Pages

Sunday, November 10, 2013

ಸ್ಲಂ

ಸ್ಲಂ ಚಿತ್ರದಲ್ಲಿ ಇಬ್ಬರು ನಾಯಕಿಯರು.ಸ್ಲಂ ನಲ್ಲೆ ಹುಟ್ಟಿಬೆಳೆದವರು. ಇಬ್ಬರೂ ಹಿಂದೆ ಮುಂದಿಲ್ಲದ ಅನಾಥರು. ಮತ್ತು ರೌಡಿಗಳು. ಇಷ್ಟು ವಿವರವನ್ನು ಕೊಟ್ಟ ಮೇಲೆ ಚಿತ್ರರಸಿಕ ಕುಳಿತಲ್ಲಿಯೇ ಚಿತ್ರದಲ್ಲಿ ನಡೆಯುವ ಆಗುಹೋಗುಗಳನ್ನು ಊಹೆ ಮಾಡಿಬಿಡಬಲ್ಲ. ಆದರೆ ನಿರ್ದೇಶಕರು ಅದನ್ನು ಸುಳ್ಳು ಮಾಡಲು ಹೋಗುವುದಿಲ್ಲ. ಅದೇ ಹಳೆಯ ಕಥೆಯನ್ನು ಬೇರೆ ನಟರೊಂದಿಗೆ ಹೇಳಲು ಹೊರಡುತ್ತಾರೆ. ನಿರ್ದೇಶಕ ಮಹೇಶ್ ಕುಮಾರ್ .ಎಂ. ಈ ಹಿಂದೆ ‘ಅ’ ಎನ್ನುವ ಒಂದೆ ಅಕ್ಷರದ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದರು. ಹಾಗೆ ನೋಡಿದರೆ ಆ ಚಿತ್ರಕ್ಕೂ ಈ ಚಿತ್ರಕ್ಕೂ ಅಂತಹ ವ್ಯತ್ಯಾಸವೇನಿಲ್ಲ. ಅದರಲ್ಲೂ ರೌಡಿಯೊಬ್ಬ ಪ್ರೀತಿಸಿ, ರೌಡಿಸಂ ಬಿಡಲು ಪ್ರಯತ್ನಿಸುವ ಕಥೆಯಿತ್ತು. ಈ ಚಿತ್ರದಲ್ಲೂ ಅದೇ ಕಥೆಯಿದೆ. ಆದರೆ ವ್ಯತ್ಯಾಸವಿರುವುದು ಅಲ್ಲಿ ಒಬ್ಬ ಹೀರೋ. ಇಲ್ಲಿ ಇಬ್ಬರು ನಾಯಕರು. ಅವರಿಗೆ ಇಬ್ಬರು ನಾಯಕಿಯರು. ಜೋಡಿ ಮಾತು ಜೋಡಿ ಹಾಡು...ಒಂದಷ್ಟು ಲಾಂಗು ಮಚ್ಚು... ಒಬ್ಬ ಯುವಕ ಕೈಯಲ್ಲಿ ಲಾಂಗು ಹಿಡಿದು ಒಂದಷ್ಟು ಜನರೊಂದಿಗೆ ಬಡಿದಾಡಿದರೆ, ಆ ತರಹದ ಚಿತ್ರವನ್ನು ನಿರ್ಮಿಸಿದರೆ ಅದು ಭೂಗತ ಲೋಕದ ಚಿತ್ರವಾಗುವುದಿಲ್ಲ. ಒಂದು ಪಾತಕಲೋಕದ ಚಿತ್ರಕ್ಕೆ ಅದರದೇ ಆದ ನಿರೂಪಣೆ ಭಾವವಿದೆ. ಹಾಲಿವುಡಿನ ಮಾಸ್ಟರ್ ಪೀಸ್ ಗಾಡ್ ಫಾದರ್ ನಿಂದ ಭಾರತೀಯ ಚಿತ್ರಗಳಾದ ಸತ್ಯ, ಓಂ ಸರ್ಕಾರ್ ರಾಜ್ ಚಿತ್ರಗಳು ಅದರದೇ ಆದ ನಿರೂಪಣಾ ಶೈಲಿಯನ್ನು ಹೊಂದಿದ್ದವು. ಆದರೆ ಮಹೇಶ್ ಕುಮಾರ್ ಅದೆಲ್ಲವನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗಿಲ್ಲ . ಇಬ್ಬರು ಯುವಕರು, ಹಣಕ್ಕಾಗಿ ಕೊಲೆ ಮಾಡುತ್ತಾರೆ, ಅದೇ ರೌಡಿಸಂ ನಲ್ಲಿರುವಾಗಲೇ ಪ್ರೀತಿಗೆ ಬೀಳುತ್ತಾರೆ..ಈಗ ಸಾಮಾನ್ಯರಂತೆ ಬದುಕಲು ಇಚ್ಚಿಸುತ್ತಾರೆ..ಆದರೆ..? ಇಷ್ಟು ಸಾಲನ್ನು ಇಟ್ಟುಕೊಂಡು ಅದೆಷ್ಟು ಚಿತ್ರಗಳು ಬಂದಿಲ್ಲ. ಹಾಗಂತ ಬೇರೆಯದೇ ಆದ ಕಥೆಯನ್ನು ಹೇಳಲು ಹೊರಡಲಾಗಲಿ, ಹುಟ್ಟು ಹಾಕಲಾಗಲಿ ಸಾಧ್ಯವಾಗುವುದಿಲ್ಲವೇನೋ ..ಹಾಗಂತ ನಿರೂಪಣೆಯನ್ನು ನವೀಕರಿಸಬಹುದು. ಮಹೇಶ್ ಕುಮಾರ್ ಈ ಯಾವ ರಿಸ್ಕ್ ತೆಗೆದುಕೊಳ್ಳುವ ಗೋಜಿಗೆ ಹೋಗಿಲ್ಲ. ಬದಲಿಗೆ ಪ್ರಾರಂಭದಿಂದ ಕೊನೆಯವರೆಗೆ ಒಂದೆ ಕಥೆಯನ್ನು ಹಾಗೆ ಹೀಗೆ ಹೇಳುತ್ತಾ ಅನಗತ್ಯ ದೃಶ್ಯಗಳನ್ನು ಚಿತ್ರದಲ್ಲಿ ತುಂಬುತ್ತಾ ಚಿತ್ರವನ್ನು ಸಾದಾರಣ ಚಿತ್ರವನ್ನಾಗಿ ಮಾಡಿದ್ದಾರೆ. ಅಭಿನಯದ ವಿಷಯಕ್ಕೆ ಬಂದರೆ ಮಯೂರ್ ಪಟೇಲ್ ನಟಿಸಿದ್ದಾರೆ. ಆದರೆ ಅವರ ದೇಹಗಾತ್ರ ಮಾತ್ರ ಅತಿಯಾಗಿ ಅವರು ನಾಯಕನ ಪಟ್ಟಕ್ಕೆ ಅಷ್ಟಾಗಿ ಸೂಕ್ತ ಎನಿಸುವುದಿಲ್ಲ. ಹಾಗೆ ನಿರ್ಮಾಪಕರು ಆಗಿರುವ ಪಿ.ಮೂರ್ತಿ ಅವರ ಮೊದಲ ಅಭಿನಯ ಇದಾದ್ದರಿಂದ ಅವರಿಗೆ ಅಭಿನಯದಲ್ಲಿ ಒಂದಷ್ಟು ರಿಯಾಯತಿ ಕೊಡಬಹುದು. ತಂತ್ರಜ್ಞರು, ಕಲಾವಿದರು ಇನ್ನಿತರ ಅಂಶಗಳ ಬಗ್ಗೆ ಅಷ್ಟಾಗಿ ಹೇಳುವುದಕ್ಕೆ ಏನೂ ಇಲ್ಲ.

No comments:

Post a Comment