Pages

Saturday, February 21, 2015

ಬೆಂಕಿ ಪಟ್ನ:

ಕನ್ನಡದಲ್ಲಿ ಬಹುದಿನಗಳ ನಂತರ ಒಂದು ಸಶಕ್ತ ಕತೆಯ ಚಿತ್ರವಾಗಿ ಹೊರಹೊಮ್ಮಿದೆ ಬೆಂಕಿಪಟ್ನ ಎಂಬುದು ಬೆಂಕಿಪಟ್ನ ಚಿತ್ರದ ಹೆಗ್ಗಳಿಕೆ ಎನ್ನಬಹುದು. ಪತ್ರಕರ್ತ ದಯಾನಂದ್ ತಮ್ಮ ಮೊದಲ ಚಿತ್ರಕ್ಕೆ ತಮ್ಮದೇ ಪ್ರಶಸ್ತಿ ವಿಜೇತ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದ ಕತೆ ನಡೆಯುವುದು ಬೆಂಕಿಪಟ್ನದಲ್ಲಿ. ಅಲ್ಲಿ ಚುರುಕಾಗಿ ಪಟಪಟನೆ ಮಾತನಾಡುವ ಅನಾಥ ಹುಡುಗಿ ಪಾಣಿ ಇದ್ದಾಳೆ. ತಾಯಿಯ ಸೆರಗಲ್ಲೇ ಬೆಳೆದ ಅಮಾಯಕ ಸೆಂಟ್ ಹನುಮಂತ ಇದ್ದಾನೆ. ಸಿನಿಮಾ ನಿರ್ದೇಶಕನಾಗಬೇಕು ಎಂದೆಲ್ಲಾ ಒದ್ದಾಡಿ ಇಲಿ ಪಾಷಾಣ ಮಾರುವ ಅರುಣ್ ಸಾಗರ್, ಡ್ರಮ್ ಸೆಟ್ ನಲ್ಲಿ ಜಿಲ್ ಜಿಲ್ ಭಾರಿಸುವ ತಮಾಷೆ ಇದ್ದಾರೆ. ಬಡತನದಲ್ಲಿಯೇ ತಮ್ಮ ಪಾಡಿಗೆ ತಾವಿದ್ದವರ ಬದುಕಲ್ಲಿ ಏನೇನೆಲ್ಲಾ ನಡೆಯುತ್ತದೆ ಎಂಬುದು ಚಿತ್ರದ ಕಥಾವಸ್ತು.
ಅನುಶ್ರೀ ಅವರ ಅಭಿನಯ ಚಿತ್ರದ ಮುಖ್ಯಾಂಶ. ಬಜಾರಿಯಾಗಿ ಅರಳು ಹುರಿದಂತೆ ಮಾತನಾಡಿ ಮನಗೆದ್ದರೆ, ಸೆಂಟಿಮೆಂಟ್ ದೃಶ್ಯಗಳಲ್ಲಿ ಕಣ್ಣಲ್ಲಿ ನೀರುತರಿಸುತ್ತಾರೆ. ಪ್ರತಾಪ್ ನಾರಾಯಣ್ ಪ್ರಥಮ ಚಿತ್ರದಲ್ಲೇ ಗಮನ ಸೆಳೆದಿದ್ದಾರೆ. ಅರುಣ್ ಸಾಗರ್, ಮಂಜುನಾಥ್ ಗೌಡ, ಜಹಾಂಗೀರ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರಕಾಶ್ ಬೆಳವಾಡಿ, ಬಿ.ಸುರೇಶ ಅವರುಗಳು ವಿಶಿಷ್ಟವಾದ ಅಚ್ಚರಿ ತರಿಸುವ ಪಾತ್ರಗಳಿಂದ ಇಷ್ಟವಾಗುತ್ತಾರೆ. ತಾಂತ್ರಿಕ ಅಂಶಕ್ಕೆ ಬಂದರೆ ಮೊಟ್ಟ ಮೊದಲಿಗೆ ಗಮನ ಸೆಳೆಯುವುದು ಛಾಯಾಗ್ರಹಣ. ಒಳಾಂಗಣ ಹೊರಾಂಗಣ ಎರಡರಲ್ಲೂ ನಿರಂಜನ್ ಬಾಬು ಅವರ ಕ್ಯಾಮೆರಾ ಕಣ್ಣು ಅದ್ಭುತವಾಗಿ ಕಾರ್ಯನಿರ್ವಹಿಸಿದೆ.a ಅಲ್ಲಲ್ಲಿ ಸ್ವಲ್ಪ ಹೆಚ್ಚು ಎನಿಸಿದರೂ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಹಾಡುಗಳಲ್ಲಿ ಮಾಧುರ್ಯ ಇರಬೇಕಿತ್ತು ಎನಿಸುತ್ತದೆ. ಸಂಕಲನದಲ್ಲಿ ಸ್ವಲ್ಪ ಚುರುಕುತನ ಇರಬೇಕಿತ್ತು ಎನಿಸುತ್ತದೆ.
2012 ರಲ್ಲಿ ಪ್ರಜಾವಾಣಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ್ದ ನಾಯಿಬೇಟೆ ಕತೆಯನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿರುವ ದಯಾನಂದ್ ಅದನ್ನು ಚಿತ್ರರೂಪಕ್ಕೆ ತರುವಲ್ಲಿನ ಕುಸುರಿ ಕೆಲಸದಲ್ಲಿ ಅಂತಹ ಯಶಸ್ಸು ಗಳಿಸಿಲ್ಲ. ಹಾಗಾಗಿಯೇ ಚಿತ್ರಕತೆ ಕೈಗೆ ಸಿಕ್ಕದೆ ಹಾರಾಡಿ ಬಿಡುತ್ತದೆ. ಪ್ರಾರಂಭವೇ ಒಂದಾದರೆ ಅಂತ್ಯವೇ ಒಂದಾಗಿ ಬಿಡುತ್ತದೆ. ಉದಾಹರಣೆಗೆ ಅದೊಂದು ದೃಶ್ಯದಲ್ಲಿ ಪಾನಿ ನಾವು ಬಡವರು ಬೀದಿ ದನ ಇದ್ದಾ ಹಾಗೆ ಯಾರು ಬೇಕಾದರೂ ಮೆಯಿಸೋಕೆ ನೋಡ್ತಾರೆ ಎಂಬರ್ಥದ ಮಾತುಗಳನ್ನು ಆಡುತ್ತಾ ತನಗಾದ ಶೋಷಣೆಯನ್ನು ವ್ಯಕ್ತ ಪಡಿಸುತ್ತಾಳೆ. ಆದರೆ ಇಡೀ ಚಿತ್ರದಲ್ಲಿ ಆಕೆಯ ಮಾತಿಗೆ ಯಾವುದೇ ಸಮರ್ಥನೆ ಸಿಗುವುದಿಲ್ಲ. ಬದಲಿಗೆ ಆಕೆಯನ್ನು ದಮನ ಮಾಡಲು ಪ್ರಯತ್ನಿಸುವವರೆಲ್ಲರ ಹಿಂದೆ ಬೇರೆಯದೇ ಆದ ವೈಯಕ್ತಿಕ ಕಾರಣವಿರುತ್ತದೆ. ಒಬ್ಬ ಕತೆಗಾರ ಸಿನಿಮಾ ನಿರ್ದೇಶಕನಾದಾಗ ಸಾಮಾನ್ಯವಾಗಿ ಆಗುವ ಏರುಪೇರೆಂದರೆ ಇದೆ. ತನ್ನೆಲ್ಲಾ ಕಲ್ಪನೆಯ ಪಾತ್ರವನ್ನು ವಿವರಿಸಲು ಕಾಗದದಲ್ಲಿ ಸುಲಭ. ಆದರೆ ಸಿನಿಮಾ ಮಧ್ಯಮ ಹೆಚ್ಚು ಬೇಡುತ್ತದೆ. ಬೆಂಕಿಪಟ್ನ ಚಿತ್ರದಲ್ಲಿ ಆಗಿರುವುದು ಅದೇ. ನಿರ್ದೇಶಕರ ಕಣ್ಣಲ್ಲಿ ಮತ್ತು ಅವರ ಕತೆಯ ಆಳದಲ್ಲಿ ವಿಷಯ ಇದೆ. ಅದನ್ನು ಸಿನಿಮಾ ರೂಪದಲ್ಲಿ ನೋಡುವಾಗಲೂ ಅದರಾಚೆ ಬಂದು ನೋಡಲು ಅವರಿಗೆ ಸಾಧ್ಯವಿಲ್ಲ ..ಹಾಗಾಗಿ ಎಲ್ಲವೂ ಅವರ ದೃಷ್ಟಿಯಲ್ಲಿ ಪರಿಚಿತ ಎನಿಸುತ್ತದೆ. ಆದರೆ ಒಬ್ಬ ಪ್ರೇಕ್ಷಕನಿಗೆ ಅದೆಲ್ಲವೂ ಹೊಸದಾದ್ದರಿಂದ ಆತ ಕಾರಣ ಕೇಳುತ್ತಾನೆ. ಹಾಗೆಯೇ ಚಿತ್ರಕತೆ ಆಗಾಗ ಹಳಿ ತಪ್ಪುತ್ತದೆ. ಇಡೀ ಚಿತ್ರದಲ್ಲಿ ನಿರ್ದೇಶಕರು ಏನನ್ನು ಹೇಳಲುಹೊರಟಿದ್ದಾರೆ ಎಂಬುದು ಸ್ಪಷ್ಟವಿದೆಯಾದರೂ ಗುರಿ ತಲುಪುವಲ್ಲಿನ ಪಯಣದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದು ಚಿತ್ರದಲ್ಲಿನ ಕುತೂಹಲಕ್ಕೆ ತಡೆಯಾಗುತ್ತದೆ.

ಒಟ್ಟಾರೆಯಾಗಿ ದಯಾನಂದ ತಮ್ಮ ಮೊದಲ ಚಿತ್ರಕ್ಕೆ ಶಕ್ತಿಯುತವಾದ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾದ ಒಂದಷ್ಟು ಒಳಹೊರಗುಗಳ ಬಗ್ಗೆ ಗಮನ ಹರಿಸಿದರೆ ಅವರ ಮುಂದಿನ ಚಿತ್ರದಲ್ಲಿ ಇನ್ನಷ್ಟು ನಿರೀಕ್ಷೆ ಮಾಡಬಹುದಾಗಿದೆ.

No comments:

Post a Comment