Pages

Saturday, November 16, 2013

ಜೀತು:



ಪ್ರೇಕ್ಷಕರ ನಿರೀಕ್ಷೆಯನ್ನು ಸುಳ್ಳು ಮಾಡಿದ್ದಾರೆ ನಿರ್ದೇಶಕ ಎಡ್ವಿನ್ ಎಂದರೆ ತಪ್ಪು ತಿಳಿದುಕೊಳ್ಳಬಾರದು.ಅದಕ್ಕೆ ಕಾರಣವಿದೆ. ಒಂದು ಜೀತದ ಕುರಿತಾದ ಪ್ರೇಮಕಥೆ ಎಂದಾಗ ನಾವೆಲ್ಲ ಒಂದು ಊಹೆ ಮಾಡುವುದು ಸಹಜ. ನಾಯಕ ಜೀತದಾಳಾಗಿದ್ದು ನಾಯಕಿ ಶ್ರೀಮಂತನ ಮಗಳಾಗಿದ್ದು ಪ್ರೇಮ ಹುಟ್ಟಿ ಅದು ಅವಘಡಗಳಿಗೆ ಕಾರಣವಾಗಿ..ಹೀಗೆ. ಆದರೆ ಜೀತು ಚಿತ್ರದಲ್ಲಿ ನಾಯಕ ನಾಯಕಿ ಇಬ್ಬರ ತಂದೆಯೂ ಶ್ರೀಮಂತನ ಮನೆಯ ಸಾಲಗಾರರು. ಹಾಗಾಗಿ ಸಾಲ ತೀರಿಸಲು ಅಆಗದೆ ಇದ್ದ ಪಕ್ಷದಲ್ಲಿ ಮಕ್ಕಳನ್ನು ಜೀತಕ್ಕೆ ಇರಿಸಲೆ ಬೇಕು..ಎಂಬ ಅಲಿಖಿತ ನಿಯಮವಿರುವ ಊರದು.ಹೀಗಿರುವ ಸಂದರ್ಭದಲ್ಲಿ ನಮ್ಮ ನಾಯಕ ನಾಯಕಿ ಶಾಲೆಯಲ್ಲಿಯೇ ಪ್ರೀತಿಸಿ ಬಿಡುತ್ತಾರೆ. ಆದರೆ ಶ್ರೀಮಂತನ ಮಗನೊಬ್ಬನಿದ್ದಾನಲ್ಲ ಖಳ..ದುರುಳ. ಅವನ ಕಣ್ಣು ಚಂದನೆಯ ನಾಯಕಿಯ ಮೇಲೆ ಬೀಳುತ್ತದೆ. ಬಿಡುವನೇ ನಾಯಕ ..ಅವನನ್ನು ಹೊಡೆದು ಹಣ್ಣುಗಾಯಿ ನೀರುಗಾಯಿ ಮಾಡುತ್ತಾನೆ...ಆಮೇಲೆ ತಾವಿನ್ನೂ ಊರಲ್ಲೇ ಇದ್ದರೇ ಉಳಿಗಾಲವಿಲ್ಲ ಎಂದು ಅರಿಯುವ ನಾಯಕ ನಾಯಕಿ ಊರು ಬಿಡುತ್ತಾರೆ..ಬೆಂಗಳೂರಿಗೆ ಬಂದು ಬೀಳುತ್ತಾರೆ...ಅದೇ  ತರಹ ಮಗನನ್ನು ಹುಡುಕಿಕೊಂಡು ತಾಯಿಯೂ ಬೆಂಗಳೂರು ಸೇರುತ್ತಾಳೆ..ಇಲ್ಲಿ ಹುಡುಕಾಟ, ಹೊಡೆದಾಟ, ಪರದಾಟ..
ಚಿತ್ರದ ಮೊದಲಾರ್ಧ ನೋಡಿಸಿಕೊಂಡು ಹೋಗುವುದರಲ್ಲಿ ಹಿಂದೆ ಬಿದ್ದಿಲ್ಲ. ಹಳ್ಳಿ ಅಲ್ಲಿ ನಡೆಯುವ ಘಟನೆಗಳು, ಜೀತ ಪದ್ಧತಿ ಹೀಗೆ ಎಲ್ಲವೂ ಈ ಕಾಲದ್ದಲ್ಲ ಎನಿಸಿದರೂ ನೋಡಲಿಕ್ಕೆನೂ ಬೇಸರ ಉಂಟು ಮಾಡುವುದಿಲ್ಲ. ಚಿತ್ರದ ನಾಯಕ ನಾಯಕಿಯ ಪ್ರೇಮಾಂಕುರ ಸನ್ನಿವೇಶಗಳೂ ಕೂಡ ರಸವತ್ತಾಗಿತ್ತು ಸ್ವಲ್ಪ ಮಟ್ಟಿಗೆ ರಂಜಿಸುವಲ್ಲಿ ಯಶಸ್ವಿಯಾಗುತ್ತವೆ. ಹಾಗಾಗಿ ಮೊದಲ ಬಾರಿಗೆ ನಟಿಸಿ ನಿರ್ದೇಶನ ಮಾಡಿರುವ ಎಡ್ವಿನ್ ಗೆ ಮೊದಲಾರ್ಧಕ್ಕೆ ಒಂದಷ್ಟು ಶಹಬ್ಬಾಸ್ ಕೊಡಬಹುದು. ಆದರೆ ಅದೇ ಮಾತನ್ನು ಎರಡನೆಯ ವಿಭಾಗಕ್ಕೆ ಕೊಡಲಾಗುವುದಿಲ್ಲ. ಯಾಕೆಂದರೆ ಬೆಂಗಳೂರಿಗೆ ಬಂದ ನಂತರದ ಘಟನೆಗಳು ಚಿತ್ರದ ದಿಕ್ಕನ್ನೇ ಬದಲಾಯಿಸುವುದರ ಜೊತೆಗೆ ಮೂಲ ಆಶಯವನ್ನೇ ಹಾಳು ಮಾಡಿಬಿಡುತ್ತದೆ.
ನಿರ್ದೇಶಕರು ಮಧ್ಯಂತರದ ನಂತರ ಮಾಮೂಲಿ ಮನರಂಜನೆಯ ಅಂಶಗಳಿಗೆ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಹಾಗಾಗಿಯೇ ಐಟಂ ಹಾಡು ಹೊಡೆದಾಟ ಬಂದು ಹೋಗುತ್ತವೆ. ಆದರೆ ಪ್ರಾರಂಭದ ಕಥೆಯ ಮುಂದುವರಿಕೆಗೆ ಇದೇ ಅಡ್ಡಗಾಲಾಗಿ ಚಿತ್ರದ ಓಟವನ್ನು ಆಯಾಸಾದಾಯಕವನ್ನಾಗಿ ಮಾಡಿಬಿಟ್ಟಿದೆ.
ನಾಯಕ ನಾಯಕಿ ಅಭಿನಯಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಉಳಿದಂತೆ ಸಹಕಲಾವಿದರ ದಂಡೇ ಚಿತ್ರದಲ್ಲಿದೆ. ಒಂದು ಹಾಡಿನಲ್ಲಿ ನೀತೂ ಕೂಡ ಬಂದು ಹೋಗುತ್ತಾರೆ. ನಿರ್ದೇಶಕರಾಗಿ, ಕತೆಗಾರರಾಗಿ ಎಡ್ವಿನ್ ಇನ್ನೂ ಪಳಗಬೇಕು.ಒಂದು ಕಥೆ ಚಿತ್ರಕಥೆ ಇದ್ದಾಕ್ಷಣ ಅಥವಾ ಬರೆದು ಸಿನಿಮಾ ಮಾಡುವ ಮೊದಲು ಅದರ ಸಲ್ಲುವಿಕೆಯಾ ಬಗ್ಗೆಯೂ ಸ್ವಲ್ಪ ಯೋಚಿಸಿದಾಗ ನಿರೂಪಣೆಯಲ್ಲಿ ಬೇರೆಯದನ್ನು ಮಾಡಲು ಸಾಧ್ಯವಾಗಬಹುದು. ಇಲ್ಲವಾದಲ್ಲಿ ಹತ್ತರಲ್ಲಿ ಹನ್ನೊಂದನೆಯ ಸಿನೆಮಾವಾಗಿಬಿಡುತ್ತದೆ.ಹಾಗೆಯೇ ಚಿತ್ರದ ಒಟ್ಟಾರೆ ಆಶಯ ಗತಿ ಮತ್ತು ವಿಭಾಗದ ಬಗ್ಗೆ ಪರಿಪೂರ್ಣ ಕಲ್ಪನೆ, ಚಿತ್ರಣ ನಿರ್ದೇಶಕನಲ್ಲಿರಬೇಕು. ಹಾಗಾದಾಗ ಚಿತ್ರದ ಕಥೆ ಹಳಿ ತಪ್ಪುವುದು ಕಡಿಮೆ. ಅದೆಲ್ಲವನ್ನೂ ಬಿಟ್ಟು ಸಿನಿಮಾ ಹೀಗಿರಬೇಕು ಎನ್ನುವ ಸಿದ್ಧ ಸೂತ್ರದ ಹಿಂದೆ ಬಿದ್ದು ಸಿನಿಮಾ ಮಾಡಿದಾಗ ಜೀತು ತಯಾರಾಗುತ್ತದೆ. ಚಿತ್ರ ಪರವಾಗಿಲ್ಲ ಎನಿಸಿಕೊಳ್ಳುತ್ತದಾದರೂ ಆಸಕ್ತಿ ಕುತೂಹಲ ಕೆರಳಿಸದೇ, ವಿಶೇಷ ಎನಿಸದೆ ಹಾಗೆಯೇ ಇದ್ದು ಬಿಡುತ್ತದೆ.



No comments:

Post a Comment