Pages

Saturday, November 23, 2013

ಖತರ್ನಾಕ್:


ಉಮೇಶ್ ರೆಡ್ಡಿ ಯಾರು ಎಂಬೊಂದು ಪ್ರಶ್ನೆಯನ್ನು ಕರ್ನಾಟಕದಲ್ಲಿ ಯಾರನ್ನೇ ಕೇಳಿದರೂ ಪಟ್ಟಂತ ಸಾಕಷ್ಟು ವಿವರಗಳನ್ನು ಹೇಳಿಬಿಡುತ್ತಾರೆ. ಅಷ್ಟೊಂದು ಕುಖ್ಯಾತ, ಅತ್ಯಾಚಾರಿ, ಹಿಂಸಾ ವಿನೋದಿ, ವಿಕೃತ ನಾದವನು ಉಮೇಶ್ ರೆಡ್ಡಿ. ಯಾರಾದರೂ ಸ್ವಲ್ಪ ಅಪಸಾಮಾನ್ಯ ಅಂದಾಕ್ಷಣ ಉಮೇಶ್ ರೆಡ್ಡಿ ಎಂದು ತಮಾಷೆ ಮಾಡುವವರಷ್ಟರ ಮಟ್ಟಿಗೆ ಉಮೇಶ್ ರೆಡ್ಡಿ ಚಿರಪರಿಚಿತ. ಹಾಗಾಗಿ ಅವನ ಜೀವನಾಧಾರಿತ ಚಿತ್ರ ಎಂದಾಕ್ಷಣ ಈಗಾಗಲೇ ವಾಹಿನಿಗಳ ಅಪರಾಧ ಕಾರ್ಯಕ್ರಮಗಳಲ್ಲಿ ನೋಡಿದ್ದನ್ನು, ಪತ್ರಿಕೆಗಳಲ್ಲಿ ನೋಡಿದ್ದನ್ನು ಮೆಲುಕು ಹಾಕುವ ವೀಕ್ಷಕ ಅದಷ್ಟನ್ನೂ ತಲೆಯಲ್ಲಿಟ್ಟುಕೊಂಡು ಚಿತ್ರ ಮಂದಿರಕ್ಕೆ ಹೋಗುತ್ತಾನೆ. ಅಲ್ಲಿ ಅಷ್ಟೇ ಇರುತ್ತದೆ.
 ಹೌದು!. ನೀವೀಗಾಗಲೇ ನೋಡಿದ್ದನ್ನು ಕೇಳಿದ್ದನ್ನೇ ಮಳವಳ್ಳಿ ಸಾಯಿಕೃಷ್ಣ ಹಿರಿತೆರೆಗೆ ತಂದಿದ್ದಾರೆ. ದಂಡುಪಾಳ್ಯದ ಯಶಸ್ಸು ಅದಕ್ಕೆ ಕಾರಣವಾಗಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.ಆದರೆ ಸಾಯಿಕೃಷ್ಣ ಉಮೇಶ್ ರೆಡ್ಡಿಯ ವಿಕೃತ ಕಾರ್ಯಗಳನ್ನು ಅಷ್ಟೇ ಬರ್ಬರವಾಗಿ ತೋರಿಸುವತ್ತಲೇ ಹೆಚ್ಚು ಗಮನ ಹರಿಸಿರುವುದರಿಂದ ಅದರಾಚೆಗೆ ಬೇರೇನೂ ನಮಗೆ ನೋಡ ಸಿಗುವುದಿಲ್ಲ. ಅದರಲ್ಲೂ ಒಂದಷ್ಟು ಮನಶಾಸ್ತ್ರ, ಅದ್ಯಯನ ಎಂಬೆಲ್ಲಾ ವಿಷಯಗಳನ್ನೂ ತುರುಕಲು ಪ್ರಯತ್ನಿಸಿ ಸೋತಿದ್ದಾರೆ. ಯಾಕೆಂದರೆ ಸೈಕೋಪಾತ್ ಒಬ್ಬನ ಜೀವನ ಕತೆ ಎಂದಾಗ ಬರೀ ಕೊಲೆ ಕುಕೃತ್ಯಗಳನ್ನಷ್ಟೇ ವಿಜೃಂಭಿಸುವುದು ಸಾದಾರಣ ಕೆಲಸ. ಆದರೆ ಒಂದಷ್ಟು ಒಳ ಹೂರಣ ಸೂಕ್ಷ್ಮ ವಿಷಯಗಳನ್ನೂ, ಮನಶಾಸ್ತ್ರೀಯ ಅದ್ಯಯನದ ಜೊತೆ ಜೊತೆಗೆ ಕೊಟ್ಟಾಗ ಅದೊಂದು ಉತ್ತಮ ಚಿತ್ರವಾಗಬಹುದೇನೋ...ಆದರೆ ಮಳವಳ್ಳಿ ಸಾಯಿ ಕೃಷ್ಣ ಅಂತಹ ಕಷ್ಟ ತೆಗೆದುಕೊಳ್ಳುವ ತಾಪತ್ರಯಕ್ಕೆ ಹೋಗಿಲ್ಲ. ಸೀದಾಸಾದಾ ವಿಕೃತ ಕಾಮಿಯನ್ನ ಒಂದಷ್ಟು ಕೊಲೆ ಅತ್ಯಾಚಾರದ ಜೊತೆಗೆ ಪರದೆಯ ಮೇಲೆ ಚಿತ್ರಿಸಿದ್ದಾರೆ.
ಇಷ್ಟಕ್ಕೂ ಇದು ಯಾವ ವಿಭಾಗದ ಚಿತ್ರ ಎಂಬ ಪ್ರಶ್ನೆ ಕಾಡುತ್ತದೆ. ಯಾಕೆಂದರೆ ಕಥೆ ಯಾವುದೇ ಆಗಲಿ ಒಬ್ಬ ಚಿತ್ರಕರ್ಮಿ ಅದನ್ನು ಯಾವ ವಿಭಾಗದ ಚಿತ್ರ ಮಾಡಬೇಕು ಎಂಬ ಪೂರ್ವಪರಿಕಲ್ಪನೆಯನ್ನು ಸ್ಪಷ್ಟವಾಗಿ ಹೊಂದಿದ್ದಾಗ ಅದರ ನಿರೂಪಣೆ ಚಿತ್ರಕತೆ ಮುಂತಾದವುಗಳಿಗೆ ಸ್ಪಷ್ಟದಾರಿ ದೊರಕುತ್ತದೆ. ಇಲ್ಲವಾದಲ್ಲಿ ಅದೊಂದು ಪರಿಪೂರ್ಣ ಚಿತ್ರವೂ ಆಗದೆ ಸಾಕ್ಷ್ಯ ಚಿತ್ರವಾಗಿ ಬಿಡುತ್ತದೆ. ಖತರ್ನಾಕ್ ಒಂದಷ್ಟು ಕೊಲೆಗಳ, ಕುಖ್ಯಾತನ ಅರೆ-ಸಾಕ್ಷ್ಯಚಿತ್ರವಾಗಿದೆ ಎಂದಷ್ಟೇ ಹೇಳಬಹುದು.
ಅಭಿನಯದ ವಿಷಯಕ್ಕೆ ಬಂದರೆ ರವಿಕಾಲೆ ಉಮೇಶ್ ರೆಡ್ಡಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಚುರುಕು ಕಣ್ಣು ಮತ್ತು ವಿಕೃತ ಭಾವವನ್ನು ವ್ಯಕ್ತಪಡಿಸುವ ಮುಖದ ಜೊತೆಗೆ ಭಯ ಹುಟ್ಟಿಸುತ್ತಾರೆ. ನಾಯಕಿ ರೂಪಿಕಾ ಪಾತ್ರವೇ ಪೇಲವವಾದ್ದರಿಂದ ಅದರ ಬಗ್ಗೆ ಅಷ್ಟು ಹೇಳದೆ ಇರುವುದು ಒಳ್ಳೆಯದು. ಉಳಿದಂತೆ ಸಾಹಸ ನಿರ್ದೇಶಕ ರವಿವರ್ಮ, ಶರತ್ ಲೋಹಿತಾಶ್ವ ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಕೂಡ ಗಮನಾರ್ಹ ಎನ್ನಬಹುದು.
ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆಗೆ ಹೆಸರುವಾಸಿ. ಇಲ್ಲಿ ಒಂದಷ್ಟು ಚುರುಕಾದ ಸಂಭಾಷಣೆಯನ್ನು ಬರೆದಿದ್ದಾರೆ. ಆದರೆ ನಿರ್ದೇಶಕರಾಗಿ ಸಾಯಿಕೃಷ್ಣ ಪರವಾಗಿಲ್ಲ ಎನಿಸಿದರೂ ಅಬ್ಬಬ್ಬಾ ಎನಿಸುವುದಿಲ್ಲ.

No comments:

Post a Comment