Pages

Saturday, July 5, 2014

ರೋಜ್:

ಕನ್ನಡದಲ್ಲಿ ಒಳ್ಳೆಯ ಕತೆಗಾರರಿಲ್ಲ ಎನ್ನುವವರಿಗೆ ರೋಜ್ ಸಿನಿಮಾ ಅಪವಾದ ಎನಿಸುತ್ತದೆ. ಹಾಗೆಯೇ ಇರುವ ಕತೆಯನ್ನು ಒಂದೊಳ್ಳೆ ಸಿನಿಮಾ ರೂಪಕ್ಕೆ ತರುವ ಚಿತ್ರಕತೆ ಬರಹಗಾರರ ಕೊರತೆಯಿದೆ ಎನ್ನುವುದನ್ನು ಸಾಬೀತು ಮಾಡುತ್ತದೆ. ಹೌದು. ಕತೆಗೆ ಪೂರಕವಾದ ಚಿತ್ರಕತೆಯ ಕೊರತೆ ಡಾಳಾಗಿ ಎದ್ದು ಕಾಣುವ ರೋಜ್ ಚಿತ್ರ ಆ ಕಾರಣದಿಂದಾಗಿಯೇ ನೀರಸ ಚಿತ್ರ ಎನ್ನುವ ಹಣೆಪಟ್ಟಿ ಹೊತ್ತು ಕೊಳ್ಳಬೇಕಾಗುತ್ತದೆ.
ಅವರಿಬ್ಬರೂ ಪ್ರೇಮಿಗಳು, ಅವನು ಮಧ್ಯಂತರದ ನಂತರ ಜೈಲು ಪಾಲು, ಅವಳು ಅವನಿಗಾಗಿ ಶಬರಿಯಾಗುತ್ತಾಳೆ, ಅಲ್ಲೊಬ್ಬ ಒಳ್ಳೆಯ ಜೈಲರ್, ಮತ್ತೊಬ್ಬ ಖಳ ಇವರ ನಡುವೆ ಪ್ರೀತಿ ಉಳಿಯುವುದೇ..? ಇದು ಸಾರಾಂಶ.
ಚಿತ್ರದ ಪ್ರಾರಂಭದಿಂದ ಮಧ್ಯಂತರದವರೆಗೆ ವ್ಯರ್ಥವಾಗಿ ಸಾಗುತ್ತದೆ. ಅಸಹ್ಯವೆನಿಸುವ ಹಾಸ್ಯ ನಗಿಸುವುದಿಲ್ಲ. ಬದಲಿಗೆ ನಿರ್ದೇಶಕರ ಅಭಿರುಚಿಯನ್ನು ವಿಶದ ಪಡಿಸಿ ನಮ್ಮನ್ನು ವಿಷಾದಕ್ಕೀಡು ಮಾಡುತ್ತದೆ. ಮೊದಲಾರ್ಧದಲ್ಲಿ ಒಂದು ಅಡ್ಡದಲ್ಲಿ ಕಾಲ ಕಳೆಯುವ ನಾಯಕನ ಗೆಳೆಯರ ಗುಂಪಿಗೆ ಯಾವುದೇ ಗುರಿಯಿಲ್ಲ. ನಿರ್ದೇಶಕರಿಗೂ ಯಾವುದೇ ಆಶಯವೂ ಇಲ್ಲ. ಇರಲಿ ಪ್ರೇಮಕತೆಯನ್ನಾದರೂ ನವಿರಾಗಿ ತೋರಿಸುತ್ತಾರಾ ಎಂದರೆ ಅದೂ ಇಲ್ಲ.
ತಮಿಳಿನಲ್ಲಿ ಒಂದಷ್ಟು ದುರಂತಮಯ ಪ್ರೇಮಕತೆಗಳು ಬರುತ್ತವೆ. ಅಂತ್ಯ ದುರಂತ ಎನಿಸಿದರೂ ಅದಕ್ಕೆ ಬೇಕಾದ ಪ್ರಾರಂಭಿಕ ಹಂತದಲ್ಲಿನ ಗಟ್ಟಿತನವನ್ನು ಅಲ್ಲಿನ ಬರಹಗಾರರು ಅದ್ಭುತವಾಗಿ ಕೊಟ್ಟಿರುತ್ತಾರೆ. ಹಾಗೆಯೇ ಆ ಅಂತ್ಯ ಕಾರಾರುವಕ್ಕಾಗಿ ಆ ಚಿತ್ರದ ಕಥೆಗೆ ಸೂಕ್ತ ಎನಿಸುವಂತಿರುತ್ತದೆ. ಅದೇ ಜಾಡು ಹಿಡಿದು ಸಾಗುವ ಹಲವಾರು ಕನ್ನಡ ಚಿತ್ರಗಳಲ್ಲಿ ಅಂತ್ಯವಷ್ಟೇ ದುರಂತವಾಗಿರುತ್ತದೆ, ಅದೇ ನಿಟ್ಟಿನಲ್ಲಿ ಸಾಗುತ್ತದೆ ರೋಜ್. ವಿನಾಕಾರಣ ದುರಂತ ಮಾಡುವ ನಿರ್ದೇಶಕರು ಅದಕ್ಕೊಂದು ಗಟ್ಟಿತನ ಕೊಡದೆ ಎಳಸು ಎಳಸಾಗಿ ನಿರೂಪಿಸಿದ್ದಾರೆ.
ಚಿತ್ರದಲ್ಲಿ ಅದ್ದೂರಿತನಕ್ಕೆ ಕೊರತೆಯಿಲ್ಲ. ನಟ ಅಜಯ್ ರಾವ್ ಒಂದಷ್ಟು ನಟಿಸಿದ್ದಾರೆ. ನಟಿ ಶ್ರಾವ್ಯ ಕೆಲವು ಕಡೆ ಸುಮಾರು ಎನಿಸಿದರೂ ತಮ್ಮ ಪಾತ್ರವನ್ನು ತೂಗಿಸಿಕೊಂಡು ಹೋಗಿ ಮೆಚ್ಚುಗೆ ಗಳಿಸುತ್ತಾರೆ. ಉಳಿದಂತೆ ಬುಲೆಟ್ ಪ್ರಕಾಶ್, ಪುಂಗ, ಸಾಧುಕೋಕಿಲ, ಪ್ರಸನ್ನ, ಮುಂತಾದವರು ಬಂದು ಹೋಗುತ್ತಾರಾದರೂ ಯಾರೂ ಮನಸ್ಸಿನಲ್ಲಿ ಉಳಿಯುವುದಿಲ್ಲ. ಅನೂಪ್ ಸೀಳನ್ ಅವರ ಸಂಗೀತಕ್ಕೆ ಫುಲ್ ಮಾರ್ಕ್ಸ್ ಕೊಡಲೇ ಬೇಕಾಗುತ್ತದೆ. ಇನ್ನುಳಿದಂತೆ ಛಾಯಾಗ್ರಹಣ ಕೂಡ ok ಎನಿಸಿಕೊಳ್ಳುತ್ತದೆ.
ಅಂದುಕೊಂಡ ಕತೆಯನ್ನು ಒಂದೊಳ್ಳೆ ಚಿತ್ರಕತೆಯ ಜೊತೆ ನಿರೂಪಿಸಿದ್ದರೆ ಚಿತ್ರ ಒಂದು ಮಟ್ಟಿಗೆ oಓಕೆಯಾಗುತ್ತಿತ್ತು. ಆದರೆ ನಿರ್ದೇಶಕರು ಏನೇನೋ ಮಾಡಲು ಹೋಗಿ ಏನೋ ಮಾಡಿ ಅದೇನೋ ಆಗಿ ಚಿತ್ರದ ಕತೆ ಚಿತ್ರಕತೆ ಕಲಸು ಮೇಲೋಗರವಾಗಿದೆ.ಹೊಸಬರ ಚಿತ್ರದಲ್ಲಿ ಏನೋ ಹೊಸತನವಿರುತ್ತದೆ.

ಸಹನ ಈ ಹಿಂದೆ ದೀನಾ ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದಾರಾದರೂ ಚಿತ್ರ ಬಿಡುಗಡೆಯಾಗಿರಲಿಲ್ಲ. ಈಗ ರೋಜ್ ಮಾಡಿದ್ದಾರೆ, ಮುಂದಿನ ಚಿತ್ರದಲ್ಲಿ ಒಂದಷ್ಟು ಒಳ್ಳೆಯ ಚಿತ್ರಕತೆಯ ಬಗ್ಗೆ ತಲೆಕೆಡಿಸಿಕೊಂಡರೆ ಅವರಿಂದ ಏನನ್ನಾದರೂ ನಿರೀಕ್ಷಿಸಬಹುದು.  

Monday, June 30, 2014

ಜೈ ಲಲಿತಾ:

ಸಂದರ್ಭಾನುಸಾರ ಗಂಡಸು ಹೆಣ್ಣಿನ ವೇಷ ಧರಿಸಿದ ಚಿತ್ರಗಳು ಕನ್ನಡಕ್ಕೆ ಹೊಸದಲ್ಲ. ಶ್ರೀಧರ್ ಅಭಿನಯದ ಬೊಂಬಾಟ್ ಹೆಂಡ್ತಿ, ರಮೇಶ್ ಅಭಿನಯದ ಓಳು ಸಾರ್ ಓಳು, ಜಗ್ಗೇಶ್ ಅಭಿನಯದ ಮೇಕಪ್..ಹೀಗೆ. ಜೈ ಲಲಿತಾ ಅದೇ ಪಟ್ಟಿಗೆ ಸೇರುವ ಸಿನಿಮಾ. ಇಲ್ಲಿ ಶರಣ್ ಹೆಂಗಸಾಗಿ ಅಭಿನಯಿಸಿದ್ದಾರೆ ಎಂಬುದನ್ನು ಹೊರತುಪಡಿಸಿದರೆ ಜೈ ಲಲಿತಾ ಚಿತ್ರದಲ್ಲಿ ವಿಶೇಷವೇನೂ ಕಾಣಸಿಗದು.
ಒಬ್ಬ ಒಬ್ಬಳಾಗಿ ಒಂದು ಮನೆ ನುಗ್ಗಿದರೆ ಆಗುವ ಕಿತಾಪತಿಗಳನ್ನು ಇಟ್ಟುಕೊಂಡು ಒಂದಷ್ಟು ಹಾಸ್ಯ ತರಿಸಬಹುದೇನೋ ನಿಜ. ಆದರೆ ಪ್ರತಿಯೊಂದು ದೃಶ್ಯವನ್ನೂ ಪ್ರತಿ ಪಾತ್ರವನ್ನೂ ನಗಿಸಬೇಕು ಎಂಬಂತೆ ಮಾಡಿದರೆ ಹಾಸ್ಯ ಅಪಹಾಸ್ಯವಾಗುತ್ತದೆ ಅಲ್ಲದೆ ಚಿತ್ರದಲ್ಲಿನ ಭಾವನಾತ್ಮಕ ಅಂಶಗಳು ಏರು ಪೇರಾಗುತ್ತವೆ. ಜೈಲಲಿತಾ ಚಿತ್ರದಲ್ಲಿ ಆಗಿರುವುದು ಅದೇ. ಇಲ್ಲಿನ ಭಾವನಾತ್ಮಕ ಸನ್ನಿವೇಶಗಳು, ಹಾಸ್ಯ ದೃಶ್ಯಗಳು, ಪ್ರೇಮಮಯ ದೃಶ್ಯಗಳು ಎಲ್ಲವೂ ಹಾಸ್ಯಾಸ್ಪದ. ಹಾಗೆಯೇ ಪಾತ್ರಗಳಂತೂ ಕೈಗೆ ಸಿಕ್ಕುವುದೇ ಇಲ್ಲ. ಕಲಾಸೇವೆಯೇ ಜೀವನ ಎಂದು ತಿಳಿದ ಜಯರಾಜ್ ನನ್ನು ಖಳ ಮೋಸ ಮಾಡಿ ಜೈಲು ಪಾಲಾಗುವಂತೆ ಮಾಡುತ್ತಾನೆ. ಆತನ ತಂದೆಯ ಆಸ್ತಿಯನ್ನು ಕಿತ್ತು ಕೊಳ್ಳುತ್ತಾನೆ. ಪೋಲಿಸರಿಂದ ತಪ್ಪಿಸಿಕೊಳ್ಳುವ ಜಯರಾಜ್ ಜೈ ಲಲಿತಾ ಆಗುತ್ತಾನೆ. ಅವನು ಜೈಲಲಿತ ಆದದ್ದು ಯಾಕೆ ಮುಂದೇನಾಗುತ್ತದೆ ಎಂಬುದನ್ನು ತಿಳಿಯಲು ಚಿತ್ರವನ್ನೊಮ್ಮೆ ನೋಡಬಹುದು.ಆದರೆ ಭರಪೂರ ಮನರಂಜನೆ, ನಕ್ಕು ನಲಿಸುವ ಶುದ್ಧವಾದ ಹಾಸ್ಯ ಬೇಕೆಂದರೆ ಅದು ಜಯಲಲಿತಾಚಿತ್ರದಲ್ಲಿ ಸಿಕ್ಕುವುದು ಕಷ್ಟ. ಯಾಕೆಂದರೆ ನಿರ್ದೇಶಕರು ಬರಹರೂಪದಲ್ಲಿ ಹಾಸ್ಯ ತುಂಬದೆ ದೃಶ್ಯರೂಪದಲ್ಲಿ ಮತ್ತು ಒಂದಷ್ಟು ದ್ವಂದ್ವಾರ್ಥದಲ್ಲಿ ನಗಿಸಲು ಪ್ರಯತ್ನಿಸಿದ್ದಾರೆ. ಅದು ಕೆಲವೊಂದು ಕಡೆ ಯಶಸ್ವಿಯಾಗಿದೆ. ಜಾಸ್ತಿ ಕಡೆ ಸೋತಿದೆ.
ನಾಯಕನಾಗಿ ನಾಯಕಿಯಾಗಿ ಶರಣ್ ಚೆನ್ನಾಗಿ ಅಭಿನಯಿಸಿದ್ದಾರೆ. ಸ್ವಲ್ಪ ಯಾಮಾರಿದ್ದರೂ ಪಾತ್ರ ಬೇರೆಯದೇ ಆಗಿಬಿಡುತ್ತಿದ್ದ ಅಪಾಯವಿತ್ತು. ಅದನ್ನು ನಿಭಾಯಿಸಿ ಗೆದ್ದಿದ್ದಾರೆ. ಹಾಗೆಯೇ ಇರುವ ಇಬ್ಬರು ನಾಯಕಿಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಂದು ಕುಣಿದು ಹೋಗುತ್ತಾರೆ. ಹರೀಶ್ ರಾಜ್ ತಮ್ಮ ಪಾತ್ರವನ್ನು ಚೆನ್ನಾಗಿ ಅಭಿನಯಿಸಿದ್ದಾರೆ. ತಬಲಾ ನಾಣಿ, ರವಿಶಂಕರ್ ಗೌಡ, ಕುರಿ ಪ್ರತಾಪ್ ಪಾತ್ರಗಳು ಸಶಕ್ತವಾಗಿಲ್ಲ. ಸಯ್ಯಾಜಿ ಸಿಂಧೆ ಪಾತ್ರವಂತೂ ಕೈಗೆ ಸಿಕ್ಕದೆ ಅಲ್ಲಲ್ಲಿ ಜಾಳುಜಾಳಾಗಿದೆ.
ಸಾಹಿತ್ಯ ಸಂಗೀತ ಅಷ್ಟಾಗಿ ಗಮನ ಸೆಳೆಯುವುದಿಲ್ಲ. ಹಾಗೆಯೇ ಇರುವ ಒಂದೇ ಹೊಡೆದಾಟದಲ್ಲಿ ಶರಣ್ ಚೆನ್ನಾಗಿ ಹೊಡೆದಾಡಿದ್ದರೂ ಅದನ್ನು ಪರಿಣಾಮಕಾರಿಯಾಗಿ ತೋರಿಸುವಲ್ಲಿ ಸಾಹಸ ನಿರ್ದೇಶಕರು ಸೋತಿದ್ದಾರೆ. ಸಂಕಲನಕಾರರು ಅಲ್ಲಲ್ಲಿ ಅವಸರ ಮಾಡಿರುವುದು ಚಿತ್ರದಲ್ಲಿ ಕಾಣಸಿಗುತ್ತದೆ. ಹಾಗೆಯೇ ಬೇಡ ಚಿತ್ರಿಕೆ ಚಿತ್ರದ ಕೊನೆಯಲ್ಲಿ ಬಂದು ಮಾಯವಾಗುತ್ತದೆ.

ಒಂದು ಹಾಸ್ಯ ಚಿತ್ರ ಎಂದಾಗ ಶತಾಯ ಗತಾಯ ಪ್ರತಿ ದೃಶ್ಯದಲ್ಲೂ ನಗಿಸಬೇಕು, ಲಾಜಿಕ್ ಅನ್ನು ಪಕ್ಕಕ್ಕಿಡಬೇಕು ಎಂದು ನಿರ್ಧರಿಸಿದಾಗ ಈ ರೀತಿಯಾಗುತ್ತದೆ. ಆದೆ ನಿರ್ದೇಶಕ ಕತೆಯ ಮೂಲಕ ಹಾಸ್ಯಮಯವಾಗಿ ನಿರೂಪಿಸಿದರೆ ಚಿತ್ರ ಬರೀ ನಗಿಸದೇ ಸ್ಮರಣೀಯವಾಗುತ್ತದೆ ಎಂಬುದನ್ನು ನಿರ್ದೇಶಕರು ಮನಗಾಣುವುದು ಅವಶ್ಯವಾಗಿದೆ.

ಪಾರು ವೈಫ್ ಆಫ್ ದೇವದಾಸ:

ಶ್ರೀನಗರ ಕಿಟ್ಟಿ ಅಭಿನಯದ ಕಿರಣ್ ಗೋವಿ ನಿರ್ದೇಶನದ ಪಾರು ಚಿತ್ರದಲ್ಲಿ ಏನಿದೆ ಎಂಬುದನ್ನು ನಿರ್ದೇಶಕರೇ ಹೇಳಬೇಕಾಗುತ್ತದೆ. ಯಾಕೆಂದರೆ ಈ ಹಿಂದೆ ಪಯಣ ಮತ್ತು ಸಂಚಾರಿ ಎನ್ನುವ ಎರಡು ಚಿತ್ರಗಳನ್ನು ಕಿರಣ್ ಗೋವಿ ನಿರ್ದೇಶನ ಮಾಡಿದ್ದರು. ಎರಡೂ ಚಿತ್ರಗಳೂ ಅಂತಹ ಯಶಸ್ಸು ಕಾಣಲಿಲ್ಲವಾದರೂ ಚಿತ್ರದಲ್ಲಿ ಹಾಡುಗಳು ಜನಪ್ರಿಯವಾಗಿದ್ದವು.
ಆದರೆ ಈ ಚಿತ್ರ ಆ ಚಿತ್ರಗಳಿಗೆ ಅಪವಾದ ಎನ್ನಬಹುದು. ಒಂದು ಚಿತ್ರ ಎಂದಾಗ ಅದರಲ್ಲಿ ಕತೆ ಚಿತ್ರಕತೆ ಮುಂತಾದವೆಲ್ಲ ಇರಬೇಕಾಗುತ್ತದೆ. ಹಾಗಂತ ಈ ಚಿತ್ರದಲ್ಲಿ ಅದ್ಯಾವುದೂ ಇಲ್ಲವೇ ಎಂದು ನೀವು ಕೇಳಬಹುದು. ಇದೆ ಆದರೆ ಯಾವುದು ಪೂರಕವಾಗಿಲ್ಲ ಎನ್ನುವುದು ಉತ್ತರವಾಗುತ್ತದೆ.ದೇವದಾಸ ಪಾರುವನ್ನು ಭೇಟಿಯಾಗುತ್ತಾನೆ, ಪ್ರೀತಿಸುತ್ತಾನೆ. ಪ್ರಾರಂಭದಲ್ಲಿ ನಾಯಕಿ ಸ್ವಲ್ಪ ಕೊಸರಾಡಿದರೂ ಆಮೇಲೆ ಅವಳೂ ಪ್ರೀತಿಗೆ ಜೈ ಎನ್ನುತ್ತಾಳೆ. ಮುಲಾಜಿಲ್ಲದೆ ಇಬ್ಬರು ಕೈ ಕೈ ಹಿಡಿದು ಹಾದಿ ಕುಣಿಯುತ್ತಾರೆ. ಆಮೇಲೆ ಮತ್ತೊಬ್ಬಳು ಬರುತ್ತಾಳೆ. ಅವಳ್ಯಾಕೆ ಬಂದಳು ಇವಳೆಲ್ಲಿ ಮುಂದೆ ದೇವದಾಸನ ಪಾಡೇನು ಇತ್ಯಾದಿ ವಿವರಗಳು ನಿಮಗೆ ಕುತೂಹಲಕರವೆನಿಸಿದರೆ ಚಿತ್ರವನ್ನೊಮ್ಮೆ ಸಾಹಸವನ್ನು ಮಾಡಬಹುದು.
ಒಂದು ಸಿನಿಮಾ ಹೇಗಿದ್ದರೂ ಸರಿ ಅದಕ್ಕೊಂದು ಕತೆ ಇರಬೇಕಾಗುತ್ತದೆ. ಅಥವಾ ಕತೆಯ ಓಘಕ್ಕೆ ತಕ್ಕಂತೆ ತಿರುವುಗಳಿರಬೇಕಾಗುತ್ತದೆ. ಒಂದಷ್ಟು ಕಲಾವಿದರು, ಹಣ ಸಿಕ್ಕಿದೆ ಎಂದಾಕ್ಷಣ ಏನೋ ಒಂದನ್ನು ಸಿನಿಮಾದಲ್ಲಿ ಮಾಡುವುದು ಅಷ್ಟಾಗಿ ಒಳ್ಳೆಯದಲ್ಲ. ಹಾಗೆಯೇ ಯಾವುದೇ ತಿರುವುಗಳನ್ನೂ ಕೂಡ ಸುಖಾ ಸುಮ್ಮನೆ ಚಿತ್ರಗಳಲ್ಲಿ ತುರುಕಿದರೆ ಅವುಗಳು ಕುತೂಹಲಕಾರಿ ಎನಿಸುವುದರ ಬದಲಿಗೆ ಅನಾವಶ್ಯಕ ಎನಿಸುತ್ತವೆ. ಅದು ಚಿತ್ರದ ಪರಿಣಾಮವನ್ನು ಮತ್ತಷ್ಟು ಪೇಲವ ಮಾಡಿಬಿಡುತ್ತದೆ. ಪಾರು ಚಿತ್ರದಲ್ಲಿ ಆಗಿರುವುದು ಇದೆ.
ಚಿತ್ರದ ತಾಂತ್ರಿಕ ವಿಭಾಗಕ್ಕೆ ಒಂದಷ್ಟು ಅಂಕಗಳನ್ನು ಕೊಡಬಹುದು. ಹಾಗೆಯೇ ಹಾಡುಗಳು, ಸಂಗೀತ ಮತ್ತು ಅವುಗಳನ್ನು ಚಿತ್ರೀಕರಿಸಿರುವುದು ವರ್ಣರಂಜಿತವಾಗಿದೆ. ಶ್ರೀನಗರ ಕಿಟ್ಟಿ ಅಭಿನಯದಲ್ಲಿ ವಿಶೇಷವೇನೂ ಕಾಣಸಿಗುವುದಿಲ್ಲ. ಪಾತ್ರವೇ ಸೀದಾ ಸಾದಾ ಪಾತ್ರವಾದ್ದರಿಂದ ಅವರಾದರೂ ಏನು ಮಾಡಲು ಸಾಧ್ಯ. ಹಾಗೆಯೇ ಸೌಂದರ್ಯ ನಟಿಸಲು ಕಷ್ಟ ಪಟ್ಟು ಆಮೇಲೆ ಬಿಟ್ಟಿದ್ದಾರೆ. ಇಷ್ಟಬಂದ ಹಾಗೆ ಸಂಭಾಷಣೆ ಒಪ್ಪಿಸಿದ್ದಾರೆ.ನೇಹಾ ಪಾಟೀಲ್, ಮೋಹನ್ ಜುನೆಜಾ ಲಯೇಂದ್ರ ಮುಂತಾದವರು ಚಿತ್ರದಲ್ಲಿದ್ದಾರೆ.

ನಿರ್ದೇಶಕ ಕಿರಣ್ ಗೋವಿ ತಮ್ಮ ಮುಂದಿನ ಚಿತ್ರದಲ್ಲಾದರೂ ಉತ್ತಮ ಕತೆ ಚಿತ್ರಕತೆ ಇಟ್ಟುಕೊಂಡರೆ ಒಳ್ಳೆಯದು.