Pages

Friday, January 2, 2015

ಖುಷಿ ಖುಷಿಯಾಗಿ:

ಮದುವೆ ಮನೆ ಎಂದರೆ ಸಂಭ್ರಮದ ವಾತಾವರಣದ ಜೊತೆಗೆ ವಯಸ್ಸಿನ ಹುಡುಗರ ಕಣ್ಣಿಗೆ ಹಬ್ಬವೋ ಹಬ್ಬ. ಇಲ್ಲೂ ಹಾಗೆಯೇ ಆಗುತ್ತದೆ. ಮದುವೆಗೆ ಹೋದ ನಮ್ಮ ನಾಯಕನ ಕಣ್ಣಿಗೆ ಸುಂದರಿ ಒಬ್ಬಳು ಗೋಚರಿಸಿ ಆತ ಅಲ್ಲೇ ಪ್ಲಾಟ್ ಆಗುತ್ತಾನೆ. ಆಕೆಯ ನಂಬರ್ ತೆಗೆದುಕೊಳ್ಳುವಲ್ಲಿ ಗುಂಡಿನ ಮತ್ತು ಗಮ್ಮತ್ತು ತೋರಿಸಿ ಮತ್ತೊಂದು ಹುಡುಗಿಯ ನಂಬರ್ ಸಿಗುತ್ತದೆ. ಅವಳೇ ಇವಳು ಎಂದು ನಾಯಕ ಹಿಂದೆ ಬೀಳುತ್ತಾನೆ. ಬರೀ ಮಾತು ಸಾಕು, ಮುಖ ಯಾಕೆ ಬೇಕು ಎಂದು ಪ್ರೀತಿಸಲು ತೊಡಗುತ್ತಾನೆ.. ಮುಂದೆ...ಯಾರನ್ನು ಲವ್ ಮಾಡಬೇಕು.. ಯಾರನ್ನು ಮದುವೆಯಾಗಬೇಕು ಎನ್ನುವ ಗೊಂದಲ ಪ್ರೇಕ್ಷಕನದೂ ಹೌದು ನಾಯಕನದೂ ಹೌದು. ಆದರೆ ಕ್ಲೈಮಾಕ್ಸ್ ವರೆಗೆ ಕುಳಿತರೆ ಎಲ್ಲವೂ ಶುಭಂ.
ಕತೆ ಏನೇ ಇರಲಿ, ಚಿತ್ರಕತೆಯಲ್ಲಿ ಖುಷಿ ತುಂಬುವಲ್ಲಿ ತೆಲುಗರು ಸಿದ್ಧ ಹಸ್ತರು. ಪ್ರತಿ ದೃಶ್ಯಕ್ಕೂ ಏನೋ ಒಂದು ತಮಾಷೆ ಸೇರಿಸಿ ಅದರಲ್ಲೇ ತಿರುವು ಕೂರಿಸಿ ಒಟ್ಟಾರೆ ಭಾವವನ್ನು ಪಕ್ಕಕ್ಕಿಟ್ಟು ನೋಡುವವನಿಗೆ ನೋಡುವ ಸಮಯದಲ್ಲಿ ಎಲ್ಲೂ ಬೋರ್ ಆಗದಂತೆ ನಿರೂಪಿಸುವುದು ಅವರ ಶೈಲಿ. ಗುಂಡೇ ಜಾರಿ ಗಲ್ಲಾಯಿತೆಂದಿ ಚಿತ್ರದ ಕನ್ನಡ ಅವತರಣಿಕೆಯಾದ ಖುಷಿ ಖುಷಿಯಾಗಿ ಅದರ ಪಡಿಯಚ್ಚು.  ಇಡೀ ಚಿತ್ರವೇ ವರ್ಣಮಯ.. ನಗೆಮಯ..
ಇಲ್ಲಿ ಚಿತ್ರದ ನಾಯಕ ವಿಪರೀತ ಮಾತನಾಡುತ್ತಾನೆ. ಅದು ಗಣೇಶ್ ಶೈಲಿಯೂ ಹೌದು. ಆತ ನಿಲ್ಲಿಸಿದರೆ ಮುಂದುವರೆಸಲು ಸಾಧುಕೋಕಿಲ ಇದ್ದಾರೆ. ಹಾಗಾಗಿ ಚಿತ್ರ ಪೂರ್ತಿ ನಗುತ್ತಲೇ ಸಿನಿಮಾ ನೋಡಬಹುದು. ಆದರೆ ಲಾಜಿಕ್ ವಿಷಯವನ್ನು ಕೇಳುವ ಹಾಗಿಲ್ಲ. ಅದೇಕೆ, ಇದು ಹೇಗೆ ಎಂದೆಲ್ಲಾ ಮಾತನಾಡುವ ಹಾಗಿಲ್ಲ. ಇದು ಸಿನಿಮಾ ಸ್ವಾಮಿ ಎಂದು ನಿರ್ದೇಶಕರು ಹೇಳುತ್ತಾರೆ. ಹಾಗಾಗಿ ಸುಮ್ಮನೆ ನೋಡಿ ನಕ್ಕು ಬರಬೇಕು. ಚಿತ್ರದಲ್ಲಿ ಎರಡು ಹೊಡೆದಾಟದ ದೃಶ್ಯವಿದೆಯಾದರೂ ಫೈಟ್ ಇರಲಿ ಎನ್ನುವ ಕಾರಣಕ್ಕೆ ಇದೆಯೇನೋ ಅನಿಸುತ್ತದೆ.
ಇವಿಷ್ಟನ್ನು ಹೊರತು ಪಡಿಸಿದರೆ ಸಿನಿಮಾ ಕುತೂಹಲ ಕಾಯ್ದಿರಿಸಿಕೊಳ್ಳುವುದಿಲ್ಲ. ಈ ಹಿಂದೆ ಬಂದ ಹಲವಾರು ಚಿತ್ರಗಳನ್ನು ಚಿತ್ರ ನೆನಪಿಸುತ್ತಾ ಸಾಗುತ್ತದೆ. ಇಷ್ಟೇನಾ ಈ ಸಿನಿಮಾ ಎನಿಸುವುದು ಚಿತ್ರವನ್ನು ನೋಡಿದ ಮೇಲೆ.
ತೆಲುಗಿನಲ್ಲಿ ಹಣ ಬಾಚಿದ ಯಶಸ್ವೀ ಚಿತ್ರ ಎನ್ನುವ ಮಾನದಂಡವಷ್ಟೇ ಚಿತ್ರವನ್ನು ಕನ್ನಡಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿರುವುದು ಬೇಸರದ ಸಂಗತಿಯೇ. ಏಕೆಂದರೆ ಕತೆ ಚಿತ್ರಕತೆ ಯಾವುದರಲ್ಲೂ ಏನೂ ಹೊಸತನವಿಲ್ಲದ ಒಂದಷ್ಟು ನಗು ತಮಾಷೆಯ ಚಿತ್ರವನ್ನು ಕನ್ನಡಕ್ಕೆ ಹಾಗೆಯೇ ಭಟ್ಟಿ ಇಳಿಸುವುದು ಬೇಕಿತ್ತಾ ಎಂದು ಪ್ರೇಕ್ಷಕನಿಗೆ ಅನಿಸದೆ ಇರದು.
ಅಭಿನಯದ ವಿಷಯಕ್ಕೆ ಬಂದರೆ ಗಣೇಶ್ ಚಿನಕುರಳಿ. ಪಟಪಟನೆ ಮಾತಾಡುತ್ತಾ ಅಲ್ಲಲ್ಲಿ ನಗಿಸುವ ಗಣೇಶ್ ಟೈಮಿಂಗ್ ಮತ್ತು ಅವರ ಚುರುಕುತನ ಮಜಾ ಕೊಡುತ್ತದೆ.  ನಾಯಕಿ ಅಮೂಲ್ಯ ತಮ್ಮ ಮಾತಿನ ಶೈಲಿಯಿಂದ ಗಮನ ಸೆಳೆಯುತ್ತಾರೆ. ಮತ್ತೊಬ್ಬ ನಾಯಕಿ ನಂದಿನಿ ಗಮನ ಸೆಳೆಯುತ್ತಾರೆ.
ಚಿತ್ರದಲ್ಲಿ ಹಾಡುಗಳು ಜಬರ್ದಸ್ತ್ ಇರಬೇಕಿತ್ತು. ಆದರೆ ಅದ್ಯಾಕೋ ಇಲ್ಲಿ ಅದೇ ಕೈ ಕೊಟ್ಟಿದೆ. ಕೆಲವು ಕಡೆ ಹಿನ್ನೆಲೆ ಸಂಗೀತ ಸೂಪರ್ ಎನಿಸುತ್ತದೆ. ಆದರೆ ಹಾಡುಗಳು ನೆನಪಲ್ಲಿ ಉಳಿಯುವುದು ಕಷ್ಟ. ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಪ್ರತಿ ಫ್ರೇಮ್ ಕೂಡ ಬಣ್ಣ ಬಣ್ಣವಾಗಿಸುವಲ್ಲಿ ಛಾಯಾಗ್ರಾಹಕ ವೇಣು ಶ್ರಮ ಎದ್ದು ಕಾಣುತ್ತದೆ.

ಇನ್ನು ನಿರ್ದೇಶಕ ಯೋಗಿ ಜಿ ರಾಜ್ ಬಗ್ಗೆ ಹೇಳಲು ಹೆಚ್ಚೇನೂ ಇಲ್ಲ ಎನ್ನಬಹುದು. ತೆಲುಗಿನ ಸಾದಾರಣ ಕತೆಯ ಮನರಂಜನೆಯ ಚಿತ್ರವನ್ನು ಕನ್ನಡೀಕರಿಸಲು ಆಯ್ದು ಕೊಂಡಿದ್ದಾರೆ ಎಂಬುದಷ್ಟೇ ಅವರ ಶಕ್ತಿ ಶ್ರಮ ಎಂದರೆ ಅದು ವ್ಯಂಗ್ಯ ಎಂದುಕೊಳ್ಳಬಾllರದು.

No comments:

Post a Comment