Pages

Friday, February 13, 2015

ರಾಜರಾಜೇಂದ್ರ

ನಿರ್ದೇಶನ: ಪಿ.ಕುಮಾರ್
ತಾರಾಗಣ: ಶರಣ್, ಇಷಿತಾ ದತ್ತಾ, ರಾಮಕೃಷ್ಣ, ಸಾಧುಕೋಕಿಲ, ರವಿಶಂಕರ್ ಶ್ರೀನಿವಾಸ ಮೂರ್ತಿ
ಅವಧಿ: 2 ಘಂಟೆ 23 ನಿಮಿಷಗಳು
ಅದೊಂದು ರಾಜ ಮನೆತನ. ಅದರ ಯಜಮಾನ ಹಾಸಿಗೆ ಹಿಡಿದಿದ್ದಾನೆ. ಅವನಿಗೆ ತನ್ನ ಮೊಮ್ಮಗನನ್ನು ನೋಡಲೇಬೇಕೆಂಬ ಆಸೆ. ಕುಟುಂಬದ ಮೂವರು ಅಳಿಯಂದಿರಿಗೆ ಹೇಗೋ ಮುದುಕನನ್ನು ಕೊಂದು ಆಸ್ತಿ ಲಪಟಾಯಿಸುವ ಆಸೆ.ಅದಕ್ಕಾಗಿ ಒಬ್ಬ ಅನಾಮಧೇಯ ವ್ಯಕ್ತಿಯನ್ನು ಮೊಮ್ಮಗನೆಂದು ಕರೆತರುತ್ತಾರೆ. ಅವನೇ ಬಾಟಲ ಮಣಿ. ದೊಡ್ಡ ಡಾನ್ ಬಾಟಲು ಮಣಿ ಎಂದು ಅಳಿಯಂದಿರು ನಂಬುತ್ತಾರೆ.
ಈಗ ಬಾಟಲು ಮಣಿ ವೇಷಧಾರಿಗೆ ಬೇರೆಯ ಕತೆಯಿದೆ. ಅವನ ತಾಯಿಗೆ ಹುಷಾರಿಲ್ಲ. ಖರ್ಚಿಗೆ ಹಣ ಬೇಕಿದೆ. ಹಾಗಾಗಿ ತನ್ನದಲ್ಲದ ಕೆಲಸವನ್ನು ಒಪ್ಪಿಕೊಳ್ಳುತ್ತಾನೆ. ಮುಂದೆ ನಿಜವಾದ ಬಾಟಲು ಮಣಿ ಬರುತ್ತಾನೆ, ಅಲ್ಲೊಂದು ಭೂತ ಕಾಣಿಸಿಕೊಳ್ಳುತ್ತದೆ. ಇಡೀ ಮನೆ, ಅದರಿಂದ ಇಡೀ ಸಿನಿಮಾ ಗೊಂದಲದಗೂಡಾಗುತ್ತದೆ.
25 ವರ್ಷಗಳ ಹಿಂದೆ ಮಲಯಾಳಂ ನಲ್ಲಿ ತೆರೆಕಂಡಿದ್ದ ಹಿಸ್ ಹೈ ನೆಸ್ ಅಬ್ದುಲ್ಲಾ ಚಿತ್ರವನ್ನು ಕನ್ನಡಕ್ಕೆ ಭಟ್ಟಿ ಇಳಿಸಿದ್ದಾರೆ ಪಿ.ಕುಮಾರ್. ಅಲ್ಲಿದ್ದ ಸಂಗೀತಗಾರನ ಪಾತ್ರವನ್ನು ಇಲ್ಲಿ ಬಾಟಲು ಮಣಿ ಮಾಡಿದ್ದಾರೆ. ಆ ಮೂಲಕ ರಿಮೇಕ್ ಅಲ್ಲದ ರಿಮೇಕ್ ಅನ್ನು ಕನ್ನಡಕ್ಕೆ ರಾಜರಾಜೇಂದ್ರ ಹೆಸರಿನಲ್ಲಿ ನೀಡಿದ್ದಾರೆ. ಅವರ ಉದ್ದೇಶ ಸ್ಪಷ್ಟ. ಶತಾಯಗತಾಯ ನಗಿಸಬೇಕು. ನಗಿಸಬೇಕೆಂದರೆ ಹಿಂದೆ ಮುಂದೆ ನೋಡಲೆಬಾರದು. ಮುಂದಿನ ದೃಶ್ಯ ಏನಾದರೂ ಆಗಲಿ, ನೋಡುತ್ತಿರುವ ದೃಶ್ಯದಲ್ಲಿ ನಗುವಿದ್ದರೆ ಸಾಕು.. ನೋ ಲಾಜಿಕ್ ಓನ್ಲಿ ಮ್ಯಾಜಿಕ್.
ನಿರ್ದೇಶಕ ಪಿ.ಕುಮಾರ್ ಇದರ ಹೊರತಾಗಿ ಏನೂ ಯೋಚಿಸದೆ ಇರುವುದು ನೋಡುಗನಿಗೆ ಮೊದಮೊದಲಿಗೆ ಏನೂ ಎನಿಸದೇ ನಗು ತರಿಸುತ್ತದೆ. ಆದರೆ ಬರುಬರುತ್ತಾ ಗೊಂದಲದ ಗೂಡಾದ ಚಿತ್ರಕತೆ ಮತ್ತು ಸತ್ವವಿಲ್ಲದ ಹಾಸ್ಯ ಅಪಥ್ಯವಗುತ್ತದೆ. ಕತೆಯ ಎಳೆ ಎಲ್ಲೋ ಸಾಗಿ ಬದಲಿಗೆ ದೃಶ್ಯದಲ್ಲಿನ ಪಂಚ್ ಕೂಡ ಮಾಯವಾಗುತ್ತಾ ಹೋಗುತ್ತದೆ.
ಶರಣ್ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿನ ಅವರ ಪಾತ್ರದಲ್ಲಿ ಯಾವುದೇ ಸವಾಲಿನ  ಅಂಶವಿಲ್ಲ. ಹಾಗೆಯೇ ಇಷಿತಾ ದತ್ತ ಅವರ ಪಾತ್ರದಲ್ಲಿ ಮಹತ್ವವಿದೆಯಾದರೂ ಚಿತ್ರಪೂರ್ತಿ ಶರಣ್ ತುಂಬಿರುವುದರಿಂದ ಇರುವಷ್ಟು ಹೊತ್ತು ಇಷಿತಾ ಗಮನ ಸೆಳೆಯುತ್ತಾರೆ. ರಾಮಕೃಷ್ಣ, ರವಿಶಂಕರ್ ಸಾಧುಕೋಕಿಲ ಮುಂತಾದ ಪೋಷಕ ನಟರ ಪಾತ್ರಗಳು ಮತ್ತು ಅವರ ಅನುಭವ ಆಯಾ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸುವಂತೆ ಮಾಡಿದೆ.
ಅರ್ಜುನ್ ಜನ್ಯ ಅವರ ಸಂಗೀತ ಅಂತಹ ಗಮನ ಸೆಳೆಯುವಂತಿಲ್ಲ. ಛಾಯಾಗ್ರಹಣ ಮರ್ರು ಸಂಕಲನಕ್ಕೆ ಪಾಸ್ ಮಾರ್ಕ್ಸ್ ನೀಡಬಹುದು.

ಕೊನೆ ಮಾತು: ಹಾಸ್ಯ ಎಂದರೆ ಎಲ್ಲೋ ನಿಂತು ಒಂದಷ್ಟು ಹರಟೆ ಹೊಡೆಯಬಹುದು. ಅಥವಾ ದ್ವಂದ್ವಾರ್ಥದ ಮಾತಿನಲ್ಲಿಯೂ ನಗು ತರಿಸಬಹುದು. ಅಥವಾ ಬುದ್ದಿವಂತಿಕೆ ಮತ್ತು ಸಮಯ ಪ್ರಜ್ಞೆಯಿಂದ ನಗು ತರಿಸಬಹುದು. ಕುಮಾರ್ ಅವರಂತಹ ನಿರ್ದೇಶಕರು ಮೊದಲಿನ ಆಯ್ಕೆ ಮಾಡಿಕೊಳ್ಳುತ್ತಾರೆ. ಅದು ತತಕ್ಷಣದ ಯಶಸ್ಸು ತಂದುಕೊಡಬಹುದೇನೋ? ಆದರೆ ಆ ಯಶಸ್ಸು ಉಳಿಯುವಂಥದ್ದಲ್ಲ. ಹೇಗೆ ಒಂದು ಹಾಸ್ಯ ಚಿತ್ರ ಎಂದಾಗ ಅದರ ಕತೆಯಲ್ಲಿನ ಹಾಸ್ಯ ಮುಖ್ಯವಾಗುತ್ತದೋ ಹಾಗೆಯೇ ಆದಾಗ ಅದಕ್ಕೊಂದು ಸತ್ವವಿರುತ್ತದೆ. ಹಾಸ್ಯಕ್ಕಾಗಿ ಸಿನಿಮಾ ಮಾಡಿದಾಗ ಈ ತರಹದ ಆತುರದ ಅಡುಗೆಗಳು ಸಿದ್ಧವಾಗುತ್ತವೆ. ಕುಮಾರ್ ಇನ್ನು ಮುಂದಾದರೂ ಸ್ವಲ್ಪ ಕತೆಯ ಬಗ್ಗೆ ಸಿನಿಮಾದ ಕುಸುರಿ ಕೆಲಸದ ಬಗ್ಗೆ ತಲೆ ಕೆಡಿಸಿಕೊಂಡರೆ ಉತ್ತಮ ಸಿನಿಮಾ ನೀಡಬಲ್ಲರೆನೋ? ಇಲ್ಲವಾದಲ್ಲಿ ಸುಮ್ಮನೆ ತಲೆಹರಟೆಯ ತೆರನಾದ ಚಿತ್ರಗಳ ಪಟ್ಟಿಯಲ್ಲಿ ಸೇರಿಸಬೇಕಾಗುತ್ತದೆ.


No comments:

Post a Comment