Pages

Friday, February 13, 2015

ಕೋಟಿಗೊಂದ್ ಲವ್ ಸ್ಟೋರಿ:

ಇದು ಒಂದು ಕೋಟಿಗಲ್ಲ, ನೂರು ಕೋಟಿಗೊಂದು ಪ್ರೇಮಕತೆ ಇರಬಹುದು ಎನ್ನುತ್ತದೆ ಚಿತ್ರದ ಶೀರ್ಷಿಕೆ ಅಡಿಬರಹ. ಚಿತ್ರದ ಹೆಸರೇ ಕೋಟಿಗೊಂದ್ ಲವ್ ಸ್ಟೋರಿ. ಚಿತ್ರದಲ್ಲಿ ಕೆಲವೇ ಪಾತ್ರಗಳು, ಬೆರಳೆಣಿಕೆಯಷ್ಟು ಒಳಾಂಗಣ ಬಿಟ್ಟರೆ ಉಳಿದಿದ್ದೆಲ್ಲಾ ರಮ್ಯ ಹೊರಾಂಗಣ...
ಅವನು ರಾಕೇಶ. ಹುಡುಗಿ ಪ್ರೀತಿಸಿದಾಗ ಅವಳು ಮಂಚಕ್ಕೆ ಕರೆಯುತ್ತಾಳೆ. ಅಯ್ಯೋ.. ಸಾಧ್ಯಾನೆ ಇಲ್ಲ ಎಂದರೆ ಆಕೆ ಬೇರೊಬ್ಬನ ಜೊತೆ ಮಂಚ ಏರುತ್ತಾಳೆ. ಇವನು ಭಗ್ನಪ್ರೇಮಿಯಾಗಿ ಸಾಯಲು ನಿರ್ಧರಿಸುತ್ತಾನೆ. ಅವಳು ಮಾನಸ. ಪ್ರೀತಿಸಿದವ ಮುಟ್ಟುತ್ತೇನೆ ಎಂದರೆ ಮದುವೆ ನಂತರ ಎನ್ನುತ್ತಾಳೆ. ಆತ ಬೇರೊಬ್ಬಳನ್ನು ಮುದ್ದಾಡುತ್ತಾನೆ. ಅದನ್ನು ಕಂಡ ಮಾನಸ ಮಾನಸಸರೋವರದ ಶ್ರೀನಾಥ್ ಆಗಿ ಸಾಯಲು ನಿರ್ಧರಿಸುತ್ತಾಳೆ. ಇಬ್ಬರು ಒಂದೇ ಕಡೆ ಆತ್ಮಹತ್ಯೆ ಮಾಡಿಕೊಳ್ಳಲು ಬರುತ್ತಾರೆ. ಪರಿಚಯವಾಗುತ್ತಾರೆ. ಸಾಯುವ ಮುನ್ನ ಮಿಲನ ಮಹೋತ್ಸವ ಆಚರಿಸುತ್ತಾರೆ. ಅಯ್ಯೋ..ಇದೇನಿದು.. ತಮ್ಮ ತಮ್ಮ ಲವರ್ ಜೊತೆಯಲ್ಲಿಯೇ ಮಾಡಿಕೊಳ್ಳಬಹುದಿತ್ತಲ್ಲಾ ಎನ್ನಬಹುದು ನೀವು. ಅಥವಾ ಅದು ಬೇಡ ಎಂಬುದೇ ಪ್ರೇಮಮುರಿಯಲು ಮುಖ್ಯಕಾರಣವಾದದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಅದನ್ನು ನಿರ್ದೇಶಕರು, ಚಿತ್ರದ ಪಾತ್ರಗಳೂ ನೆನಪಿಗೆ ತಂದುಕೊಳ್ಳುವುದಿಲ್ಲ.
ಇಂತಹ ವಿರೋಧಾಭಾಸದೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಸಾಯಲು ಹೊರಡುವ ಪಾತ್ರಗಳು ಸಾಯಲು ಆಗದೆ ಹೆಣಗಾಡುವುದೇ ಚಿತ್ರದ ಬಹುಪಾಲು ಎಳೆತಕ್ಕೆ ಆಹಾರವಾಗಿದೆ. ಇಷ್ಟಕ್ಕೂ ಸಾಯಲು ಹೊರಡುವ ನಾಯಕ ನಾಯಕಿ ಅಲ್ಲಿ ಸಾಯೋಣ ಇಲ್ಲಿ ಸಾಯೋಣ ಅಲ್ಲಿ ಹೋಗೋಣ ಇಲ್ಲಿ ಹೋಗೋಣ, ಸೇರೋಣ, ಮಜಾ ಮಾಡೋಣ ಎಂದೆ ಸಮಯ ಕಳೆಯುತ್ತಾರಾದರೂ ಸಾಯಲು ಗಟ್ಟಿಯಾಗಿ ಪ್ರಯತ್ನಿಸುವುದೇ ಇಲ್ಲ. ಹಾಗಾಗಿ ಇದೇನು ಇಬ್ಬರು ಸೇರಿ ಮಜಾ ಮಾಡಲು ನಾಟಕವಾಡುತ್ತಿದ್ದಾರಾ ಎಂಬ ಅನುಮಾನ ಪ್ರೇಕ್ಷಕರನ್ನು ಕಾಡುತ್ತದೆ ಅಷ್ಟೇ ಅಲ್ಲ, ಕಂಗೆಡಿಸುತ್ತದೆ..
ಸಧ್ಯ ಸಾಲು ಹೊರಟವರು ಬದುಕು ರೂಪಿಸಿಕೊಂಡರು ಎಂದರೆ ವಿಲನ್ ಗಳು ಎಂಟ್ರಿ. ಅವರನ್ನು ಹೊಡೆದುಹಾಕಿ ಗೆದ್ದೆವು ಎಂದರೆ ಶಾರ್ಕ್ ಮೀನುಗಳೇ ವಿಲನ್ ಆಗುವ ವಿಚಿತ್ರವೇ ಚಿತ್ರದಲ್ಲಿದೆ. ಅದೇನು ಎನ್ನುವ ಕುತೂಹಲ ನಿಮ್ಮದಾಗಿದ್ದರೆ ಚಿತ್ರಮಂದಿರಕ್ಕೆ ಒಮ್ಮೆ ಎಂಟ್ರಿ ಕೊಡಬಹುದು.
ಈ ಎಲ್ಲಾ ಅಂಶಗಳ ನಡುವೆಯೂ ನಿರ್ದೇಶಕ ಜಗ್ಗು ಸಿರ್ಸಿ ಅವರಲ್ಲಿ ಕೆಲವು ಮೆಚ್ಚತಕ್ಕ ಅಂಶಗಳಿವೆ. ಕೇವಲ ಎರಡೇ ಪಾತ್ರಗಳನ್ನೂ ಇಟ್ಟುಕೊಂಡು ಅರ್ಧ ಚಿತ್ರವನ್ನು ಮುಗಿಸುತ್ತಾರೆ.a ಅಲ್ಲಲ್ಲಿ ಪ್ರೇಮ-ಕಾಮದ ನಡುವಣ ವ್ಯಾಖ್ಯಾನವನ್ನು ಹೇಳುತ್ತಾರಾದರೂ ಅದನ್ನೆಲ್ಲಾ ಸ್ವಲ್ಪ ಪ್ರೌಢತೆಯೊಂದಿಗೆ ಆಲೋಚಿಸಿದ್ದರೆ, ಸಾಯುವವರು ಬದುಕುವ ಅಂಶಗಳಿಗೆ ಇನ್ನಷ್ಟು ಸಶಕ್ತ ಕಾರಣಕೊಟ್ಟಿದ್ದರೆ, ಹಾಗೆಯೇ ಭಗ್ನ ಪ್ರೇಮಿಗಳ ನಡವಳಿಕೆಗೆ ಲವಲವಿಕೆ ಮೋಜು ಕೊಡದೆ ಇದ್ದರೇ ಚಿತ್ರಕ್ಕೆ ಒಂದು ಶಕ್ತಿ ಬರುತ್ತಿತ್ತು. ಆದರೆ ಪ್ರೀತಿಗಾಗಿ ಸಾಯಲು ನಿರ್ಧರಿಸುವ ಭಗ್ನಹೃದಯಿಗಳು ನೋವು ವ್ಯಕ್ತ ಪಡಿಸದೇ ಮಜಾ ಮಾಡುತ್ತಾ ಹರಟೆಹೊಡೆಯುತ್ತಾ ಟ್ರಿಪ್ ಬಂದವರಂತೆ ಓಡಾಡುತ್ತಾ ಕಾಲಕಳೆಯುವುದು ಸಮರ್ಥನೀಯ ಎನಿಸುವುದಿಲ್ಲ.
ರಾಕೇಶ್ ಅಡಿಗ ಅವರಿಗೆ ಸವಾಲಿನ ಪಾತ್ರವಲ್ಲ ಇದು. ಇನ್ನು ಶುಭಾ ಪೂಂಜಾ ಬಿಚ್ಚುವಿಕೆಗೆ ಹೆಚ್ಚು ಗಮನ ಕೊಟ್ಟಿದ್ದರೆ. ಹಾಗಾಗಿ ಸ್ವಲ್ಪ ಹಸಿಬಿಸಿ ದೃಶ್ಯಗಳಲ್ಲಿ ಶುಭಾ ಕಣಸಿಗುತ್ತಾರೆ. ಉಳಿದ ಪಾತ್ರಗಳಲ್ಲಿ ಕಸುವಿಲ್ಲ.ಛಾಯಾಗ್ರಹಣ ಮತ್ತು  ಸಂಗೀತ ಸಾದಾರಣ.


No comments:

Post a Comment