Pages

Sunday, November 17, 2013

ಆಂತರ್ಯ

ಆಂತರ್ಯ ಹೊಸಬರ ಚಿತ್ರ. ನಿರ್ದೇಶಕರು ಪ್ರಚಾರ ಚಿತ್ರಗಳಲ್ಲಿ ಉಪೇಂದ್ರ ರ ಎ ಚಿತ್ರದ ನಂತರ ಮತ್ತೊಂದು ಚಿತ್ರ ಬುದ್ದಿವಂತರಿಗೆ ಮಾತ್ರ ಎಂಬ ಸಾಲುಗಳನ್ನು ಬಳಸಿದ್ದಾರೆ. ಆದರೆ ಚಿತ್ರದಲ್ಲೆಲ್ಲೂ ಉಪೇಂದ್ರರ ಎ ಚಿತ್ರಕ್ಕೂ ಈ ಚಿತ್ರಕ್ಕೂ ಯಾವ ರೀತಿಯಲ್ಲೂ ಸಂಬಂಧವಾಗಲಿ ಹೋಲಿಕೆಯಾಗಲಿ ಕಾಣುವುದಿಲ್ಲ.
ಇಷ್ಟಕ್ಕೂ ಕಥೆ ಏನು? ಎಂಬ ಪ್ರಶ್ನೆ ಸಿನಿಮಾ ಎಂದಾಕ್ಷಣ ಬಂದು ಹೋಗುತ್ತದೆ. ಆದರೆ ಆಂತರ್ಯ ವಿಷಯದಲ್ಲಿ ಅದಕ್ಕೆ ಕರಾರುವಕ್ಕಾದ ಉತ್ತರ ಕೊಡುವುದು ಅಸಾಧ್ಯ.ಹಾಗೆಯೇ ಚಿತ್ರ ನೋಡುತ್ತಾ ನೋಡುತ್ತಾ ಏಕೆ? ಹೇಗೆ? ಎಂಬ ಪ್ರಶ್ನೆಗಳು ಹುಟ್ಟುತ್ತಲೇ ಹೋಗುತ್ತವೆ. ಪಾತ್ರಗಳು ಅವುಗಳ ಗೊಡವೆಗೆ ಹೋಗದೆ ತಮ್ಮ ಪಾಡಿಗೆ ತಾವು ಮುಂದುವರೆಯುತ್ತವೆ. ನಿರ್ದೇಶಕರು ಅವುಗಳಿಗೆ ಉತ್ತರ ಕೊಡುವ ಗೋಜಿಗೆ ಹೋಗದೆ ತಮಗೆ ಇಷ್ಟ ಬಂದ ಹಾಗೆ ಸಿನೆಮಾ ನಿರ್ದೇಶನ ಮಾಡುತ್ತಾ ಸಾಗುತ್ತಾರೆ.
ಶರಣ್ಯ ಮತ್ತು  ಕಿರಣ್ ಪ್ರೇಮಿಗಳು.ಒಂದು ಅವಘಡದಲ್ಲಿ ಕಿರಣ್ ಪ್ರಾಣ ಕಳೆದುಕೊಂಡಾಗ ಶರಣ್ಯ ಭಗ್ನ ಪ್ರೇಮಿಯಾಗುತ್ತಾಳೆ. ಇತ್ತ ನಾಯಕ ಕೃಷ್ಣ ಕಳ್ಳತನ ಮಾಡುತ್ತಾ ಸಿಕ್ಕ ಸಿಕ್ಕ ಹುಡುಗಿಯರನ್ನು ಮಜಾ ಮಾಡುತ್ತಾ ಕಾಲ ಕಳೆಯುತ್ತಾ ಇರುತ್ತಾನೆ. ಮೂರು ಜನ ಪೊಲೀಸರು ಕೃಷ್ಣನನ್ನು ಹಿಡಿಯಲು ಓಡಾಡುತ್ತಾ ಟೈಮ್ ಪಾಸ್ ಮಾಡುತ್ತಿರುತ್ತಾರೆ. ಭಗ್ನ ಪ್ರೇಮಿ ಶರಣ್ಯ ಬೆಂಗಳೂರಿಗೆ ಬಂದು ಸ್ನೇಹಿತೆಯ ಜೊತೆ ಇರಲು ಪ್ರಾರಂಭಿಸಿದಾಗ ಕೃಷ್ಣಾ ಅವಳ ಮೇಲೆ ಕಣ್ಣು ಹಾಕುತ್ತಾನೆ. ಅವಳನ್ನು ಪಟಾಯಿಸಿ ಮಜಾ ಮಾಡಬೇಕು ಎನ್ನುವ ದುರಾಲೋಚನೆ ಅವನದು.. ಆದರೆ ಅದು ಪ್ರೀತಿಯಾಗಿ ಬದಲಾಗುತ್ತದೆ..ಮುಂದೆ..
ಇರುವ ಕಥೆಯನ್ನೇ ತುಂಬಾ ಚೆನ್ನಾಗಿ ನಿರೂಪಿಸಬಹುದಾದ ಸಾಧ್ಯತೆ ನಿರ್ದೇಶಕರಿಗಿತ್ತು. ಆದರೆ ಚಿತ್ರಕಥೆಯನ್ನು ಸೂತ್ರ ಹರಿದ ಗಾಳಿಪಟದಂತೆ ಹರಿಯ ಬಿಟ್ಟಿರುವ ನಿರ್ದೇಶಕರು ಇಡೀ ಚಿತ್ರವನ್ನು ಹೇಗೇಗೋ ನಿರೂಪಿಸಿದ್ದಾರೆ. ಅದರಲ್ಲೂ ಕೆಲವೊಂದು ಅಂಶಗಳನ್ನಂತೂ ಒಪ್ಪಿಕೊಳ್ಳಲೂ ಸಾಧ್ಯವಾಗದಂತಿವೆ. ಉದಾಹರಣೆಗೆ ಎಲ್ಲೂ ಒಂದು ಕಡೆ ಸಿಗುವ ರಿವಾಲ್ವರ್, ಅದನ್ನು ಯಾವಾಗಲೂ ತನ್ನ ಬ್ಯಾಗಲ್ಲೇ ಇಟ್ಟುಕೊಂಡು ಓಡಾಡುವುದು, ಭಗ್ನ ಪ್ರೇಮಿ ಕೃಷ್ಣಾ ಸಿಕ್ಕಿದಾಕ್ಷಣ ಎಲ್ಲವನ್ನೂ ಮರೆತು ಚಿಕ್ಕಮಕ್ಕಳಂತೆ ಆಡುವುದು ನಾಯಕ ಸೇನೆ ಸೇರಬೇಕು ಎಂದುಕೊಂಡೆ ಕಳ್ಳತನ ಮೋಜು ಮಸ್ತಿ ಮಾಡುವುದು......ಹೀಗೆ. ಮೊದಲಾರ್ಧ ದೀರ್ಘವಾಗಿ ಏನೇನೋ ತೋರಿಸುವ ನಿರ್ದೇಶಕರು ದ್ವಿತೀಯಾರ್ಧದಲ್ಲಿ ಅವಸರವರವಾಗಿ ಕಡಿಮೆ ಅವಧಿಯಲ್ಲೇ ಚಿತ್ರವನ್ನು ಮುಗಿಸಿಬಿಟ್ಟಿದ್ದಾರೆ.
ನಾಯಕ ಪ್ರವೀಣ್ ನಟಿಸಲು ಪ್ರಯತ್ನಿಸಿದ್ದಾರೆ.ನಾಯಕಿಯಾಗಿ ಅಪ್ಸರ ಅಭಿನಯ ಕೂಡ ಪರವಾಗಿಲ್ಲ ಎನಿಸಿಕೊಳ್ಳುತ್ತದೆ. ಉಳಿದಂತೆ ತಾಂತ್ರಿಕ ಅಂಶಗಳು ಲೆಕ್ಕಕ್ಕೆ ಬರದಂತಿವೆ. ಒಟ್ಟಾರೆಯಾಗಿ ನೋಡಿದರೆ ಚಿತ್ರಕ್ಕೆ ನಿರ್ಮಾಪಕರು ಸಾಧ್ಯವಾದಷ್ಟು ಎಲ್ಲವನ್ನೂ ಒದಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ನಿರ್ದೇಶಕ ಸಂತೋಷ್ ಗೌಡ ಒಂದೊಳ್ಳೆ ಕಥೆ ಮಾಡಲಾಗದೆ ಅದನ್ನು ವ್ಯರ್ಥ ಮಾಡಿದ್ದಾರೆ ಎನ್ನಬಹುದು.

No comments:

Post a Comment