Pages

Friday, January 23, 2015

ಒಂದ್ ಚಾನ್ಸ್ ಕೊಡಿ:


ಒಂದ್ ಚಾನ್ಸ್ ಕೊಡಿ ಎಂಬ ಹೆಸರಿನಂತೆ ನಿರ್ದೇಶಕರು ಅಥವಾ ಚಿತ್ರತಂಡ ನಮ್ಮನ್ನು ಕೇಳುತ್ತಿದೆಯಾ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಚಿತ್ರಮಂದಿರದ ಒಳಗೆ ಹೋದ ಮೇಲೆ ಕೊಟ್ಟವನು ಕೋಡಂಗಿ ಈಸ್ಕೊಂಡವನು ಈರಭದ್ರ ಎನ್ನುವ ಪರಿಸ್ಥಿತಿ ಪ್ರೇಕ್ಷಕನದ್ದಾಗುತ್ತದೆ.
ಇದೊಂದು ರಿಮೇಕ್ ಚಿತ್ರ. ಮಲಯಾಳಂ ನ ಬೆಸ್ಟ್ ಆಫ್ ಲಕ್ ಇಲ್ಲಿ ಒಂದ್ ಚಾನ್ಸ್ ಕೊಡಿ ಆಗಿದೆ. ಒಂದು ಸಿನೆಮದೊಳಗೆ ಸಿನಿಮ ಸುತ್ತ ನಡೆಯುವ ಕತೆ ಚಿತ್ರದ್ದು. ಒಬ್ಬ ನಿರ್ದೆಶಕಾಂಕ್ಷಿ ಸಿನಿಮಾ ಮಾಡಲು ಕಷ್ಟ ಪಟ್ಟು ಗೆಳೆಯನನ್ನೇ ನಿರ್ಮಾಪಕನ್ನಾಗಿ ಮಾಡಿ ಇನ್ನೇನು ಶುರು ಗುರು ಫಿಲ್ಮು ಎನ್ನುವಷ್ಟರಲ್ಲಿ ಹಣದೊಂದಿಗೆ ನಂಬಿದ ಮ್ಯಾನೇಜರ್ ಪರಾರಿಯಾಗುತ್ತಾನೆ. ಈಗ ಹಣ ಕೊಟ್ಟವರಿಗೆ ಸಿನಿಮಾ ಮಾಡಿ ತೋರಿಸಲೇ ಬೇಕು. ಆಗ ಶುರುವಾಗುತ್ತದೆ ಅಸಲಿ ಸಿನಿಮಾ ನಾಟಕ.. ಹೇಳುವವರಿಲ್ಲದೆ ಕೇಳುವವರಿಲ್ಲದೆ ಚಿತ್ರ ಎತ್ತೆತ್ತಲೋ ಸಾಗುತ್ತದೆ. ಅಯ್ಯೋ ದೇವ್ರೇ ಏನಾಯ್ತು, ಅಂದುಕೊಂಡದ್ದು ಒಂದು ಆದದ್ದೇ ಒಂದು ಎನಿಸುವ ಪರಿಸ್ಥಿತಿ ಚಿತ್ರದಲ್ಲಿನ ಪಾತ್ರಗಳಿಗೂ ಮತ್ತು ಹೊರಗೆ ಕುಳಿತ ಪ್ರೇಕ್ಷಕರಿಗೂ ಏಕಕಾಲದಲ್ಲಿ ಅನಿಸುತ್ತದೆ.
ಚಿತ್ರದಲ್ಲಿ ಎಲ್ಲವೂ ಇದೆ. ಕತೆಯನ್ನು ಎರವಲು ಪಡೆಯಲಾಗಿದೆ. ಹಾಗಾಗಿ ಕತೆ ಚಿತ್ರಕತೆ ಮಾಡುವ ಕಷ್ಟ ತಪ್ಪಿದೆ, ಕಲಾವಿದರೆಲ್ಲಾ ಅನುಭವಿಗಳು ಮತ್ತು ಈಗಾಗಲೇ ಹಾಸ್ಯ ಪಾತ್ರಗಳನ್ನೂ ನಿರ್ವಹಿಸಿದವರು. ಅದೂ ಶ್ರಮ ಕಡಿಮೆಯಾಗಿದೆ. ಜೊತೆಗೆ ಒಂದಷ್ಟು ಸುಂದರ ಸ್ಥಳಗಳು, ನಿರ್ಮಾಪಕರು ಇದ್ದಾರೆ. ಇವೆಲ್ಲಾ ಇದ್ದೂ ನಿರ್ದೇಶಕರು ಚಿತ್ರವನ್ನು ನಗಿಸುವ ಚಿತ್ರವನ್ನಾಗಿ ಮಾಡದೆ ಇರುವುದು ಯಾಕೋ ಚಿತ್ರ ಬೋರ್ ಆಗುತ್ತಿದೆಯಲ್ಲ ಎನಿಸುವುದು ವಿಪರ್ಯಾಸ.
ಇರುವ ಸನ್ನಿವೇಶಗಳನ್ನು ಸಾವಧಾನದಿಂದ ನಿರೂಪಿಸಿದ್ದರೆ ನಗಿಸುವ ಅಂಶ ಖಂಡಿತ ಇರುತ್ತಿತ್ತು. ಹಾಗೆಯೇ ಸಂಕಲನದಲ್ಲಿ ಹಿಡಿತವಿದ್ದರೆ ಆಕಳಿಕೆ ತಪ್ಪಿಸಬಹುದಿತ್ತು. ಆದರೆ ನಿರ್ದೇಶಕ ಸತ್ಯಮಿತ್ರ ಅದೆಲ್ಲವನ್ನು ಪಕ್ಕಕ್ಕಿಟ್ಟು ಚಿತ್ರ ಮಾಡಿದ್ದಾರೆ. ಹಾಸ್ಯ ಕಲಾವಿದರು ಮತ್ತು ಕಲಾವಿದರನ್ನು ಒಂದೇ ತಕ್ಕಡಿಯಲ್ಲಿಟ್ಟಿದ್ದಾರೆ. ಹಾಗಾಗಿಯೇ ಇದೊಂದು ಹಾಸ್ಯಮಯ ಚಿತ್ರ ಎಂದುಕೊಂಡು ಹೋದವನೇ ನಗೆಪಾಟಲಿಗೆ ಗುರಿಯಾಗುವ ದುರಂತ ಚಿತ್ರದ್ದಾಗಿದೆ.
ಪ್ರಾರಂಭದಿಂದಲೂ ನಿರೀಕ್ಷಿತ ದಿಕ್ಕಿನಲ್ಲೇ ನಡೆಯುವ ಚಿತ್ರ ಕೊನೆಯ ಘಳಿಗೆಯಲ್ಲಿ ತಿರುವು ಪಡೆಯುತ್ತದೆ. ಅದರ ಬೆನ್ನಲೇ ಶುಭಂ.
ರವಿಶಂಕರ್ ಗೌಡ ತಮ್ಮ ಎಂದಿನ ಶೈಲಿಯನ್ನು ಇಲ್ಲಿಯೂ ಮುಂದುವರೆಸಿದ್ದಾರೆ. ನಾಯಕ ಅಜಿತ್ ಅಭಿನಯದಲ್ಲಿ ಇನ್ನೂ ವಿದ್ಯಾರ್ಥಿ. ನಂದಿನಿ ಮತ್ತು ಲಿಂಟ್ಓ  ಇಬ್ಬರು ನಾಯಕಿಯರಿದ್ದು ಅವರು ಚಿತ್ರಕ್ಕೆ ನಾಯಕಿಯರು ಬೇಕು ಎನ್ನುವ ಕಾರಣಕ್ಕೆ ಇದ್ದಾರ ಎನಿಸುತ್ತದೆ. ಬಿಸಿ ಪಾಟೀಲ್ ಮತ್ತು ಶ್ರುತಿ ಸುಮ್ಮನೆ ಬಂದೆವು, ನಿಂದೆವು ಎನ್ನುವಂತೆ ಇದ್ದರೂ ಅವರ ಪಾತ್ರದಿಂದಲೇ ಒಂದಷ್ಟು ತಿರುವು ಕಲೆ ಚಿತ್ರಕ್ಕೆ ಸಿಕ್ಕಿದೆ. ಇನ್ನಷ್ಟು ಹಾಸ್ಯ ಕಲಾವಿದರು ತಮ್ಮ ಶಕ್ತಿ ಮೀರಿ ನಗಿಸಲು ಪ್ರಯತ್ನಿಸಿ ಭಾಗಶಃ ಯಶಸ್ವೀಯಾಗಿದ್ದಾರೆ.
ಹಾಡು ಮತ್ತು ಛಾಯಾಗ್ರಹಣ ಸಾದಾರಣ ಎನ್ನುವ ಹಣೆಪಟ್ಟಿಗೆ ಮೀಸಲಾಗುತ್ತವೆ.

ನಿರ್ದೇಶಕರು ಇರುವ ಸದಾವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಳ್ಳುವ ಅವಕಾಶಗಳಿತ್ತು. ಅದೆಲ್ಲೂ ಮಿಸ್ ಆಗಿರುವುದರಿಂದ ಅವರು ಮತ್ತೊಮ್ಮೆ ಪ್ರೇಕ್ಷಕರನ್ನು ಒಂದ್ ಚಾನ್ಸ್ ಕೊಡಿ ಎನ್ನಬೇಕಾಗುತ್ತದೇನೋ?

No comments:

Post a Comment