Pages

Saturday, November 16, 2013

ಅಂಬರ



ಅಂಬರ ಒಂದು ಸಾದಾರಣ ಕಥೆಯ ಚಿತ್ರ. ಚಿತ್ರೀಕರಣ ಸ್ಥಳಗಳಲ್ಲಿ ಒಂದಷ್ಟು ವಿಶೇಷವಿದೆ ಎನಿಸಿದರೆ ಅದೇ ಮಾತು ಕಥೆಗೆ ಅನ್ವಯಿಸುವುದಿಲ್ಲ.ನಿರ್ದೇಶಕ ಸೇನ್ ಪ್ರಕಾಶ್ ಸೋತಿರುವುದೇ ಇಲ್ಲಿ. ಕಾಲೇಜು, ಅಲ್ಲೊಂದಷ್ಟು ತರಲೆ, ಪ್ರೀತಿ ಪ್ರೇಮ, ಮನೆಯವರ ವಿರೋಧ, ನಾಯಕನ ಮೇಲೆ ಆರೋಪ..ಹೊಡೆದಾಟ ಬಡಿದಾಟ ..ಅಂತ್ಯ..ಚಿತ್ರದ ಇದೆ ಸಿದ್ಧ ಸೂತ್ರದಲ್ಲಿ ನಡೆಯುತ್ತದೆ. ಆದರೆ ಅವುಗಳಲ್ಲಿನ ಅಂಶಗಳ್ಳಲ್ಲಿ ಆದರೂ ಕಸುವಿದ್ದರೆ ಚಿತ್ರ ಸಹನೀಯವಾಗುತ್ತಿತ್ತೇನೋ..? ಆದರೆ ಇಲ್ಲಿ ಅದಾವುದನ್ನೂ ನಿರೀಕ್ಷಿಸುವ ಹಾಗಿಲ್ಲ. ಎಲ್ಲವೂ ಇದ್ದರೂ ಏನೋ ಕೊರತೆಯಿದೆಯಲ್ಲ ಎಂಬುದು ಚಿತ್ರಕತೆಯಲ್ಲಿಯೇ ಅನಿಸುತ್ತದೆ. ಯಾಕೆಂದರೆ ಮಧ್ಯಂತರದವರೆಗೆ ಚಿತ್ರ ಎಲ್ಲೂ ಹೋಗುವುದಿಲ್ಲ. ನಿಂತ ಜಾಗದಲ್ಲೇ ಸುತ್ತುತ್ತಿದೆ ಎನಿಸಿದರೆ ಅದಕ್ಕೆ ನೇರ ಹೊಣೆ ಚಿತ್ರಕಥೆಯದ್ದು.


ಲೂಸ್ ಮಾದ ಯೋಗೀಶ್ ಭಾಮಾ ಜೋಡಿ ಅಭಿನಯದ ಮೊದಲ ಚಿತ್ರವಿದು. ಕಾಲೇಜಿಗೆ ಹೋಗುವುದು ಏತಕ್ಕೆ..? ಜೀವನದಲ್ಲಿ ಬದುಕಲು ಎಂದರೆ ಸಿನೆಮಾದಲ್ಲಿ ಪ್ರೀತಿಸಲು ಎನ್ನಬಹುದು. ಯಾಕೆಂದರೆ ಬಹುತೇಕ ಕಾಲೇಜು ಕಥನ ಆಧರಿಸಿದ ಚಿತ್ರಗಳಲ್ಲಿ ಮೂಲ ದ್ರವ್ಯವೇ ಪ್ರೀತಿ ಎನ್ನಬಹುದು. ಆದರೆ ಇತ್ತೀಚಿಗೆ ಅದು ಸ್ವಲ್ಪ ಮಂಕಾಗಿತ್ತು ಎನ್ನಬಹುದು. ಅಂಬರ ಚಿತ್ರದ ಮೂಲಕ ಅದು ಮತ್ತೆ ಗರಿಗೆದರಿದೆ.
ಅವರಿಬ್ಬರೂ ಪ್ರೀತಿಸುತ್ತಾರೆ. ಆದರೆ ಬದುಕು ಏನೇನೋ ತಿರುವುಗಳಲ್ಲಿ ಅವರನ್ನು ಓಡಿಸುತ್ತದೆ, ಕುಣಿಸುತ್ತದೆ, ಆಮೇಲೆ ಕೊನೆಗೆ ..ಚಿತ್ರ ಮಂದಿರದಲ್ಲಿ ನೋಡಿ ಎಂದುಬಿಡುವುದು ಉತ್ತಮ.
ಅಂಬರ ಒಂದು ಸೀದಾ ಸಾದಾ ಪ್ರೇಮಕಥೆ. ಮೊದಲಾರ್ಧ ಸುಮ್ಮನೆ ಕಣ್ಣ ಮುಂದೆ ನಡೆಯುತ್ತಾ ಹೋಗುತ್ತದೆ. ಇಲ್ಲಿ ನಿರ್ದೇಶಕರು ಮೊದಲಾರ್ಧವನ್ನು ಲವಲವಿಕೆಯೊಂದಿಗೆ ಹಾಸ್ಯಮಯವಾಗಿ ನಿರೂಪಿಸಲು ಪ್ರಯತ್ನಿಸಿದ್ದಾರೆ. ಅದು ಮೊದಲಾರ್ಧ ಕೈ ಕೊಟ್ಟಿದೆ ಎಂದೇ ಹೇಳಬಹುದು. ಯಾಕೆಂದರೆ ಮೊದಲಾರ್ಧದ ಕಾಲೇಜು ಕೀಟಲೆ ಆಟೋಟಗಳು ಅಷ್ಟು ಸರಾಗವಾಗಿ ನೋಡಿಸಿಕೊಂಡು ಹೋಗುವುದಿಲ್ಲ.ಆದರೆ ನಿರ್ದೇಶಕರು ಮದ್ಯಂತರದವರೆಗೂ ಕಥೆಯನ್ನು ಬೇರೆ ದಿಕ್ಕಿಗೆ ತಿರುಗಿಸಲೇ ಬಾರದು ಎಂದು ನಿರ್ಧರಿಸಿದ್ದರಿಂದಲೋ ಏನೋ ಕಥೆ ಅಲ್ಲಲ್ಲಿ ಸುತ್ತುತ್ತದೆ. ಅದೇ ಕೀಟಲೆಗಳು, ಪ್ರೇಮ ನಿವೇದನೆ ಮಾಡಿಕೊಳ್ಳಲಾಗದ ಪರಿತಾಪಗಳು ಅದು ಇದು ಹೀಗೆ ...ಮಧ್ಯಂತರದ ನಂತರ ಚಿತ್ರ ಸ್ವಲ್ಪ ಮಟ್ಟಿಗೆ ಗಂಭೀರವಾಗುತ್ತದೆ. ಅಲ್ಲಲ್ಲಿ ಒಂದಷ್ಟು ತಿರುವುಗಳು ಬರುತ್ತವೆ.
ಚಿತ್ರದಲ್ಲಿ ಗಮನಾರ್ಹ ಅಂಶ ಏನೂ ಇಲ್ಲ ಎನ್ನಬಹುದು. ಅಥವಾ ಕಥೆಯಲ್ಲಿ, ಅದರ ತಿರುಳಲ್ಲಿ ವಿಶೇಷತೆಯಿಲ್ಲ. ಒಂದು ಪ್ರೇಮಕಥೆ ಎಂದಾಗ ಒಂದಷ್ಟು ತಾಜಾತನ, ಹೊಸ ಆಲೋಚನೆ ಮತ್ತು ಸಂಭಾಷಣೆಗಳನ್ನು ಪ್ರೇಕ್ಷಕ ನಿರೀಕ್ಷಿಸುತ್ತಾನೆ. ಇಲ್ಲಿ ಅಂತಹ ಅಂಶಗಳು ಕಡಿಮೆ. ಹಾಗೆಯೇ ನಿರೂಪಣೆ ಇನ್ನೂ ಬಿಗಿಯಾಗಬೇಕಿತ್ತು. ಆದರೆ ನಿರ್ದೇಶಕರು ಇಷ್ಟೇ ಸಾಕು ಎನ್ನುವ ಸ್ವನಿರ್ಧಾರ ತೆಗೆದುಕೊಂಡು ಬಿಟ್ಟಿರುವುದರಿಂದ ಚಿತ್ರ ಕೂಡ ಸರ್ವೇ ಸಾದಾರಣ ಸಿನೆಮಾಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿ ಬಿಟ್ಟಿದೆ.
ಲೂಸ್ ಮಾದಾ ಯೋಗೀಶ್ ತಮ್ಮ ಎಂದಿನ ಅಭಿನಯ ಶೈಲಿಯನ್ನು ಮುಂದುವರೆಸಿದ್ದಾರೆ. ಅವರಿಗೆ ಸಿಕ್ಕ ಪಾತ್ರವೂ ಹಾಗೆಯೇ ಇದೆ. ಭಾಮಾ ಮುಗ್ಧ ಪ್ರೇಮಿಯಾಗಿ ಗಮನ ಸೆಳೆಯುತ್ತಾರೆ. ಇನ್ನುಳಿದಂತೆ ಸಾಧು ಕೋಕಿಲ ಪ್ರೇಕ್ಷಕರನ್ನು ತೃಪ್ತಿ ಪಡಿಸುವುದಿಲ್ಲ.ಉಳಿದಂತೆ ತಿಲಕ್, ವಿನಾಯಕ ಜೋಷಿ, ವಿಶ್ವ, ರಾಮಕೃಷ್ಣ ಈಗಾಗಲೇ ಹಲವಾರು ಚಿತ್ರಗಳಲ್ಲಿ ತಾವು ನಟಿಸಿದ್ದ ಪಾತ್ರವನ್ನು ಮುಂದುವರೆಸಿದ್ದಾರೆ.
 ನಿರ್ದೇಶಕ ಸೇನ್ ಪ್ರಕಾಶ್ ಅವರಿಗೆ ಮೊದಲ ಚಿತ್ರದಲ್ಲೇ ಬಂಪರ್ ಹೊಡೆಯುವ ಸಾಧ್ಯತೆಗಳಿದ್ದವು. ನಿರ್ಮಾಪಕರು, ನಟರು ಎಲ್ಲರೂ ಸಿಕ್ಕಿದ್ದರು. ಆದರೆ ಅದೆಲ್ಲವನ್ನೂ ಪರಿಣಾಮಕಾರಿಯಾಗಿ ಸದುಪಯೋಗ ಪಡಿಸಿಕೊಳ್ಳದ ನಿರ್ದೇಶಕರು ಅಂಬರ ಚಿತ್ರವನ್ನು ಸಾದಾರಣ ಚಿತ್ರವನ್ನಾಗಿ ಮಾಡಿದ್ದಾರೆ.

No comments:

Post a Comment