Pages

Sunday, February 9, 2014

ಬ್ರಹ್ಮ

ನಾಯಕ ಬ್ರಹ್ಮನನ್ನು ಕೊಲ್ಲಲು ಹುಡುಗಿಯೊಬ್ಬಳು ಬರುತ್ತಾಳೆ ಎಂದರೆ ಅದು ಸೂಪರ್ ಚಿತ್ರದ ಓಪನಿಂಗ್ ದೃಶ್ಯವನ್ನು ಹೋಲುತ್ತದಲ್ಲಾ ಎನ್ನಬಹುದು.ತಲತಲಾಂತರದಿಂದ ದಾನ ಧರ್ಮ ಮಾಡಿ ಎಲ್ಲವನ್ನೂ ಕಳೆದುಕೊಳ್ಳುವ ವಂಶದ ಕುಡಿಯಾದ ಬ್ರಹ್ಮ ಉಳ್ಳವರಿಂದ ಹಣ ಕಸಿದು ಆನಾಥರಿಗೆ ಕೊಡುತ್ತಾನೆ. ಕೊನೆಯಲ್ಲಿ ಅವನ ಹೆತ್ತ ತಂದೆಯ ಹಣವನ್ನೇ ಕೊಳ್ಳೆ ಹೊಡೆಯಬೇಕಾಗಿ ಬರುತ್ತದೆ. ಕೊಳ್ಳೆ ಹೊಡೆದು ಅಪ್ಪನನ್ನು ಸಾಯಿಸುತ್ತಾನಾ..? 

ಇಷ್ಟು ಸರಳ ಕಥೆಯನ್ನು ಚಂದ್ರು ತುಂಬಾ ಕ್ಲಿಷ್ಟಕರವಾಗಿ ನಿರೂಪಿಸಿದ್ದಾರೆ. ಹಾಗಾಗಿ ಚಿತ್ರದ ಕತೆ ಕೊಂಕಣ ಸುತ್ತಿ ಮೈಲಾರಕ್ಕೆ ಬರುತ್ತದೆ. ಕೊಲೆ ಸುಳಿಗೆ ದರೋಡೆ ಪ್ರೀತಿ ಎಲ್ಲವನ್ನೂ ಮಾಡುವ ನಮ್ಮ ನಾಯಕ ಬ್ರಹ್ಮ ಆಪ್ತನಾಗುವುದಿಲ್ಲ. ಹಾಗೆಯೇ ಭ್ರಷ್ಟ ರಿಂದ ಕಸಿದು ರಾಬಿನ್ ಹುಡ್ ಶೈಲಿಯಲ್ಲಿ ಆನಾಥಾಶ್ರಮಕ್ಕೆ ಕೊಡುತ್ತಾನೆ ಎನ್ನುವ ಕ್ಲೀಷಾತ್ಮಕ ಕಾರಣದ ನಾಯಕ ಉದಾತ್ತ ಎನಿಸುವುದಿಲ್ಲ. ಅದಕ್ಕೆ ಕಾರಣ ಚಿತ್ರದ ಚಿತ್ರಕತೆ.

ಇಲ್ಲಿ ನಿರ್ದೇಶಕ ಚಂದ್ರು ಒಂದು ಕತೆಯನ್ನು ಉಪೇಂದ್ರ ಶೈಲಿಯಲ್ಲಿ ಹೇಳಲು ಹೋಗಿದ್ದಾರೆ.ಚಿತ್ರಕತೆಯಲ್ಲಿ ಅನಗತ್ಯ ಟ್ವಿಸ್ಟ್ ಕೊಟ್ಟಿದ್ದಾರೆ. ಹಾಗೆಯೇ ನಾಯಕನನ್ನು ವಿಜೃಂಭಿಸುವ ಭರದಲ್ಲಿ ವಾಸ್ತವತೆಯನ್ನು ಪಕ್ಕಕ್ಕೆ ತಳ್ಳಿದ್ದಾರೆ. ನೊ ಲಾಜಿಕ್ ಓನ್ಲಿ ಮ್ಯಾಜಿಕ್ ಎಂದು ಕೊಂಡು ಪ್ರತಿಯೊಂದನ್ನೂ ಸಿನಿಮೀಯ ಮಾಡಿದ್ದಾರೆ. ಉದಾಹರಣೆಗೆ ಇಡೀ ಮಾಧ್ಯಮವೇ ಉಪೇಂದ್ರರ ಮನೆಯಲ್ಲಿ ನೆರೆದಿರುವಾಗ ಅವನನ್ನು ಸಾಯಿಸಲು ಬರುವ ಹೆಂಗಸಿಗೆ ನಾಯಕ ತಾನೇ ಅವಳ ಗಂಡನನ್ನು ಕೊಂದುದಾಗಿ ಹೇಳುತ್ತಾನೆ. ಇಲ್ಲಿ ಮಾಧ್ಯಮದವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಹಾಗೆಯೆ ಆಗಾಗ ತೋರಿಸುವ ಖಾವಿಧಿರಿಸಿನ ವ್ಯಕ್ತಿ ಅಪ್ಪನಿಂದಲೇ ಮಗನ ಸಾವು ಎನ್ನುವ ಶಾಪಕ್ಕೆ ಅರ್ಥ ಕೊಟ್ಟಿಲ್ಲ. ಆ ಶಾಪ ನಿಜವಾಗುವುದೂ ಇಲ್ಲ. ಹಾಗೆಯೇ ರಂಗಾಯಣ ರಘು, ಸಾಧು ಕೋಕಿಲ ಪಾತ್ರಗಳಿಗೆ ತಾರ್ಕಿಕ ಅಂತ್ಯವಿಲ್ಲ. ಇಂತಹ ದೃಶ್ಯಗಳಲ್ಲಿ ಸ್ವಲ್ಪ ಲಾಜಿಕ್ ಮತ್ತು ವಾಸ್ತವತೆಯನ್ನು ಬೆರೆಸಿದ್ದರೆ ಚಿತ್ರದ ಕಸುವು ಹೆಚ್ಚುತ್ತಿತ್ತೇನೋ?  ಹಾಗಾಗಿ ಚಿತ್ರ ನೋಡಿದ ನಂತರ ಕಾಡುವುದಿಲ್ಲ. ಹಾಗೆಯೇ ಅಬ್ಬ ಎನ್ನುವಂತಹ ಅನುಭವ ಕೊಡುವುದಿಲ್ಲ.

ಚಿತ್ರದಲ್ಲಿ ಒಬ್ಬ ರಾಜಬ್ರಹ್ಮನ ಕತೆ ಬರುತ್ತದೆ. ಕೇವಲ ನಾಲ್ಕು ನಿಮಿಷಗಳಷ್ಟು ಬರುವ ಐತಿಹಾಸಿಕ ಕತೆಯಲ್ಲಿ 1600 ಇಸವಿಯ ಒಂದು ಯುದ್ಧ ಒಂದು ದಾನದ ಸನ್ನಿವೇಶ ಹಾಗೆ ಬಂದು ಹೀಗೆ ಹೋಗುತ್ತದೆ. ಅದು ಕತೆಗೆ ಅಂತಹ ಸಹಾಯ ಮಾಡಿಲ್ಲ. ಯಾಕೆಂದರೆ ಅದರ ಹಿನ್ನೆಲೆಯಲ್ಲಿ ಯಾವುದೋ ಕೌತುಕವಾದ ಕತೆಯನ್ನು ನಿರೀಕ್ಷೆ ಮಾಡುವ ಪ್ರೇಕ್ಷಕ ಸುಮ್ಮನೆ ಒಂದು ಯುದ್ಧದ ದೃಶ್ಯಕ್ಕೆ ತೃಪ್ತನಾಗಬೇಕಾಗುತ್ತದೆ.

ಮೊದಲಾರ್ಧದ ಕತೆಯಲ್ಲಿ ಬುದ್ದಿವಂತನ ಶೈಲಿಯಲ್ಲಿ ಒಬ್ಬೊಬ್ಬರೇ ಬಂದು ಬ್ರಹ್ಮನನ್ನು ಬಿಚ್ಚಿಡುತ್ತಾ ಸಾಗುತ್ತಾರೆ. ಆನಂತರ ಸೂಪರ್ ರೀತಿಯಲ್ಲಿ ಹೆಂಗಸು ಅವನನ್ನು ಕೊಲ್ಲಲು ಹುಡುಕುತ್ತಾಳೆ. ಕೊಲೆ ಸುಳಿಗೆ ಡಕಾಯತಿ ಮಾಡುವ ನಾಯಕ ಕೊನೆಗೆ ರಾಜಕಾರಣಿಯಾಗುತ್ತಾನೆ. ಮೊದಲಾರ್ಧ ಅಲ್ಲಲ್ಲಿ ತಮಾಷೆಯಾಗಿ ಸಾಗುತ್ತದೆ. ದ್ವಿತೀಯಾರ್ಧ ಮಂದಗತಿಯಲ್ಲಿ ಸಾಗಿ ಕೊನೆಯಾಗುತ್ತದೆ.

ಉಪೇಂದ್ರ ತಮ್ಮ ಎಂದಿನ ಅಭಿನಯವನ್ನು ಮುಂದುವರೆಸಿದ್ದಾರೆ. ನಾಯಕಿ ಪ್ರಣೀತ ಹಾಡುಗಳ ಸಂಖ್ಯೆಯಷ್ಟೇ ದೃಶ್ಯಗಳಲ್ಲಿ ಬಂದು ಹೋಗುತ್ತಾರೆ.ನಾಸರ್ ಪಾತ್ರ ಪೋಷನೆಯಲ್ಲೇ ಗೊಂದಲವಿದೆಯಾದ್ದರಿಂದ ಅದೇ ರೀತಿಯಾಗಿ ಅಭಿನಯಿಸಿದ್ದಾರೆ. ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿರುವ ಶಾಹುರಾಜ್ ಶಿಂಧೆ ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿ ಅದರ ಸತ್ವವನ್ನು ಸಾಧ್ಯವಾದಷ್ಟು ಪೇಲವಗೊಳಿಸಿದ್ದಾರೆ. ಇನ್ನುಳಿದಂತೆ ಸಾಧುಕೋಕಿಲ, ರಂಗಾಯಣ ರಘು ಮುಂತಾದವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಾಹುಲ್ ದೇವ್ ಬರೀ ಒಂದು ದೃಶ್ಯದಲ್ಲಿ ಬಂದು ಸಾಯುತ್ತಾರೆ.

ಹಾಡುಗಳು ಹಿನ್ನೆಲೆ ಸಂಗೀತ ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ ಎನ್ನಬಹುದು.ಆದರೆ ಕತೆ ಚಿತ್ರಕತೆ ಕುತೂಹಲಕಾರಿಯಾಗಿದ್ದರೆ ಸಿನಿಮಾ ಉತ್ತಮವಾಗುತ್ತಿತ್ತು.ಆದರೆ ಸತ್ವವಿಲ್ಲದ ಚಿತ್ರಕತೆ ಚಿತ್ರವನ್ನು ಒಂದು ಹೆಜ್ಜೆ ಹಿಮ್ಮೆಟ್ಟಿಸಿದೆ.

No comments:

Post a Comment