆಯನ್ನು ವ್ಯಕ್ತ ಪಡಿಸುತ್ತಾಳೆ. ಆದರೆ ಇಡೀ ಚಿತ್ರದಲ್ಲಿ ಆಕೆಯ ಮಾತಿಗೆ ಯಾವುದೇ ಸಮರ್ಥನೆ ಸಿಗುವುದಿಲ್ಲ. ಬದಲಿಗೆ ಆಕೆಯನ್ನು ದಮನ ಮಾಡಲು ಪ್ರಯತ್ನಿಸುವವರೆಲ್ಲರ ಹಿಂದೆ ಬೇರೆಯದೇ ಆದ ವೈಯಕ್ತಿಕ ಕಾರಣವಿರುತ್ತದೆ. ಒಬ್ಬ ಕತೆಗಾರ ಸಿನಿಮಾ ನಿರ್ದೇಶಕನಾದಾಗ ಸಾಮಾನ್ಯವಾಗಿ ಆಗುವ ಏರುಪೇರೆಂದರೆ ಇದೆ. ತನ್ನೆಲ್ಲಾ ಕಲ್ಪನೆಯ ಪಾತ್ರವನ್ನು ವಿವರಿಸಲು ಕಾಗದದಲ್ಲಿ ಸುಲಭ. ಆದರೆ ಸಿನಿಮಾ ಮಧ್ಯಮ ಹೆಚ್ಚು ಬೇಡುತ್ತದೆ. ಬೆಂಕಿಪಟ್ನ ಚಿತ್ರದಲ್ಲಿ ಆಗಿರುವುದು ಅದೇ. ನಿರ್ದೇಶಕರ ಕಣ್ಣಲ್ಲಿ ಮತ್ತು ಅವರ ಕತೆಯ ಆಳದಲ್ಲಿ ವಿಷಯ ಇದೆ. ಅದನ್ನು ಸಿನಿಮಾ ರೂಪದಲ್ಲಿ ನೋಡುವಾಗಲೂ ಅದರಾಚೆ ಬಂದು ನೋಡಲು ಅವರಿಗೆ ಸಾಧ್ಯವಿಲ್ಲ ..ಹಾಗಾಗಿ ಎಲ್ಲವೂ ಅವರ ದೃಷ್ಟಿಯಲ್ಲಿ ಪರಿಚಿತ ಎನಿಸುತ್ತದೆ. ಆದರೆ ಒಬ್ಬ ಪ್ರೇಕ್ಷಕನಿಗೆ ಅದೆಲ್ಲವೂ ಹೊಸದಾದ್ದರಿಂದ ಆತ ಕಾರಣ ಕೇಳುತ್ತಾನೆ. ಹಾಗೆಯೇ ಚಿತ್ರಕತೆ ಆಗಾಗ ಹಳಿ ತಪ್ಪುತ್ತದೆ. ಇಡೀ ಚಿತ್ರದಲ್ಲಿ ನಿರ್ದೇಶಕರು ಏನನ್ನು ಹೇಳಲುಹೊರಟಿದ್ದಾರೆ ಎಂಬುದು ಸ್ಪಷ್ಟವಿದೆಯಾದರೂ ಗುರಿ ತಲುಪುವಲ್ಲಿನ ಪಯಣದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದು ಚಿತ್ರದಲ್ಲಿನ ಕುತೂಹಲಕ್ಕೆ ತಡೆಯಾಗುತ್ತದೆ.

ಒಟ್ಟಾರೆಯಾಗಿ ದಯಾನಂದ ತಮ್ಮ ಮೊದಲ ಚಿತ್ರಕ್ಕೆ ಶಕ್ತಿಯುತವಾದ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾದ ಒಂದಷ್ಟು ಒಳಹೊರಗುಗಳ ಬಗ್ಗೆ ಗಮನ ಹರಿಸಿದರೆ ಅವರ ಮುಂದಿನ ಚಿತ್ರದಲ್ಲಿ ಇನ್ನಷ್ಟು ನಿರೀಕ್ಷೆ ಮಾಡಬಹುದಾಗಿದೆ.