Pages

Friday, June 13, 2014

ಪ್ರೀತಿ ಗೀತಿ ಇತ್ಯಾದಿ:

ಕೆಲವು ಕತೆಗಳು ಕೇಳಲಿಕ್ಕೆ ಓದಲಿಕ್ಕೆ ಚೆನ್ನ ಅನಿಸುತ್ತವೆ. ಆದರೆ ಅದನ್ನು ದೃಶ್ಯರೂಪಕ್ಕೆ ತಂದಾಗ?
ಬರೀ ಕತೆಯಲ್ಲಿ ಒಬ್ಬನೇ ಇರುತ್ತಾನೆ. ಆದರೆ ಸಿನಿಮ ಸಮಗ್ರ ಕಲೆಗಳ ಮಿಶ್ರಣ. ಹಾಗಾಗಿ ಇಲ್ಲಿ ಎಲ್ಲವೂ ಮುಖ್ಯ. ಯಾವುದಾದರೊಂದು ವಿಭಾಗ ಸೋತರೂ ಕತೆ ಮನಸ್ಸಿಗೆ ತಾಕುವುದಿಲ್ಲ.ಸಿನಿಮಾ ಪರಿಣಾಮಕಾರಿ ಎನಿಸುವುದಿಲ್ಲ.
ಸಾವಿನ ಸೂತಕದ ಮನೆಯಲ್ಲಿ ಪ್ರೀತಿ ಅರಳಿದರೆ ಹೇಗೆ? ನಾಯಕ ಮತ್ತು ಅವನ ತಂಗಿ ತಮ್ಮ ಸ್ಕಾರ್ಪಿಯೊ ದಲ್ಲಿ ಹೋಗುವಾಗ ಅಪಘಾತ ಮಾಡುತ್ತಾರೆ. ಬೈಕ್ ಸವಾರ ಸಾಯುತ್ತಾನೆ. ಅವನನ್ನು ಅಲ್ಲೇ ಬಿಟ್ಟು ಮನೆಗೆ ಬರುತ್ತಾರಾದರೂ ನಾಯಕ ಪಾಪಪ್ರಜ್ಞೆಯಿಂದ ಸತ್ತವನ ಮನೆಗೆ ಹೋಗುತ್ತಾನೆ..ಪ್ರಾಯಶ್ಚಿತ್ತವೆಂಬಂತೆ ಅವರಿಗೆ ಆಸರೆಯಾಗುತ್ತಾನೆ..ಆದರೆ ಸತ್ಯ ಅವನ ಎದೆಯನ್ನು ಚುಚ್ಚುತ್ತಲೇ ಇರುತ್ತದೆ. ಆತನ ಮಗಳು ಪ್ರೀತಿಸಲು ತೊಡಗಿದಾಗ ತಾನೂ ಪ್ರೀತಿಸುತ್ತಾನೆ. ಮುಂದೆ ಸತ್ಯ ಗೊತ್ತಾದರೆ ಎಂಬ ಭಯ ಕಾಡದೆ ಇರಲು ಸಾಧ್ಯವೇ..? ಸತ್ಯ ಗೊತ್ತಾದಾಗ ಏನಾಗುತ್ತದೆ.. ಉತ್ತರಕ್ಕಾಗಿ ಚಿತ್ರ ನೋಡಬೇಕಾಗುತ್ತದೆ.
ಯೋಗರಾಜ್ ಮೂವೀಸ್ ಚಿತ್ರ. ಇಲ್ಲಿ ನಿರ್ದೇಶಕ ಪವನ್ ಒಡೆಯರ್ ನಾಯಕನಾಗಿದ್ದಾರೆ. ವೀರೇಂದ್ರ ಪ್ರಥಮ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಇರುವ ಕತೆಗೆ ಪರಿಣಾಮಕಾರಿ ಚಿತ್ರಕತೆ ರಚಿಸುವಲ್ಲಿ ಸಶಕ್ತ ನಿರೂಪಣೆ ನೀಡುವಲ್ಲಿ ಸೋತಿರುವ ನಿರ್ದೇಶಕರು ಒಂದೊಳ್ಳೆ ಪ್ರೇಮಮಯ ಚಿತ್ರವನ್ನು ಪೇಲವವನ್ನಾಗಿಸಿದ್ದಾರೆ.ಚಿತ್ರದಲ್ಲಿ ಕೆಲವು ತಪ್ಪುಗಳಿವೆಯಾದರೂ ಕೆಲವನ್ನು ನಿರ್ಲಕ್ಷಿಸಬಹುದಾದರೂ ಕೆಲವೊಂದು ಪ್ರಶ್ನೆಗಳನ್ನು ಹುಟ್ಟು ಹಾಕೇ ಹಾಕುತ್ತವೆ. ನಾಯಕ ಮನೆಗೆ ಬಂದು ಸಹಾಯ ಮಾಡುವಾಗ ಇಡೀ ಮನೆಜನ ಯಾರು ನೀನು ಎಂದು ಒಮ್ಮೆಯೂ ಕೇಳದೆ ಇರುವುದು ಅಂತಹುದರಲ್ಲಿ ಒಂದು. ಹಾಗೆಯೇ ತಂದೆ ಸತ್ತ ನಂತರ ಆ ಮನೆಗೆ, ಮನೆಜನಕ್ಕೆ ನಾಯಕ ಹತ್ತಿರವಾಗುವುದು ಪರಿಣಾಮಕಾರಿಯಾಗಿಲ್ಲ. ಒಂದು ಹಾಡಿನಲ್ಲಿ ಅಷ್ಟನ್ನೂ ಮಾಡಿ ಮುಗಿಸಿ ನಿರ್ದೇಶಕರು ಕೈ ತೊಳೆದುಕೊಂಡಿದ್ದಾರೆ. ಆದರೆ ಆ ಸಾವಿನ ಗುಂಗಿನಲ್ಲೇ ಇರುವ ಪ್ರೇಕ್ಷಕ ಮಾತ್ರ ಅಷ್ಟು ಬೇಗ ಅವರೆಲ್ಲರೂ ಸರಿಯಾಗುವುದನ್ನು ಜೀರ್ಣಿಸಿಕೊಳ್ಳಲಾರ. ಅದಕ್ಕೊಂದಷ್ಟು ದೃಶ್ಯಗಳನ್ನು ಕೊಟ್ಟು ಹಂತ ಹಂತವಾಗಿ ನಿರೂಪಿಸುತ್ತಾ ಸಾಗಿದ್ದರೆ ಚಿತ್ರ ಮನಸ್ಸಿಗೆ ತಟ್ಟುತ್ತಿತ್ತು.ಹಾಗೆಯೇ ತಂದೆಯನ್ನು ಅತಿ ಹೆಚ್ಚು ಪ್ರೀತಿಸುವ ನಾಯಕಿ ಆತ ಸತ್ತ ನಂತರ ಏಕಾಏಕಿ ಪ್ರೀತಿಗೆ ಬೀಳಲು ನಾಯಕನ ಖಾಳಜಿ ಕಾರಣವಾಗಬಹುದು. ಆದರೆ ಅದಕ್ಕೆ ಸೂಕ್ತ ಸ್ಪಷ್ಟೀಕರಣವಿಲ್ಲದೇ ಇರುವುದರಿಂದಾಗಿ ಅದೂ ಕೂಡ ಪರಿಣಾಮಕಾರಿ ಎನಿಸುವುದಿಲ್ಲ.
ತಾಂತ್ರಿಕವಾಗಿ ಚಿತ್ರ ಹೇಳಿಕೊಳ್ಳುವಂತಿಲ್ಲ. ಸಂಗೀತ ಚಿತ್ರದ ಪರಿಣಾಮಕಾರಿ ಅಂಶ. ಅದರಲ್ಲೂ ತಿರುಬೋಕಿ ಮತ್ತು ಏನೆಲ್ಲಾ ಆಗುವುದು ಹಾಡುಗಳು ಕಾಯುವಂತೆ ಮಾಡುತ್ತವೆ ಮತ್ತು ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ. ಆ ಕಾರಣಕ್ಕೆ ಸಂಗೀತ ನಿರ್ದೇಶಕ ವೀರ ಸಮರ್ಥ ಮೆಚ್ಚುಗೆಗೆ ಕಾರಣವಾಗುತ್ತಾರೆ. ಛಾಯಾಗ್ರಹಣ ಕೂಡ ಪರವಾಗಿಲ್ಲ ಎನಿಸುತ್ತದೆ.
ಅಭಿನಯದ ವಿಷಯಕ್ಕೆ ಬಂದರೆ ನಾಯಕನಾಗಿ ಪವನ್ ನಟಿಸಿದ್ದಾರೆ. ಆದರೂ ಅವರು ಪಾತ್ರಕ್ಕೆ ಅಷ್ಟಾಗಿ ಸೂಕ್ತ ಎನಿಸುವುದಿಲ್ಲ. ಒಮ್ಮೊಮ್ಮೆ ಚಂದಾಗಿ ಸಂಭಾಷಣೆ ಒಪ್ಪಿಸುವ ಪವನ್ ಒಮ್ಮೊಮ್ಮೆ ಕ್ಯಾಮೆರಾ ಕಣ್ಣು ತಪ್ಪಿಸುತ್ತಾರೆ. ಪ್ರಾರಂಭದಲ್ಲಿ ಉಬ್ಬುಸದ ಖಾಯಿಲೆಯವನಾಗಿ ಕಿರಿಕಿರಿ ಉಂಟು ಮಾಡುವ ರಘು ಆನಂತರ ಸಹನೀಯವಾಗುತ್ತಾರೆ. ಸಂಗೀತ ಭಟ್, ವಿನಯಾ ಪ್ರಕಾಶ್ ಪಾತ್ರಗಳಿಗೆ ತಕ್ಕ ಅಭಿನಯ ನೀಡಿದ್ದಾರೆ. ಚಿತ್ರದಲ್ಲಿ ಕೆಲವು ಅಗತ್ಯ ದೃಶ್ಯಗಳನ್ನು ಇಟ್ಟು ಅನಗತ್ಯ ದೃಶ್ಯಗಳನ್ನೂ ತೆಗದು ಹಾಕಿದ್ದರೆ, ಚಿತ್ರಕತೆಯಲ್ಲಿ ಬಿಗಿ ಕಾಯ್ದುಕೊಂಡಿದ್ದರೆ ಪ್ರೀತಿ ಗೀತಿ ಇತ್ಯಾದಿ ಸೆಂಟಿಮೆಂಟ್ ತುಂಬಿದ ನವಿರು ಪ್ರೇಮಕತೆಯಾಗುತ್ತಿತ್ತೇನೋ?

ಈ ತರಹದ ಕತೆಗಳು ಈಗಾಗಲೇ ಬಂದಿವೆ.ತೆಲುಗಿನ ಅತಡು, ಹೊಸ ತೀರ್ಪು, ದುಷ್ಮನ್, ತುಂ ಬಿನ್, ಸೂರ್ಯಕಾಂತಿ ಮುಂತಾದವುಗಳ ಕಥಾಹಂದರ ಇದೇ ಆಗಿತ್ತು.ಅವುಗಳಲ್ಲಿ ಜನಮನ ಗೆದ್ದ ಚಿತ್ರಗಳ ಶಕ್ತಿ ಚಿತ್ರಕತೆ ಎನ್ನಬಹುದು. ಅದನ್ನು ಮನಗಂಡರೆ ನಿರ್ದೇಶಕ ವೀರೇಂದ್ರ ಅವರ ಮುಂದಿನ ಚಿತ್ರಗಳಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದು.  

Sunday, June 8, 2014

ಮತ್ತೆ ಸತ್ಯಾಗ್ರಹ:

ಒಂದು ಕತೆಯನ್ನು ನಾಟಕ ರೂಪಕ್ಕೆ ತರುವಾಗ ಹಾಗೆಯೇ ನಾಟಕವನ್ನು ಚಿತ್ರರೂಪಕ್ಕೆ ತರುವಾಗ ಆಯಾ ಮಾಧ್ಯಮಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಶಿವಾನಂದ ತಮ್ಮ ನಾಟಕ ಆಂದೋಲನವನ್ನು ಮತ್ತೆ ಸತ್ಯಾಗ್ರಹ ಎನ್ನುವ ಹೆಸರಿನಲ್ಲಿ ತೆರೆಯ ಮೇಲೆ ತಂದಿದ್ದಾರೆ. ರಾಜಕಾರಣ, (ಅ)ಸಾಮಾಜಿಕ ವ್ಯವಸ್ಥೆಯನ್ನು ಕುರಿತಾದ ಚಿತ್ರ ಸತ್ಯಾಗ್ರಹ.ಹೆಸರೇ ಸೂಚಿಸುವಂತೆ ಇದು ಸತ್ಯಾಗ್ರಹ ಕುರಿತಾದ ಚಿತ್ರವಾದ್ದರಿಂದ ಮನರಂಜನೆಗಿಂತ ಬೋಧನೆ ಪ್ರಚೋದನೆಯನ್ನು ಚಿತ್ರದಲ್ಲಿ ನಿರೀಕ್ಷಿಸಬೇಕಾಗುತ್ತದೆ.
ಚಿತ್ರದಲ್ಲಿ ಅಚ್ಚುಕಟ್ಟಾದ ಕತೆಯಿದೆ. ಆದರೆ ಚಿತ್ರಕತೆ ತೆವಳುತ್ತದೆ. ಇತ್ತ ನಾಟಕವೂ ಆಗದೆ ಸಿನಿಮಾವೂ ಆಗದೆ ಕೆಲ ದೃಶ್ಯಗಳು ಎಡಬಿಡಂಗಿ ಎನಿಸಿಕೊಳ್ಳುತ್ತವೆ. ಹಾಗೆಯೇ ಇಡೀ ಚಿತ್ರದಲ್ಲಿ ಒಂದೇ ಗತಿಯಿಲ್ಲದೆ ಸಿನಿಮಾ ಒಂದೇ ನೇರ ನಿರೂಪಣೆಯ ಶೈಲಿಯ ಕೊರತೆಯಿಂದ ಹೇಗೇಗೋ ಕಾಣಿಸುತ್ತದೆ. ಹಾಗೆಯೇ ಕಲಾತ್ಮಕ, ಮನರಂಜನಾತ್ಮಕ ಎನ್ನುವ ಸಿನಿಮಾ ಶೈಲಿಯ ನಡುವೆ ಇರುವ ಗೆರೆ ಬರೆಯ ಇತಿ ಮಿತಿಗೆ ಒಳಪಡದೆ ತನ್ನಿಷ್ಟ ಬಂದ ಹಾಗೆ ಸಿನಿಮಾ ಸಾಗುತ್ತದೆ. ಹಾಗಾಗಿ ಮಂದಗತಿ ಒಮ್ಮೊಮ್ಮೆ ನಿಧಾನಗತಿ ಬೋರ್ ಗತಿ ಆಗುತ್ತದೆ. ಇದೇನು ಕತೆಯೇ ಮುಂದಕ್ಕೆ ಹೋಗುತ್ತಿಲ್ಲ ಎನಿಸುವಂತೆ ಇಷ್ಟೆಲ್ಲಾ ನಡೆದಿದೆಯಾ ಎನಿಸುತ್ತದೆ. ಒಟ್ಟಾರೆಯಾಗಿ ಇಡೀ ಚಿತ್ರ ತನ್ನ ಮೂಲ ಕತೆಯ ಆಶಯವನ್ನು ಹಾಗೆಯೇ ತೆರೆಯ ಮೇಲೆ ತರುವಲ್ಲಿ ಸಫಲವಾಗಿಲ್ಲ.
ಒಬ್ಬ ಊರ ರಾಜಕಾರಣಿ ರಾಜ್ಯವಾಳಲು ಹೋಗುತ್ತಾನೆ. ಅದಕ್ಕೆ ಸ್ವಾರ್ಥಕ್ಕಿಂತ ನಿಶ್ವಾರ್ಥವೆ ಹೆಚ್ಚಿರುತ್ತದೆ. ಪಂಚಾಯತಿಗಿಂತ ಮೇಲೇರಿ ಸದನಕ್ಕೆ ಸಾಗಲು ಪ್ರಯತ್ನಿಸುತ್ತಾನೆ. ಮತ್ತೊಬ್ಬ ಬಡವ ತನ್ನ ಪೂರ್ವಜರ ಭೂಮಿಯನ್ನು ಮತ್ತೆ ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಇವರ ನಡುವೆ ಸತ್ಯಾಗ್ರಹ ಬರುತ್ತದೆ. ಉಳ್ಳವರು ಶಿವಾಲಯ ಮಾಡುವರು ಎನ್ನುವ ಮಾತಿನಂತೆ ಬಡವ ಏನು ಮಾಡಲು ಸಾಧ್ಯ? ಹಾಗಾಗಿ ಗಾಂಧೀ ತತ್ವದ ಮೂಲಕ ತನ್ನ ದ್ದನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ.
ಇದರ ನಡುವೆ ರಾಜಕೀಯ ವ್ಯಾಮೋಹಿ ತನ್ನ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಾನೆ. ಅವರವರ ಆಶಯ ಆಸೆಗಳ ನಡುವೆ ನಿಜವಾದ ಹೋರಾಟ ಹೇಗೆ ಅರ್ಥ ಕಳೆದುಕೊಳ್ಳುತ್ತದೆ ಎಂಬುದು ಮುಂದಿನ ಕಥಾನಕ. ರಾಜಕೀಯದ ದೊಂಬರಾಟದಲ್ಲಿ ಏನೇನೆಲ್ಲಾ ನಡೆಯುತ್ತದೆ ಎಂಬುದು ಮತ್ತು ಅಮಾಯಕರು ಹೇಗೆ ಬಣ್ಣದ ಮಾತುಗಳಿಗೆ ಮಾರುಹೋಗುತ್ತಾರೆ ಎಂಬುದನ್ನು ತಕ್ಕ ಮಟ್ಟಿಗೆ ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕರು.


ರಾಜಕೀಯಾಕಾಂಕ್ಷಿಯಾಗಿ ಶರತ್ ಲೋಹಿತಾಶ್ವ, ಮನೆಯ ಆಳಾಗಿ ಯೋಗೀಶ್, ಸ್ವಾತಂತ್ರ್ಯ ಹೋರಾಟಗಾರನಾಗಿ ದತ್ತಣ್ಣ ಮತ್ತು ಸತ್ಯಣ್ಣನಾಗಿ ಶಿವಾನಂದ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಉಳಿದಂತೆ ಛಾಯಾಗ್ರಹಣ ಪರವಾಗಿಲ್ಲ. ಸಂಗೀತ ಅಷ್ಟು ಪೂರಕವಾಗಿಲ್ಲ. ಒಟ್ಟಿನಲ್ಲಿ ಒಂದೊಳ್ಳೆ ಕತೆಯನ್ನು ತೆರೆಯ ಮೇಲೆ ತಂದಿರುವ ನಿರ್ದೇಶಕರು ಅದರ ನಿರೂಪಣೆಯನ್ನು ಬಿಗಿಗೊಳಿಸಿದ್ದರೆ ಒಂದೊಳ್ಳೆ ಪೊಲಿಟಿಕಲ್ ಥ್ರಿಲ್ಲರ್ ಆಗುತ್ತಿತ್ತು.