Pages

Saturday, January 4, 2014

ಕರ್ನಾಟಕದ ಅಯೋಧ್ಯಪುರ



ಸಾಕಷ್ಟು ವಿವಾದಗಳಿಗೆ ಗುರಿಯಾಗಿದ್ದ, ವಿವಾದಗಳನ್ನು ಹುಟ್ಟು ಹಾಕಿದ್ದ ಕರ್ನಾಟಕದ ಅಯೋಧ್ಯಪುರ ಎನ್ನುವ ಚಿತ್ರ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಅಯೋಧ್ಯಪುರ ಇದೆಯೋ ಇಲ್ಲವೋ ಗೊತ್ತಿಲ್ಲ, ಚಿತ್ರದಲ್ಲೂ ಅಯೋಧ್ಯಪುರದ ಇಲ್ಲದಿರುವುದು ಬದಲಿಗೆ ರಾಮಾಪುರ ಇರುವುದು ಅಚ್ಚರಿ ಹುಟ್ಟಿಸುತ್ತದೆ. ಮೊದಲ ನಿರ್ದೇಶನದಲ್ಲಿ ಲವ್ ಈ ರೀತಿಯಲ್ಲಿ ಮೊದಲ ಅಚ್ಚರಿ ಹುಟ್ಟಿಸಿದ್ದಾರೆ.
ಚಿತ್ರದ ಪ್ರಾರಂಭ ಇದಾವುದೋ ಸೂಕ್ಷ್ಮವಾದ ಗಂಭೀರವಾದ ಚಿತ್ರವೇ ಇರಬಹುದು ಎನಿಸುತ್ತದೆ. ವಾಸ್ತವದಲ್ಲಿ ಕೋಮಿನ ಹೋರಾಟಗಾರ ಎನಿಸಿರುವ ಮುಖ್ಯಸ್ಥರನ್ನು ತೆರೆಯ ಮೇಲೆ ತಂದಿದ್ದಾರೆ. ಅವರ ಚಹರೆ, ವೇಷ ಭೂಷಣ ಹವಾ ಭಾವ ಮುಂತಾದವುಗಳನ್ನು ಅದೇ ರೀತಿಯಾಗಿ ತಂದು ಪ್ರೇಕ್ಷಕರಿಗೆ ನೋಡಿದಾಕ್ಷಣ ಗೊತ್ತಾಗುವ ರೀತಿ ಮಾಡಿದ್ದಾರೆ. ಇವುಗಳ ನಡುವೆ ಒಂದು ಪ್ರೇಮಕತೆ ಇಟ್ಟು, ಆನಂತರ ಎಲ್ಲರ ಆಷಾಡಭೂತಿತನ, ಅವಕಾಶವಾದಿತನವನ್ನು ತೋರಿಸುವ ಉದ್ದೇಶ ನಿರ್ದೇಶಕರಿಗಿತ್ತೇನೋ? ಆದರೆ ಅದರ ನಿಟ್ಟಿನಲ್ಲಿ ಸಾಗುವಲ್ಲಿ ಸೋತಿರುವ ಲವ ಚಿತ್ರವನ್ನು ಹೇಗೇಗೋ ಎಳೆದಾಡಿ ಕಥೆಗೆ ಬೇಕಾಗಿದ್ದ ಗಂಭೀರತೆ, ಸ್ವರೂಪವನ್ನು ಪೇಲವಗೊಳಿಸಿ, ಕಥೆಯನ್ನು ಎಲ್ಲೆಲ್ಲೋ ತೆಗೆದುಕೊಂಡು ಹೋಗಿ ಏನೇನೋ ಮಾಡಿ ಹೇಗೋ ಚಿತ್ರ ಮುಗಿಸಿದ್ದಾರೆ. ಕೊನೆಯಲ್ಲಿ ಪ್ರೇಕ್ಷಕ ಇದನ್ನು ನೋಡಲು ಇಷ್ಟೊತ್ತು ಬೇಕಾ ಎನ್ನುವ ಪ್ರಶ್ನೆ ಕೇಳುವ ಹಾಗೆ ಮಾಡಿದ್ದಾರೆ.
ಹಾಗೆ ನೋಡಿದರೆ ಇಂತಹ ಸೂಕ್ಷ್ಮ ವಿಷಯಗಳನ್ನು ತೆರೆಗೆ ಅಳವಡಿಸುವಾಗ ತುಂಬಾ ಪ್ರೌಢಿಮೆ ಬೇಕಾಗುತ್ತದೆ. ಹಾಗೆಯೇ ಚಿತ್ರಕತೆಯಲ್ಲಿ ಕುಸುರಿತನ ಬೇಕಾಗುತ್ತದೆ.ಹಿಂದೂ ಮುಸ್ಲಿಂ ಎಂದಾಕ್ಷಣ ಒಂದು ಕೋಮುವಾದ ಘರ್ಷಣೆ, ಎರಡೂ ಕಡೆಯ ಒಂದಷ್ಟು ಜನರು ಮುಂತಾದವುಗಳನ್ನು ಸೃಷ್ಟಿಸಿದರಷ್ಟೇ ಸಾಲುವುದಿಲ್ಲ. ಅದರ ಜೊತೆಗೆ ಅದರಲ್ಲಿನ ಸೂಕ್ಷ್ಮ ವಿಷಯಗಳನ್ನೂ ತುಂಬಾ ನಾಜೂಕಾಗಿ ತರಬೇಕಾಗುತ್ತದೆ. ಯಾವುದೇ ವಿಷಯದಲ್ಲೂ ಕಾಣುವ ಕಾಣದ ಅಂಶಗಳಿರುತ್ತವೆ. ಲವ ಇಲ್ಲಿ ಆ ತರಹದ ಯಾವ ಕೆಲಸಕ್ಕೂ ಕೈ ಹಾಕಿಲ್ಲ. ಅವರದು ಎಲ್ಲವೂ ನೇರ ನೇರಾ.
ಇಷ್ಟಕ್ಕೂ ಚಿತ್ರದ ಕತೆ ಏನು? ಒಂದು ಹಿಂದೂ ಹುಡುಗ ಮುಸ್ಲಿಂ ಹುಡುಗಿ ಪ್ರೀತಿಸುತ್ತಾರೆ. ಅವರನ್ನು ಅವರಷ್ಟಕ್ಕೆ ಬಿಡದ ಸಮಾಜ ಅವರ ಬದುಕಲ್ಲಿ ಆಟವಾಡಲು ತೊಡಗುತ್ತದೆ.ಮುಂದೆ..? ಕುತೂಹಲವಿದ್ದರೆ ಚಿತ್ರಮಂದಿರದಲ್ಲಿ ನೋಡಬಹುದು.
ರಾಕೇಶ್ ಅಡಿಗ ಪರವಾಗಿಲ್ಲ. ನಯನ ಅಭಿನಯದಲ್ಲಿ ಇನ್ನೂ ಪಳಗಬೇಕು. ಅವರಿಗೆ ಮುಸ್ಲಿಂ ಹುಡುಗಿಯ ಪಾತ್ರವನ್ನು ಸರಿ ತೂಗಿಸಲು ಬಂದಿಲ್ಲ. ಉಳಿದ ಪಾತ್ರಗಳು ಹಾಗೆ ಬಂದು ಹೀಗೆ ಹೋಗುತ್ತವೆ. ಹಿನ್ನೆಲೆಸಂಗೀತ, ಸಂಗೀತ, ಛಾಯಾಗ್ರಹಣ ಸಾದಾರಣ ಎನ್ನಬಹುದು.

No comments:

Post a Comment