ಒಂದು
ಕತೆಯನ್ನು ನಾಟಕ ರೂಪಕ್ಕೆ ತರುವಾಗ ಹಾಗೆಯೇ ನಾಟಕವನ್ನು ಚಿತ್ರರೂಪಕ್ಕೆ ತರುವಾಗ ಆಯಾ
ಮಾಧ್ಯಮಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಶಿವಾನಂದ ತಮ್ಮ ನಾಟಕ
ಆಂದೋಲನವನ್ನು ಮತ್ತೆ ಸತ್ಯಾಗ್ರಹ ಎನ್ನುವ ಹೆಸರಿನಲ್ಲಿ ತೆರೆಯ ಮೇಲೆ ತಂದಿದ್ದಾರೆ. ರಾಜಕಾರಣ,
(ಅ)ಸಾಮಾಜಿಕ ವ್ಯವಸ್ಥೆಯನ್ನು ಕುರಿತಾದ ಚಿತ್ರ ಸತ್ಯಾಗ್ರಹ.ಹೆಸರೇ ಸೂಚಿಸುವಂತೆ ಇದು ಸತ್ಯಾಗ್ರಹ
ಕುರಿತಾದ ಚಿತ್ರವಾದ್ದರಿಂದ ಮನರಂಜನೆಗಿಂತ ಬೋಧನೆ ಪ್ರಚೋದನೆಯನ್ನು ಚಿತ್ರದಲ್ಲಿ
ನಿರೀಕ್ಷಿಸಬೇಕಾಗುತ್ತದೆ.
ಚಿತ್ರದಲ್ಲಿ
ಅಚ್ಚುಕಟ್ಟಾದ ಕತೆಯಿದೆ. ಆದರೆ ಚಿತ್ರಕತೆ ತೆವಳುತ್ತದೆ. ಇತ್ತ ನಾಟಕವೂ ಆಗದೆ ಸಿನಿಮಾವೂ ಆಗದೆ
ಕೆಲ ದೃಶ್ಯಗಳು ಎಡಬಿಡಂಗಿ ಎನಿಸಿಕೊಳ್ಳುತ್ತವೆ. ಹಾಗೆಯೇ ಇಡೀ ಚಿತ್ರದಲ್ಲಿ ಒಂದೇ ಗತಿಯಿಲ್ಲದೆ
ಸಿನಿಮಾ ಒಂದೇ ನೇರ ನಿರೂಪಣೆಯ ಶೈಲಿಯ ಕೊರತೆಯಿಂದ ಹೇಗೇಗೋ ಕಾಣಿಸುತ್ತದೆ. ಹಾಗೆಯೇ ಕಲಾತ್ಮಕ,
ಮನರಂಜನಾತ್ಮಕ ಎನ್ನುವ ಸಿನಿಮಾ ಶೈಲಿಯ ನಡುವೆ ಇರುವ ಗೆರೆ ಬರೆಯ ಇತಿ ಮಿತಿಗೆ ಒಳಪಡದೆ ತನ್ನಿಷ್ಟ
ಬಂದ ಹಾಗೆ ಸಿನಿಮಾ ಸಾಗುತ್ತದೆ. ಹಾಗಾಗಿ ಮಂದಗತಿ ಒಮ್ಮೊಮ್ಮೆ ನಿಧಾನಗತಿ ಬೋರ್ ಗತಿ ಆಗುತ್ತದೆ.
ಇದೇನು ಕತೆಯೇ ಮುಂದಕ್ಕೆ ಹೋಗುತ್ತಿಲ್ಲ ಎನಿಸುವಂತೆ ಇಷ್ಟೆಲ್ಲಾ ನಡೆದಿದೆಯಾ ಎನಿಸುತ್ತದೆ.
ಒಟ್ಟಾರೆಯಾಗಿ ಇಡೀ ಚಿತ್ರ ತನ್ನ ಮೂಲ ಕತೆಯ ಆಶಯವನ್ನು ಹಾಗೆಯೇ ತೆರೆಯ ಮೇಲೆ ತರುವಲ್ಲಿ
ಸಫಲವಾಗಿಲ್ಲ.
ಒಬ್ಬ
ಊರ ರಾಜಕಾರಣಿ ರಾಜ್ಯವಾಳಲು ಹೋಗುತ್ತಾನೆ. ಅದಕ್ಕೆ ಸ್ವಾರ್ಥಕ್ಕಿಂತ ನಿಶ್ವಾರ್ಥವೆ
ಹೆಚ್ಚಿರುತ್ತದೆ. ಪಂಚಾಯತಿಗಿಂತ ಮೇಲೇರಿ ಸದನಕ್ಕೆ ಸಾಗಲು ಪ್ರಯತ್ನಿಸುತ್ತಾನೆ. ಮತ್ತೊಬ್ಬ ಬಡವ
ತನ್ನ ಪೂರ್ವಜರ ಭೂಮಿಯನ್ನು ಮತ್ತೆ ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಇವರ ನಡುವೆ
ಸತ್ಯಾಗ್ರಹ ಬರುತ್ತದೆ. ಉಳ್ಳವರು ಶಿವಾಲಯ ಮಾಡುವರು ಎನ್ನುವ ಮಾತಿನಂತೆ ಬಡವ ಏನು ಮಾಡಲು ಸಾಧ್ಯ?
ಹಾಗಾಗಿ ಗಾಂಧೀ ತತ್ವದ ಮೂಲಕ ತನ್ನ ದ್ದನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ.
ಇದರ
ನಡುವೆ ರಾಜಕೀಯ ವ್ಯಾಮೋಹಿ ತನ್ನ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಾನೆ. ಅವರವರ ಆಶಯ ಆಸೆಗಳ
ನಡುವೆ ನಿಜವಾದ ಹೋರಾಟ ಹೇಗೆ ಅರ್ಥ ಕಳೆದುಕೊಳ್ಳುತ್ತದೆ ಎಂಬುದು ಮುಂದಿನ ಕಥಾನಕ. ರಾಜಕೀಯದ
ದೊಂಬರಾಟದಲ್ಲಿ ಏನೇನೆಲ್ಲಾ ನಡೆಯುತ್ತದೆ ಎಂಬುದು ಮತ್ತು ಅಮಾಯಕರು ಹೇಗೆ ಬಣ್ಣದ ಮಾತುಗಳಿಗೆ
ಮಾರುಹೋಗುತ್ತಾರೆ ಎಂಬುದನ್ನು ತಕ್ಕ ಮಟ್ಟಿಗೆ ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕರು.
ರಾಜಕೀಯಾಕಾಂಕ್ಷಿಯಾಗಿ
ಶರತ್ ಲೋಹಿತಾಶ್ವ, ಮನೆಯ ಆಳಾಗಿ ಯೋಗೀಶ್, ಸ್ವಾತಂತ್ರ್ಯ ಹೋರಾಟಗಾರನಾಗಿ ದತ್ತಣ್ಣ ಮತ್ತು
ಸತ್ಯಣ್ಣನಾಗಿ ಶಿವಾನಂದ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಉಳಿದಂತೆ ಛಾಯಾಗ್ರಹಣ ಪರವಾಗಿಲ್ಲ.
ಸಂಗೀತ ಅಷ್ಟು ಪೂರಕವಾಗಿಲ್ಲ. ಒಟ್ಟಿನಲ್ಲಿ ಒಂದೊಳ್ಳೆ ಕತೆಯನ್ನು ತೆರೆಯ ಮೇಲೆ ತಂದಿರುವ ನಿರ್ದೇಶಕರು
ಅದರ ನಿರೂಪಣೆಯನ್ನು ಬಿಗಿಗೊಳಿಸಿದ್ದರೆ ಒಂದೊಳ್ಳೆ ಪೊಲಿಟಿಕಲ್ ಥ್ರಿಲ್ಲರ್ ಆಗುತ್ತಿತ್ತು.
No comments:
Post a Comment