Pages

Thursday, February 27, 2014

ಶಿವಾಜಿನಗರ:

ಕಳೆದವಾರವಷ್ಟೇ ಉಗ್ರಂ ಚಿತ್ರದಲ್ಲಿ ಲೆಕ್ಕವಿಲ್ಲದಷ್ಟು ಕೊಲೆ ನೋಡಿದ್ದ ಕನ್ನಡದ ಪ್ರೇಕ್ಷಕ ಈಗ ಮತ್ತಷ್ಟು ಅಂತಹದ್ದೇ ಕೊಲೆಗಳನ್ನು ನೋಡುವ ಅವಕಾಶ ಶಿವಾಜಿನಗರ ಚಿತ್ರದ ಮೂಲಕ ದೊರೆತಿದೆ. ಶಿವಾಜಿನಗರ ಎಂದರೆ ಅದು ಕೊಲೆಪಾತಕರ ಲೋಕ, ಅಲ್ಲಿ ಕೊಲೆಗಳನ್ನು ಮಾಡುತ್ತಿದ್ದರೆ ಜನರು ಅದನ್ನು ಸರ್ಕಸ್, ಬೀದಿ ನಾಟಕ, ದೊಂಬರಾಟ ನೋಡುವಂತೆ ಸಾವಧಾನಚಿತ್ತರಾಗಿ ನೋಡುತ್ತಾರೆ, ಒಬ್ಬ ಡಾನ್ ಎಂದರೆ ಅವನ ಕೆಲಸ ಬರೀ ಕೊಲೆ ಮಾಡುವುದು ಎನ್ನುವ ವಿಷಯಗಳನ್ನು ಹೇಳುತ್ತಾರೆ ನಿರ್ದೇಶಕ ಸತ್ಯ. ಶಾಸಕ ಪೋಲಿಸ್ ಗೆ ಡಾನ್ ಪರವಾಗಿ ಮಾತನಾಡುತ್ತಾನೆ, ನೇರ ಪ್ರಸಾರದ ಕಾರ್ಯಕ್ರಮ ನಡೆಯುತ್ತಿದ್ದ ಸುದ್ದಿವಾಹಿನಿಗೆ ರೌಡಿ ನುಗ್ಗಿ ಅಲ್ಲೇ ಗುಂಡು ಹೊಡೆದು ಕೊಲೆ ಮಾಡುತ್ತಾನೆ ಹೀಗೆ ಹತ್ತು ಹಲವು ಅಸಂಗತ ಘಟನೆಗಳನ್ನು ಹಿಂದೇ ಮುಂದೆ ಯೋಚಿಸದೆ ನಿರ್ದೇಶಕರು ಚಿತ್ರದಲ್ಲಿ ತುಂಬಿದ್ದಾರೆ.
ಹಾಗಾಗಿ ಶಿವಾಜಿನಗರ ಎಂದರೆ ಒಂದು ಭಯಂಕರ ಕೂಪ ಎನ್ನುವ ಹಾಗೆ ತೋರಿಸುತ್ತಾರೆ ನಿರ್ದೇಶಕರು. ಇಷ್ಟಕ್ಕೂ ನಿರ್ದೇಶಕರ ಆಶಯ ಏನು ಎನ್ನುವುದು ಸ್ಪಷ್ಟವಾಗುವುದಿಲ್ಲ. ಕೊಲೆ ಕತ್ತರಿಸುವುದು ರಕ್ತ ಚೆಲ್ಲುವುದು ಚಿತ್ರದುದ್ದಕ್ಕೂ ತುಂಬಿಕೊಂಡಿವೆ. ಅದರಲ್ಲೂ ನಾಯಕ ರಾಮ್ ಭಿನ್ನಭಿನ್ನ ಶೈಲಿಯಲ್ಲಿ ಕತ್ತರಿಸುವ ದೃಶ್ಯಗಳನ್ನು ಮಂದಗತಿಯಲ್ಲಿ ತೋರಿಸಿ ನಿರ್ದೇಶಕರು ಹೈ ಲೈಟ್ ಮಾಡಲು ಹೊರಟರೆ ಸೆನ್ಸಾರ್ ಮಂಡಳಿ ಅದನ್ನು ಅಳಿಸಿ ಮಂದಗಾಣಿಸಿದ್ದಾರೆ.
ಚಿತ್ರದ ಕತೆಯಲ್ಲಿ ವಿಶೇಷವೇನೂ ಇಲ್ಲ. ಆದರೆ ಇರುವ ಕತೆಗೆ ಬಿಗಿಯಾದ ಚಿತ್ರಕತೆ ಹೆಣೆದಿರುವುದು ಚಿತ್ರವನ್ನು ಬೇಸರವಾಗದಂತೆ ಕಾಪಾಡುತ್ತದೆ.ನಾಯಕನ ತಂದೆಗೆ ಇಬ್ಬರು ಹೆಂಡರು ಮತ್ತು ಜೂಜಿನ ಚಟ.. ಹಾಗಾಗಿ ತಾನೇ ಹೋಗಿ ಖಳನ ಕೈಗೆ ಸಿಕ್ಕಿಕೊಳ್ಳುತ್ತಾನೆ. ಆದರೆ ಮಗಮಾತ್ರ ಅಪ್ಪನ ತಪ್ಪು ತಪ್ಪಲ್ಲ ಎಂದು ಖಳನನ್ನು ಕೊಚ್ಚುತ್ತಾನೆ..ಮುಂದೆ ರೌಡಿ ಕೊಲೆ ಖಳನ ಸಂಹಾರ...ಇದರ ನಡುವೆ ನಾಯಕನ ಹಿಂದೆ ನಾಯಕಿ ಸುತ್ತಿ ಸುತ್ತಿ ಪ್ರೀತಿಯನ್ನು ಗಿಟ್ಟಿಸಿಕೊಂಡು ಹಾಡು ಹಾಡುತ್ತಾಳೆ...
ನಾಯಕ ದುನಿಯಾ ವಿಜಯ್ ಚಿತ್ರತುಂಬಾ ಆವರಿಸಿದ್ದಾರೆ. ಕಾಲೇಜು ಹುಡುಗನಾಗಿ, ಅಮ್ಮನ ಮಗನಾಗಿ ಕತ್ತರಿಸುವವನಾಗಿ ಅವರ ಅಭಿನಯ ಚೆನ್ನಾಗಿದೆ.ಪಾರುಲ್ ಅಲ್ಲಲ್ಲಿ ಬಂದುಹೋಗುತ್ತಾರೆ. ಖಳನಾಯಕರು ಅಲ್ಲಲ್ಲಿ ಅಬ್ಬರಿಸುತ್ತಾರೆ. ಉಳಿದ ಪೋಷಕ ಕಲಾವಿದರು ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಒಂದು ಮಸಾಲೆ ಭರಿತ ಮನರಂಜನೆಯ ಚಿತ್ರಕ್ಕೆ ಏನು ಬೇಕೋ ಅದೆಲ್ಲವೂ ಚಿತ್ರದಲ್ಲಿ ಹೇರಳವಾಗಿದೆ. ಆದರೆ ಅದರ ಜೊತೆಗೆ ನಿರೂಪನೆಯಲ್ಲೂ  ಸ್ವಲ್ಪ ನೈಪುಣ್ಯವನ್ನು ನಿರ್ದೇಶಕರು ತೋರಿಸಬಹುದಿತ್ತು. ಆದರೆ ಸಾಮಾನ್ಯ ಚಿತ್ರಗಳ ಶೈಲಿಯ ಶಾಟ್ ಸಂಯೋಜನೆ ಚಿತ್ರವನ್ನು ಮಾಮೂಲಿ ಹೊಡಿ ಕಡಿ ಬಡಿ ಚಿತ್ರವನಾಗಿಸಿದೆ. ಇಡೀ ಚಿತ್ರದಲ್ಲಿ ಪೋಲಿಸ್ ಇಲಾಖೆ ಕೈ ಕಟ್ಟಿ ಕೊಂಡು ಕುಳಿತಿರುತ್ತದೆ. ಕೊನೆಯಲ್ಲಿ ಬರುವ ದಕ್ಷ ಅಧಿಕಾರಿಯ ಪರಿಸ್ಥಿತಿ ವಿಷಾದನೀಯ. ಚಿತ್ರದ ಕತೆ ಕುಮಾರ್ ಅವರದ್ದಾದರೆ ಸಂಭಾಷಣೆ ರವಿ ಶ್ರೀವತ್ಸ ಅವರದ್ದು. ಜಸ್ಸಿ ಗಿಫ್ಟ್ ಅವರ ಸಂಗೀತ ಆರಕ್ಕೇರದ ಮೂರಕ್ಕಿಳಿಯದ ರೀತಿಯಲ್ಲಿದೆ. ಹಾಗೆಯೇ ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಅಷ್ಟು ಪರಿಣಾಮಕಾರಿಯಾಗಿಲ್ಲ
ದುಷ್ಟ ಸಂಹಾರ ಚಿತ್ರಗಳಲ್ಲಿ ಹೊಸ ಅಂಶವಲ್ಲವಾದರೂ ಬಹುಕಾಲದಿಂದ ಚಿತ್ರಜಗತ್ತಿನಲ್ಲಿ ನಡೆದಿರುವ, ನಡೆಯುವ, ಪ್ರೇಕ್ಷಕರನ್ನು ಸೆಳೆಯುವ ಅಂಶ ಎನ್ನಬಹುದು. ಅದನ್ನೇ ಸ್ವಲ್ಪ ಭಿನ್ನವಾಗಿ ವಾಸ್ತವದ ನೆಲೆಗಟ್ಟನ್ನು ಅಲ್ಲಲ್ಲಿ ಇಟ್ಟು ನಿರೂಪಿಸಿದರೆ ಪ್ರೇಕ್ಷಕನಿಗೆ ಒಂದಷ್ಟು ಖುಷಿಯಾಗಬಹುದೇನೋ?
ಅದಿಲ್ಲವಾದರೆ ಮಸಾಲೆಭರಿತ ಸಾಹಸಮಯ ಶಿವಾಜಿನಗರ ಆಗುತ್ತದೆ ಎನ್ನಬಹುದು.
ಕೊಸರು: ಇಡೀ ಚಿತ್ರದಲ್ಲಿ ನಾಯಕ ಮಾಡುವ ಕೊಲೆಗಳ ಸಂಖ್ಯೆ ಲೆಕ್ಕಕ್ಕೆ ಸಿಕ್ಕುವುದಿಲ್ಲ. ಆದರೆ ಖಳನಾಯಕ ಎರಡೇ ಕೊಲೆ ಮಾಡುತ್ತಾನಾದ್ದರಿಂದ ಯಾರು ಹೆಚ್ಚು ಶಿಕ್ಷಾರ್ಹರು ಎಂಬ ಪ್ರಶ್ನೆಗೆ  ತಾರ್ಕಿಕ ಉತ್ತರವೇನು ಎಂಬುದು ತಲೆಹರಟೆ ಎನ್ನಬಹುದೇ?

1 comment: