Pages

Saturday, April 5, 2014

ಸಡಗರ:

ಪ್ರೀತಿಗೆ ಕಣ್ಣಿಲ್ಲ ಕಿವಿಯಿಲ್ಲ ಎನ್ನುತ್ತಿದ್ದವರು ಇನ್ನುಮುಂದೆ ಹೆಸರೂ ಬೇಕಾಗಿಲ್ಲ ಎನ್ನಬಹುದೇನೋ?ಅದೇ ಸಡಗರ ಚಿತ್ರದ ವಿಶೇಷತೆ ಎಂದರೆ ಮತ್ತೇನೂ ವಿಶೇಷವಿಲ್ಲವಾ ಎಂಬ ಪ್ರಶ್ನೆ ನೀವು ಕೇಳಬಹುದು. ಇರೋದೇ ಇಷ್ಟೇ ಬೇಕಾದ್ರೆ ನೋಡಿ ಇಲ್ಲವಾದರೆ ಬಿಡಿ ಎಂದು ಚೌಕಾಸಿಗೆ ಬೀಳದ ನಿರ್ದೇಶಕ ರಾಜ್ ಗೋಪಿ ಸೂರ್ಯ ಹೇಳಬಹುದೇನೋ? ಉಳಿದದ್ದು ನಮ್ಮ ಮರ್ಜಿಗೆ ಬಿಟ್ಟದ್ದು.
ಹೊಸಬರ ಚಿತ್ರ ಎಂದಾಗ ಹೊಸತನ, ಹೊಸ ನಿರೂಪಣೆ ಇಲ್ಲದಿದ್ದರೂ ಪರವಾಗಿಲ್ಲ, ಕೊನೆಗೆ ಗಟ್ಟಿಯಾದ ಕತೆಯಾದರೂ ಇರಬೇಕಾಗುತ್ತದೆ. ಒಬ್ಬ ಹೊಸ ನಿರ್ದೇಶಕ ಸಿನಿಮಾ ಮಾಡುವಾಗ ಹಲವಾರು ವಿಷಯದಲ್ಲಿ ರಾಜಿಯಾಗಬೇಕಾಗುತ್ತದೆ ನಿಜ. ಹಾಗಂತ ಕತೆಯ ವಿಷಯದಲ್ಲೂ ರಾಜಿಯಾಗುವುದು ಏಕೆ.? ಸಡಗರ ಚಿತ್ರದಲ್ಲಿ ಸಡಗರವಿಲ್ಲ. ಗಟ್ಟಿಯಾದ ಕತೆ ಚಿತ್ರಕತೆಯಿಲ್ಲ ಕೌತುಕ ಕುತೂಹಲವಿಲ್ಲ, ನವಿರೇಳಿಸುವ ಪ್ರೇಮಕತೆಯೂ ಇಲ್ಲ. ಸುಮ್ಮನೆ ಸಾದಾಸೀದಾವಾಗಿ ಚಿತ್ರ.
ತಂದೆಯ ಒಂದು ಆಸೆ ಅಂದರೆ ಮಗ ಜವಾಬ್ದಾರಿ ಪುರುಶನಾಗಲಿ ಎಂಬುದು. ಆದರೆ ಆತ ಉಂಡಾಡಿ ಗುಂಡನಂತೆ ಅಲೆಯುತ್ತಾನೆ. ಪ್ರೀತಿಸಲು ತೋರಿಸುವ ಉತ್ಸಾಹ, ಖಾಳಜಿಯನ್ನು ಮನೆಯ ಮೇಲೆ ತೋರಿಸುವುದಿಲ್ಲ. ಇಷ್ಟು ಹೇಳಿದ ಮೇಲೆ ಚಿತ್ರದ ಆದಿ ಅಂತ್ಯಗಳನ್ನು ಊಹಿಸಿಬಿಡಬಹುದು. ಅದೇನೇ ಆಗಲಿ ಒಮ್ಮೆ ತಿಳಿದುಕೊಂಡೆ ಬಿಡೋಣ ಎನ್ನುವವರು ಚಿತ್ರವನ್ನೊಮ್ಮೆ ನೋಡಬಹುದು.
ಚಿತ್ರದ ಕತೆ ಒಂದು ಹಾದಿಯಲ್ಲಿ ಸರಾಗವಾಗಿ ಸಾಗುತ್ತಿರುವಾಗಲೇ ಅನಗತ್ಯ ದೃಶ್ಯಗಳು ಬಂದು ಚಿತ್ರವನ್ನು ದಿಕ್ಕು ತಪ್ಪಿಸುತ್ತವೆ. ಅದೇಕೆ ಹೀಗೆ, ನೀವ್ಯಾಕೆ ಬಂದಿರಿ ಎಂದರೆ ಅವೆಲ್ಲ ನಿರ್ದೇಶಕರತ್ತ ಬೆರಳು ತೋರಿಸುತ್ತವೆ. ಚಿತ್ರದಲ್ಲಿ ಎಲ್ಲಾ ರಸಗಳೂ ಇರಲಿ ಎಂಬ ಉದ್ದೇಶದಿಂದ ಒಂದೆ ಚಿತ್ರದಲ್ಲಿ ಎಲ್ಲವನ್ನು ತುಂಬಿಸಿ ಪರಿಪೂರ್ಣ ಚಿತ್ರ ಮಾಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಅಡಿಗೆ ಮನೆಯಲ್ಲಿ ಪದಾರ್ಥ ಇದೆ ಎಂದಾಕ್ಷಣ ಎಲ್ಲವನ್ನೂ ಎಲ್ಲಾ ಅಡಿಗೆಗೂ ಹಾಕಲು ಸಾಧ್ಯವಿಲ್ಲವಲ್ಲ. ಯಾವುದಕ್ಕೂ ಯಾವುದನ್ನು ಎಷ್ಟೆಷ್ಟು ಹಾಕಬೇಕೆಂಬುದು ಅವನಿಗೆ ಗೊತ್ತಿರಬೇಕು.
ಶಂಕರ್ ಆರ್ಯನ್, ಯಜ್ಞಾ ಶೆಟ್ಟಿ, ತಬಲಾ ನಾಣಿ, ಶರತ್ ಲೋಹಿತಾಶ್ವ ಮುಂತಾದವರು ತಮ್ಮ ತಮ್ಮ ಪಾತ್ರಗಳಿಗೆ ತಕ್ಕ ಅಭಿನಯ ನೀಡಲು ಪ್ರಯತ್ನಿಸಿದ್ದಾರೆ.ಇನ್ನು ಸಂಗೀತ ಮತ್ತು ಛಾಯಾಗ್ರಹಣವೂ ಕೂಡ ತೆಗೆದು ಹಾಕುವ ಹಾಗಿಲ್ಲ ಎನ್ನಬಹುದು.

ನಿರ್ದೇಶಕ ಗೋಪಿ ಸೂರ್ಯ ಒಂದಷ್ಟು ಕತೆ ಕಡೆ ಗಮನ ಹರಿಸಿದ್ದರೆ ಸಡಗರದಿಂದ ಚಿತ್ರವನ್ನೊಮ್ಮೆ ನೋಡಬಹುದಿತ್ತೇನೋ?

No comments:

Post a Comment