Pages

Friday, December 26, 2014

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ:

ನಾಗರಹಾವು ಚಿತ್ರದ ಶೀರ್ಶಿಕೆಯಾದರೂ ಅದನ್ನು ಮೀರಿ ಬೆಳೆದದ್ದು ಅದರಲ್ಲಿನ ರಾಮಾಚಾರಿ ಪಾತ್ರ. ರಾಮಾಚಾರಿ ಸಿಡುಕನಾದರೂ ಅವನೊಳಗೆ ಒಬ್ಬ ಸಹೃದಯನಿದ್ದ. ಮುಂಗೊಪಿಯಾದರೂ ಅವನ ಕರುಣಾಮಯಿ. ಹಠಮಾರಿಯಾದರೂ ನಿಷ್ಠ. ಒರಟನಾದರೂ ಮೃದು ಹೃದಯಿ. ಹಾಗಾಗಿ ರಾಮಾಚಾರಿ ಪಾತ್ರ ಸಿನೆಮಾವನ್ನು ಮೀರಿ ಬೆಳೆದಿತ್ತು. ಡಾ. ವಿಷ್ಣುವರ್ಧನ್ ಮೊದಲ ಚಿತ್ರದಲ್ಲಿ ರಾರಾಜಿಸಿದ್ದರು.
ಆ ಪಾತ್ರವನ್ನು ಮುಖ್ಯಭೂಮಿಕೆಯಾಗಿಸಿಕೊಂಡು ಅದರ ಸುತ್ತ ಒಂದು ಪ್ರೇಮಕತೆಯನ್ನು ಹೆಣೆದಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಂ.ಅಷ್ಟನ್ನು ಕೇಂದ್ರವಾಗಿರಿಸಿ ತಮ್ಮ ಕತೆಗೆ ಅದನ್ನು ಜೋಡಿಸಿದ್ದಾರೆ. ಜೊತೆಗೆ ಯಶ್ ನಾಯಕರಾದ ಕಾರಣ ಅವರ ಇಮೇಜ್ ಗೆ ಹೊಂದಿಸಿದ್ದಾರೆ.
ಚಿತ್ರ ಪ್ರಾರಂಭವಾಗುತ್ತದೆ. ಶರವೇಗದಲ್ಲಿ ಸಾಗುತ್ತದೆ. ಮೊದಲಾರ್ಧದಲ್ಲಿಯೇ ಹಾಡುಗಳ ಸುರಿಮಳೆಯಾಗುತ್ತದೆ. ಏನಾಗುತ್ತಿದೆ ಎನ್ನುವಷ್ಟರಲ್ಲಿ ಮೊದಲಾರ್ಧ ಫಿನಿಶ್. ದ್ವಿತೀಯಾರ್ಧ ಗಂಭೀರವಾಗುತ್ತದೆ. ಪಟ್ಟು ಬಿಡದ ನಾಯಕ ನಾಯಕಿ ನಡುವೆ ಪ್ರೇಕ್ಷಕ ನಲುಗುವಂತೆ ಮಾಡುತ್ತದೆ. ಕೊನೆಯಲ್ಲಿ ಯಾರು ಯಾರನ್ನು ಮದುವೆಯಾಗುತ್ತಾರೆ ಎಂಬುವಷ್ಟರಲ್ಲಿ ಸುಖಾಂತ್ಯವಾಗುತ್ತದೆ. ಚಿತ್ರದ ಕತೆ ಹೇಳಿದರೆ ಅಥವಾ ಹೇಳದಿದ್ದರೆ ಚಿತ್ರ ನೋಡಲು ಯಾವುದೇ ಸಮಸ್ಯೆಯಿಲ್ಲ. ಯಾಕೆಂದರೆ ಇದೊಂದು ಟೈಲರ್ ಮೇಡ್ ಸಿನಿಮಾ. ಹೋಟೆಲ್ಲಿನ ಮಿನಿ ಮೀಲ್ಸ್. ಎಲ್ಲವೂ ಎಷ್ಟೆಷ್ಟು ಬೇಕೋ ಅಷ್ಟಷ್ಟೇ ಇದೆ. ಕಾಮಿಡಿ ಆಕ್ಷನ್ ಸೆಂಟಿಮೆಂಟ್ ಹಾಡುಗಳು ಹೀಗೆ. ನಾಯಕನ ಬಿಲ್ಡ್ ಅಪ್ ಸ್ವಲ್ಪ ಜಾಸ್ತಿ ಎನಿಸಿದರೆ ಅದು ಯಶ್ ಅಭಿಮಾನಿಗಳಿಗೆ ಮೀಸಲು ಎನ್ನಬಹುದು.
70 ರ ದಶಕದ ರಾಮಾಚಾರಿ ಈವತ್ತಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ಪ್ರಯತ್ನವಿದು. ಇಲ್ಲಿನ ರಾಮಾಚಾರಿ ಸ್ಟೈಲಿಶ್. ಅಲ್ಲಿನ ರಾಮಾಚಾರಿಯದು ನೇರ ಮಾತಾದರೆ ಇಲ್ಲಿನ ರಾಮಾಚಾರಿಯದು ನೇರ ಪಂಚಿಂಗ್ ಮಾತು.
ನಾಗರಹಾವು ಚಿತ್ರದ ರಾಮಾಚಾರಿ ಪಾತ್ರದ ಹುಚ್ಚು ಅಭಿಮಾನಿಯಾದ ನಾಯಕ ತಾನು ಅವನಂತೆ ಆಗಲು ಪ್ರಯತ್ನಿಸುತ್ತಾನೆ. ಅವನನ್ನು ಎಲ್ಲಾ ರೀತಿಯಿಂದಲೂ ಅನುಕರಿಸುತ್ತಾನೆ. ತನ್ನ ಪ್ರೇಯಸಿಗೆ ಮಾರ್ಗರೇಟ್ ಎನ್ನುವ ಮರುನಾಮಕರಣ ಮಾಡುವ ಮಟ್ಟಕ್ಕೂ ಹೋಗುತ್ತಾನೆ. ಆದರೆ ಅದೆಲ್ಲವನ್ನು ಇಷ್ಟ ಪಡುವ ನಾಯಕಿ ನೀನು ನೀನಾಗು ಎನ್ನುತ್ತಾಳೆ. ನಾನು ನಾನಲ್ಲ... ನನ್ನೊಳಗೆ ರಾಮಾಚಾರಿಯೇ ಎಲ್ಲ ಎನ್ನುತ್ತಾನೆ. ಹಾಗಾದರೆ ನಡಿ ನಿನ್ನ ಮನೆ ಕಡೆಗೆ ನಾನು ನನ್ನ ದಾರಿಗೆ ಎನ್ನುತ್ತಾಳೆ ಅವಳು... ಈಗೇನು ಮಾಡುವುದು ಆರಾಧ್ಯ ದೈವವನ್ನು ಬಿಡುವುದಾ ಆರಾಧಿಸುವ ಗೆಳತಿಗೆ ತಲೆ ಬಾಗುವುದಾ..?
ಸಂಧಿಗ್ಧಕ್ಕೆ ಸಿಲುಕುವ ನಾಯಕನ ಮುಂದಿನ ನಡೆ ನುಡಿ ಚಿತ್ರದ ಕಥಾವಸ್ತು.
ಚಿತ್ರದ ನಿರ್ಮಾಣ ಶ್ರೀಮಂತವಾಗಿರುವುದರಿಂದ ನಿರ್ದೇಶಕ ಸಂತೋಷ್ ಆನಂದರಾಂ ಅಂದುಕೊಂಡದ್ದನ್ನು ತೆರೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಮೊದಲ ಚಿತ್ರದಲ್ಲಿಯೇ ತಮ್ಮ ಕಸುಬುದಾರಿಕೆ ಮೆರೆದಿರುವ ಸಂತೋಷ್ ಆನಂದರಾಮ್ ಅವರಿಂದ ಇನ್ನಷ್ಟು ಮನರಂಜನಾ ಚಿತ್ರಗಳನ್ನು ನಿರೀಕ್ಷಿಸಬಹುದು. ಇನ್ನು ಛಾಯಾಗ್ರಹಣ, ಸಂಗೀತ, ಸಾಹಿತ್ಯ, ಮುಂತಾದ ತಾಂತ್ರಿಕ ಅಂಶಗಳ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಅದರರ್ಥ ಚಿತ್ರಕ್ಕೆ ಏನು ಬೇಕು ಎಷ್ಟು ಬೇಕು ಎಂಬುದು ಎಲ್ಲರಿಗೂ ಅರಿವಿರುವುದರಿಂದ ರಾಮಾಚಾರಿಯ ಮನರಂಜನೆಯಲ್ಲಿ ಅವರ ಪಾತ್ರವು ದೊಡ್ಡದಿದೆ.
ಯಶ್ ಮೆರೆದಿದ್ದಾರೆ. ಗಜಕೇಸರಿಯಲ್ಲಿ ಅಣ್ಣಾವ್ರ ಅಭಿಮಾನಿಯಾಗಿದ್ದ ಯಶ್ ಇಲ್ಲಿ ವಿಷ್ಣುದಾದಾನ ಅಭಿಮಾನಿಯಾಗಿದ್ದಾರೆ. ಉಳಿದಂತೆ ಹೊಡೆದಾಟ, ಹಾಡು ಕುಣಿತ ಎಲ್ಲದರಲ್ಲೂ ಎಲ್ಲರಿಗೂ ಮೆಚ್ಚುಗೆಯಾಗುತ್ತಾರೆ. ಚಿತ್ರದಿಂದ ಚಿತ್ರಕ್ಕೆ ಅವರ ಗ್ರಾಫ್ ಏರುತ್ತಲೇ ಇರುವುದಕ್ಕೆ ಈ ಚಿತ್ರವೂ ತನ್ನ ಸಿಂಹಪಾಲು ನೀಡುತ್ತದೆ ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ.

ಫುಲ್ ಪ್ಯಾಕೇಜ್ ಸಿನಿಮಾ ಇದು.

ಜ್ಯೋತಿ ಅಲಿಯಾಸ್ ಕೋತಿರಾಜ್

ಜ್ಯೋತಿ ಅಲಿಯಾಸ್ ಕೋತಿರಾಜ್ ಚಿತ್ರದುರ್ಗ ಕೋಟೆಯಲ್ಲಿ ಹೆಸರುವಾಸಿ. ಯಾವುದೇ ರಕ್ಷಣವ್ಯವಸ್ಥೆಯಿಲ್ಲದೆ ಆತ ಕೋಟೆಯನ್ನು ಏರುವ ಅದರ ಮೇಲೆ ಕಸರತ್ತು ಮಾಡುವ ಶೈಲಿ ರೋಮಾಂಚಕ. ಅವನನ್ನೇ ನಾಯಕನನ್ನಾಗಿಸಿ ಸಿನಿಮಾ ಮಾಡಿದರೆ..? ಇದು ನಿಜಕ್ಕೂ ಒಳ್ಳೆಯ ಐಡಿಯಾ. ಆದರೆ ಅದಕ್ಕೆ ಸಮರ್ಪಕವಾದ ಕತೆ ಚಿತ್ರಕತೆ ಬರೆಯದಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಚಿತ್ರ ಉತ್ತಮ ಉದಾಹರಣೆ.
ಒಂದು ಪಾತ್ರವನ್ನು ಸೃಷ್ಟಿಸಿ ಅದಕ್ಕೆ ಸೂಕ್ತ ಕಲಾವಿದನನ್ನು ಹುಡುಕುವುದು ಅಥವಾ ಒಬ್ಬ ಕಲಾವಿದನಿಗೆ ಸೂಕ್ತ ಪಾತ್ರವನ್ನು ಸೃಷ್ಟಿಸುವುದು ಎರಡೂ ಕಾರ್ಯಗಳು ಶ್ರಮದಾಯಕ. ಯಾಕೆಂದರೆ ಪಾತ್ರಕ್ಕೆ ತಕ್ಕುದಾದ ಅದನ್ನು ಸಮರ್ಪಕವಾಗಿ ನಿಭಾಯಿಸುವ ಕಲಾವಿದರನ್ನು ಆ ಪಾತ್ರಕ್ಕೆ ಒಗ್ಗಿಸುವುದು ಎಷ್ಟೋ ಕಷ್ಟವೋ ಹಾಗೆಯೇ ಇರುವ ಒಬ್ಬ ನಾಯಕನಿಗೆ ಕತೆಯನ್ನು ಒಗ್ಗಿಸುವುದು ಅಷ್ಟೇ ಕಷ್ಟದ ಕೆಲಸ. ಇಲ್ಲಿ ಕೋತಿರಾಜ್ ಇದ್ದಾನೆ. ಆತನ ಶಕ್ತಿ ಸಾಮರ್ಥ್ಯ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಬಹುಶ ಒಂದು ಮಟ್ಟಗಿನ ಪ್ರೇಕ್ಷಕ ಕೂಡ ಆ ನಿರೀಕ್ಷೆ, ನಿಟ್ಟಿನಲ್ಲಿಯೇ ಚಿತ್ರವನ್ನು ವೀಕ್ಷಿಸಲು ಹೋಗುತ್ತಾನೆ. ಆದರೆ ಅದೇ ಚಿತ್ರದಲ್ಲಿಲ್ಲದಿದ್ದರೆ..?
ಜ್ಯೋತಿ ಅಲಿಯಾಸ್ ಕೋತಿರಾಮ ಚಿತ್ರವನ್ನು ವೀಕ್ಷಿಸಿದಾಗ ನಮಗೆ ಎದುರಾಗುವ ಒಂದು ಪ್ರಶ್ನೆ ಎಂದರೆ ಈ ಚಿತ್ರಕ್ಕೆ ಜ್ಯೋತಿ ರಾಮ ಅವರೇ ಯಾಕೆ ನಾಯಕರಾಗಬೇಕಿತ್ತು ಎನ್ನುವುದು. ಚಿತ್ರದಲ್ಲಿನ ಹೊಡೆದಾಟದ ದೃಶ್ಯದಲ್ಲಿ ಸಾಹಸ ಮರೆದಿರುವ ಜ್ಯೋತಿಯವರ ಸಾಹಸ ಚಿತ್ರರಸಿಕರಿಗೆ ವಿಶೇಷವೇನಲ್ಲ. ವಿಶೇಷ ಎಂದರೆ ಅವರ ಕೋಟೆ ಕಲ್ಲು ಮರ ಏರುವ ಅಪರೂಪದ ಕೌಶಲ್ಯ. ನಿರ್ದೇಶಕರು ಅದನ್ನೇ ಕಡಿಮೆ ಮಾಡಿ ಕತೆ ಹೆಚ್ಚು ಮಾಡಿದ್ದಾರೆ. ಹಾಗಾಗಿ ಇದು ಸಾಹಸಿಯೊಬ್ಬನ ಕತೆಯಾಗದೆ ಸಾದಾರಣ ಕತೆಯಾಗಿಬಿಟ್ಟಿದೆ.
ಒಬ್ಬ ಸಾಹುಕಾರ. ಅವನಿಗೆ ಇಬ್ಬರು ಹೆಣ್ಣು ಮಕ್ಕಳು. ತನ್ನ ಮಾನವನ್ನು ಕಾಪಾಡಿದ ಎಂಬ ಕಾರಣಕ್ಕೆ ಮಗಳಿಗೆ ನಾಯಕನ ಮೇಲೆ ಲವ್ವಾದರೆ ಮಗಳ ಮಾನವನ್ನು ಕಾಪಾಡಿದ ಎಂನ ಕಾರಣಕ್ಕೆ ಸಾಹುಕಾರನಿಗೆ ನಾಯಕನ ಮೇಲೆ ಒಳ್ಳೆಯ ಭಾವನೆ ಹುಟ್ಟುತ್ತದೆ. ಮುಂದೆ..
ಕೋತಿರಾಜ್ ತಮ್ಮ ಸಾಹಸವನ್ನು ಇಲ್ಲೂ ತೋರಿಸಿದ್ದಾರೆ. ಉಳಿದಂತೆ ಅಭಿನಯದಲ್ಲಿ ಏನನ್ನೂ ನಿರೀಕ್ಷಿಸುವ ಹಾಗಿಲ್ಲ ಚಿತ್ರದಲ್ಲಿ ಪ್ರೇಮಕತೆ, ತ್ರಿಕೋನವಾಗಿ ಮತ್ತೆ ವಾಪಸ್ಸು ಅಲ್ಲಿಗೆ ಬರುತ್ತದೆ. ನಿರ್ದೇಶಕರು ನಾಯಕನನ್ನು ಸಾಹಸಿ ಎಂಬುದನ್ನು ಮರೆತಂತೆ ಚಿತ್ರ ಮಾಡಿದ್ದಾರೆ. ನೋಡುತ್ತಾ ನೋಡುತ್ತಾ ಹಳೆಯ ಚಿತ್ರದಂತೆ ಭಾಸವಾಗುವ ಜ್ಯೋತಿರಾಜ್ ನಲ್ಲಿನ ಕೆಲವೇ ಕೆಲವೇ ಅಪರೂಪದ ಸಾಹಸ ದೃಶ್ಯಗಳು ಖುಷಿಕೊಡುತ್ತವೆ. ಆದರೆ ಅವಷ್ಟೇ ಚಿತ್ರವನ್ನು ಮೇಲೆತ್ತಲು ಸಾಧ್ಯವಿಲ್ಲವಲ್ಲ. ಅಲ್ಲವೇ?
ಐಶಾನಿ ಸಾಕಷ್ಟು ಅಳುತ್ತಾರೆ, ಅಭಿನಯಿಸುತ್ತಾರೆ. ದೀಪಿಕಾ ದಾಸ್ ಆಗಾಗ ಬರುತ್ತಾರೆ ಹೋಗುತ್ತಾರೆ, ಉಳಿದಂತೆ ಸಹನಟರು, ಪೋಷಕ ಪಾತ್ರವರ್ಗದಲ್ಲಿ ರಮೇಶ್ ಭಟ್, ಕಾಶಿ, ಲಕ್ಷ್ಮಿ ಚಂದ್ರಶೇಖರ್, ಮುಂತಾದವರು ತಮ್ಮ ಅನುಭವ ಮೆರೆಯುತ್ತಾರೆ.
ಕೊನೆ ಮಾತು: ಒಬ್ಬ ಕಲಾವಿದನ/ವ್ಯಕ್ತಿಯ ಸಾಮರ್ಥ್ಯವನ್ನು ಚಿತ್ರದಲ್ಲಿ ಬಳಸಿಕೊಂಡು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುವಾಗ ಪ್ರೇಕ್ಷಕ ಅಂತಹವನ್ನನ್ನು ಆಯ್ಕೆ ಮಾಡಿಕೊಂಡಾಗ ಎನ್ನನ್ನು ನಿರೀಕ್ಷೆ ಮಾಡುತ್ತಾನೆ ಎಂಬುದು ಮುಖ್ಯವಾಗುತ್ತದೆ. ನಿರ್ದೇಶಕರು ಅದರ ಬಗ್ಗೆ ಗಮನ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಸುಮ್ಮನೆ ಆಕರ್ಷಣೆಗಾಗಿ ಇಂತಹ ವ್ಯಕ್ತಿಯನ್ನು ಆಯ್ಕೆಮಾಡಿಕೊಂಡು ಸಾದಾರಣ ಕತೆಯ ಚಿತ್ರವನ್ನು ಮಾಡಿದಾಗ ವ್ಯಕ್ತಿಯ ಪ್ರತಿಭೆಯೂ ಆ ಕತೆಯೂ ವ್ಯರ್ಥ ಎನಿಸುತ್ತದೆ ಎಂಬುದನ್ನು ನಿರ್ದೇಶಕರು ಮನಗಾಣಬೇಕಾಗುತ್ತದೆ.


Monday, December 22, 2014

ಸಾರೀ ಕಣೆ:

ಚಿತ್ರ ಪ್ರಾರಂಭವಾದ ಐದು ನಿಮಿಷಕ್ಕೆ ಚಿತ್ರದ ನಿರ್ದೇಶಕ ಮಹತ್ವಾಕಾಂಕ್ಷಿ ಎನಿಸುತ್ತದೆ. ಅಲ್ಲದೆ ಹೊಸ ಪ್ರಯೋಗ ಮಾಡಲು ಹಾತೊರೆದಿದ್ದಾರೆ ಎನಿಸುತ್ತದೆ. ಆದರೆ ಚಿತ್ರ ಮುಂದೆ ಸಾಗಿದಂತೆ ಅದೆಲ್ಲ ಭ್ರಮೆ ನಿರ್ದೇಶಕರು ಆ ಭ್ರಮೆಯಲ್ಲಿಯೇ ಮುಳುಗಿ ಈ ತರಹದ ಸಿನಿಮಾ ಮಾಡಿದ್ದಾರೆ ಎಂಬುದಕ್ಕೆ ಇಡೀ ಚಿತ್ರವೇ ಒಂದು ಪುರಾವೆಯಾಗುತ್ತದೆ.
ಈಗಾಗಲೇ ಸಿನಿಮಾ ರಂಗದಲ್ಲಿ ಅದರದೇ ಆದ ವಿಭಾಗಗಳಿವೆ. ಆದರೆ ಈ ಚಿತ್ರ ಆ ಎಲ್ಲಾ ವಿಭಾಗಗಳನ್ನೂ ಪಕ್ಕಕ್ಕಿಟ್ಟು ತನ್ನದೇ ಆದ ಹೊಸ ವಿಭಾಗವನ್ನು ಸೃಷ್ಟಿಸುತ್ತದೆ ಎಂಬರ್ಥದ ಮಾತುಗಳನ್ನು ಆಡುತ್ತಾರೆ. ಹಾಗೆ ನೋಡಿದರೆ ಅವರು ಹೇಳುವ ಮಾತಲ್ಲಿ ಸತ್ಯವಿದೆ. ಚಿತ್ರ ಯಾವ ಕೆಟಗರಿ ಗೂ ಸೇರದ ಎಡಬಿಡಂಗಿ ಚಿತ್ರವಾಗಿದೆ. ಪ್ರಾರಂಭದಲ್ಲಿ ಅಮ್ಮ ಮಗನ ಸೆಂಟಿಮೆಂಟ್ ನಿಂದ ಚಿತ್ರ ತೆರೆದುಕೊಂಡು ಅಲ್ಲಿಂದ ಸೀದಾ ಕಾಲೇಜ್ ಕ್ಯಾಂಪಸ್ ಗೆ ಶಿಫ್ಟ್ ಆದಾಗ ಇದೊಂದು ಹದಿಹರೆಯದ ಲವ್ ಸ್ಟೋರಿ ಎನಿಸುತ್ತದೆ. ಆಮೇಲೆ ನಾಯಕ ನಾಯಕಿ ಓಡಿ ಹೋಗಲು ಯೋಜಿಸಿದಾಗ ಇದ್ಯಾವುದೋ ಪರಾರಿ ಕತೆ ಎನಿಸುತ್ತದೆ. ಆದರೆ ದೆವ್ವದ ಮನೆಗೆ ಹೋದಾಗ ಹಾರರ್ ಎನಿಸುತ್ತದೆ. ಅಲ್ಲಿಂದ ನಾಯಕಿಯ ಕೊಲೆ ಆದಾಗ ಸಸ್ಪೆನ್ಸ್ ಎನಿಸುತ್ತದೆ. ಅಲ್ಲಿಂದಾ ಮನೋವೈಜ್ಞಾನಿಕ ಎನಿಸಿ ಏನೇನೋ ಆಗಿ ಚಿತ್ರ ಮುಗಿಯುತ್ತದೆ.
ಈ ಚಿತ್ರದ ಕತೆಯೇನು ಎಂದರೆ ಹೇಳುವುದು ಕಷ್ಟ. ಚಿತ್ರದಲ್ಲಿ ಎಲ್ಲವೂ ಇದೆ. ಆದರೆ ನಿರ್ದೇಶಕರ ಪ್ರೌಡಿಮೆ ಯಾವ ವಿಭಾಗದಲ್ಲೂ ಕಾಣಸಿಗುವುದಿಲ್ಲ. ಸಂಭಾಷಣೆ, ಚಿತ್ರಕತೆ ಎಲ್ಲವೂ ಜಾಳು ಜಾಲಾಗಿದ್ದು ಸಿನಿಮಾ ಆಕಳಿಕೆ ತರಿಸುತ್ತದೆ. ಕೆಲವೊಮ್ಮೆ ಬೇಸರ ಉಂಟು ಮಾಡುತ್ತದೆ.
ಇಲ್ಲಿ ನಿರ್ದೇಶಕರೇ ಕತೆ ಚಿತ್ರಕತೆ ಸಂಭಾಷಣೆ ಸಾಹಿತ್ಯ ಬರೆದು ನಟಿಸಿದ್ದಾರೆ. ಅಷ್ಟೂ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತುಕೊಂಡಿರುವ ರೂಪೇಶ್ ಯಾವ ವಿಭಾಗದಲ್ಲೂ ತಮ್ಮ ಚಾಣಾಕ್ಷತೆ ತೋರದಿರುವುದು ವಿಷಾದದ ಸಂಗತಿ. ಇಷ್ಟಕೂ ಇತ್ತೀಚಿಗಿನ ಯುವ ನಿರ್ದೇಶಕರ್ಯಾಕೆ ಯಾವೊಂದು ವಿಭಾಗದಲ್ಲೂ ಪರಿಣತರಾಗದಿದ್ದರೂ ಎಲ್ಲಾ ವಿಭಾಗವನ್ನೂ ಹೆಗಲ ಮೇಲೆತ್ತಿಕೊಳ್ಳುತ್ತಾರೆ ಎಂಬುದು ಯಕ್ಷ ಪ್ರಶ್ನೆ. ಅದಕ್ಕೆ ಚಿತ್ರದ ಫಲಿತಾಂಶದ ಮೂಲಕ ನಿರ್ದೇಶಕರು-ನಟರು ಪಾಠ ಕಲಿತುಕೊಳ್ಳಬೇಕು.
ನಟನೆಯಲ್ಲಿ ರೂಪೇಶ್ ತುಂಬಾ ಹಿಂದೆ ಉಳಿದಿದ್ದಾರೆ. ಅರ್ಚನಾ ನಾಯಕಿಯಾಗಿ ಅಭಿನಯಿಸುವ ಪ್ರಯತ್ನ ಮಾಡಿದ್ದಾರೆ. ರೇಣುಕುಮಾರ್ ಛಾಯಾಗ್ರಹಣ ಮತ್ತು ಪೀಟರ್ ಜೋಸೆಫ್ ಅವರ ಸಂಗೀತ ಚಿತ್ರದಲ್ಲಿನ ಸಹನೀಯ ಅಂಶಗಳಾಗಿವೆ. ಉಳಿದಂತೆ ಸುಮ್ಮನೆ ಬಂದು ಹೋಗುತ್ತಿರುವ ನೀರಸ ಚಿತ್ರಗಳ ಪಟ್ಟಿಯಲ್ಲಿ ಸಾರಿ ಕಣೆ ಸೇರಿಕೊಳ್ಳುತ್ತದೆ.

ಕೊನೆ ಮಾತು: ನಾಯಕಿಗೆ ಸಾರಿಕಣೆ ಎಂದು ಕೂಗಾಡಿ ಹೇಳುವ ಚಿತ್ರದ ನಾಯಕ ಅದೇ ಮಾತನ್ನೂ ಪ್ರೇಕ್ಷಕರಿಗೆ ಹೇಳಿಬಿಟ್ಟರೆ ಅವರ ಮುಂದಿನ ಚಿತ್ರಕ್ಕೆ ರಿಯಾಯಿತಿ ಸಿಗಬಹುದೇನೋ?

Saturday, December 20, 2014

ಹಗ್ಗದ ಕೊನೆ:

ಒಂದು ಕತೆಯನ್ನು ನಾಟಕಕ್ಕೆ ರೂಪಾಂತರಿಸುವಾಗ ಅದರದೇ ಆದ ಮಿತಿ ಮತ್ತು ವಿಸ್ತಾರದ ನಡುವೆ ಸಾಗಬೇಕಾಗುತ್ತದೆ. ಹಾಗೆಯೇ ನಾಟಕವೂ ಚಿತ್ರರೂಪಕ್ಕೆ ಬಂದಾಗ ಅಲ್ಲೂ ಅದೇ ಪುನರಾವರ್ತನೆಯಾಗುತ್ತದೆ. ಆದರೆ ದೃಶ್ಯ ಮಾಧ್ಯಮದಲ್ಲಿ ಹೆಚ್ಚು ಅವಕಾಶಗಳು ಇರುವುದರಿಂದ ಅದನ್ನು ಮತ್ತಷ್ಟು ಶಕ್ತಿಯುತವನ್ನಾಗಿ ಮಾಡಬಹುದು. ಇದು ಪರ್ವತವಾಣಿಯವರ ಹಗ್ಗದ ಕೊನೆ ನಾಟಕ. ಅರ್ಧ ಶತಮಾನದ ಹಿಂದಿನ ನಾಟಕ ಈವತ್ತಿಗೂ ಪ್ರಸ್ತುತ ಎನಿಸುವುದು ಅದರ ವಸ್ತು ವಿಶಾಲತೆಯ ದೃಷ್ಟಿಯಿಂದ. ಏಕೆಂದರೆ ಈವತ್ತಿಗೂ ಗಲ್ಲುಶಿಕ್ಷೆಯಿದೆ. ಅದರ ಬೇಕು ಬೇಡಗಳ ಬಗ್ಗೆ ವಾದ ವಿವಾದ ಚರ್ಚೆ ಎಲ್ಲವೂ ಇದೆ. ಹಾಗಾಗಿ ಹಗ್ಗದ ಕೊನೆ ಈವತ್ತಿಗೂ ಪ್ರಸ್ತುತ ಚಿತ್ರ ಎನಿಸಿಕೊಳ್ಳುತ್ತದೆ.
ಚಿತ್ರದ ಕತೆ ಸರಳವಾದದ್ದು . ಒಬ್ಬನಿಗೆ ಗಲ್ಲು ಶಿಕ್ಷೆಯಾಗಿದೆ. ಸೆರೆಮನೆಯಲ್ಲಿ ಸಾವಿನ ದಿನಗಳನ್ನು ಎಣಿಸುತ್ತಾ ಕುಳಿತ ಆತ ತನ್ನ ಬದುಕಿನ ಪುಟಗಳನ್ನೂ ತಿರುವಹಾಕುವ ಪ್ರಯತ್ನಕ್ಕೆ ಕೈ ಹಾಕುತ್ತಾನೆ. ತನ್ನ ಈವತ್ತಿನ ಪರಿಸ್ಥಿತಿಗೆ ಕಾರಣಗಳನ್ನು ಅದಕ್ಕೆಡೆಮಾಡಿದ ಪ್ರಸಂಗಗಳನ್ನು ವ್ಯಕ್ತಿಗಳನ್ನು ಕಣ್ಮುಂದೆ ತಂದುಕೊಳ್ಳುತ್ತಾನೆ. ಒಂದು ಘಟನೆಯ ಮೂಲವಾದ ಹಿನ್ನೆಲೆ, ವ್ಯಕ್ತಿಯನ್ನು ಶಿಕ್ಷಿಸದೆ ಕಾರ್ಯರೂಪಕ್ಕೆ ತಂದವನನ್ನು ಮಾತ್ರ ಶಿಕ್ಷಿಸುವ ವ್ಯವಸ್ಥೆಯನ್ನು ಪ್ರಶ್ನಿಸುತ್ತಾನೆ. ಹಾಗಾದಾಗ ಆರೋಪಿ ಸಾಯಬಹುದು, ಆದರೆ ಅದನ್ನು ಸೃಷ್ಟಿಸುವ ವ್ಯವಸ್ಥೆ ಸಾಯುವುದಿಲ್ಲವಲ್ಲ ಎಂಬುದು ಅವನ ಪ್ರಶ್ನೆ. ಅದಕ್ಕೆ ಉತ್ತರ ಸಿನಿಮಾದಲ್ಲಿ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು. ಅಥವಾ ಸಿನಿಮಾ ನೋಡುತ್ತಾ ನೋಡುತ್ತಾ ಚಿಂತನೆ ಮಾಡಬಹುದು.
ಹಗ್ಗದಕೊನೆ ಚಿತ್ರ ಸಾವಧಾನ ಬಯಸುತ್ತದೆ. ಹಾಗೆಯೇ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸುವ ಮನಸ್ಥಿತಿ ಬೇಡುತ್ತದೆ. ಇಲ್ಲಿ ಎಲ್ಲವೂ ಅರ್ಥವಾಗುವುದಿಲ್ಲ. ಅಥವಾ ಅರ್ಥವಾಗಲೂ ಏನೂ ಇಲ್ಲ.ಎಲ್ಲವೂ ಅಂಗೈ ಗೆರೆಯಷ್ಟೇ ನಿಚ್ಚಳ. ಆದರೆ ಕತೆಯ ಹೂರಣದ ಒಳಗೆ ಸತ್ವವಿದೆ. ಅದನ್ನು ಅರ್ಥೈಸಿಕೊಳ್ಳದೆ ಬರೀ ಸಿನಿಮಾವಾಗಿಯಷ್ಟೇ ನೋಡಿದರೆ ಸಿನಿಮಾ ರುಚಿಸಲು ಕಷ್ಟವೇನೋ..? ಹಾಗಂತ ಚಿತ್ರವೇನೂ ಅನಾಸಕ್ತಿ ಉಂಟು ಮಾಡುವುದಿಲ್ಲ. ಪ್ರಾರಂಭದ ಹದಿನೈದು ನಿಮಿಷ ತಡೆದರೆ ಅನಂತರ ಚಿತ್ರ ತನ್ನೆಡೆಗೆ ಸೆಳೆದುಕೊಂಡು ಕೂರಿಸಿಕೊಳ್ಳುತ್ತದೆ.
ಚಿತ್ರದ ಬಹುತೇಕ ಭಾಗ ನಡೆಯುವುದು ಕತ್ತಲೆ ಕೋಣೆಯಲ್ಲಿ.ಛಾಯಾಗ್ರಾಹಕರ ತಮ್ಮ ಕಸುಬುದಾರಿಕೆ ಮೆರೆದಿರುವುದು ಇಲ್ಲೇ. ಹಾಗೆಯೇ ಸಂಗೀತ ಚಿತ್ರಕ್ಕೆ ಶಕ್ತಿ ತುಂಬುವಲ್ಲಿ ಭಾಗಶಃ ಯಶಸ್ವಿಯಾಗಿದೆ.
ಚಿತ್ರದ ಬಹುತೇಕ ಕತೆ ಮಾತನ್ನೇ ನಂಬಿಕೊಂಡಿದೆ. ಇದೆ ಚಿತ್ರದ ಶಕ್ತಿಯೂ ಹೌದು ಹಾಗೆ ದೌರ್ಬಲ್ಯವೂ ಹೌದು. ಆದರೂ ಸಂಭಾಷಣೆ ಬರೆದ ಪರ್ವತವಾಣಿ ಮತ್ತು ನವೀನ ಕೃಷ್ಣ ಅಭಿನಂದನಾರ್ಹರು. ಹಾಗೆಯೇ ಚಿತ್ರದ ಚಿತ್ರಕತೆ ಬಿಗಿಯಾಗಿದೆ. ಕತೆಯ ಜಾಡನ್ನು ಆಚೆ ಈಚೆ ಸರಿಯದೆ ತನ್ನ ದಿಕ್ಕಿನಲ್ಲಿ ಸಾಗುವುದರಿಂದ ಸಿನಿಮದಲ್ಲಿನ ಭಾವ ನೇರವಾಗಿ ಪ್ರೇಕ್ಷಕನ ಮನಸ್ಸು ಮುಟ್ಟುತ್ತದೆ. ಆ ಭಾವ ಪ್ರೇಕ್ಷಕನಿಗೆ ಓಕೆಯಾಗುತ್ತದಾ? ಇದು ಅವರವರ ಭಾವಕ್ಕೆ ಬಿಟ್ಟದ್ದು ಎನ್ನಬಹುದು.
ದಯಾಳ್ ಈ ಹಿಂದೆ ಮಸಾಲ ರೀತಿಯ ಚಿತ್ರಗಳನ್ನು ಕೊಟ್ಟವರು. ಏಕಾಏಕಿ ಮಗ್ಗುಲು ಬದಲಿಸಿದ್ದಾರೆ. ಗಂಭೀರ ಕಥಾವಸ್ತುವಿನ ಸಿನೆಮಾವನ್ನು ಅದರ ಗತಿ ಕಾಯ್ದುಕೊಳ್ಳುತ್ತಾ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ.ಆ ಮೂಲಕ ವಸ್ತುವಿನ ಘನತೆಗೆ ಚ್ಯುತಿ ಬರದ ಹಾಗೆ ಕಾಪಾಡಿದ್ದಾರೆ.
ನವೀನ ಕೃಷ್ಣಾ ತಾವೊಬ್ಬ ಪ್ರತಿಭಾವಂತರು ಎಂಬುದಕ್ಕೆ ಈ ಚಿತ್ರದಲ್ಲಿ ಮತ್ತೊಮ್ಮೆ ಪುರಾವೆ ಒದಗಿಸಿದ್ದಾರೆ.. ಇನ್ನುಳಿದ ಕಲಾವಿದರುಗಳು ಚಿತ್ರರಂಗದಲ್ಲಿ ನುರಿತವರಾದ್ದರಿಂದ ಪಾತ್ರಕ್ಕೆ ಬಲ ಬಂದಿದೆ. ಸುಚೇಂದ್ರ ಪ್ರಸಾದ್ ಜೈಲರ್ ಆಗಿ ಗಮನ ಸೆಳೆಯುತ್ತಾರೆ.

ಕೊನೆ ಮಾತು: ಕೊಲೆ ಮಾಡಿದರೆ ಅದನ್ನು ಶಿಕ್ಷಿದರೆ ಅದೂ ಕೊಲೆಯಲ್ಲವೇ? ಹಾಗಾದರೆ ಕೊಲೆಗಾರನಿಗೂ ಶಿಕ್ಷೆ ವಿಧಿಸುವವನಿಗೂ ಏನು ವ್ಯತ್ಯಾಸ ಎನ್ನುವ ಪ್ರಶ್ನೆ ಎತ್ತುವ ಚಿತ್ರ ಅದರಾಚೆಗೆ ಕೊಲೆಯಾದವನ ಹಿಂದೆಯೂ ಸಮಾಜವಿದೆ ಎಂಬುದರ ಬಗೆ ಹೆಚ್ಚು ಗಮನ ಹರಿಸಿಲ್ಲದೆ ಇರುವುದು ಎಲ್ಲೂ ಚಿತ್ರ ಸ್ವಲ್ಪ ಮಟ್ಟಿಗೆ ಏಕಮುಖವಾಯಿತು ಎನಿಸುತ್ತದೆ. ಆದರೆ ಎಲ್ಲವನ್ನೂ ಒಂದೇ ಚೌಕಟ್ಟಿನೊಳಗೆ ಸೇರಿಸಲು ಪ್ರಯತ್ನಿಸುವುದು ಕಷ್ಟದ ಕೆಲಸ. ಇರಲಿ. ಕನ್ನಡದಲ್ಲಿ ಕಲಾತ್ಮಕ ಚಿತ್ರಗಳು ಬರುತ್ತವೆ ಹೋಗುತ್ತವೆ. ನಿಧಾನಕ್ಕೆ ಸಾಗುವ ಮಂದಗತಿಯ ನಿರೂಪಣೆ ಜ್ವಲಂತ ಸಮಸ್ಯೆ ಇಂತಹ ಚಿತ್ರಗಳಿಗೆ ಸರಕು. ಆದರೆ ಹಗ್ಗದಕೊನೆ ಅದೇ ನಿಟ್ಟಿನಲ್ಲಿದ್ದರೂ[ನಿರೂಪಣೆ ದೃಷ್ಟಿಯಿಂದ] ಬರುಬರುತ್ತಾ ಥ್ರಿಲ್ಲರ್ ರೀತಿಯಲ್ಲಿ ಭಾಸವಾಗುತ್ತಾ ಹೋಗುತ್ತದೆ ಎಂಬುದು ಚಿತ್ರದ ಪ್ಲಸ್ ಪಾಯಿಂಟ್. ಒಮ್ಮೆ ಸಾವಧಾನಚಿತ್ತರಾಗಿ ಸಿನಿಮಾ ನೋಡಿ ಬರಬಹುದು.

ಚಿರಾಯು

ರೌಡಿಸಂ ಚಿತ್ರಗಳು ನಿರೂಪಣೆಯಲ್ಲಿ ಸ್ವಲ್ಪ ಆಚೀಚೆಯಾದರೆ ಭೂಗತ ಲೋಕದ ಚಿತ್ರವಾಗುವುದಿಲ್ಲ. ಬದಲಿಗೆ ಅದೊಂದು ರೌಡಿಸಂ ಆಧಾರಿತ ಮಸಾಲ ಚಿತ್ರವಾಗಿ ಬಿಡುತ್ತದೆ. ಒಬ್ಬ ನಿರ್ದೇಶಕ ಒಂದು ಕತೆಯನ್ನು ಕಲ್ಪಿಸಿ ದೃಶ್ಯೀಕರಣ ಮಾಡಿಕೊಂಡು ಅಖಾಡಕ್ಕೆ ಇಳಿಯದಿದ್ದರೆ ಸಾದಾರಣ ಚಿತ್ರವಾಗಿ ಬಿಡುತ್ತದೆ.
ಆ ನಿರ್ದೇಶಕನಿಗೆ ಅದು ಮೊದಲ ಸಿನಿಮಾ ಇರಬಹುದೇನೋ? ಆದರೆ ಪ್ರೇಕ್ಷಕನಿಗೆ..?
ಈ ಪ್ರಶ್ನೆ ಇಟ್ಟುಕೊಂಡು ಪ್ರಶಾಂತ್ ಚಿತ್ರ ನಿರ್ದೇಶನ ಮಾಡಿದ್ದರೆ ಚಿತ್ರ ಚಿರಾಯು ಸಹನೀಯವಾಗುತ್ತಿತ್ತು.
ಒರಟ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ ಪ್ರಶಾಂತ್ ಆವತ್ತಿನ ನಟನೆಯನ್ನೇ ಈವತ್ತಿಗೂ ಮುಂದುವೆರೆಸಿಕೊಂಡು ಹೋಗಿದ್ದಾರೆ ಎಂಬುದು ಹೊಗಳಿಕೆಯ ಮಾತಲ್ಲ. ಚಿರಾಯು ಚಿತ್ರದ ಕತೆ ಸರಳ, ಪುನರಾವರ್ತಿತ.
ಒಂದು ಕುಟುಂಬ ಅಲ್ಲೊಬ್ಬ ನಾಯಕ . ಮನೆಯವರ ಪ್ರೀತಿ ಪಾತ್ರ ಅಥವಾ ಉಂಡಾಡಿಗುಂಡ. ಅಲ್ಲೊಬ್ಬ ರೌಡಿ ಒಂದು ಅನಿರೀಕ್ಷಿತ ಘಟನೆ.. ಸಿಡಿದ ನಾಯಕ, ಕೊಲೆ. ಭೂಗತ ಲೋಕಕ್ಕೆ ಎಂಟ್ರಿ. ಆಮೇಲೆ ಅವನನ್ನು ಇಷ್ಟ ಪಡುವ ನಾಯಕಿ. ಅವನ ವಿರುದ್ಧ ಮಸಲತ್ತು ಮಾಡುವ ರೌಡಿಗಳು.. ಹೀಗೆ ಸಾಗುವ ಕತೆ ಚಿರಾಯು ಚಿತ್ರದ್ದು ಕೂಡ. ಹಾಗೆಯೇ ಇಂತಹ ಹಲವಾರು ಚಿತ್ರದ್ದೂ ಕೂಡ. ಒಬ್ಬ ವ್ಯಕ್ತಿ ರೌಡಿಯಾಗುವುದು ಲಾಂಗು ಹಿಡಿದು ಕುಡಿದು ಅಬ್ಬರಿಸಿ ಮಾತಾಡಿ ಅದನ್ನೇ ಹೀರೋಯಿಸ್ಮ್ ಎಂದುಕೊಳ್ಳುವುದು ನಮಗೆ ಹೊಸತಲ್ಲ. ಹಾಗಾಗಿಯೇ ಚಿತ್ರವೂ ಹೊಸತು ಎನಿಸುವುದಿಲ್ಲ.
ಈ ನಡುವೆಯೂ ಒರಟ ಪ್ರಶಾಂತ್ ನಿರೂಪಣೆಯಲ್ಲಿ ಒಂದಷ್ಟು ಕೈ ಚಳಕ ತೋರಿಸಲು ಪ್ರಯತ್ನಿಸಿರುವುದು ಮೆಚ್ಚುಗೆ ಪಡುವ ಅಂಶ ಎನ್ನಬಹುದು. ಚಿತ್ರದ ಕತೆಯನ್ನು ಒಬ್ಬ ನಿರ್ದೇಶಕನ ಮುಖಾಂತರ ಅನಾವರಣಗೊಳಿಸುತ್ತಾರೆ. ಅಲ್ಲಿಂದ ಹಿಮ್ಮುಖವಾಗಿ ಸಾಗುವ ಕತೆ ಚಿತ್ರಕತೆ ನಾಯಕನ ಕತೆಯನ್ನು ಫ್ಲಾಶ್ ಬ್ಯಾಕ್ ತಂತ್ರದೊಂದಿಗೆ ತೆರೆದಿಡುತ್ತಾ ಸಾಗುತ್ತದೆ. ಅಲ್ಲಿಗೆ ಚಿತ್ರದಲ್ಲಿ ಏನೋ ಸ್ವಲ್ಪ ಇರಬಹುದು ಎನಿಸಿದರೂ ಮುಂದಿನ ಆಗುಹೋಗುಗಳು ಸಾದಾರಣ ಎನಿಸುವುದರಿಂದ ಚಿತ್ರ ಆಸಕ್ತಿ ಕಳೆದುಕೊಳ್ಳುತ್ತದೆ.
ಒರಟ ಪ್ರಶಾಂತ್ ತಮ್ಮ ಪಾತ್ರದ ವೈಭವೀಕರಣದ ನಿಟ್ಟಿನಲ್ಲಿ ಫುಲ್ ಮಾರ್ಕ್ಸ್ ಗಳಿಸುತ್ತಾರೆ. ಆದರೆ ಪಾತ್ರವನ್ನು ಅದರ ಒಳ ತುಮುಲವನ್ನು ಪಕ್ಕಕ್ಕಿrisiರಿಸಿಬಿಡುತ್ತದೆ ಎಂಬ ಅಂಶವನ್ನು ಪಕ್ಕಕ್ಕಿಟ್ಟಿದ್ದಾರೆ. ಹಾಗಾಗಿ ಇಲ್ಲಿ ಹೀರೋಯಿಸ್ಮ್ ಕಾಣಿಸುತ್ತದೆ. ರೌಡಿಸಂ ಪಕ್ಕಕ್ಕೆ ಸರಿಯುತ್ತದೆ. ಚಿತ್ರ ಮಸಾಲೆ ಹೊಡೆದಾಟದ ಚಿತ್ರ ಎನಿಸಿಕೊಳ್ಳುವಲ್ಲಿಗೆ ಸುಸ್ತಾಗುತ್ತದೆ.
ಪ್ರಶಾಂತ್ ಹೊಡೆದಾಟದಲ್ಲಿ ಗಮನ ಸೆಳೆಯುತ್ತಾರೆ. ಆದರೆ ಇಂತಹ ಚಿತ್ರಗಳಿಗೆ ಬೇಕಾದ ಸಾಹಸ ಸಂಯೋಜನೆ ಕಾಣಸಿಗದು. ಶುಭಾ ಪೂಂಜಾ ಪಾತ್ರದಲ್ಲಿ ಅಂತಹ ಸತ್ವವಿಲ್ಲ. ಒಂದಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ ಎಣಿಸುವುದನ್ನು ಬಿಟ್ಟರೆ ಅವರ ಬಗೆಗೆ ಬೇರೇನೂ ಹೇಳಲು ಸಾಧ್ಯವಿಲ್ಲ. ಉಳಿದ ನುರಿತ ಕಲಾವಿದರಾದ ಅವಿನಾಶ್, ಮುನಿ, ಪವಿತ್ರಾ ಲೋಕೇಶ್, ಪದ್ಮ ವಾಸಂತಿ, ಓಂ ಪ್ರಕಾಶ್ ರಾವ್ ತಮ್ಮ ಅನುಭವದಲ್ಲಿ ಇಂತಹ ಪಾತ್ರಗಳನ್ನೂ ಈಗಾಗಲೇ ನಿರ್ವಹಿಸಿರುವುದರಿಂದ ಲೀಲಾಜಾಲವಾಗಿ ತಾಮ ಪಾತ್ರಗಳನ್ನೂ ನಮ್ಮ ಮುಂದಿರಿಸಿದ್ದಾರೆ.
ಸಂಗೀತ ಮತ್ತು ಛಾಯಾಗ್ರಹಣ ಸಾದಾರಣ.

ಒರಟ ಪ್ರಶಾಂತ್ ಈ ಚಿತ್ರದ ನಿರ್ದೇಶನದ ಜೊತೆಗೆ ನಾಯಕನಾಗಿ ಜೊತೆಗೆ ಬರಹಗಾರನಾಗಿಯೂ ಎಂಟ್ರಿ ಕೊಟ್ಟಿದ್ದಾರೆ. ಅದೇ ಹೊರೆಯಾಗಿಯೋ ಏನೋ ಎಲ್ಲಾ ವಿಭಾಗಗಳೂ ಪರಿಪೂರ್ಣತೆ ಇಲ್ಲದೆ ಸೊರಗಿವೆ.

ಕೋಲಾಹಲ

ಚಿತ್ರದ ಶೀರ್ಷಿಕೆ ನೋಡಿದಾಕ್ಷಣ ನೋಡುಗರ ಮನಸ್ಸಿನಲ್ಲಿ ಕೋಲಾಹಲ ಉಂಟಾಗುವುದಿಲ್ಲ. ಆದರೆ ಚಿತ್ರ ನೋಡುತ್ತ ನೋಡುತ್ತ ಉಂಟಾದರೆ ಅದಕ್ಕೆ ನಿರ್ದೇಶಕರೇ ಜವಾಬ್ದಾರಿ ಎನ್ನದೆ ಬೇರೆ ದಾರಿಯಿಲ್ಲ.
ಪ್ರಶ್ನೆ-1: ಚಿತ್ರ ಯಾವ ವಿಭಾಗಕ್ಕೆ ಸೇರುತ್ತದೆ
ಉತ್ತರ1: ಚಿತ್ರದಲ್ಲಿ ಕಾಮಿಡಿಯಿದೆ. ಅದು ನಗಿಸುತ್ತದೋ ಇಲ್ಲವೋ ಅದು ಬೇರೆ ಮಾತು ಅಂತೂ ಕಾಮಿಡಿ ಇದೆ. ಹಾಗಾಗಿ ಇದು ಕಾಮಿಡಿ ಚಿತ್ರ.
ಉತ್ತರ2: ಚಿತ್ರದಲ್ಲಿ ಒಬ್ಬ ಒಂದು ಅಪರಾಧ ಮಾಡಿ ಪರಾರಿ. ಅವನ ಹಿಂದೆ ಇನ್ನೊಬ್ಬ ದೌಡು. ಹುಡುಕಾಟ. ಸಿಗುತ್ತಾನಾ ಇಲ್ಲವಾ? ಸಸ್ಪೆನ್ಸ್. ಈ ನಿಟ್ಟಿನಲ್ಲಿ ಇದೊಂದು ಥ್ರಿಲ್ಲರ್.
ಉತ್ತರ-3: ಚಿತ್ರದಲ್ಲಿ ನಾಯಕಿಯರಿದ್ದಾರೆ. ಹಾಡಿದೆ. ಕುಣಿತವಿದೆ. ಹಾಗಾಗಿ ಇದೊಂದು ರೋಮ್ಯಾಂಟಿಕ್ ಸಿನಿಮಾ ಎನ್ನಲೂ ಬಹುದು.
ಉತ್ತರ-4: ಚಿತ್ರದಲ್ಲೊಬ್ಬ ಡಾನ್ ಇದ್ದಾನೆ . ಹಾಗಾಗಿ ಚಿತ್ರಕ್ಕೆ ಭೂಗತ ನೆರಳಿನ ಚಿತ್ರ ಎನ್ನುವ ಹಣೆಪಟ್ಟಿಯನ್ನು ಕೊಡಬಹುದು.
ಹೀಗೆ ಚಿತ್ರ ನೋಡಿ ಈ ರೀತಿ ಪಟ್ಟಿ ಮಾಡುತ್ತಾ ಹೋದರೆ ಅದೇಗೆ ಓದುಗರಿಗೆ ಅವರ ಮನಸಿನಲ್ಲಿ ಕೋಲಾಹಲ ಉಂಟಾಗುತ್ತದೋ ಚಿತ್ರ ನೋಡುವಾಗಲೂ ಉಂಟಾಗುತ್ತದೆ. ನಿರ್ದೇಶಕ ಭಾಸ್ಕರ್ ತಮ್ಮ ಚಿತ್ರಕ್ಕಾಗಿ ಚಿಕ್ಕ ಕತೆಯನ್ನು ಆರಿಸಿಕೊಂಡಿದ್ದಾರೆ. ಆದರೆ ಅವರಿಗೆ ಚಿತ್ರವನ್ನು ಒಂದೇ ಜಾನರ್ ಗೆ ಸೀಮಿತಗೊಳಿಸಲು ಇಷ್ಟವಾಗಿಲ್ಲ. ಹಾಗಾಗಿ ಏನೇನೋ ಸಾಧ್ಯವೋ ಎಲ್ಲವನ್ನು ಚಿತ್ರಕ್ಕೆ ಚಿತ್ರದ ಕತೆಗೆ ಬೇಕೋ ಬೇಡವೋ ಸೇರಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಹಾಗಾಗಿ ಚಿತ್ರ ಚಿತ್ರಾನ್ನ.
ಬರೆದದ್ದೇ ಕತೆ ಅಂದುಕೊಂಡಿದ್ದೆ ಚಿತ್ರಕತೆ ತೆಗೆದದ್ದೇ ಚಿತ್ರ ಎನ್ನಬಹುದು ನಿರ್ದೇಶಕರು.ಆದರೆ ಚಿತ್ರಕ್ಕೊಂದು ಕುಸುರಿ ಕೆಲಸದ ನೈಪುಣ್ಯತೆ ಬೇಕು. ಕಸುಬುದಾರಿಕೆ ಬೇಕು. ಈವತ್ತು ಚಿತ್ರದ ಬಗ್ಗೆ ಕಲಿಯಲು ಬೇರೆಯ ಚಿತ್ರಗಳೇ ಸಾಕು. ಅವುಗಳ ಏಳು ಬೀಳು, ಸೋಲು ಗೆಲವು ಗಮನಿಸಿದರೆ ಚಿತ್ರದ ಬಗ್ಗೆ ಅದ್ಯಯನ ಮಾಡಿದಂತೆಯೇ. ಅದೆಲ್ಲಾ ಇದ್ದೂ ಈವತ್ತಿಗೂ ಹೀಗೆ ಸಿನಿಮಾ ಮಾಡಿದಾಗ ಬೇಕಾಬಿಟ್ಟಿಸಿನಿಮಾ ಮಾಡಿದ್ದಾರಾ ನಿರ್ದೇಶಕರು ಎನಿಸದೇ ಇರದು.
ಚಿತ್ರದಲ್ಲಿ ಕುರಿ ಸುನೀಲ್ ಹೆಚ್ಚು ಕಾಣಲು ಸಿಗುತ್ತಾರೆ. ಉಳಿದ ಪಾತ್ರಗಳಲ್ಲಿ ಹೊಸಬರಿದ್ದಾರೆ. ಹಳಬರಿದ್ದಾರೆ. ಆದರೆ ಚಿತ್ರದ ಕತೆಯಿಂದಾಗಿ ಯಾವುದು ಯಾರೂ ಮನಸ್ಸಿನಲ್ಲಿ ಉಳಿಯುವುದಿಲ್ಲ.

ಚಿತ್ರವನ್ನು ಮೊದಲಾರ್ಧ ದ್ವಿತೀಯಾರ್ಧ ಹೀಗೆ ವಿಂಗಡಿಸಿರುವ ನಿರ್ದೇಶಕರು ಮೊದಲಾರ್ಧವನ್ನು ಬೋರ್ ಮಾಡಿಸುತ್ತಾರೆ. ದ್ವಿತೀಯಾರ್ಧವನ್ನು ನೀರಸ ಮಾಡುತ್ತಾರೆ.

ಒಂದಷ್ಟು ಮತ್ತಗಿನ ಅದ್ಯಯನ, ಸಿನಿಮಾ ವೀಕ್ಷಣೆ, ವಿಸ್ತೃತ ಚರ್ಚೆ ಇಲ್ಲದಿದ್ದರೆ ಇಂತಹ ಇನ್ನಷ್ಟು ಚಿತ್ರಗಳಿಗೆನೂ ಕನ್ನಡ ಚಿತ್ರರಂಗದಲ್ಲಿ ಬರವಿಲ್ಲ ಎನಿಸುತ್ತದೆ.

Sunday, December 14, 2014

ಜೈ ಭಜರಂಗ್ ಬಲಿ

ರವಿವರ್ಮ ಗುಬ್ಬಿ ಅವರ ಮೊದಲ ನಿರ್ದೇಶನದ ಸಂಗಮ ಕೂಡ ಎಲ್ಲಾ ಇದ್ದೂ ಏನೋ ಕೊರತೆಯಿತ್ತು ಎನಿಸಿಕೊಂಡಿದ್ದ ಸಿನಿಮಾ. ಈಗ ಅವರದೇ ನಿರ್ದೇಶನದ ಮಾತೊಂದು ಚಿತ್ರ ಕೂಡ ಅದೇ ನಿಟ್ಟಿನಲ್ಲಿರುವುದು ವಿಷಾದನೀಯ. ಅವನು ಪೋರಕಿ. ದುಡ್ಡು ಮಾಡಲು ಗೆಳೆಯರ ಜೊತೆ ಗೂಡಿ ನಾಟಕ ಆಡುತ್ತಾನೆ. ಕಳ್ಳತನ ಮಾಡುತ್ತಾನೆ. ಅವನಿಗೆ ಕನ್ನಡದ ವಿದೇಶಿ ಬೆಡಗಿ ಸಿಗುತ್ತಾಳೆ. ಸಮಯದ ಅಭಾವವಿಲ್ಲದೆ ಬೇಗನೆ ಹತ್ತಿರ ಆಗುತ್ತಾರೆ. ಆಮೇಲೆ ಕಳ್ಳತನದ ಆರೋಪ. ಅದು ದೇವಾಲಯದ ವಿಗ್ರಹದ ಕಳವಿನ ಆರೋಪ. ಈಗ ಆರೋಪಮುಕ್ತ ನಾಗುವುದರ ಜೊತೆಗೆ ಕಳ್ಳರನ್ನು ಹಿಡಿಯುವ ಬಡಿಯುವ ಕೆಲಸ ನಾಯಕನಿಗಿದೆ. ಜೊತೆಯಲ್ಲಿಯೇ ನಾಯಕಿಯೂ ಇರುವುದರಿಂದ ಹಾಡಿಗಾಗಿ ಕುಣಿದಾಡುವುದು ಉಂಟು.
ಒಂದು ಆಕ್ಷನ್ ಚಿತ್ರ ಎಂದಾಗ ಹೀಗೆಯೇ ತೆರೆದುಕೊಳ್ಳಬೇಕು ಎಂಬ ಸಿದ್ಧ ಸೂತ್ರವೊಂದಿದೆ. ಪ್ರಾರಂಭದಲ್ಲಿ ಹುಡುಗಾಟ, ಹಾಸ್ಯ, ಆಮೇಲೆ ಹುಡುಗಿ ಕುಣಿದಾಟ. ಮಧ್ಯಂತರಕ್ಕೆ ಒಂದು ಟ್ವಿಸ್ಟು..ಮುಂದಿನದ್ದು ಕೇಡಿಗಳ ಪರದಾಟ ನಾಯಕನ ಹೊಡೆದಾಟ. ಜೈ ಭಜರಂಗ್ ಬಲಿ ಈ ಸಿದ್ಧ ಸೂತ್ರವನ್ನು ಒಂದು ದಾರದ ಎಳೆಯೂ ಮಿಸ್ ಮಾಡದಂತೆ ನಿರೂಪಿಸಲಾಗಿದೆ.
ಪ್ರಾರಂಭದಲ್ಲಿ ಒಂದಷ್ಟು ದೃಶ್ಯಗಳು ಫ್ರೆಶ್ ಎನಿಸುತ್ತವೆ. ಆದರೆ ಬರುಬರುತ್ತಾ ಚಿತ್ರ ನೀರಸ ಎನಿಸಿಕೊಳ್ಳುತ್ತದೆ. ನಾಯಕ ನಾಯಕಿ ಜೋಡಿಯಾಗುವುದು ಮತ್ತು ಇಂಟರ್ವಲ್ ಟ್ವಿಸ್ಟ್ ಗಾಗಿ ಇಡೀ ಚಿತ್ರದ ಪಾತ್ರಧಾರಿಗಳು ಕಾಯುವುದು ಚಿತ್ರವನ್ನು ಅಲ್ಲಲ್ಲಿ ಆಕಳಿಕೆ ತರುವಂತೆ ಮಾಡುತ್ತದೆ. ಆದರೆ ದ್ವಿತೀಯಾರ್ಧದಲ್ಲಿ ಮತ್ತೆ ತೀವ್ರಗತಿ ಪಡೆದುಕೊಳ್ಳಬೇಕಿದ್ದ ಸಿನಿಮಾ ಅಲ್ಲೂ ನೀರಸವಾಗುವುದು ಚಿತ್ರದ ದೊಡ್ಡ ಋಣಾತ್ಮಕ ಅಂಶ.
 ಒಂದು ಆಕ್ಷನ್ ಸಿನಿಮಾ ಎಂದಾಕ್ಷಣ ಒಂದಷ್ಟು ಅದ್ದೂರಿ ಹೊಡೆದಾಟ ಇಟ್ಟುಬಿಟ್ಟರೆ ಮುಗಿಯಿತು ಎಂದುಕೊಂಡಿರಬೇಕು ನಿರ್ದೇಶಕರು. ಹಾಗಾಗಿ ಹೊಡೆದಾಟವನ್ನು ಚಿತ್ರೀಕರಿಸಲು ತುಂಬಾ ಶ್ರಮ ಹಣ ಸಮಯ ವ್ಯಯಿಸಿದ್ದಾರೆ. ನಾಯಕ ಅಜಯ್ ರಾವ್ ಕೂಡ ತಮ್ಮ ಸಾಹಸ ಪ್ರದರ್ಶನ ಮಾಡಿದ್ದಾರೆ. ಆದರೆ ಹೊಡೆದಾಟದಲ್ಲೂ ಹೊಸತನವಿಲ್ಲದಿರುವುದು ಚಿತ್ರವನ್ನು ಸಾದಾರಣ ಸಾಹಸಮಯ ಚಿತ್ರವನ್ನಾಗಿ ಮಾಡಿದೆ.
ಚಿತ್ರದ ಹಿನ್ನೆಲೆ ಸಂಗೀತಕ್ಕೆ ಧಂ ಇರಬೇಕಿತ್ತು. ಹಾಗೆಯೇ ಹಾಡುಗಳಲ್ಲೂ ಮಜವಿಲ್ಲ. ರವಿವರ್ಮ ಮತ್ತು ಹರಿಕೃಷ್ಣ ಇಬ್ಬರೂ ಸಂಗೀತ ಲೋಕದವರೇ. ಆದರೂ ಅವರದೇ ಚಿತ್ರದಲ್ಲಿ ಅದರ ಶಕ್ತಿ ಕಳೆಗುಂದಿರುವುದು ವಿಪರ್ಯಾಸ.

ಅನಂತ್ ನಾಗ್ ರವಿಶಂಕರ್,  ಲೋಕೇಶ್, ಶೋಭಾರಾಜ್, ನಾಯಕಿ ಸಿಂಧು ಲೋಕನಾಥ್, ಶ್ರುತಿ ನಾಯ್ಡು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಾಹಸ ಸಂಯೋಜನೆ ಚೆನ್ನಾಗಿದೆಯಾದರೂ ಹೊಸತನವಿಲ್ಲ. ಒಂದಷ್ಟು ಅನಾವಶ್ಯಕ ದೃಶ್ಯಗಳನ್ನು ಕತ್ತರಿಸಬಹುದಾಗಿತ್ತು ಸಂಕಲನಕಾರರು. ಇಷ್ಟೆಲ್ಲಾ ಕಷ್ಟದ ನಡುವೆ ಸಮಯ ಕಳೆಯಲು, ಒಂದಷ್ಟು ಹೊಡೆದಾಟ ನೋಡಲು ಮನಸ್ಸಿದ್ದರೆ ಜೈ ಭಜರಂಗ್ ಬಲಿಗೆ ನೀವು ಜೈ ಎನ್ನಬಹುದು.

ನಾನು ಹೇಮಂತ ಅವಳು ಸೇವಂತಿ:

ಹೆಸರು ಪೋಸ್ಟರ್ ಇವುಗಳನ್ನು ನೋಡಿದಾಗ ಇದೊಂದು ಪ್ರೇಮಕತೆ ಇರಬಹುದು ಎನಿಸುತ್ತದೆ. ಹಾಗೆಯೇ ಈ ತರಹದ ಚಿತ್ರ ಸುಮಾರಷ್ಟು ಬಂದಿರಬಹುದು ಎನಿಸುತ್ತದೆ. ಮತ್ತು ಅದೆಲ್ಲಾ ಚಿತ್ರಮಂದಿರಕ್ಕೆ ಹೊಕ್ಕಾಗ ಹೌದು ಹೌದು ಎನಿಸುತ್ತದೆ.
ಒಬ್ಬ ನಿರ್ದೇಶಕ ಒಂದು ಚಿತ್ರವನ್ನು ನಿರ್ದೇಶನ ಮಾಡುವಾಗ ಒಂದಷ್ಟು ಅಂಶಗಳನ್ನು ತಲೆಯಲ್ಲಿಟ್ಟುಕೊಳ್ಳಬೇಕು. ಅವುಗಳಲ್ಲಿ ತಾನು ಯಾವ ರೀತಿಯ ಚಿತ್ರವನ್ನು ನಿರ್ದೇಶನ ಮಾಡಲು ಹೊರಡುತ್ತಿದ್ದೇನೆ, ಚಿತ್ರದ ಆಶಯವೇನು, ಚಿತ್ರದ ನಿರೂಪಣೆಯ ಗತಿಯೇನು ಎಂಬುದು ಅವುಗಳಲ್ಲಿ ಮುಖ್ಯವಾದ ಅಂಶಗಳು. ಸಿನಿಮಾದಲ್ಲಿ ಎಲ್ಲವೂ ಇರಲಿ, ಆ ಮೂಲಕ ಎಲ್ಲಾ ರೀತಿಯ ಪ್ರೇಕ್ಷಕರನ್ನು ಸೆಳೆದುಬಿಡೋಣ ಎಂಬ ಮನಸ್ಥಿತಿಯಲ್ಲಿ ಸಿನಿಮ ಮಾಡಬಾರದು.
ಈ ಚಿತ್ರ ನೋಡಿದಾಗ ಮೊದಲಿಗೆ ಹಾಗೆಯೇ ಎನಿಸುತ್ತದೆ. ಯಾಕೆಂದರೆ ಈ ಚಿತ್ರದಲ್ಲಿ ಸುಧಾಕರ್ ಬನ್ನಂಜೆ ಎಲ್ಲವನ್ನೂ ತೋರಿಸಲು ಪ್ರಯತ್ನಿಸಿದ್ದಾರೆ. ಅವಶ್ಯಕತೆ ಅಷ್ಟಾಗಿ ಕಂಡುಬರದಿದ್ದರೂ ನಾಯಕಿಗೆ ಬಿಕಿನಿ ಹಾಕಿಸಿದ್ದಾರೆ, ಬೇಕಾಗಿರದ ಕಡೆಗೆ ನಾಯಕನ ಸಿಕ್ಸ್ ಪ್ಯಾಕ್ ತೋರಿಸಿದ್ದಾರೆ, ಅನಾವಶ್ಯಕವಾಗಿ ಕಾಮಿಡಿ, ಐಟಂ ಸಾಂಗ್ ತುಂಬಿದ್ದಾರೆ. ಅವರ ಉದ್ದೇಶವಿಷ್ಟೇ. ಸಿನಿಮಾದಲ್ಲಿ ಎಲ್ಲವೂ ಇರಬೇಕು. ಅದೇ ನೆಗಟಿವ್ ಆಗಿರುವುದು ವಿಪರ್ಯಾಸ.
ಇಲ್ಲಿ ಇಬ್ಬರು ಹೇಮಂತರಿದ್ದಾರೆ. ಇರುವ ಒಬ್ಬಳೇ ಸೇವಂತಿಯನ್ನು ಯಾರು ಪ್ರೀತಿಸುತ್ತಾರೆ ಎಂಬುದು ಕತೆ.ಒಂದು ಕಚೇರಿ. ಅಲ್ಲಿನ ಹೇಮಂತ್ ಗೆ ಸೇವಂತಿ ಮೇಲೆ ಲವ್ವು ಶುರು. ಹೇಳಲಿಕ್ಕೆ ಆಗದು. ಈ ಮಧ್ಯ ಮತ್ತೊಬ್ಬನ ಹಾಜರಿ. ಅವನ ಹೆಸರೂ ಹೇಮಂತ. ಈಗ ಯಾರು ಯಾರನ್ನು ಪ್ರೀತಿಸುತ್ತಾರೆ ಎಂಬುದು ನಿರ್ದೆಶಾಕ್ರಿಗೆ ಗೊತ್ತಿರುವ ವಿಷಯ. ನಿಮಗೆ ಗೊತ್ತಾಗಬೇಕಾದರೆ ಒಮ್ಮೆ ಸಿನಿಮಾ ನೋಡಬಹುದು.
ಚಿತ್ರದಲ್ಲಿ ಹೊಸಬರ ದಂಡೆ ಇದೆ. ಸಾಧುಕೋಕಿಲ ಹಳಬರ ನಿಟ್ಟಿನಲ್ಲಿ ಸಿಗುತ್ತಾರೆ. ನಾಯಕಿ ಲೇಖಾ ಚಂದ್ರ. ಒಂದಷ್ಟು ನಟಿಸಿದ್ದಾರೆ. ನಿರ್ದೇಶಕರ ಅಣತಿಯಂತೆ ತುಂಡುಡುಗೆ ಧರಿಸಿದ್ದಾರೆ. ಹಾಗೆಯೇ ನಾಯಕ ವಿಜೇಶ್ ನಾಯಕಿಯ ಜೊತೆ ಪೈಪೋಟಿ ಎನ್ನುವಂತೆ ತಾವೂ ಬಿಚ್ಚಿದ್ದಾರೆ. ಸಿಕ್ಸ್ ಪ್ಯಾಕ್ ತೋರಿಸಿದ್ದಾರೆ. ಮತ್ತೊಬ್ಬ ನಾಯಕ ರಜನೀಶ್ ಅಭಿನಯಿಸಲು ಒದ್ದಾಡಿದ್ದಾರೆ.
ಇನ್ನು ತಾಂತ್ರಿಕ ಅಂಶಗಳು ಹೇಳಿಕೊಳ್ಳುವ ಹಾಗಿಲ್ಲ. ಹಾಗೆಯೇ ನಿರ್ದೇಶನ ಕೂಡ ಸಿದ್ಧ ಸೂತ್ರವನ್ನೇ ಅವಲಂಭಿಸಿದೆ. ಒಂದು ಹಳೆಯ ಚಿತ್ರಣವನ್ನೇ ನೋಡಿದ ಅನುಭವ ಕೊಡುತ್ತದೆ. ಹಾಸ್ಯ ಪ್ರಸಂಗಗಳು, ಲವಲವಿಕೆ ನವಿರುತನ ಚಿತ್ರದಲ್ಲಿದ್ದರೂ ಪರಿಣಾಮಕಾರಿಯಾಗಿಲ್ಲ. ಎಲ್ಲವೂ ಅವಸರದಲ್ಲಿ ಚಿತ್ರಿಸಿದಂತಿದೆ.

Saturday, December 6, 2014

ಸಾಫ್ಟ್ ವೇರ್ ಗಂಡ:

ಜಗ್ಗೇಶ್ ಎಂದಾಕ್ಷಣ ನಗಬಹುದು ಎನಿಸುತ್ತದೆ.  ಅದರಾಚೆಗೂ ಏನೋ ಇದೆ ಎನಿಸಿದ್ದು ಅವರ ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳಲ್ಲಿ. ಆದರೆ ಅವರ ಸಹಜಾಭಿನಯ ಹಾಸ್ಯವನ್ನು ಸಿನಿಮಾಕ್ಕೆ ಅಳವಡಿಸಿಕೊಂಡವರು ಕಡಿಮೆ. ಈ ಚಿತ್ರವೂ ಹಾಗೆಯೆ ಆಗಿರುವುದು ವಿಷಾದನೀಯ. ಇದು ಹೇಳಿ ಕೇಳಿ ರಿಮೇಕ್ ಚಿತ್ರ. ಹಾಗಾಗಿ ಕತೆಯ ಬಗ್ಗೆ ಮಾತನಾಡುವುದಕ್ಕಿಂತ ಅದನ್ನು ಆಯ್ಕೆ ಮಾಡಿಕೊಂಡ ನಿರ್ದೇಶಕರೇ ಇದರ ಆಗುಹೋಗುಗಳಿಗೆ ಕಾರಣ ಕರ್ತರು.
ಸಾಫ್ಟ್ವೇರ್ ಇಲ್ಲ ಬದಲಿಗೆ ಬರೀ ಗಂಡನಿರುವ ಚಿತ್ರದ ಕತೆಯಲ್ಲಿ ನಗುವಿಲ್ಲ. ಈಗಾಗಲೇ ರೆಡಿಮೇಡ್ ಗಂಡನನ್ನು ನೋಡಿದವರಿಗೆ ಸಾಫ್ಟ್ ವೇರ್ ಗಂಡ ಬೇರೆಯವನು ಎನಿಸುವುದಿಲ್ಲ. ನಾಟಕದ ಗಂಡ, ಆಡಿಸುವ ಹೆಂಡತಿ ನಾಟಕವಾಡಲು ಹೋಗಿ ಪ್ರೀತಿಗೆ ಬೀಳುವುದು ಇದೆಲ್ಲಾ ಸಿನೆಮಾಗಳಲ್ಲಿ ಕಾಮನ್ನು ಕಣ್ರೀ ಎನ್ನುವವರಾದರೆ ಈ ಫಿಲ್ಮು ಕಾಮನ್ನು ಎಂದುಕೊಂಡು ಸುಮ್ಮನಿದ್ದು ಬಿಡಬಹುದು.
ಮಲಯಾಳಂ ನಲ್ಲಿ ದೃಶ್ಯಂ ಖ್ಯಾತಿಯ ಜೀತು ಜೋಸೆಫ್ ನಿರ್ದೇಶನದ ಹಾಸ್ಯ ಚಿತ್ರ ಮೈ ಬಾಸ್. ಇಂಗ್ಲಿಷಿನ ಪ್ರಪೋಸಲ್ ಚಿತ್ರಕ್ಕೆ ಭಾರತೀಯ ಲೇಪನ ಕೊಟ್ಟಿದ್ದರು ಜೀತು ಜೋಸೆಪ್.  ಅದನ್ನು ನಿಷ್ಠೆಯಿಂದ ಕನ್ನಡೀಕರಿಸಿರುವ ನಿರ್ದೇಶಕರ ಪ್ರತಿಭೆ ಅವರ ನಕಲು ಮಾಡುವಿಕೆಯಲ್ಲಿ ಅಡಗಿದೆ.  ಮಾಡಿಕೊಳ್ಳಬಹುದಾದ ಬದಲಾವಣೆಯನ್ನು ಮಾಡಿಕೊಳ್ಳದೆ ಎರಡು ವರ್ಷದ ಹಿಂದಿನ ಸಿನೆಮಾವನ್ನು ಎರಡು ವರ್ಷ ಹಿಂದೆ ಹೋಗಿಯೇ ನಿರ್ದೇಶನ ಮಾಡಿರುವುದು ಅವರ ಕೌಶಲ್ಯಕ್ಕೆ ಸಾಕ್ಷಿ. ಮೊದಲಾರ್ಧದಲ್ಲಿ ಸತ್ವವಿಲ್ಲ. ಇರುವ ಕಾಮಿಡಿಯಲ್ಲಿ ನಗಿಸುವ ಶಕ್ತಿಯಿಲ್ಲ. ಏನೂ ಇಲ್ಲದೆಯೇ ಮೊದಲಾರ್ಧ ಅಂತ್ಯ ಕಾಣುತ್ತದೆ. ದ್ವಿತೀಯಾರ್ಧದಲ್ಲಿ  ಒಂದಷ್ಟು ಗಂಭೀರತೆ ಇದೆ. ಅಲ್ಲಲ್ಲಿ ಹಾಸ್ಯ ನುಸುಳುವ ಪ್ರಯತ್ನ ಮಾಡುತ್ತದಾದರೂ ಅದು ಯಶಸ್ವಿಯಾಗುವುದಿಲ್ಲ. ಹಾಗಾಗಿ ಇಡೀ ಚಿತ್ರ ಹಾಸ್ಯ ಚಿತ್ರವೇ ಎನ್ನುವ ಅನುಮಾನ ಹುಟ್ಟಿಸುವಲ್ಲಿ ಯಶಸ್ವಿಯಾಗುವುದರಿಂದ ಇದೊಂದು ಅನುಮಾನಾಸ್ಪದ ಚಿತ್ರ ಎನ್ನಬಹುದೇನೋ?
ಇಲ್ಲಿ ಜಗ್ಗೇಶ್ ನಗಿಸಲು ಪ್ರಯತ್ನಿಸಿದ್ದಾರೆ. ಹಾಗೆಯೇ ಸಿನಿಮಾವನ್ನು ಹೆಗಲ ಮೇಲೆತ್ತಿಕೊಂಡು ಸಾಗಲು ಶತಪ್ರಯತ್ನ ಪಟ್ಟಿದ್ದಾರೆ. ತಮ್ಮ ವಿಶಿಷ್ಟ ಹಾವಭಾವದಿಂದ ಗಮನ ಸಳೆಯಲು ಪ್ರಯತ್ನಿಸಿದ್ದಾರೆ. ಆದರೆ ಅದಷ್ಟೇ ಚಿತ್ರಕ್ಕೆ ಸಾಲುವುದಿಲ್ಲವಲ್ಲ. ಒಂದು ಗಟ್ಟಿಯಾದ ಕತೆ ಅದಕ್ಕೊಪ್ಪುವ ಚಿತ್ರಕತೆ ಬೇಕೇ ಬೇಕಲ್ಲ. ಸಾಫ್ಟವೇರ್ ಗಂಡ ಚಿತ್ರದಲ್ಲಿ ಕಾಣೆಯಾಗಿರುವುದು ಅದೇ. ಏನೂ ವಿಶೇಷವೆ ಇಲ್ಲದ ಸಾದಾರಣ ಅತಿ ಸಾದಾರಣ ಚಿತ್ರವಾಗಿರುವ ಚಿತ್ರದಲ್ಲಿ  ಮೆಚ್ಚಿಕೊಳ್ಳುವ ಅಂಶಗಳು ಇಲ್ಲ.
ನಾಯಕ ನಾಯಕಿ ಸಿಕ್ಕರು, ಅಥವಾ ನಿರ್ಮಾಪಕ ಸಿಕ್ಕರು ಎನ್ನುವ ಒಂದೇ ಕಾರಣಕ್ಕೆ ಚಿತ್ರ ಮಾಡಿದರೆ ಇಂತಹ ಚಿತ್ರವಾಗಬಹುದು. ಯಾವುದೇ ವಿಶೇಷ, ಮನರಂಜನೆ ಇಲ್ಲದ ಸವಕಲು ಕತೆಯನ್ನೇ ಮತ್ತೆ ಮತ್ತೆ ಸವಕಲಾಗಿಸುವ ಧೈರ್ಯ ಹೇಗೆ ಬರುತ್ತದೆ ಎಂಬುದು ನಿರ್ದೇಶಕರಿಗೆ ನೇರ ಪ್ರಶ್ನೆ. ಒಟ್ಟಿನಲ್ಲಿ ನಗಲಾರದ ಅಳಲಾರದ ಹಾಗೆ ಬಂದು ಹೀಗೆ ಹೋಗುವ ಚಿತ್ರವಿದು.

ತಾಂತ್ರಿಕ ಅಂಶಗಳಲ್ಲಿ ಹೇಳಿಕೊಳ್ಳುವುದಿಲ್ಲ. ಹಾಡು ಕುಣಿತ ಮುಂತಾದವುಗಳು ಚಿತ್ರದಲ್ಲಿವೆ ಎಂದಷ್ಟೇ ಹೇಳಬಹುದು. ಕಲಾವಿದರುಗಳು ಕತೆಯ ತಾಳಕ್ಕೆ ಕುಣಿಯುವುದರಿಂದ ಕತೆಯೇ ಸರ್ವ ಹೀನ ಅನಿಸುವುದರಿಂದ ಕಲಾವಿದರ ಮೇಲೆ ಆರೋಪ ಮೆಚ್ಚುಗೆ ತೆಗಳಿಕೆ ಸಲ್ಲ.

ಗೋಲ್ ಗುಂಬಜ್:

ಈ ಚಿತ್ರದ ಮೂಲಕ ನಿರ್ದೇಶಕರು ಏನನ್ನು ಹೇಳಲು ಹೊರಟಿದ್ದಾರೆ ಎಂಬ ಯಕ್ಷ ಪ್ರಶ್ನೆ ಚಿತ್ರ ಪ್ರಾರಂಭವಾದಾಗಿನಿಂದ ಪ್ರೇಕ್ಷಕನಿಗೆ ಕಾಡುವುದರಿಂದ ಇದನ್ನು ಕಾಡುವ ಸಿನಿಮಾಗಳ ಲಿಸ್ಟಿಗೆ ಸೇರಿಸಬಹುದು. ಹಾಗೆಯೇ ಚಿತ್ರಮಂದಿರಕ್ಕೆ ಹೋದಮೇಲೆ ಚಾನೆಲ್ಲು ಬದಲಿಸಲಾಗುವುದಿಲ್ಲವಾದ್ದರಿಂದ ಮತ್ತು ಈ ಚಿತ್ರವನ್ನೇ ನೋಡಬೇಕಾದ್ದರಿಂದ ಈ ಚಿತ್ರವನ್ನು ನೋಡಲೇ ಬೇಕಾದ ಚಿತ್ರ ಎನ್ನಬಹುದು. ಹಾಗೆಯೇ ಚಿತ್ರದ ನಾಯಕ ಕುಡಿದು ತೂರಾಡುವುದಕ್ಕೆ ದೇವದಾಸನನ್ನು ನೆನಪಿಸಿಕೊಳ್ಳಬಹುದು ಅಥವಾ ಚಿತ್ರದಲ್ಲೊಂದು ಸಾಮಾಜಿಕ ಅನ್ಶವಿರುವುದರಿಂದ ಸಾಮಾಜಿಕ ಕಳಕಳಿಯ ಚಿತ್ರ ಎನ್ನಲೂ ಬಹುದು. ಹಾಗಾದರೆ ಈ ಎಲ್ಲಾ ಅಂಶಗಳನ್ನು ಹೊಂದಿರುವ ಈ ಚಿತ್ರವನ್ನು ಏನನ್ನಬಹುದು ಎಂದರೆ ಏನೂ ಅನ್ನದಿರುವುದೇ ವಾಸಿ ಎನ್ನಬಹುದು.
ನಟ ನಿರ್ದೇಶಕ ಧನುಶ್ ಅದೇಕೆ ಅಷ್ಟೂ ಜವಾಬ್ದಾರಿಗಳನ್ನು ಮೈಮೇಲೆ ಎಳೆದುಕೊಂಡರು ಎಂಬುದನ್ನು ಅವರನ್ನೇ ಕೇಳಬಹುದು. ಏಕೆಂದರೆ ಕನಿಷ್ಠ ಸಿನಿಮಾ ಬಗೆಗಿನ ಜ್ಞಾನ ವಿದ್ದರೂ ಈವತ್ತಿನ ಕನ್ನಡ ಚಿತ್ರರಂಗದ ಸ್ಥಿತಿಗತಿಯ ಅರಿವಿದ್ದರೂ ಇಂತಹ ಚಿತ್ರವನ್ನು ನಿರ್ದೇಶನ ಮಾಡಲಾಗದು. ಏಕ ಮುಖ ಚಿಂತನೆ ಇದ್ದಾಗ ಮಾತ್ರ ಇಂತಹ ಚಿತ್ರ ಸಾಧ್ಯ. ಧನುಶ್ ಅವರದು ಇಲ್ಲಿ ನಾಯಕನ ಪಾತ್ರ. ವಾಹಿನಿಯಲ್ಲಿ ಕೆಲಸ ಮಾಡುತ್ತಾರೆ. ನೋ ಟೈಮ್ ಎನ್ನುವ ರೀತಿಯಲ್ಲಿ ಪ್ರೀತಿಗೆ ಬೀಳುತ್ತಾರೆ. ಆದರೆ ಮಾಡಿದ್ದುಣ್ಣೋ ಮಾರಾಯಾ ಎಂಬಂತೆ ಅವರು ಮಾಡಿದ್ದನ್ನು ಉಣ್ಣಬೇಕಾಗುತ್ತದೆ. ಆದರೆ ಧನುಶ್ ತಾವು ಮಾಡಿದ್ದನ್ನು ತಮ್ಮ ಪತ್ನಿಗೂ ಉಣಬಡಿಸುತ್ತಾರೆ, ಆಮೇಲೆ ಪ್ರೇಕ್ಷಕರಿಗೂ ಬಡಿಸುತ್ತಾರೆ. ಆದರೂ ತಾವೊಬ್ಬ ತ್ಯಾಗಮಯಿ ಎನ್ನುವ ಪೋಸ್ ಕೊಡುತ್ತಾರೆ.
ಕತೆ ಚಿತ್ರಕತೆ ಸಂಭಾಷಣೆ ಮೂರು ವಿಭಾಗಗಳೂ ಸೊರಗಿವೆ. ಒಂದು ಸ್ಪಷ್ಟತೆ ಕುಶಲತೆ ಎರಡೂ ಇಲ್ಲದ ಕತೆ ಚಿತ್ರಕತೆಯಲ್ಲಿ ಕನಿಷ್ಠ ಮನರಂಜನೆಯ ಅಂಶವೂ ಇಲ್ಲವಾಗಿದೆ. ಕಿರುಚುವುದೇ ಅಭಿನಯ, ಅಳಿಸುವುದೇ ಕತೆ ಎಂದುಕೊಂಡಿದ್ದಾರೆ ನಯಾಕ ನಿರ್ದೇಶಕ ಧನುಶ್. ಹಾಗಾಗಿಯೇ ಚಿತ್ರದುದ್ದಕ್ಕೂ ಕಿರುಚಿ ಕುಡಿಯುತ್ತಾರೆ. ನಾಯಕಿ ಅಳುತ್ತಾಳೆ.
ಪ್ರೇಕ್ಷಕನಿಗೆ ಬೇರೆ ಯಾವ ಆಯ್ಕೆಯೂ ಇಲ್ಲದೆ ಮಲಗುತ್ತಾನೆ.

ಒಂದು ಸಿನಿಮಾದ ಎಳೆಯನ್ನು ಕಲ್ಪಿಸಿಕೊಂಡಾಗ ಅದು ವಿಭಿನ್ನ ಅಥವಾ ಪ್ರಾಮಿಸಿಂಗ್ ಎನಿಸಬಹುದು. ಆದರೆ ಅದನ್ನು ಎರಡೂವರೆ ಗಂಟೆಗಳ ದೃಶ್ಯ ಕಾವ್ಯವನ್ನಾಗಿಸುವಾಗ ಅದಕ್ಕೆ ಪ್ರೌಢಿಮೆ ಪ್ರತಿಭೆ ಇಷ್ಟೇ ಸಾಲದು. ಸಿನೆಮಾದ ಒಳನೋಟ ಹೊರ ನೋಟ ಎರಡೂ ಗೊತ್ತಿರಬೇಕಾಗುತ್ತದೆ. ಅಷ್ಟೇ ಅಲ್ಲ. ಚಿತ್ರಕರ್ಮಿ ಸ್ವತಃ ಪ್ರೇಕ್ಷಕನಾಗಿರಬೇಕಾಗುತ್ತದೆ. ಒಂದಷ್ಟು ಸಿನಿಮಾಗಳನ್ನೂ ನೋಡುವ ಅದರ ಬಗ್ಗೆ ಚಿಂತಿಸುವ ಜನರು ಆ ಯಾ ಚಿತ್ರಗಳಿಗೆ ಪ್ರತಿಕ್ರಿಯಿಸಿದ ಪರಿಯನ್ನು ಅದ್ಯಯನ ಮಾಡಬೇಕಾಗುತ್ತದೆ. ಆನಂತರವೇ ಸಿನಿಮಾದ ಕತೆಯ ಚಿತ್ರಕತೆಯ ಹೆಣಿಗೆಗೆ ಕುಳಿತರೆ ಚಿತ್ರ ಸಮಾಧಾನಕರ ಎನಿಸಿಕೊಳ್ಳಬಹುದು. ಅದಲ್ಲದೆ ಹೇಳಿದ್ದೆ ಕತೆ, ಮಾಡಿದ್ದೆ ಸಿನೆಮಾ ಎಂಬ ಮನೋಭಾವದಲ್ಲಿ ಚಿತ್ರ ನಿರ್ದೇಶನ ಮಾಡಿದರೆ ಯಾವ ಪಟ್ಟಿಗೂ ಸೇರದ ಹಣ, ಸಮಯ ವ್ಯರ್ಥ ಎನ್ನುವುದನ್ನು ನಮ್ಮ ಚಿತ್ರಕರ್ಮಿಗಳು ಅರ್ಥ ಮಾಡಿಕೊಳ್ಳದಿದ್ದರೆ ಇನ್ನಷ್ಟು ಇಂತಹ ಚಿತ್ರಗಳು ತಯಾರಾಗುತ್ತವೆ ಅಷ್ಟೇ.

ಹೊಸಬರ ಚಿತ್ರ ಎಂದಾಗ ನಿರೀಕ್ಷೆ ಸಹಜ. ಹಾಗಂತ ಸಾಯಿ ಚಿತ್ರರಂಗಕ್ಕೆ ಹೊಸಬರಲ್ಲ. ಪ್ರಚಾರ ವಿನ್ಯಾಸಕರಾಗಿ ಅವರದು ದೊಡ್ಡ ಎಹ್ಸರು. ಅವರು ನಿರ್ದೇಶನ ಮಾಡುತ್ತೇನೆ ಎಂದಾಗ, ಚಿತ್ರದ ಹೆಸರು ಕ ಎಂದಾಗ ಹೊಸ ಕಲಾವಿದರನ್ನೇ ಮುಖ್ಯ ಭೂಮಿಕೆಯಲ್ಲಿರಿಸಿಕೊಂಡಾಗ ಒಂದು ಕುತೂಹಲವಿತ್ತು. ಆದರೆ ಚಿತ್ರ ನೋಡಿದ ಮೇಲೆ ಒಂದು ಮತ್ತಗಿನ ನಿರಾಸೆ ಉಂಟಾಗುವುದು ಖಂಡಿತ.
ಸಾಯಿ ಮೊದಲ ಚಿತ್ರಕ್ಕೆ ಒಂದೇ ಕತೆಯನ್ನು ಪ್ರೀತಿಯನ್ನು ಅದರ ವಿವಿಧ ಮಜಲುಗಳನ್ನು ವ್ಯಾಖ್ಯಾನಿಸುವ ಹಲವಾರು ಕತೆಗಳನ್ನು ಒಗ್ಗೂಡಿಸಿದ್ದಾರೆ. ಪ್ರೇಮಿಗಳ ದಿನದಂದು ಅವರೆಲ್ಲರ ಕತೆಯನ್ನು ಚಿತ್ರವಾಗಿಸಿದ್ದಾರೆ. ಗ್ಯಾರಿ ಮಾರ್ಷಲ್ ನಿರ್ದೇಶನದ ವ್ಯಾಲೆಂಟೈನ್ ಸ್ ಡೇ ಚಿತ್ರದ ಕತೆಯನ್ನು ಕನ್ನಡೀಕರಿಸಿದ್ದಾರೆ. ಒಂದಷ್ಟು ಜೋಡಿಗಳನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಎಲ್ಲಾ ಸರಿ ಆದರೆ ಚಿತ್ರ ಪರಿಣಾಮಕಾರಿಯಾಗಿದೆಯಾ?
ಹಾಲಿವುಡ್ ನಲ್ಲಿ ಒಂದಷ್ಟು ಇಂತಹ ಸಿನಿಮಾಗಳು ಬರುತ್ತವೆ. ಅಲ್ಲಿನ ಭಾವ ತೀವ್ರತೆ ಮತ್ತು ನಮ್ಮಲ್ಲಿನ ಭಾವ ತೀವ್ರತೆಗೆ ವ್ಯತ್ಯಾಸವಿದೆ. ಹಾಗಾಗಿಯೇ ಅಲ್ಲಿ ಪರಿಣಾಮಕಾರಿ ಎನಿಸಿದ್ದು ನಮ್ಮ ನೆಲದಲ್ಲಿ ಸಡಿಲ ಎನಿಸುವುದು ಸಹಜ. ಲವ್ ಅಕ್ಚುವಲ್ಲಿ ಚಿತ್ರವನ್ನು ಸಲಾಮೆ ಇಷ್ಕ್ ಮಾಡಿ ದೊಡ್ಡ ಸೋಲು ಕಂಡಿದ್ದರು ಬಾಲಿವುಡಿಗರು. ಹಾಗಾಗಿ ಇಂತಹ ಹಲವಾರು ಕಥೆಗಳ ಸಂಪುಟವನ್ನು ಸಿನಿಮಾ ಮಾಡುವಾಗ ಪ್ರತಿ ಕತೆಯನ್ನು ಜೋಡಿಸುವ ಅದನ್ನು ಜನರ ಮುಂದಿಡುವ ಕುಶಲತೆ ಸುಲಭ ಸಾಧ್ಯವಲ್ಲ. ಸಾಯಿ ಮೊದಲ ಚಿತ್ರದಲ್ಲಿಯೇ ಅದಕ್ಕೆ ಕೈ ಹಾಕಿದ್ದಾರೆ. ಆದರೆ ಚಿತ್ರದ ಯಾವ ಕತೆಯೂ ಮನಸ್ಸಿಗೆ ತಾಟುವುದಕ್ಕೆ ಸುಸ್ತು ಹೊಡೆಯುತ್ತವೆ. ಅದಕ್ಕೆ ಕಾರಣ ಯಾವ ಕತೆಗೂ ಸರಿಯಾದ ನ್ಯಾಯ ಒದಗಿಸಲು ನಿರ್ದೇಶಕರು/ಕತೆಗಾರರು ಒದ್ದಾಡಿರುವುದು.ಪ್ರೀತಿಯ ಮಧುರ ಭಾವವನ್ನಾಗಲಿ, ಅದರ ವಿಷಾದರೂಪವನ್ನಾಗಲಿ ತೋರಿಸುವ ಪ್ರೌಢಿಮೆಯ ಕೊರತೆ ನಿರ್ದೇಶಕರಲ್ಲಿ ಕಾಣುತ್ತದೆ. ಹಾಗಾಗಿಯೇ ಇರುವಷ್ಟು ಕತೆಗಳು, ಘಟನೆಗಳು ಸಾದಾರಣವಾಗಿಬಿಡುತ್ತದೆ.
ಇನ್ನು ಕತೆಯನ್ನು ಒಂದೇ ಸಾಲಿನಲ್ಲಿ ಹೇಳಬಹುದು. ಪ್ರೇಮಿಗಳ ದಿನದಂದು ಪ್ರೇಮಿಗಳು ಪಡುವ ಪಾಡು, ನಿವೇದನೆ, ವಂಚನೆ, ತಿರಸ್ಕಾರ ಪುರಸ್ಕಾರ ಇವೆಲ್ಲವನ್ನೂ ಕತೆಯ ರೂಪಕ್ಕೆ ತರುವಲ್ಲಿ ಗೊಂದಲ ಏರ್ಪಟ್ಟು ಕಲಸು ಮೇಲೋಗರವಾಗಿದೆ. ಎಲ್ಲಾ ಸೇರಿ ಸುಂದರವಾದ ಹೂಗೊಂಚಲಾಗಬೇಕಾದದ್ದು ಚಿಂದಿ ಚಿತ್ರಾನ್ನವಾಗಿಬಿಟ್ಟಿದೆ.
ಪ್ರೀತಿ ಪ್ರೇಮದ ಕತೆಯಲ್ಲಿ ಎಲ್ಲಾ ಭಾವದ ಅಂಶ ಇರುತ್ತದೆ. ಆದರೆ ಅದೆಲ್ಲವನ್ನೂ ಮೀರಿಸುವುದು ನವಿರುತನ. ವಂಚನೆ ಕೂಡ ಅಪ್ಪಟ ಭಾವುಕವಾಗಬಲ್ಲುದು ಎಂಬುದಕ್ಕೆ ದೇವದಾಸ ಚಿತ್ರಗಳು ಉದಾಹರಣೆಯಾಗಿವೆ. ಆದರೆ ನವಿರುತನ, ಭಾವತೀವ್ರತೆ, ಲವಲವಿಕೆ  ಯಾವುದನ್ನೂ ಈ ಚಿತ್ರದಲ್ಲಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.ಅತ್ತ ಸಾಕ್ಷ್ಯ ಚಿತ್ರವೂ ಆಗದ, ಚಲಚಿತ್ರವೂ ಅನಿಸಿಕೊಳ್ಳದ ಮನಮುಟ್ಟದ ಈ ಚಿತ್ರವನ್ನು ಅದರ ನಿರ್ದೇಶಕನನ್ನು ದೂಷಿಸಬೇಕೋ, ಹೊಸ ನಿರ್ದೇಶಕ ಎಂದು ರಿಯಾಯತಿ ಕೊಡಬೇಕೋ ಪ್ರೇಕ್ಷಕರು ನಿರ್ಧರಿಸುತ್ತಾರೆ.

ಒಟ್ಟಾರೆ ಚಿತ್ರವನ್ನು ಹೀಗೀಗೆ ಎಂದು ಹೇಳಿ ಬಿಟ್ಟಾಗ ಬಿಡಿ ಬಿಡಿ ಅಂಶಗಳ ಬಗ್ಗೆ ಮಾತಾಡುವುದಕ್ಕೆ ಆಗುವುದಿಲ್ಲ. ಆದರೂ ಸಂಕಲನವಾಗಲಿ, ಸಂಗೀತವಾಗಲಿ ಎಲ್ಲವೂ ಗೊಂದಲದ್ದಲ್ಲೇ ಇದೆ. ಅಭಿನಯದ ವಿಷಯಕ್ಕೆ ಬಂದರೆ ನಮ್ರತಾ, ವಿಶಾಲ್, ಪಲ್ಲವಿ, ಸುಂದರಶ್ರೀ ಇರುವ ಬಳಗದಲ್ಲಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

Saturday, November 29, 2014

ಲವ್ ಇನ್ ಮಂಡ್ಯ:

ಲವ್ ಇನ್ ಮಂಡ್ಯ ಮರ್ಡರ್ ಸ್ ಇನ್ ಹೊಸೂರು ಎನ್ನುವುದು ಲವ್ ಇನ್ ಮಂಡ್ಯ ಚಿತ್ರದ ಒಂದು ಸಾಲಿನ ವಿಮರ್ಶೆ ಎನ್ನಲಾಗುವುದಿಲ್ಲ. ಚಿತ್ರಕ್ಕೆ ಕತೆ ಇರಬೇಕು ಹಾಗಂತ ಏನೇನೋ ಇದ್ದರೇ ಹೇಗೆ? ಲವ್ ಇನ್ ಮಂಡ್ಯ ಸೋಲುವುದು ಅಲ್ಲೇ. ನವಿರಾದ ಪ್ರೆಮಕತೆಯೊಂದಿಗೆ ಪ್ರಾರಂಭವಾಗುವ ಚಿತ್ರ  ಮಧ್ಯಂತರದವರೆಗೆ ಹಾಗೆ ಸಾಗುತ್ತದೆ. ಮಧ್ಯಂತರದ ನಂತರ ಏನೋ ನಿರೀಕ್ಷೆ ಮಾಡಿದ ಪ್ರೇಕ್ಷಕ ಪ್ರಭುವಿಗೆ ಮತ್ತೇನೋ ಎದುರಾಗುತ್ತದೆ. ಹಾಗಾಗಿ ರೈಲು ಹಳಿ ತಪ್ಪಿದರೂ ಅಪಘಾತವಾಗದೆ ಮತ್ತೊಂದು ಹಳಿ ಹಿಡಿದರೂ ಸೇರಬೇಕಾದ  ಜಾಗ ಸೇರದೆ ಇರುವುದು ಸಾರ್ಥಕ ಎನಿಸುವುದಿಲ್ಲ ಅಲ್ಲವೇ? ಲವ್ ಇನ್ ಮಂಡ್ಯ ಕೂಡ ಹಾಗೆಯೇ ಆಗುತ್ತದೆ.
ಚಿತ್ರದ ನಾಯಕನ ಹೆಸರು ಕರ್ಣ. ಅಂಬಿ ತನ್ನ ಚೋಟು ಫ್ರೆಂಡ್ ಜೊತೆ ಮನೆ ಮನೆಗೆ ಕೇಬಲ್ ಹಾಕುತ್ತಾನೆ. ಹಾಗೆಯೇ ಹೊಸದಾಗಿ ಏರಿಯಗೆ ಬರುವ ನಾಯಕಿ ಸುಷ್ಮಾ ಹಿಂದೆ ಬೀಳುತ್ತಾನೆ. ಆಕೆಗೂ ಇವನ ಮೇಲೆ ಪ್ರೀತಿಯುಟ್ಟಲು ಕಾರಣ ಸಿಕ್ಕುವುದಿಲ್ಲವಾದರೂ ಸಮಯ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಎರಡನೆಯ ಹಾಡಿಗೆ ಲವ್ ಆಗುತ್ತದೆ. ಮೂರನೆಯ ಹಾಡಿನೊತ್ತಿಗೆ ಪ್ರೇಮ ಬತ್ತಿಹೋಗುವ ಸ್ಥಿತಿಗೆ ಬರುತ್ತದೆ. ಇನ್ನೇನು ಮಾಡುವುದು ಕರೆದುಕೊಂಡು ಹೋಗಿ ಬಿಡೋಣ ಎಂದು ನಿರ್ಧರಿಸಿ ಮದುವೆಯಾಗಿ ಬಿಟ್ಟು ಹೊಸೂರಿಗೆ ಹೋಗುವ ಹೊತ್ತಿಗೆ ಮಧ್ಯಂತರ. ಆನಂತರ ಬೇರೆಯದೇ ಆದ ಕತೆ, ಬೇರೆಯದೇ ಪಾತ್ರಗಳು ತೆರೆದುಕೊಳ್ಳುತ್ತದೆ. ಪ್ರಥಮಾರ್ಧದ ನವಿರುತನ ಮಾಯವಾಗಿ ರೌದ್ರ ಮನೆ ಮಾಡುತ್ತದೆ. ಆಮೇಲೆ ನಡೆಯುವುದೆಲ್ಲಾ ಇದೇನಾ ನಾವು ಮೊದಲು ನೋಡಿದ್ದು ಎನ್ನುವಷ್ಟರ ಮಟ್ಟಿಗೆ ಭಿನ್ನ ಎನಿಸುತ್ತದೆ. ಆದರೆ ಅದೇ ಋಣಾತ್ಮಕ ಅಂಶ.
ಈವತ್ತಿನ ಚಿತ್ರರಂಗದ ಪರಿಸ್ಥಿತಿಯಲ್ಲಿ ಸಿನಿಮಾ ಸುಮಾರು ಎಂದರೆ ಅದೇ ಸೂಪರ್ ಎನ್ನುವ ಮಾತಿದೆ. ಆ ನಿಟ್ಟಿನಲ್ಲಿ ಲವ್ ಇನ್ ಮಂಡ್ಯ ಚಿತ್ರವನ್ನು ಸುಮಾರು ಎಂದು ಅದರ ಮುಂದಿನ ಅರ್ಥವನ್ನು ಸೂಪರ್ ಎಂದುಕೊಳ್ಳುವುದು ಅವರವರ ಭಾವಕ್ಕೆ ಬಿಟ್ಟದ್ದು ಎನ್ನಬಹುದು. ಆದರೆ ನಿರ್ದೇಶಕರೊಳಗಿನ ಕತೆಗಾರನ ದೌರ್ಬಲ್ಯ ಎದ್ದು ಕಾಣುವುದು ಇಲ್ಲೇ. ಸಿನೆಮಾಕ್ಕೆ ಕತೆ ಹೆಣೆಯುವ ಭರದಲ್ಲಿ ಕೌತುಕವನ್ನು ತುಂಬುವ ಭರದಲ್ಲಿ ಚಿತ್ರಕತೆ ಹೆಣೆದಾಗ ಕತೆಯ ಒಟ್ಟಾರೆ ಆಶಯವೆ ಸೂತ್ರ ಹರಿದ ಗಾಳಿಪಟದಂತೆ ಚೆಲ್ಲಾಪಿಲ್ಲಿಯಾಗುತ್ತದೆ. ಕತೆಗಾರ ಮತ್ತು ನಿರ್ದೇಶಕ ಇಬ್ಬರ ನಡುವಣ ವ್ಯತ್ಯಾಸ ಅಥವಾ ಸಾಮ್ಯ ಇದೇ ಎನ್ನಬಹುದು. ಅರಸು ಅಂತಾರೆ ಅವರ ಮೊದಲ ನಿರ್ದೇಶನ ಗಮನ ಸಳೆಯುತ್ತದೆ. ಹಾಡುಗಳು ಅವುಗಳ ಚಿತ್ರಣ ಟಾಪ್ ಕ್ಲಾಸ್.  ಸತೀಶ್ ಅಭಿನಯ ಅಲ್ಲಲ್ಲಿ ಗಮನ ಸೆಳೆದರೂ ಅವರ ಪಾತ್ರ ರಚನೆಯಲ್ಲಿಯೇ ಏರುಪೇರಿದೆ. ಸಿಂಧು ಲೋಕನಾಥ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಾಸ್ಟರ್ ಮಂಜು ಅವರ ಅಭಿನಯ ಸೂಪರ್.  ಇನ್ನುಳಿದಂತೆ ರಾಜೇಂದ್ರ ಕಾರಂತ್ ಚಿಕ್ಕದಾದ ಚೊಕ್ಕದಾದ ಪಾತ್ರದಲ್ಲೇ ಗಮನ ಸೆಳೆಯುತ್ತಾರೆ.

ಒಂದು ಕತೆ ಎಂದರೆ ಅದರದೇ ಆದ ಕವಲುಗಳು ಇತಿಮಿತಿಗಳು ಇರುತ್ತವೆ. ಒಬ್ಬ ಕತೆಗಾರ ಗೆಲ್ಲುವುದು ಕತೆಯನ್ನು ಹೆಣೆಯುವ ಆ ಪರಿಧಿಯೊಳಗೆ ಅದನ್ನು ಅಳವಡಿಸುವ ನೈಪುಣ್ಯತೆಯಿಂದ. ಅರಸು ಅಂತಾರೆ ಮೂಲತಃ ಚಿತ್ರ ಸಾಹಿತಿ. ಆದರೆ ಕತೆಯ ಬಗ್ಗೆ ಇನ್ನಷ್ಟು ಗಮನ ಹರಿಸಿದರೆ ಅದರ ಒಳಪದರಗಳನ್ನೂ ತಿಳಿದರೆ ಯಶಸ್ಸು ಖಂಡಿತ.

ನಮೋ ಭೂತಾತ್ಮ:

ಕೋಮಲ್ ಅಪ್ಡೇಟ್ ಆಗಿದ್ದಾರೆ. ಈ ವರ್ಷ ತಮಿಳಿನಲ್ಲಿ ತೆರೆಗೆ ಬಂದ ಚಿತ್ರವನ್ನು ಈ ವರ್ಷವೇ ಕನ್ನಡಕ್ಕೆ ತಂದಿದ್ದಾರೆ. ತಮಿಳಿನ ಯಮರುಕು ಭಯಮೆ ಚಿತ್ರ 1998 ರಲ್ಲಿ ತೆರೆಕಂಡ ಕೋರಿಯನ್ ಚಿತ್ರ ದಿ ಕ್ವಯ್ಟ್ ಫ್ಯಾಮಿಲಿ ಚಿತ್ರದ ರಿಮೇಕ್.
ಚಿತ್ರ ಒಂದು ಹಾರರ್ ಕಾಮಿಡಿ. ಎಂದರೆ ಭಯಭೀತರನ್ನಾಗಿಸುತ್ತಲೇ ನಗಿಸುವ ಚಿತ್ರವಿದು. ಈ ಹಿಂದೆ ತೆಲುಗಿನ ಕನ್ನಡ ರಿಮೇಕ್ ಚಂದ್ರಲೇಖ ಕೂಡ ಇಂತಹದ್ದೇ ಜಾನ್ರ್ ನಲ್ಲಿ ಬಂದಂತಹ ಚಿತ್ರವಾಗಿತ್ತು. ನಮೋ ಭೂತಾತ್ಮದ ಚಿತ್ರದ ಕತೆ ಸರಳವಾದದ್ದೆ. ಮಾಮೂಲಿ ಭೂತದ ಕತೆಗಳಲ್ಲಿ ಬರುವ ದೆವ್ವದ ಮನೆ/ಬಂಗಲೆ ಅಲ್ಲಿ ಸಿಲುಕಿಕೊಳ್ಳುವ ಜನರು ಹೆದರಿಸುವ, ಕಾಡುವ ದೆವ್ವ ಇದೆಲ್ಲಾ ಚಿತ್ರಪ್ರೇಮಿಗೆ ಹೊಸತಲ್ಲ. ಆದರೆ ನಮೋ ಭೂತಾತ್ಮದಲ್ಲಿ ವಿಶೇಷ ಎಂದರೆ ಭೂತದ ಜೊತೆಗೆ ಹಾಸ್ಯವೂ ಇರುವುದು.ಒಂದು ಬಂಗಲೆ. ಅದಕ್ಕೆ ನಾಯಕ ಮಾಲೀಕನಾಗುತ್ತಾನೆ. ಅದನ್ನು ರೆಸಾರ್ಟ್ ಮಾಡಿ ಕಮಾಯಿಸಬೇಕು ಎನ್ನುವುದು ಅವನ ಉದ್ದೇಶ. ಅದಕ್ಕೆ ನಾಯಕಿಯೂ  ಸಾಥ್ ಕೊಡುತ್ತಾಳೆ. ಆದರೆ ಬಂದ ಗಿರಾಕಿಗಳೆಲ್ಲಾ ಪರಲೋಕಕ್ಕೆ ಪರಾರಿಯಾದಾಗ ಅನುಮಾನ ಕಾಡುತ್ತದೆ. ಅಲ್ಲಲ್ಲ ಭೂತಾತ್ಮ ಕಾಡುತ್ತದೆ. ಅದರ ರಹಸ್ಯದ ಹಿಂದೆ ನಾಯಕ ಬೀಳುತ್ತಾನೆ..ನಾಯಕನ ಹಿಂದೆ ದೆವ್ವ ಬೀಳುತ್ತದೆ. ಈ ಇಬ್ಬರ ಹಿಂದೆ ಪ್ರೇಕ್ಷಕ ಬೀಳುತ್ತಾನೆ.
ಚಿತ್ರ ಪ್ರಾರಂಭದಲ್ಲಿ ಬೋರ್ ಎನಿಸುತ್ತದೆ ಬರುಬರುತ್ತಾ ಜೋರ್ ಎನಿಸುತ್ತದೆ., ಚಿತ್ರಕತೆ ಲಾಜಿಕ್ ಮೀರಿ ಇಷ್ಟವಾಗುತ್ತದೆ. ಭಯ ಹುಟ್ಟಿಸಲು ಕ್ಯಾಮೆರಾ ಕಣ್ಣು ಹಿನ್ನೆಲೆ ಸಂಗೀತ ಸಹಾಯ ಮಾಡುತ್ತದೆ. ನಗಿಸಲು ಕೋಮಲ್, ಕೋಮಲ್ ಜೊತೆಗೆ ಒಂದಷ್ಟು ಸನ್ನಿವೇಶಗಳು ಜೊತೆಗೆ ಹರೀಶ್ ರಾಜ್ ಪ್ರಯತ್ನ ಪಡುತ್ತಾರೆ ಮತ್ತು ಯಶಸ್ವಿಯೂ ಆಗುತ್ತಾರೆ. ಚಿತ್ರದಲ್ಲಿ ಬರುವ ಕತೆ ಉಪಕತೆಗಳು ಅಲ್ಲಲ್ಲಿ ಬ್ರೇಕ್ ನೀಡುತ್ತವೆ. ಇನ್ನು ಸಂಗೀತ ಹಾಡುಗಳ ಬಗ್ಗೆ ನಿರ್ದೇಶಕರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅದು ಪ್ರೇಕ್ಷಕನಿಗೂ ಬೇಕಾಗುವುದಿಲ್ಲ.
ಸಿನಿಮಾದ ಕತೆ ಹಳೆಯದಾದರೂ ಚಿತ್ರಕತೆ ಈಗಾಗಲೇ ಬಂದಿದೆ ಎನಿಸಿದರೂ ಜಾನರ್ ಹೊಸದು ಎನಿಸುವುದರಿಂದಾಗಿ ಚಿತ್ರ ಸ್ವಲ್ಪ ಮಟ್ಟಿಗೆ ಫ್ರೆಶ್ ಎನಿಸುತ್ತದೆ. ಹಾಗಾಗಿಯೇ ನೋಡುತ್ತಾ ನೋಡುತ್ತಾ ಮಜಾ ಕೊಡುತ್ತದೆ.
ರಜಾದಲ್ಲಿ ಮಜಾ ಮಾಡಲು ಯೋಚಿಸುವವರು ಒಂದಷ್ಟು ಸಮಯವನ್ನು ಕಳೆಯಬೇಕು ಎನ್ನುವವರು ನಮೋ ಭೂತಾತ್ಮಕ್ಕೆ ಭಯವಿಲ್ಲದೆ ನುಗ್ಗಿ ಹೆದರಬಹುದು.


ಹುಚ್ಚ ವೆಂಕಟ್:

ಸಿನಿಮಾ ಹೆಸರು, ನಿರ್ದೇಶಕರ ಹೆಸರು ಎರಡೂ ಒಂದೇ ಆಗಿರುವುದು ಮತ್ತು ಹೆಸರಿನ ಮುಂದೆ ಹುಚ್ಚ ಎಂದಿರುವುದು ಇದೆಲ್ಲದರ ಕಾರಣದಿಂದಾಗಿ ಹುಚ್ಚ ವೆಂಕಟ ಚಿತ್ರ ಹುಚ್ಚುಚ್ಚಾಗಿದ್ದರೆ ಅದಕ್ಕೆ ಸಮರ್ಥನೆ ಇದೆ.
ನಾಯಕ ವೆಂಕಟ ನಾಯಕಿ ರಮ್ಯಳ ಹಿಂದೆ ಬೀಳುತ್ತಾನೆ. ನಿರ್ದೇಶಕರು ಚಿತ್ರನಟಿ ರಮ್ಯ ಹಿಂದೆ ಬಿದ್ದವರೇ. ನನ್ನದು ರಮ್ಯದು ಮದುವೆಯಾಗಿತ್ತು ಎಂದು ಇಡೀ ದಿನ ಸುದ್ದಿವಾಹಿನಿಯಲ್ಲಿ ಬಂದು ಕುಳಿತಿದ್ದವರು. ಹಾಗಾಗಿ ಇದೊಂದು ನೈಜಕಥನ ಎನ್ನಬಹುದು. ಚಿತ್ರದಲ್ಲಿ ನಾಯಕ ಭೂಗತಲೋಕಕ್ಕೆ ಎಂಟ್ರಿ ಕೊಡುವುದರಿಂದ ಮತ್ತು ನಿಜಜೀವನದ ಘಟನೆ ತೆರೆದಾಗ ವೆಂಕಟ್ ಅವರ ಬಗ್ಗೆ ಆ ಆರೋಪ ಇಲ್ಲದೆ ಇರುವುದರಿಂದ ಇದೊಂದು ಕಾಲ್ಪನಿಕ ಕತೆ ಎನ್ನಲೂ ಬಹುದು. ಸಂಕಲನ ಅಲ್ಲಿ ಕತ್ತರಿಸಿ ಇಲ್ಲಿ ಕತ್ತರಿಸಿ ಸನ್ನಿವೇಶಗಳು ಏರು ಪೆರಾಗಿರುವುದರಿಂದ ಇದೊಂದು ರಿವರ್ಸ್ ಸ್ಕ್ರೀನ್ ಪ್ಲೇ ಸಿನಿಮಾ ಎನ್ನಲೂ ಬಹುದು. ಹೀಗೆ ಚಿತ್ರವನ್ನು ಹೇಗೆ ಬೇಕಾದರೂ ಕರೆಯಬಹುದಾದ ಗುಣವನ್ನು ಹೊಂದಿರುವ ಚಿತ್ರ ವೆಂಕಟ ನೋಡಿಸಿಕೊಳ್ಳುವ ಗುಣವಿದೆಯೇ ಎಂಬ ಪ್ರಶ್ನೆಗೆ ನೋಡಿಸಿ ‘ಕೊಲ್ಲುವ’ ಗುಣವಿದೆ ಎನ್ನಬಹುದು.
ಚಿತ್ರದ ನಾಯಕ ಕಾಲೇಜಿನಲ್ಲಿ ಓದುತ್ತಾನೆ, ನೀವದನ್ನು ನಂಬಬೇಕು, ಅದೇನು ಓದುತ್ತಾನೋ ರಮ್ಯ ಎನ್ನುವ ನಾಯಕಿಯ ಹಿಂದೆ ಬೀಳುತ್ತಾನೆ. ಆಕೆ ಕೇರ್ ಮಾಡುವುದಿಲ್ಲ. ಇವನು ಕ್ಯಾರೆ ಎನ್ನುವುದಿಲ್ಲ. ಪ್ರೇಕ್ಷಕ ಮಾತ್ರ ಬಾಪ್ಪರೆ ಎನ್ನುತ್ತಾನೆ. ಅಲ್ಲಿಂದ ಕೈಯಲ್ಲಿ ಸುಲಭವಾಗಿ ಲಾಂಗ್ ಹಿಡಿಯುತ್ತಾನೆ ವೆಂಕಟ. ಲಾಂಗಿಗಿಂತ ಹೆಚ್ಚು ಮಾತಿನ ಚಾಟಿ ಬೀಸುತ್ತಾರೆ, ಆವಾಗಾವಾಗ ದುಃಖಕ್ಕೀಡಾಗುತ್ತಾರೆ, ಹೀಗೆ ತೆರೆಯ ಮೇಲೆ ಏನೇ ನಡೆದರೂ ಪ್ರೇಕ್ಷಕ ಅಲ್ಲಾಡುವುದಿಲ್ಲ. ಅಷ್ಟರ ಮಟ್ಟಿಗೆ ಸಿನಿಮಾ ಪರಿಣಾಮಕಾರಿ.
ಇದು ನಿರ್ದೇಶಕರ ಮೊದಲ ನಿರ್ದೇಶನದ ಅಭಿನಯದ ಚಿತ್ರ. ಈ ಹಿಂದೆ ಸ್ವತಂತ್ರಪಾಳ್ಯ ಎನ್ನುವ ಚಿತ್ರವನ್ನು ನಿರ್ದೇಶಕರು ನಟಿಸಿ ನಿರ್ದೇಶನ ಮಾಡಿದ್ದರು. ಅದರ ಅನುಭವ ಇಲ್ಲಿ ಕೆಲಸಕ್ಕೆ ಬಂದಿಲ್ಲ. ಸಿನಿಮಾದ ಮುಖ್ಯವಾದ ಭಾಗಗಳನ್ನು ತಾನೇ ವಹಿಸಿಕೊಂಡಿದ್ದಾರೆ ವೆಂಕಟ್. ಅದಕ್ಕೂ ಮುನ್ನ ತಮ್ಮ ವೀಕ್ನೆಸ್ ಸ್ಟ್ರೆಂತ್ ತಿಳಿದುಕೊಂಡಿದ್ದರೆ ಅದರ ಪ್ರಕಾರ ವಿಭಾಗಗಳನ್ನು ಒಂದಷ್ಟು ಪರಿಣತರಿಗೆ ವಹಿಸಿದ್ದರೆ ಚಿತ್ರ ಏನೋ ಒಂದಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಚಿತ್ರಕರ್ಮಿಗಳು ಜಾಸ್ತಿ’ಯಾಗುತ್ತಿದ್ದಾರೆ. ಹೇಗೋ ಏನೋ ಸಿನಿಮಾ ನಿರ್ದೇಶನ ಮಾಡಬೇಕು, ಅಭಿನಯಿಸಬೇಕು, ನಾವಂದುಕೊಂಡದ್ದೇ ಸರಿ ಎನ್ನುವ ಮನೋಭಾವನೆ ಇಂತಹ ಚಿತ್ರಗಳಿಗೆ ಕಾರಣವಾಗುತ್ತದೆ. ಒಂದು ಸಿನಿಮಾಕ್ಕೆ ಮೂಲಭೂತವಾಗಿ ಬೇಕಾದ ಅಗತ್ಯತೆಗಳೆಲ್ಲವೂ ಇದ್ದಾಗಲೂ ಸಿನಿಮಾ ಪರಿಣಾಮಕಾರಿಯಾಗದೆ ಇರುವುದಕ್ಕೆ ಕಾರಣ ಬೌದ್ಧಿಕತೆ ಕೊರತೆ. ಹುಚ್ಚ ವೆಂಕಟ ಕೂಡ ಇದಕ್ಕೆ ಹೊರತಾಗಿಲ್ಲ. ಹಾಗಾಗಿಯೇ ಸಿನಿಮಾ ಯಾವ ವಿಭಾಗದಲ್ಲೂ ಆಪ್ತವಾಗದೆ, ಕೊನೆಗೆ ಒಂದು ಪ್ರಯತ್ನವೂ ಆಗದೆ ಅರೆಬೆಂದ ಅಡುಗೆಯಂತಾಗುವುದು ದುರಂತ.

ಚಿತ್ರಕರ್ಮಿಗಳು ಸಿನಿಮಾ ಮಾಡುವ ಮುನ್ನ ಒಂದಷ್ಟು ಇತಿಹಾಸ, ಸಿನೆಮಕಲೆಯ ಬಗ್ಗೆ ಅದ್ಯಯನ ಮಾಡಿ ಒಂದಷ್ಟು ಸಿನಿಮಾ ನೋಡಿ, ಒಂದಷ್ಟು ಓದಿದರೇ ನೋಡಿಸಿಕೊಳ್ಳುವ ಸಿನಿಮಾ ಮಾಡಬಹುದು, ಇಲ್ಲವಾದಲ್ಲಿ ಇಂತಹ ನೋಡಿಸಿ‘ಕೊಲ್ಲುವ’ ಸಿನಿಮಾವಾಗುತ್ತದೆ.

Saturday, November 22, 2014

ಅಂಬರೀಶ:

ಒಬ್ಬ ದೊಡ್ಡ ತಾರೆ, ಕೋಟಿ ಕೋಟಿ ಹಣ, ಅಪಾರ ನಿರೀಕ್ಷೆ ವರ್ಷಗಟ್ಟಲೆ ಸಮಯ...ಇವಿಷ್ಟೂ ಇದ್ದಾಗ ಒಂದು ಸಿನಿಮಾವನ್ನು ಹೇಗೆಲ್ಲಾ ಮಾಡಬಹುದು? ಅಥವಾ ಹೇಗೆಲ್ಲಾ ಮಾಡಬಾರದು? ಅಂಬರೀಶ ಇದಕ್ಕೆ ಸೂಕ್ತ ಉದಾಹರಣೆ.
ಚಿತ್ರದ ಕತೆ ಉತ್ತಮವಾಗಿದೆ ಅಷ್ಟೇ ಅಲ್ಲ, ವಿಭಿನ್ನವಾಗಿಯೂ ಇದ್ದು, ಒಬ್ಬ ಸ್ಟಾರ್ ನಟನಿಗೆ ಹೇಗಿರಬೇಕೋ ಹಾಗಿದೆ. ಮಂತ್ರಾಲಯದ ಗೋಶಾಲೆಯಲ್ಲಿ ಗೋಪಾಲಕ ಭೂಪಾಳಕನಾಗುವ ಕತೆ ಚಿತ್ರದ್ದು. ಇಂದು ಭೂಮಾಫಿಯಾ ಬಹು ದೊಡ್ಡ ಮಾಫಿಯಾವಾದರೂ ಅದರ ಕೊವೆ ಕೊವೆಗಳಲ್ಲಿ ಸಾರ್ವಜನಿಕರಿಂದ ಹಿಡಿದು ಉದ್ಯಮಿಗಳು ರಾಜಕಾರಣಿಗಳು ತುಂಬಿಹೋಗಿದ್ದಾರೆ. ಹಾಗಾಗಿ ಬೆಂಗಳೂರಿಗೆ ಬಂದ ಕೂಲಿಯೊಬ್ಬ ಸಿಡಿದು ನಿಂತು ಕಲಿಯಾಗುತ್ತಾನೆ. ಸಿಕ್ಕಿದ್ರೆ ತುಂಡು ಎಂದುಕೊಂಡು ಎದುರಿಗೆ ಸಿಕ್ಕವರನ್ನು ಚೆಂಡಾಡುತ್ತಾನೆ.
ಬೆಂಗಳೂರಿಗೆ ಬರುವ ನಾಯಕ, ಅಲ್ಲೊಬ್ಬಳು ನಾಯಕಿ, ಮನೆಯಲ್ಲೇ ಒಬ್ಬಳು ನಾಯಕಿ ಮತ್ತೊಂದಷ್ಟು ಖಳರು- ರಾಯಚೂರು, ಬೆಂಗಳೂರು, ಮಂತ್ರಾಲಯ ಹೀಗೆ ಅಲ್ಲಲ್ಲಿ ಸುತ್ತುವರೆಯುತ್ತದೆ. ಅಷ್ಟೇ ಅಲ್ಲ, ಕಾಲಘಟ್ಟದಲ್ಲಿ ಒಮ್ಮೆ ಹಿಂದೆ ಹೋಗಿ ಮುಂದೆ ಬರುತ್ತದೆ.
ಒಂದು ಪಕ್ಕಾ ಮಾಸ್ ಸಿನಿಮ ಮಾಡುವಾಗ, ದೊಡ್ಡ ತಾರೆಯೊಬ್ಬ ಪಾತ್ರಧಾರಿಯಾದಾಗ ಅಭಿಮಾನಿಗಳನ್ನು ರಂಜಿಸಲು ಒಂದಷ್ಟು ವೈಭವೀಕರಣ ಬೇಕಾಗುತ್ತದೆ. ಆದರೆ ಅದೂ ಕೂಡ ಕತೆಯ ಜೊತೆಗೆ ಮಿಳಿತಗೊಂಡರೆ ಸೊಗಸು. ಆದರೆ ಅಂಬರೀಷನ ಕೊರತೆ ಎಂದರೆ ಅದೇ. ಇಲ್ಲಿ ವಿಜೃಂಭನೇ ಜೋರಾಗಿಯೇ ಇದೆ. ಪ್ರತಿ ಎಂಟ್ರಿಯಲ್ಲೂ ಖದರ್ ಇದೆ. ಮಾತು ಮಾತಲ್ಲಿ ಪಂಚಿಂಗ್ ಇದೆ. ಮುಟ್ಟಿದರೆ ಮೂರು ಮೈಲಿ ದೂರಹೋಗಿ ಬೀಳುವ ಖಳರಿದ್ದಾರೆ. ಆದ್ರೆ ಕೊರತೆ ಇರುವುದು ಇವೆಲ್ಲವನ್ನೂ ಹದವಾಗಿ ಬೆರೆಸುವ ಚಿತ್ರಕತೆಯಲ್ಲಿ. ಕೆಂಪೇಗೌಡ ಕಾಣಿಸಿಕೊಂಡ ನಂತರ ಬೆಂಗಳೂರು ಕಟ್ಟಿದ ಕೆಂಪೇಗೌಡನೆ ನಾಯಕನಾಗಿ ದುಷ್ಟರನ್ನು ಸಂಹಾರ ಮಾಡಲು ನಿಂತುಬಿಡುತ್ತಾನೆ. ಆದರೆ ಅದಕ್ಕಾಗಿ ಆತ ಕಾನೂನು ಕೈಗೆ ತೆಗೆದುಕೊಂಡರೆ ನಿರ್ದೇಶಕರ ಪ್ರಕಾರ ಕಾನೂನು ಕಣ್ಮುಚ್ಚಿಕೊಳ್ಳುತ್ತದೆ. ರುಂಡ ಚೆಂಡಾಡಿದರೆ ಸಿನಿಮಾದಲ್ಲಿನ ಪೋಲಿಸರು ಮೂಕ ಪ್ರೇಕ್ಷಕರಾಗುತ್ತಾರೆ. ಹಾಗಾಗಿಯೇ ಚಿತ್ರದಲ್ಲಿನ ನೈಜತೆ ಮಾಯವಾಗಿ ಮುಂದುವರೆದಂತೆ ಸಾದಾರಣ ಹೊಡಿಬಡಿ ಚಿತ್ರವಾಗುತ್ತದೆ. ಭೂ ಒತ್ತುವರಿ ಭೂ ಕಬಳಿಕೆಯಂತಹ ವಸ್ತುವನ್ನು ತೆಗೆದುಕೊಂಡಿರುವ ನಿರ್ದೇಶಕರು ಅದಕ್ಕೆ ಹೊಡಿ ಬಡಿ ನ್ಯಾಯ ಒದಗಿಸಿದ್ದಾರೆ. ಹಾಗಾಗಿಯೇ ಚಿತ್ರದ ನಾಯಕ ಮಾತೆತ್ತಿದ್ದರೆ ಆಯುಧ ಬೀಸುತ್ತಾನೆ, ತೋಳು ಮಡಚುತ್ತಾನೆ, ನೋಡುತ್ತಾ ಕುಳಿತ ಪ್ರೇಕ್ಷಕ ತೆರೆಯಿಂದ ಬೇರೆಯಾಗಿ ಅಲ್ಲಿ ನಡೆಯುತ್ತಿದೆ ಸಿನಿಮಾ ಇದೆಲ್ಲಾ ನಿಜವಾಗಿ ಆಗಲ್ಲ ಕಣಣ್ಣಾ ಎನ್ನುತಾನೆ. ಸಿನಿಮಾ ಆಪ್ತವಾಗದೆ ಬರೀ ಸಿನಿಮಾವಾಗುತ್ತದೆ. ನಿರ್ದೇಶಕರು ಚಿತ್ರದ ಚಿತ್ರಕತೆಯಲ್ಲಿ ನಾಜೂಕುತನ ತೋರಿಸಿ, ಹದವಾಗಿ ನೈಜತೆ ಬೆರೆಸಿದ್ದರೆ ಚಿತ್ರ ಮನರಂಜನೆ ಜೊತೆ ಸಂದೇಶ ನೀಡುತ್ತಿತ್ತು. ಈಗ ತೆರೆಯ ಮೇಲೆ ಬರೀ ಧೂಳ್.
ದರ್ಶನ್ ಎಂದಿನಂತೆ ಡೈಲಾಗ್ ಹೊಡೆಯುತ್ತಾರೆ, ತೋಳು ಬೀಸುತ್ತಾರೆ. ತೆರೆಯ ಮೇಲೆ ತುಂಬಾ ಚೆನ್ನಾಗಿ ಕಾಣಿಸುತ್ತಾರೆ. ಪ್ರಿಯಮಣಿ ಅನುರಾಗ ಅರಳಿತು, ಆಟೋ ಶಂಕರ್ ಮುಂತಾದ ಚಿತ್ರಗಳ ನಾಯಕಿಯನ್ನು ನೆನಪಿಸುತ್ತಾರೆ. ರಚಿತಾರಾಂ ಇಲ್ಲಿದ್ದೇನೆ ಎನ್ನುತ್ತಾರೆ. ಇನ್ನುಳಿದಂತೆ ಕೆಲ್ಲಿ ಜಾರ್ಜ್ ಈಜುಕೊಳದಲ್ಲಿ ಲಲನೆಯರ ಜೊತೆ ಮಿಂದೆದ್ದು ನಾಯಕನಿಂದ ಒದೆ ತಿನ್ನಲು ಮಲೇಷ್ಯಾದಿಂದಲೇ ಅರಚುತ್ತಾ ಬರುತ್ತಾರೆ.

ಸತ್ಯಹೆಗಡೆ ಛಾಯಾಗ್ರಹಣದಲ್ಲಿ ವಿಶೇಷವಿಲ್ಲ. ಹರಿಕೃಷ್ಣ ಸಂಗೀತದಲ್ಲಿ ಎರಡು ಹಾಡುಗಳು ಖುಷಿ ನೀಡುತ್ತವೆ. 

Saturday, November 8, 2014

ಅಭಿಮನ್ಯು: ಚಿತ್ರ ವಿಮರ್ಶೆ

ಈವತ್ತು ಶಾಲೆ ನಡೆಸುವ ಅಂದರೆ ಅಕ್ಷರ ದಾಸೋಹ ಬರೀ ದಾಸೋಹವಾಗಿಯಷ್ಟೇ ಉಳಿದಿಲ್ಲ.a ಅದೊಂದು ದಂಧೆಯಾಗಿದೆ. ಅದರಲ್ಲಿ ಕೋಟ್ಯಾಂತರ ರೂಪಾಯಿಗಳ ಟರ್ನ್ ಓವರ್ ಇದೆ. ಈವತ್ತು ರಾಜಕಾರಣಿಗಳು, ಹಣವಂತರು ಶಾಲಾ ಕಾಲೇಜುಗಳನ್ನು ನಿರ್ಮಿಸುತ್ತಾರೆ ನಡೆಸುತ್ತಾರೆ..ವಿದ್ಯೆಗಿಂತ ದುಡ್ಡಿಗೆ ಬೆಲೆ. ಇದು ಖಾಸಗೀ ಶಾಲಾ ಕರಾಳ ದಂಧೆ. ನಾಯಕ ಅರ್ಜುನ್ ಸರ್ಜಾ ಇದೇ ವಸ್ತುವನ್ನು ತಮ್ಮ  ಚಿತ್ರಕ್ಕೆ ತೆಗೆದುಕೊಂಡಿದ್ದಾರೆ. ವಸ್ತುವನ್ನು ವಿಭಿನ್ನವಾಗಿ ಆಯ್ಕೆ ಮಾಡಿಕೊಂಡು ತಮ್ಮ ಮಾಮೂಲಿ ಶೈಲಿಯ ಚಿತ್ರ ಮಾಡಿದ್ದಾರೆ.
ಅರ್ಜುನ್ ಸರ್ಜಾ ಅವರ ಚಿತ್ರಗಳೆಂದರೆ ಪ್ರೇಕ್ಷಕನಿಗೆ ಗೊತ್ತು. ಅವರ ಪ್ರಕಾರ ಎಲ್ಲಾ ಸಮಸ್ಯೆಗೂ ಒಂದೇ ಪರಿಹಾರ. ಹೊಡೆದು ಉರುಳಿಸು ಎಂಬುದು. ಅಭಿಮನ್ಯು ಚಿತ್ರದಲೂ ಅದೇ ಆಗಿದೆ. ಶಾಲೆಯಲ್ಲಿ ತಮ್ಮ ಮಗಳಿಗೆ ಫೀಸು ಕಟ್ಟಲಾಗದೆ ನೊಂದ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುತ್ತದೆ. ಶಿಕ್ಷಣ ವ್ಯವಸ್ಥೆಯ ವಿರುದ್ಧ ಸಿಡಿದು ನಿಲ್ಲುವ ನಾಯಕ ಅದರ ವಿರುದ್ಧ ಸೊಲ್ಲೆತ್ತಿದ್ದಾಗ ಇಡೀ ವ್ಯವಸ್ಥೆ ಅವನ ವಿರುದ್ಧ ನಿಂತುಕೊಳ್ಳುತ್ತದೆ. ಅಷ್ಟೇ ಅಲ್ಲ. ಎಲ್ಲ ಆಯಾಮದಿಂದಲೂ ಅವನನ್ನು ಸುತ್ತುವರಿದು ಬಗ್ಗು ಬಡಿಯಲು ಪ್ರಯತ್ನಿಸುತ್ತದೆ.
ನಾಯಕ ಸಿಡಿದು ನಿಲ್ಲುತ್ತಾನೆ. ಮುಂದಿನ ಕತೆಯನ್ನು ಊಹೆ ಮಾಡಬಹುದು. ಇಲ್ಲಿ ಕತೆಯ ಭಿನ್ನತೆಗಿಂತ ಅದನ್ನು ನಿವಾರಿಸಲು ನಾಯಕ ಏನು ಮಾಡುತ್ತಾನೆ ಎಂಬುದಷ್ಟೇ ಮುಖ್ಯವಾಗುತ್ತದೆ. ಒಂದು ಸಾಹಸಮಯ ಚಿತ್ರದ ನಿರೀಕ್ಷೆ ಅದೇ ಅಲ್ಲವೇ? ಹಾಗಾಗಿ ಮುಂದಿನದ್ದು ಸುಲಭದ ವಿಷಯ. ಒಂದೇ ಸಾಲಿನಲ್ಲಿ ಹೇಳಬೇಕೆಂದರೆ ಎಲ್ಲರನ್ನೂ ಬಗ್ಗು ಬಡಿಯುತ್ತಾನೆ.
ಹೊಡೆದಾಟಗಳು ಚಿತ್ರದ ಹೈಲೈಟ್. ಅರ್ಜುನ್ ತಮ್ಮ ವಯಸ್ಸನ್ನು ತೋರಗೊಡದಂತೆ ಹೊಡೆದಾಟದ ದೃಶ್ಯಗಳಲ್ಲಿ ಮಿಂಚಿದ್ದಾರೆ. ಇಡೀ ಚಿತ್ರ ಅದ್ದೂರಿಯಾಗಿದೆ. ಚಿತ್ರದಲ್ಲಿ ಅರ್ಜುನ್ ಅವರದ್ದು ಕರಾಟೆ ಮಾಸ್ಟರ್ ಪಾತ್ರ. ಹಾಗಾಗಿ ಹೊಡೆದಾಟಗಳಲ್ಲಿ ಪಟ್ಟು ತೋರಿಸಲು ಅವಕಾಶವಿದೆ. ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ ನಿರ್ದೇಶಕರು.
ಆದರೆ ಚಿತ್ರದ ಮೊದಲಾರ್ಧದ ಗತಿ ಆಮೆಗತಿಯಾಗಿದೆ. ಒಂದಷ್ಟು ವಿಷಯಗಳನ್ನು ನಿರ್ದೇಶಕರು ಸಾವಧಾನವಾಗಿ ಹೇಳಲು ಹೊರಟ್ಟಿದ್ದಾರಾದರೂ ಅದನ್ನು ಬೇರೆ ರೀತಿಯಲ್ಲಿ ಮನವರಿಕೆ ಮಾಡಿಕೊಡುವ ಅವಕಾಶವಿತ್ತು. ಹಾಗಾಗಿ ಒಂದಷ್ಟು ಮಾತು, ಕೇಳದಿದ್ದರೆ ಹೊಡೆತ ಎನ್ನುವ ಸೂತ್ರಕ್ಕೆ ಕಟ್ಟು ಬಿದ್ದವರಂತೆ ಅರ್ಜುನ್ ಸಿನಿಮಾ ಮಾಡಿದ್ದಾರೆ. ಕೆಲವು ದೃಶ್ಯಗಳು ಎಳೆತ ಎನಿಸಿ ಬೋರ್ ಹೊಡೆಸುವ ಹಾಗಿವೆ.
ಇದರ ಹೊರತಾಗಿ ಚಿತ್ರದಲ್ಲಿ ಹಾಸ್ಯ ಹಾಡು ಕುಣಿತ ಪ್ರೀತಿ ಎಲ್ಲವೂ ಇದೆ. ಅದೇನಿದ್ದರೂ ಊಟಕ್ಕೆ ಉಪ್ಪಿನಕಾಯಿ, ಪಲ್ಯ ಇದ್ದ ಹಾಗಿವೆ. ಅದಕ್ಕೆ ಇಂಬು ಕೊಡುವಂತೆ ಅದಕ್ಕಾಗಿ ಸುರ್ವಿನ್ ಚಾವ್ಲಾ ಇದ್ದಾರೆ. ಇನ್ನುಳಿದಂತೆ ರಾಹುಲ್ ದೇವ್, ರವಿಕಾಳೆ, ಸಿಮ್ರಾನ್ ಬಿರಾದಾರ್, ವಿನಯ ಪ್ರಸಾದ್ ಪಾತ್ರ ಪೋಷಣೆಯನ್ನು ಪಾತ್ರಕ್ಕೆ ತಕ್ಕಂತೆ ಮಾಡಿದ್ದಾರೆ.
ಅರ್ಜುನ್ ಜನ್ಯ ಸಂಗೀತದಲ್ಲಿ ಅಂತಹ ಮಜಾ ಇಲ್ಲ. ಇನ್ನೂ ಚೆನ್ನಾಗಿರಬೇಕು ಎನಿಸುವ ಸಂಗೀತ ಚಿತ್ರಮಂದಿರದ ಹೊರಕ್ಕೆ ಬರುತ್ತಿದ್ದಂತೆ ಮರೆತುಹೋಗುತ್ತದೆ. ವೇಣು ಛಾಯಾಗ್ರಹಣ ಚಿತ್ರಕ್ಕೆ ಶಕ್ತಿ ತುಂಬಿದೆ.
ಒಂದು ಸಾಹಸಮಯ ಮಸಾಲ ಚಿತ್ರಕ್ಕೆ ಏನೇನೂ ಬೇಕು ಅದೆಲ್ಲವನ್ನೂ ಹೊಂದಿರುವ ಚಿತ್ರದಲ್ಲಿ ಒಂದು ಸಂಘಟಿತ ಅವ್ಯವಸ್ಥೆಯ ವಿರುದ್ಧ ಒಬ್ಬ ಏಕಾಂಗಿಯಾಗಿ ಹೋರಾಡುತ್ತಾನೆ, ಆನಂತರ ಅವನಿಗೆ ಸಮುದಾಯದ ಬಲ ಸಿಗುತ್ತದೆ. ಆದರೆ ಇದೆಲ್ಲಾ ವಾಸ್ತವದಲ್ಲಿ ಸಾಧ್ಯವಾ ಎನ್ನುವ ಪ್ರಶ್ನೆ ನಿಮ್ಮದೂ ಆಗಿರಬಹುದು. ಅದಕ್ಕೆ ಅರ್ಜುನ್ ಜಾಣತನ ಮೆರೆದಿದ್ದಾರೆ. ಚಿತ್ರದಲ್ಲಿಯೇ ಪ್ರಶ್ನೆ ಹೇಳಿಸಿ ಉತ್ತರ ಕೊಟ್ಟಿದ್ದಾರೆ.

Friday, October 31, 2014

ಜಗ್ಗಿ

ನಾಯಕನ ಎಂಟ್ರಿ ಪೋಕಿರಿ ಸ್ಟೈಲ್ ನಲ್ಲಾಗುತ್ತದೆ. ಸಾಮಾನ್ಯ ಸರಗಳ್ಳನನ್ನು ಅಟ್ಟಾಡಿಸಿಕೊಂಡು ಓಡಿ ಜಿಗಿದರೆ ಹೂವೆಲ್ಲಾ ಹರಡಿ ಅದರ ಜೊತೆ ನಾಯಕನ ದರ್ಶನವಾದಾಗ ಇಷ್ಟೆಲ್ಲಾ ಮಾಡಿದ್ದು ನಾಯಕ ಅವನನ್ನು ಹಿಡಿಯುವುದಕ್ಕಾ ಅಥವಾ ತನ್ನನ್ನು ತಾನೇ ಪರಿಚಯ ಮಾಡಿಕೊಳ್ಳುವುದಕ್ಕಾ ಎಂದು ತಲೆ ಕೆರೆದುಕೊಲ್ಲುತ್ತಾನೆ.
ಜಗ್ಗಿ ಚಿತ್ರದ ಚಿತ್ರಕತೆಯಲ್ಲಿ ಪ್ರೌಡಿಮೆಯಿಲ್ಲ ಅಥವಾ ಅದನ್ನು ನಿರ್ದೇಶನ ಮಾಡಿರುವಲ್ಲಿ ಬಾಲಿಶತನವಿದೆ. ಉದಾಹರಣೆಗೆ ವಿಳಾಸ ಕೇಳಿದ ಮುದುಕನನು ಖಳ ಹೊಡೆಯುತ್ತಾನೆ. ಇದಿಷ್ಟನ್ನು ನಿರ್ದೇಶಕರು ಒಮ್ಮೆ ಅಡ್ರೆಸ್ ಕೇಳಿದ್ದಕ್ಕೆ ಹೊಡೆಸಿದ್ದರೆ ನಂಬುವ ಹಾಗಿರುತ್ತಿತ್ತು. ಆದರೆ ಆ ಮುದುಕ ಹೋಗು ಹೋಗು ಎಂದರೂ ಕೆಣಕಿ ಕೆಣಕಿ ಅವನನ್ನೇ ಕೇಳಿದರೆ ನೋಡುಗರಿಗೆ ತಾಳ್ಮೆ ತಪ್ಪಿ ಬೈಯ್ಯುವಂತಾಗುತ್ತದೆ. ಇನ್ನು ವಿಲನ್ ಗೆ ಹೇಗಾಗಬೇಡ... ಇಡೀ ಚಿತ್ರದಲ್ಲಿ ಈ ತರಹದ ಸುಮಾರಷ್ಟು ಅಂಶಗಳಿವೆ. ಬರೀ ದೃಶ್ಯ ಚಿತ್ರೀಕರಣವನ್ನು ಮಾಡಿಕೊಳ್ಳುತ್ತಾ ಸಾಗಿರುವ ನಿರ್ದೇಶಕರು ಅದರ ಒಟ್ಟಾರೆ ಭಾವದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿ ಚಿತ್ರದ ಚಿತ್ರಕತೆ ನಿರ್ದೇಶನ ಜಾಳು ಜಾಳು ಎನಿಸುತ್ತದೆ.
ಜಗ್ಗಿ ಬಿಂದಾಸ್ ಹುಡುಗ. ಅಪ್ಪ ಅಮ್ಮನ ಮುದ್ದಿನ ಮಗ. ರಸ್ತೆಯಲ್ಲಿ ಡಾನ್ ಕಡೆಯವನಿಗೆ ಹೊಡೆಯುತ್ತಾನೆ. ಆದ್ರೆ ಡಾನ್ ಅದನ್ನೇ ಸೀರಿಯಸ್ ಆಗಿ ತೆಗೆದುಕೊಂಡು ನಾಯಕನನ್ನು ಎತ್ತಿ ಬಿಡಲು ನಿರ್ಧರಿಸಿದಾಗ ನಾಯಕ ತನ್ನ ಗೆಳೆಯರ ಜೊತೆ ಮಡಿಕೇರಿಗೆ ಹೋಗುತ್ತಾನೆ. ಅಲ್ಲಿ ಹುಡುಗಿ ನೋಡಿ ಇಮ್ಮಿಡಿಯೆಟ್ ಹಿಂದೆ ಮುಂದೆ ನೋಡದೆ ಅವಳ ಹಿಂದೆ ಬೀಳುತ್ತಾನೆ.ಅವಳಿಗೆ ಎಂಗೇಜ್ಮೆಂಟ್ ಆಗುವಲ್ಲಿಗೆ ಚಿತ್ರದ ಮಧ್ಯಂತರ. ಆಮೇಲೆ ಗೊತ್ತಾಗುವ ವಿಷಯ ಅವಳಿಗೆ ನಿಶ್ಚಿತಾರ್ಥ ಆಗಿರುವುದು ಇವನೇ ಹೊಡೆದಿರುವ ಖಳ ನ ಜೊತೆಯಲ್ಲಿ ಮತ್ತು ಜಗ್ಗಿ ತಪ್ಪಿಸಿಕೊಳ್ಳಲು ಬಂದಿರುವುದು ಖಳನ ತಮ್ಮನ ಜೊತೆಯಲ್ಲಿ.. ಮುಂದೆ.. ನಾಯಕಿಯನ್ನು ಜಗ್ಗಿ ಹೇಗೆ ತನ್ನ ವಶ ಪಡಿಸಿಕೊಳ್ಳುತ್ತಾನೆ ಎಂಬುದನ್ನು ನೋಡಬೇಕಾದರೆ ಚಿತ್ರಮಂದಿರಕ್ಕೆ ಕಾಲಿಡಿ.
ಚಿತ್ರ ಪ್ರಾರಂಭದಿಂದ ಅಂತ್ಯದವರೆಗೆ ಚಿತ್ರಕತೆಯಲ್ಲಿ ಹಿಡಿತ ಇಲ್ಲದಿರುವುದು ಗೋಚರಿಸುತ್ತದೆ. ಹೊಸಬರ ಸಿನಿಮಾ ಎಂದಾಗ ಒಂದಷ್ಟು ರಿಯಾಯತಿ ನೀಡಬೇಕಾಗುತ್ತದೆ. ಆದರೆ ಅದನ್ನು ಮೀರಿ ಎಕ್ಷ್ಕ್ಯೂಸ್ ಕೇಳಿದರೆ ಕಷ್ಟ ಕಷ್ಟ.. ಇಲ್ಲೂ ಅದೇ ಹಾಗಿದೆ. ಹಾಸ್ಯ, ಸಾಹಸ, ಸೆಂಟಿಮೆಂಟ್ ಯಾವುದು ಆಪ್ತವಾಗುವುದಿಲ್ಲ.

ಕತೆ ಚಿತ್ರಕತೆ ರಚಿಸಿರುವ ಸುನಿಲ್ ರಾಜ್ ನಾಯಕನಾಗಿಯೂ ಅಭಿನಯಿಸಿದ್ದಾರೆ. ಆದರೆ ಎರಡೂ ವಿಭಾಗದಲ್ಲೂ ಅವರಿಂದ ಹೆಚ್ಚು ನಿರೀಕ್ಷಿಸುವ ಹಾಗಿಲ್ಲ. ಹೊಡೆದಾಟಕ್ಕೆ ನಿಲ್ಲುವ ಹುಮ್ಮಸ್ಸು ಅಭಿನಯದಲ್ಲಿ ಕಾಣುವುದಿಲ್ಲ. ನಾಯಕಿಯ ಪಾತ್ರವೇ ಗೋಜಲು. ನಿಶ್ಚಿತಾರ್ಥ ಆದ ಮಾರನೆಯ ದಿನವೇ ನಾಯಕನಿಗೆ ಮನಸೋಲಲು ಗಟ್ಟಿಯಾದ ಕಾರಣಗಳೇ ಇಲ್ಲ. ಇನ್ನು ಕೆಂಪೇಗೌಡ, ವಿಶ್ವ, ಬುಲೆಟ್ ಪ್ರಕಾಶ್ ಮೋಹನ್ ಜುನೆಜ ಅವರ ಕಾಮಿಡಿ ಕನಿಕರ ಮೂಡಿಸುತ್ತದೆ.ಸಂಗೀತ, ಸಾಹಸ, ಸಂಕಲನ ಎಲ್ಲವೂ ನಿರ್ದೇಶಕರ ಅಣತಿಯಂತೆ ಇದೆ. ಆದರೆ ನಿರ್ದೇಶಕರು ಹೊಸಬರು. ಅದನ್ನು ಸಿನಿಮಾದಲ್ಲೂ ತೋರಿಸಿರುವುದು ವಿಪರ್ಯಾಸ.

ಬೆಳ್ಳಿ :

ಹಳ್ಳಿಯಿಂದ ಕೆಲಸ ಹುಡುಕಿಕೊಂಡು ಬಂದವ ಭೂಗತ ಲೋಕಕ್ಕೆ ಎಂಟ್ರಿ ಕೊಟ್ಟರೆ ಏನಾಗುತ್ತದೆ ಎಂಬ ಒಂದು ಸಾಲಿನ ಪ್ರಶ್ನೆಯ ಕತೆಯನ್ನು ಹೇಗೆಲ್ಲಾ ತಿರುಗಿಸಿ ಮುರುಗಿಸಿ ಹೇಳಬಹುದು ಎಂಬುದಕ್ಕೆ ಬೆಳ್ಳಿ ಉದಾಹರಣೆ ಎನ್ನಬಹುದು.
ಬೆಳ್ಳಿ ಅಲಿಯಾಸ್ ಬಸವರಾಜ್ ಕೊಳ್ಳೇಗಾಲ ಪಕ್ಕದ ಮಧುವನಹಳ್ಳಿಯ ಪ್ರತಿಭಾವಂತ.ತಾಯಿ ಮನೆ ಮನೆಗೆ ಹಾಲು ಹಾಕಿದರೆ, ತಂಗಿ ಪೋಲಿಯೊ ಪೀಡಿತೆ. ಹಣ ಸಂಪಾದಿಸಿ ಅಮ್ಮ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಉದ್ದೇಶ ಸರಿದಾರಿಯಲ್ಲಿ ಈಡೇರುವುದಿಲ್ಲ ಎನಿಸಿದಾಗ ಅಡ್ಡದಾರಿ ಹಿಡಿಯುತ್ತಾನೆ.. ಮುಂದೆ...
ಲಾಂಗಿ[ಉದ್ದನೆಯ]ನಲ್ಲೇ ಸಿಂಗಾರವಾಗಿರುವ ಕುರ್ಚಿಯಲ್ಲೇ ಡಾನ್ ಕುಳಿತುಕೊಳ್ಳುತ್ತಾನೆ, ನಡು ರಸ್ತೆಯಲ್ಲಿ, ದೇವಸ್ಥಾನದ ಮುಂದೆಯೇ ಕೈಯಲ್ಲಿ ಉದ್ದುದ್ದ ಮಚ್ಚುಗಳನ್ನು ಹಿಡಿದು ಓಡಾಡಿಸುತ್ತಾರೆ ಖಳರುಗಳು, ಕೊಲೆ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ.. ಇದ್ಯಾವ ರಕ್ತ ಚರಿತ್ರಾತ್ಮಕ ಊರಿರಬಹುದು.. ಎಂದರೆ ಅದು ಬೆಂಗಳೂರೇ ಸ್ವಾಮೀ, ಯಾವ ಸಿನಿಮಾ ಎಂದರೆ ಬೆಳ್ಳಿ ಎನ್ನಬಹುದು. ಇವೆಲ್ಲವೂ ಸ್ವಲ್ಪ ಅತಿರೇಕ ಎನಿಸಬಹುದು. ಯಾಕೆಂದರೆ ಶಿವಣ್ಣ ಲಾಂಗ್ ಹಿಡಿದರೆ ಅದರ ಖದರ್ರೆ ಬೇರೆ. ಆದರೆ ಅದೇನೇ ಆದರೂ ಅದರಲ್ಲೊಂದು ನೈಜತೆಯನ್ನು ಪ್ರೇಕ್ಷಕ ನಿರೀಕ್ಷೆ ಮಾಡದೆ ಇರುವುದಿಲ್ಲ. ಆದರೆ ತೀರಾ ಸಿನಿಮೀಯ ಮಾಡಿಬಿಟ್ಟರೆ ಸ್ವಲ್ಪ ಮಟ್ಟಿಗೆ ಜೀರ್ಣಿಸಿಕೊಳ್ಳುವುದು ಕಷ್ಟ.ಬೆಳ್ಳಿ ಚಿತ್ರದ ಅದ್ದೂರಿತನ ಒಂದು ಮಟ್ಟಕ್ಕೆ ಕಳೆಗುಂದಿರುವುದು ಈ ಕಾರಣದಿಂದಲೇ. ಅದನ್ನೆಲ್ಲಾ ಸಹಿಸಿಕೊಳ್ಳುವುದಾದರೆ ಬೆಳ್ಳಿ ಚಿತ್ರ ನೋಡಬಹುದು...
ಶಿವಣ್ಣ ತಮ್ಮ ಪಾತ್ರವನ್ನು ಚೆನ್ನಾಗಿ ಅಭಿನಯಿಸಿದ್ದಾರೆ ಎಂದರೆ ಅದು ಹೊಗಳಿಕೆಯೂ ಅಲ್ಲ. ಯಾಕೆಂದರೆ ಶಿವಣ್ಣ ಅವರು ಈಗಾಗಲೇ ಇಂತಹ ಪಾತ್ರಗಳನ್ನೂ ಬಹುತೇಕ ಮಾಡಿರುವುದರಿಂದ ಆದವರಿಗೆ ಸವಾಲಿನ ಪಾತ್ರವಲ್ಲ. ಆದರೆ ಒಂದಿಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುವ ಅವರ ಪರಿಗೆ ಸಲಾಮು. ಇನ್ನುಳಿದಂತೆ ದೀಪಕ್, ವಿನೋದ್ ಪ್ರಭಾಕರ್, ಪ್ರಶಾಂತ್ ವೆಂಕಟೇಶ್ ಮೂರ್ತಿ ಖಳರುಗಳಾದ ಆದಿ ಲೋಕೇಶ್, ಮೈಕೋ ನಾಗರಾಜ್, ರಾಘವ ಉದಯ್, ನಾಯಕಿ ಕೃತಿ ಕರಬಂಧ ಎಲ್ಲರದು ಅನುಭವಿ ನಟನೆ. ಛಾಯಾಗ್ರಹಣ, ಸಂಗೀತ ಮತ್ತು ನಿರ್ಮಾಪಕರ ಧಾರಾಳತನಕ್ಕೆ ನಮಸ್ಕಾರ/ಮೆಚ್ಚುಗೆ ಹೇಳಬಹುದು.
ನಿರ್ದೇಶಕ ಮಹೇಶ್ ಹೆಣೆದಿರುವ ಕತೆಯಲ್ಲಿ ಡಾಳಾಗಿ ಕಾಣಿಸುವುದು ಜೋಗಿ ಛಾಯೆ. ಅದೇ ಅಮ್ಮ ಮಗನ ಸೆಂಟಿಮೆಂಟ್, ಮಗನನ್ನು ಹುಡುಕುವ ತಾಯಿ, ಅಲ್ಲಲ್ಲಿ ಮಿಸ್ ಆಗುವ ಇಬ್ಬರು ಇದೆಲ್ಲಾ ಜೋಗಿಯನ್ನೇ ನೆನಪಿಗೆ ತರುತ್ತದೆ. ಜೊತೆಗೆ ಓಂ ರೀತಿ ಪುಸ್ತಕ ಬರೆಯಲು ಕತೆ ಹುಡುಕುತಾ ಅದೇ ಕತೆಯನ್ನು ನಮಗೆ ಕಂತುಗಳಲ್ಲಿ ಕೊಡುತ್ತಾ ಹೋಗುವುದು ಇದೆ..ಹಾಗೆಯೇ ದೃಶ್ಯ ವೈಭವೀಕರಣಕ್ಕೆ ಹೆಚ್ಚು ಗಮನ ಕೊಟ್ಟಿರುವ ಮಹೇಶ ಮುಸ್ಸಂಜೆ ಹಾಗೆಯೇ ದೃಶ್ಯದ ಸಾಧ್ಯತೆ ಬಾಧ್ಯತೆ ಸಾಮಾಜಿಕ ಬದ್ಧತೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿಯೇ ಇಡೀ ಚಿತ್ರದಲ್ಲಿನ ಕೊಲೆ ರೌಡಿಸಂ ಅನ್ನು  ವೀರಾವೇಶದ ಏನೋ ಘನೋದ್ದೇಶದ ಕಾರ್ಯ ಎಂಬಂತೆ ಬಿಂಬಿಸಲಾಗಿದೆ. ಹಾಗೆಯೇ ಕೊನೆಯಲ್ಲಿ ತಾಯಿಯನ್ನೇ ಮರೆತುಬಿಟ್ಟಿದ್ದಾರೆ ನಿರ್ದೇಶಕರು.

ಭೂಗತಲೋಕದ ಕತೆಯ ಚಿತ್ರಗಳು ಆಕರ್ಷಣೀಯ ಮತ್ತು ನಿರ್ದೇಶಕನ ಕುಸುರಿ ಕೆಲಸಕ್ಕೆ ಸವಾಲಾಗುತ್ತವೆ. ಆದರೆ ಅದರ ಮೂಡ್, ಗತಿಯನ್ನು ಅರ್ಥೈಸಿಕೊಂಡಾಗ ಅದರ ಮಜಾ ಬೇರೆಯೇ ಇರುತ್ತದೆ. ಆ ನಿಟ್ಟಿನಲ್ಲಿ ಮಹೇಶ್ ಪ್ರಯತ್ನ ಪಡಬೇಕಷ್ಟೇ. ಆದರೆ ಒಂದಷ್ಟು ಪ್ರೌಡಿಮೆ ಬೇಡುವ ಇಂತಹ ಕತೆಗಳನ್ನು ಏಳಸುತನದ ರೀತಿಯಲ್ಲಿ ನಿರೂಪಿಸಿದರೆ ಶಿವಣ್ಣ ಅವರಂತಹ ಕಲಾವಿದರ ಸದುಪಯೋಗವಾಗುವುದಿಲ್ಲ ಎಂಬುದನ್ನು ಮಹೇಶ್ ಮನಗಾಣಬೇಕು.

ಸೂಪರ್ ರಂಗ

ಒಂದು ಸಿನಿಮಾಕ್ಕೆ ಏನೇನು ಬೇಕು..? ಏನು ಬೇಡ ನಮಗೆ ಮನರಂಜನೆ ಸಾಕು ಎಂದರೆ ಮರುಮಾತಾಡದೆ ಸೂಪರ್ ರಂಗ ಚಿತ್ರಮಂದಿರಕ್ಕೆ ಹೋಗಬಹುದು.
ಸೂಪರ್ ರಂಗ ಚಿತ್ರದ ನಾಯಕನಿಗೆ ಏನೇ ಕೆಲಸ ಮಾಡಿದರೂ ಅದರಲ್ಲಿ ಕಿಕ್ ಇರಲೇಬೇಕು. ಹಾಗಾಗಿ ಉಗುರಲ್ಲಿ ಆಗಿಹೋಗುವ ಕೆಲಸಕ್ಕೆ ಕೊಡಲಿ ಹಿಡಿಯುತ್ತಾನೆ. ಸರಾಗವಾಗಿ ಆಗುವ ಕೆಲಸವನ್ನು ಕಷ್ಟ ಪಟ್ಟು ಮಾಡುವಂತೆ ಮಾಡುತ್ತಾನೆ. ಅದವನ ಹುಟ್ಟುಗುಣ. ಹುಟ್ಟುತ್ತಲೇ ಅದ್ಯಾಕೋ ಆ ಗುಣ ಅವನ ಮೈಮನ ತುಂಬಿಬಿಟ್ಟಿದೆ. ಇಂತಿಪ್ಪ ನಾಯಕ  ನಾಯಕಿಯನ್ನು ಪಟಾಯಿಸುತ್ತಾನೆ. ಪ್ರೀತಿಸುತ್ತಾನೆ. ಪದೇ ಪದೇ ಕೆಲಸ ಬಿಡುತ್ತಾನೆ. ಹೊಡೆದಾಡುತ್ತಾನೆ. ಜೊತೆಗೆ ಸಮಾಜ ಸೇವೆಯ ಕಾರ್ಯವನ್ನೂ ಮಾಡುತ್ತಾನೆ. ಮತ್ತು ಇವಿಷ್ಟನ್ನೂ ತಮಾಷೆಯಾಗಿ ಪ್ರೇಕ್ಷಕರಿಗೆ ಕಿಕ್ ಕೊಡುವ ರೀತಿಯಲ್ಲಿ ಮಾಡುತ್ತಾನೆ. ಇದು ಸೂಪರ್ ರಂಗನ ಕತೆ. ಉಪೇಂದ್ರ ತಮ್ಮ ಚಿತ್ರಗಳಲ್ಲಿ ಸುಖಾ ಸುಮ್ಮನೆ ತಮ್ಮ ಸಂಭಾಷಣೆಗಳಿಂದ ಪ್ರೇಕ್ಷಕರಿಗೆ ಕಿಕ್ ಕೊಟ್ಟವರು. ಇನ್ನು ಈ ಸಿನಿಮಾದಲ್ಲಿ ಬಿಡುತ್ತಾರೆ/ ಇಲ್ಲಿ ಹೆಜ್ಜೆ ಹೆಜ್ಜೆ ಗೂ ಕಿಕ್ ಕೊಡುತ್ತಾರೆ. ನಗಿಸುತ್ತಾರೆ. ಹಾಗಾಗಿ ಪ್ರೇಕ್ಷಕ ಕೊಟ್ಟ ಕಾಸಿಗೆ ಮೋಸವಿಲ್ಲ ಗುರು ಎಂದುಕೊಂಡು ಸಿನಿಮಾ ನೋಡುತ್ತಾನೆ. ನೋಡಿದ ನಂತರ ಹೊರಬಂದರೆ ಬೇಸರವೇನೂ ಆಗುವುದಿಲ್ಲ. ಹಾಗಂತ ಮತ್ತೊಮ್ಮೆ ನೋಡಿ ಮಜಾ ತೆಗೆದುಕೊಳ್ಳೋಣ ಎನಿಸುವುದೂ ಇಲ್ಲ.
ಸೂಪರ್ ರಂಗ ತೆಲುಗಿನ ಕಿಕ್ ಚಿತ್ರದ ರೀಮೇಕ್. ಮೊನ್ನೆ ಮೊನ್ನೆ ಅದರ ಹಿಂದಿ ಅವತರಣಿಕೆ ಸಲ್ಮಾನ್ ಖಾನ್ ಅಭಿನಯದಲ್ಲಿ ಬಂದು ಹಣ ಗಳಿಸಿದ್ದು ಬೇರೆ ಮಾತು. ಈಗ ಕನ್ನಡದಲ್ಲಿ ಬಂದಿದೆ. ಹಿಂದಿಯವರು ಒಂದಷ್ಟು ಬದಲಾವಣೆ ಮಾಡಿದ್ದರು. ಆದರೆ ಕನ್ನಡದ ಸಾಧುಕೋಕಿಲ ಅದ್ಯಾವ ಸಾಹಸಕ್ಕೂ ಕೈ ಹಾಕಿಲ್ಲ. ಹಾಗಾಗಿ ತೆಲುಗಿನ ನಿಷ್ಠಾವಂತ ರೀಮೇಕ್ ಇದಾಗಿದೆ.
ಉಪೇಂದ್ರ ತಮ್ಮ ಪಾತ್ರವನ್ನು ತಮ್ಮದೇ ಮ್ಯಾನರಿಸಂ ನಲ್ಲಿ ಅಭಿನಯಿಸಿದ್ದಾರೆ. ಸಂಭಾಷಣೆ ಒಪ್ಪಿಸಿದ್ದಾರೆ. ಅದರಲ್ಲಿ ಕಿಕ್ ಕೊಡಲು ಪ್ರಯತ್ನಿಸಿದ್ದಾರೆ. ಕೆಲವು ಕಡೆ ಅದು ನಾಟಕೀಯ ಎನಿಸಬಹುದು. ಅದಕ್ಕೆ ಅವರು ಸಂಭಾಶನೆಕಾರರತ್ತ ಕೈ ತೋರಿಸಬಹುದು, ಇನ್ನುಳಿದ ಕಲಾವಿದರ ಬಳಗ ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದೆ. ಹಾಗಾಗಿ ಮೊದಲಾರ್ಧ ಕಿಕ್ ಕೊಡುತ್ತಾ ಸಾಗುವ ರಂಗ ದ್ವಿತೀಯಾರ್ಧದಲ್ಲಿ ಸ್ವಲ್ಪ ಕಿಕ್ ಕಡಿಮೆ ಮಾಡುತ್ತದೆ, ಕೆಲವು ಹಾಸ್ಯ ಪ್ರಸಂಗಗಳು ನಗೆ ತರಿಸಿದರೆ ಕೆಲವು ಕನಿಕರ ಮೂಡಿಸುತ್ತವೆ.
ಅಶೋಕ್ ಕಶ್ಯಪ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕೆ ಪೂರಕವಾಗಿವೆ. ಇನ್ನು ಸಾಧುಕೋಕಿಲ ನಟರಾಗಿ ನಿರ್ದೇಶಕರಾಗಿ ಆಯಾ ಕೆಲಸಕ್ಕೆ ಚ್ಯುತಿ ಬರದಂತೆ ಮಾಡಿದ್ದಾರೆ.
ಎಲ್ಲಾ ಸರಿ . ಒಂದು ರೀಮೇಕ್ ಚಿತ್ರ ಎಂದಾಗ ಏನನ್ನು ನಿರೀಕ್ಷೆ ಮಾಡಬಹುದು ಎನ್ನುವ ಪ್ರಶ್ನೆ ಎದುರಾಗುತ್ತದೆ. ಇವೆಲ್ಲವನ್ನೂ ಹೊರತು ಪಡಿಸಿದಾಗ ಸೂಪರ್ ರಂಗ ಸುಮ್ಮನೆ ಮನರಂಜಿಸುವ ಚಿತ್ರವಾಗಿಯಷ್ಟೇ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಅದರಾಚೆಗೆ ಏನನ್ನೂ ಸಾಧಿಸಲು ಪ್ರಯತ್ನಿಸುವುದಿಲ್ಲ. ಒಂದಷ್ಟು ತಮಾಷೆ ಒಂದಷ್ಟು ಹಾಸ್ಯ, ಹೊಡೆದಾಟ ಪ್ರೀತಿ ಇದು ತೆಲುಗರ ಮೂಲಮಂತ್ರ. ಅದು ಕನ್ನಡದ್ದೇ ಆಗಿರುವುದು ಮತ್ತು ಇತ್ತೀಚಿಗೆ ಆ ತರಹದ ಚಿತ್ರಗಳು ಗೆಲ್ಲುತ್ತಿರುವುದು ನಮ್ಮ ಸೌಭಾಗ್ಯವಂತೂ ಅಲ್ಲ. ಯಾಕೆಂದರೆ ಸಿನಿಮಾ ನೋಡುತ್ತಾ ಮನರಂಜಿಸುತ್ತದೆ ಆದರೆ ನೋಡಾದ ಮೇಲೆ ಯಾವುದೇ ರೀತಿಯಲ್ಲೂ ಕಾಡುವುದಿಲ್ಲ  ಮತ್ತು ಈ ತರಹದ ತೀರಾ ಮನರಂಜನಾತ್ಮಕ ಸಾದಾರಣ ಚಿತ್ರ ಮಾಡಲು ಕನ್ನಡ ಖ್ಯಾತ ನಟ ನಿರ್ದೇಶಕರು ದೊಡ್ಡ ನಿರ್ಮಾಪಕರು ಬೇಕಿತ್ತಾ ಎಂಬ ಪ್ರಶ್ನೆ ಕಾಡುತ್ತದೆ. ಸಿನಿಮಾ ಗೆಲ್ಲುತ್ತದೆ, ಹಣ ಮಾಡುತ್ತದೆ ಎನ್ನುವುದನ್ನು ಬಿಟ್ಟರೆ ಚಿತ್ರರಂಗಕ್ಕೆ ಅದರ ಗುಣ ಮಟ್ಟಕ್ಕೆ ಏನು ಕೊಡುಗೆ ನೀಡುತ್ತದೆ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಇನ್ನಾದರೂ ಸುಖಾ ಸುಮ್ಮನೆ ಇಂತಹ ಸಾದಾರಣ ಸಿನಿಮಾ ಮಾಡುವುದನ್ನು ಕಡಿಮೆ ಮಾಡಿ ಕನ್ನಡದ ಖ್ಯಾತ ಚಿತ್ರಕರ್ಮಿಗಳು ಗುಣಮಟ್ಟದ ಸಿನಿಮಾದ ಕಡೆಗೂ ಗಮನ ಹರಿಸಲಿ ಎಂಬುದು ಪ್ರೇಕ್ಷಕ ಹಪಾಹಪಿಯಾಗಿದೆ. 

ನೆನಪಿದೆಯೇ

ಜೊತೆಯಾಗಿ ಹಿತವಾಗಿ ಚಿತ್ರ ನಿರ್ದೇಶನ ಮಾಡಿದ್ದ ಎಸ್.ಕೆ.ಶ್ರೀನಿವಾಸ್ ನೆನಪಿದೆಯೇ ಎಂದು ಕೇಳುತ್ತಿದ್ದಾರೆ. ಅವರ ನೆನಪಿದೆಯೇ ಚಿತ್ರ ನೋಡಿದ ಮೇಲೆ ನೆನಪಿಸಿಕೊಳ್ಳುವನ್ತಹದ್ದು ಏನು ಎಂದು ನಮ್ಮನ್ನು ಕೇಳುತ್ತಿದ್ದಾರಾ ಎಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡದೆ ಇರದು.
ಅದೊಂದು ಎಸ್ಟೇಟ್. ಅಲ್ಲಿ ದೆವ್ವ ಭೂತದ ಕಾಟವಿದೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಬರೀ ಮಾತನಾಡಿಕೊಳ್ಳುವುದಿಲ್ಲ. ಅಲ್ಲಿಗೆ ಹೋಗಲು ಹೆದರುತ್ತಾರೆ. ಅಲ್ಲಿ ನಿಜಕ್ಕೂ ಗೆಜ್ಜೆ-ಹೆಜ್ಜೆ ಸಪ್ಪಳ ಕೇಳಿಸುತ್ತದೆ.  ಅದ್ಯಾರೋ ಅಲ್ಲಿ ಓಡಾಡುತ್ತಾರೆ. ಯಾರು ಎಂಬುದನ್ನು ನೋಡುವಷ್ಟರಲ್ಲಿ ಅವರು ಮಾಯಾ. ಬದಲಿಗೆ ಅಲ್ಲೊಂದು ಹೆಣ ಸಿಗುತ್ತದೆ. ಇದ್ಯಾರು ಕೊಲೆ ಮಾಡಿದವರು..? ಅದ್ಯಾವ ದೆವ್ವ..? ಎಂದೆಲ್ಲಾ ಪ್ರೇಕ್ಷಕರು ತಲೆಕೆಡಿಸಿಕೊಳ್ಳುವ ಹೊತ್ತಿಗೆ  ನಾಯಕನೂ ಬರುತ್ತಾನೆ. ಅವನೂ ತಲೆಕೆಡಿಸಿಕೊಂಡು  ಹುಡುಕಲು ಪ್ರಾರಂಭಿಸುತ್ತಾನೆ.
ಚಿತ್ರದ ಕತೆ ಹಾರರ್ ಥ್ರಿಲ್ಲರ್. ಹಾಗಾಗಿ ಅದಕ್ಕೆ ಬೇಕಾದ ಭಾವವನ್ನು ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಒಂದು ಮನೆ..ಕತ್ತಲು.. ಅದೇನೋ ಧಗ್ ಎನಿಸುವ ಸದ್ದು.. ಇನ್ಯಾರದೋ ನೆರಳು ಹೀಗೆ ಚಿತ್ರ ಹಾರರ್ ಚಿತ್ರಗಳ ಸಿದ್ಧ ಸೂತ್ರಗಳನ್ನು ಅನುಸರಿಸಿ ಸಾಗುತ್ತದೆ. ಆದ್ರೆ ಚಿತ್ರಕತೆಯಲ್ಲಿ ಬಿಗಿಯಿಲ್ಲದೆ ಇರುವುದು ಮತ್ತು ಅದೇ ಜಾಡಿನಲ್ಲಿ ಸಾಗುವುದು ಚಿತ್ರದ ಋಣಾತ್ಮಕ ಅಂಶ ಎನ್ನಬಹುದು.
ಪ್ರಾರಂಭದಲ್ಲಿ ನೀರಸವಾಗಿ ತೆರೆದುಕೊಳ್ಳುತ್ತದೆ. ಸಿನಿಮಾ ಕೆಲವು ದೃಶ್ಯಗಳಿಗೂ ಚಿತ್ರಕ್ಕೂ ಸಂಬಂಧ ಏನು ಎಂಬ ಪ್ರಶ್ನೆ ಹುಟ್ಟುಹಾಕುತ್ತದೆ.  ಆದರೆ ಚಿತ್ರ ಮುಂದುವರೆದಂತೆ ಒಮ್ಮೆ ಕೊಲೆಗಳ ಸರಣಿ ಪ್ರಾರಂಭವಾಗುತ್ತಿದ್ದಂತೆ ಕತೆ ಒಂದು ಹಿಡಿತಕ್ಕೆ ಬರುತ್ತದೆ, ಉಳಿದ ಪ್ರಶ್ನೆಗಳಾದ ಏನು? ಯಾಕೆ? ಯಾರು ಗಳಿಗೆ ಚಿತ್ರದ ಅಂತ್ಯದಲ್ಲಿ ಉತ್ತರ ಸಿಗುತ್ತದೆ.
ನಾಯಕ ಇಲ್ಲಿ ಪ್ರೇಮಿಸುವ ದೆವ್ವ ಹುಡುಕುವ ಎರಡೂ ಕೆಲಸ ನಿಭಾಯಿಸಿದ್ದಾರೆ. ಪ್ರೀತಿಸುವ ಉತ್ಸಾಹದಲ್ಲಿ ಗಂಭೀರವಾದ ಸನ್ನಿವೇಶಗಳಲ್ಲಿ ಸೋಲುತ್ತಾರೆ. ಉಳಿದ ಕಲಾವಿದರು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾತಾಡಿ ತಮ್ಮ ಕೆಲಸ ಮುಗಿಸಿ ಸಾಗುತ್ತಾರೆ.
ನೀಲ್ ಸಂಗೀತದಲ್ಲಿ ಹಾಡು ಕೇಳುವಂತಿದ್ದರೂ  ಹಿನ್ನೆಲೆ ಸಂಗೀತ ಇನ್ನೂ ಪರಿಣಾಮಕಾರಿಯಾಗಿರಬೇಕು ಎನಿಸುತ್ತದೆ. ಯಾಕೆಂದರೆ ಹಾರರ್ ಚಿತ್ರದಲ್ಲಿ ಶಬ್ಧದಷ್ಟೇ ಪ್ರಾಮುಖ್ಯತೆ ನಿಶ್ಯಬ್ಧಕ್ಕೂ ಇರುತ್ತದೆ.
ಒಟ್ಟಾರೆಯಾಗಿ ಒಂದು ಹಾರರ್ ಕತೆಯಲ್ಲಿನ ಪ್ರೇಮಕತೆ ನೋಡಲು ಅಥವಾ ಪ್ರೆಮಕತೆಯಲ್ಲಿನ ಹಾರರ್ ಸಿನಿಮ ನೋಡಲು ಇಚ್ಚಿಸಿದವರು ನೆನಪಿದೆಯಾ ಚಿತ್ರವನ್ನೊಮ್ಮೆ ನೋಡಬಹುದು.

ಪಂದ್ಯ

ಇದು ಯಾವುದೇ ಮೈದಾನದ ಆಟಕ್ಕೆ ಸಂಬಂಧಿಸಿದ ಚಿತ್ರವಲ್ಲ ಎಂಬುದನ್ನು ಮೊದಲೇ ಹೇಳಿಬಿಡಬೇಕಾಗುತ್ತದೆ. ಯಾಕೆಂದರೆ ಪಂದ್ಯ ಹೆಸರು ನೋಡಿ ಇದ್ಯಾವುದೋ ಕ್ರೀಡೆ ಸಂಬಂಧಿಸಿದ ಚಿತ್ರ ಎಂದುಕೊಂಡು ಸಿನೆಮಾಕ್ಕೆ ಬಂದರೆ ಅಲ್ಲಿ ಸಿಗುವುದು ಪ್ರೇಮದಾಟವೇ ಹೊರತು ಬೇರ್ಯಾವ ಆಟವಲ್ಲ.
ನಾಲ್ವರು ಹುಡುಗರು ಪೋಲಿ ಅಲೆಯುತ್ತಾರೆ. ಅದು ಸಿನಿಮಾಗಳಲ್ಲಿ ಸಾಮಾನ್ಯ. ಸರಿ ಅವರಿಗೆ ಮನೆಯಲ್ಲಿ ಬೈಗುಳ ಕಟ್ಟಿಟ್ಟ ಬುತ್ತಿ. ನಾಯಕನ ಕಣ್ಣಿಗೆ ಹುಡುಗಿ ಬೀಳುತ್ತಾಳೆ. ಅವಳೇ ನಾಯಕಿ. ಅವಳನ್ನು ಕಂಡಾಕ್ಷಣ ಪ್ರೀತಿಗೆ ಬೀಳುತ್ತಾನೆ ನಾಯಕ. ಹಿಂದೆ ಮುಂದೆ ನೋಡದೆ ಒಂದು ಕಲ್ಪನೆಯ ಹಾಡನ್ನು ಹಾದಿ ಬರುತ್ತಾನೆ. ಆಮೇಲೆ..? ಎಲ್ಲರೂ ನಿರೀಕ್ಷಿಸಬಹುದಾದ ಕತೆ ಅದೇ ದಾರಿಯಲ್ಲಿ ಸಾಗುತ್ತದೆ. ಜೀವನ ಬರೀ ಆಟವಲ್ಲ, ಅದೊಂದು ಸವಾಲುಗಳ ಪಂದ್ಯ ಎನ್ನುವುದು ಚಿತ್ರದ ಸಂದೇಶ ಇರಬಹುದು. ಆದರೆ ನಿರ್ದೇಶಕ ದೇವು ಅದಷ್ಟನ್ನೇ ಅಚ್ಚುಕಟ್ಟಾಗಿ ನಿರೂಪಿಸಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು. ಅವರು ಕತೆಯನ್ನು ಹಾಗಂದುಕೊಂಡೆ ಚಿತ್ರಕತೆಯನ್ನು ಏನೇನೋ ಮಾಡಿದ್ದಾರೆ. ಒಂದಷ್ಟು ಹಾಸ್ಯವಿರಲಿ ಎಂದುಕೊಂಡು ಚಿತ್ರದಲ್ಲಿ ಹಾಸ್ಯ ಪ್ರಸಂಗ ಇಡಲು ಪ್ರಯತ್ನಿಸಿದ್ದಾರೆ. ಅಯ್ಯೋ ಹೀರೋಯಿಸ್ಮ್ ಗೆ ಫೈಟ್ ಇಲ್ಲದಿದ್ದರೆ ಹೇಗೆ .. ಇರಲಿ ಫೈಟ್ ಎಂದು ಅದನ್ನು ಇರಿಸಿದ್ದಾರೆ. ನಾಯಕ ಹೊಡೆದಾಡಿ ಸುಸ್ತಾದ ಮೇಲೆ ಹಾಡಬಾರದೇ.. ಹಾಗಾಗಿ ನಾಯಕಿಯರ ಜೊತೆ ಕುಣಿಸಿದ್ದಾರೆ. ಆದರೆ ಇದಾವುದನ್ನು ಒಂದು ಸರಿಯಾದ ಕ್ರಮದಲ್ಲಿ ಜೋಡಿಸಿದ್ದರೆ ಪಂದ್ಯ ರೋಚಕವಾಗಿರುತ್ತಿತ್ತೇನೋ? ಆದರೆ ಇಷ್ಟಬಂದ ಹಾಗೆ ಆಟ ಆಡಿದರೆ ..ಇರುವ ನಿಯಮಗಳನ್ನೆಲ್ಲಾ ಗಾಳಿಗೆ ತೂರಿದರೆ ಪಂದ್ಯ ಮಜಾ ಕೊಡುವುದಿಲ್ಲ. ಹಾಗೆಯೆ ಸಿನೆಮಾವು...
ಚಿತ್ರದ ನಾಯಕ ಚಂದ್ರು ತಮ್ಮ ಪಾತ್ರವನ್ನು ನಿಭಾಯಿಸಲು ಪ್ರಯತ್ನಿಸಿದ್ದಾರೆ. ಆದರೆ ಪ್ರತಿಯೊಂದು ಹಂತದಲ್ಲೂ ಏನೋ ಕೊರತೆ ಇದೆಯಲ್ಲ ಎಂಬ ಭಾವ ಬರುವಂತೆ ಅಭಿನಯಿಸಿದ್ದಾರೆ. ಇನ್ನು ಸ್ಫೂರ್ತಿ ಮಾನಸಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದ ಪೋಷಕ ಪಾತ್ರವರ್ಗದಲ್ಲಿ ಅನುಭವಿಗಳೇ ಇರುವುದರಿಂದ ಅವರ ಅಭಿನಯದ ಕಡೆ ಬೆರಳು ತೋರುವ ಹಾಗಿಲ್ಲ. ಆದರೆ ಚಿತ್ರದ ಅಡಿಪಾಯವೇ ಶಿಥಿಲವಾಗಿರುವುದರಿಂದ ಚಿತ್ರ ಮಜಾ ಕೊಡುವುದಿಲ್ಲ.
ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ದೇವು ಇನ್ನೂ ಪಳಗಬೇಕಾಗಿದೆ. ನಿರ್ದೇಶನ ಎಂದರೆ ಬರೀ ಆಕ್ಷನ್ ಕಟ್ ಶಾಟ್ ಡಿವಿಷನ್ ಅಷ್ಟೇ ಅಲ್ಲ. ಅಲ್ಲೊಬ್ಬ ನಿರೂಪಕ ಇರಬೇಕು ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ. ಹಾಗೆ ಅರಿತುಕೊಂಡು ತಮ್ಮ ಮುಂದಿನ ಚಿತ್ರವನ್ನು ನಿರ್ದೇಶನ ಮಾಡಿದರೆ ಅವರ ಮೇಲೆ ಭರವಸೆ ಇಡಬಹುದಾಗಿದೆ.

ಪರಮಶಿವ

ಒಂದು ಕುಟುಂಬ ಅಲ್ಲೊಬ್ಬ ಯಜಮಾನ. ಅವನ ಒಳ್ಳೆಯತನ, ಧರ್ಪ ಮತ್ತು ಮೀಸೆ ಊರಿಗೆ ಹೆಸರುವಾಸಿ. ಅಂತಹವನ ವಿರುದ್ಧ ಒಬ್ಬ ಖಳನಾಯಕ. ಅವನಿಗೂ ಏನಾದರೂ ಮಾಡಿ ಇವನನ್ನು ಬಗ್ಗು ಬಡಿಯುವ ಆಸೆ... ಈ ಕತೆಯ ಸಾಲನ್ನು ಹೊತ್ತು ತಮಿಳಿನಲ್ಲಿ ಒಂದಷ್ಟು ಚಿತ್ರಗಳು ಬಂದವು ಮತ್ತವುಗಳಲ್ಲಿ ಬಹುತೇಕ ಕನ್ನಡಕ್ಕೂ ರಿಮೇಕ್ ಆದವು.
ಆದರೆ ಕಾಲ ಬದಲಾಗಿದೆ. ಆದರೆ ನಮ್ಮ ನಿರ್ದೇಶಕರು ಬದಲಾಗಿಲ್ಲ. 2001 ರಲ್ಲಿ ತೆರೆಕಂಡಿದ್ದ ಸಮುದ್ರಂ ಚಿತ್ರವನ್ನು ಈಗ ಕನ್ನಡಕ್ಕೆ ತಂದಿದ್ದಾರೆ. ಆವತ್ತಿಗೆ ಆ ಟ್ರೆಂಡಿಗೆ ಓಕೆ ಎನ್ನುವಂತಿದ್ದ ಚಿತ್ರವನ್ನು ಈವತ್ತಿಗೆ ಹಾಗೆಯೇ ಎಲ್ಲಿಯೂ ಬದಲಾಯಿಸದೆ ತೆರೆಗೆ ತಂದಿದ್ದಾರೆ ನಿರ್ದೇಶಕ ಮಹೇಶ್ ಬಾಬು. ಹಾಗಾಗಿ ಚಿತ್ರವನ್ನು ಹತ್ತು ವರ್ಷಗಳ ಹಿಂದಕ್ಕೆ ಹೋಗಿ ಆ ಮನಸ್ಥಿತಿಯಲ್ಲಿ ನೋಡಿದರೆ ಏನಾದರೂ ಅನಿಸಬಹುದೇನೋ..? ಆದರೆ ಈವತ್ತಿಗೆ ?
ಒಬ್ಬ ಅಣ್ಣನ ಮಾತನ್ನು ತಮ್ಮಂದಿರು ಯಾವ ಮಟ್ಟಕ್ಕೆ ಪಾಲಿಸಲು ಸಾಧ್ಯ? ಅದಕ್ಕೊಂದು ದೃಶ್ಯ ಇದೆ. ಅಣ್ಣ ತಮ್ಮಂದಿರನ್ನು ಕರೆದು ವಿಷ ಕುಡಿಯಿರಿ ಎನ್ನುತ್ತಾನೆ. ತಕ್ಷಣ ಏನು ಯಾಕೆ ಎಂದು ಕೇಳದ ತಮ್ಮಂದಿರು ಟೀ ಕುಡಿಯುವ ರೀತಿಯಲ್ಲಿ ವಿಷ ಕುಡಿಯುತ್ತಾರೆ..
ಖಳ ಯಾವ ಮಟ್ಟಿಗೆ ದ್ವೇಷ ಸಾಧಿಸಲು ಸಾಧ್ಯ? ತನ್ನ ಮನೆಗೆ ತನ್ನ ವಿರೋಧಿಯ ಮಗಳನ್ನು ಸೊಸೆಯಾಗಿ ತಂದುಕೊಳ್ಳುತ್ತಾನೆ.. ಹಿಂಸಿಸಲು.  ಹಾಗೆಯೇ ನಾಯಕ ತನ್ನ ತಲೆಯನ್ನೇ ಕೊಡುತ್ತಾನೆ. ಮಾತು ಉಳಿಸಿಕೊಳ್ಳಲು.. ಹೀಗೆ ಅತಾರ್ಕಿಕ, ಅತಿರೇಕದ ಸನ್ನಿವೇಶಗಳು ಅದ್ಯಾರಿಗೆ ಇಷ್ಟವಾಗುತ್ತದೆ ಎಂಬುದನ್ನು ಸ್ವತಃ ನಿರ್ದೇಶಕರೇ ಹೇಳಬೇಕಾಗುತ್ತದೆ.
ಚಿತ್ರದ ಪ್ರಾರಂಭ ಅಂತ್ಯ ಮತ್ತು ಮಾತುಗಳು ಸನ್ನಿವೇಶಗಳು ಎಲ್ಲವೂ ನಿರೀಕ್ಷಿತ. ಮೂರು ಅಣ್ಣಂದಿರು ಒಬ್ಬಳು ತಂಗಿ. ಒಬ್ಬ ಮನೆ ಆಳು. ಎಲ್ಲರೂ ಒಬ್ಬರಿಗಾಗಿ ಒಬ್ಬರು ಮಿಡಿಯುವವರು. ಇವರೆಲ್ಲರ ವಿರುದ್ಧ ಒಬ್ಬ ಖಳ. ಚಿತ್ರ ಇವರ ಸುತ್ತಾ ಸುತ್ತುತ್ತಲೇ ಅವರದೇ ಕತೆ ಹೇಳುತ್ತಾ ಸಾಗುತ್ತದೆ. ಅಲ್ಲಲ್ಲಿ ಸೆಂಟಿಮೆಂಟ್  ತ್ಯಾಗ ದಟ್ಟವಾಗಿ ಎದ್ದು ಕಾಣುತ್ತದೆ. ಬಹುಶ ಇಡೀ ಸಿನಿಮಾದಲ್ಲಿ ನಿಮಗೆ ಎದ್ದು ಕಾಣುವುದು ಪರೋಪಕಾರ ಮತ್ತು ತ್ಯಾಗ. ಇಲ್ಲಿ ಎಲ್ಲಾ ಪಾತ್ರಗಳೂ ತ್ಯಾಗಕ್ಕೆ ಹಪಹಪಿಸುತ್ತವೆ.
ಚಿತ್ರದ ಈ ಅಂಶಗಳನ್ನು ಪಕ್ಕಕ್ಕಿಟ್ಟರೆ ಸಾಂಸಾರಿಕ ಚಿತ್ರಗಳನ್ನು ಇಷ್ಟಪಡುವವರಿಗೆ ಸಿನಿಮಾ ಓಕೆ ಎನ್ನಿಸಬಹುದೇನೋ? ಯಜಮಾನ, ಜಮೀನ್ದಾರು ಸರಣಿಯ ಚಿತ್ರಗಳನ್ನು ನೋಡಿ ಖುಷಿ ಪಟ್ಟವರಿಗೆ ಈ ಚಿತ್ರ ಕೂಡ ಒಂದಷ್ಟು ಹೊತ್ತು ಮನರಂಜಿಸಬಹುದೇನೋ?
ಇಲ್ಲಿ ರವಿಚಂದ್ರನ್ ಅವರದು ದ್ವಿಪಾತ್ರ. ಆದರೆ ಅವರ ಕಂಟಿನ್ಯೂಟಿ ಅಲ್ಲಲ್ಲಿ ಮಿಸ್ ಆಗುತ್ತದೆ. ಯಶಸ್, ರಾಘವೇಂದ್ರ ತಮ್ಮಂದಿರ ಪಾತ್ರ ಮಾಡಿದ್ದಾರೆ.ಶರಣ್ಯ ಮೋಹನ್ ತಂಗಿಯ ಪಾತ್ರದಲ್ಲಿ ಕಣ್ಣೀರ ಕೊಡಿ ಹರಿಸುತ್ತಾರೆ.
ತಾಂತ್ರಿಕವಾಗಿ ಚಿತ್ರ ಹೊಸತನ ಮೆರೆಯುವುದಿಲ್ಲ. ಅದೇ 2000 ಇಸವಿಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ ಎಂಬುದು ಹೊಗಳಿಕೆಯಲ್ಲ ಎಂಬುದನ್ನು ನಾವು ನಿರ್ದೇಶಕರು ಅರ್ಥ ಮಾಡಿಕೊಳ್ಳಬೇಕು. ಇನ್ನು ಅರ್ಜುನ್ ಜನ್ಯ ಸಂಗೀತ ನೀರಸ. ಛಾಯಾಗ್ರಹಣ ಸಂಕಲನ ಗಳಿಗೂ ಇದೆ ಮಾತು ಅನ್ವಯಿಸುತ್ತದೆ.
ಒಂದು ಚಿತ್ರವನ್ನು ರೀಮೇಕ್ ಮಾಡಲು ಒಂದಷ್ಟಾದರೂ ಮಾನದಂಡವಿದೆ. ಕತೆ, ಚಿತ್ರಕತೆ, ಹೊಸತನ ಯಶಸ್ಸು ಹೀಗೆ. ಹಾಗೆ ನೋಡಿದರೆ ಈವತ್ತಿನ ಕಾಲಮಾನಕ್ಕೆ ಸಮುದ್ರಂ ಚಿತ್ರವನ್ನು ರಿಮೇಕ್ ಮಾಡಲು ಯಾವುದೇ ಕಾರಣಗಳು ಮೇಲ್ನೋಟಕ್ಕೆ ಕಾಣುವುದಿಲ್ಲ. ಆದರೂ ಯಾಕೆ ಈ ಚಿತ್ರವನ್ನು ಆಯ್ಕೆ ಮಾಡಿಕೊಂಡರೂ ಎಂಬುದೇ ಚಿತ್ರದ ಒಂದೇ ಒಂದು ಕುತೂಹಲಕಾರಿ ಪ್ರಶ್ನೆ.

ಇಂಗಳೆ ಮಾರ್ಗ ಚಿತ್ರವಿಮರ್ಶೆ

ಒಂದು ಕಲಾತ್ಮಕ ಚಿತ್ರ ಎಂದಾಗ ಅದರಲ್ಲಿ ಮನರಂಜನಾ ಅಥವಾ ಮಸಾಲ ಅಂಶಗಳು ಕಡಿಮೆ ಎನ್ನಬಹುದು. ಯಾಕೆಂದರೆ ಚಿತ್ರ ವಸ್ತುನಿಷ್ಠವಾಗಿರುವುದರಿಂದ. ಇಂಗಳೆ ಮಾರ್ಗ ಕೂಡ ಕಲಾತ್ಮಕ ಎನಿಸುತ್ತದೆ ಹಾಗೆಯೇ ಅದೊಂದು ಜೀವನಚರಿತ್ರೆಯಾದ್ದರಿಂದ ಇಲ್ಲಿ ವ್ಯಕ್ತಿಯ ಜೀವನ ಕತೆಯಷ್ಟೇ ಮುಖ್ಯವಾಗುತ್ತದೆ.
ದಲಿತರ ಉದ್ದಾರಕ್ಕೆ ಶ್ರಮಿಸಿದವರು ದೇವರಾಯ ಇಂಗಳೆ. ಸಮಾಜದಲ್ಲಿನ ಜಾತಿ ಮತ ಬೇಧವನ್ನು ಕಿತ್ತೊಗೆಯಬೇಕು ಎಲ್ಲರೂ ಸಮಾನರು ಎಂಬುದನ್ನು ಸಮಾಜದಲ್ಲಿ ಜಾರಿಗೆ ತರಬೇಕು. ಅಸ್ಪೃಶ್ಯತೆಯನ್ನು ಸಮಾಜದಿಂದ ಕಿತ್ತೊಗೆಯಬೇಕು ಎಂದ ವ್ಯಕ್ತಿ ದೇವರಾಯ ಇಂಗಳೆ. ಅಷ್ಟೇ ಅಲ್ಲ. ಅದನ್ನು ಪ್ರಾಯೋಗಿಕವಾಗಿ ತರಲು ಶ್ರಮಿಸಿದ ವ್ಯಕ್ತಿ. ಇಂಗಳೆಮಾರ್ಗದ ಕತೆ ದೇವರಾಯ ಇಂಗಳೆಯದ್ದು. ಇದೊಂದು ಆತ್ಮಚರಿತ್ರೆಯನ್ನು ಆಧರಿಸಿದ ಸಿನಿಮ. ಹಾಗಾಗಿ ಹಾಗೆ ತೆರೆದುಕೊಳ್ಳುವ ಕತೆ ದೇವರಾಯನ ಸುತ್ತಲೇ ಸುತ್ತುತ್ತದೆ. ಜನರನ್ನು ಸಂಘಟಿಸಿ ಅವರಲ್ಲಿ ಜಾಗೃತಿ ಮೂಡಿಸುವುದು, ತನ್ನ ಸ್ವಹಿತ ನೋಡಿಕೊಳ್ಳದೆ ಇದ್ದ ಕೆಲಸವನ್ನು ತ್ಯಜಿಸುವುದು, ಊರೂರು ಅಲೆಯುವುದು, ಎಲ್ಲವೂ ಚಿತ್ರದಲ್ಲಿ ಮೂಡಿ ಬಂದಿದೆ. ಹಾಗೆಯೇ ಸ್ವಲ್ಪ ಮಟ್ಟಿಗೆ ಅವನ ವೈಯಕ್ತಿಕ ಬದುಕನ್ನೂ ಚಿತ್ರದಲ್ಲಿ ಕಟ್ಟಿ ಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.
ಚಿತ್ರ ಏರಿಳಿತವಿದ್ದರೂ ಮಂದಗತಿಯಲ್ಲಿ ಸಾಗುವುದರಿಂದ ಸಾಕ್ಷ್ಯಚಿತ್ರದಂತೆ ಭಾಸವಾಗುತ್ತದೆ.  ಹಾಗೆಯೇ ಇಡೀ ಕತೆ ಸ್ವಾತಂತ್ರ್ಯಪೂರ್ವದ್ದಾದ್ದರಿಂದ ಚಿತ್ರತಂಡ ಆ ಕಾಲಮಾನವನ್ನು ಕಟ್ಟಿಕೊಡಲು ಶ್ರಮಿಸಿದೆ. ರೇಡಿಯೋ, ಉಡುಪು ವಸ್ತ್ರ, ಊರು ಬೀದಿ, ಮನೆಯ ಒಳಾಂಗಣ ಮುಂತಾದವುಗಳಲ್ಲಿ ಆ ಕಾಲಮಾನವನ್ನು ಕಟ್ಟುವ ಪ್ರಯತ್ನದಲ್ಲಿ ಸಾಕಷ್ಟು ಯಶಸ್ವಿಯೂ ಆಗಿದ್ದಾರೆ.
ಆದರೆ ಚಿತ್ರದ ಮಿತಿ ಸಂದೇಶದಲ್ಲಿಯೇ ಇದೆ. ಅದೇ ಸಂದೇಶ ಕ್ಲೀಷೆ ಎನಿಸಿದರೂ ಇಂಗಳೆಯ ಕಥನ ರೋಚಕವಾಗಬಹುದಿತ್ತೇನೋ? ಯಾಕೆಂದರೆ ಒಂದು ಅನಿಷ್ಟ ಪದ್ಧತಿಯನ್ನು ಆವತ್ತಿನ ಕಾಲಮಾನದಲ್ಲಿ ಅಳಿಸಿಹಾಕುವ ಪ್ರಯತ್ನ ಮಾಡುವುದು ಸುಲಭದ ಕೆಲಸವಲ್ಲ. ಆವತ್ತಿನ ಅಡೆತಡೆ ವೈರುಧ್ಯಗಳು ಏನೇನಿದ್ದವೋ ಅವುಗಳನ್ನೆಲ್ಲಾ ಮೀರಿ ಕಾರ್ಯ ಸಾಧನೆ ಮಾಡುವುದು ಕಷ್ಟ ಸಾಧ್ಯದ ಕೆಲಸ. ಇಂಗಳೆ ಆದರ್ಶಮಯ ಬದುಕು ಹೋರಾಟದ ಬದುಕು ಹೌದು. ಬರೀ ಸಮಾಜ ಸುಧಾರಕನಲ್ಲ ಇಂಗಳೆ, ಆ ನಿಟ್ಟಿನಲ್ಲಿ ಕ್ರಾಂತಿಕಾರಿ ಕೂಡ. ಚಿತ್ರದಲ್ಲಿ ಈ ಅಂಶಗಳನ್ನು ಸ್ವಲ್ಪ ಹೆಚ್ಚುಗಾರಿಕೆಯಿಂದ ಅಳವಡಿಸಿದ್ದರೆ ಚಿತ್ರಕ್ಕೊಂದು ಫೋರ್ಸ್ ಬರುತ್ತಿತ್ತೇನೋ?
ಒಟ್ಟಿನಲ್ಲಿ ಈ ಮಸಾಲಾ ಚಿತ್ರಜಗತ್ತಿನಲ್ಲಿ ಸಾಧಕರ ಕಥನವನ್ನು ತೆರೆಯ ಮೇಲೆ ತರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದದ್ದು.  ಹಾಗಾಗಿ ಕೆಲವು ಮಿತಿಗಳ ನಡುವೆಯೂ ಇಂತಹ ಚಿತ್ರವನ್ನು ಪೋಷಿಸಬೇಕಾಗುತ್ತದೆ.
ನಿರ್ಮಾಪಕ ಘನಶ್ಯಾಂ ಬಾಂದಗೆ ಚಿತ್ರವನ್ನು ನಿರ್ಮಿಸಿದ್ದಾರೆ. ವಿಶಾಲ್ ರಾಜ್ ತಮ್ಮ ಇತಿಮಿತಿಯಲ್ಲಿ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಪಟ್ಟಿದ್ದಾರೆ. ಇಂಗಳೆಯಾಗಿ ಸುಚೇಂದ್ರ ಪ್ರಸಾದ್, ಆತನ ಪತ್ನಿಯಾಗಿ ಶಿವಾನಿ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ

ನಮಸ್ತೆ ಮೇಡಂ

ಒಂದು ರಿಮೇಕ್ ಚಿತ್ರವನ್ನು ಹೇಗೆ ವಿಮರ್ಶಿಸಬಹುದು..? ಮೂಲ ಚಿತ್ರಕ್ಕೆ ಹೋಲಿಕೆ ಮಾಡಿ ನೋಡುವುದರಿಂದಲೋ ಅಥವಾ ಅದನ್ನೆಲ್ಲಾ ಮರೆತು ಬರೀ ಸಿನಿಮಾ ಎಂದು ನೋಡುವುದರಿಂದಲಾ? ಎಂಬುದು ಮೂಲಭೂತ ಪ್ರಶ್ನೆ.
'ನಮಸ್ತೆ ಮೇಡಂ' ಸುಮಾರು ವರ್ಷಗಳ ಹಿಂದೆ ತೆಲುಗಿನಲ್ಲಿ ತೆರೆಕಂಡಿದ್ದ 'ಮಿಸ್ಸಮ್ಮ' ಚಿತ್ರದ ರಿಮೇಕ್. ನಿರ್ದೇಶಕ ರಘುರಾಜ್ ಮಿಸ್ಸಮ್ಮ ಹೇಗಿತ್ತೋ ಹಾಗೆಯೇ ಏನೂ ಬದಲಾವಣೆ ಮಾಡದೆ ಕನ್ನಡೀಕರಿಸಿದ್ದಾರೆ. ಆದರೆ ಹಳೆಯ ಚಿತ್ರವನ್ನು ಈವತ್ತಿಗೆ ರೂಪಾಂತರ ಮಾಡುವಾಗ ಅಥವಾ ಪುನರ್ನಿರ್ಮಾಣ ಮಾಡುವಾಗ ವಹಿಸಬೇಕಾದ ಗಮನವನ್ನು ತಲೆ ಕೆಡಿಸಿಕೊಳ್ಳದೆ ಚಿತ್ರ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಆವತ್ತಿನ ಕತೆ ಆವತ್ತಿನಂತೆಯೇ ಇದೆ.
ಅಥವಾ ಬರೀ ಒಂದು ಚಿತ್ರವಾಗಿ ನಮಸ್ತೆ ಮೇಡಂ ಚಿತ್ರವನ್ನು ವೀಕ್ಷಿಸಿದರೆ ಸಾದಾರಣ ಚಿತ್ರ ಎನಿಸುತ್ತದೆ. ಪ್ರಖ್ಯಾತ ಕಂಪನಿಯೊಂದರ ಮುಖ್ಯಸ್ಥೆ ತನ್ನ ಕಂಪನಿಯಲ್ಲಿ ಕೆಲಸ ಮಾಡುವ ನಾಯಕನನ್ನು ಮದುವೆಯಾಗುವಂತೆ ದುಂಬಾಲು ಬೀಳುತ್ತಾಳೆ. ಆದರೆ ಈಗಾಗಲೇ ನಾಯಕನಿಗೆ ಮದುವೆಯಾಗಿದೆ. ಏನು ಮಾಡುವುದು. ನಾಯಕ ಏಕ ಪತ್ನಿ ವ್ರತಸ್ಥ. ಹಾಗಾಗಿ ನಾಯಕ ಇಬ್ಬರ ನಡುವೆ ಸಿಲುಕಿ ಒದ್ದಾಡುತ್ತಾನೆ.
ಅದೆಲ್ಲಾ ಸರಿ. ಇದನ್ನೆಲ್ಲಾ ನಾಯಕಿ ಏಕೆ ಮಾಡುತ್ತಾಳೆ. ಅವಳ ಹಿಂದಿನ ಕತೆಯೇನು? ಎಂಬುದಕ್ಕೆ ಬೇರೆಯದೇ ಆದ ಕತೆಯಿದೆ. ಅದೇನು ಎಂಬುದನ್ನು ಚಿತ್ರ ನೋಡಿ ಕುತೂಹಲ ತಣಿಸಿಕೊಳ್ಳಬಹುದು. ಶ್ರೀನಗರ ಕಿಟ್ಟಿ ತಮ್ಮ ಪಾತ್ರವನ್ನು ತುಂಬಾ ಸಮರ್ಥವಾಗಿ ನಿಭಾಯಿಸಿದ್ದಾರೆ. ಸವಾಲೆನಿಸುವ ಪಾತ್ರವಲ್ಲವಾದರೂ ಅದನ್ನು ಅಷ್ಟೇ ನಿಜವಾಗಿ ನಿರ್ವಹಿಸಿ ಚಿತ್ರವನ್ನೂ ಸಹನೀಯ ಮಾಡಿದ್ದಾರೆ. ಹೆಂಡತಿ ಮತ್ತು ಬಾಸ್ ನಡುವೆ ಸಿಲುಕಿ ತೊಳಲಾಡುವ ಪಾತ್ರದಲ್ಲಿ, ಸಂಭಾಷಣೆ ಒಪ್ಪಿಸುವ ಶೈಲಿಯಲ್ಲಿ ಮೊದಲಿನಿಂದಲೂ ಕೊನೆಯವರೆಗೂ ಪ್ರೇಕ್ಷಕರನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಮತ್ತು ಅದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ರಾಗಿಣಿ ಕೂಡ ತುಂಡುಡುಗೆ ಧರಿಸಿ ಅಲ್ಲಲ್ಲಿ ಗಮನ ಸೆಳೆಯುತ್ತಾರೆ. ಉಳಿದ ಕಲಾವಿದರುಗಳು ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಆದರೆ ಚಿತ್ರದ ಕತೆಯನ್ನು ಸ್ವಲ್ಪ ಈವತ್ತಿನ ಸ್ಥಿತಿಗತಿಗೆ ಮತ್ತು ಕನ್ನಡದ ಸೊಗಡಿಗೆ ಪರಿವರ್ತಿಸಬೇಕಾದ ಅಗತ್ಯ ತುಂಬಾ ಇತ್ತು. ಯಾಕೆಂದರೆ 'ಮಿಸ್ಸಮ್ಮ' ಚಿತ್ರದ ಕತೆಯಲ್ಲಿನ ತಿರುಳು ಚೆನ್ನಾಗಿದ್ದರೂ ಅದನ್ನು ಪ್ರೆಸೆಂಟ್ ಮಾಡಿರುವ ಶೈಲಿ ಹಳೆಯದು ಎನಿಸುತ್ತದೆ. ಬರೀ ಸೊಂಟ ಬಳುಕಿಸಿ ಕುಣಿದು ಕುಪ್ಪಳಿಸಿ ನಾಯಕಿ ನಾಯಕನನ್ನು ಪಟಾಯಿಸಲು ಹೆಣೆಯುವ ತಂತ್ರಗಳು ಹಳೆಯದು ಎನಿಸುತ್ತವೆ. ಇನ್ನೇನು ಬೇಕಿತ್ತು ಎನಿಸುತ್ತವೆ.
ಛಾಯಾಗ್ರಹಣ, ಸಂಗೀತ ನೃತ್ಯ ಎಲ್ಲಾ ವಿಭಾಗದಲ್ಲೂ ಕಸುಬುದಾರಿಕೆಯಿದೆ. ಸಂಕಲನದಲ್ಲಿ ಏನಾದರೂ ಭಿನ್ನತೆ ಮಾಡಬೇಕು ಎನಿಸುವ ಸಂಕಲನಕಾರರ ಕೈಚಳಕ ಹೆಚ್ಚಾಗಿ ಅದೇ ಚಿತ್ರದ ಓಘಕ್ಕೆ ಅಡೆತಡೆಯಾಗಿದೆ.
ಒಟ್ಟಿನಲ್ಲಿ ಎಲ್ಲಾ ಇದ್ದು  ಇನ್ನೇನು ಯಾರಬೇಕಿತ್ತು ಎನಿಸುವ ನಮಸ್ತೆ ಮೇಡಂ ಒಮ್ಮೆ ನೋಡಬಹುದಾದ ಚಿತ್ರವಾಗಿದೆ.
ರವಿಗರಣಿ ಶುಭಂ ಎನ್ನುವ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಿದ್ದರು. ಆದರೆ ಆ ಚಿತ್ರ ಸೋತಾಗ ಕಿರುತೆರೆಯಲ್ಲಿ ತೊಡಗಿಸಿಕೊಂಡು ಹೆಸರು ಮಾಡಿದವರು. ಈಗ ಅವರದೇ ಸಂಸ್ಥೆಯಿಂದ ನಮಸ್ತೆ ಮೇಡಂ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಳೆಯ ಚಿತ್ರವನ್ನು ಏನೇನೋ ವಿಶೇಷವಿಲ್ಲದ ಚಿತ್ರವನ್ನು ರಿಮೇಕ್ ಯಾಕೆ ಮಾಡಬೇಕಿತ್ತು ಎಂಬುದೇ ಪ್ರಶ್ನೆ. ಅದಕ್ಕೆ ಅವರೇ ಉತ್ತರ ಹೇಳಬೇಕಾಗಿದೆ.

Saturday, October 18, 2014

ನೀನಾದೆನಾ:

ಚಿತ್ರ ಹೇಗಿದೆ ಎಂಬ ಪ್ರಶ್ನೆಗೆ ಒಂದು ಪದದ ಸೂಪರ್ ಅಥವಾ ಪಾಪರ್ ಎನ್ನುವ ಉತ್ತರ ಕೊಡಲು ಸಾಧ್ಯವಾಗದ ಚಿತ್ರ ನೀನಾದೆನಾ.ಬಿಡುಗಡೆಗೂ ಮುನ್ನ ಚಿತ್ರತಂಡ, ನಿರ್ಮಾಪಕರು ಇದೊಂದು ಅಪರೂಪದ ಕತೆ ಎಂದು ಹೇಳಿದ್ದರಿಂದ ಅದನ್ನು ಸ್ಮೃತಿಯಲ್ಲಿಟ್ಟುಕೊಂಡು ಸಿನೆಮಮಂದಿರ ಹೊಕ್ಕರೆ ನಿರಾಶೆಯಾಗುತ್ತದೆ. ಯಾಕೆಂದರೆ ಇಲ್ಲಿ ಅಪರೂಪದ ಕತೆಯೂ ನವಿರಾದ ಪ್ರೇಮ ಕತೆಯೂ ಇಲ್ಲ. ಆದರೆ ಸದಭಿರುಚಿ ಎನಿಸುವ ಕತೆಯಂತೂ ಇದೆ. ಅದು ಇಷ್ಟವಾಗುತ್ತದಾ ಎನ್ನವುದು ಪ್ರೇಕ್ಷಕರ ಭಾವಕ್ಕೆ ಬಿಟ್ಟದ್ದು.
ನಾಯಕ ಮಹಾನ್ ತ್ಯಾಗಮಯಿ, ನಾಯಕಿ ಮಹತ್ವಾಕಾಂಕ್ಷಿ. ಇವರಿಬ್ಬರೂ ಅತ್ಯುತ್ತಮ ಸ್ನೇಹಿತರು. ಕೊನೆಯವರೆಗೂ ಸ್ನೇಹಿತರಾಗಿಯೇ ಉಳಿಯುತ್ತಾರೆ. ಇವರಿಬ್ಬರ ನಡುವೆ ಪ್ರೀತಿ ಬರುವುದೇ ಇಲ್ಲ. ಆದರೂ ಸಿನೆಮಾದ ಆದಿ ಅಂತ್ಯದ ನಡುವೆ ಜೀವನದ ಒಂದು ಪ್ರಮುಖ ಘಟ್ಟದಲ್ಲಿ ಬದುಕು ಇಬ್ಬರನ್ನೂ ಸೇರಿಸುತ್ತದೆ. ಅವರು ಸ್ನೇಹಿತರಾಗಿಯೇ ಉಳಿದರೆ ಈ ಮಧ್ಯ ನಡೆದ ನಾಟಕೀಯ ಬೆಳವಣಿಗೆ ಏನು? ಕುತೂಹಲವಿದ್ದರೆ ಚಿತ್ರ ಮಂದಿರಕ್ಕೆ ಭೇಟಿ ನೀಡಬಹುದು.
ನೃತ್ಯ ನಿರ್ದೇಶಕ-ನಿರ್ದೇಶಕ ಕಂದಾಸ್ ಮೊದಲ ಚಿತ್ರಕ್ಕೆ ಒಂದು ಒಳ್ಳೆಯ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಚಿತ್ರಕತೆಯ ಬರವಣಿಗೆಯಲ್ಲಿ ಕ್ಲೀಷಾತ್ಮಕ ದೃಶ್ಯಗಳನ್ನೂ ಸೇರಿಸಿದ್ದಾರೆ. ಹಾಗಾಗಿ ಮೊದಲರ್ಧದ ಅಂತ್ಯಕ್ಕೊಂದು ತಿರುವು ಕೊಡುವಾಗ ಪ್ರೇಕ್ಷಕರಲ್ಲಿ ಶಾಕ್ ನಿರೀಕ್ಷೆ ಮಾಡಿದ್ದರೇ ಅದವರ ತಪ್ಪು. ಯಾಕೆಂದರೆ ಅಲ್ಲಿಯವರೆಗಿನ ಕತೆ ಯಾವುದೇ ಏರಿಳಿತವಿಲ್ಲದೇ ತಣ್ಣಗೆ, ಒಂದಷ್ಟು ದೃಶ್ಯಗಳ ಜೊತೆಗೆ ಸಾಗುತ್ತದೆ.
ಮಧ್ಯಂತರದ ನಂತರ ಹಿನ್ನೆಲೆ ಕತೆಯನ್ನು ಅದ್ದೂರಿಯಾಗಿ ನಿರೂಪಿಸಿ ಕ್ಲೈಮಾಕ್ಸ್ ಘಟ್ಟಕ್ಕೆ ತಂದು ನಿಲ್ಲಿಸುತ್ತಾರೆ. ಹಾಗಾಗಿ ಇಲ್ಲಿ ಪ್ರೀತಿ ಪ್ರೇಮ ಕಾಡುವುದಿಲ್ಲ. ಹಾಗೆಯೇ ನಾಯಕನ ಸ್ನೇಹದ ಪರೋಪಕಾರದ ಉತ್ತುಂಗ ಸ್ಥಿತಿ ಅವನ ಮೇಲೆ ಕನಿಕರ ಮೂಡಿಸುತ್ತದೆಯೇ ಹೊರತು ಅದರಾಚೆಗೆ ಏನೂ ಅನಿಸುವುದಿಲ್ಲ.
ಪ್ರಜ್ವಲ್ ದೇವರಾಜ್ ತಮ್ಮ ಪಾತ್ರವನ್ನು ಚೆನ್ನಾಗಿ ನಿರೂಪಿಸಿದ್ದಾರೆ. ಆದರೆ ಅವರದೇ ಬ್ಯಾನರ್ ಚಿತ್ರ ಎಂದಾಗ ಪ್ರೇಕ್ಷಕರ ನಿರೀಕ್ಷೆ ಏನಿತ್ತೋ ಅದಿಲ್ಲ. ಬದಲಿಗೆ ಇಲ್ಲಿಯವರೆಗೆ ಬಂದ ಅವರ ಎಷ್ಟೋ ಸಿನಿಮಾಗಳಂತೆ ಇದೂ ಕೂಡ ಆಗಿಬಿಟ್ಟಿದೆ. ಒಂದು ಸಾದಾರಣ ಎನಿಸುವ ಕತೆಗೆ ದೇವರಾಜ್ ಅದ್ದೂರಿಯಾಗಿ ವೆಚ್ಚ ಮಾಡಿದ್ದಾರೆ. ಹಾಗಾಗಿಯೇ ಪ್ರತಿ ಚಿತ್ರಣವೂ ವರ್ಣಮಯ ಎನಿಸುತ್ತದೆ.ಇದರಲ್ಲಿ ಛಾಯಾಗ್ರಾಹಕ ಶ್ರೀನಿವಾಸ್ ರಾಮಯ್ಯ ಅವರ ಕೈಚಳಕವನ್ನು ಪ್ರಶಂಸಿಸಲೇ ಬೇಕಾಗುತ್ತದೆ.ಹಾಗೆಯೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಎರಡು ಹಾಡುಗಳಲ್ಲಿ ಇಷ್ಟವಾಗುತ್ತಾರೆ. ಇಬ್ಬರೂ ನಾಯಕಿಯರು ಆಪ್ತ ಎನಿಸುವುದಿಲ್ಲ. ಇನ್ನುಳಿದಂತೆ ಪೋಷಕ ಪಾತ್ರಗಳಾದ ಅವಿನಾಶ್, ಪವಿತ್ರಾ ಲೋಕೇಶ್, ದೊಡ್ಡಣ್ಣ ಬುಲೆಟ್ ಪ್ರಕಾಶ್ ಗಮನ ಸೆಳೆಯುತ್ತಾರೆ.
ಚಿತ್ರ ನೋಡುತ್ತಾ ನೋಡುತ್ತಾ ಮಿಲನ, ನಿನಗಾಗಿ ಮುಂತಾದ ಚಿತ್ರಗಳು ತಲೆಯಲ್ಲಿ ಬಂದುಹೋದರೆ ನೋಡುಗನ ತಪ್ಪಲ್ಲ. ಅದೆಲ್ಲವಿದ್ದರೂ ಮಾಫಿ ಮಾಡಿ ನೋಡುವಂತೆ ಮಾಡದ ನಿರ್ದೇಶಕರೇ ಹೊಣೆ ಎಂದರೆ ಅವರಿಗೆ  ಕೋಪ ಬರಬಹುದೇನೋ?