Pages

Saturday, February 21, 2015

. ಮೈತ್ರಿ

ನವಿಲಾದವರು ಎನ್ನುವ ಪ್ರಯೋಗಾತ್ಮಕ ಚಿತ್ರದ ಮೂಲಕ ಬೆಳಕಿಗೆ ಬಂದಂತಹ ಗಿರಿರಾಜ್ ಮೈತ್ರಿ ಚಿತ್ರವನ್ನು ನಮ್ಮ ಮುಂದಿಟ್ಟಿದ್ದಾರೆ. ಈ ಹಿಂದೆ ಜಟ್ಟ ಚಿತ್ರವನ್ನು ನೀಡಿದ್ದರಾದರೂ ಅದರ ಶೇಡ್ ಮತ್ತು ಈ ಚಿತ್ರದ ಭಾವ ಬೇರೆಬೇರೆಯಾಗಿರುವುದು ಗಿರಿರಾಜ್ ಒಂದೇ ನಿಟ್ಟಿನಲ್ಲಿ ಯೋಚಿಸುವುದಿಲ್ಲ ಎಂಬುದನ್ನು ವಿಶದಪಡಿಸುತ್ತದೆ.
ಮೈತ್ರಿ ಪೋಸ್ಟರ್ ತುಂಬಾ ಸ್ಟಾರ್ಗಳ ಚಿತ್ರಗಳಿವೆ. ಪುನೀತ್ ರಾಜಕುಮಾರ್, ಮೋಹನ್ ಲಾಲ್, ಅತುಲ್ ಕುಲಕರ್ಣಿ ಹೀಗೆ. ಇವರನ್ನೆಲ್ಲಾ ತಲೆಯಲ್ಲಿಟ್ಟುಕೊಂಡು ಸಿನಿಮಾ ಮಮ್ನ್ದಿರ ಹೊಕ್ಕರೆ ಪ್ರಾರಂಭದಲ್ಲಿ ನಿರಾಶೆ . ಏಕೆಂದರೆ ಇಲ್ಲಿ ಪುನೀತ್ ಆಗಲಿ ಮೋಹನ್ ಲಾಲ್ ಆಗಲಿ ಪೂರ್ಣ ಪ್ರಮಾಣದಲ್ಲಿ ಚಿತ್ರದಲ್ಲಿ ಆವರಿಸಿಕೊಳ್ಳುವುದಿಲ್ಲ. ಹಾಗೆಯೇ ತಮ್ಮ ಸ್ಟಾರ್ ಪವರ್  ಅನ್ನು ತೋರಿಸುವುದಿಲ್ಲ. ಸೀದಾ ಸಾದಾ ಆಗಿ ಹಾಗೆ ಬಂದು ಹೀಗೆ ಮಾತಾಡಿ ಸಾಗುತ್ತಾರೆ. ಆದರೆ ಅವರು ಬಂದದ್ದು ತೆರೆಯ ಮೇಲಿದಷ್ಟು ಹೊತ್ತೂ ಇಷ್ಟವಾಗಲು ಕಾರಣ ಅವರ ಪಾತ್ರ ಮತ್ತು ಮುಖ್ಯ ಪಾತ್ರವಾದ ಮಾಸ್ಟರ್ ಆದಿತ್ಯ ನ  ಬದುಕಿನಲ್ಲಿ ಅವರ ಪ್ರಾಮುಖ್ಯತೆ ಎನ್ನಬಹುದು.
ಕತೆಯ ಎಳೆ ಸರಳವಾದದ್ದು. ಸ್ಲಂ ಡಾಗ್ ನ ಜಮಾಲ್ ಮಲಿಕ್ ನಂತೆ ಬಾಲಾಪರಾಧಿ ತನ್ನ ನೆಚ್ಚಿನ ನಟ ನಡೆಸಿಕೊಡುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಆಯ್ಕೆಯಾಗುತ್ತಾನೆ. ಪ್ರಶ್ನೆಗಳು ಬಿಚ್ಚಿಕೊಳ್ಳುತ್ತಾ ಸಾಗಿದಂತೆ ಬದುಕಿನ ಮಜಲುಗಳು ತೆರೆದುಕೊಳ್ಳುತ್ತಾ ಸಾಗುತ್ತದೆ. ಕಾರ್ಯಕ್ರಮದ ಪ್ರಶ್ನೆ ನೇರ ಬದುಕಿನ ಪ್ರಶ್ನೆಯೇ ಆಗುತ್ತದೆ. ಹುಡುಗ ಕೋಟಿಗೆಲ್ಲುತ್ತಾನಾ?
ಚಿತ್ರದಲ್ಲಿ ಹಲವಾರು ಪಾತ್ರಗಳು ಸಾಂದರ್ಭಿಕವಾಗಿ ಬಂದುಹೋಗುತ್ತವೆ. ನಮ್ಮ ನಡುವಣ ಪಾತ್ರಗಳು ಅಲ್ಲಲ್ಲಿ ಕಾಣಸಿಗುತ್ತವೆ. ಹೊಸತಲ್ಲದ ಹೊಸಬರಲ್ಲದ ಬದುಕು ಜನರ ನಿತ್ಯಜೀವನದ ಬವಣೆ ಕಾಣಿಸುತ್ತದೆ. ಇಲ್ಲಿ ಗಿರಿರಾಜ್ ಎಲ್ಲವನ್ನೂ ಜಾಣ್ಮೆಯಿಂದ ನೇಯ್ದಿದ್ದಾರೆ. ಪ್ರೌಢಿಮೆ ಮೆರೆದಿದ್ದಾರೆ. ಅದೇ ಚಿತ್ರದ ಅಸ್ಥಿ ಮತ್ತು ಆಸ್ತಿಯಾಗಿದೆ.
ಹಾಗಂತ ಇಡೀ ಚಿತ್ರವನ್ನು ಸಂಪೂರ್ಣ ಮನರಂಜನಾ ಚಿತ್ರ ಎನ್ನುವ ಹಾಗಿಲ್ಲ. ಇಳಯರಾಜ ರ ಸಂಗೀತ ಯಾಕೋ ಇಷ್ಟೇನಾ ಎನ್ನಿಸುತ್ತದೆ. ಹಾಡುಗಳನ್ನು ಕತೆಗೆ ಹೊಸೆಯುವ ಪ್ರಯತ್ನ ಮಾಡಿದ್ದಾರಾದರೂ ಹಾಡುಗಳಲ್ಲಿ ಇನ್ನಷ್ಟು ಮಾಧುರ್ಯದ ಅಗತ್ಯವಿತ್ತು ಎನಿಸುತ್ತದೆ. ಅಲ್ಲದೆ ಒಂದಷ್ಟು ಕಮರ್ಷಿಯಲ್ ಅಂಶಗಳನ್ನೂ ಚಿತ್ರದ ಕತೆಯಲ್ಲಿ ಜಾಣ್ಮೆಯಿಂದ ಸೇರಿಸಲು ಯತ್ನಿಸಿರುವ ನಿರ್ದೇಶಕರ ಪ್ರಯತ್ನ ಖುಷಿ ಕೊಡುತ್ತದೆಯಾದರೂ ಅದು ಚಿತ್ರದಿಂದ ಒಂದು ಅಡಿ ಅಂತರದಲ್ಲಿಯೇ ಉಳಿಯುತ್ತದೆ. ಆದರೆ ಇದೆಲ್ಲದರ ಜೊತೆಯಲ್ಲಿಯೇ ತಣ್ಣಗೆ ನೋಡುತ್ತಾ ಅನುಭವಿಸುವ ಚಿತ್ರವನ್ನಾಗಿ ಮಾಡಿದ್ದಾರೆ ಗಿರಿರಾಜ್. ಕತೆ ಚಿತ್ರಕತೆಯಲ್ಲಿ ತಮ್ಮತನ ನಮ್ಮತನ ಮೆರೆದಿದ್ದಾರೆ. ಕೆಲವು ಕ್ಲೀಷಾತ್ಮಕ ಅಂಶಗಳನ್ನೂ ಅಗತ್ಯವೆನಿಸಿ ಅದರ ಕ್ಲೀಷಾತ್ಮಕ ಅಂಶವನ್ನು ಸಹನೀಯವಾಗಿಸಿದ್ದಾರೆ. ಹಾಗಾಗಿ ಮೈತ್ರಿ ಒಂದು ವಿಭಿನ್ನವಲ್ಲದ ಆದರೆ ಒಂದು ಪರಿಪೂರ್ಣ ಭಾವನಾತ್ಮಕ ಚಿತ್ರವಾಗಿ ನಮ್ಮ ಮುಂದಿದೆ. ಒಮ್ಮೆ ನೋಡಿಬಿಡಿ ಎಂದು ಧೈರ್ಯವಾಗಿ ಶಿಫಾರಸ್ಸು ಮಾಡಬಹುದಾದ ಚಿತ್ರವಿದು.

ಕೃಷ್ಣಕುಮಾರ್ ಕ್ಯಾಮೆರಾ ಕಣ್ಣಿಗೆ ಅಂತಹ ಕೆಲಸವಿಲ್ಲ. ಹಾಗೆಯೇ ಇಳಯರಾಜ ಸಂಗೀತ ತೆಗೆದುಹಾಕುವ ಹಾಗಿಲ್ಲ. ಇನ್ನುಳಿದಂತೆ ಪವರ್ ಸ್ಟಾರ್ ಪುನೀತ್, ಮೋಹನ್ ಲಾಲ್ ಅತುಲ್ ಕುಲಕರ್ಣಿ ಜೊತೆಗೆ ಪೋಷಕ ಪಾತ್ರಧಾರಿಗಳು ನಿರ್ದೇಶಕರು ಸೃಷ್ಟಿಸಿದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದೆಲ್ಲದ್ದಕ್ಕಿಂತ ಮುಖ್ಯವಾಗಿ ಮುಖ್ಯವಾಹಿನಿಯಿಂದ ಸ್ವಲ್ಪ ಆಚೆಗಿರುವ ಕಲಾತ್ಮಕ ಚಿತ್ರಗಿಂತ ಸ್ವಲ್ಪ ಈಚೆಗಿರುವ ಮೈತ್ರಿ ಚಿತ್ರಕ್ಕೆ ಹಣವನ್ನು ಖರ್ಚು ಮಾಡಿದ ನಿರ್ಮಾಪಕರಿಗೆ ಅವರ ಅಭಿರುಚಿಗೆ ಒಂದು ಸಲಾಮು ಹೊಡೆಯಲೇ ಬೇಕಾಗುತ್ತದೆ.

No comments:

Post a Comment