Pages

Friday, January 2, 2015

ಶಿವಂ :

ಒಂದು ಒಳ್ಳೆಯ ಬಜೆಟ್, ಒಂದಷ್ಟು ಸ್ಟಾರ್ ನಟರುಗಳು, ಕೇಳಿದ ಲೊಕೇಶನ್ ಇದೆಲ್ಲಾ ಕೊಟ್ಟಾಗ ಒಬ್ಬ ನಿರ್ದೇಶಕ ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾಗುತ್ತದೆ. ಆದರೆ ಅವರೇ ಗೊಂದಲಕ್ಕೆ ಬಿದ್ದಾಗ ಶಿವಂ ಚಿತ್ರವಾಗುತ್ತದೆ.
ತನ್ನ ಶೀರ್ಷಿಕೆಯಿಂದ ವಿವಾದ ಗಮನ ಸೆಳೆದಿದ್ದ ಶಿವಂ ಚಿತ್ರದಲ್ಲಿ ಟರ್ಕಿಯಂತಹ ಒಳ್ಳೆಯ ಸ್ಥಳಗಳಿವೆ. ಉಪೇಂದ್ರ ಇದ್ದಾರೆ, ವಿಲನ್ ಆಗಿ ರವಿಶಂಕರ್ ಇದ್ದಾರೆ, ಹೊಡೆದಾಟ ಇದೆ, ಹಾಡುಗಳಿವೆ. ಆದರೆ ಅದ್ಯಾವುದು ನಮ್ಮನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದಿಲ್ಲ. ಅದಕ್ಕೆ ಕಾರಣ ಕತೆ. ಚಿತ್ರಕತೆಯಲ್ಲಿ ಅಲ್ಲಲ್ಲಿ ಒಂದಷ್ಟು ತಿರುವು ಕೊಟ್ಟಿದ್ದಾರೆ ನಿರ್ದೇಶಕರು.ಆದರೆ ಆ ತಿರುವುಗಳು ಅಚ್ಚರಿ ತರದೇ ನೀರಸ ಎಣಿಸುವುದಕ್ಕೆ ಕಾರಣವೇ ಚಿತ್ರಕತೆ. ಕತೆ ಹಳ್ಳಿಯಿಂದ ದಿಲ್ಲಿಗೆ ದಿಲ್ಲಿಯಿಂದ ವಿದೇಶಕ್ಕೆ ಹಾರಿ ಕುಣಿಯುತ್ತದೆ. ಭೂಗತ ಲೋಕದಿಂದ ಭಯೋತ್ಪಾದನೆಗೆ ಶಿಫ್ಟ್ ಆಗುತ್ತದೆ. ದೇಶ ಸೇವೆಯಿಂದ ಈಶ ಸೇವೆಗೆ ರೂಪಾಂತರಹೊಂದುತ್ತದೆ. ಇದೆಲ್ಲಾ ಪ್ರೇಕ್ಷಕನಿಗೆ ಕ್ಷಣ ಕ್ಷಣಕ್ಕೂ ಕುತೂಹಲ ಉಂಟು ಮಾಡುತ್ತಾ ಸಾಗಬೇಕಾಗಿತ್ತು. ಆದರೆ ಅದು ಪೇಲವ ಎನಿಸುತ್ತದೆ. ಕೆಲವೊಮ್ಮೆ ಅಸಂಗತ ಅತಿರಂಜಿತ, ಆವಾಸ್ತವಿಕ ಎನಿಸಿ ಚಿತ್ರವನ್ನು ಪ್ರೇಕ್ಷಕನಿಂದ ದೂರ ಮಾಡುತ್ತದೆ.
ಚಿತ್ರ ವಿದೇಶದಲ್ಲಿ ಪ್ರಾರಂಭವಾಗುತ್ತದೆ. ಅಲ್ಲಿ ನಾಯಕ ಖಳನನ್ನು ಗುಂಡು ಹೊಡೆದು ಸಾಯಿಸಿ ತಕ್ಷಣ ಎರಡನೆಯ ನಾಯಕಿ ಜೊತೆ ಹಾದಿ ಕುಣಿದು ಆನಂತರ ಅಲ್ಲೂ ಇನ್ನಷ್ಟು ಜನರನ್ನು ಸಾಯಿಸಿ ಊರಿಗೆ ಬರುತ್ತಾನೆ. ಇಲ್ಲಿ ದೇವಸ್ಥಾನದ ಮುಖ್ಯ ಅರ್ಚಕನಾದ ಆತನ ತಂದೆಯಿಂದ ದೇವಸ್ಥಾನವನ್ನು ಲಪಟಾಯಿಸಬೇಕೆಂದು ಖಳರ ಗುಂಪು ಹೊಂಚುಹಾಕುತ್ತದೆ. ರಾ ಅಧಿಕಾರಿಯಾದ ನಾಯಕ ಈಗ ದೇವಸ್ಥಾನವನ್ನೂ ಖಳರಿಂದ ರಕ್ಷಿಸಬೇಕು ಹಾಗೆಯೇ ದೇಶವನ್ನೂ ಭಯೋತ್ಪಾದಕನಿಂದ ರಕ್ಷಿಸಬೇಕು.. ಹೇಗೆ..? ತಿಳಿಯಲು ಚಿತ್ರವನ್ನೊಮ್ಮೆ ನೋಡಬಹುದು.
ಸಿನಿಮದ ಕತೆಯನ್ನು ನಿರ್ದೇಶಕರು ಕುತೂಹಲಕಾರಿಯಾಗಿ ಹೆಣೆಯಲು ಪ್ರಯತ್ನಿಸಿರುವುದು ಚಿತ್ರದ ನಿರೂಪಣೆಯಲ್ಲಿ ಕಾಣಿಸುತ್ತದೆ. ಆದರೆ ಬುಡವೇ ಭದ್ರವಾಗಿಲ್ಲದೆ ಇದ್ದಾಗ ಅದೆಷ್ಟು ಸಿಂಗಾರ ಮಾಡಿದರೇನು ಉಪಯೋಗ ಎನಿಸುವಂತೆ ಅಂದುಕೊಂಡಿರುವ ಎಳೆಯೇ ಪರಿಣಾಮಕಾರಿಯಾಗಿಲ್ಲದೆ ಇರುವುದು ಚಿತ್ರವನ್ನು ಸಾದಾರಣ ಚಿತ್ರವನ್ನಾಗಿ ಮಾಡಿ ಬಿಟ್ಟಿದೆ. ಕತೆ ತೂಗುಯ್ಯಾಲೆಯಂತೆ ಅತ್ತಿಂದ ಇತ್ತ ಇತ್ತಿಂದ ಆತ್ತ ಜೋಕಾಲಿಯಾಡುತ್ತದೆ. ನೂರರ ಸಂಖ್ಯೆಯಲ್ಲಿ ಹೆಣಗಳು ಉರುಳುತ್ತವೆ.
ಉಪೇಂದ್ರ ಈ ಚಿತ್ರದಲ್ಲಿ ಸಾವಧಾನ ಚಿತ್ತವಾಗಿ ನಟಿಸಿದ್ದಾರೆ. ಅರ್ಚಕನಾಗಿ, ರಾ ಏಜೆಂಟ್ ಆಗಿ ಅವರ ಪಾತ್ರ ಗಮನ ಸೆಳೆಯುತ್ತದೆ. ಹಾಡು ಹೊಡೆದಾಟದಲ್ಲಿ ಮಿಂಚಿದ್ದಾರೆ.. ಸಲೋನಿ ಪಾತ್ರ ಶುರುವಾಗುವಲ್ಲಿ ಚೆನ್ನಾಗಿದೆ. ಆದರೆ ಬರು ಬರುತ್ತಾ ತನ್ನ ಮಹತ್ವ ಕಳೆದುಕೊಳ್ಳುತ್ತದೆ. ಇನ್ನು ರಾಗಿಣಿ ಎರಡು ಹಾಡು ಹೊಡೆದಾಟದಲ್ಲಿ ಮಿಂಚುತ್ತಾರೆ. ಅಷ್ಟು ಬಿಟ್ಟರೆ ಅಭಿನಯಕ್ಕೆ ಅವಕಾಶವಿಲ್ಲ. ರವಿಶಂಕರ್ ಪಾತ್ರವೂ ಅಷ್ಟೇ. ಬೆರಳೆಣಿಕೆಯ ದೃಶ್ಯವನ್ನು ಹೊಂದಿದೆ.
ಮಣಿಶರ್ಮ ಸಂಗೀತ ಕೆಲವು ಕಡೆ ಜೋರು ಎನಿಸುತ್ತದೆ. ಸಾಹಸ ದೃಶ್ಯಗಳೂ ಹೊಸತನವಿಲ್ಲದೆ ಸೊರಗಿವೆ. ಒಂದಷ್ಟು ಪೋಷಕ ಕಲಾವಿದರುಗಳು ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಒಂದು ಪಕ್ಕಾ ಮಸಾಲ ಮನರಂಜನೆ ಎಂದಾಗ ಅದರ ಸ್ಕ್ರಿಪ್ಟ್ ಕೂಡ ಹಾಗೆಯೇ ಇರಬೇಕಾಗುತ್ತದೆ. ಆದರೆ ಚಿತ್ರಕತೆ-ಕತೆಯ ಬಗ್ಗೆ ನಿರ್ದೇಶಕರು ಆಸ್ಥೆ ವಹಿಸದೆ, ಹಾಗೆಯೇ ನಿರ್ದೇಶನದಲ್ಲೂ ಯಾವುದೇ ನೈಪುಣ್ಯ ಮೆರೆಯದಿರುವುದು ಶಿವಂ ಹೀಗೆ ಬಂದು ಹಾಗೆ ಹೋಗುವ ಅದ್ದೂರಿ ಚಿತ್ರಗಳ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತದೆ. ಏನೇನನ್ನೋ ನಿರೀಕ್ಷಿಸಿ ಹೋದ ಪ್ರೇಕ್ಷಕ ಉಪೇಂದ್ರರ ಎರಡು ಗೆಟಪ್ ಮತ್ತು ಒಂದಷ್ಟು ಹೊಡೆದಾಟಕ್ಕೆ ತೃಪ್ತಿ ಹೊಂದಬೇಕಾಗುತ್ತದೆ.

No comments:

Post a Comment