Pages

Sunday, February 2, 2014

ವಸುಂಧರಾ:



ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಮತ್ತು ಮಸಾಲೆ ಭರಿತ ಚಿತ್ರ ಎರಡನ್ನೂ ನಿರ್ದೇಶಿಸಿ ಯಶಸ್ಸು ಗಳಿಸಿದವರು ನಾಗಾಭರಣ.ಒಂದು ಚಿತ್ರವೆಂದರೆ ಬರೀ ಚಿತ್ರವಲ್ಲ, ಅದರಲ್ಲೊಂದು ಸಂದೇಶ ಸಾಮಾಜಿಕ ಕಳಕಳಿ ಇರಲೇಬೇಕು ಎಂಬುದು ಅವರ ಆಶಯ. ಹಾಗಾಗಿಯೇ ಅವರ ಎಲ್ಲಾ ಚಿತ್ರಗಳಲ್ಲೂ ಒಂದಲ್ಲಾ ಒಂದು ತೂಕದ ಅಂಶ ಇದ್ದೇ ಇರುತ್ತದೆ.
ನಾಗಾಭರಣ ರ ಚಿತ್ರಗಳಿಗೆ ಅದೇ ಶಕ್ತಿಯಾದರೆ ಕೆಲವೊಮ್ಮೆ ಅದೇ ಮಿತಿಯಾಗಿಬಿಡುತ್ತದೆ. ವಸುಂಧರೆ ಚಿತ್ರದಲ್ಲಿ ಹತ್ತು ಹಲವಾರು ಅಂಶಗಳಿವೆ. ಭಯೋತ್ಪಾದನೆ, ಸುದ್ದಿ ವಾಹಿನಿಗಳ ಅವಕಾಶವಾದಿತನ, ಉದ್ಯಮಿಗಳ ಸ್ವಾರ್ಥ ಮೂರು ಒಂದೇ ಕಥೆಯಲ್ಲಿ ತಳಕು ಹಾಕಿಕೊಂಡಿವೆ.
ಒಬ್ಬ ಉದ್ಯಮಿಯ ಕಾರ್ಖಾನೆಯಿಂದ ಅಮಾಯಕರ ಸಾವು ನಡೆದಾಗ ಅದನ್ನು ಮುಚ್ಚಿಹಾಕಲು ನಿರಪರಾಧಿಯನ್ನು ಅಪರಾಧಿಯನ್ನಾಗಿ ಮಾಡುತ್ತಾರೆ. ಇದಕ್ಕೆ ಮಾಧ್ಯಮ ಕುಮ್ಮಕ್ಕು ನೀಡುತ್ತದೆ.ಇವೆರಡಕ್ಕೂ ಒಂದು ಬಾಂಬ್ ಸ್ಫೋಟ ಕಾರಣವಾಗುತ್ತದೆ. ಮುಂದೆ ನಾಯಕಿ ಅಪರಾಧಿಯಾಗುತ್ತಾಳೆ. ಇಡೀ ಸಮಾಜ ಅವಳನ್ನು ಅಪರಾಧಿ ಎಂದೇ ನಂಬುತ್ತದೆ. ಅದಕ್ಕೆ ಕಾರಣ ಮಾಧ್ಯಮ. ನ್ಯಾಯಾಲಯದ ಮುಂದೆ ಆರೋಪ ಹೊತ್ತ ನಾಯಕಿಗೆ ಹೆಗಲು ಕೊಡುವವರು ಯಾರು? ಬಾಂಬ್ ಸ್ಫೋಟದ ಹಿನ್ನೆಲೆ ಏನು..? ಈವತ್ತಿನ ಸಮಾಜದಲ್ಲಿ ಸತ್ಯಕ್ಕೆ ನ್ಯಾಯ ಇದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದ್ದರೆ ಒಮ್ಮೆ ವಸುಂಧರೆ ನೋಡಬಹುದು.
ಚಿತ್ರದಲ್ಲಿ ಒಂದಷ್ಟು ಮೆಚ್ಚತಕ್ಕ ಅಂಶಗಳಿವೆ. ಹಾಗೆಯೇ ಅದರ ಹಿನ್ನೆಲೆಯನ್ನು ಅದಕ್ಕೆ ಬೇಕಾದ ಅಂಶಗಳನ್ನು ನಾಗಾಭರಣ ಕಲೆ ಹಾಕಿದ್ದಾರೆ. ಚಿತ್ರದಲ್ಲಿ ಯಾವುದೇ ರೀತಿಯಲ್ಲಿ ಮನರಂಜನೆ ಹಾಸ್ಯ ಮುಂತಾದವುಗಳನ್ನು ನಿರೀಕ್ಷಿಸುವ ಹಾಗಿಲ್ಲ. ಕಥೆ ಸಾಗುತ್ತಾ ಹೋಗುತ್ತದೆ. ಅಲ್ಲಲ್ಲಿ ಬಿಗಿ ಎನಿಸುವ ನಿರೂಪಣೆ ಕೆಲವು ಅನಗತ್ಯ ದೃಶ್ಯಗಳಿಂದ ಪೇಲವ ಎನಿಸುತ್ತದೆ. ಕೆಲವೊಮ್ಮೆ ಗಂಭೀರವಾಗುವ ಚಿತ್ರ ಇನ್ನೂ ಕೆಲವೆಡೆ ಹಗುರವಾಗುತ್ತದೆ. ಹಾಗಾಗಿಯೇ ಇಡೀ ಚಿತ್ರ ಒಟ್ಟಾರೆಯಾಗಿ ಅದ್ಭುತ ಎನಿಸುವುದಿಲ್ಲ. ಅಥವಾ ಇನ್ನೊಂದು ಮೈಸೂರು ಮಲ್ಲಿಗೆ ಜನುಮದಜೋಡಿ ಆಗುವುದೂ ಇಲ್ಲ. ಹಾಗಂತ ಒಂದೇ ಏಟಿಗೆ ಎತ್ತಿ ಬೀಸಾಕುವ ಚಿತ್ರ ಇದಲ್ಲ. ಒಂದು ವಿಷಯವನ್ನು ಹೇಳಲು ಹಲವಾರು ಉಪವಿಷಯಗಳನ್ನು ಸೇರಿಸಿ ಸಿದ್ಧ ಪಡಿಸಿದ ಭೋಜನವಿದು. ತಿಂದ ಮೇಲೆ ತಿಂದವರ ಅಭಿರುಚಿಗೆ ತಕ್ಕಂತೆ ಅಭಿಪ್ರಾಯವೂ ಬದಲಾಗಬಹುದು.
ಐಶ್ವರ್ಯ ನಾಗ್ ಇಲ್ಲಿ ಕಳಂಕಿತ ವೈದ್ಯೆಯ ಪಾತ್ರ ಮಾಡಿದ್ದಾರೆ. ರಾಜೇಶ್ ಗಿಲ್ಲಿ ಪ್ರಮುಖ ಪಾತ್ರವಿದೆ. ಉಳಿದಂತೆ ಸುಧಾರಾಣಿ, ಭರತ್, ಪನ್ನಗ ಭರಣ, ಜಯಂತಿ ಕಥೆಗೆ ಪೂರಕವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಛಾಯಾಗ್ರಹಣದ ಬಗ್ಗೆ ಹೆಚ್ಚು ಹೇಳಲು ಏನೂ ಇಲ್ಲ. ಆದರೆ ಹಿನ್ನೆಲೆ ಸಂಗೀತದಲ್ಲಿ ಇನ್ನಷ್ಟು ಫೋರ್ಸ್ ಬೇಕಿತ್ತು ಎನಿಸದೇ ಇರದು.

No comments:

Post a Comment