Pages

Tuesday, June 3, 2014

ಸವಾರಿ-2

ಸವಾರಿಯ ಕತೆಯಲ್ಲಿ ತನ್ನ ಪ್ರಿಯತಮೆಯನ್ನು ಹುಡುಕುತ್ತಾ ಹೋಗುವ ನಾಯಕ ಜೀವನವನ್ನು ಹುಡುಕಿಕೊಳ್ಳುವ ಕತೆಯಿತ್ತು. ಅದಕ್ಕೊಂದು ಗಟ್ಟಿ ಕತೆಯಿದ್ದ ಕಾರಣ ಅಲ್ಲಲ್ಲಿ ಸ್ವಲ್ಪ ಮಂದಗತಿ ಅನಿಸಿದ್ದರೂ ಚಿತ್ರದಲ್ಲಿನ ಭಾವ ಚಿತ್ರವನ್ನು ಕಾಯ್ದಿತ್ತು. ಆದರೆ ಅದೇ ಮಾತನ್ನು ಸವಾರಿ-2 ಚಿತ್ರಕ್ಕೆ ಹೇಳಲು ಬರುವುದಿಲ್ಲ.
ನಿರ್ದೇಶಕ ಜೆಕಾಬ್ ವರ್ಗೀಸ್ ಅವರು ಒಂದೊಳ್ಳೆ ಕತೆಯನ್ನು ಚೆನ್ನಾಗಿ ಚಿತ್ರಿಸಬಹುದು. ಆದರೆ ಅವರದೇ ಕತೆಯಾದರೆ ಸ್ವಲ್ಪ ಎಡವುತ್ತಾರೇನೋ ಎನ್ನುವ ಅನುಮಾನ ಪೃಥ್ವಿ ಚಿತ್ರ ಬಂದಾಗ ಇತ್ತು. ಈಗ ಅದು ಹೆಚ್ಚು ಕಡಿಮೆ ನಿಜವಿರಬಹುದಾ ಎನಿಸುತ್ತದೆ.
ಒಂದಷ್ಟು ಜನ ಕೆಲವು ಕಾರಣಗಳಿಗಾಗಿ ಪ್ರಯಾಣ ಹೊರಡುತ್ತಾರೆ. ಅವರ ಪ್ರಯಾಣ ಪ್ರೇಕ್ಷಕರಿಗೆ ಹಿತಕರ ಪ್ರವಾಸವಾಗಿದ್ದರೆ ಸವಾರಿ-2 ಕನ್ನಡದ ಮಟ್ಟಿಗೆ ಒಂದೊಳ್ಳೆ ಪ್ರಯತ್ನವಾಗಿರುತ್ತಿತ್ತು. ಆದರೆ ನಿರ್ದೇಶಕರು ಸವಾರಿ ಗುಂಗಿನಲ್ಲೇ ಇರುವುದರಿಂದ ಮತ್ತು ಸವಾರಿ-2 ಎಂದು ಹೆಸರಿಟ್ಟಿರುವುದರಿಂದ ಇಲ್ಲೂ ಅದೇ ಕತೆ ಜೊತೆಗೆ ವ್ಯಥೆ ಎನ್ನಬಹುದು. ಅಲ್ಲಿನ ಹುಡುಕಾಟ, ಅಲ್ಲಿನ ನಕ್ಸಲೈಟ್ಸ್, ಅಲ್ಲಿನ ಜನ ಜೀವನ ಇಲ್ಲಿ ಬೇರೆಯ ರೂಪದಲ್ಲಿದೆ ಅಷ್ಟೇ.
ಒಬ್ಬ ಪತ್ರಕರ್ತ, ಒಬ್ಬ ಪೋಲಿಸ್ ಅಧಿಕಾರಿ ಒಬ್ಬ ದಾರಿಹೋಕ ಮೂವರು ಒಂದೇ ವಾಹನದಲ್ಲಿ ಪ್ರಯಾಣ ಮಾಡುವ ಸಂದರ್ಭ ಬರುತ್ತದೆ. ಪಯಣ ಪ್ರಾರಂಭವಾಗುತ್ತಿದ್ದಂತೆ ಅವರ ಕತೆಯ ಹಿನ್ನೆಲೆಗಳು ಬಿಚ್ಚಿಕೊಳ್ಳುತ್ತವೆ. ಒಂದು ಸಾಲಿನಲ್ಲಿ ಹೇಳಿ ಬಿಡಬಹುದಾದ ಕತೆಯನ್ನು ಸ್ವಲ್ಪ ಎಳೆಯುತ್ತಾರೆ. ಮಧ್ಯಂತರದವರೆಗೆ ಸಿನಿಮಾ ಸಾಗಿಸಬೇಕಾದ ಜವಾಬ್ದಾರಿ ಹೊತ್ತಿರುವುದರಿಂದ ಗಮ್ಯ ಮೊದಲೇ ಗೊತ್ತಿರುವುದರಿಂದ ಅಲ್ಲಿಗೆ ತಲುಪಲು ನಿರ್ದೇಶಕರು ಕೊಂಕಣ ಸುತ್ತುತ್ತಾರೆ. ಪ್ರೇಕ್ಷಕ ಆಕಳಿಸುತ್ತಾನೆ. ಅದನ್ನು ತಡೆಯಲು ಅವರು ಸಾಕಷ್ಟು ಪ್ರಯತ್ನವನ್ನೂ ಮಾಡಿದ್ದಾರೆ. ಇರಲಿ ಲವಲವಿಕೆ ಎಂದುಕೊಂಡು ಒಂದಷ್ಟು ಹಾಸ್ಯಮಯವಾಗಿಸಿದ್ದಾರೆ. ಆದರೆ ಅದೆಲ್ಲಾ ಕತೆಗೆ ಪೂರಕವಾಗಿರದೇ ಇರುವುದರಿಂದ ಆಯಾ ಸಮಯದಲ್ಲಿ ಮಾತ್ರ ಹಿತವೆನ್ನಿಸಿ ಮತ್ತೆ ಅದೇ ಪರಿಣಾಮವನ್ನು ಮುಂದುವರೆಸುತ್ತದೆ.
ಈ ಎಲ್ಲದರ ನಡುವೆ ಸಿನಿಮಾದ ಆಶಯ ಇಷ್ಟವಾಗುತ್ತದೆ. ಕತೆಯ ಓಘ ಮತ್ತು ಹರಿವನ್ನು ಇನ್ನಷ್ಟು ಬಲ ಪಡಿಸಿದ್ದರೆ ಚಿತ್ರ ಕನ್ನಡಕ್ಕೆ ಅದ್ಭುತ ಚಿತ್ರವಾಗುತ್ತಿತ್ತು. ಹಾಗೆಯೇ ಚಿತ್ರದ ಬರವಣಿಗೆ ಸಶಕ್ತವಾಗಿರಬೇಕಿತ್ತು.

ಶ್ರೀನಗರ ಕಿಟ್ಟಿ ತಮ್ಮ ಎಂದಿನ ಲವಲವಿಕೆ ಮಾತು-ಕತೆ ಮುಂದುವರೆಸಿದ್ದಾರೆ.ಗಿರೀಶ್ ಕಾರ್ನಾಡ್, ಶ್ರುತಿ ಹರಿಹರನ್, ಕರಣ್ ರಾವ್, ಸಾಧುಕೋಕಿಲ, ಚಿಕ್ಕಣ್ಣ ತಮ್ಮ ತಮ್ಮ ಪಾತ್ರಗಳ ಆಶಯಕ್ಕೆ ನ್ಯಾಯ ಒದಗಿಸಿದ್ದಾರೆ.  ಕದ್ರೀ ಸಂಗೀತದಲ್ಲಿ ಈ ಸಾರಿ ಗುನುಗುನಿಸುವ ಹಾಡು ಕೇಳದೆ ಇರುವುದು ಯಾರ ತಪ್ಪು ಎಂಬುದನ್ನು ನಿರ್ದೇಶಕರನ್ನೇ ಕೇಳಬೇಕಾಗುತ್ತದೆ.

No comments:

Post a Comment