Pages

Saturday, December 6, 2014

ಸಾಫ್ಟ್ ವೇರ್ ಗಂಡ:

ಜಗ್ಗೇಶ್ ಎಂದಾಕ್ಷಣ ನಗಬಹುದು ಎನಿಸುತ್ತದೆ.  ಅದರಾಚೆಗೂ ಏನೋ ಇದೆ ಎನಿಸಿದ್ದು ಅವರ ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳಲ್ಲಿ. ಆದರೆ ಅವರ ಸಹಜಾಭಿನಯ ಹಾಸ್ಯವನ್ನು ಸಿನಿಮಾಕ್ಕೆ ಅಳವಡಿಸಿಕೊಂಡವರು ಕಡಿಮೆ. ಈ ಚಿತ್ರವೂ ಹಾಗೆಯೆ ಆಗಿರುವುದು ವಿಷಾದನೀಯ. ಇದು ಹೇಳಿ ಕೇಳಿ ರಿಮೇಕ್ ಚಿತ್ರ. ಹಾಗಾಗಿ ಕತೆಯ ಬಗ್ಗೆ ಮಾತನಾಡುವುದಕ್ಕಿಂತ ಅದನ್ನು ಆಯ್ಕೆ ಮಾಡಿಕೊಂಡ ನಿರ್ದೇಶಕರೇ ಇದರ ಆಗುಹೋಗುಗಳಿಗೆ ಕಾರಣ ಕರ್ತರು.
ಸಾಫ್ಟ್ವೇರ್ ಇಲ್ಲ ಬದಲಿಗೆ ಬರೀ ಗಂಡನಿರುವ ಚಿತ್ರದ ಕತೆಯಲ್ಲಿ ನಗುವಿಲ್ಲ. ಈಗಾಗಲೇ ರೆಡಿಮೇಡ್ ಗಂಡನನ್ನು ನೋಡಿದವರಿಗೆ ಸಾಫ್ಟ್ ವೇರ್ ಗಂಡ ಬೇರೆಯವನು ಎನಿಸುವುದಿಲ್ಲ. ನಾಟಕದ ಗಂಡ, ಆಡಿಸುವ ಹೆಂಡತಿ ನಾಟಕವಾಡಲು ಹೋಗಿ ಪ್ರೀತಿಗೆ ಬೀಳುವುದು ಇದೆಲ್ಲಾ ಸಿನೆಮಾಗಳಲ್ಲಿ ಕಾಮನ್ನು ಕಣ್ರೀ ಎನ್ನುವವರಾದರೆ ಈ ಫಿಲ್ಮು ಕಾಮನ್ನು ಎಂದುಕೊಂಡು ಸುಮ್ಮನಿದ್ದು ಬಿಡಬಹುದು.
ಮಲಯಾಳಂ ನಲ್ಲಿ ದೃಶ್ಯಂ ಖ್ಯಾತಿಯ ಜೀತು ಜೋಸೆಫ್ ನಿರ್ದೇಶನದ ಹಾಸ್ಯ ಚಿತ್ರ ಮೈ ಬಾಸ್. ಇಂಗ್ಲಿಷಿನ ಪ್ರಪೋಸಲ್ ಚಿತ್ರಕ್ಕೆ ಭಾರತೀಯ ಲೇಪನ ಕೊಟ್ಟಿದ್ದರು ಜೀತು ಜೋಸೆಪ್.  ಅದನ್ನು ನಿಷ್ಠೆಯಿಂದ ಕನ್ನಡೀಕರಿಸಿರುವ ನಿರ್ದೇಶಕರ ಪ್ರತಿಭೆ ಅವರ ನಕಲು ಮಾಡುವಿಕೆಯಲ್ಲಿ ಅಡಗಿದೆ.  ಮಾಡಿಕೊಳ್ಳಬಹುದಾದ ಬದಲಾವಣೆಯನ್ನು ಮಾಡಿಕೊಳ್ಳದೆ ಎರಡು ವರ್ಷದ ಹಿಂದಿನ ಸಿನೆಮಾವನ್ನು ಎರಡು ವರ್ಷ ಹಿಂದೆ ಹೋಗಿಯೇ ನಿರ್ದೇಶನ ಮಾಡಿರುವುದು ಅವರ ಕೌಶಲ್ಯಕ್ಕೆ ಸಾಕ್ಷಿ. ಮೊದಲಾರ್ಧದಲ್ಲಿ ಸತ್ವವಿಲ್ಲ. ಇರುವ ಕಾಮಿಡಿಯಲ್ಲಿ ನಗಿಸುವ ಶಕ್ತಿಯಿಲ್ಲ. ಏನೂ ಇಲ್ಲದೆಯೇ ಮೊದಲಾರ್ಧ ಅಂತ್ಯ ಕಾಣುತ್ತದೆ. ದ್ವಿತೀಯಾರ್ಧದಲ್ಲಿ  ಒಂದಷ್ಟು ಗಂಭೀರತೆ ಇದೆ. ಅಲ್ಲಲ್ಲಿ ಹಾಸ್ಯ ನುಸುಳುವ ಪ್ರಯತ್ನ ಮಾಡುತ್ತದಾದರೂ ಅದು ಯಶಸ್ವಿಯಾಗುವುದಿಲ್ಲ. ಹಾಗಾಗಿ ಇಡೀ ಚಿತ್ರ ಹಾಸ್ಯ ಚಿತ್ರವೇ ಎನ್ನುವ ಅನುಮಾನ ಹುಟ್ಟಿಸುವಲ್ಲಿ ಯಶಸ್ವಿಯಾಗುವುದರಿಂದ ಇದೊಂದು ಅನುಮಾನಾಸ್ಪದ ಚಿತ್ರ ಎನ್ನಬಹುದೇನೋ?
ಇಲ್ಲಿ ಜಗ್ಗೇಶ್ ನಗಿಸಲು ಪ್ರಯತ್ನಿಸಿದ್ದಾರೆ. ಹಾಗೆಯೇ ಸಿನಿಮಾವನ್ನು ಹೆಗಲ ಮೇಲೆತ್ತಿಕೊಂಡು ಸಾಗಲು ಶತಪ್ರಯತ್ನ ಪಟ್ಟಿದ್ದಾರೆ. ತಮ್ಮ ವಿಶಿಷ್ಟ ಹಾವಭಾವದಿಂದ ಗಮನ ಸಳೆಯಲು ಪ್ರಯತ್ನಿಸಿದ್ದಾರೆ. ಆದರೆ ಅದಷ್ಟೇ ಚಿತ್ರಕ್ಕೆ ಸಾಲುವುದಿಲ್ಲವಲ್ಲ. ಒಂದು ಗಟ್ಟಿಯಾದ ಕತೆ ಅದಕ್ಕೊಪ್ಪುವ ಚಿತ್ರಕತೆ ಬೇಕೇ ಬೇಕಲ್ಲ. ಸಾಫ್ಟವೇರ್ ಗಂಡ ಚಿತ್ರದಲ್ಲಿ ಕಾಣೆಯಾಗಿರುವುದು ಅದೇ. ಏನೂ ವಿಶೇಷವೆ ಇಲ್ಲದ ಸಾದಾರಣ ಅತಿ ಸಾದಾರಣ ಚಿತ್ರವಾಗಿರುವ ಚಿತ್ರದಲ್ಲಿ  ಮೆಚ್ಚಿಕೊಳ್ಳುವ ಅಂಶಗಳು ಇಲ್ಲ.
ನಾಯಕ ನಾಯಕಿ ಸಿಕ್ಕರು, ಅಥವಾ ನಿರ್ಮಾಪಕ ಸಿಕ್ಕರು ಎನ್ನುವ ಒಂದೇ ಕಾರಣಕ್ಕೆ ಚಿತ್ರ ಮಾಡಿದರೆ ಇಂತಹ ಚಿತ್ರವಾಗಬಹುದು. ಯಾವುದೇ ವಿಶೇಷ, ಮನರಂಜನೆ ಇಲ್ಲದ ಸವಕಲು ಕತೆಯನ್ನೇ ಮತ್ತೆ ಮತ್ತೆ ಸವಕಲಾಗಿಸುವ ಧೈರ್ಯ ಹೇಗೆ ಬರುತ್ತದೆ ಎಂಬುದು ನಿರ್ದೇಶಕರಿಗೆ ನೇರ ಪ್ರಶ್ನೆ. ಒಟ್ಟಿನಲ್ಲಿ ನಗಲಾರದ ಅಳಲಾರದ ಹಾಗೆ ಬಂದು ಹೀಗೆ ಹೋಗುವ ಚಿತ್ರವಿದು.

ತಾಂತ್ರಿಕ ಅಂಶಗಳಲ್ಲಿ ಹೇಳಿಕೊಳ್ಳುವುದಿಲ್ಲ. ಹಾಡು ಕುಣಿತ ಮುಂತಾದವುಗಳು ಚಿತ್ರದಲ್ಲಿವೆ ಎಂದಷ್ಟೇ ಹೇಳಬಹುದು. ಕಲಾವಿದರುಗಳು ಕತೆಯ ತಾಳಕ್ಕೆ ಕುಣಿಯುವುದರಿಂದ ಕತೆಯೇ ಸರ್ವ ಹೀನ ಅನಿಸುವುದರಿಂದ ಕಲಾವಿದರ ಮೇಲೆ ಆರೋಪ ಮೆಚ್ಚುಗೆ ತೆಗಳಿಕೆ ಸಲ್ಲ.

ಗೋಲ್ ಗುಂಬಜ್:

ಈ ಚಿತ್ರದ ಮೂಲಕ ನಿರ್ದೇಶಕರು ಏನನ್ನು ಹೇಳಲು ಹೊರಟಿದ್ದಾರೆ ಎಂಬ ಯಕ್ಷ ಪ್ರಶ್ನೆ ಚಿತ್ರ ಪ್ರಾರಂಭವಾದಾಗಿನಿಂದ ಪ್ರೇಕ್ಷಕನಿಗೆ ಕಾಡುವುದರಿಂದ ಇದನ್ನು ಕಾಡುವ ಸಿನಿಮಾಗಳ ಲಿಸ್ಟಿಗೆ ಸೇರಿಸಬಹುದು. ಹಾಗೆಯೇ ಚಿತ್ರಮಂದಿರಕ್ಕೆ ಹೋದಮೇಲೆ ಚಾನೆಲ್ಲು ಬದಲಿಸಲಾಗುವುದಿಲ್ಲವಾದ್ದರಿಂದ ಮತ್ತು ಈ ಚಿತ್ರವನ್ನೇ ನೋಡಬೇಕಾದ್ದರಿಂದ ಈ ಚಿತ್ರವನ್ನು ನೋಡಲೇ ಬೇಕಾದ ಚಿತ್ರ ಎನ್ನಬಹುದು. ಹಾಗೆಯೇ ಚಿತ್ರದ ನಾಯಕ ಕುಡಿದು ತೂರಾಡುವುದಕ್ಕೆ ದೇವದಾಸನನ್ನು ನೆನಪಿಸಿಕೊಳ್ಳಬಹುದು ಅಥವಾ ಚಿತ್ರದಲ್ಲೊಂದು ಸಾಮಾಜಿಕ ಅನ್ಶವಿರುವುದರಿಂದ ಸಾಮಾಜಿಕ ಕಳಕಳಿಯ ಚಿತ್ರ ಎನ್ನಲೂ ಬಹುದು. ಹಾಗಾದರೆ ಈ ಎಲ್ಲಾ ಅಂಶಗಳನ್ನು ಹೊಂದಿರುವ ಈ ಚಿತ್ರವನ್ನು ಏನನ್ನಬಹುದು ಎಂದರೆ ಏನೂ ಅನ್ನದಿರುವುದೇ ವಾಸಿ ಎನ್ನಬಹುದು.
ನಟ ನಿರ್ದೇಶಕ ಧನುಶ್ ಅದೇಕೆ ಅಷ್ಟೂ ಜವಾಬ್ದಾರಿಗಳನ್ನು ಮೈಮೇಲೆ ಎಳೆದುಕೊಂಡರು ಎಂಬುದನ್ನು ಅವರನ್ನೇ ಕೇಳಬಹುದು. ಏಕೆಂದರೆ ಕನಿಷ್ಠ ಸಿನಿಮಾ ಬಗೆಗಿನ ಜ್ಞಾನ ವಿದ್ದರೂ ಈವತ್ತಿನ ಕನ್ನಡ ಚಿತ್ರರಂಗದ ಸ್ಥಿತಿಗತಿಯ ಅರಿವಿದ್ದರೂ ಇಂತಹ ಚಿತ್ರವನ್ನು ನಿರ್ದೇಶನ ಮಾಡಲಾಗದು. ಏಕ ಮುಖ ಚಿಂತನೆ ಇದ್ದಾಗ ಮಾತ್ರ ಇಂತಹ ಚಿತ್ರ ಸಾಧ್ಯ. ಧನುಶ್ ಅವರದು ಇಲ್ಲಿ ನಾಯಕನ ಪಾತ್ರ. ವಾಹಿನಿಯಲ್ಲಿ ಕೆಲಸ ಮಾಡುತ್ತಾರೆ. ನೋ ಟೈಮ್ ಎನ್ನುವ ರೀತಿಯಲ್ಲಿ ಪ್ರೀತಿಗೆ ಬೀಳುತ್ತಾರೆ. ಆದರೆ ಮಾಡಿದ್ದುಣ್ಣೋ ಮಾರಾಯಾ ಎಂಬಂತೆ ಅವರು ಮಾಡಿದ್ದನ್ನು ಉಣ್ಣಬೇಕಾಗುತ್ತದೆ. ಆದರೆ ಧನುಶ್ ತಾವು ಮಾಡಿದ್ದನ್ನು ತಮ್ಮ ಪತ್ನಿಗೂ ಉಣಬಡಿಸುತ್ತಾರೆ, ಆಮೇಲೆ ಪ್ರೇಕ್ಷಕರಿಗೂ ಬಡಿಸುತ್ತಾರೆ. ಆದರೂ ತಾವೊಬ್ಬ ತ್ಯಾಗಮಯಿ ಎನ್ನುವ ಪೋಸ್ ಕೊಡುತ್ತಾರೆ.
ಕತೆ ಚಿತ್ರಕತೆ ಸಂಭಾಷಣೆ ಮೂರು ವಿಭಾಗಗಳೂ ಸೊರಗಿವೆ. ಒಂದು ಸ್ಪಷ್ಟತೆ ಕುಶಲತೆ ಎರಡೂ ಇಲ್ಲದ ಕತೆ ಚಿತ್ರಕತೆಯಲ್ಲಿ ಕನಿಷ್ಠ ಮನರಂಜನೆಯ ಅಂಶವೂ ಇಲ್ಲವಾಗಿದೆ. ಕಿರುಚುವುದೇ ಅಭಿನಯ, ಅಳಿಸುವುದೇ ಕತೆ ಎಂದುಕೊಂಡಿದ್ದಾರೆ ನಯಾಕ ನಿರ್ದೇಶಕ ಧನುಶ್. ಹಾಗಾಗಿಯೇ ಚಿತ್ರದುದ್ದಕ್ಕೂ ಕಿರುಚಿ ಕುಡಿಯುತ್ತಾರೆ. ನಾಯಕಿ ಅಳುತ್ತಾಳೆ.
ಪ್ರೇಕ್ಷಕನಿಗೆ ಬೇರೆ ಯಾವ ಆಯ್ಕೆಯೂ ಇಲ್ಲದೆ ಮಲಗುತ್ತಾನೆ.

ಒಂದು ಸಿನಿಮಾದ ಎಳೆಯನ್ನು ಕಲ್ಪಿಸಿಕೊಂಡಾಗ ಅದು ವಿಭಿನ್ನ ಅಥವಾ ಪ್ರಾಮಿಸಿಂಗ್ ಎನಿಸಬಹುದು. ಆದರೆ ಅದನ್ನು ಎರಡೂವರೆ ಗಂಟೆಗಳ ದೃಶ್ಯ ಕಾವ್ಯವನ್ನಾಗಿಸುವಾಗ ಅದಕ್ಕೆ ಪ್ರೌಢಿಮೆ ಪ್ರತಿಭೆ ಇಷ್ಟೇ ಸಾಲದು. ಸಿನೆಮಾದ ಒಳನೋಟ ಹೊರ ನೋಟ ಎರಡೂ ಗೊತ್ತಿರಬೇಕಾಗುತ್ತದೆ. ಅಷ್ಟೇ ಅಲ್ಲ. ಚಿತ್ರಕರ್ಮಿ ಸ್ವತಃ ಪ್ರೇಕ್ಷಕನಾಗಿರಬೇಕಾಗುತ್ತದೆ. ಒಂದಷ್ಟು ಸಿನಿಮಾಗಳನ್ನೂ ನೋಡುವ ಅದರ ಬಗ್ಗೆ ಚಿಂತಿಸುವ ಜನರು ಆ ಯಾ ಚಿತ್ರಗಳಿಗೆ ಪ್ರತಿಕ್ರಿಯಿಸಿದ ಪರಿಯನ್ನು ಅದ್ಯಯನ ಮಾಡಬೇಕಾಗುತ್ತದೆ. ಆನಂತರವೇ ಸಿನಿಮಾದ ಕತೆಯ ಚಿತ್ರಕತೆಯ ಹೆಣಿಗೆಗೆ ಕುಳಿತರೆ ಚಿತ್ರ ಸಮಾಧಾನಕರ ಎನಿಸಿಕೊಳ್ಳಬಹುದು. ಅದಲ್ಲದೆ ಹೇಳಿದ್ದೆ ಕತೆ, ಮಾಡಿದ್ದೆ ಸಿನೆಮಾ ಎಂಬ ಮನೋಭಾವದಲ್ಲಿ ಚಿತ್ರ ನಿರ್ದೇಶನ ಮಾಡಿದರೆ ಯಾವ ಪಟ್ಟಿಗೂ ಸೇರದ ಹಣ, ಸಮಯ ವ್ಯರ್ಥ ಎನ್ನುವುದನ್ನು ನಮ್ಮ ಚಿತ್ರಕರ್ಮಿಗಳು ಅರ್ಥ ಮಾಡಿಕೊಳ್ಳದಿದ್ದರೆ ಇನ್ನಷ್ಟು ಇಂತಹ ಚಿತ್ರಗಳು ತಯಾರಾಗುತ್ತವೆ ಅಷ್ಟೇ.

ಹೊಸಬರ ಚಿತ್ರ ಎಂದಾಗ ನಿರೀಕ್ಷೆ ಸಹಜ. ಹಾಗಂತ ಸಾಯಿ ಚಿತ್ರರಂಗಕ್ಕೆ ಹೊಸಬರಲ್ಲ. ಪ್ರಚಾರ ವಿನ್ಯಾಸಕರಾಗಿ ಅವರದು ದೊಡ್ಡ ಎಹ್ಸರು. ಅವರು ನಿರ್ದೇಶನ ಮಾಡುತ್ತೇನೆ ಎಂದಾಗ, ಚಿತ್ರದ ಹೆಸರು ಕ ಎಂದಾಗ ಹೊಸ ಕಲಾವಿದರನ್ನೇ ಮುಖ್ಯ ಭೂಮಿಕೆಯಲ್ಲಿರಿಸಿಕೊಂಡಾಗ ಒಂದು ಕುತೂಹಲವಿತ್ತು. ಆದರೆ ಚಿತ್ರ ನೋಡಿದ ಮೇಲೆ ಒಂದು ಮತ್ತಗಿನ ನಿರಾಸೆ ಉಂಟಾಗುವುದು ಖಂಡಿತ.
ಸಾಯಿ ಮೊದಲ ಚಿತ್ರಕ್ಕೆ ಒಂದೇ ಕತೆಯನ್ನು ಪ್ರೀತಿಯನ್ನು ಅದರ ವಿವಿಧ ಮಜಲುಗಳನ್ನು ವ್ಯಾಖ್ಯಾನಿಸುವ ಹಲವಾರು ಕತೆಗಳನ್ನು ಒಗ್ಗೂಡಿಸಿದ್ದಾರೆ. ಪ್ರೇಮಿಗಳ ದಿನದಂದು ಅವರೆಲ್ಲರ ಕತೆಯನ್ನು ಚಿತ್ರವಾಗಿಸಿದ್ದಾರೆ. ಗ್ಯಾರಿ ಮಾರ್ಷಲ್ ನಿರ್ದೇಶನದ ವ್ಯಾಲೆಂಟೈನ್ ಸ್ ಡೇ ಚಿತ್ರದ ಕತೆಯನ್ನು ಕನ್ನಡೀಕರಿಸಿದ್ದಾರೆ. ಒಂದಷ್ಟು ಜೋಡಿಗಳನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಎಲ್ಲಾ ಸರಿ ಆದರೆ ಚಿತ್ರ ಪರಿಣಾಮಕಾರಿಯಾಗಿದೆಯಾ?
ಹಾಲಿವುಡ್ ನಲ್ಲಿ ಒಂದಷ್ಟು ಇಂತಹ ಸಿನಿಮಾಗಳು ಬರುತ್ತವೆ. ಅಲ್ಲಿನ ಭಾವ ತೀವ್ರತೆ ಮತ್ತು ನಮ್ಮಲ್ಲಿನ ಭಾವ ತೀವ್ರತೆಗೆ ವ್ಯತ್ಯಾಸವಿದೆ. ಹಾಗಾಗಿಯೇ ಅಲ್ಲಿ ಪರಿಣಾಮಕಾರಿ ಎನಿಸಿದ್ದು ನಮ್ಮ ನೆಲದಲ್ಲಿ ಸಡಿಲ ಎನಿಸುವುದು ಸಹಜ. ಲವ್ ಅಕ್ಚುವಲ್ಲಿ ಚಿತ್ರವನ್ನು ಸಲಾಮೆ ಇಷ್ಕ್ ಮಾಡಿ ದೊಡ್ಡ ಸೋಲು ಕಂಡಿದ್ದರು ಬಾಲಿವುಡಿಗರು. ಹಾಗಾಗಿ ಇಂತಹ ಹಲವಾರು ಕಥೆಗಳ ಸಂಪುಟವನ್ನು ಸಿನಿಮಾ ಮಾಡುವಾಗ ಪ್ರತಿ ಕತೆಯನ್ನು ಜೋಡಿಸುವ ಅದನ್ನು ಜನರ ಮುಂದಿಡುವ ಕುಶಲತೆ ಸುಲಭ ಸಾಧ್ಯವಲ್ಲ. ಸಾಯಿ ಮೊದಲ ಚಿತ್ರದಲ್ಲಿಯೇ ಅದಕ್ಕೆ ಕೈ ಹಾಕಿದ್ದಾರೆ. ಆದರೆ ಚಿತ್ರದ ಯಾವ ಕತೆಯೂ ಮನಸ್ಸಿಗೆ ತಾಟುವುದಕ್ಕೆ ಸುಸ್ತು ಹೊಡೆಯುತ್ತವೆ. ಅದಕ್ಕೆ ಕಾರಣ ಯಾವ ಕತೆಗೂ ಸರಿಯಾದ ನ್ಯಾಯ ಒದಗಿಸಲು ನಿರ್ದೇಶಕರು/ಕತೆಗಾರರು ಒದ್ದಾಡಿರುವುದು.ಪ್ರೀತಿಯ ಮಧುರ ಭಾವವನ್ನಾಗಲಿ, ಅದರ ವಿಷಾದರೂಪವನ್ನಾಗಲಿ ತೋರಿಸುವ ಪ್ರೌಢಿಮೆಯ ಕೊರತೆ ನಿರ್ದೇಶಕರಲ್ಲಿ ಕಾಣುತ್ತದೆ. ಹಾಗಾಗಿಯೇ ಇರುವಷ್ಟು ಕತೆಗಳು, ಘಟನೆಗಳು ಸಾದಾರಣವಾಗಿಬಿಡುತ್ತದೆ.
ಇನ್ನು ಕತೆಯನ್ನು ಒಂದೇ ಸಾಲಿನಲ್ಲಿ ಹೇಳಬಹುದು. ಪ್ರೇಮಿಗಳ ದಿನದಂದು ಪ್ರೇಮಿಗಳು ಪಡುವ ಪಾಡು, ನಿವೇದನೆ, ವಂಚನೆ, ತಿರಸ್ಕಾರ ಪುರಸ್ಕಾರ ಇವೆಲ್ಲವನ್ನೂ ಕತೆಯ ರೂಪಕ್ಕೆ ತರುವಲ್ಲಿ ಗೊಂದಲ ಏರ್ಪಟ್ಟು ಕಲಸು ಮೇಲೋಗರವಾಗಿದೆ. ಎಲ್ಲಾ ಸೇರಿ ಸುಂದರವಾದ ಹೂಗೊಂಚಲಾಗಬೇಕಾದದ್ದು ಚಿಂದಿ ಚಿತ್ರಾನ್ನವಾಗಿಬಿಟ್ಟಿದೆ.
ಪ್ರೀತಿ ಪ್ರೇಮದ ಕತೆಯಲ್ಲಿ ಎಲ್ಲಾ ಭಾವದ ಅಂಶ ಇರುತ್ತದೆ. ಆದರೆ ಅದೆಲ್ಲವನ್ನೂ ಮೀರಿಸುವುದು ನವಿರುತನ. ವಂಚನೆ ಕೂಡ ಅಪ್ಪಟ ಭಾವುಕವಾಗಬಲ್ಲುದು ಎಂಬುದಕ್ಕೆ ದೇವದಾಸ ಚಿತ್ರಗಳು ಉದಾಹರಣೆಯಾಗಿವೆ. ಆದರೆ ನವಿರುತನ, ಭಾವತೀವ್ರತೆ, ಲವಲವಿಕೆ  ಯಾವುದನ್ನೂ ಈ ಚಿತ್ರದಲ್ಲಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.ಅತ್ತ ಸಾಕ್ಷ್ಯ ಚಿತ್ರವೂ ಆಗದ, ಚಲಚಿತ್ರವೂ ಅನಿಸಿಕೊಳ್ಳದ ಮನಮುಟ್ಟದ ಈ ಚಿತ್ರವನ್ನು ಅದರ ನಿರ್ದೇಶಕನನ್ನು ದೂಷಿಸಬೇಕೋ, ಹೊಸ ನಿರ್ದೇಶಕ ಎಂದು ರಿಯಾಯತಿ ಕೊಡಬೇಕೋ ಪ್ರೇಕ್ಷಕರು ನಿರ್ಧರಿಸುತ್ತಾರೆ.

ಒಟ್ಟಾರೆ ಚಿತ್ರವನ್ನು ಹೀಗೀಗೆ ಎಂದು ಹೇಳಿ ಬಿಟ್ಟಾಗ ಬಿಡಿ ಬಿಡಿ ಅಂಶಗಳ ಬಗ್ಗೆ ಮಾತಾಡುವುದಕ್ಕೆ ಆಗುವುದಿಲ್ಲ. ಆದರೂ ಸಂಕಲನವಾಗಲಿ, ಸಂಗೀತವಾಗಲಿ ಎಲ್ಲವೂ ಗೊಂದಲದ್ದಲ್ಲೇ ಇದೆ. ಅಭಿನಯದ ವಿಷಯಕ್ಕೆ ಬಂದರೆ ನಮ್ರತಾ, ವಿಶಾಲ್, ಪಲ್ಲವಿ, ಸುಂದರಶ್ರೀ ಇರುವ ಬಳಗದಲ್ಲಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.