ಒಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನೆರ್ ಎಂದರೆ
ಹೇಗಿರಬೇಕು ಎಂಬುದು ನಿರ್ದೇಶಕ ಪ್ರಕಾಶ್ ಜಯರಾಂ ಅವರಿಗೆ ಗೊತ್ತಿದೆ. ಏಕೆಂದರೆ ಇಲ್ಲಿಯವರೆಗೆ ಪ್ರಕಾಶ್
ನಿರ್ದೇಶನ ಮಾಡಿದ್ದು ಆ ತರಹದ ಚಿತ್ರಗಳನ್ನೇ. ಸಿದ್ಧಾರ್ಥ ಕೂಡ ಅದೇ ನಿಟ್ಟಿನಲ್ಲಿದೆ.
ಯುವ ನಾಯಕ ಸಿದ್ಧಾರ್ಥ ಕುಟುಂಬ ಗೆಳೆಯರ ಜೊತೆ
ಆರಾಮವಾಗಿರುತ್ತಾನೆ. ನಾಯಕಿ ಇಷ್ಟವಾಗುತ್ತಾಳೆ. ಪ್ರೀತಿಸಿದ ನಂತರ ಪ್ರೀತಿಯಲ್ಲಿ ತಲ್ಲೀನನಾದ ಅವನಿಗೆ
ಒಂದು ಹಂತದಲ್ಲಿ ತಾನು ಗೆಳೆಯರನ್ನು ಕುಟುಂಬವನ್ನು ನಿರ್ಲಕ್ಷಿಸಿದೆ ಎನಿಸುತ್ತದೆ. ಹಾಗಾದಾಗ ಏನು
ಮಾಡಬೇಕು..? ಇಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಯಾರನ್ನೂ ನಿರ್ಲಕ್ಷಿಸುವ ಪ್ರಶ್ನೆಯೇ
ಇಲ್ಲ. ಎಲ್ಲರಿಗೂ ಎಲ್ಲಾ ಸಂಬಂಧಕ್ಕೂ ಅದರದೇ ಆದ ಮೌಲ್ಯ ಚೌಕಟ್ಟು ಇದ್ದೇ ಇದೆ. ಆದರೆ ಈಗಾಗಲೇ ಆ
ಚೌಕಟ್ಟಿನ ಹೊರಗೆ ಬಂದ ನಾಯಕನಿದೆ ಮತ್ತೆ ಅದೆಲ್ಲವನ್ನು ಸರಿದಾರಿಗೆ ತರಬೇಕು ಎನಿಸುತ್ತದೆ. ಆಗ
ತಾನೇ ಒಂದು ನಿರ್ಧಾರಕ್ಕೆ ಬಂದವನೇ ತನ್ನ ಪ್ರೀತಿಯಿಂದ ರಜಾ ತೆಗೆದುಕೊಂಡು ಸಂಬಂಧ ರೆಪೇರಿ
ಕಾರ್ಯಕ್ರಮಕ್ಕೆ ಇಳಿಯುತ್ತಾನೆ. ಮುಂದೆ ಏನಾಗುತ್ತದೆ, ಅಂತ್ಯ ಏನಾಗುತ್ತದೆ ಎಂಬುದು ಇಲ್ಲಿನ
ಕುತೂಹಲಕಾರಿ ಅಂಶವಲ್ಲ.
ಚಿತ್ರದ ಪ್ರಾರಂಭ ಮತ್ತು ಪ್ರಾರಂಭದ ಹಲವು ದೃಶ್ಯಗಳು ಹೊಸದೇನೋ
ಇದೆ ಎಂಬ ಭಾವನೆ ಮೂಡಿಸಿ ಸಿನಿಮಾದ ಗ್ರಾಫ್ ಅನ್ನು ಝರ್ರನೆ ಮೇಲಕ್ಕೆ ಏರಿಸಿಬಿಡುತ್ತವೆ. ಆದರೆ
ಅದೇ ಗ್ರಾಫ್ ಅನ್ನು ಚಿತ್ರದುದ್ದಕ್ಕೂ ಕಾಯ್ದುಕೊಳ್ಳಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ.
ಅಂದುಕೊಂಡ ಕಥೆಯ ಎಳೆಯಲ್ಲಿ ಸತ್ವವಿದೆಯಾದರೂ ಚಿತ್ರಕತೆಯಲ್ಲಿ ಅದನ್ನು ಹಿಡಿದೆತ್ತುವ ಗುಣ ಇನ್ನೂ
ಬೇಕಿತ್ತು. ಹಾಗಾಗಿಯೇ ದ್ವಿತೀಯಾರ್ಧ ಇದ್ದಕ್ಕಿದ್ದಂತೆ ಸ್ವಲ್ಪ ಆಯಾಸಕರ ಎನಿಸುತ್ತದೆ.
ಮೊದಲ ಚಿತ್ರದಲ್ಲಿ ವಿನಯ್ ತೀರಾ ಬಿಲ್ಡ್ ಅಪ್ ಇಲ್ಲದೆ
ನಟಿಸಿದ್ದಾರೆ. ಹೊಡೆದಾಟ ಕುಣಿತದಲ್ಲಿ ಜೋರು ಎನಿಸುತ್ತಾರೆ. ಅಭಿನಯದಲ್ಲಿ ಮತ್ತು ಸಂಭಾಷಣೆ ಒಪ್ಪಿಸುವ ಶೈಲಿಯಲ್ಲಿ ಕಷ್ಟಪಟ್ಟಂತೆ
ಎನಿಸಿದರೂ ಇಷ್ಟವಾಗುತ್ತದೆ. ನಾಯಕಿಯಾಗಿ ಅಪೂರ್ವ ಅರೋರ ಚಂದಕ್ಕೆ ಕಾಣಿಸುತ್ತಾರೆ.
ಅಚ್ಯುತಕುಮಾರ್ ಮತ್ತು ಆಶಿಶ್ ವಿದ್ಯಾರ್ಥಿ ಅವರ ಪಾತ್ರಗಳು ಗಮನಾರ್ಹ ಎನಿಸುತ್ತವೆ. ಉಳಿದ
ಗೆಳೆಯರ ಪಾತ್ರಗಳು ಪೋಷಕ ಪಾತ್ರಗಳು ಅಲ್ಲಲ್ಲಿ ಕಾಣಿಸಿಕೊಂಡು ಖುಷಿ ಕೊಡುತ್ತವೆ.
ಗೆಳೆತನ, ಪ್ರೇಮ, ಭವಿಷ್ಯ ಕನಸು ಮತ್ತು ಕುಟುಂಬ ಇದರ
ನಡುವಣ ಪ್ರಾಮುಖ್ಯತೆ ಬಗೆಗೆ ಹೇಳುವ ದೊಡ್ಡ ಕೆಲಸಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಪ್ರಕಾಶ್.
ಆದರೆ ಅದಷ್ಟನ್ನೂ ಒಂದೇ ತೆಕ್ಕೆಗೆ ತೆಗೆದುಕೊಂಡು ಸರಳೀಕರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಚಿತ್ರ
ನೋಡುವವರೆಗೆ ನೋಡಿದ ಮೇಲೆ ಮನರಂಜನೀಯ ಚೌಕಟ್ಟಿಗೆ ಸೀಮಿತವಾಗಿ ಬಿಡುತ್ತದೆ.
ತಾಂತ್ರಿಕವಾಗಿ ಚಿತ್ರ ಶ್ರೀಮಂತವಾಗಿದೆ. ರಘು ಸಮರ್ಥ
ಸಂಭಾಷಣೆ ಅಲ್ಲಲ್ಲಿ ಕಚಗುಳಿ ಇಡುತ್ತದೆ. ಸಂಗೀತ ಮಾಮೂಲಿಗಿಂತ ಭಿನ್ನ ಎನಿಸುತ್ತದೆ. ಆದರೆ
ಕೆಲವೆಡೆ ಸಾಹಿತ್ಯವನ್ನೂ ಓವರ್ಟೇಕ್ ಮಾಡಿದೆ ಎನಿಸದೇ ಇರದು.
ಇದು ರಾಜವಂಶದ ಹೊಸ ನಾಯಕನ ಎಂಟ್ರಿ ಚಿತ್ರ. ಈಗಾಗಳೇ
ಅಪ್ಪು ಆನಂದ್ ಚಿತ್ರಗಳನ್ನು ಅವರ ಪರಿಚಯವನ್ನು ಮಾಡಿಕೊಟ್ಟಿರುವ ರಾಜ್ ಸಂಸ್ಥೆಯ ಬಗೆಗೆ ಪ್ರೇಕ್ಷಕರಿಗೆ
ಗೊತ್ತಿದೆ. ಇಲ್ಲಿ ವಿನಯ್ ಅವರನ್ನು ಯಾವುದೇ ರೀತಿಯಲ್ಲೂ ಎಕ್ಸ್ಟ್ರಾ ಬಿಲ್ಡ್ ಅಪ್ ಕೊಟ್ಟು ಪರಿಚಯಿಸುವ
ಗೋಜಿಗೆ ಹೋಗಿಲ್ಲ ನಿರ್ದೇಶಕರು. ಅದೇ ಚಿತ್ರಕ್ಕೆ ಬಲ ತಂದಿದೆ.
ಒಟ್ಟಾರೆಯಾಗಿ ರಾಜಕುಟುಂಬದ ಮನೆಮಂದಿಯಲ್ಲ ಕುಳಿತು
ನೋಡುವಂತಹ ಚಿತ್ರ ಎನ್ನುವ ಮಾತನ್ನು ಉಳಿಸಿಕೊಳ್ಳುವ ಚಿತ್ರವಾಗಿ ಸಿದ್ದಾರ್ಥ ಗಮನ ಸೆಳೆಯುತ್ತದೆ.
No comments:
Post a Comment