Pages

Saturday, August 9, 2014

ಪಂಗನಾಮ:

ಸಾಧುಕೋಕಿಲ ಮತ್ತು ದೊಡ್ಡಣ್ಣ ಅವರನ್ನು ಪೋಸ್ಟರ್ ನಲ್ಲಿ ನೋಡಿ, ಚಿತ್ರದ ಹೆಸರನ್ನು ಓದಿ ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರ ಎಂದುಕೊಳ್ಳುತ್ತಾರೆ ಪ್ರೇಕ್ಷಕರು. ಆದರೆ ಚಿತ್ರ ಪ್ರಾರಂಭವಾದ ಹತ್ತೇ ನಿಮಿಷಕ್ಕೆ ಗೊತ್ತಾಗಿ ಹೋಗುತ್ತದೆ ಪಂಗನಾಮ ಹಾಕಿದ್ದು ಯಾರು..? ಹಾಕಿಸಿಕೊಂಡವರು ಯಾರು ಎಂಬುದು. ಹೌದು ಪಂಗನಾಮ ಚಿತ್ರ ಪ್ರೇಕ್ಷಕರಿಗೆ ಪಂಗನಾಮ ಹಾಕುವುದರಲ್ಲಿ ಯಶಸ್ವಿಯಾಗಿದೆ ಎಂದರೆ ಅದು ಯಶಸ್ಸೋ ಸೋಲೋ ಎಂಬುದನ್ನು ನಿರ್ದೇಶಕರೇ ಅರ್ಥ ಮಾಡಿಕೊಳ್ಳಬೇಕು.
ಚಿತ್ರದ ಪ್ರಾರಂಭ ಸಾಧುಕೋಕಿಲ ಅವರಿಂದಾಗುತ್ತದೆ. ಏನೇ ನೀರಸ ದೃಶ್ಯ ಕೊಟ್ಟರೂ ಹೇಗೋ ನಗಿಸಲು ಪ್ರಯತ್ನಿಸುವ ಸಾಧು ಇಲ್ಲೂ ತಮ್ಮ ಪಾತ್ರದಲ್ಲಿ ಅಂತಹ ಹಾಸ್ಯವಿಲ್ಲದಿದ್ದರೂ ನಗಿಸಲು ಪ್ರಯತ್ನಿಸಿ ಪ್ರಾಯಶಃ ಯಶಸ್ವಿಯಾಗುತ್ತಾರೆ. ಆದರೆ ಚಿತ್ರ ಮುಂದುವರೆದಂತೆ ಕತೆಯೇ ಬೇರೆಯಾಗುತ್ತದೆ. ಹಾಸ್ಯವು ಪ್ರೇಮದ ಕಡೆಗೆ ತಿರುಗುತ್ತದೆ. ಹಾಗಂತ ಒಂದು ಹಾಸ್ಯ ಲೇಪನದ ನವಿರಾದ ಪ್ರೇಮಕತೆಯಿರಬಹುದಾ..? ಎಂಬ ಅನುಮಾನಕ್ಕೆ ಇಲ್ಲ ಎಂಬ ಉತ್ತರ ಬಂದಾಗ ಪಂಗನಾಮ ಇಕ್ಕಿಸಿಕೊಂಡ ಹಾಗೆ ಆಗದೆ ಇರದು.
ಒಂದೂರು. ಅಲ್ಲಿ ದಶಕದಿಂದ ಕೊಲೆ ಜರುಗಿಲ್ಲ. ಆ ಊರಿಗೆ ಸಾಧು ಪೋಲಿಸ್ ಆಗಿ ಎಂಟ್ರಿ. ಅದೇ ಊರಲ್ಲಿ ನಮ್ಮ ನಾಯಕನಿದ್ದಾನೆ. ಅವನದೇನು ಕೆಲಸ.. ಮಾಮೂಲಿ ಬಹಳಷ್ಟು ಕನ್ನಡ ಸಿನಿಮಾಗಳ ನಾಯಕನಂತೆ ಅವನಿಗೆ ಕೆಲಸವಿಲ್ಲ. ಉಂಡಾಡಿ ಗುಂಡನಾದರೂ ಗೌಡರ ಮಗಳ ಮೇಲೆ ಕಣ್ಣು ಹಾಕುತ್ತಾನೆ. ಅವರಿಬ್ಬರೂ ಒಂದಷ್ಟು ತರಲೆ ಮಾಡುತ್ತಾರೆ. ಮುಂದೆ ಅದೇ ದೊಡ್ಡದಾಗುತ್ತದೆ..ಏನೇನೋ ತಿರುವುಗಳನ್ನು ಸೃಷ್ಟಿಸುತ್ತದೆ...
ಚಿತ್ರದಲ್ಲಿ ಒಂದು ಗಟ್ಟಿಯಾದ ಕತೆಯಿಲ್ಲವಾದ್ದರಿಂದ ಚಿತ್ರದ ಹಾಸ್ಯಕ್ಕೂ ಇತಿಮಿತಿಯಿಲ್ಲ. ಹಾಗೆಯೇ ತಮ್ಮದೊಂದು ಹಾಸ್ಯ ಚಿತ್ರ ಎಂದುಕೊಂಡ ನಿರ್ದೇಶಕರು ನಗಿಸಲು ಏನೇನೆಲ್ಲಾ ಮಾಡಿದ್ದರೂ ಅದು ನಗೆಯುಕ್ಕಿಸದೆ ಕೆಲವೊಮ್ಮೆ ನಿರ್ದೇಶಕರ ಮೇಲೆ ಕರುಣೆಯನ್ನೂ ಕೆಲವೊಮ್ಮೆ ಕೋಪವನ್ನೂ ಉಕ್ಕಿಸದೆ ಇರದು.
ಅದರಲ್ಲೂ ಹಾಸ್ಯಮಯ ಚಿತ್ರ ಎಂದಾಗ ಚುರುಕಾದ ಸಂಭಾಷಣೆಯೇ ಜೀವಾಳವಾಗುತ್ತದೆ. ಚಿತ್ರದ ಕತೆ ಹಳ್ಳಿಯಲ್ಲಿ ನಡೆದರಂತೂ ಆ ಸೊಗಡಿನ ಜಾನಪದ ಮಾತುಗಳು ಇನ್ನಷ್ಟು ಮುದ ಕೊಡದೇ ಇರದು. ಆದರೆ ಇಲ್ಲಿ ಮಾತುಗಳು ಮಾತುಗಳಾಗಿವೆ ಅಷ್ಟೇ. ಚುರುಕು, ಬುದ್ದಿವಂತಿಕೆಯ ಮಾತುಗಳು ಇಲ್ಲದೆ ಇರುವುದೇ ಚಿತ್ರದ ಮುಖ್ಯ ಋಣಾತ್ಮಕ ಅಂಶ.
ಚಿತ್ರದಲ್ಲಿ ಸಾಧು ದೊಡ್ಡಣ್ಣ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದರಾದರೂ ಅವರ ಪಾತ್ರಗಳಲ್ಲಿ ಅಂತಹ ಹುರುಳಿಲ್ಲ..ನಾಯಕನಾಗಿ ಅಭಿನಯಿಸಿರುವ ಗುರು ಪಾತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರೆ. ಉಳಿದ ತಾರಾಗಣ ಆರಕ್ಕೇರದೆ ಮೂರಕ್ಕಿಳಿಯದನ್ತಿವೆ.

ಕಾಮಿಡಿ. ಲವ್, ಸೆಂಟಿಮೆಂಟ್ ಹೀಗೆ ಎಲ್ಲವನ್ನೂ ಒಂದೇ ಚಿತ್ರದಲ್ಲಿ ತುಂಬಿ ಪಕ್ಕಾ ಮನರಂಜನೆ ಕೊಡಬೇಕೆಂದುಕೊಂಡಿದ್ದಾರೆ ನಿರ್ದೇಶಕರು. ಆದರೆ ಎಲ್ಲವನ್ನೂ ಹದವಾಗಿ ಬೆರೆಸಿ ಪಕ್ವವಾಗಿಸುವಲ್ಲಿ ಸೋತಿದ್ದಾರೆ. ಹಾಗಾಗಿ ಚಿತ್ರ ಯಾವ ಗುಂಪಿಗೂ ಸೇರದ ಚಿತ್ರವಾಗಿ ಬಿಟ್ಟಿದೆ.

143:

ಕನ್ನಡದಲ್ಲಿ ಯಶಸ್ಸು ಒಳ್ಳೆಯ ಕತೆಗಳ ಚಿತ್ರಗಳು ವಿರಳವಾದರೂ ಆಗಾಗ ಪ್ರಯೋಗಾತ್ಮಕ ಚಿತ್ರಗಳಂತೂ ಬರುತ್ತಲೇ ಇರುತ್ತವೆ. 143 ಎನ್ನುವ ಸಂಖ್ಯೆಯನ್ನೇ ಶೀರ್ಷಿಕೆಯನ್ನಾಗಿ ಹೊಂದಿರುವ  ಈ ಚಿತ್ರ ಪ್ರಯೋಗಾತ್ಮಕ ಎನ್ನಲು ಕಾರಣಗಳಿವೆ. ಮಾಮೂಲಿ ಗಾಂಧಿನಗರದ ಅಥವಾ ಒಂದು ಮಾಮೂಲಿ ಚಿತ್ರದ ಸಿದ್ಧಸೂತ್ರಗಳನ್ನು ಗಾಳಿಗೆ ತೂರಿ ಕತೆಗೆ ತಕ್ಕ ಸಿನಿಮಾ ಮಾಡಿರುವುದು ಅದರಲ್ಲಿ ಪ್ರಮುಖ ಕಾರಣ ಎನ್ನಬಹುದು.
ಈ ಹಿಂದೆ ಬರಗೂರು ರಾಮಚಂದ್ರಪ್ಪ ಒಂದೇ ಪಾತ್ರವನ್ನಿಟ್ಟುಕೊಂಡು ಶಾಂತಿ ಎನ್ನುವ ಸಿನಿಮಾ ಮಾಡಿದ್ದರು. ಅನಂತರ ಕೆಲವೇ ಕೆಲವು ಪಾತ್ರಗಳ ಹಲವಾರು ಚಿತ್ರಗಳು ಬಂದು ಹೋಗಿವೆ. 143 ಚಿತ್ರದಲ್ಲಿ ಎರಡೇ ಪಾತ್ರಗಳು. ನಾಯಕ ನಾಯಕಿ ಇಬ್ಬರೇ ಚಿತ್ರದುದ್ದಕ್ಕೂ ಇರುತ್ತಾರೆ. ಅವರ ಸುತ್ತವೆ ಕತೆ ನಡೆಯುತ್ತದೆ. ಆ ನಿಟ್ಟಿನಲ್ಲಿ ನಟ ನಿರ್ದೇಶಕ ಚಂದ್ರ ಕಾಂತ ಅಭಿನಂದನಾರ್ಹರು.
ಚಿತ್ರದ ನಾಯಕ ಕಾರ್ ಮೆಕ್ಯಾನಿಕ್. ಅವನ ಗ್ಯಾರೇಜಿನಲ್ಲಿ ಕಾರುಗಳ ಜೊತೆಯೇ ಅವನ ವಾಸ. ಆ ಊರಿನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಒಬ್ಬನೇ ಗುಮ್ಮಗೆ ಇಡೀ ದಿನ ಕಳೆದುಬಿಡಬೇಕು ಎಂದು ಕೊಂಡ ಕನಸುಗಾರ ನಾಯಕನಿಗೆ ಅದು ಸಾಧ್ಯವಾಗುವುದಿಲ್ಲ. ಅಲ್ಲಿಗೊಬ್ಬಳು ಪರದೆ ಮರೆಯ ಹುಡುಗಿ ಎಂಟ್ರಿ. ಅವಳು ಕನಸು ಕೆಡಿಸಲು ಬಂದಳೋ ಕನಸು ಬಿಟ್ಟಳು ಬಂದಳೋ.. ಇಬ್ಬರೇ ಅಲ್ಲಿ ಇಡೀ ದಿನ ಕಳೆಯಬೇಕು. ಹಾಗಾಗಿ ಬೇಸರವಾದಾಗ ಮಾತು.. ಮಾತು.. ಮಾತು. ಇರುವಷ್ಟು ಜಾಗದಲ್ಲಿ ಇನ್ನೇನು ಮಾಡಲು ಸಾಧ್ಯ..?ಮಾತಾಡುತ್ತಾ ಮಾತಾಡುತ್ತಾ ಲವ್.. ಅಲ್ಲೇ ಸಾಂಗು...
ಇಬ್ಬರೇ ಕಲಾವಿದರ ಚಿತ್ರ ಎಂದಾಗ ಅದರ ಕತೆ ಚಿತ್ರಕತೆ ಶಕ್ತವಾಗಿರಲೇ ಬೇಕು. ಅದರಲ್ಲೂ ಒಂದೇ ಸ್ಥಳದಲ್ಲಿ ಚಿತ್ರವಿಡೀ ತೆರೆದುಕೊಂಡು ಅಲ್ಲೇ ಮುಗಿದುಹೋದರಂತೂ ಬೇಸರವಾಗದಂತೆ ಮಾಡಲು ಚಿತ್ರದ ಪ್ರತಿ ದೃಶ್ಯದಲ್ಲೂ ಏನಾದರೂ ಅಂಶ ಇರಲೇಬೇಕು. ನಿರ್ದೇಶಕ ಚಂದ್ರಕಾಂತ್ ಆ ನಿಟ್ಟಿನಲ್ಲಿ ಸಂಪೂರ್ಣ ಯಶಸ್ವಿಯಾಗದೆ ಇದ್ದರೂ ತೀರಾ ಸೋತು ಹೋಗಿಲ್ಲ.
ಎರಡೇ ಎರಡು ಪಾತ್ರಗಳು ಶಕ್ತಿ ಮೀರಿ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡಿದೆ. ಆ ಸನ್ನಿವೇಶಗಳನ್ನು ಅದಕ್ಕೆ ಬೇಕಾದ ಚುರುಕು ಸಂಭಾಷಣೆಯನ್ನು ಚಂದ್ರಕಾಂತ್ ಕಲ್ಪಿಸಿಕೊಟ್ಟಿದ್ದಾರೆ. ಕೆಲವು ಮಾತುಗಳು ದ್ವಂದ್ವಾರ್ಥ ಎನಿಸುತ್ತವೆ. ಕೆಲವು ವಾಸ್ತವದಿಂದ ದೂರ ಎನಿಸುತ್ತವೆ. ಇನ್ನೂ ಕೆಲವು ಯಾರಾದರೂ ಯಾಕೆ ಹೀಗೆ ಮಾತನಾಡುತ್ತಾರೆ ಎನಿಸುತ್ತವೆ. ಹಾಗೆಯೇ ಚಿತ್ರದ ಕತೆಯೂ ಪ್ರಾರಂಭದಲ್ಲಿ ಏನೋ ಕುತೂಹಲ ಕೆರಳಿಸಿದರೆ ಬರುಬರುತ್ತಾ ಸ್ವಲ್ಪ ಅಲ್ಲಲ್ಲೇ ತಿರುಗಿ ಇದು ಇಷ್ಟೇನಾ ಎನಿಸುವಂತೆ ಮಾಡುತ್ತದೆ. ಹಾಗೆಯೇ ಕೆಲವು ಕಡೆ ತೀರಾ ಎಳೆದಂತೆ ಭಾಸವಾಗುತ್ತದೆ. ಆದರೆ ಅದೆಲ್ಲವನ್ನೂ ಮರೆಸುವಂತೆ ಚಂದ್ರಕಾಂತ್ ಪ್ರತಿಯೊಂದು ಫ್ರೇಮನ್ನೂ ಚಂದಕಾಣಿಸಲು ಪ್ರಯತ್ನಿಸಿದ್ದಾರೆ. ಬೋರಾಗುತ್ತದೆ ಎಂದಾಗ ಹಾಡುಗಳನ್ನು ಸೇರಿಸಿ ಅದನ್ನು ಸುಂದರವಾಗಿ ಚಿತ್ರಿಸಿ ಅದನ್ನು ಮರೆಸಲು ಪ್ರಯತ್ನಿಸಿದ್ದಾರೆ. ಎಲ್ಲವೂ ಓಕೆ ಎನಿಸಿದರೂ ಏನೋ ಕೊರತೆ ಎನಿಸುತ್ತದೆ.
ಇದು ಚಂದ್ರಕಾಂತ್ ಅವರ ಮೊದಲ ಚಿತ್ರ. ಕತೆ ಚಿತ್ರಕತೆ ಸಂಭಾಷಣೆ, ಸಾಹಿತ್ಯ ನಿರ್ಮಾಣ ನಟನೆ ಹೀಗೆ ಚಿತ್ರದ ಪ್ರಮುಖ ವಿಭಾಗಗಳನ್ನು ತಮ್ಮ ಹೆಗಲ ಮೇಲೆ  ಹೊತ್ತು ಕೊಂಡಿದ್ದಾರೆ. ಅದೆಲ್ಲದ್ದಕ್ಕೂ ನ್ಯಾಯ ಒದಗಿಸಲು ಒದ್ದಾಡಿದ್ದಾರೆ. ಕತೆಯಲ್ಲಿ ಇನ್ನಷ್ಟು ತಿರುವು ಗಳಿದ್ದರೆ, ಮತ್ತು ದೃಶ್ಯ ರಚನೆಯಲ್ಲಿ ಒಂದಷ್ಟು ಹೊಸತನ ತೋರಿದ್ದರೆ ಚಿತ್ರ ಕನ್ನಡಕ್ಕೆ ಒಂದೊಳ್ಳೆ ಪ್ರಯೋಗಾತ್ಮಕ ಮನರಂಜನಾ ಚಿತ್ರವಾಗುತ್ತಿತ್ತೇನೋ? ಆದರೂ ಚಂದ್ರಕಾಂತ್ ಅವರ ಪ್ರಯತ್ನಕ್ಕೆ ಒಮ್ಮೆ ಶಹಬ್ಬಾಸ್ ಹೇಳಲೇ ಬೇಕಾಗುತ್ತದೆ.

ನಾಯಕಿಯಾಗಿ ನಟಿಸಿರುವ ಕವಿತಾ ಬಿಸ್ತ್ ಅವರ ಅಭಿನಯಕ್ಕೆ ಮೊದಲಾರ್ಧದಲ್ಲಿ ಅವಕಾಶವಿಲ್ಲ. ಕಾರಣ ಬುರ್ಖಾದ ಹಿಂದೆಯೇ ಮಾತಾಡಬೇಕಾದ ಅನಿವಾರ್ಯತೆ. ವಿನು ಮನಸು ಸಂಗೀತ ಮತ್ತು ರಾಜಶೇಖರ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.ಒಂದಷ್ಟು ಸಹಿಸಿಕೊಂಡರೆ ಚಂದ್ರಕಾಂತ್ ಪ್ರಯತ್ನವನ್ನೊಮ್ಮೆ ನೋಡಬಹುದು.