Pages

Friday, March 6, 2015

.ಫ್ಲಾಪ್

ಚಿತ್ರದ ಹೆಸರನ್ನೇ ಹೀಗಿಟ್ಟರೆ ಏನನ್ನಬಹುದು? ಅದು ನಿರ್ದೇಶಕನಾ ಬುದ್ಧಿವಂತಿಕೆ ಎನ್ನಬಹುದೇನೋ? ಇರಲಿ. ಫ್ಲಾಪ್ ಚಿತ್ರ ತನ್ನೆಲ್ಲಾ ವಿಭಾಗದಲ್ಲೂ ಹಿಟ್ ಆಗಿಲ್ಲ ಎಂಬುದು ಮೊದಲ ಮಾತು. ಒಂದು ಕತೆ ಚಿತ್ರಕತೆ ಸಂಭಾಷಣೆ ಸಂಗೀತ ಹೀಗೆ ಚಿತ್ರದಲ್ಲಿ ಇರಬೇಕಾದ ಎಲ್ಲಾ ಅಂಶಗಳೂ ಇವೆ. ಆದರೆ ಇರಬೇಕಾದ ರೀತಿಯಲ್ಲಿ ಇಲ್ಲ. ಒಬ್ಬ ಚಿತ್ರಕರ್ಮಿಗೆ ಸಿನಿಮಾ ಮಾಡುವ ಮುನ್ನ ಒಂದು ಸಣ್ಣ ಮಟ್ಟದ ಸಿನಿಮಾ ವ್ಯಾಕರಣಬೇಕಾಗುತ್ತದೆ, ಜೊತೆಗೆ ಕತೆಯ ಆಗುಹೋಗುಗಳ ಅರಿವು ಮತ್ತು ಅವನಲ್ಲಿ ಒಬ್ಬ ಪ್ರೇಕ್ಷಕ ಇರಬೇಕಾಗುತ್ತದೆ. ಫ್ಲಾಪ್ ಚಿತ್ರ ಅವೆಲ್ಲದರ ಪಾಲಿಗೆ ಫ್ಲಾಪ್ ಆಗಿದೆ.
ಚಿತ್ರ ಹೇಗೋ ಪ್ರಾರಂಭವಾಗುತ್ತದೆ. ಕೊನೆಗೊಂದು ಸಂದೇಶದೊಂದಿಗೆ ಮುಗಿಯುತ್ತದೆ. ಈ ನಡುವೆ ಅಲ್ಲಲ್ಲಿ ದೃಶ್ಯಗಳು ಬಂದು ಹೋಗುತ್ತವೆ. ಜೊತೆಗೊಂದಷ್ಟು ಹಾಡು. ಸಿನಿಮಾ ಎಂದರೆ ಇಷ್ಟೇನಾ ಎಂದುಕೊಂಡವರಿಗೆ ಇಷ್ಟೇನೆ ಎಂದುಕೊಂಡು ಚಿತ್ರ ಮಾಡಿದ್ದಾರೆ ನಿರ್ದೇಶಕ ಕರಣ್ ಕುಮಾರ್.
ಪ್ರಾರಂಭದಲ್ಲಿ ಹಿಂದೂ ಕ್ರೈಸ್ತ ಮುಸ್ಲಿಂ ವ್ಯಕ್ತಿಗಳಿಂದ ಭಾಷಣ ಏರ್ಪಡಿಸುತ್ತಾರೆ ನಿರ್ದೇಶಕರು. ಅಲ್ಲಿಂದ ಮೂರು ಧರ್ಮದ ಹುಡುಗರ ಕತೆ ಹೇಳಲು ಶುರು ಮಾಡುತ್ತಾರೆ. ಬಾಲ್ಯದಲ್ಲಿಯೇ ಹಾದಿ ತಪ್ಪಿದ ಹುಡುಗರು ಏನೇನೋ ಮಾಡುತ್ತಾರೆ. ಮೂವರೂ ಒಬ್ಬಳೇ ಹುಡುಗಿಯನ್ನು ಪಟಾಯಿಸುತ್ತಾರೆ. ಅವಳೋ ಇಂತಹ ನೂರು ಹುಡುಗರನ್ನು ನೋಡಿದ್ದಾರೆ ಎನ್ನುತ್ತಾರೆ ನಿರ್ದೇಶಕರು. ಸರಿ ಮೂವರಿಗೂ ಉಂಡೆ ನಾಮ ತಿಕ್ಕುವ ಆಕೆ ಮತ್ತೊಬ್ಬನನ್ನು ಮದುವೆಯಾಗಿ ಮೂವರಿಗೂ ರಾಖಿ ಕಟ್ಟುವುದರೊಂದಿಗೆ ಪ್ರೇಮ ಪ್ರಕರಣಕ್ಕೆ ಶುಭಂ. ಅಲ್ಲಿಂದ ಹಣ ಸಂಪಾದನೆ ಕಾಂಡ ಶುರು ಮಾಡುವ ನಿರ್ದೇಶಕರು ತ್ವರಿತಗತಿಯಲ್ಲಿ ಅದನ್ನು ಅಡ್ಡದಾರಿ ಹಿಡಿದು ಮುಗಿಸಿಬಿಡುತ್ತಾರೆ. ಹಾಗೆ ಮೂವರೂ ಹಣಗಳಿಸಿ ಒಬ್ಬ ಅಪಘಾತದಲ್ಲಿ ಸಾಯುತ್ತಾನೆ. ಕುಂಟನೊಬ್ಬ ಉಳಿದಿಬ್ಬರಿಗೆ ಜ್ಞಾನೋದಯ ಮಾಡಿಸುತ್ತಾನೆ. ಅಲ್ಲಿಗೆ ಶುಭಂ.
ಸುಮ್ಮನೆ ಒಂದಷ್ಟು ಹಾಸ್ಯ ದೃಶ್ಯಗಳನ್ನು ಹೆಣೆದು ಅದಕ್ಕೆ ಲಿಂಕ್ ಕೊಡಲು ನಿರ್ದೇಶಕರು ಹೆಣೆಗಾಡಿದ್ದಾರೆ. ಬಿಡಿಬಿಡಿಯಾಗಿ ಓಕೆ ಎನಿಸುವ ದೃಶ್ಯಗಳು ಒಟ್ಟಾರೆಯಾಗಿ ಪರಿಣಾಮಕಾರಿಯಾಗಿಲ್ಲ. ಹಾಗೆಯೇ ಕತೆ ಎಂಬುದೇ ಚಿತ್ರಕ್ಕಿಲ್ಲದ ಕಾರಣ ಪ್ರಾರಂಭದಿಂದಲೇ ಆಕಳಿಕೆ ತರಿಸುತ್ತಾ ಸಾಗುತ್ತದೆ ಚಿತ್ರ. ಮೊದಲಾರ್ಧ ಕೊನೆಯಾಗುವುದಕ್ಕೂ ದ್ವಿತೀಯಾರ್ಧ ಪ್ರಾರಂಭವಾಗುವುದಕ್ಕೂ ನಡುವ ದೃಶ್ಯಗಳಲ್ಲಿ ಏಳಸುತನ ಎದ್ದು ಕಾಣುತ್ತದೆ. ಒಂದಷ್ಟು ಈಗಾಗಲೇ ಕೇಳಿರುವ ಜೋಕ್ ಗಳಿಗೆ ದೃಶ್ಯರೂಪಕ್ಕೆ ಕೊಟ್ಟು ಸಿನಿಮಾಕ್ಕೆ ಅಳವಡಿಸಿದ್ದಾರೆ ನಿರ್ದೇಶಕರು. ಆದರೆ ಅವುಗಳು ಕತೆಗೆ ಯಾವುದೇ ರೀತಿಯಲ್ಲೂ ಸಾಥ್ ನೀಡದೆ ಕತೆಯಾಚೆಗೆ ಉಳಿಯುತ್ತದೆ. ಕೊನೆಯ ಒಂದತ್ತು ನಿಮಿಷ ಏನೋ ಇದೆ ಎನಿಸುವ ಫ್ಲಾಪ್ ಚಿತ್ರ ಹೊಸ ನಿರ್ದೇಶಕರನ್ನು ಅನುಮಾನದಿಂದ ನೋಡುವಂತೆ ಮಾಡಿಬಿಟ್ಟಿದೆ.
ಮೂವರು ನಾಯಕರಾಗಿ ಸಂದೀಪ್ ಅಕಿಲ್, ವಿಜೇತ್ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಜಟ್ಟ ನಾಯಕಿ ಸುಕ್ರುತಾ ವಾಗ್ಲೆ ಇಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದ ಪಾತ್ರಗಳು ಅಲ್ಲಿ ಬಂದು ಇಲ್ಲಿ ಹೋಗುತ್ತವೆ. ತಾಂತ್ರಿಕ ಅಂಶಗಳು ಸಾದಾರಣ ಮಟ್ಟದಲ್ಲಿವೆ.
ಹೊಸದಾಗಿ ಬರುವ ನಿರ್ದೇಶಕರು ಏನಾದರೂ ಹೊಸದಾಗಿ ಯುವ ಜನತೆಯನ್ನು ತಲೆಯಲ್ಲಿಟ್ಟುಕೊಂಡು ಕತೆ ಮಾಡುತ್ತಾರೆ. ಆದರೆ ಸಿನಿಮಾ ಕತೆ ಚಿತ್ರಕತೆಯ ಕುಸುರಿಯನ್ನು ಕಲಿಯದೇ ತಾವು ಬರೆದದ್ದೇ ಕತೆ ಚಿತ್ರಕತೆ ಎನ್ನುವ ರೀತಿಯಲ್ಲಿ ಚಿತ್ರದ ಬರಹವನ್ನು ಮುಗಿಸುತ್ತಾರೆ. ಹೊಸಬರಿಂದ ಹೊಸತನ ಸಾಧ್ಯ ಎನ್ನುವ ಮಾತು ಈಗ ಹೊಸಬರಿಂದ ದ್ವಂದ್ವಾರ್ಥ ಸಂಭಾಷಣೆ ಮತ್ತು ಹದವಿಲ್ಲದ ಚಿತ್ರಕತೆಯಷ್ಟೇ ಸಾಧ್ಯ ಎನ್ನುವಂತಾಗಿದೆ. ಕರಣ್ ಕುಮಾರ್ ಅವರಂತಹ ನಿರ್ದೇಶಕರು ತಮ್ಮ ಮುಂದಿನ ಚಿತ್ರದಲ್ಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಪ್ರೇಕ್ಷಕ ಹೊಸ ನಿರ್ದೇಶಕರು ಎಂದರೆ ಇಷ್ಟೇ ಎನ್ನುವ ಅಭಿಪ್ರಾಯಕ್ಕೆ ಬರುವುದರಲ್ಲಿ ಸಂದೇಹವಿಲ್ಲ.

No comments:

Post a Comment