ವಿಚಿತ್ರ ಹೆಸರಿನ ಚಿತ್ರ ಒಬ್ಬ ವ್ಯಕ್ತಿಯ ಸಂದರ್ಶನದ
ಮುಖಾಂತರ ಪ್ರಾರಂಭವಾಗುತ್ತದೆ. ಚಾರಣಕ್ಕೆಂದು ಅರಣ್ಯಕ್ಕೆ ಹೋದ ಆರು ಜನರಲ್ಲಿ ಒಬ್ಬ ವ್ಯಕ್ತಿ
ಬದುಕಿ ಬಂದಿರುತ್ತಾನೆ. ಇಬ್ಬರು ಕಾಣೆಯಾಗಿದ್ದರೆ, ಉಳಿದ ಮೂವರು ಸತ್ತಿರುತ್ತಾರೆ ಅಥವಾ ಅಜ್ಞಾತ
ಶಕ್ತಿಯಿಂದ ಬರ್ಬರವಾಗಿ ಕೊಲೆಯಾಗಿರುತ್ತಾರೆ. ಅಲ್ಲಿ ನಡೆದದ್ದು ಏನು?
ಆರು ಜನ ಚಾರಣಿಗರಲ್ಲಿ ಒಬ್ಬಾತ ಛಾಯಾಗ್ರಹಣದ
ಹುಚ್ಚಿರುವವ. ಹಾಗಾಗಿ ಚಾರಣದ ಪೂರ್ವ ತಯಾರಿಯಿಂದ ಹಿಡಿದು ಪ್ರತಿಯೊಂದನ್ನೂ ಸೆರೆಹಿಡಿಯುತ್ತಾನೆ.
ಆತನೂ ಈಗಾಗಲೆ ಸತ್ತಿರುವುದರಿಂದ ಅಲ್ಲೆಲ್ಲೋ ಸಿಕ್ಕ ಕ್ಯಾಮೆರಾದಲ್ಲಿದ್ದ ಚಿತ್ರಣವೇ ಸಿನಿಮಾ
ಆಗಿದೆ.
ಹಾಲಿವುಡ್ ನಲ್ಲಿ 1999ರಲ್ಲಿ ಬ್ಲೇರ್ ವಿಚ್ ಪ್ರಾಜೆಕ್ಟ್
ಎನ್ನುವ ಚಿತ್ರವೊಂದು ಬಂದಿತ್ತು. ಬರೀ ಇಪ್ಪತ್ತೆರೆಡು ಸಾವಿರ ಡಾಲರುಗಳ ವೆಚ್ಚದಲ್ಲಿ ತಯಾರಾಗಿದ್ದ ಚಿತ್ರ ಗಳಿಸಿದ್ದು
ಬರೋಬ್ಬರಿ 25 ಕೋಟಿ ಡಾಲರುಗಳನ್ನು. ಅದೇ ಚಿತ್ರವನ್ನು ನಿರ್ದೇಶಕ ಅಶೋಕ್ ಕನ್ನಡಕ್ಕೆ
ತಂದಿದ್ದಾರೆ.
ಚಿತ್ರದ ಮೊದಲಾರ್ಧ ಎಲ್ಲೂ ಬೋರ್ ಎನಿಸದೇ ಸಾಗುತ್ತದೆ.
ಅಲ್ಲಲ್ಲಿ ಬರುವ ಒಂದಷ್ಟು ಹಳ್ಳಿ ಸೊಗಡಿನ ಸಂಭಾಷಣೆಗಳು ಖುಷಿ ಕೊಡುತ್ತವೆ.ಇಡೀ ಚಿತ್ರವೇ
ಕ್ಯಾಮೆರಾದಲ್ಲಿ ಕೈಯಲ್ಲೇ ಸೆರೆಹಿಡಿದಿರುವುದರಿಂದ ಮತ್ತದು ಚಿತ್ರಕ್ಕೆ ಅವಶ್ಯವೂ ಆಗಿರುವುದರಿಂದ
ನಿಜಕ್ಕೂ ಇದು ನಡೆದದ್ದೆನೋ ಎನ್ನುವ ಖುಷಿ ಕೊಡುತ್ತದೆ.
ಮಧ್ಯಂತರದ ನಂತರ ಪ್ರಾರಂಭವಾಗುವ ದೆವ್ವದ ಕಾಟ ಕೆಲವು ಕಡೆ
ಪರಿಣಾಮಕಾರಿಯಾಗಿದೆ. ಆದರೆ ಕೆಲವು ಕಡೆ ಚಿತ್ರವನ್ನು ನಿರ್ದೇಶಕರು ಸಿನಿಮೀಯ
ಮಾಡಿಬಿಟ್ಟಿದ್ದಾರೆ. ಉದಾಹರಣೆಗೆ ಬರೀ ಸದ್ದುಗಳಲ್ಲೇ ಹೆದರಿಸಬಹುದಾದ್ದಕ್ಕೆ ಹೆಸರು ಕೂಗಿಸಿ ಭಯದ
ತೀವ್ರತೆಯನ್ನು ಕಡಿಮೆ ಮಾಡಿದ್ದಾರೆ. ಹಾಗೆಯೇ ದೆವ್ವಕ್ಕೆ ಒಂದು ಮೂರ್ತ ರೂಪವನ್ನು ಕೊನೆಯಲ್ಲಿ
ಕೊಡುವುದೂ ಚಿತ್ರದ ನಿರೀಕ್ಷಿತ ಪರಿಣಾಮಕ್ಕೆ ಧಕ್ಕೆ ಉಂಟು ಮಾಡಿದೆ.
ಇಷ್ಟನ್ನು ಹೊರತು ಪಡಿಸಿದರೇ ಚಿತ್ರದಲ್ಲಿ ಮೆಚ್ಚುವ
ಅಂಶಗಳಿವೆ. ಛಾಯಾಗ್ರಹಣ ಮತ್ತು ಶಬ್ಧಗ್ರಹಣ ಸಿನಿಮಾದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಕೈ
ಜೋಡಿಸಿವೆ. ಹಾಗೆಯೇ ಆರು ಕಲಾವಿದರುಗಳು ತಮ್ಮ ತಮ್ಮ ಪಾತ್ರಗಳಿಗೆ ತಕ್ಕಂತೆ ಅಚ್ಚುಕಟ್ಟಾದ ಅಭಿನಯ
ನೀಡಿದ್ದಾರೆ.
ಚಿತ್ರದ ಪ್ರಾರಂಭದಿಂದಲೂ ಇದು ಸತ್ಯಕತೆ ಎಂದು
ಬಿಂಬಿಸುವುದಕ್ಕಾಗಿ ಚಿತ್ರತಂಡ ಶ್ರಮಿಸಿದೆ. ಕೊನೆಯಲ್ಲೂ ತಂತ್ರಜ್ಞರ ಪರಿಚಯ ಮಾಡಿಸದೇ ಹಾಗೆಯೇ
ಚಿತ್ರವನ್ನು ಅಂತ್ಯ ಗೊಳಿಸಲಾಗಿದೆ. ಆ ಮೂಲಕ ಇಷ್ಟರವರೆಗೆ ನೋಡಿದ್ದು ಸತ್ಯವೇ ಎಂಬುದು ಖಾತರಿ
ಪಡಿಸುವುದಾಗಿದೆ.
ಒಟ್ಟಿನಲ್ಲಿ ಕನ್ನಡದ ಮಟ್ಟಿಗೆ ಒಂದು ಹೊಸ ರೀತಿಯ ಭಯಾನಕ
ಸಿನೆಮಾವನ್ನು ಅದರ ಪ್ರಯೋಗ ಶೀಲತೆಗೆ ಒಮ್ಮೆ ನೋಡಲಡ್ಡಿಯಿಲ್ಲ. ಪಲ್ಲವಿ, ತನುಜಾ, ವಿಜಯ ಚಂಡೂರ್,
ದರ್ಶನ್, ಕೃಷ್ಣಾ ಪ್ರಕಾಶ್ ಮೃತ್ಯುಂಜಯ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ನಿರ್ದೇಶಕರು
ಅಶೋಕ್.
No comments:
Post a Comment