Pages

Sunday, February 23, 2014

ಹಾರರ್:

ಹಾರರ್ ಚಿತ್ರಗಳೂ ಯಾವತ್ತಿಗೂ ಕುತೂಹಲಕಾರಿಯಾದವುಗಳು. ಅದರಲ್ಲೂ ಹಾರರ್ ಚಿತ್ರಗಳನ್ನು ಇಷ್ಟಪಟ್ಟು ನೋಡುವ ಪ್ರೇಕ್ಷಕ ವೃಂದವೇ ಇದೆ. ಹಾಗಾಗಿ ಆ ವಿಭಾಗದ ಚಿತ್ರಗಳನ್ನು ಸ್ವಲ್ಪ ಆಸಕ್ತಿಕರವಾಗಿ ಚಿತ್ರೀಕರಿಸಿದರೆ ನಿಜಕ್ಕೂ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನಬಹುದು.
ಆ ನಿಟ್ಟಿನಲ್ಲಿ ತೆರೆಗೆ ಬಂದಿರುವ ಹಾರರ್ ಚಿತ್ರ ತನ್ನ ಭಯಾನಕ ಸ್ವರೂಪವನ್ನಷ್ಟೇ ಗಲ್ಲಾಪೆಟ್ಟಿಗೆಗೆ ನಂಬಿಕೊಂಡಿಲ್ಲ. ಯಾವುದಕ್ಕೂ ಇರಲಿ ಎನ್ನುವಂತೆ ಒಂದಷ್ಟು ಶೃಂಗಾರಮಯ ಸನ್ನಿವೇಶವನ್ನೂ ಸೇರಿಸಿದ್ದಾರೆ. ಅದು ವರ್ಕೌಟ್ ಆಗದಿದ್ದರೆ ಇದಿರಲಿ ಇದಾಗದಿದ್ದರೆ ಎದಿರಲಿ ಎನ್ನುವ ಆಶಯ ಅವರದು. ಆದರೆ ದುರಾದೃಷ್ಟವಶಾತ್ ಎರಡೂ ವರ್ಕೌಟ್ ಆಗಿಲ್ಲ.
ಒಂದು ಅತೃಪ್ತ ಹೆಣ್ಣು ಅಕಾಲ ಮರಣಕ್ಕೀಡಾದರೆ ಮೋಹಿನಿಯಾಗುತ್ತದೆ ಎಂಬುವ ನಂಬಿಕೆ ನಮ್ಮಲ್ಲಿದೆ. ಇಲ್ಲೂ ಅದೇ ಆಗುತ್ತದೆ. ಇಲ್ಲಿ ನಿರ್ದೇಶಕ ವಿಜಯ್ ಸುರಾನ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ಒಂದಷ್ಟು ಬಿಚ್ಚಾಟ, ಒಂದಷ್ಟು ಬೆದರಿಸುವಾಟ ಎನ್ನುವ ಸೂತ್ರ ಹಿಡಿದಿದ್ದಾರೆ .ಹಾಗಾಗಿ ಶೃಂಗಾರದ ಆಟವಾಡಿದ ಹೆಣ್ಣು ಸತ್ತು ಭೂತವಾಗಿ ಕಾಡಲು ಸಿದ್ಧಳಾಗುತ್ತಾಳೆ. ಇದಕ್ಕೆ ಸರಿಯಾಗಿ ಒಂದಷ್ಟು ಕಾಲೇಜು ವಿದ್ಯಾರ್ಥಿಗಳು ಒಂದಷ್ಟು ಸಿನಿಮಾದವರು ಅಲ್ಲಿಗೆ ಬರಬೇಕೆ..? ಅನಾಯಾಸವಾಗಿ ದೆವ್ವದ ಹತ್ತಿರಕ್ಕೆ ಬಂದವರನ್ನು ಆ ಮೋಹಿನಿ ಸುಮ್ಮನೆ ಬಿಡುತ್ತದೆಯೇ..? ಅಲ್ಲಿಂದ ಪ್ರಾರಂಭವಾಗುತ್ತದೆ ದೆವ್ವದ ಕಾಟ..ಒಬ್ಬೊಬ್ಬರನ್ನೇ ದೆವ್ವ ಕಾಡುತ್ತದೆ, ಕಂಗೆಡಿಸುತ್ತದೆ, ಕೊನೆಗಾಣಿಸುತ್ತದೆ.. ಚಿತ್ರದ ಕತೆಯೇನೋ ಸರಳವಾಗಿದೆ. ಆದರೆ ಚಿತ್ರಕತೆ ಅಷ್ಟು ಸರಳವಾಗೂ ಇಲ್ಲ..ಕುತೂಹಲಕರವಾಗೂ ಇಲ್ಲ.  ಸುಮ್ಮನೆ ತೆರೆಯ ಮೇಲೆ ದೃಶ್ಯಗಳು ನಡೆಯುತ್ತಾ ಹೋಗುತ್ತವೆ. ದೆವ್ವದಾಟ ಜನರಾಟ..ಅವರಾಟ, ಇವರಾಟ ಹೀಗೆ. ನಡೆಯುತ್ತಾ ಹೋದಂತೆ ಪ್ರೇಕ್ಷಕನಿಗೆ ನಿಜವಾದ ಸಿನಿಮ ಕಾಟ ಶುರುವಾಗುತ್ತದೆ. ಯಾಕೆ ಹಿಂಗೆ ಚಿತ್ರಹಿಂಸೆ.? ತೆರೆಯೋಳಗಿನ ದೆವ್ವದ ಕಾಟಕ್ಕಿಂತ ಹೊರಗೆ ಪ್ರೇಕ್ಷಕನಿಗೆ ಕಾಟ ಶುರುವಾಗಿ ಹೊರ ಹೋಗಲಾಗದೆ ಇಡೀ ಚಿತ್ರಮಂದಿರವೇ ಒಂದು ಭೂತ ಬಂಗಲೆ ಎನಿಸಿದರೆ ಅದಕ್ಕೆ ನೇರ ಹೊಣೆ ಯಾರು ಎಂಬುದಕ್ಕೆ ನಿರ್ದೇಶಕರೇ ಉತ್ತರಿಸಬೇಕು.
ಇನ್ನು ಚಿತ್ರದ ತಾಂತ್ರಿಕ ಅಂಶಗಳ ಬಗ್ಗೆ ಹೇಳಲು ಏನೂ ಇಲ್ಲ. ಅರ್ಧ ಕತ್ತಲು ಅರೆಬೆತ್ತಲು  ಭೂತಲು ಇದಕ್ಕೆ ಒಂದಷ್ಟು ಜನ ಕೆಲಸ ಮಾಡಿದ್ದಾರೆ ಎಂಬುದಷ್ಟನ್ನೇ ಹೇಳಬಹುದು. ನಟಿ ಕಾಜಲ್ ರಾವತ್ ಬೆದರಿಸುವುದಕ್ಕಿಂತ ಬೆಚ್ಚಗೆ ಮಾಡುತ್ತಾರೆ. ಹಸಿ ಬಿಸಿ ದೃಶ್ಯಗಳಲ್ಲಿ ಎಗ್ಗಿಲ್ಲದೆ ನಟಿಸಿದ್ದಾರೆ. ಉಳಿದಂತೆ ನೋ ಕಾಮೆಂಟ್ಸ್. ಇನ್ನುಳಿದ ತಾರಾಗಣದಲ್ಲಿ ಹರೀಶ್ ರಾಜ್, ರವಿ ಚೇತನ್, ನೇಹಾ ಪಾಟೀಲ್, ರೂಪಶ್ರೀ ಇದ್ದಾರೆ.

ಎಲ್ಲವೂ ಇದ್ದು ಯಾವುದೇ ತಾರ್ಕಿಕ ಆಲೋಚನೆ ಇಲ್ಲದೆ ಸುಮ್ಮನೆ ಏನನ್ನೋ ಸುತ್ತುವ ಬಿಡುಗಡೆಯಾಗುವ ಚಿತ್ರಗಳ ಸಾಲಿನ ಚಿತ್ರ ಇದಾಗಿದೆ ಎನ್ನಬಹುದು.

No comments:

Post a Comment