Pages

Saturday, March 22, 2014

ರಂಗನ ಸ್ಟೈಲ್:

ಚಿತ್ರದಲ್ಲಿ ಒಬ್ಬ ಆಕರ್ಷಕ ಹುಡುಗ ಇದ್ದಾನೆ, ಸುಂದರವಾದ ಹುಡುಗಿ ಇದ್ದಾಳೆ ಮತ್ತು ಕೇಳಿದ್ದನ್ನು ಒದಗಿಸುವ ನಿರ್ಮಾಪಕರಿದ್ದಾರೆ. ಇಷ್ಟೆಲ್ಲಾ ಇದ್ದ ಮೇಲೆ ಒಬ್ಬ ನಿರ್ದೇಶಕನಿಗೆ ಏನು ಬೇಕು..? ಎಂದರೆ ತಟ್ಟನೆ ಬರುವ ಉತ್ತರವೆಂದರೆ ಕತೆ ಬೇಕು ಎನ್ನುವುದು. ನಿರ್ದೇಶಕ ಪ್ರಶಾಂತ್ ಅದನ್ನು ಗಟ್ಟಿ ಮಾಡಿಕೊಂಡಿಲ್ಲ. ಒಂದೆರೆಡು ದೃಶ್ಯದ ಪಂಚ್ ಗಳನ್ನೇ ಇಡೀ ಸಿನಿಮಾದ ಬಂಡವಾಳ ಮಾಡಲು ಹೊರಟಿದ್ದಾರೆ. ಹಾಗಾಗಿ ರಂಗನ ಸ್ಟೈಲ್ ಒಂದು ನಿರರ್ಥಕ ಪ್ರಯತ್ನವಾಗಿ ಬಿಟ್ಟಿದೆ.
 ವಿನಾಕಾರಣ ಹೆಣ್ಣು ಮಕ್ಕಳ ಬಗ್ಗೆ ಪ್ರೀತಿ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿರುವ ನಾಯಕ ಸಿಡಿ ಅಂಗಡಿ ಇಟ್ಟುಕೊಂಡು ಒಂದಷ್ಟು ಸಾಹಸಮಯ ಚಿತ್ರಗಳ ಡಿವಿಡಿ ಮಾರುತ್ತಾನೆ. ಆದರೆ ಅವನ ಕಣ್ಣಿಗೆ ಒಂದು ಹುಡುಗಿ ಕಾಣಿಸಿಕೊಳ್ಳುತ್ತಾಳೆ ನೋಡಿ..ತಕ್ಷಣ ಅವನ ಅಂಗಡಿಯಲ್ಲಿ ಪ್ರೇಮಕಥಾ ಚಿತ್ರಗಳ ಬಿಲ್ಲೆಗಳು ದಾಂಗುಡಿ ಇಡುತ್ತವೆ. ಆನಂತರ ಪ್ರೀತಿ ಪ್ರೇಮ ಮನೆಯವರ ವಿರೋಧ..ಓಡಿ ಬರುವ ನಾಯಕ ನಾಯಕಿಗೆ ಒಬ್ಬ ಉದ್ದ ಕೂದಲಿನ ಪೋಲಿಸ್ ಅಧಿಕಾರಿ ಸಿಗುತ್ತಾನೆ..ಮುಂದೆ ಹೊಡೆದಾಟ ಬಡಿದಾಟ..ಕೊನೆಯಲ್ಲಿ..? ಮುಂದಿನದ್ದನ್ನು ತಿಳಿಯುವ ಆಸಕ್ತಿಯಿದ್ದರೆ ಚಿತ್ರವನ್ನೊಮ್ಮೆ ನೋಡಬಹುದು.
ಚಿತ್ರದಲ್ಲಿ ಎಲ್ಲವೂ ಇದೆ. ಸಾಧುಕೋಕಿಲ ರೇಖಾ ದಾಸ್ ಅವರ ಕಾಮಿಡಿ ಇದೆ.ಖಳರಿದ್ದಾರೆ ಹೊಡೆದಾಟವಿದೆ. ಆದರೆ ಇದಾವುದೂ ಚಿತ್ರವನ್ನು ಗೆಲ್ಲಿಸಲು ಕೊನೆಗೆ ನೋಡಿಸಿಕೊಂಡು ಹೋಗುವಂತೆ ಮಾಡುವುದಿಲ್ಲ. ಆಗಾಗ ಆಕಳಿಕೆ ತರಿಸುವ ಬೇಸರ ತರಿಸುವ ಕ್ಲೀಷಾತ್ಮಕ ಕತೆ ಹೊಸಬರ ಚಿತ್ರದ ಬಗ್ಗೆ ಅನುಮಾನ ಮೂಡಿಸದೆ ಇರದು.
ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ನಾಯಕ ಪ್ರದೀಪ್ ತಕ್ಕಮಟ್ಟಿಗೆ ಕಷ್ಟ ಪಟ್ಟು ನಟಿಸಿದ್ದಾರೆ. ಮೊದಲ ಚಿತ್ರದಲ್ಲಿ ತನ್ನೆಲ್ಲಾ ಪ್ರತಿಭೆ ತೋರಿಸಿ ಜನಮಾನಸ ಗೆಲ್ಲಬೇಕೆಂಬ ಅವರ ಹವಣಿಕೆ ಪರಿಶ್ರಮ ಎದ್ದು ಕಾಣುತ್ತದೆ. ಆದರೆ ಚಿತ್ರದ ಕತೆ ಅದೆಲ್ಲದಕ್ಕೂ ತಡೆಗೋಡೆಯಾಗಿ ಬಿಟ್ಟಿದೆ.
ನಾಯಕಿ ಕನ್ನಿಕಾ ತಿವಾರಿ ನೋಡಲು ಸುಂದರವಾಗಿದ್ದಾರೆ. ಹಾಗೆಯೇ ಅಭಿನಯದಲ್ಲೂ ಓಕೆ ಎನಿಸುವಷ್ಟರ ಮಟ್ಟಿಗೆ ನಟಿಸಿದ್ದಾರೆ. ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಬಂದು ನಾಯಕ ನಾಯಕಿಗೆ ಜೀವನದ ಪಾಠ ಕಲಿಸುವ ಸುದೀಪ್ ತಮ್ಮ ಉದ್ದನೆಯ ಬಿಗ್ಬಾಸ್ ಕೂದಲಿನ ಜೊತೆಗೆ ಚೆನ್ನಾಗಿ ಕಾಣಿಸುತ್ತಾರೆ. ಉಳಿದ ಪಾತ್ರಗಳು ಹಾಗೆ ಬಂದು ಹೀಗೆ ಹೋಗಿ ಬಿಡುತ್ತವೆ.

ನಿರ್ದೇಶಕ ಪ್ರಶಾಂತ್ ಒಂದು ಒಳ್ಳೆಯ ಕತೆ ಮಾಡಿಕೊಂಡು ಚಿತ್ರಕತೆ ಹೆಣೆದಿದ್ದರೆ ನಿಜಕ್ಕೂ ರಂಗನ ಸ್ಟೈಲ್ ಒಳ್ಳೆಯ ಚಿತ್ರವಾಗುತ್ತಿತ್ತು. ಆದರೆ ಈಗ ರಂಗನೂ ಇಲ್ಲ ಅವನ ಸ್ಟೈಲೂ ಇಲ್ಲದೆ ಸಾದಾರಣ ಮಟ್ಟದ ಚಿತ್ರಕ್ಕಿಂತ ಒಂದು ಹಂತ ಕೆಳಗಿದೆ.

ಮನದ ಮರೆಯಲ್ಲಿ:

ಅವಳು ಅಂಧ ಸುಂದರಿ. ಅವಳ ಮೇಲೆ ಕಾಮುಕರ ಕಣ್ಣು. ಅವಳನ್ನು ಕಾಪಾಡುವವ ನಮ್ಮ ನಾಯಕ.ಆತ ಅದ್ಭುತವಾಗಿ ಕೊಳಲು ಭಾರಿಸುತ್ತಾನೆ. ಹಾಗೆಯೇ ಖಳರನ್ನು ಅದಕ್ಕಿಂತ ಚೆನ್ನಾಗಿ ಭಾರಿಸುತ್ತಾನೆ. ಹೀಗಿದ್ದ ಸಮಯದಲ್ಲಿ ನಾಯಕಿಗೆ ಅದ್ಯಾರೋ ಕಣ್ಣುದಾನ ಮಾಡುತ್ತಾರೆ. ಆದರೆ ಇತ್ತ ನಾಯಕ ಕುರುಡನಾಗುತ್ತಾನೆ. ಕಣ್ಣಿಲ್ಲದಾಗ ಕಣ್ಣಾಗಿದ್ದ ಇನಿಯನನ್ನು ಹುಡುಕುವುದು ಹೇಗೆ. ಯಾಕೆಂದರೆ ಈಗ ಆತ ಕುರುಡ... ಮುಂದೆ ಏನು ನಡೆಯುತ್ತದೆ ಎಂಬುದನ್ನು ಚಿತ್ರಮಂದಿರದೊಳಗೆ ಹೋಗಿ ನೋಡುವ ಮೂಲಕ ತಿಳಿದುಕೊಳ್ಳಬಹುದು.
ಚಿತ್ರದ ಆರಂಭ ಚೆನ್ನಾಗಿದೆ. ಹಾಗಾಗಿ ಅದಷ್ಟನ್ನೂ ನೋಡಿದ ಪ್ರೇಕ್ಷಕ ಇದಾವುದೋ ಸುಂದರ ಪ್ರೇಮಕತೆಯ ಚಿತ್ರ ಎಂಬುದಾಗಿ ಊಹಿಸಿ ಕುರ್ಚಿಗೆ ಕುಳಿತುಕೊಳ್ಳುತ್ತಾನೆ. ಆದರೆ ಅದಾದ ಸ್ವಲ್ಪವೇ ಸ್ವಲ್ಪ ಸಮಯದಲ್ಲಿ ಇಡೀ ಚಿತ್ರದ ಕತೆ ಹಳಿ ತಪ್ಪುತ್ತದೆ. ಅಲ್ಲಲ್ಲಿ ತನ್ನ ಟ್ರ್ಯಾಕ್ ಬಿಟ್ಟುಹೋಗುವ ಕತೆ ಮತ್ತೆ ಮತ್ತೆ ಸರಿದಾರಿಗೆ ಬರುವ ಮತ್ತೆ ತಪ್ಪಿಸಿಕೊಳ್ಳುವ ಕಣ್ಣು ಮುಚ್ಚಾಲೆ ಆಟ ಪ್ರಾರಂಭಿಸಿಬಿಡುತ್ತದೆ. ಹಾಗಾಗಿ ಮೊದಲು ಏನೇನೆಲ್ಲಾ ಊಹಿಸಿದ್ದ ಪ್ರೇಕ್ಷಕನಿಗೆ ಅತೀವ ನಿರಾಸೆಯಾಗುತ್ತದೆ. ಆನಂತರ ಆ ನಿರಾಸೆ ಬೇಸರಕ್ಕೆ ತಿರುಗುತ್ತದೆ. ಇದಕ್ಕೆಲ್ಲಾ ಕಾರಣವಾಗುವುದು ಚಿತ್ರದ ಚಿತ್ರಕತೆ ಎಂಬುದನ್ನು ಘಂಟಾಘೋಷವಾಗಿ ಹೇಳಬಹುದು.
ಇದು ಶ್ರೀಕಿ ಅಭಿನಯದ ಎಷ್ಟನೆ ಚಿತ್ರ ಎಂಬುದನ್ನು ಅವರೇ ಹೇಳಬೇಕು. ಈಗಾಗಲೇ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಶ್ರೀಕಿ ಇದರಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರ ಅವರ ಹಿಂದಿನ ಚಿತ್ರಗಳ ಸಾಲಿಗೆ ಸೇರಿದೆ ಎಂದರೆ  ಏನು ಎಂಬುದನ್ನು ನೋಡುಗರು ಅರ್ಥ ಮಾಡಿಕೊಳ್ಳಬೇಕಷ್ಟೇ. ಇರುವ ಕತೆಗೆ ನವಿರಾದ ಚಿತ್ರಕತೆ ಹೆಣೆದಿದ್ದರೆ ಅದು ಸಶಕ್ತವಾಗುತ್ತಿತ್ತು. ಆದರೆ ನಿರ್ದೇಶಕ ರಾಜೀವ್ ನೇತ್ರ ಆ ಸಾಹಸಕ್ಕೆ ಕೈ ಹಾಕಿಲ್ಲ. ಹೇಗೋ ಬೇಕೋ ಹಾಗೆ ಚಿತ್ರೀಕರಿಸುತ್ತಾ ಸಾಗಿದ್ದಾರೆ. ಹಾಗಾಗಿ ಇರುವ ಕತೆ ಪೇಲವ ಜಾಳು ಜಾಳಾದ ಚಿತ್ರಕತೆಯಿಂದ ಸೊರಗಿದೆ. ಜೊತೆಗೆ ಅನಗತ್ಯ ಹಾಸ್ಯ ದೃಶ್ಯಗಳು ಅಲ್ಲಲ್ಲಿ ಬಂದು ಚಿತ್ರವನ್ನು ಇನ್ನಷ್ಟು ಹದಗೆಡಿಸಿದೆ.
ಕಲಾವಿದರ ವಿಷಯದಲ್ಲಿ ಚಿತ್ರದಲ್ಲಿ ಉತ್ತಮ ನಟರ ದಂಡೆ ಇದೆ. ಶ್ರೀಕಿ ನಾಯಕನಾಗಿ ಅಭಿನಯಿಸಿದ್ದರೆ ನಾಯಕಿಯಾಗಿ ವಿಂಧ್ಯಾ ಅಭಿನಯಿಸಿದ್ದಾರೆ. ಜೊತೆಗೆ ಅನಂತನಾಗ್, ರಘು ರಂಗಾಯಣ, ಬುಲೆಟ್ ಪ್ರಕಾಶ್ ಹೀಗೆ. ಆದರೆ ಅವರ್ಯಾರಿಗೂ ತಕ್ಕುದಾದ ಪಾತ್ರ ಸಿಕ್ಕಿಲ್ಲ. ಹಾಗೆಯೇ ಛಾಯಾಗ್ರಹಣ ಸಂಗೀತ ಕೂಡ ಸಾದಾರಣ ಮಟ್ಟಕ್ಕಿಂತ ಒಂದು ಎಳೆಯೂ ಮೇಲಿಲ್ಲ. ಸುಮ್ಮನೆ ಒಂದು ಕತೆಯನ್ನು ಹಿಂದೆ ಮುಂದೆ ಯೋಚಿಸದೆ ಚಿತ್ರವನ್ನಾಗಿಸಿದಂತಿದೆ ಮನದ ಮರೆಯಲ್ಲಿ.