Pages

Friday, March 6, 2015

ಒಂದು ರೋಮ್ಯಾಂಟಿಕ್ ಕ್ರೈಂ ಕತೆ

ತೆಲುಗಿನ ಓಕ ರೋಮ್ಯಾಂಟಿಕ್ ಕ್ರೈಂ ಕಥಾ ಚಿತ್ರದ ಕನ್ನಡ ಅವತರಣಿಕೆ ಈ ಚಿತ್ರ/ ಹಾಗಾಗಿ ಹೊಸದೇನನ್ನೂ ನಿರೀಕ್ಷಿಸದೆ ಸುಮ್ಮನೆ ಚಿತ್ರ ಮಂದಿರಕ್ಕೆ ನುಗ್ಗಬೇಕಾಗುತ್ತದೆ. ರಿಮೇಕ್ ಆಗಲಿ ಸ್ವಮೇಕ್ ಆಗಲಿ ಒಳ್ಳೆ ಚಿತ್ರವಾದರೆ ಸಾಕು, ಮನರಂಜನೆ ಸಿಕ್ಕರೆ ಸಾಕು ಎನ್ನುವವರ ಗುಂಪೇ ಇದೆ. ಈ ಚಿತ್ರ ಅಂತವರ ಸಾಲಿಗಾದರೂ ನಿಲ್ಲುತ್ತದೆಯೇ?
ಸುನಿಲ್ ಕುಮಾರ್ ರೆಡ್ಡಿ ನಿರ್ದೇಶನದ ಈ ಚಿತ್ರ 2012 ರಲ್ಲಿ ಬಿಡುಗಡೆಯಾಗಿತ್ತು. ರಾತ್ರಿ ಸಮಯದಲ್ಲಿ ಟಿವಿ ವಾಹಿನಿಗಳಲ್ಲಿ ಬರುವ ಕ್ರೈಂ ಸ್ಟೋರಿ ತರಹದ ಕತೆಗಳನ್ನೆಲ್ಲಾ ಒಂದೇ ತೆಕ್ಕೆಯಲ್ಲಿ ಸೇರಿಸಿರುವ ಚಿತ್ರವಿದು.
ಮೂವರು ಹುಡುಗಿಯರು ಹದಿಹರೆಯದವರು. ಯವ್ವನದ ಬಿಸಿ ಮತ್ತು ಅವರ ಹಿನ್ನೆಲೆ ಅವರನ್ನು ಬೇರೆಯದೇ ದಾರಿಗೆ ತಳ್ಳುತ್ತದೆ. ಮೊದಲಿಗೆ ಪ್ರೀತಿಯಿಂದ ಶುರುವಾಗುವ ಕತೆ ಎರಡನೆಯ ಹಂತದಲ್ಲೇ ಅಪರಾಧಕ್ಕೆ ನುಗ್ಗುತ್ತದೆ. ತನ್ಮಯ, ಜ್ಯೋತಿ ಮೀನಾ ಎನ್ನುವ ಮೂರು ಹುಡುಗಿಯರ ಕತೆಯಲ್ಲಿ ಸಾಧ್ಯವಾದಷ್ಟು ಎಲ್ಲ ತರಹದ ಅಪರಾಧವನ್ನೂ ಸೇರಿಸಿದ್ದಾರೆ ನಿರ್ದೇಶಕರು. ಮೊವರೂ ಪ್ರೀತಿಯಲ್ಲಿ ಬೀಳುತ್ತಾರೆ. ಮೋಜು ಮಾಡಲು ಶುರು ಹಚ್ಚಿ ಕೊಳ್ಳುತ್ತಾರೆ. ಅಲ್ಲಿಂದ ಒಂದೊಂದೇ ಅಪರಾಧಗಳು ತೆರೆದುಕೊಳ್ಳುತ್ತವೆ. ಪ್ರೀತಿಗಾಗಿ ನಾಯಕ ಕಳ್ಳನಾಗುತ್ತಾನೆ, ಕೊಲೆಗಾರನೂ ಆಗುತ್ತಾನೆ. ಅವನ ಜೊತೆಗೆ ಜ್ಯೋತಿಯೂ ಸೇರಿಕೊಳ್ಳುತ್ತಾಳೆ. ಇತ್ತ ಮೀನಾ ತನ್ನ ಪ್ರಿಯಕರನಿಂದಲೇ ತನ್ನದೇ ಅಶ್ಲೀಲ ವೀಡಿಯೊ ಚಿತ್ರಣಕ್ಕೆ ನಾಯಕಿಯಾಗಿ ಬ್ಲಾಕ್ ಮೇಲ್ ಗೆ ಒಳಗಾಗುತ್ತಾಳೆ. ಮತ್ತೊಬ್ಬಳು ಅಪ್ಪ ಯಾರೆಂದು ಗೊತ್ತಿಲ್ಲದ ಗರ್ಭಕ್ಕೆ ಕಾರಣಳಾಗುತ್ತಾಳೆ.
ಮುಂದೆ ಮೂವರ ಸ್ಥಿತಿ ಏನಾಯಿತು ಎನ್ನುವ ಕುತೂಹಲವಿದ್ದರೆ ಒಮ್ಮೆ ಚಿತ್ರವನ್ನು ನೋಡಬಹುದು. ಚಿತ್ರದಲ್ಲಿ ಹೊಸದೇನೂ ಇಲ್ಲವಾದರೂ ಇರುವ ಕತೆಯನ್ನೇ ಚೆನ್ನಾಗಿ ನಿರೂಪಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವ ಹಾಗಿರಲಿಲ್ಲ. ಆದರೆ ಮೂಲಕ್ಕೆ ನಿಷ್ಠರಾಗಿರುವ ಸಂಕಲನ ಕಾರ ನಿರ್ದೇಶಕ ಶ್ಯಾಮ್ ಸುಮ್ಮನೆ ಕಾಪಿ ಪೇಸ್ಟ್ ಮಾಡಿರುವುದು ಸೃಜನಶೀಲತೆಯ ಕೊರತೆ. ಏಕೆಂದರೆ ಮೂಲ ತೆಲುಗು ಆವೃತ್ತಿಯೇ ಅತೀ ಸಾದಾರಣ ಎನ್ನುವ ಹಣೆ ಪಟ್ಟಿಯ ಜೊತೆಗೆ ಎಳಸುತನದಿಂದ ಕೂಡಿದ ಚಿತ್ರ ಎನ್ನುವ ವಿಮರ್ಶೆ ಪಡೆದಿತ್ತು. ಅದನ್ನು ಕನ್ನಡಕ್ಕೆ ತರುವಾಗ ಆಯಾ ಅಂಶಗಳನ್ನು ಸರಿಪಡಿಸಿ ಹೊಂದಿಸುವ ಜವಾಬ್ದಾರಿ  ಮತ್ತು ಅವಕಾಶ ನಿರ್ದೇಶಕನಿಗಿರುತ್ತದೆ. ಅದನ್ನು ಸಮರ್ಥವಾಗಿ ಬಳಸಿಕೊಂಡಾಗ ರಿಮೇಕ್ ಸ್ವಮೇಕ್ ಎನ್ನುವುದರ ಬೇಧಭಾವವಿಲ್ಲದೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ. ಆದರೆ ನಿರ್ದೇಶಕರು ಅದೆಲ್ಲವನ್ನೂ ಪಕ್ಕಕ್ಕಿಟ್ಟು ಅಲ್ಲಿ ಹಾಗಿತ್ತು ಅದಕ್ಕೆ ಇಲ್ಲೂ ಹಾಗಿದೆ ಎನ್ನುವಂತೆ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅವರ ಆಶಯ ಏನೇ ಇದ್ದರೂ ಸಮಾಜದ ಕರಾಳ ಮುಖದ ನಡುವೆ ಆಶಾಕಿರಣವನ್ನೂ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ ಚಿತ್ರದ ಗುಣಮಟ್ಟ ಒಂದು ಹಂತ ಮೇಲೆಕ್ಕೇರುತ್ತಿತ್ತೇನೋ?

ನಾಯಕಿಯರಾಗಿ ಪೂಜಾಶ್ರೀ, ಅಶ್ವಿನಿ, ಸೋನಾಲ್ ತಮ್ಮ ಪಾತ್ರವನ್ನು, ಜೊತೆಗೆ ಒಂದಷ್ಟು ಬಿರುಸು ಬಿಸಿ ಮಾತುಗಳನ್ನು ಹರಿ ಬಿಟ್ಟಿದ್ದಾರೆ. ನಾಯಕ ಅರುಣ್ ಪಾತ್ರ ಪೋಷಣೆ ಗಟ್ಟಿಯಿಲ್ಲದ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದ್ದಾರೆ. ಸಂಗೀತ ಮತ್ತು ಛಾಯಾಗ್ರಹಣ ಸಾದಾರಣ ಮಟ್ಟಕ್ಕಿಂತ ಮೇಲೆ ಏರಲು ಪ್ರಯತ್ನ ಪಟ್ಟಿಲ್ಲ.

No comments:

Post a Comment