Pages

Friday, January 2, 2015

ಶಿವಂ :

ಒಂದು ಒಳ್ಳೆಯ ಬಜೆಟ್, ಒಂದಷ್ಟು ಸ್ಟಾರ್ ನಟರುಗಳು, ಕೇಳಿದ ಲೊಕೇಶನ್ ಇದೆಲ್ಲಾ ಕೊಟ್ಟಾಗ ಒಬ್ಬ ನಿರ್ದೇಶಕ ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾಗುತ್ತದೆ. ಆದರೆ ಅವರೇ ಗೊಂದಲಕ್ಕೆ ಬಿದ್ದಾಗ ಶಿವಂ ಚಿತ್ರವಾಗುತ್ತದೆ.
ತನ್ನ ಶೀರ್ಷಿಕೆಯಿಂದ ವಿವಾದ ಗಮನ ಸೆಳೆದಿದ್ದ ಶಿವಂ ಚಿತ್ರದಲ್ಲಿ ಟರ್ಕಿಯಂತಹ ಒಳ್ಳೆಯ ಸ್ಥಳಗಳಿವೆ. ಉಪೇಂದ್ರ ಇದ್ದಾರೆ, ವಿಲನ್ ಆಗಿ ರವಿಶಂಕರ್ ಇದ್ದಾರೆ, ಹೊಡೆದಾಟ ಇದೆ, ಹಾಡುಗಳಿವೆ. ಆದರೆ ಅದ್ಯಾವುದು ನಮ್ಮನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದಿಲ್ಲ. ಅದಕ್ಕೆ ಕಾರಣ ಕತೆ. ಚಿತ್ರಕತೆಯಲ್ಲಿ ಅಲ್ಲಲ್ಲಿ ಒಂದಷ್ಟು ತಿರುವು ಕೊಟ್ಟಿದ್ದಾರೆ ನಿರ್ದೇಶಕರು.ಆದರೆ ಆ ತಿರುವುಗಳು ಅಚ್ಚರಿ ತರದೇ ನೀರಸ ಎಣಿಸುವುದಕ್ಕೆ ಕಾರಣವೇ ಚಿತ್ರಕತೆ. ಕತೆ ಹಳ್ಳಿಯಿಂದ ದಿಲ್ಲಿಗೆ ದಿಲ್ಲಿಯಿಂದ ವಿದೇಶಕ್ಕೆ ಹಾರಿ ಕುಣಿಯುತ್ತದೆ. ಭೂಗತ ಲೋಕದಿಂದ ಭಯೋತ್ಪಾದನೆಗೆ ಶಿಫ್ಟ್ ಆಗುತ್ತದೆ. ದೇಶ ಸೇವೆಯಿಂದ ಈಶ ಸೇವೆಗೆ ರೂಪಾಂತರಹೊಂದುತ್ತದೆ. ಇದೆಲ್ಲಾ ಪ್ರೇಕ್ಷಕನಿಗೆ ಕ್ಷಣ ಕ್ಷಣಕ್ಕೂ ಕುತೂಹಲ ಉಂಟು ಮಾಡುತ್ತಾ ಸಾಗಬೇಕಾಗಿತ್ತು. ಆದರೆ ಅದು ಪೇಲವ ಎನಿಸುತ್ತದೆ. ಕೆಲವೊಮ್ಮೆ ಅಸಂಗತ ಅತಿರಂಜಿತ, ಆವಾಸ್ತವಿಕ ಎನಿಸಿ ಚಿತ್ರವನ್ನು ಪ್ರೇಕ್ಷಕನಿಂದ ದೂರ ಮಾಡುತ್ತದೆ.
ಚಿತ್ರ ವಿದೇಶದಲ್ಲಿ ಪ್ರಾರಂಭವಾಗುತ್ತದೆ. ಅಲ್ಲಿ ನಾಯಕ ಖಳನನ್ನು ಗುಂಡು ಹೊಡೆದು ಸಾಯಿಸಿ ತಕ್ಷಣ ಎರಡನೆಯ ನಾಯಕಿ ಜೊತೆ ಹಾದಿ ಕುಣಿದು ಆನಂತರ ಅಲ್ಲೂ ಇನ್ನಷ್ಟು ಜನರನ್ನು ಸಾಯಿಸಿ ಊರಿಗೆ ಬರುತ್ತಾನೆ. ಇಲ್ಲಿ ದೇವಸ್ಥಾನದ ಮುಖ್ಯ ಅರ್ಚಕನಾದ ಆತನ ತಂದೆಯಿಂದ ದೇವಸ್ಥಾನವನ್ನು ಲಪಟಾಯಿಸಬೇಕೆಂದು ಖಳರ ಗುಂಪು ಹೊಂಚುಹಾಕುತ್ತದೆ. ರಾ ಅಧಿಕಾರಿಯಾದ ನಾಯಕ ಈಗ ದೇವಸ್ಥಾನವನ್ನೂ ಖಳರಿಂದ ರಕ್ಷಿಸಬೇಕು ಹಾಗೆಯೇ ದೇಶವನ್ನೂ ಭಯೋತ್ಪಾದಕನಿಂದ ರಕ್ಷಿಸಬೇಕು.. ಹೇಗೆ..? ತಿಳಿಯಲು ಚಿತ್ರವನ್ನೊಮ್ಮೆ ನೋಡಬಹುದು.
ಸಿನಿಮದ ಕತೆಯನ್ನು ನಿರ್ದೇಶಕರು ಕುತೂಹಲಕಾರಿಯಾಗಿ ಹೆಣೆಯಲು ಪ್ರಯತ್ನಿಸಿರುವುದು ಚಿತ್ರದ ನಿರೂಪಣೆಯಲ್ಲಿ ಕಾಣಿಸುತ್ತದೆ. ಆದರೆ ಬುಡವೇ ಭದ್ರವಾಗಿಲ್ಲದೆ ಇದ್ದಾಗ ಅದೆಷ್ಟು ಸಿಂಗಾರ ಮಾಡಿದರೇನು ಉಪಯೋಗ ಎನಿಸುವಂತೆ ಅಂದುಕೊಂಡಿರುವ ಎಳೆಯೇ ಪರಿಣಾಮಕಾರಿಯಾಗಿಲ್ಲದೆ ಇರುವುದು ಚಿತ್ರವನ್ನು ಸಾದಾರಣ ಚಿತ್ರವನ್ನಾಗಿ ಮಾಡಿ ಬಿಟ್ಟಿದೆ. ಕತೆ ತೂಗುಯ್ಯಾಲೆಯಂತೆ ಅತ್ತಿಂದ ಇತ್ತ ಇತ್ತಿಂದ ಆತ್ತ ಜೋಕಾಲಿಯಾಡುತ್ತದೆ. ನೂರರ ಸಂಖ್ಯೆಯಲ್ಲಿ ಹೆಣಗಳು ಉರುಳುತ್ತವೆ.
ಉಪೇಂದ್ರ ಈ ಚಿತ್ರದಲ್ಲಿ ಸಾವಧಾನ ಚಿತ್ತವಾಗಿ ನಟಿಸಿದ್ದಾರೆ. ಅರ್ಚಕನಾಗಿ, ರಾ ಏಜೆಂಟ್ ಆಗಿ ಅವರ ಪಾತ್ರ ಗಮನ ಸೆಳೆಯುತ್ತದೆ. ಹಾಡು ಹೊಡೆದಾಟದಲ್ಲಿ ಮಿಂಚಿದ್ದಾರೆ.. ಸಲೋನಿ ಪಾತ್ರ ಶುರುವಾಗುವಲ್ಲಿ ಚೆನ್ನಾಗಿದೆ. ಆದರೆ ಬರು ಬರುತ್ತಾ ತನ್ನ ಮಹತ್ವ ಕಳೆದುಕೊಳ್ಳುತ್ತದೆ. ಇನ್ನು ರಾಗಿಣಿ ಎರಡು ಹಾಡು ಹೊಡೆದಾಟದಲ್ಲಿ ಮಿಂಚುತ್ತಾರೆ. ಅಷ್ಟು ಬಿಟ್ಟರೆ ಅಭಿನಯಕ್ಕೆ ಅವಕಾಶವಿಲ್ಲ. ರವಿಶಂಕರ್ ಪಾತ್ರವೂ ಅಷ್ಟೇ. ಬೆರಳೆಣಿಕೆಯ ದೃಶ್ಯವನ್ನು ಹೊಂದಿದೆ.
ಮಣಿಶರ್ಮ ಸಂಗೀತ ಕೆಲವು ಕಡೆ ಜೋರು ಎನಿಸುತ್ತದೆ. ಸಾಹಸ ದೃಶ್ಯಗಳೂ ಹೊಸತನವಿಲ್ಲದೆ ಸೊರಗಿವೆ. ಒಂದಷ್ಟು ಪೋಷಕ ಕಲಾವಿದರುಗಳು ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಒಂದು ಪಕ್ಕಾ ಮಸಾಲ ಮನರಂಜನೆ ಎಂದಾಗ ಅದರ ಸ್ಕ್ರಿಪ್ಟ್ ಕೂಡ ಹಾಗೆಯೇ ಇರಬೇಕಾಗುತ್ತದೆ. ಆದರೆ ಚಿತ್ರಕತೆ-ಕತೆಯ ಬಗ್ಗೆ ನಿರ್ದೇಶಕರು ಆಸ್ಥೆ ವಹಿಸದೆ, ಹಾಗೆಯೇ ನಿರ್ದೇಶನದಲ್ಲೂ ಯಾವುದೇ ನೈಪುಣ್ಯ ಮೆರೆಯದಿರುವುದು ಶಿವಂ ಹೀಗೆ ಬಂದು ಹಾಗೆ ಹೋಗುವ ಅದ್ದೂರಿ ಚಿತ್ರಗಳ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತದೆ. ಏನೇನನ್ನೋ ನಿರೀಕ್ಷಿಸಿ ಹೋದ ಪ್ರೇಕ್ಷಕ ಉಪೇಂದ್ರರ ಎರಡು ಗೆಟಪ್ ಮತ್ತು ಒಂದಷ್ಟು ಹೊಡೆದಾಟಕ್ಕೆ ತೃಪ್ತಿ ಹೊಂದಬೇಕಾಗುತ್ತದೆ.

ಖುಷಿ ಖುಷಿಯಾಗಿ:

ಮದುವೆ ಮನೆ ಎಂದರೆ ಸಂಭ್ರಮದ ವಾತಾವರಣದ ಜೊತೆಗೆ ವಯಸ್ಸಿನ ಹುಡುಗರ ಕಣ್ಣಿಗೆ ಹಬ್ಬವೋ ಹಬ್ಬ. ಇಲ್ಲೂ ಹಾಗೆಯೇ ಆಗುತ್ತದೆ. ಮದುವೆಗೆ ಹೋದ ನಮ್ಮ ನಾಯಕನ ಕಣ್ಣಿಗೆ ಸುಂದರಿ ಒಬ್ಬಳು ಗೋಚರಿಸಿ ಆತ ಅಲ್ಲೇ ಪ್ಲಾಟ್ ಆಗುತ್ತಾನೆ. ಆಕೆಯ ನಂಬರ್ ತೆಗೆದುಕೊಳ್ಳುವಲ್ಲಿ ಗುಂಡಿನ ಮತ್ತು ಗಮ್ಮತ್ತು ತೋರಿಸಿ ಮತ್ತೊಂದು ಹುಡುಗಿಯ ನಂಬರ್ ಸಿಗುತ್ತದೆ. ಅವಳೇ ಇವಳು ಎಂದು ನಾಯಕ ಹಿಂದೆ ಬೀಳುತ್ತಾನೆ. ಬರೀ ಮಾತು ಸಾಕು, ಮುಖ ಯಾಕೆ ಬೇಕು ಎಂದು ಪ್ರೀತಿಸಲು ತೊಡಗುತ್ತಾನೆ.. ಮುಂದೆ...ಯಾರನ್ನು ಲವ್ ಮಾಡಬೇಕು.. ಯಾರನ್ನು ಮದುವೆಯಾಗಬೇಕು ಎನ್ನುವ ಗೊಂದಲ ಪ್ರೇಕ್ಷಕನದೂ ಹೌದು ನಾಯಕನದೂ ಹೌದು. ಆದರೆ ಕ್ಲೈಮಾಕ್ಸ್ ವರೆಗೆ ಕುಳಿತರೆ ಎಲ್ಲವೂ ಶುಭಂ.
ಕತೆ ಏನೇ ಇರಲಿ, ಚಿತ್ರಕತೆಯಲ್ಲಿ ಖುಷಿ ತುಂಬುವಲ್ಲಿ ತೆಲುಗರು ಸಿದ್ಧ ಹಸ್ತರು. ಪ್ರತಿ ದೃಶ್ಯಕ್ಕೂ ಏನೋ ಒಂದು ತಮಾಷೆ ಸೇರಿಸಿ ಅದರಲ್ಲೇ ತಿರುವು ಕೂರಿಸಿ ಒಟ್ಟಾರೆ ಭಾವವನ್ನು ಪಕ್ಕಕ್ಕಿಟ್ಟು ನೋಡುವವನಿಗೆ ನೋಡುವ ಸಮಯದಲ್ಲಿ ಎಲ್ಲೂ ಬೋರ್ ಆಗದಂತೆ ನಿರೂಪಿಸುವುದು ಅವರ ಶೈಲಿ. ಗುಂಡೇ ಜಾರಿ ಗಲ್ಲಾಯಿತೆಂದಿ ಚಿತ್ರದ ಕನ್ನಡ ಅವತರಣಿಕೆಯಾದ ಖುಷಿ ಖುಷಿಯಾಗಿ ಅದರ ಪಡಿಯಚ್ಚು.  ಇಡೀ ಚಿತ್ರವೇ ವರ್ಣಮಯ.. ನಗೆಮಯ..
ಇಲ್ಲಿ ಚಿತ್ರದ ನಾಯಕ ವಿಪರೀತ ಮಾತನಾಡುತ್ತಾನೆ. ಅದು ಗಣೇಶ್ ಶೈಲಿಯೂ ಹೌದು. ಆತ ನಿಲ್ಲಿಸಿದರೆ ಮುಂದುವರೆಸಲು ಸಾಧುಕೋಕಿಲ ಇದ್ದಾರೆ. ಹಾಗಾಗಿ ಚಿತ್ರ ಪೂರ್ತಿ ನಗುತ್ತಲೇ ಸಿನಿಮಾ ನೋಡಬಹುದು. ಆದರೆ ಲಾಜಿಕ್ ವಿಷಯವನ್ನು ಕೇಳುವ ಹಾಗಿಲ್ಲ. ಅದೇಕೆ, ಇದು ಹೇಗೆ ಎಂದೆಲ್ಲಾ ಮಾತನಾಡುವ ಹಾಗಿಲ್ಲ. ಇದು ಸಿನಿಮಾ ಸ್ವಾಮಿ ಎಂದು ನಿರ್ದೇಶಕರು ಹೇಳುತ್ತಾರೆ. ಹಾಗಾಗಿ ಸುಮ್ಮನೆ ನೋಡಿ ನಕ್ಕು ಬರಬೇಕು. ಚಿತ್ರದಲ್ಲಿ ಎರಡು ಹೊಡೆದಾಟದ ದೃಶ್ಯವಿದೆಯಾದರೂ ಫೈಟ್ ಇರಲಿ ಎನ್ನುವ ಕಾರಣಕ್ಕೆ ಇದೆಯೇನೋ ಅನಿಸುತ್ತದೆ.
ಇವಿಷ್ಟನ್ನು ಹೊರತು ಪಡಿಸಿದರೆ ಸಿನಿಮಾ ಕುತೂಹಲ ಕಾಯ್ದಿರಿಸಿಕೊಳ್ಳುವುದಿಲ್ಲ. ಈ ಹಿಂದೆ ಬಂದ ಹಲವಾರು ಚಿತ್ರಗಳನ್ನು ಚಿತ್ರ ನೆನಪಿಸುತ್ತಾ ಸಾಗುತ್ತದೆ. ಇಷ್ಟೇನಾ ಈ ಸಿನಿಮಾ ಎನಿಸುವುದು ಚಿತ್ರವನ್ನು ನೋಡಿದ ಮೇಲೆ.
ತೆಲುಗಿನಲ್ಲಿ ಹಣ ಬಾಚಿದ ಯಶಸ್ವೀ ಚಿತ್ರ ಎನ್ನುವ ಮಾನದಂಡವಷ್ಟೇ ಚಿತ್ರವನ್ನು ಕನ್ನಡಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿರುವುದು ಬೇಸರದ ಸಂಗತಿಯೇ. ಏಕೆಂದರೆ ಕತೆ ಚಿತ್ರಕತೆ ಯಾವುದರಲ್ಲೂ ಏನೂ ಹೊಸತನವಿಲ್ಲದ ಒಂದಷ್ಟು ನಗು ತಮಾಷೆಯ ಚಿತ್ರವನ್ನು ಕನ್ನಡಕ್ಕೆ ಹಾಗೆಯೇ ಭಟ್ಟಿ ಇಳಿಸುವುದು ಬೇಕಿತ್ತಾ ಎಂದು ಪ್ರೇಕ್ಷಕನಿಗೆ ಅನಿಸದೆ ಇರದು.
ಅಭಿನಯದ ವಿಷಯಕ್ಕೆ ಬಂದರೆ ಗಣೇಶ್ ಚಿನಕುರಳಿ. ಪಟಪಟನೆ ಮಾತಾಡುತ್ತಾ ಅಲ್ಲಲ್ಲಿ ನಗಿಸುವ ಗಣೇಶ್ ಟೈಮಿಂಗ್ ಮತ್ತು ಅವರ ಚುರುಕುತನ ಮಜಾ ಕೊಡುತ್ತದೆ.  ನಾಯಕಿ ಅಮೂಲ್ಯ ತಮ್ಮ ಮಾತಿನ ಶೈಲಿಯಿಂದ ಗಮನ ಸೆಳೆಯುತ್ತಾರೆ. ಮತ್ತೊಬ್ಬ ನಾಯಕಿ ನಂದಿನಿ ಗಮನ ಸೆಳೆಯುತ್ತಾರೆ.
ಚಿತ್ರದಲ್ಲಿ ಹಾಡುಗಳು ಜಬರ್ದಸ್ತ್ ಇರಬೇಕಿತ್ತು. ಆದರೆ ಅದ್ಯಾಕೋ ಇಲ್ಲಿ ಅದೇ ಕೈ ಕೊಟ್ಟಿದೆ. ಕೆಲವು ಕಡೆ ಹಿನ್ನೆಲೆ ಸಂಗೀತ ಸೂಪರ್ ಎನಿಸುತ್ತದೆ. ಆದರೆ ಹಾಡುಗಳು ನೆನಪಲ್ಲಿ ಉಳಿಯುವುದು ಕಷ್ಟ. ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಪ್ರತಿ ಫ್ರೇಮ್ ಕೂಡ ಬಣ್ಣ ಬಣ್ಣವಾಗಿಸುವಲ್ಲಿ ಛಾಯಾಗ್ರಾಹಕ ವೇಣು ಶ್ರಮ ಎದ್ದು ಕಾಣುತ್ತದೆ.

ಇನ್ನು ನಿರ್ದೇಶಕ ಯೋಗಿ ಜಿ ರಾಜ್ ಬಗ್ಗೆ ಹೇಳಲು ಹೆಚ್ಚೇನೂ ಇಲ್ಲ ಎನ್ನಬಹುದು. ತೆಲುಗಿನ ಸಾದಾರಣ ಕತೆಯ ಮನರಂಜನೆಯ ಚಿತ್ರವನ್ನು ಕನ್ನಡೀಕರಿಸಲು ಆಯ್ದು ಕೊಂಡಿದ್ದಾರೆ ಎಂಬುದಷ್ಟೇ ಅವರ ಶಕ್ತಿ ಶ್ರಮ ಎಂದರೆ ಅದು ವ್ಯಂಗ್ಯ ಎಂದುಕೊಳ್ಳಬಾllರದು.