Pages

Monday, June 30, 2014

ಪಾರು ವೈಫ್ ಆಫ್ ದೇವದಾಸ:

ಶ್ರೀನಗರ ಕಿಟ್ಟಿ ಅಭಿನಯದ ಕಿರಣ್ ಗೋವಿ ನಿರ್ದೇಶನದ ಪಾರು ಚಿತ್ರದಲ್ಲಿ ಏನಿದೆ ಎಂಬುದನ್ನು ನಿರ್ದೇಶಕರೇ ಹೇಳಬೇಕಾಗುತ್ತದೆ. ಯಾಕೆಂದರೆ ಈ ಹಿಂದೆ ಪಯಣ ಮತ್ತು ಸಂಚಾರಿ ಎನ್ನುವ ಎರಡು ಚಿತ್ರಗಳನ್ನು ಕಿರಣ್ ಗೋವಿ ನಿರ್ದೇಶನ ಮಾಡಿದ್ದರು. ಎರಡೂ ಚಿತ್ರಗಳೂ ಅಂತಹ ಯಶಸ್ಸು ಕಾಣಲಿಲ್ಲವಾದರೂ ಚಿತ್ರದಲ್ಲಿ ಹಾಡುಗಳು ಜನಪ್ರಿಯವಾಗಿದ್ದವು.
ಆದರೆ ಈ ಚಿತ್ರ ಆ ಚಿತ್ರಗಳಿಗೆ ಅಪವಾದ ಎನ್ನಬಹುದು. ಒಂದು ಚಿತ್ರ ಎಂದಾಗ ಅದರಲ್ಲಿ ಕತೆ ಚಿತ್ರಕತೆ ಮುಂತಾದವೆಲ್ಲ ಇರಬೇಕಾಗುತ್ತದೆ. ಹಾಗಂತ ಈ ಚಿತ್ರದಲ್ಲಿ ಅದ್ಯಾವುದೂ ಇಲ್ಲವೇ ಎಂದು ನೀವು ಕೇಳಬಹುದು. ಇದೆ ಆದರೆ ಯಾವುದು ಪೂರಕವಾಗಿಲ್ಲ ಎನ್ನುವುದು ಉತ್ತರವಾಗುತ್ತದೆ.ದೇವದಾಸ ಪಾರುವನ್ನು ಭೇಟಿಯಾಗುತ್ತಾನೆ, ಪ್ರೀತಿಸುತ್ತಾನೆ. ಪ್ರಾರಂಭದಲ್ಲಿ ನಾಯಕಿ ಸ್ವಲ್ಪ ಕೊಸರಾಡಿದರೂ ಆಮೇಲೆ ಅವಳೂ ಪ್ರೀತಿಗೆ ಜೈ ಎನ್ನುತ್ತಾಳೆ. ಮುಲಾಜಿಲ್ಲದೆ ಇಬ್ಬರು ಕೈ ಕೈ ಹಿಡಿದು ಹಾದಿ ಕುಣಿಯುತ್ತಾರೆ. ಆಮೇಲೆ ಮತ್ತೊಬ್ಬಳು ಬರುತ್ತಾಳೆ. ಅವಳ್ಯಾಕೆ ಬಂದಳು ಇವಳೆಲ್ಲಿ ಮುಂದೆ ದೇವದಾಸನ ಪಾಡೇನು ಇತ್ಯಾದಿ ವಿವರಗಳು ನಿಮಗೆ ಕುತೂಹಲಕರವೆನಿಸಿದರೆ ಚಿತ್ರವನ್ನೊಮ್ಮೆ ಸಾಹಸವನ್ನು ಮಾಡಬಹುದು.
ಒಂದು ಸಿನಿಮಾ ಹೇಗಿದ್ದರೂ ಸರಿ ಅದಕ್ಕೊಂದು ಕತೆ ಇರಬೇಕಾಗುತ್ತದೆ. ಅಥವಾ ಕತೆಯ ಓಘಕ್ಕೆ ತಕ್ಕಂತೆ ತಿರುವುಗಳಿರಬೇಕಾಗುತ್ತದೆ. ಒಂದಷ್ಟು ಕಲಾವಿದರು, ಹಣ ಸಿಕ್ಕಿದೆ ಎಂದಾಕ್ಷಣ ಏನೋ ಒಂದನ್ನು ಸಿನಿಮಾದಲ್ಲಿ ಮಾಡುವುದು ಅಷ್ಟಾಗಿ ಒಳ್ಳೆಯದಲ್ಲ. ಹಾಗೆಯೇ ಯಾವುದೇ ತಿರುವುಗಳನ್ನೂ ಕೂಡ ಸುಖಾ ಸುಮ್ಮನೆ ಚಿತ್ರಗಳಲ್ಲಿ ತುರುಕಿದರೆ ಅವುಗಳು ಕುತೂಹಲಕಾರಿ ಎನಿಸುವುದರ ಬದಲಿಗೆ ಅನಾವಶ್ಯಕ ಎನಿಸುತ್ತವೆ. ಅದು ಚಿತ್ರದ ಪರಿಣಾಮವನ್ನು ಮತ್ತಷ್ಟು ಪೇಲವ ಮಾಡಿಬಿಡುತ್ತದೆ. ಪಾರು ಚಿತ್ರದಲ್ಲಿ ಆಗಿರುವುದು ಇದೆ.
ಚಿತ್ರದ ತಾಂತ್ರಿಕ ವಿಭಾಗಕ್ಕೆ ಒಂದಷ್ಟು ಅಂಕಗಳನ್ನು ಕೊಡಬಹುದು. ಹಾಗೆಯೇ ಹಾಡುಗಳು, ಸಂಗೀತ ಮತ್ತು ಅವುಗಳನ್ನು ಚಿತ್ರೀಕರಿಸಿರುವುದು ವರ್ಣರಂಜಿತವಾಗಿದೆ. ಶ್ರೀನಗರ ಕಿಟ್ಟಿ ಅಭಿನಯದಲ್ಲಿ ವಿಶೇಷವೇನೂ ಕಾಣಸಿಗುವುದಿಲ್ಲ. ಪಾತ್ರವೇ ಸೀದಾ ಸಾದಾ ಪಾತ್ರವಾದ್ದರಿಂದ ಅವರಾದರೂ ಏನು ಮಾಡಲು ಸಾಧ್ಯ. ಹಾಗೆಯೇ ಸೌಂದರ್ಯ ನಟಿಸಲು ಕಷ್ಟ ಪಟ್ಟು ಆಮೇಲೆ ಬಿಟ್ಟಿದ್ದಾರೆ. ಇಷ್ಟಬಂದ ಹಾಗೆ ಸಂಭಾಷಣೆ ಒಪ್ಪಿಸಿದ್ದಾರೆ.ನೇಹಾ ಪಾಟೀಲ್, ಮೋಹನ್ ಜುನೆಜಾ ಲಯೇಂದ್ರ ಮುಂತಾದವರು ಚಿತ್ರದಲ್ಲಿದ್ದಾರೆ.

ನಿರ್ದೇಶಕ ಕಿರಣ್ ಗೋವಿ ತಮ್ಮ ಮುಂದಿನ ಚಿತ್ರದಲ್ಲಾದರೂ ಉತ್ತಮ ಕತೆ ಚಿತ್ರಕತೆ ಇಟ್ಟುಕೊಂಡರೆ ಒಳ್ಳೆಯದು.

No comments:

Post a Comment