Pages

Sunday, March 23, 2014

ಚತುರ್ಭುಜ:

ಮುಖ್ಯವಾಗಿ ನಾಯಕನ ಪಾತ್ರ ಅಸಂಬದ್ಧ ಎನಿಸಿಕೊಳ್ಳುತ್ತದೆ. ಚಿತ್ರದಲ್ಲಿ ಒಂದೇ ಎಳೆಯ ಒಬ್ಬ ವ್ಯಕ್ತಿ ಮಹಾನಗರಕ್ಕೆ ಬದುಕು ಕಟ್ಟಿಕೊಳ್ಳಲು ಬರುತ್ತಾನೆ. ಸರಿ ಅವನ ಬದುಕಲ್ಲಿ ಏನೇನೋ ಆಗಿಹೋಗುತ್ತದೆ. ಅದೂ ಸರಿ ಆಮೇಲೆ..? ಕನ್ನಡ ಚಿತ್ರರಂಗದಲ್ಲಿ ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬರುವ ಚಿತ್ರದ ನಾಯಕರು ಲಾಂಗು ಹಿಡಿಯುತ್ತಾರೆ, ಪ್ರೀತಿ ಮಾಡುತ್ತಾರೆ..ಇದು ಚಿತ್ರಗಳ ಸಾಮಾನ್ಯ ಸಂಗತಿಗಳು. ಚತುರ್ಭುಜ ಕೂಡ ಇದರಿಂದ ಹೊರತಾಗಿಲ್ಲ. ಆದರೆ ಅದನ್ನೇ ನೆಟ್ಟಗೆ ಹೇಳದ ನಿರ್ದೇಶಕ ಕೃಷ್ಣಾ ಲೇಖನ ಹೇಗೇಗೋ ಹೇಳಲು ಹೋಗಿ ಅಭಾಸ ಮಾಡಿದ್ದಾರೆ.
ಇತ್ತೀಚಿನ ಚಿತ್ರಗಳ ಬಂಡವಾಳವಾದ ದ್ವಂದ್ವಾರ್ಥದ ಸಂಭಾಷಣೆಯನ್ನೇ ಚಿತ್ರದ ಮೂಲವನ್ನಾಗಿಸಿದ್ದಾರೆ. ಅದನ್ನೇ ಪ್ರಮುಖವಾದ ಗೆಲುವಿನ ಸೂತ್ರ ಎಂದುಕೊಂಡಿದ್ದಾರೆ. ಹಾಗಾಗಿ ಪುಂಖಾನುಪುಂಖವಾಗಿ ಮಾತುಗಳನ್ನು ಹರಿಯಬಿಟ್ಟಿದ್ದಾರೆ. ಆದರೆ ಅದನ್ನು ಯಾರ ಕೈಲಿ ಆಡಿಸಬೇಕು, ಆ ರೀತಿಯ ಮಾತುಗಳನ್ನು ಆಡುವ ನಾಯಕನ ಪಾತ್ರ ಪೋಷಣೆ ಎಂತಹದ್ದಿರಬೇಕು ಎಂಬುದನ್ನೆಲ್ಲಾ ತಲೆ ಕೆಡಿಸಿಕೊಳ್ಳಲು ಹೋಗಿಲ್ಲ. ಮಾತು ಬರೆದು ಅದನ್ನು ಆಡಲು ಪಾತ್ರಗಳಿಗೆ ಆಡಲು ಬಿಟ್ಟಿದ್ದಾರೆ. ಹಾಗಾಗಿ ಪ್ರತಿಯೊಂದು ಪಾತ್ರವು ಕತೆಯಿಲ್ಲ. ಮೂರು ಉಪಕತೆಗಳಿವೆ. ಹಾಗೆಯೇ ಮಂಗಳಮುಖಿಯ ಕತೆಯೂ ಒಂದು ಪ್ರಮುಖವಾಹಿನಿಯ ಕತೆಯಲ್ಲಿ ಬಂದುಹೋಗುತ್ತದೆ. ಆದರೆ ಇದಾವುದೂ ಚಿತ್ರದ ಕತೆಗೆ ಪೂರಕವಾಗಿಲ್ಲ. ಹಾಗಾಗಿ ಎಲ್ಲವೂ ಅನವಶ್ಯಕ ಅಸಂಬದ್ಧ ಎನಿಸಿಕೊಂಡು ಚಿತ್ರ ಬೇಸರ ತರಿಸುತ್ತದೆ.
ಚಿತ್ರದ ಆರಂಭ ಮತ್ತು ಅಂತ್ಯ ಚೆನ್ನಾಗಿದೆ. ಆದರೆ ಮದ್ಯದ ಹೂರಣ ಮಾತ್ರ ಅಂತ್ಯಕ್ಕೂ ಆರಂಭಕ್ಕೂ ಪೂರಕವಾಗಿಲ್ಲದೆ ಇರುವುದು ಚಿತ್ರಕತೆಯ ಸೋಲು ಆ ಮೂಲಕ ಅದನ್ನು ಬರೆದ ನಿರ್ದೇಶಕನ ಸೋಲು ಎನ್ನಬಹುದು.
ನಾಯಕ ಆರ್ವ ಮತ್ತು ಶ್ರೇಯಾ ಬಾದಲ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಕಷ್ಟ ಪಟ್ಟಿದ್ದಾರೆ. ಉಳಿದ ತಾರಾಗಣದಲ್ಲಿ ಸತ್ವವಿಲ್ಲ. ಹಾಗೆಯೇ ಪಾತ್ರಗಳೇ ಗಟ್ಟಿಯಿಲ್ಲ. ಚಿತ್ರದಲ್ಲಿ ಒಂದಷ್ಟು ಹಾಸ್ಯ ದೃಶ್ಯಗಳಿವೆಯಾದರೂ ಅವುಗಳಿಗೂ ಚಿತ್ರದ ಕತೆಗೂ ಸಂಬಂಧ ಇಲ್ಲದಿರುವುದು ಕಿರಿ ಕಿರಿ ತರಿಸುತ್ತದೆ.ಲೂಸಿಯಾ ಚಿತ್ರದ ಮೂಲಕ ಗಮನ ಸೆಳೆದಿದ್ದ ಸಂಗೀತ ನಿರ್ದೇಶಕ ಪೂರ್ಣ ಚಂದ್ರ ತೇಜಸ್ವಿ ಇಲ್ಲಿ ಸಪ್ಪೆ ಎನಿಸುತ್ತಾರೆ. ಅವರ ಹಾಡುಗಳ ಸಂಗೀತ ಮನಸ್ಸಿನಲ್ಲಿ ಉಳಿಯುವಿದಿಲ್ಲ. ಹಾಗೆಯೇ ಛಾಯಾಗ್ರಹಣವೂ ಪರಿಣಾಮಕಾರಿಯಾಗಿಲ್ಲ.
ಚಿತ್ರದ ಸಂಭಾಷಣೆ ಒಂದಷ್ಟು ಕೇಳಿಸಿದರೆ ಮತ್ತಷ್ಟನ್ನೂ ಸೆನ್ಸಾರ್ ಮಂಡಳಿ ಸುಮ್ಮನಾಗಿಸಿದ್ದಾರೆ. ಹಾಗಾಗಿ ಒಂದಷ್ಟು ಮಾತಿನ ಮುಂದುವರಿಕೆಗಳನ್ನು ಊಹಿಸಿಕೊಳ್ಳಬೇಕಷ್ಟೇ.
ಒಬ್ಬ ಪ್ರೇಕ್ಷಕ ಒಂದು ಒಳ್ಳೆಯ ಕತೆಯ ಭಿನ್ನ ನಿರೂಪಣೆಯ ಚಿತ್ರಗಳನ್ನು ಇಷ್ಟ ಪಡುತ್ತಾನೆ ಎಂಬುದು ನಿಜ. ಹಾಗಂತ ಕತೆಯನ್ನೇ ಮರೆತು ಏನಾದರೂ ಒಂದು ವಿಭಿನ್ನ ಎನಿಸುವ ಚಿತ್ರ ಮಾಡಲೇ ಬೇಕೆಂದು ಹೊರಟರೆ ಚತುರ್ಭುಜ ಆಗುತ್ತದೆ ಎಂಬುದು ಒಂದು ಸಾಲಿನ ವಿಮರ್ಶೆ ಎನ್ನಬಹುದು.


No comments:

Post a Comment