Pages

Saturday, August 2, 2014

ಆರ್ಯನ್:

ಹೆಸರು ಟ್ರೈಲರ್ ಮತ್ತು ಚಿತ್ರದ ಬಗೆಗಿನ ವಿವರಗಳು ಕುತೂಹಲ ಕೆರಳಿಸಿದ್ದವು. ಹಾಗೆಯೇ ಚಿತ್ರವೂ ಒಬ್ಬ ಕ್ರೀಡಾಪಟು ಮತ್ತು ತರಬೇತುದಾರನ ನಡುವಣ ಕತೆ ಎಂದಾಗ ಎಲ್ಲರಲ್ಲೂ ಚೆಕ್ ದೆ ಇಂಡಿಯ ಚಿತ್ರ ಹಾಡು ಹೋಗೆ ಹೋಗುತ್ತದೆ. ಆದರೆ ಆರ್ಯನ್ ನಿರೀಕ್ಷೆ ಮಟ್ಟ ಮುಟ್ಟದೆ ನೀರಸ ಎನಿಸುತ್ತದೆ ಅದಕ್ಕೆ ಕಾರಣವೂ ಇದೆ.
ಚಿತ್ರದಲ್ಲಿ ಸೂಪರ್ ಸ್ಟಾರ್ ಶಿವರಾಜಕುಮಾರ್ ಅಭಿನಯಿಸಿದ್ದಾರೆ. ಕತೆಗಾರ/ನಿರ್ದೇಶಕರು ಚಿತ್ರದಲ್ಲಿ ಆರ್ಯನ್ ಪಾತ್ರವನ್ನು ಬರೀ ಪಾತ್ರವನ್ನಾಗಿಯಷ್ಟೇ ರೂಪಿಸದೆ ಅದರಲ್ಲಿ ಶಿವರಾಜಕುಮಾರ್ ಅವರನ್ನೂ ಆಹ್ವಾನಿಸಿದ್ದಾರೆ. ಹಾಗಾಗಿಯೇ ಇಲ್ಲಿ ಹೀರೋ ಶಿವರಾಜಕುಮಾರ್ ವಿಜೃಂಭಿಸುತ್ತಾರೆ. ಅವರನ್ನು ಹೊಗಳುವ ಕಾರ್ಯ ಪಾತ್ರವನ್ನು ಮೀರಿ ಸಾಗುತ್ತದೆ. ಹಾಗಾಗಿಯೇ ತೆರೆಯ ಮೇಲಿನ ಪಾತ್ರಕ್ಕಿಂತ ತೆರೆಯ ಹಿಂದಿನ ಶಿವರಾಜಕುಮಾರ್ ಹೆಚ್ಚೆಚ್ಚು ಕಾಣಿಸುತ್ತಾ ಹೋಗುತ್ತಾರೆ. ಸಿನಿಮಾದ ಕತೆ ಪರಿಣಾಮಕಳೆದುಕೊಳ್ಳುತ್ತಾ ಸಾಗುತ್ತದೆ. ಆದರೆ ಶಿವಣ್ಣನ ಅಭಿಮಾನಿಗಳನ್ನು ತಕ್ಕ ಮಟ್ಟಿಗೆ ಈ ಶೈಲಿ ರಂಜಿಸುತ್ತದೆ ಎನ್ನಬಹುದು.
ಚಿತ್ರದ ಕತೆ ಕ್ರೀಡಾಪಟು ಮತ್ತು ತರಬೇತುದಾರನಿಗೆ ಸಂಬಂಧ ಪಟ್ಟದ್ದು. ಹಾಗೆಯೇ ಕ್ರೀಡೆಯಲ್ಲಿ ಈವತ್ತು ನಡೆಯುವ ಮೋಸದಾಟ, ಮಾದಕವಸ್ತು ಸೇವನೆ ಮುಂತಾದವುಗಳೂ ಕೂಡ ಚಿತ್ರದ ಮುಖ್ಯ ವಾಹಿನಿಯಲ್ಲಿ ಬರುವ ಅಂಶಗಳು. ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಚಿತ್ರವನ್ನು ಆವರಿಸಿರುವುದು ಪ್ರೇಮಕತೆ. ಓಟಗಾರ್ತಿ ಶ್ವೇತಾ ತನ್ನ ಕೋಚ್ ಗೆ ಮನಸೋಲುತ್ತಾಳೆ. ಇಬ್ಬರ ಪ್ರೀತಿಗೆ ಅದ್ದವಾಗುವ ವ್ಯಕ್ತಿ ಮಾಮೂಲಿನಂತೆ ಶ್ವೇತಾಳ ತಂದೆ. ಅದಕ್ಕಾಗಿ ಆತ ಕೆಲವು ತಂತ್ರಗಳನ್ನು ಹೂಡುತ್ತಾನೆ. ಮುಂದೆ ಏನೇನೋ ಆಗುತ್ತದೆ. ನಾಯಕ ಸೋಲುತ್ತಾನೆ. ಗೆದಿದ್ದ ನಾಯಕಿ ಸೋಲುತ್ತಾಳೆ. ಈಗ ಇಬ್ಬರೂ ಸೇರಿಕೊಂಡು ಗೆಲ್ಲಬೇಕು, ಒಬ್ಬರನ್ನೊಬ್ಬರು ಗೆಲ್ಲಿಸಬೇಕು ಒಂದಾಗಬೇಕು. ಅದ್ರ ನಡುವಣ ಕತೆಯೇ ಆರ್ಯನ್.
ಚಿತ್ರದಲ್ಲಿ ಎಲ್ಲವೂ ಇರಲಿ ಎನ್ನುವ ಮನೋಭಾವ ಚಿತ್ರಕತೆಯಲ್ಲಿ ಕಾಣಿಸುತ್ತದೆ. ಹಾಗಾಗಿಯೇ ನಿರರ್ಥಕ ಸಹ್ಯವಲ್ಲದ ಹಾಸ್ಯ ಮಜಾ ಕೊಡದೆ ಚಿತ್ರಕತೆಯ ಓಟಕ್ಕೆ ಅಡ್ಡಗಾಲು ಹಾಕುತ್ತದೆ. ಹಾಗೆಯೇ ತೀರಾ ಕ್ರೀಡೆಗೆ ಅದರ ಹಿಂದಿನ ಕತೆಗೆ ಹೆಚ್ಚು ಒಟ್ಟು ಕೊಡದ ಚಿತ್ರಕತೆ ಸಿನಿಮಾವನ್ನು ಪ್ರಾರಂಭದಲ್ಲಿ ಆಸಕ್ತಿಕರ ಎನಿಸಿ ಆನಂತರ ಅದೇ ರಾಗ ಅದೇ ಹಾಡು ಎನ್ನುವಂತೆ ಮಾಡುತ್ತದೆ. ಒಂದು ಚಿತ್ರದ ಆಶಯ ಭಾವ ಸ್ಪಷ್ಟವಿಲ್ಲದ ಕಾರಣ ಮತ್ತು ಎಲ್ಲಾ ರೀತಿಯ ಮನರಂಜನಾ ಅಂಶಗಳೂ ಇರಲಿ ಎನ್ನುವ ಮನೋಭಾವ ಚಿತ್ರದ ಉದ್ದಕ್ಕೂ ಎದ್ದು ಕಾಣುತ್ತದೆ. ಹಾಗಾಗಿಯೇ ಚಿತ್ರದಲ್ಲಿ ಹಾಡುಗಳು, ಭಯಾನಕ ಹೊಡೆದಾಟಗಳು, ರಮ್ಯ ಹೊರಾಂಗಣ ವಿದೇಶಿ ಚಿತ್ರನಗಳೂ ಇದ್ದೂ ಏನೋ ಕೊರತೆ ಎದ್ದು ಕಾಣುತ್ತದೆ.

ಶಿವಣ್ಣ ತಮ್ಮ ವಯಸ್ಸನ್ನು ಕಾಣದಂತೆ ಅಭಿನಯಿಸಿದ್ದಾರೆ. ಹೊಡೆದಾಟ, ಹಾಡು ಕುಣಿತ ಎಲ್ಲದರಲ್ಲೂ ನಂಬರ್ ಒನ್ ಎನಿಸಿಕೊಳ್ಳುತ್ತಾರೆ. ಅವರ ಗೆಟ್ ಅಪ್ ಕೂಡ ಸ್ಟೈಲಿಶ್ ಆಗಿದ್ದು ತೆರೆಯ ಮೇಲೆ ಚೆಂದಾಗಿ ಕಾಣಿಸುತ್ತಾರೆ. ರಮ್ಯ ಕೂಡ ತಮ್ಮ ಪಾತ್ರಕ್ಕೆ ಮೋಸ ಮಾಡಿಲ್ಲ. ಉಳಿದಂತೆ ಶರತ್ ಬಾಬು, ಬುಲೆಟ್ ಪ್ರಕಾಶ್ ಮುಂತಾದವರು ತಮ್ಮ ಪಾತ್ರಗಳನ್ನ ತೂಗಿಸಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆ ಇದೆ. ಜೆಸ್ಸಿ ಗಿಫ್ಟ್ ಸಂಗೀತದಲ್ಲಿ ಇಂಪಿಲ್ಲ, ಕಂಪಿಲ್ಲ. ಹಾಗಂತ ತೆಗೆದುಹಾಕುವಂತೆಯೂ ಇಲ್ಲ. 

ಮಿಸ್ ಮಲ್ಲಿಗೆ:

ಅವಳು ಒಂಟಿ ಹೆಣ್ಣು. ಅವಳ ಗಂಡ ಆಕೆಯನ್ನು ಬಿಟ್ಟು ಹೋದಾಗಿನಿಂದ ಆಕೆಗೆ ಇಡೀ ಪುರುಶವರ್ಗದ ಮೇಲೆ ಸದಭಿಪ್ರಾಯವಿಲ್ಲದೆ ಅವರೆಲ್ಲಾ ಸ್ವಾರ್ಥಿಗಳು ಎಂಬ ಭಾವ ಆಳವಾಗಿ ಬೇರೂರಿಬಿಟ್ಟಿದೆ. ಒಂದು ಕ್ರಿಯೇಟಿವ್ ಕಂಪನಿಯಲ್ಲಿ ಕೆಲಸ ಮಾಡುವ ಮಲ್ಲಿಗೆ ನಿರ್ಭಿಡೆಯಿಂದ ಮಾತಾಡುತ್ತಾಳೆ. ಎಗ್ಗು ಸಿಗ್ಗಿಲ್ಲದೆ ಯಾರನ್ನೂ ಗಣನೆಗೆ ತನ್ನಿಷ್ಟ ಬಂದ ಹಾಗೆ ವರ್ತಿಸುತ್ತಾಳೆ. ಅಂತಹವಳ ಬದುಕಿನಲ್ಲಿ ಸೂರ್ಯ ಬರುತ್ತಾನೆ. ಅವಳನ್ನು ಕರಗಿಸುತ್ತಾನೆ, ಅರಳಿಸುತ್ತಾನೆ. ಆಕೆಗೆ ಮತ್ತೆ ಗಂಡಸರ ಮೇಲೆ ಒಳ್ಳೆ ಅಭಿಪ್ರಾಯ ಬರುವಂತೆ ಮಾಡುತ್ತಾನೆ. ಆದರೆ ಅದೆಲ್ಲವನ್ನೂ ತನ್ನ ಸ್ವಾರ್ಥಕ್ಕಾಗಿ ಮಾಡುತ್ತಾನೆ. ಅದು ತಿಳಿದ ಮಲ್ಲಿಗೆ ಮನಸ್ಸು ರೋಸಿಹೋಗುತ್ತದೆ.. ಮುಂದೆ.. ನಾಯಕ ಸೂರ್ಯನಿಂದ ಮಾಡಬಾರದ ತಪ್ಪೊಂದು ನಡೆದುಹೋಗುತ್ತದೆ...
ಚಿತ್ರದ ಕತೆಯ ಆಶಯ ಹೆಣ್ಣಿನ ಮಾನಸಿಕ ತುಮುಲಗಳನ್ನು ಹೇಳುವುದು. ಅದನ್ನು ಶೃಂಗಾರಮಯವಾಗಿ ಹೇಳುವ ಹಾದಿಯನ್ನು ನಿರ್ದೇಶಕ ಕೃಷ್ಣಾ ಆಯ್ದುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಒಂದಷ್ಟು ರೋಮ್ಯಾನ್ಸ್, ಚುಂಬನ ಮುಂತಾದವುಗಳನ್ನು ತೆರೆಯ ಮೇಲೆ ತಂದಿದ್ದಾರೆ.
ಬಾಲಿವುಡ್ ನಲ್ಲಿ ಈ ತರಹದ ಚಿತ್ರಗಳು ಬರುತ್ತಲೇ ಇರುತ್ತವೆ. ದೊಡ್ಡ ದೊಡ್ಡ ನಟರ ಚಿತ್ರಗಳೂ ಚಿಕ್ಕ ಪುಟ್ಟ ಚಿತ್ರಗಳೂ ಅಲ್ಲಿ ಬಂದಿವೆ. ಆದರೆ ಅನುರಾಗ್ ಬಸು ನಿರ್ದೇಶನದ ಮರ್ಡರ್ ನಲ್ಲಿನ ಭಾವ ಅದೆಲ್ಲವನ್ನೂ ಮೀರಿದ್ದು ಎನ್ನಬಹುದು. ಹಾಗೆಯೇ ಕನ್ನಡದ ವಿಷಯಕ್ಕೆ ಬಂದಾಗ ಕೃಷ್ಣರಿಗೆ ಆ ರೀತಿ ಮಾಡುವ ಆಶಯ ಎದ್ದು ಕಾಣುತ್ತದೆ. ಆದರೆ ಅಲ್ಲಲ್ಲಿ ಆತುರಕ್ಕೆ ಬಿದ್ದಿರುವ ಕೃಷ್ಣ ಆ ದೃಶ್ಯಗಳ ವೇಗವನ್ನು ಹೆಚ್ಚಿಸಿದ್ದಾರೆ. ಹಾಗಾಗಿ ಭಾವತೀವ್ರತೆ ಕಡಿಮೆಯಾಗಿದೆ. ಹಾಗೆಯೇ ಮಾತುಗಳಲ್ಲಿ ಒಂದಷ್ಟು ದ್ವಂದ್ವಾರ್ಥ ಬಳಸಿರುವ ನಿರ್ದೇಶಕರು ಅದರಲ್ಲಿ ಅಲ್ಲಲ್ಲಿ ಸಭ್ಯತೆ ಗಡಿ ಮೀರಿದ್ದಾರೆ. ಹಾಗಾಗಿ ಹೆಣ್ಣು ಮಕ್ಕಳ ಬಾಯಲ್ಲಿ ಹೇಳಿಸುವ ಮಾತುಗಳು ಮಜಾ ಕೊಡದೆ ಕಿರಿಕಿರಿ ಹುಟ್ಟಿಸದೆ ಇರದು.
ಒಂದು ಚಿತ್ರದ ವಿಮರ್ಶೆ ಎಂದಾಗ ಆಯಾ ಚಿತ್ರದ ಪ್ರೇಕ್ಷಕನನ್ನು ಗಮನ ದಲ್ಲಿಟ್ಟುಕೊಂಡು ವಿಮರ್ಶಿಸಬೇಕಾಗುತ್ತದೆ. ಇದು ಎಲ್ಲಾ ಪ್ರೇಕ್ಷಕರಿಗೂ ಅಲ್ಲ ಎಂದು ಸೆನ್ಸಾರ್ ನಿಂದ ಹಿಡಿದು ಸ್ವತಃ ನಿರ್ದೇಶಕರೇ ಹೇಳಿಬಿಟ್ಟಿದ್ದಾರೆ. ಮತ್ಯಾರಿಗೆ ಅದನ್ನು ಮಾಡಿದ್ದಾರೆ ಎಂಬುದು ಅವರಿಗೂ ಅವರ ಪ್ರೇಕ್ಷಕರಿಗೂ ಗೊತ್ತಿದೆ. ಹಾಗಾಗಿ ಚಿತ್ರದಲ್ಲಿ ಆ ಪ್ರೇಕ್ಷಕ ಏನನ್ನು ನಿರೀಕ್ಷಿಸುತ್ತಾನೋ ಅದು ಇದೆ. ಆದರೆ ಅದನ್ನೇ ನಿರ್ದೇಶಕ ಒಂದು ಮೆಟ್ಟಿಲು ಮೇಲೆ ಏರಿಸಿದ್ದರೆ ಚಿತ್ರ ಎಲ್ಲೋ ಹೋಗುತ್ತಿತ್ತು. ಆದರೆ ನಿರ್ದೇಶಕರು ಅಷ್ಟಕ್ಕೇ ಸುಸ್ತಾಗಿದ್ದಾರೆ. ಹಾಗೆಯೇ ಪಾತ್ರ ಪೋಷಣೆಯಲ್ಲಿ ಕೊರತೆಗಳು ಡಾಳಾಗಿ ಎದ್ದು ಕಾಣುತ್ತವೆ. ಹಾಗಾಗಿಯೇ ಚಿತ್ರ ಎಲ್ಲಿಯೂ ಸಲ್ಲದ ಚಿತ್ರವಾಗಿ ಹೋಗಿದೆ.

ರೂಪಾ ನಟರಾಜ್, ರಂಜಾನ್ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಧಾರಿಗಳು. ತಮ್ಮ ಪಾತ್ರಕ್ಕೆ ಅಭಿನಯಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರೆ. ಛಾಯಾಗ್ರಾಹಕ ಸೂರ್ಯಕಾಂತ್ ಕೆಲಸ ಸಾದಾರಣ ಮಟ್ಟಕ್ಕಿಂತ ಮೇಲೆ ಬಂದಿಲ್ಲ. ಎಸ್. ನಾಗು ಹಿನ್ನೆಲೆ ಸಂಗೀತ ಪರಿಣಾಮಕಾರಿಯಾಗಿಲ್ಲ. 

Monday, July 28, 2014

ಬಹುಪರಾಕ್:

ಸಿನಿಮಾದಲ್ಲಿ ಸಂದೇಶ ಇದ್ದರೇ ಒಳ್ಳೆಯದು. ಅಥವಾ ಇರದಿದ್ದರೂ ಪ್ರೇಕ್ಷಕ ಏನೂ ಮುನಿಸಿಕೊಳ್ಳುವುದಿಲ್ಲ. ಆದರೆ ನೀತಿಕತೆಯೇ ಸಿನಿಮಾ ಆಗಿಬಿಟ್ಟರೆ..? ಬಹುಪರಾಕ್ ಅಂತಹುದ್ದೆ ಒಂದು ಚಿತ್ರ. ಲವ್ ಸ್ಟೋರಿಯನ್ನು ಸಿಂಪಲ್ ಆಗಿ ಮಾಡಿದ್ದ ಸುನಿ ಜೀವನಚರಿತ್ರೆಯನ್ನು ಕಾಂಪ್ಲೆಕ್ಸ್ ಮಾಡಿದ್ದಾರೆ. ಹಾಗಾಗಿಯೇ ಜನರಿಗೆ ಇದೇನು ಅದೇನು ಅದೇಕೆ ಇದೇಕೆ ಎನ್ನುವ ಪ್ರಶ್ನೆಗಳು ಪ್ರಾರಂಭದಲ್ಲಿ ಕಾಡತೊಡಗಿದರೆ ಆಮೇಲಾಮೇಲೆ ಏನಾದರೂ ಅಗಲಿ ನಮ್ಮನ್ನು ಬಿಡಪ್ಪ ತಂದೆ ಎನ್ನುವ ಪರಿಸ್ಥಿತಿ ಬಂದೊದಗುತ್ತದೆ.
ಸುನಿ ಒಬ್ಬ ಉತ್ತಮ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ತಾವಂದುಕೊಂಡ ಕತೆಯನ್ನು ಹಾಗೆಯೇ ತೆರೆಯ ಮೇಲೆ ಪರಿಣಾಮಕಾರಿಯಾಗಿ ಇಳಿಸಿದ್ದಾರೆ.ಚಿತ್ರದ ಫ್ರೇಮಿಂಗ್, ಬಣ್ಣ ಎಲ್ಲವೂ ಅವರ ನಿಖರತೆಗೆ ಸಾಕ್ಷಿ ಎನ್ನುವಂತಿದೆ. ಆದರೆ ಕತೆ?
ಒಂದು ಕತೆಯನ್ನು ಮೂರು ಭಾಗಗಳಾಗಿ ಕತ್ತರಿಸಿ ಆನಂತರ ಕೊನೆಯಲ್ಲಿ ಜೋಡಿಸಿದ್ದಾರೆ. ಪ್ರಾರಂಭದಲ್ಲಿ ಬೇರೆಯದೇ ಆದ ಮೂರು ಜನರ ಕತೆ ಎನಿಸುವ ಬಹುಪರಾಕ್ ಕೊನೆಗೆ ಅದೆಲ್ಲಾ ಒಂದೇ ಕತೆ ಒಬ್ಬನದೇ ಕಥನ ಎನ್ನುವಲ್ಲಿಗೆ ಕೊನೆಯಾಗುತ್ತದೆ. ಚಿತ್ರಕತೆಯಲ್ಲಿ ಒಂದೆನನ್ನೋ ಹೇಳ ಹೊರಡುವ ಸುನಿ ಅವರ ಪ್ರಯತ್ನದಲ್ಲಿ ಸಾಕಷ್ಟು ಸಾಧಿಸಿದ್ದಾರೆ.ಆದರೆ ಅದರ ಹೊರತಾಗಿ ಏನನ್ನೋ ಹೇಳದೆ ಸುನಿ ಸೋತಿದ್ದಾರೆ.
ಈ ನಾನ್ ಲೀನಿಯರ್ ಚಿತ್ರಕತೆಯನು ಗೊಂದಲಕಾರಿ ಚಿತ್ರಕತೆಯನ್ನು ಹಾಲಿವುಡ್ ಚಿತ್ರಗಳಲ್ಲಿ ಕಾಣಬಹುದು. ಆದರೆ ಕನ್ನಡದ ಮಟ್ಟಿಗೆ ಆ ಶೈಲಿಯನ್ನು ಮಾಸ್ ಮಟ್ಟಕ್ಕೆ ಇಳಿಸುವಲ್ಲಿ ಯಶಸ್ವಿಯಾದವರು ಉಪೇಂದ್ರ ಒಬ್ಬರೇ ಎನ್ನಬಹುದು. ಪವನ್ಕುಮಾರ್ ತಮ್ಮ ಲೂಸಿಯ ಮೂಲಕ ಸಾಧ್ಯವಾದಷ್ಟು ಮಟ್ಟಿಗೆ ಪ್ರೇಕ್ಷಕರನ್ನು ತಲುಪಿದರು.
ಸುನಿ ಹೇಳಹೊರಟಿರುವ ಕತೆಯಲ್ಲಿ ಸ್ವಾರಸ್ಯವಿದೆಯಾದರೂ ಕುತೂಹಲವಿಲ್ಲ. ಒಬ್ಬ ಪ್ರೀತಿಸಿದ, ಭೂಗತದೊರೆಯಾದ, ರಾಜಕಾರಣಿಯಾದ ಸತ್ತ ಎನ್ನುವ ಕತೆ ಅಲ್ಲೇ ಇರುತ್ತದೆ. ಹಾಗೆಯೇ ಅದನ್ನು ನೇರವಾಗಿ ನಿರೂಪಿಸಿದ್ದರೂ ಈಗಿರುವದಕ್ಕಿಂತಲೂ ನೀರಸ ಎನಿಸುತ್ತಿತ್ತೇನೋ?
ಒಟ್ಟಿನಲ್ಲಿ ಪ್ರಯತ್ನಕ್ಕೆ ಪ್ರಯೋಗಕ್ಕೆ ಬಹುಪರಾಕ್ ಎಂದರೂ ಒಂದು ಸಿನಿಮಾ ಎಂದಾಗ ಅದರದೇ ಆದ ಸೊಗಡು ಮಜಾ ಇರಬೇಕಾಗುತ್ತದಲ್ಲ. ಸುನಿ ಅದನ್ನು ಇಲ್ಲಿ ಇಟ್ಟಿಲ್ಲ. ಹಾಗಾಗಿ ಚಿತ್ರವನ್ನು ಸಾವಧಾನಚಿತ್ತರಾಗಿ ಸುಮ್ಮನೆ ಕುಳಿತು ನೋಡಲೇ ಬೇಕಾಗುತ್ತದೆ. ಬೋರ್ ಹೊಡೆಸಿದರೆ, ಆಕಳಿಕೆ ತರಿಸಿದರೆ ಗೊಂದಲ ಮೂಡಿಸಿದರೆ..ಹೀಗೆ ಎಲ್ಲದಕ್ಕೂ ಸಮಾಧಾನ ಮಾಡಿಕೊಳ್ಳಬೇಕಾಗುತ್ತದೆ.
ಶ್ರೀನಗರಕಿಟ್ಟಿ ಮೂರು ಭಿನ್ನ ಆಯಾಮಗಳಲ್ಲಿ ವೇಷಭೂಷಣದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಮೇಘನಾ ರಾಜ್ ಸುಂದರವಾಗಿ ಕಾಣಿಸುತ್ತಾರೆ. ಇನ್ನುಳಿದ ತಾರಾಗಣ ಅಭಿನಯಕ್ಕೆ ಮೋಸ ಮಾಡಿಲ್ಲ. ಛಾಯಾಗ್ರಹಣ, ಸಂಗೀತ ಸಾಹಸ ಎಲ್ಲವೂ ಉತ್ತಮವಾಗಿದೆ.
ಬಿಡಿಯಾಗಿ ಎಲ್ಲವೂ ಚಂದ, ರುಚಿಕರ. ಒಟ್ಟಾರೆಯಾಗಿ ನೀರಸ ಎನ್ನುವುದು ಬಹುಪರಾಕ್ ಚಿತ್ರದ ಒಂದು ಸಾಲಿನ ವಿಮರ್ಶೆ ಎನ್ನಬಹುದು.